April 26, 2008

ಗೋ.....ವಾ!

ಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ. ಒಳಗಿನ ಎ.ಸಿ. ತಂಪಿಗಿಂತ ಆ ಹವೆಯೇ ಹಿತ ಅನ್ನಿಸಿತು. ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಪದ್ಯಾಣದವರ ಯಕ್ಷಗಾನ ಪದ್ಯ ಕೇಳುತ್ತ ಅದೆಷ್ಟು ಹೊತ್ತು ಕುಳಿತೆನೋ, ರೂಂ ಬಾಯ್ ಹೊರಗಿಂದ ಒಂದೇ ಸಮನೆ ಬೆಲ್ ಒತ್ತುತ್ತಿದ್ದ. ಹಿಂದಿನ ಸಂಜೆ ನಾಲ್ಕರ ಇಳಿಬಿಸಿಲು. ನಮ್ಮ ಮನೆಯ ಅಂಗಳದಲ್ಲೇ ವಿಮಾನ ಓಡೋಡಿ ನಿಂತಂತೆ ಅನ್ನಿಸಿತು. ಹೌದು ಅದೇ ಕಲ್ಲು, ಹುಲ್ಲು, ಗಿಡ, ವಾತಾವರಣವೂ ಅದೇ. ಷಟ್ಲ್ ಹತ್ತಿ ಕುಳಿತರೆ ನುಣ್ಣನೆಯ ರಸ್ತೆ. ಗೋವಾದ ಏರ್‌ಪೋರ್ಟ್‌ನಿಂದ ಸಾಲ್ಸೆಟ್‌ನ `ಕೋಲ್ವಾಬೀಚ್'ನಲ್ಲಿರುವ `ರಾಮಡಾ ರಿನಾಯ್‌ಸೆನ್ಸ್ ಬೀಚ್ ರೆಸಾರ್ಟ್'ಗೆ ಅರ್ಧ ಗಂಟೆಯ ಹಾದಿ. ಎತ್ತರೆತ್ತರದ ಕಮಾನು ಕಟ್ಟಡಗಳೊಂದಿಗೆ ಅದು ೨೩ ಎಕರೆಗಳಲ್ಲಿ ಹರಡಿಕೊಂಡಿದೆ . ಅಲ್ಲಿನ ಈಜುಕೊಳದ ಮಧ್ಯೆಯೂ ಪುಟ್ಟ ಹೆಂಡದಂಗಡಿ ! (ಬಹುಶಃ ನೀರು ಬೆರೆಸುವುದೇ ಬೇಡ ಅಂತಿರಬೇಕು . ಹಿನ್ನೆಲೆಯಲ್ಲಿ `ತಾರಕ್ಕ ಬಾಟಲಿಯಾ' ಹಾಡು !) ಅಲ್ಲಿಂದ ಐನೂರು ಮೀಟರು ಸಾಗಿದರೆ ಸಾಗರ . ಅಡಿಗರು ಅಂದಂತೆಯೇ -`ಮಬ್ಬು, ಕಾಮಾಲೆ ಕತ್ತಲು, ಬಂದು ಮೈಮೇಲೆ ಅಬ್ಬರಿಸಿ ಎದ್ದೆದ್ದು ಬಿದ್ದು ಬೊಬ್ಬಿರಿದಲೆವ ಕಾರ್ಮೋಡ/ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ!

]'ಸಮುದ್ರ ಮಧ್ಯೆ ಬೋಟು ನಿಲ್ಲಿಸಿ, ದೂರದಲ್ಲಿ ಡಾಲ್ಫಿನ್‌ಗಳನ್ನು ತೋರಿಸಿ, ಯಾರು ಹಾರುತ್ತೀರಿ ಸಾಗರಕ್ಕೆ ಅಂತ ಪ್ರಶ್ನೆ ಕೇಳಿದರೆ ಮೊದಲು ಹೂಂ ಅನ್ನುವವರಿಗೆ ಜಂಘಾಬಲ ಗಟ್ಟಿಯೇ ಬೇಕು. ಆ ಗುಜರಾತಿನ ಹುಡುಗಿ ಶಿವಾನಿಗೆ ಎಂಥಾ ಹುಚ್ಚೋ ಏನೋ, ಲೈಫ್ ಜಾಕೆಟ್ ಕಟ್ಟಿಕೊಂಡು ಮೊದಲು ಧುಮುಕಿದ್ದು ಅವಳೇ. ನಂತರ ನಾವೆಲ್ಲ ಮೆಲ್ಲ ಬೋಟಿನ ಸೈಡಿಗೆ ಹೋಗಿ, ಕಾಲ ಬೆರಳಿಗೆ ಮೊದಲು ನೀರು ಸೋಕಿಸಿಕೊಂಡು ಮೇಲಕ್ಕೆತ್ತಿ, ಪುನಃ ಪಾದ ಮುಳುಗುವಷ್ಟು ಸೊಂಟ ಜಾರಿಸಿ, ಮತ್ತೆ ಮೇಲೆ ಬಂದು, `ತುಮ್ ಕೂದ್‌ನಾ ಚಾಹ್‌ತೇಹೋ?' ಅಂತ ಪಕ್ಕದವನಿಗೆ ಹೇಳಿ, ಲೈಫ್‌ಜಾಕೆಟ್‌ನ್ನು ಮತ್ತೆ ಬಿಚ್ಚಿ ಗಟ್ಟಿಯಾಗಿ ಕಟ್ಟಿಸಿಕೊಂಡು, ಬೆನ್ನು ಬೋಟಿಗೆ ತರಚಿಕೊಳ್ಳುವಂತೆ ...ದುಡುಂ.

ಸ್ಕಾರ್‍ಲೆಟ್‌ಳ ನಿಗೂಢ ಸಾವಿನ ಪ್ರಕರಣ ಪ್ರಪಂಚದಾದ್ಯಂತ ಅಲೆ ಎಬ್ಬಿಸಿದ ಮೇಲೂ ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖೆಯಲ್ಲಿ ಕಡಿಮೆಯೇನೂ ಆಗಿಲ್ಲವಂತೆ. ಎಲ್ಲೆಲ್ಲಿ ಹೋದರೂ ಅವರೇ. ರಸ್ತೆಗಳಲ್ಲಿ ಬೈಕ್ ಓಡಿಸುತ್ತಾ, ಸೈಕಲ್ ತುಳಿಯುತ್ತಾ, ತೀರಗಳಲ್ಲಿ ಮೈಬಿಚ್ಚಿ ಸೂರ್‍ಯಸ್ನಾನ ಮಾಡುತ್ತಾ, ಎಲ್ಲೆಲ್ಲೂ ಅವರ ಹಿಂಡು.

ರಾತ್ರಿ ತೀರ ಸಾಗರದಲ್ಲಿ ಸಿಕ್ಕಾಪಟ್ಟೆ ಗೌಜಿ. ಡೀಜೆಯಂತೂ ಒಂದಾದಮೇಲೊಂದರಂತೆ ಹಾಡುಗಳನ್ನು ಪ್ಲೇ ಮಾಡುತ್ತ ಅಬ್ಬರ ಹೆಚ್ಚಿಸುತ್ತಿದ್ದ. ಸಾಗರಕ್ಕೂ ಉಬ್ಬಸ. ಉದ್ದ ಜಡೆ ಕೂದಲು ಬಿಟ್ಟುಕೊಂಡಿರುವ, ನಾಲ್ವರು ಕುಳ್ಳಗಿನ ಕರಿಯರ ಡ್ಯಾನ್ಸ್-ಕಸರತ್ತಿನಿಂದ ಕಾರ್‍ಯಕ್ರಮ ಆರಂಭ. ದೈಹಿಕ ಕಸರತ್ತು, ಬೆಂಕಿಯೊಂದಿಗೆ ಆಟ, ಸಮತೋಲನದ ವಿದ್ಯೆಗಳು ಹೀಗೆ ಏನೇನೋ. ಅದರ ಮಧ್ಯೆ ಅತ್ತಿತ್ತ ಕೆಲವರ ತೀರ್ಥಾಟನೆ . ಹಾ, ಹೇಳಲು ಮರೆತೆ, ಆಗ ಪತ್ರಿಕಾಗೋಷ್ಠಿ ಅಂತೆ ! ಕತ್ತಲು ಗಾಢವಾಗಿ ಹಬ್ಬಿಕೊಳ್ಳುತ್ತಿತ್ತು. ಎಲ್ಲರ ನರ್ತನದ ಹೆಜ್ಜೆಗಳಿಗೆ ಏಕತಾನತೆ ಬಂದಿತ್ತು. ಛೇ ಗೋವಾದಲ್ಲೂ ಬಹಳ ಬೇಗ ಬೆಳಗಾಯಿತು.

Read more...

April 22, 2008

ಪ್ರಭುವೆ ನಿನ್ನ ನೆನಪಿನಲ್ಲಿ ...

ಕ್ಷರಗಳ ಶಕ್ತಿ ಭಯಂಕರ ಮಾರಾಯ್ರೆ. ಅವುಗಳನ್ನು ಸಲಹುವುದು ಅಷ್ಟು ಸುಲಭ ಅಲ್ಲ. ಅಕ್ಷರಗಳು ಕತೆಯನ್ನೂ ಕತೆ ಅಕ್ಷರಗಳನ್ನೂ ಆವರಿಸಿಕೊಂಡು ಬಂದರಂತೂ ಆ ಚೆಂದವೇ ಬೇರೆ. ಹುಟ್ಟಿನಿಂದ ಸಾವಿನವರೆಗಿನ ಕತೆಯನ್ನು ,ಕೇವಲ ಒಂದು ಪುಟದಲ್ಲಿ ಬರೆದಂತೆ ಅನ್ನಿಸುವ , ಆ ಸರಳ ಸಶಕ್ತ ಶೈಲಿಗೆ ಮರುಳಾಗಿರುವೆ . ತಕ್ಷಣ ವಿಮರ್ಶೆಗೆ ಹೊರಡೋದಕ್ಕಿಂತ ಎದೆಯಲ್ಲಿಟ್ಟುಕೊಂಡು ಅನುಭವಿಸುತ್ತಿರುವಾಗ ಸಿಗುವ ಸುಖವ ಹೇಳುವುದೆಂತು? ಅಷ್ಟಕ್ಕೂ ಅದು ಎಂಥಾ ಕತೆ?

ಒಮ್ಮೆ ಅವಳಿಗಾಗಿ, ಮತ್ತೊಮ್ಮೆ ನಿಮಗಾಗಿ - ದಯವಿಟ್ಟು ಓದಿ. ಏನನ್ನಿಸಿತು ಹೇಳಿ.

Read more...

ಬೆಳ್ಳೇಕೆರೆಯ ಹಳ್ಳಿ ಥೇಟರ್-ಅಂಕ ೩

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ.

ನಾನು ಹೈಸ್ಕೂಲ್ ತನಕ ಓದಿದ ಹಾನುಬಾಳಿನ ಸರ್ಕಾರಿ ಶಾಲೆಯಲ್ಲಿ, ಸ್ಕೂಲ್‌ಡೇಗಳಲ್ಲಿ ಮತ್ತು ಗಣಪತಿ ಹಬ್ಬದಲ್ಲಿ ಶಾಲೆಯಲ್ಲಿ ಗಣಪತಿ ಕೂರಿಸಿದಾಗ, ಅಥವಾ ಗಣರಾಜ್ಯ ದಿನವೋ-ಬೇರೇನಾದರೂ ವಿಶೇಷವೋ- ಹೀಗೆ ಅನೇಕ ಸಂದರ್ಭಗಳಲ್ಲಿ 'ಮಕ್ಕಳಿಂದ ಮನೋರಂಜನೆ' ಇರುತ್ತಿತ್ತು. ಆಗೆಲ್ಲ ನಾನು ಸಾಮಾನ್ಯವಾಗಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಹೈಸ್ಕೂಲಿನಲ್ಲಿ ವಿಶ್ವನಾಥರಾವ್ ಅಂತ ಹೆಡ್ಮಾಸ್ತರಿದ್ದರು. ಬಿಡುವಿನಲ್ಲಿ ಶೇಕ್ಸ್‌ಪಿಯರ್-ಇಬ್ಸೆನ್, ಕಾಳಿದಾಸ, ಕೈಲಾಸಂ ಅವರ ನಾಟಕಗಳನ್ನು, ಮುದ್ದಣನ ರಾಮಾಶ್ವಮೇಧ, ಜಿ.ಪಿ. ರಾಜರತ್ನಂ ಕವನಗಳು-ಮಂಕುತಿಮ್ಮನ ಕಗ್ಗ ಇತ್ಯಾದಿಗಳನ್ನು ಓದಿ ಹೇಳುತ್ತಿದ್ದರು. ಹೈಸ್ಕೂಲಿನಲ್ಲಿ ಪ್ರತಿ ಸ್ಕೂಲ್ ಡೇಯಲ್ಲೂ ನಾಟಕವಂತೂ ಇದ್ದೇ ಇರುತ್ತಿತ್ತು. ನಾನು, ಉಮೇಶ, ರಾಜಶೇಖರ, ಕುಮಾರ ನರಸಿಂಹ, ರಜಾಕ್, ರಾಮಚಂದ್ರ ಹೀಗೇ ನಾವೊಂದಷ್ಟು ಹುಡುಗರ ಪಟಾಲಂ ಇಲ್ಲದೇ ಸ್ಕೂಲ್ ಡೇ ಇರುತ್ತಿರಲಿಲ್ಲ. ಶೇಕ್ಸ್‌ಪಿಯರ್‌ನ ' ಟೇಮಿಂಗ್ ಆಫ್ ದಿಶ್ರೂ' ಕನ್ನಡ ರೂಪಾಂತರ 'ಗಯ್ಯಾಳಿ ಗಂಡ 'ದಲ್ಲಿ ನಾನು ಗಯ್ಯಾಳಿ ಪಾತ್ರ ಮಾಡಿದ್ದೆ. ನನ್ನ ಮತ್ತು ಉಮೇಶನ ನೀಗ್ರೋ ಡ್ಯಾನ್ಸ್ ಪ್ರತಿ ವರ್ಷ ಇರಲೇಬೇಕಿತ್ತು. ಹೀಗಾಗಿ ನಾನೊಬ್ಬ ಭಯಂಕರ ಕಲಾವಿದನೆಂದು ನಂಬಿಕೊಂಡು ಬಿಟ್ಟಿದ್ದೆ!ಹೈಸ್ಕೂಲ್ ಮುಗಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸೇರಿದೆ. ಹಾಸ್ಟೇಲಿನಲ್ಲಿ ವಾಸ. ಪಿ.ಯು ಕ್ಲಾಸಿನಲ್ಲಿ ರಾಮದಾಸ್ ಲೆಕ್ಚರರ್ ಆಗಿದ್ದರು. ಗೋಪಾಲಕ್ರಷ್ಣ ಅಡಿಗರು ಪ್ರಿನ್ಸಿಪಾಲ್.

ಆಗಷ್ಟೇ ಗಿರೀಶ ಕಾರ್ನಾಡರ ತುಘಲಕ್ ಪ್ರಚಾರಕ್ಕೆ ಬಂದಿತ್ತು. ಕಾಲೇಜ್ ಡೇ ಗೆ ರಾಮದಾಸರು 'ತುಘಲಕ್ ' ತೆಗೆದುಕೊಳ್ಳಲಿದ್ದಾರೆಂದು ಸುದ್ದಿ ಹಬ್ಬಿತ್ತು. ನೋಟೀಸ್ ಬೋರ್ಡಿನಲ್ಲಿ-ನಾಟಕಕ್ಕೆ ಸೇರಬಯಸುವವರೆಲ್ಲ ಸಂಜೆ ಕಾಲೇಜಿನ ಗ್ಯಾಲರಿ ಹಾಲಿನಲ್ಲಿ ಸೇರಬೇಕೆಂದು- ನೋಟೀಸು ಹಚ್ಚಿದ್ದರು. ನಾನಾಗಲೇ ಹಾಸ್ಟೇಲಿನಲ್ಲಿ -ನಾನೊಬ್ಬ ನಟ ಭಯಂಕರ ಎಂಬಂತೆ ಚಿತ್ರಿಸಿಕೊಂಡಿದ್ದೆ. ಆದ್ದರಿಂದ ನನ್ನ ರೂಂಮೇಟ್‌ಗಳು ' ನಾಟಕಕ್ಕೆ ನೀನು ಸೇರುವುದಿಲ್ಲವೇ ?' ಎಂದು ಪ್ರಶ್ನಿಸಿದರು. ವಾಸ್ತವವಾಗಿ ನಾನು ನೋಟೀಸನ್ನಾಗಲೀ ಅದರಲ್ಲಿ ಹಾಕಿದ ದಿನಾಂಕವನ್ನಾಗಲಿ ನೋಡಿರಲೇ ಇಲ್ಲ. ಕೇಳಿದವರಿಗೆಲ್ಲಾ 'ನಾಳೆ ನಾಳಿದ್ದರಲ್ಲಿ ಸೇರುತ್ತೇನೆ ' ಎಂದು ಉಡಾಫೆ ಮಾತಾಡಿದೆ. ಕೆಲವರು ಮುಖ ಮುಖ ನೋಡಿಕೊಂಡು ಸುಮ್ಮನಾದರು.ಎರಡು ದಿನ ತಡವಾಗಿ ಗ್ಯಾಲರಿ ಹಾಲ್‌ಗೆ ಹೋದೆ. ಅಲ್ಲಿ ಮೂವ್ವತ್ತು, ನಲವತ್ತು ಜನ ಸೇರಿದ್ದರು. ರಾಮದಾಸರು ಅವರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿದ್ದರು. ನಾನು ಒಳಗೆ ಬರಲೇ ಸಾರ್ ಎಂದು ಕೇಳಿ ಉತ್ತರಕ್ಕೂ ಕಾಯದೆ ಒಳಗಡೆ ಹೋಗಿ ಕುಳಿತೆ. ನನ್ನನ್ನು ಯಾರೂ ಗಮನಿಸಿದಂತೆ ಕಾಣಲಿಲ್ಲ. ಸ್ವಲ್ಪ ಹೊತ್ತಿನ ನಂತರ ರಾಮದಾಸರು ನನ್ನನ್ನು ನೋಡಿ ಕೇಳಿದರು.' ಯಾಕೆ ಬಂದಿದ್ದೀಯ ?' ' ನಾಟಕಕ್ಕೆ ಸೇರೋಣಾಂತ ಸಾರ್' ' ಸರಿ ಸರಿ ತಮಗೇನಾದರೂ ಅನುಭವ ಉಂಟೋ ?' ರಾಮದಾಸರ ಮಾತಿನಲ್ಲಿದ್ದ ವ್ಯಂಗ್ಯ ನನ್ನ ತಲೆಗೆ ನುಗ್ಗಲಿಲ್ಲ. ಪ್ರೈಮರಿ ಶಾಲೆಯಿಂದ ಹೈಸ್ಕೂಲ್‌ನವರೆಗೆ ನಟಿಸಿದ-ಕುಣಿದ ಎಲ್ಲವನ್ನೂ ಪಟ್ಟಿ ಮಾಡಿ ಹೇಳಿ ರಾಜ್‌ಕುಮಾರ್ ಸ್ಟೈಲ್‌ನಲ್ಲಿ ನಿಂತೆ. ' ತಮಗೆ ತುಂಬ ಅನುಭವವಿದೆ. ಕುಳಿತುಕೊಳ್ಳಿ ' ಎಂದರು. ಉಳಿದವರು ಮುಸಿ ಮುಸಿ ನಕ್ಕದ್ದು ಕಂಡರೂ ಇವರಿಗೇನು ಗೊತ್ತು ನನ್ನ ಯೋಗ್ಯತೆ ಎಂದುಕೊಂಡು ಗತ್ತಿನಲ್ಲಿ ಇದ್ದೆ.

ಒಂದೆರಡು ದಿನ ಕಳೆದಂತೆ -ನಾಟಕದ ರೀಡಿಂಗ್-ಇತ್ಯಾದಿ ಪ್ರಾರಂಭಿಸಿದರು. ಪಾತ್ರ ಗಳನ್ನು ಹಂಚದೆ ಇವರೇನು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದುಕೊಂಡೆ. ನಿಜವಾದ ಸಂಗತಿಯೆಂದರೆ ನಾನು "ತುಘಲಕ್' ನಾಟಕದ ಹೆಸರನ್ನು ಮಾತ್ರ ಕೇಳಿದ್ದೆನೇ ಹೊರತು ಅದನ್ನು ಓದುವುದಿರಲಿ ಅದರ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಮತ್ತೂ ಒಂದೆರಡು ದಿನ ಅಲ್ಲಿಗೆ ಹೋಗದೆ ಚಕ್ಕರ್ ಹೊಡೆದೆ. ಯಾವತ್ತು ಪಾತ್ರ ಹಂಚುತ್ತಾರೆಂದು ಸುದ್ದಿ ತಿಳಿದುಕೊಂಡು ಆ ದಿನ ರಿಹರ್ಸಲ್ ಹಾಲಿಗೆ ಹೋದೆ. ಅವತ್ತು ಎಲ್ಲರಿಗೂ ಅವರವರ ಪಾತ್ರವನ್ನು ತಿಳಿಸುತ್ತ ಹೋದರು. ಆದರೆ 'ತುಘಲಕ್' ಯಾರು ಮಾಡುತ್ತಾರೆಂದು ಮಾತ್ರ ಹೇಳಲಿಲ್ಲ. ಪಾತ್ರ ಕೊಟ್ಟವರಿಗೂ ಸಹಾ ಯಾವುದೇ ಸಂದರ್ಭದಲ್ಲೂ ನಿಮ್ಮ ಪಾತ್ರಗಳು ಬದಲಾಗಬಹುದೆಂದು ಹೇಳಿದರು. ನನಗೆ ಏನನ್ನೂ ಹೇಳಲಿಲ್ಲ. ಆ ದಿನ ಹಾಗೇ ವಾಪಸ್ ಬಂದೆ. ನನ್ನ ಪಾತ್ರದ ಬಗ್ಗೆ ಕೇಳಿದವರಿಗೆಲ್ಲ " ಮುಖ್ಯ ಪಾತ್ರಗಳನ್ನು ಇನ್ನೂ ಹಂಚಿಲ್ಲ" ವೆಂದು ಹೇಳಿದೆ. ಇನ್ನೂ ಒಂದೆರಡು ದಿನ ಕಳೆದರೂ ನನಗೆ ಯಾವ ಪಾತ್ರವನ್ನೂ ಕೊಡಲಿಲ್ಲ. ತಡೆಯಲಾರದೆ ಜೊತೆಯವನೊಬ್ಬನನ್ನು ಕೇಳಿದೆ."ತುಘಲಕ್ ಪಾತ್ರ ಯಾರು ಮಾಡ್ತಾರೆ?' 'ಹುಚ್ಚ ಇನ್ನೂ ಗೊತ್ತಾಗಲಿಲ್ಲವೇ!? ತುಘಲಕ್ ಅವರೇ ಮಾಡುತ್ತಾರೆ' ಬಂತು ಉತ್ತರ. ನಾನು ಭೂಮಿಗಿಳಿದು ಹೋದೆ. ನನಗೆ ಕೊಡಲು ಯಾವ ಪಾತ್ರವೂ ಉಳಿದಿಲ್ಲ. ಈಗ ನಾನು ಇಕ್ಕಟ್ಟಿಗೆ ಸಿಕ್ಕಿದೆ. ಪಾತ್ರ ಸಿಗಲಿಲ್ಲವೆಂದು ರಿಹರ್ಸಲ್‌ಗೆ ಬರುವುದನ್ನು ನಿಲ್ಲಿಸಿದರೆ ಹಾಸ್ಟೆಲ್‌ನಲ್ಲಿ ನಾನೇ ಪ್ರಚಾರ ಮಾಡಿದ ನನ್ನ 'ನಟ ಸಾರ್ವಭೌಮ' ಇಮೇಜ್ ಹಾಳಾಗುತ್ತಿತ್ತು. ಆದರೆ ಇಲ್ಲಿ ಬಂದೇನು ಮಾಡುವುದು? ಹಾಗಾಗಿ ನಾಚಿಕೆ ಬಿಟ್ಟು ರಾಮದಾಸರಲ್ಲಿ ಹೇಳಿದೆ. 'ಸಾರ್ ನೀವು ನನಗೇನು ಹೇಳಲಿಲ್ಲ' ' ಹೇಳ್ತೇನೆ ಇರು' ಎಂದರು- ಆದರೆ ಏನನ್ನೂ ಹೇಳಲಿಲ್ಲ. ವಿಧಿಯಿಲ್ಲದೆ ರಿಹರ್ಸಲ್ ಹಾಲ್‌ಗೆ ಬರತೊಡಗಿದೆ. ಆದರೆ ದಿನಗಳೆದಂತೆ ನಿಧಾನಕ್ಕೆ ನನಗೆ ಭಯ ಆವರಿಸಿಕೊಂಡಿತು. ನಾನು ಪಾತ್ರ ಸಿಗದೇ ಬಚಾವಾದೆ ಅನ್ನಿಸತೊಡಗಿತು. ರಾಮದಾಸರು ಪಾತ್ರಮಾಡುತ್ತಿದ್ದ ರೀತಿ, ಶೈಲಿ, ಆ ವಿಚಾರಗಳು ಎಲ್ಲವೂ ನನಗೆ ಹೊಸತೇ. ಪ್ರತಿ ದಿನವೂ ರಿಹರ್ಸಲ್ ಹಾಲ್‌ಗೆ ಎಲ್ಲರಿಗಿಂತ ಮೊದಲು ಹಾಜರಾಗತೊಡಗಿದೆ. ಕೊನೆತನಕ ಅಲ್ಲೇ ಕೂರುತ್ತಿದ್ದೆ. ಇದರಿಂದ ಕೆಲವು ಸಾರಿ ನನಗೆ ರಾತ್ರಿ ಊಟ ತಪ್ಪುತ್ತಿತ್ತು. ರಾಮದಾಸ್ ತುಘಲಕ್ ಪಾತ್ರವನ್ನು ಚೆನ್ನಾಗಿ ಮಾಡುತ್ತಿದ್ದರು.ಗ್ರಾಂಡ್ ರಿಹರ್ಸಲ್ ದಿನ ನನಗೆ ತುಂಬ ದುಃಖವಾಯಿತು. ಹೈಸ್ಕೂಲಿನಲ್ಲಿ 'ಟೇಮಿಂಗ್ ಆಫ ದಿ ಶ್ರೂ' ವಿನ 'ಗಯ್ಯಾಳಿ', 'ಶಂಖವಾದ್ಯ'ದ 'ಶಂಕರ ರಾಯ' ಇತ್ಯಾದಿ ಪಾತ್ರಗಳನ್ನು ಮಾಡಿ ನಟಭಯಂಕರನಾಗಿದ್ದ ನನಗೆ ಒಂದು ಸಣ್ಣ ಪಾತ್ರವೂ ಇರಲಿಲ್ಲ! ಗೆಳೆಯರ ಎದುರು ನಗೆಪಾಟಲಾಗಿದ್ದೆ. ನನ್ನ 'ನಟಸಾರ್ವಭೌಮ' ಇಮೇಜು ಚಿಂದಿಯಾಗಿ ಹೋಗಿತ್ತು!

ರಿಹರ್ಸಲ್ ಮುಗಿಯಿತು. ನಾಟಕ ಚೆನ್ನಾಗಿ ಬರುತ್ತಿತ್ತು. ರಾಮದಾಸ್‌ರ ಅಭಿನಯ ಅದ್ಭುತ ಎನ್ನುವಂತೆ ಇತ್ತು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಒಂದು ಮೂಲೆಯಲ್ಲಿ ಕೂತಿದ್ದೆ. ರಾಮದಾಸ್ ನನ್ನನ್ನು ಕರೆದರು. ಅವರಿಗೆ ನನ್ನ ಹೆಸರು ಸಹ ಸರಿಯಾಗಿ ಗೊತ್ತಿರಲಿಲ್ಲ! ಆಗ ಸರಿಯಾಗಿ ಕೇಳಿ ತಿಳಿದುಕೊಂಡರು. 'ನಾನು ನಿನಗೆ ಸ್ವಲ್ಪ ಅನ್ಯಾಯ ಮಾಡಿದೆ ಅನ್ನಿಸ್ತಾ ಇದೆ. ಇಲ್ಲಿ ಪಾತ್ರ ಮಾಡಿರುವ ಅನೇಕರಿಗೆ ನಿನ್ನಷ್ಟು ನಿಷ್ಠೆ ಇಲ್ಲ. ಈ ಆಸಕ್ತಿ ಬಿಡಬೇಡ ನೀನು ತುಂಬ ಕಲಿಯುತ್ತೀಯಾ' ಎಂದರು. ಮನಸ್ಸು ಹಗುರವಾಯಿತು.ಮುಂದೆ ಉಡುಪಿಯಲ್ಲಿ ಇರುವವರೆಗೂ ನಾನು ಯಾವುದೇ ನಾಟಕದಲ್ಲಿ ಪಾತ್ರ ವಹಿಸಲಿಲ್ಲ. ಬಿ.ಆರ್.ನಾಗೇಶ್, ಉದ್ಯಾವರ ಮಾಧವಾಚಾರ್ಯ ಇವರೆಲ್ಲ ನಾಟಕಗಳನ್ನು ಮಾಡಿಸುತ್ತಿದ್ದರು. ಬಾದಲ್ ಸರ್ಕಾರರ 'ಏವಂ ಇಂದ್ರಜಿತ್' ನಾಟಕವನ್ನು ಬಿ.ವಿ.ಕಾರಂತರು ಉಡುಪಿಗೆ ತಂದಿದ್ದರು. ರಾಮದಾಸ್ ನಮಗೆಲ್ಲ ತಿಳಿಸಿ ಆ ನಾಟಕವನ್ನು ನೋಡಲು ಹೇಳಿದ್ದರು. ಉಡುಪಿಯಲ್ಲಿದ್ದಾಗ ಅನೇಕ ಹೊಸ ನಾಟಕಗಳನ್ನು ನೋಡಿದೆ. ಸಾಧ್ಯವಾದಾಗಲೆಲ್ಲ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಹರ್ಸಲ್‌ಗಳಿಗೂ ಹೋಗಿ ಕೂತಿರುತ್ತಿದ್ದೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲೂ ಹೊಸ ನಾಟಕಗಳ ಪ್ರಯೋಗಗಳಾಗುತ್ತಿದ್ದವು. ಬಿ.ವಿ.ಕಾರಂತರ ಪ್ರಯೋಗಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು. ಹೆಗ್ಗೋಡಿನ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿತ್ತು. ನಮ್ಮಂಥವರಿಗೆ ಹೊಸಬಗೆಯ ನಾಟಕಗಳ ಲೋಕವೊಂದು ತೆರೆದುಕೊಳ್ಳುತ್ತಿತ್ತು.

Read more...

April 07, 2008

ಆಕ್ಸಿಡೆಂಟಿಗೆ ಶುಭ ಹಾರೈಸುತ್ತಾ...

ರೈಲ್ವೆ ಕ್ರಾಸಿಂಗ್‌ನಲ್ಲಿ ಉಗಿಬಂಡಿ ಢಿಕ್ಕಿಯಾಗಿ, ಕಾರಿನಲ್ಲಿದ್ದ ಒಂದು ಗಂಡು ಒಂದು ಹೆಣ್ಣು ಜೀವ ಕಳೆದುಕೊಂಡಿವೆ. ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇತ್ತು ಅನ್ನುತ್ತಿವೆ ಕೆಲವು ಪತ್ರಿಕೆಗಳು. ಅವರು ಸಿಕ್ಕಾಪಟ್ಟೆ ಕುಡಿದಿದ್ದರು ಅನ್ನುತ್ತಾರೆ ಕೆಲವರು. ಡ್ರೈವಿಂಗ್ ಸೀಟಿನಲ್ಲಿದ್ದ ಅವನಿಗೆ ಡ್ರೈವಿಂಗೇ ಬರುತ್ತಿರಲಿಲ್ಲ ಅಂತಲೂ ಹೇಳುತ್ತಾರೆ. ಸಹೋದ್ಯೋಗಿಯೊಂದಿಗೆ ಸತ್ತ ತನ್ನ ಹೆಂಡತಿಯ ಮರಣ ಕಾರಣ ಭೇದಿಸುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಕಂ ನಾಯಕ ರಮೇಶ್ ಅರವಿಂದ್.

ಆದರೆ ಮಜಾ ನೋಡಿ- ಸಾಫ್ಟ್‌ವೇರ್ ಮಿತ್ರರು ಸೇರಿ ನಿರ್ಮಿಸಿರುವ, ಕಾರ್ಪೊರೇಟ್ ಗಂಧವಿರುವ ಈ ಚಿತ್ರದಲ್ಲಿ, ತೀರಿಹೋದ ಪತ್ನಿಯ ಬಗೆಗಿರುವಷ್ಟೇ ಪ್ರೀತಿ, ಸಾವಿನ ರಹಸ್ಯವನ್ನು ಭೇದಿಸುವುದರಲ್ಲೂ ನಾಯಕನಿಗಿದೆ ! ಆಕ್ಸಿಡೆಂಟ್ ನಡೆದಾಗ, ತನ್ನ ಸಹೋದ್ಯೋಗಿ (ಪೂಜಾಗಾಂಧಿ) ಜತೆ ವಿಶೇಷ ಪರಿಣತಿಗಾಗಿ ಅಮೆರಿಕಕ್ಕೆ ಹೋಗಿದ್ದಾನೆ ಈ ರೇಡಿಯೊ ಜಾಕಿ ರಮೇಶ್. ನಂತರದ ಘಟನಾವಳಿಯಲ್ಲೂ ಒಳ್ಳೆಯ ಸ್ನೇಹಿತೆಯಾಗಿ ಆಕೆ ಇವನ ಜತೆಗೇ ಇರುತ್ತಾಳೆ. 'ಇಲ್ಲಿ ನಾಯಕನ ನೋವು ಪ್ರೇಕ್ಷಕನದ್ದಾಗುವುದಿಲ್ಲ' ಹೌದು. ಆದರೆ ಗಂಡ ಅಳುಮುಂಜಿಯಾಗದೆ, ಸಾವು ಕೌಟುಂಬಿಕ ಘಟನೆಯಾಗದೆ, ಅದರ ರಹಸ್ಯವನ್ನು ಬಿಚ್ಚುವ ಕೆಲಸದಲ್ಲಿ ಸಮಾಜದ ಅನೇಕ ವಿಷಕೊಂಡಿಗಳು ಕಳಚಿಕೊಳ್ಳುತ್ತವೆ. ಹೆಂಡತಿಯ ಸಮಾಜಸೇವೆಯನ್ನು ನಿರ್ಲಕ್ಷಿಸುತ್ತಿದ್ದ, ಉಳಿದವರ ಉಸಾಬರಿ ನಮಗೇಕೆ ಅನ್ನುತ್ತಿದ್ದ ಗಂಡನೇ, ಪತ್ನಿಯ ಸಾವಿನ ರಹಸ್ಯದ ಬಾಹ್ಯ ಸಂಬಂಧಗಳ ಗಂಟನ್ನು ಬಿಚ್ಚಲು ಹೊರಟಿದ್ದಾನೆ. ಲೋಕದ ಡೊಂಕನ್ನು ತನಗರಿವಿಲ್ಲದಂತೆಯೇ ನಿವಾರಿಸುತ್ತಿದ್ದಾನೆ!

ಇಲ್ಲಿ ಸಂಶಯದ ದೃಷ್ಟಿ ಒಂದು ಪಾತ್ರದಿಂದ ಇನ್ನೊಂದಕ್ಕೆ ಬದಲಾಗುತ್ತಲೇ ಹೋಗುತ್ತದೆ. ಆದರೆ ಎಲ್ಲ ಪತ್ತೇದಾರಿ ಘಟನಾವಳಿಯಲ್ಲೂ ಬಹಳ ಸಲ ಸಿಲ್ಲಿ ಅನ್ನಿಸದ ಹಾಗೆ ರಮೇಶ್ ಜಾಗರೂಕರಾಗಿದ್ದಾರೆ. ಉದ್ದ ಜಡೆ ಬಿಟ್ಟುಕೊಂಡ, ನಕಲಿ ಸಿಡಿ ದಂಧೆಯ, ಹರಾಮ್‌ಖೋರನ ಪಾತ್ರದಲ್ಲಿ ಹೊಸಬ ಲೊಂಗಾ ಮಹೇಶ್ ಅಭಿನಯ ಸವಿಯುವಂತಿದೆ. (ಅವರು ದೂರದೂರಿನಲ್ಲಿ ರೇಡಿಯಾಲಜಿಸ್ಟ್ ಅಂತೆ). ಪ್ರಯೋಗರಂಗ ತಂಡದ 'ನಮ್ಮ ನಿಮ್ಮೊಳಗೊಬ್ಬ', 'ಮೈಸೂರು ಮಲ್ಲಿಗೆ' ನಾಟಕಗಳಲ್ಲಿ ರಾಜೇಂದ್ರ ಕಾರಂತರ ಅಭಿನಯ ಕಂಡು ಬೆರಗಾದವರಿಗೆ ಆಕ್ಸಿಡೆಂಟ್‌ನಲ್ಲಿ ಮತ್ತೊಂದು ರಸದೌತಣ। ಹೆಲ್ತು ಮಿನಿಸ್ಟರು ಚಂದ್ರಪ್ಪನ ಮೂಲಕ. ಇಲ್ಲಿ ಮಂತ್ರ-ಉಗುಳು ಎರಡೂ ಜಾಸ್ತಿ, ನೋಡಿ ಬೇಕಾದರೆ ! ಈ ಎರಡು ಪಾತ್ರಗಳು ವಿಶೇಷ ಮ್ಯಾನರಿಸಂ ಮೂಲಕ ರಮೇಶ್ ಅಭಿನಯವೇ ಕೊಂಚ ಮಂಕಾಗುವಂತೆ ಮಾಡಿವೆ.

ಸತ್ತುಹೋದ ಗಂಡಸಿನ ತಂದೆಯ ಪಾತ್ರದಲ್ಲಿ ದತ್ತಣ್ಣ, ಹುಚ್ಚರಾಗಿ ಎರಡೇ ಎರಡು ದೃಶ್ಯಗಳಲ್ಲಿ ಕಾಣಿಸಿಕೊಂಡದ್ದು ಸಾರ್ಥಕವಾಗಿದೆ. ನಿರ್ದೇಶಕ ದಿನೇಶಬಾಬು, ಇಲ್ಲಿ ಪ್ರಮುಖ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮಾಡಿದ್ದಾರೆ. 'ಶಿಳ್ಳೆಖ್ಯಾತ' ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಒಂದು ಐಟಮ್ ಸಾಂಗು ಮತ್ತು ರಮೇಶ್ ವಿರಹದುರಿಯಲ್ಲಿ ಹಾಡುವ ಎರಡು ಗೀತೆಗಳು ಒಂದೆರಡು ಬಾರಿ ಕೇಳುವಂತಿವೆ. ಇನ್ನು ರೇಖಾ, ಮೋಹನ್, ತಿಲಕ್ ಎಲ್ಲರೂ ತಮ್ಮ ಪಾತ್ರಗಳಲ್ಲಿ ತಲ್ಲೀನರಾಗಿದ್ದಾರೆ. ಅಪರೂಪಕ್ಕೆ ಗಾಂಧಿನಗರಕ್ಕೆ ಕಾಲಿಟ್ಟಿರುವ ಹಿರಿಯರಾದ ಜಿ.ಎಸ್. ಭಾಸ್ಕರ್‌ರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಸಂಕಲನದಲ್ಲಿರುವ ಬಿಗಿ ಚಿತ್ರಕ್ಕೆ ವಿಶೇಷ ಮೆರುಗು, ಗತಿಯನ್ನು ಕರುಣಿಸಿದೆ. ಪಿವಿಆರ್‌ನಲ್ಲಿ ಹಾಸ್ಯ ಸಿನಿಮಾ 'ಸತ್ಯವಾನ್ ಸಾವಿತ್ರಿ' ನೋಡಿ, ನಾನು ಅಳುವಂತೆ ಮಾಡಿದ್ದ ರಮೇಶ್ ಈ ಬಾರಿ ಖುಶಿಕೊಟ್ಟಿದ್ದಾರೆ.

ಧನಪಿಪಾಸೆ, ಸಮಾಜಸೇವಕರ ಕಷ್ಟ, ಸಾಮ್ರಾಜ್ಯಶಾಹಿ ಕಂಪನಿಗಳ ದುಷ್ಕೃತ್ಯ, ಮಿನಿಸ್ಟ್ರ ದಗಲ್ಬಾಜಿ, ಐಎಎಸ್ ಆಫೀಸರ್ ಸಂದಿಗ್ಧ, ಭೂಗತಲೋಕದ ದಾರಿ...ಹೀಗೆ ಟಿ.ಎನ್. ಸೀತಾರಾಂ ೫೦ ವಾರಗಳ ಧಾರಾವಾಹಿಯಲ್ಲಿ ಹೇಳುವುದನ್ನು ರಮೇಶ್ ೨ ಗಂಟೆಗಳಲ್ಲಿ ಹೇಳುವುದಕ್ಕೆ ಯತ್ನಿಸಿದ್ದಾರೆ. ಆದರೆ ಇದು ಕೇವಲ 'ಮರ್ಡರ್ ಮಿಸ್ಟರಿ' ಕಥಾನಕ ಅನ್ನುವ ತಪ್ಪುಗ್ರಹಿಕೆ ಮೂಡಿಸುವಂತಿರುವುದು ಸಿನಿಮಾದ ಕೊನೆಯ ದೃಶ್ಯ. ಮಾಮೂಲಿ ಹಾಹೂ ಫೈಟುಗಳೂ ಇಲ್ಲದೆ ಒಂದೇಒಂದು ಗುಂಡಿನ ಕಾಳಗವಿರುವ ('ಇಂತಿ ನಿನ್ನ ಪ್ರೀತಿಯ'ದಂತೆ ಅಲ್ಲ !) ಸಿನಿಮಾದಲ್ಲಿ, ಮರ್ಡರ್ ಮತ್ತು ಮಿಸ್ಟರಿ ಬೇರೆಬೇರೆಯಾಗಿ ಪ್ರೇಕ್ಷಕರಿಗೆ ಕಾಣಲೆಂದು ನನ್ನ ಆಸೆ.

Read more...

April 03, 2008

ರಾಜಧಾನಿ ಎಕ್ಸ್‌ಪ್ರೆಸ್


ಸಂಜೆಯಾದರೆ ಸಾಕು.
ಎಂ.ಜಿ. ರೋಡಲಿ ಗಿಣಿವಿಂಡು.
ಸಾಕಿದಾ ಗಿಣಿ ಮಾತಿನಾ ಗಿಣಿ
ಕೆಂಪು ಚಿಮ್ಮುವ ಅರಗಿಣಿ
ಗಿಟಾರುಪಾಣಿ ನೀಲವೇಣಿ
ನವ ಕಲ್ಯಾಣಿ, ಹೆಡೆ ಬಿಚ್ಚಿದ ನಾಗಿಣಿ
ಲಂಕಿಣಿ ಸಿಂಹಿಣಿ ನಟೀಮಣಿ
'ಗುಂಡು'ಗಲಿ ಕ್ಷತ್ರಿಯಾಣಿ
ಸಗ್ಗಕ್ಕೆ ಒಂದೇ ಗೇಣಿನ ಏಣಿ.
***
ಈ ಗಿಣಿ-ವಿಂಡು ಇನ್ನೂ ಬೀಸಲಿ
ತಪ್ಪಿಸಿಕೊಳುತಿರಲಿ ನನ್ನ ವಿರಹಿಣಿ !

Read more...

March 30, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೨

ಪ್ರಸಾದ್ ರಕ್ಷಿದಿಯವರ ಹಳ್ಳಿ ಥೇಟರ್ ಮುಂದುವರಿಯುತ್ತಿದೆ.
'ಕ್ಷ್ಮಯ್ಯ ಚಕ್ಕೋತ್ನಣ್ಣು' ಎಂದೆ. 'ಮಧ್ಯಾಹ್ನ ಬೇಗ ಬರ್‍ತೀನಿ ಹೋಗಾಣ' ಯಾಕೋ ಲಕ್ಷ್ಮಯ್ಯ ಹೆಚ್ಚು ಮಾತಾಡಲಿಲ್ಲ- 'ನೀನು ಹೋಗು ಮನೆಗೆ ' ಅಂದುಬಿಟ್ಟ. ಇವನಿಗಿನ್ನೂ ಅಪ್ಪನ ಮೇಲಿನ ಸಿಟ್ಟು ಇಳಿದಿಲ್ಲವೆಂದೂ, ಇವನು ಮಧ್ಯಾಹ್ನ ಬಂದು ನನ್ನನ್ನು ಚಕ್ಕೋತದ ಹಣ್ಣಿಗಾಗಿ ಕರೆದೊಯ್ಯುವುದಿಲ್ಲವೆಂದೂ ಅಂದುಕೊಂಡೆ- ಬೇಸರವಾಯ್ತು. ಮಧ್ಯಾಹ್ನವಾದಂತೆ ಸಂತೆಗೆ ಹೋದ ಲಕ್ಷ್ಮಯ್ಯನ ದಾರಿ ಕಾಯುತ್ತ ಕುಳಿತೆ. ಗಂಟೆ ಮೂರಾದರೂ ಲಕ್ಷ್ಮಯ್ಯನ ಸುಳಿವೇ ಇಲ್ಲ. ಅಮ್ಮನಲ್ಲಿ ದೂರಿಕೊಂಡೆ. 'ಅಪ್ಪ ಬೈದದಕ್ಕೆ ಲಕ್ಷ್ಮಯ್ಯ ಬಂದಿಲ್ಲ, ನಂಗೆ ಚಕ್ಕೋತನ ಹಣ್ಣು ಕೊಯ್ದುಕೊಡ್ತೇನೆ ಅಂತ ಹೇಳಿದ್ದ.' 'ನಾನು ಅಪ್ಪನತ್ರ, ಬೇರೆ ಯಾರಿಗಾದ್ರೂ ಹೇಳಿ ತರ್‍ಸಿ ಕೊಡಲು ಹೇಳ್ತೇನೆ. ಯಾಕೋ ಇತ್ತೀಚೆಗೆ ಲಕ್ಷ್ಮಯ್ಯನಿಗೂ ಸ್ವಲ್ಪ ಹಾಂಕಾರ ಬಂದ್ಹಾಗೆ ಕಾಣ್ತೆ.' ಅಮ್ಮ- ಅಪ್ಪನ ಪರ ವಹಿಸಿದಳು. ನನಗೆ ಸಮಾಧಾನವಾಗಲಿಲ್ಲ. ನಾಲ್ಕು ಗಂಟೆಯ ಹೊತ್ತಿಗೆ ಲಕ್ಷ್ಮಯ್ಯ ಸಂತೆಯಿಂದ ಮೂಟೆ ಹೊತ್ತುಕೊಂಡು ಬಂದ.

ಅಪ್ಪ ಪೇಟೆಯಿಂದ ತರಲು ಹೇಳಿದ್ದ ಸಾಮಾನುಗಳನ್ನೆಲ್ಲ ತಂದಿದ್ದ. ಅವನು ಸಾಮಾನಿನ ಹೊರೆ ಹೊತ್ತುಕೊಂಡು ತನ್ನ ಮನೆಯತ್ತ ಹೊರಟಾಗ- ನಾನೂ ಅವನನ್ನು ಹಿಂಬಾಲಿಸಿ ಹೋದೆ. ಲಕ್ಷ್ಮಯ್ಯ ಮೂಟೆಯನ್ನು ತಲೆಯಿಂದ ಕೆಳಗಿಳಿಸಿ ಕಟ್ಟು ಬಿಚ್ಚುತ್ತಿರುವಾಗ 'ನೀನು ಬೇಗ ಬಂದಿಲ್ಲ, ಇನ್ನೀಗ ಸಾಯಂಕಾಲ ಆಯ್ತು, ನಾಳೆ ನೀನು ಕೆಲಸಕ್ಕೆ ಹೋಗ್ತೀಯ ಮತ್ತೆಲ್ಲಿಂದ ಚಕ್ಕೋತ್ನಣ್ಣು' ನಾನು ರಾಗ ತೆಗೆದೆ. 'ನೋಡಿಲ್ಲಿ' ಲಕ್ಷ್ಮಯ್ಯ ಮೂಟೆಯೊಳಗಿಂದ ಮೂರು ನಾಲ್ಕು ಚಕ್ಕೋತ ಹಣ್ಣುಗಳನ್ನು ಹೊರತೆಗೆದ. 'ಬರುವಾಗ ತಡವಾಯ್ತಲ್ಲ ಅಂತ ದಾರಿಲೇ ಇಳ್ದು ಹೋಗಿ ಕುಯ್ಕೊಂಡು ಬಂದೆ.' ಸಕಲೇಶಪುರದಿಂದ ನಮ್ಮಲ್ಲಿಗೆ ಬರುವವರು ಸಾಮಾನ್ಯವಾಗಿ ರಕ್ಷಿದಿಯಲ್ಲೇ ಬಸ್ಸಿನಿಂದಿಳಿದು ಬರುತ್ತಿದ್ದರು. ಆದರೆ ಅದಕ್ಕೂ ಹಿಂದಿನ ನಿಲ್ದಾಣವಾದ ಗಾಣದಹೊಳೆಯಲ್ಲೇ ಬಸ್ಸಿನಿಂದ ಇಳಿದರೆ, ಮಾವಿನ ಕೂಲಿನ ಮೂಲಕ ನಮ್ಮಲ್ಲಿಗೆ ಬರಲೊಂದು ಒಳದಾರಿಯಿತ್ತು. ಗಾಣದಹೊಳೆಯಿಂದ ಎಸ್ಟೇಟಿಗೆ ಬರುವ ಕೆಲಸಗಾರರು ಈ ದಾರಿಯಲ್ಲಿ ನಡೆದು ಬರುತ್ತಿದ್ದರು. ಇದು ರಕ್ಷಿದಿಯಿಂದ ಬರುವ ದಾರಿಗಿಂತ ಸ್ವಲ್ಪ ಹೆಚ್ಚು ದೂರವಾಗುತ್ತಿತ್ತು. ಈ ದಾರಿಯ ಪಕ್ಕದಲ್ಲೆಲ್ಲೋ ಚಕ್ಕೋತದ ಮರಗಳಿದ್ದವು. ಲಕ್ಷ್ಮಯ್ಯ ಗಾಣದಹೊಳೆಯಲ್ಲೇ ಬಸ್ಸಿನಿಂದಿಳಿದು ಸಾಮಾನಿನ ಮೂಟೆಯನ್ನೂ ಹೊತ್ತುಕೊಂಡು- ಒಳದಾರಿಯಲ್ಲೇ ಬಂದು ನನಗಾಗಿ ಚಕ್ಕೋತದ ಹಣ್ಣುಗಳನ್ನು ಕೊಯ್ದು ತಂದಿದ್ದ. ನನಗೆ ಹಣ್ಣುಗಳನ್ನು ಕಂಡು ಖುಷಿಯಾದರೂ ನಾನೇ ಚಕ್ಕೋತದ ಮರಗಳಿರುವ ಜಾಗಕ್ಕೆ ಹೋಗಬೇಕೆಂದಿದ್ದುದರಿಂದ 'ನೀನು ತಂದಿದ್ದಲ್ಲ, ನಾನೇ ಮರಹತ್ತಿ ಕುಯ್ಬೇಕಿತ್ತು' ಎಂದೆ. 'ಮುಂದಿನ ವಾರ ಹೋಗೋಣ, ಇಲ್ಲ ನಾಳೆ ಬೇಗ ಕೆಲ್ಸ ಆದ್ರೆ ನಾಳೆನೇ ಹೋಗೋಣ' ಎಂದು ತಂದಿದ್ದ ಚಕ್ಕೋತಗಳನ್ನು ಎರಡೆರಡನ್ನು ಸೇರಿಸಿ ಕಡ್ಡಿ ಚುಚ್ಚಿ- ಹಿಡಿದುಕೊಂಡು ಹೋಗಲು ಅನುಕೂಲವಾಗುವಂತೆ ಮಾಡಿಕೊಟ್ಟ- ನಾನು ಅವುಗಳನ್ನು ಡಂಬೆಲ್ಸ್‌ನಂತೆ ಕೈಗಳಲ್ಲಿ ಹಿಡಿದು ತಿರುಗಿಸುತ್ತಾ ಮನೆಯತ್ತ ಹೊರಟೆ. ಅಷ್ಟರಲ್ಲಿ ಲಕ್ಷ್ಮಯ್ಯ 'ಪ್ರಸಾದು ನಿಲ್ಲು ನಿಂಗೇಂತ ತಿಂಡಿ ತಂದಿದೀನಿ' ಎಂದು ಚೀಲದಿಂದ ಒಂದು ಕಾಗದದ ಪೊಟ್ಟಣ ತೆಗೆದ. ಅವನು ಸಂತೆಯಿಂದ ಪಕೋಡ ತಂದಿದ್ದ. ಮನೆಯಲ್ಲಿ ಗೊತ್ತಾದರೆ ಅಮ್ಮ ನನಗೆ ಸಂತೆ ತಿಂಡಿ ತಿನ್ನಲು ಬಿಡುತ್ತಿರಲಿಲ್ಲ. ಆದ್ದರಿಂದ ಪಕೋಡದ ಆಸೆಗೆ ಅಲ್ಲೇ ಕುಳಿತೆ.ನಾನು ಪಕೋಡ ತಿನ್ನುತ್ತಿರುವಾಗ ಲಕ್ಷ್ಮಯ್ಯ ಚೀಲದಿಂದ ಇನ್ನೊಂದು ಕಟ್ಟು ತೆಗೆದು ಮೆಲ್ಲನೆ ಬಿಚ್ಚಿದ.

ಅದರಲ್ಲಿ ಒಂದು ಸ್ಲೇಟು ಮತ್ತು ಬಳಪದ ಕಟ್ಟು ಇದ್ದವು. 'ಯಾರಿಗಪ್ಪ ಸ್ಲೇಟು ಬಳಪ ?!' 'ನಂಗೇಯ' 'ನೀನು ಬರಿತೀಯ?' 'ನೋಡು ಪ್ರಸಾದು, ನೀನು ನಂಗೆ ಬರಿಯೋದು ಹೇಳ್ಕೊಡು-ಆದರೆ ಯಾರಿಗೂ ಹೇಳ್ಬಾರ್ದು, ಗುಟ್ಟಾಗಿರ್‍ಬೇಕು. ನಾನು ಯಾವಾಗ್ಲೂ ನಿಂಗೆ ತಿಂಡಿ ತಂದ್ಕೊಡ್ತೀನಿ'. ನನಗೂ ಒಂದು ರೀತಿಯ ವಿಚಿತ್ರ ಖುಷಿ ಆಯ್ತು. 'ಸರಿ, ಏನೇನು ಕಲೀತೀಯ?' 'ಮೊದ್ಲು ರುಜು ಹಾಕದು ಕಲೀತೀನಿ' 'ನಂಸ್ಕೂಲಲ್ಲಿ ಮೇಷ್ಟ್ರು ಹೇಳ್ತಿರ್‍ತಾರೆ-ಊರಿನ ಹೆಸರು-ಬಸ್ಸಿನ ಬೋರ್ಡು ಓದೋವಷ್ಟಾದ್ರೂ ಕಲಿಬೇಕಂತೆ, ಇಲ್ದಿದ್ರೆ ಏನೂ ಪ್ರಯೋಜನ ಇಲ್ವಂತೆ.' 'ಸರಿ ಮತ್ತೆ ಅಷ್ಟೂ ಹೇಳ್ಕೊಡು-ಇವತ್ತಿಂದ್ಲೇ'-ಲಕ್ಷ್ಮಯ್ಯ ಅವಸರದಲ್ಲಿದ್ದ. ನಾನು ಮನೆಗೆ ಹೋಗಿ ಚಕ್ಕೋತಗಳನ್ನು ಇಟ್ಟು ಬರುವಾಗ, ಲಕ್ಷ್ಮಯ್ಯ ಒಂದು ಸೀಮೆಸೀಗೆ (ಲಂಟಾನ) ಕೋಲನ್ನು ಮುರಿದು ತಂದಿಟ್ಟಿದ್ದ. ನಮ್ಮ ಶಾಲೆಯಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಮೇಷ್ಟ್ರುಗಳು ಸೀಮೇಸೀಗೆ ಕೋಲಿನಲ್ಲಿ ಹೊಡೆಯುತ್ತಿದ್ದರು. 'ಸರಿಯಾಗಿ ಹೇಳ್ಕೊಡದಿದ್ರೆ ಹೊಡಿತೀಯೇನೋ !?' ಗಾಬರಿಯಲ್ಲಿ ಕೇಳಿದೆ. 'ಇಲ್ಲ-ನೀನೀಗ ನನಗೆ ಮೇಷ್ಟ್ರು ನಾನು ಸರಿಯಾಗಿ ಕಲೀದಿದ್ರೆ ಹೊಡಿ' ಎಂದು ಕೋಲನ್ನು ನನ್ನ ಮುಂದೆ ಇಟ್ಟು ಶಿಷ್ಯನಾಗಿಬಿಟ್ಟ. ಒಂದು ಕ್ಷಣ ನಾನು ಮೇಷ್ಟ್ರಾದಂತೆ ಕೋಲನ್ನು ಝಳಪಿಸುತ್ತ ಕ್ಲಾಸಿನಲ್ಲಿ ಅಡ್ಡಾಡಿದಂತೆ ಅನ್ನಿಸಿ ಸಂತೋಷವಾಯಿತು.ಲಕ್ಷ್ಮಯ್ಯನ ಅಕ್ಷರಾಭ್ಯಾಸ ಗುಟ್ಟಾಗಿ ಪ್ರಾರಂಭವಾಯಿತು. ಅವನು ಪ್ರತಿದಿನ ಬಿಡುವಿನ ವೇಳೆಯಲ್ಲಿ ಸ್ಲೇಟಿನಲ್ಲಿ ಅಕ್ಷರ ತಿದ್ದತೊಡಗಿದ.

ಬೇಸಗೆಯಾದ್ದರಿಂದ ಕೆಲಸ ಮುಗಿದ ಮೇಲೆ ಸಂಜೆಯ ಹೊತ್ತಿಗೆ ಗಂಡಾಳುಗಳೆಲ್ಲ ಎತ್ತಿನ ಹಳ್ಳಕ್ಕೆ ಸ್ನಾನಕ್ಕೆ ಹೋಗುತ್ತಿದ್ದರು. ಅವರೊಂದಿಗೆ ನಾನೂ ಹೋಗುತ್ತಿದ್ದೆ. ಲಕ್ಷ್ಮಯ್ಯನೂ ನಾನೂ ಹೊಳೆಯಲ್ಲಿ ಇತರರಿಂದ ದೂರದಲ್ಲಿ ಬೇರೆ ಕಡೆ ಸ್ನಾನಕ್ಕೆ ಹೋಗುತ್ತಿದ್ದೆವು. ಅಲ್ಲಿ ಅವನಿಗೆ ಕಾಗುಣಿತ ಬಾಯಿಪಾಠ ಮಾಡಿಸತೊಡಗಿದೆ. ಕಾಗುಣಿತವನ್ನೆಲ್ಲ ಅವನು ಹಾಡಿನಂತೆ ರಾಗವಾಗಿ ಹೇಳುತ್ತ ಬಾಯಿಪಾಠ ಮಾಡುತ್ತಿದ್ದ. ನಮ್ಮೆಲ್ಲರ ವಾಸದ ಮನೆಗಳಿಂದ ಮೂರು ಫರ್ಲಾಂಗು ದೂರದಲ್ಲಿ, ನಾವೆಲ್ಲ ಇದ್ದ ಕಾಫೀ ಎಸ್ಟೇಟಿನ ಅಂಚಿನಲ್ಲೇ-ತೋಟವನ್ನು ಬಳಸಿ ಉದ್ದಕ್ಕೂ ಕಾಡಿನ ಮಧ್ಯದಲ್ಲೇ ಹರಿಯುವ ಎತ್ತಿನಹಳ್ಳ ತನ್ನ ಹರಿವಿನುದ್ದಕ್ಕೂ ಕಲ್ಲು ಬಂಡೆಗಳಿಂದ ಕೂಡಿದೆ. ಅದರಲ್ಲಿ ಬೇಸಗೆಯಲ್ಲೂ ಕೂಡಾ ಸಾಕಷ್ಟು ನೀರಿನ ಹರಿವಿರುತ್ತದೆ. ಬಂಡೆಗಳ ಮಧ್ಯೆ ರಭಸದಿಂದ ಹರಿಯುವ ನೀರಿನ ಶಬ್ದದಿಂದಾಗಿ ಲಕ್ಷ್ಮಯ್ಯನ ಕಾಗುಣಿತದ ರಾಗ ದೂರದಲ್ಲಿರುವವರಿಗೆ ಏನೋ ಹಾಡುತ್ತಿದ್ದಂತೆ ಕೇಳುತ್ತಿತ್ತೇ ವಿನಹ ಏನೆಂದು ತಿಳಿಯುತ್ತಿರಲಿಲ್ಲ. ಹೀಗೇ ಸ್ವಲ್ಪ ದಿನಗಳು ಕಳೆದವು. ಬೇಸಗೆ ರಜೆಯ ಸಮಯವಾದ್ದರಿಂದ ನಾನು ನನ್ನ ಅಕ್ಕನೊಡನೆ ನೆಂಟರ ಮನೆಗೆ ಹೋದೆ. ಅಲ್ಲಿಂದ ವಾಪಸ್ ಬರುವಾಗ ತಿಂಗಳೇ ಕಳೆಯಿತು. ಆ ವೇಳೆಗೆ ಲಕ್ಷ್ಮಯ್ಯನ ಓದು ನಿಂತು ಹೋಗಿರಬಹುದು ಅಂದುಕೊಂಡಿದ್ದೆ. ಕಾಫಿತೋಟಗಳಲ್ಲಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಕೆಲಸಗಾರರ ವರ್ಷದ ಲೆಕ್ಕ ಮಾಡುತ್ತಾರೆ. ಆ ನಂತರ ಹತ್ತು ಹದಿನೈದು ದಿನಗಳ ಕಾಲ ಕೆಲಸಕ್ಕೆ ರಜೆ ಇರುತ್ತದೆ. ನಾವು ಬರುವ ಸಮಯಕ್ಕೆ ತೋಟದ ವರ್ಷದ ಲೆಕ್ಕ ಆಗಿ ಜನರಿಗೆಲ್ಲಾ ರಜೆ ಮುಗಿದು ಮತ್ತೆ ಕೆಲಸ ಪ್ರಾರಂಭವಾಗಿತ್ತು. ಮನೆಗೆ ಬಂದವನೇ ಆ ದಿನವೇ ಸಂಜೆ ಲಕ್ಷ್ಮಯ್ಯನ ಮನೆಗೆ ಓಡಿದೆ. ಅವನು ತನ್ನ ಮನೆಯ ಗೋಡೆಯ ಮೇಲೆಲ್ಲಾ ಇದ್ದಿಲಿನಿಂದ ದೇವರುಂದ-ಮೂಡಿಗೆರೆ, ಸಕಲೇಶಪುರ-ಹಾಸನ ಎಂದೆಲ್ಲಾ ಬರೆದಿದ್ದ! 'ಇದೇನೋ' ಎಂದೆ. 'ಈ ಬಸ್ಸಿನ ಬೋರ್ಡೆಲ್ಲಾ ಓದ್ತೀನಿ'. ಕನ್ನಡ ಒಂದನೆಯ ಪುಸ್ತಕವನ್ನು ತಂದಿಟ್ಟುಕೊಂಡಿದ್ದ-ತಪ್ಪು ತಪ್ಪಾಗಿ ಓದುವುದನ್ನೂ ಕಲಿತಿದ್ದ. 'ಸರಿ ಇವಾಗ ರುಜು ಹಾಕದು ಹೇಳ್ಕೊಡು' ಎಂದ-ಅವನಿನ್ನೂ ರುಜು ಹಾಕಲು ಕಲಿತಿರಲಿಲ್ಲ! 'ನಾನ್ಯಾಕೆ ಹೇಳ್ಕೊಡ್ಲಿ, ನೀನೇ ಕಾಗುಣಿತ ಹೇಳ್ಕೊಂಡು ಬರಿ, ನಾನು ಹೇಳ್ತೀನಿ' ಎಂದು ಕಾಗುಣಿತ ಹೇಳತೊಡಗಿದೆ.
'ಲಕ್ ತಲ್ ಕಟ್ಟು ಲ...... ಕಕ್‌ತಲ್‌ಕಟ್ಟು ಕ...ಕಾಕ್ ಷವತ್ತು ಮತ್ ಮಾವತ್ತು-ಯಕ್ ತಲ್‌ಕಟ್ಟು ಯ...ಯಾಕ್ ಯಾವತ್ತು - ಲಕ್ಷ್ಮಯ್ಯ".....ಬರೆದೇಬಿಟ್ಟ..... ಮುಂದಿನ ವಾರ ನನ್ನ ಶಾಲೆ ಪ್ರಾರಂಭವಾಗುವುದರಲ್ಲಿತ್ತು.

ಬುಧವಾರ ಸಂಜೆ ಯಥಾ ಪ್ರಕಾರ ಅಪ್ಪ ಆಳುಗಳಿಗೆ ಬಟವಾಡೆ ಮಾಡುತ್ತಿದ್ದರು. ಯಾವಾಗಲೂ ಮೊದಲಿಗೇ ಬರುತ್ತಿದ್ದ ಲಕ್ಷ್ಮಯ್ಯ
ಅಂದು ಬಟವಾಡೆ ಮುಗಿಯುತ್ತ ಬಂದಿದ್ದರೂ ಹೊರಗೇ ನಿಂತಿದ್ದ। ಅಪ್ಪ ಈಗಾಗಲೇ ಎರಡು ಸಾರಿ ಅವನ ಹೆಸರನ್ನು ಕರೆದಾಗಿತ್ತು। 'ಲಕ್ಷ್ಮಯ್ಯ ನಿನಗೇನು ಪ್ರತ್ಯೇಕ ಹೇಳಿಕೆ?' ಅಪ್ಪ ಗುಡುಗಿದರು। ಲಕ್ಷ್ಮಯ್ಯ ಮೆಲ್ಲನೆ ಒಳಗೆ ಬಂದ. ಅಮ್ಮ ಮೇಜಿಗೆ ಶಾಯಿ ಉಜ್ಜುವವರ ನಿಯಂತ್ರಣಕ್ಕೆ ಕೂತಿದ್ದಳು.ಲಕ್ಷ್ಮಯ್ಯ ಆಚೀಚೆ ನೋಡಿ, 'ಅಯ್ಯೋರೆ ಪೆನ್ನು ಕೊಡಿ' ಅಂದವನೇ ಅವರ ಅನುಮತಿಗೂ ಕಾಯದೆ ಪೆನ್ನು ತೆಗೆದುಕೊಂಡ- ಸ್ವಲ್ಪ ಗಾಬರಿ ಆದಂತಿದ್ದ-ಕೈ ನಡುಗುತ್ತಿತ್ತು. ಅಪ್ಪ ಅವನ ಮುಖವನ್ನೇ ಆಶ್ಚರ್ಯ ಮತ್ತು ಗಾಬರಿಗಳಿಂದ ನೋಡಿದರು. 'ಹೂಂ ಇಲ್ಲಿ' ಎಂದು ಅವನು ರುಜು ಮಾಡಬೇಕಾದ ಜಾಗ ತೋರಿಸಿದರು. ಲಕ್ಷ್ಮಯ್ಯ ನಡುಗುವ ಕೈಗಳಿಂದ ನಿಧಾನವಾಗಿ ಪ್ರಾರಂಭಿಸಿದ. 'ಲಕ್ ತಲ್ ಕಟ್ಟು ಲ.......... ಯಕ್ ತಲ್ ಕಟ್ಟು ಯ ಯಾ ಕ್ ಯಾವತ್ತು ಲಕ್ಷ್ಮಯ್ಯ' ಎಂದು ರಾಗವಾಗಿ ಕಾಗುಣಿತ ಹೇಳುತ್ತಲೇ ರುಜು ಮಾಡಿದ. ಪೆನ್ನು ಕೆಳಗಿಟ್ಟು ತಲೆಯೆತ್ತಿ ಅಪ್ಪನನ್ನೇ ನೋಡುತ್ತ ನಿಂತ. ಈಗ ಅಪ್ಪ-ಅಮ್ಮ ಮೆಚ್ಚುಗೆಯಿಂದ ನಗುತ್ತಿದ್ದರು. ನಾನು ಲಕ್ಷ್ಮಯ್ಯನ ಪಕ್ಕದಲ್ಲೇ ನಿಂತಿದ್ದೆ.

Read more...

March 25, 2008

ಗಾಳಿಪಟ:ಕೆಲವು ಟಿಪ್ಪಣಿಗಳು

ಗಂಡನ ಮನೆಯಲ್ಲಿದ್ದೇ ಕಾಡಿನ ಮಕ್ಕಳಿಗೆ ಪಾಠ ಹೇಳುವ ವಿಧವೆ , ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ ಊರಿಗೆ ಬಂದು ಪಿಯುಸಿ ಮಾಡುತ್ತಾ ಮಗಂದಿರಿಲ್ಲದ ಅಪ್ಪನನ್ನು ನೋಡಿಕೊಳ್ಳುತ್ತಿರುವ ಮಗಳು, ಆಯುರ್ವೇದ (ಬಿ.ಎ.ಎಂ.ಎಸ್.)ಓದು ಮುಗಿದ ಬಳಿ ಹಳ್ಳಿಯಲ್ಲೇ ವೃತ್ತಿ ನಡೆಸಲು ಬಯಸಿರುವ ಇನ್ನೊಬ್ಬಳು ಮಗಳು, ಪ್ರಾಣಿ ಹತ್ಯೆ ಸಲ್ಲದು ಎಂಬ ಸಂದೇಶ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಕೆಳ ಜಾತಿಯ ಕರಿಯ ಕೆಲಸಗಾರನನ್ನೂ ಮನೆಯೊಳಗೆ ಕರೆದುಕೊಳ್ಳುವ ಜಾತ್ಯತೀತತೆ, ಇಂಗ್ಲಿಷ್ ಮೀಡಿಯಮ್ಮಲ್ಲೇ ಓದಿ ಬೆಳೆದ ಹುಡುಗರಿಗೆ ಕನ್ನಡ ಕಲಿಯಲು ಉಪದೇಶ, ಕುವೆಂಪು, ಜಿಎಸ್‌ಎಸ್‌ರಂತಹ ಕವಿಗಳಿಗೆ ಹೊಗಳಿಕೆ, ಅಶ್ಲೀಲ ಭಂಗಿ-ರಕ್ತದೋಕುಳಿಗೆ ನಿಷೇಧ...ಇವೆಲ್ಲ ಒಳ್ಳೆಯ ಸಿನಿಮಾದ ಲಕ್ಷಣಗಳಲ್ವಾ?!

ಕತೆ ಅನ್ನೋದೇನೂ ಇಲ್ಲ, ಗಣೇಶನ ಮಾತು ಅತಿಯಾಯ್ತು...ಹೀಗಾಗಿ ಗಾಳಿಪಟಕ್ಕೆ ಅಂತಹ ಯಶಸ್ಸು ಸಿಕ್ಕಿಲ್ಲ ಅಂತ ತಳ್ಳಿ ಹಾಕುವುದು ಸುಲಭ . ಆದರೆ... ವಾಚಾಳಿಯಾಗಿರುವ ಗಣೇಶನ ಜತೆಗೆ ಮಾತೇ ಬಾರದ ‘ಡ್ರಾಕುಲಾ’ನ ಪಾತ್ರವೂ ಇದೆ. ಮೂವರು ಹುಡುಗರು ಮತ್ತು ಮೂವರು ಹುಡುಗಿಯರೂ ಭಿನ್ನ ಮನೋಭಾವದವರು. ತೀರಿಹೋದ ಪತಿಯೇ ಪರದೈವವಾಗಿರುವ ಗಂಭೀರೆ ಒಬ್ಬಳಾದರೆ, ಕೃಷಿ-ವ್ಯವಹಾರ ಮಾಡುತ್ತಾ ಗಂಡಸರಂತೆ ವರ್ತಿಸುವವಳು ಮತ್ತೊಬ್ಬಳು. ಕೊನೆಯವಳಂತೂ ಪ್ರಿಯಕರನ ಕೊರಳ ಪಟ್ಟಿ ಹಿಡಿದು ಸೆಳೆವ ಕಾಮಾತುರೆ . ವಾಚಾಳಿ ಗಣೇಶ ಕೊನೆಗೆ ವಿವಾಹವಾಗುವುದು ಅತ್ಯಂತ ಕಡಿಮೆ ಮಾತಾಡುವ ವಿಧವೆಯನ್ನು ಮತ್ತು ಅತ್ಯಂತ ಕಡಿಮೆ ಮಾತಾಡುವವನು ಚಟಪಟ ರಟ್ಟುತ್ತಿರುವ ಕೊನೆಯ ಹುಡುಗಿಯನ್ನು ! ಮಂಡ್ಯ-ಬೆಂಗಳೂರು-ಮಲೆನಾಡು-ತುಳುನಾಡು (ಮಂಗಳೂರು)ಗಳನ್ನು ಒಂದಾಗಿಸುವ ಎಳೆಯೂ ಕತೆಯಲ್ಲಿದೆ. ಜತೆಗೆ ಗಣೇಶನ ಹಸನ್ಮುಖ ಖುಶಿ ಕೊಡದೆ ಇದ್ದೀತೇ?

ಗೀತೆಗಳು ಮುಂಗಾರು ಮಳೆಯಷ್ಟು ಚೆನ್ನಾಗಿಲ್ಲದಿರುವುದು, ಲೊಕೇಶನ್‌ಗಳು ಅದೇ ಥರಾ ಇರುವುದು, ಹೊಸತು ಎಂಬಂತಿರುವ ಹಂದಿ ಬೇಟೆಯ ಪ್ರಸಂಗವೂ ಸೆನ್ಸೇಷನಲ್ ಆಗದೆ ಸಪ್ಪೆಯಾಗಿ ಖಾರ (ಫೈಟಿಂಗ್ ಇತ್ಯಾದಿ)ದ ಕೊರತೆಯನ್ನು ತುಂಬದಿರುವುದು, ಗಾಳಿಪಟದ ಹಾರಾಟ ನಿರೀಕ್ಷೆ ಮುಟ್ಟದಿರಲು ಮುಖ್ಯ ಕಾರಣಗಳಿರಬೇಕು. ತುಂಡು ಪಾತ್ರಗಳ ಮೂಲಕ ಚಿತ್ರಕಥೆ ಕಟ್ಟುವ ಹೊಸ ಯೋಚನೆಗೆ ಪೂರಕವಾಗಿ, ಪ್ರಸ್ತುತಿಯಲ್ಲಿ ಹೊಸತನ ಹುಟ್ಟಿದಂತಿಲ್ಲ. ಸಾಮಾನ್ಯ ಹುಡುಗನೊಬ್ಬ ಪಾತಕಿಗಳ ಲೋಕ ಪ್ರವೇಶಿಸುವ ಹಳೇ ಕತೆಯುಳ್ಳ ‘ದುನಿಯಾ’ವನ್ನು ಅಥವಾ ಮಾಮೂಲಿ ಕತೆಯ ’ಮುಂಗಾರು ಮಳೆ’ಯನ್ನು ಗೆಲ್ಲಿಸಿದ್ದು ಅವುಗಳ ಪ್ರಸ್ತುತಿಯಲ್ಲಿದ್ದ ಹೊಸತನದ ರೀತಿ, ನಮ್ಮ ನಿರೀಕ್ಷೆಯನ್ನು ಸುಳ್ಳಾಗಿಸುವ ಅಂತ್ಯಭಾಗ. ಆದರೆ ಇಲ್ಲಿ ಸಿನಿಮಾವನ್ನು ಮುಗಿಸುವುದಕ್ಕೆ ತಡಬಡಾಯಿಸಿರುವುದಂತೂ ಸ್ಪಷ್ಟವಾಗಿದೆ. ತೆಪ್ಪದಿಂದ ನದಿ ನೀರಿಗೆ ಮಗುಚಿಕೊಂಡ ಗಣೇಶ್ ಮತ್ತು ಡೈಸಿಬೋಪಣ್ಣ ಈಜಾಡಿ, ಹೋರಾಡಿ ಮೇಲೆ ಬರುತ್ತಿದ್ದಂತೆಯೇ ಜನರೂ ಎದ್ದು ನಿಂತು ಬ್ಯಾಗು ಹೆಗಲಿಗೇರಿಸುತ್ತಾರೆ, ಅವರು ಒಂದಾದರೆ ಖುಶಿಯೂ ಇಲ್ಲ , ಸತ್ತರೆ ಬೇಜಾರೂ ಇಲ್ಲ ಎಂಬಂತಿರುತ್ತದೆ ಪ್ರೇಕ್ಷಕರ ಪರಿಸ್ಥಿತಿ ! ಒಟ್ಟಾರೆ, ಯೋಚನೆಯಲ್ಲಿ ಹೊಸ ನೀತಿ, ಕೆಲಸದಲ್ಲಿ ಹಳೆ ರೀತಿ.

ನನ್ನ ಪಕ್ಕದಲ್ಲಿ ಕುಳಿತಿದ್ದ ಮೂವರು ಅನ್ಯ ಭಾಷೆಯ ಹುಡುಗರು (ಹಿಂದಿ ಮಿಶ್ರಿತ ಯಾವುದೋ ಭಾಷೆ ಆಡುತ್ತಿದ್ದರು) ಮುಂಗಾರು ಮಳೆಯಿಂದ ಪ್ರಭಾವಿತರಾಗಿ, ಗಣೇಶ್ ಫ್ಯಾನ್‌ಗಳಾಗಿ ಬಂದಿದ್ದವರು ಸಿನಿಮಾ ಪೂರ್ತಿ ಎಂಜಾಯ್ ಮಾಡಿದರು. ‘ಈ ಮಲ್ನಾಡು ಬಚ್ಚಲು ಮನೆ ಥರಾ ಇದೆಯಲ್ಲ’ ಅನ್ನೋದು ಅವರಿಗೆ ಅರ್ಥವಾಗದಿದ್ದರೂ ಕೆಲವು ವಾಕ್ಯಗಳು ಅರ್ಥವಾಗುತ್ತಿತ್ತು. ಅಂತಹ ಪ್ರೇಕ್ಷಕರನ್ನೂ ಕನ್ನಡ ಸಿನಿಮಾಗಳಿಗೆ ಸೆಳೆದಿರುವ ಯೋಗರಾಜ ಭಟ್ಟರಿಗೆ ಮತ್ತೊಂದು ರಾಜಯೋಗ ಬೇಗ ಬರಲಿ.

Read more...

March 22, 2008

ನಗರ ಸ್ವರ

ಹುಡುಕುತ್ತ ಬಂದು
ವರ್ಷವಾಯಿತು ಹದಿನಾಲ್ಕು .
ನಾಳೆಯೂ ಮರಳದಿದ್ದರೆ
ಜೀವ ತೊರೆವನಂತೆ ತಮ್ಮ .
***
ರಾಕ್ಷಸರ ಸದೆ ಬಡಿಯಲಿಲ್ಲ
ವಿಭೀಷಣ ಸಿಗಲಿಲ್ಲ ಸೀತೆ ಇರಲಿಲ್ಲ
ಕುಂಭಕರ್ಣನಿಗೆ ಎಚ್ಚರವಾಗಲೇ ಇಲ್ಲ
ಮಂಗಗಳ ಉಪದ್ರ ಸಹಿಸಲು ಸಾಧ್ಯವಿಲ್ಲ
ಹೇಗೆ ಬಂದೆನೆಂದೂ ನೆನಪಿಲ್ಲ .
ಪೂರೈಸಿದ್ದೇನೆ ಬಂದು ನಿನ್ನಮ್ಮನ ಆಸೆ
ನನ್ನ ಚಪ್ಪಲಿಯ ನೀನು ಹಾಕಬೇಡ !
***
ನೀನೆ ಆರಾಮ ರಾಜಾರಾಮ,
ನನಗಿಲ್ಲ ವಿರಾಮ ಲೋಕಾಭಿರಾಮ
ಕ್ಷಮಿಸು, ನಾನು ಹರಾಮ.

--------------------

'ಪೇಟೆಯ ಪಾಡ್ದನ ’ದ ಬಗ್ಗೆ ಬೆಟ್ಟದಡಿ ಕುಳಿತು ಯಾರೋ ಬರೆದಿದ್ದಾರೆ. ಬೆಟ್ಟದ ಕೆಳಗೆ ನುಸುಳುವುದಕ್ಕೆ ಬಹಳಷ್ಟು ಬಿಲಗಳೂ (ಮಾಟೆಗಳು) ಇವೆ ! ಓದುವ ಆಸಕ್ತಿ ಇದ್ದರೆ ಇಲ್ಲಿ ಒಳನುಗ್ಗಿ . ಸಮಸ್ತರಿಗೆ ಇನ್ನೊಂದು ಸೂಚನೆ: ಪೇಟೆಯ ಪಾಡ್ದನದಲ್ಲಿ ಬರುವ ಎಲ್ಲ ಪಾತ್ರ-ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು, ಅದಕ್ಕೂ ಸುಧನ್ವಾದೇರಾಜೆ ಆಗಿರುವ ನನ್ನ ವೈಯಕ್ತಿಕ ಬದುಕಿಗೂ ಯಾವುದೇ ಸಂಬಂಧವಿರುವುದಿಲ್ಲ !

Read more...

March 20, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ. ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ-ಹೋಟೆಲ್‌ಗಳಿವೆ. ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ. ಅಲ್ಲಿ ಎರಡು ಅಂಗಡಿ, ಸಣ್ಣದೊಂದು ಹೋಟೆಲು, ಪ್ರೈಮರಿ ಸ್ಕೂಲು. ‘ಜೈ ಕರ್ನಾಟಕ ಸಂಘ, ಬೆಳ್ಳೇಕೆರೆ’ ಎಂಬ ಸಂಘದ ಬಹುತೇಕ ಚಟುವಟಿಕೆಗಳ ಕೇಂದ್ರ ಈ ಶಾಲೆ, ಇಲ್ಲಿಯೇ ಅದರ ‘ಪ್ರಕೃತಿ ರಂಗಮಂಚ .’ ರಕ್ಷಿದಿ ಬಸ್‌ಸ್ಟಾಪ್‌ನಿಂದ ಅರ್ಧ ಕಿಮೀ ಮಣ್ಣು ರಸ್ತೆಯಲ್ಲಿ ಸಾಗಿದರೆ ಪ್ರಸಾದ್ ರಕ್ಷಿದಿಯವರ ಹೆಂಚಿನ ಮನೆ . ಕಾಫಿ ಎಸ್ಟೇಟ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಸುತ್ತಲಿನ ಊರುಗಳ ಮ್ಯಾನೇಜರ್ ಕೂಡಾ ಹೌದು ! ಹಳ್ಳಿಯ ಎಲ್ಲ ತರಹದ ಜನರೊಂದಿಗೆ ನಿಕಟ ಒಡನಾಟ ಇಟ್ಟುಕೊಂಡವರು. ಇವರ ಎರಡು ಮುಖ್ಯ ಆಸಕ್ತಿಗಳು ರಾಜಕೀಯ ಮತ್ತು ನಾಟಕ ! ಹ್ಮ್....ಅರ್ಥ ಆಯ್ತು ಅಂತೀರಾ?

ಇಂಥವರಿಗೆ ೨೦೦೬ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಬಂತು ! ಎಲ್ಲವನ್ನೂ ನಾನೇ ಹೇಳಿದರೆ ಮಜಾ ಇಲ್ಲ. ಹಳ್ಳಿಯಿಂದ ನಗರಕ್ಕೆ ಸಾಂಸ್ಕೃತಿಕ ವಲಸೆಯೂ ಆರಂಭವಾಗಿರುವ ಈ ದಿನಗಳಲ್ಲಿ , ಹಳ್ಳಿಯನ್ನು ರಕ್ಷಿಸುವಲ್ಲಿ ಬೆಳೆಸುವಲ್ಲಿ ,ಇವರು ಕಳೆದ ೪೦ ವರ್ಷಗಳಲ್ಲಿ ಮಾಡಿದ್ದೇನು? ಉಳಿದದ್ದೇನು? ‘ಬೆಳ್ಳೇಕೆರೆಯ ಹಳ್ಳಿ ಥೇಟರ್’ನಲ್ಲಿ ಅವೆಲ್ಲವನ್ನೂ ಪ್ರಸಾದ್ ರಕ್ಷಿದಿ ತೋರಿಸುತ್ತಿದ್ದ್ದಾರೆ . ಇದು ಕನ್ನಡಕ್ಕೊಂದು ಭಿನ್ನ ಬಗೆಯ, ‘ಗ್ರಾಮೀಣ ರಂಗಭೂಮಿಯ ಆತ್ಮ ಕಥನ .’ ಪ್ರತಿಯೊಂದು ಹಳ್ಳಿಯನ್ನೂ ಪುಟ್ಟ ಭಾರತವಾಗಿಸಬಲ್ಲ ಇಂಥವರ ಕತೆ ಇಂದಿನಿಂದ ‘ಚಂಪಕಾವತಿ’ಯಲ್ಲಿ . ಮೂರನೇ ಬೆಲ್ ಹೊಡೆದಿದೆ, ಹೊರಗಿನ ಬೆಳಕು ಆರಿಸಿದ್ದೇನೆ , ಹಳ್ಳಿ ಥೇಟರ್‌ನಲ್ಲಿ ಕೂರಿಸುತ್ತಿದ್ದೇನೆ , ಪ್ರತಿ ವಾರ ಓದುತ್ತಿರಿ. ನಿಮ್ಮ ಪ್ರತಿಕ್ರಿಯೆಗಾಗಿ ಎರಡು ಊರುಗಳೇ ಕಾಯುತ್ತಿದೆ , ನೆನಪಿರಲಿ.

*****

  • ಪ್ರಸಾದ್ ರಕ್ಷಿದಿ

ಪ್ಪ ಕೆಲಸದಾಳುಗಳಿಗೆ ವಾರದ ಬಟವಾಡೆ ಮಾಡುತ್ತಿದ್ದರು. ಸಕಲೇಶಪುರದಲ್ಲಿ ಗುರುವಾರ ವಾರದ ಸಂತೆ. ಆದ್ದರಿಂದ ಅಂದು ಸುತ್ತಮುತ್ತಲಿನ ಕಾಫಿ ತೋಟಗಳಿಗೆಲ್ಲ ರಜಾದಿನ. ಪ್ರತಿವಾರವೂ ಬುಧವಾರ ಸಂಜೆ ಆಳುಗಳಿಗೆ ವಾರದ ಬಟವಾಡೆ. ಅಪ್ಪ ಒಬ್ಬೊಬ್ಬರನ್ನೇ ಕರೆದು ಹೆಬ್ಬೆಟ್ಟು ಒತ್ತಿಸಿಕೊಂಡು ವಾರದ ಸಂಬಳ ಬಟವಾಡೆ ಮಾಡುತ್ತಿದ್ದರು. ಇಡೀ ವಾರದ ಜಗಳಗಳ ತೀರ್ಮಾನ, ತಪ್ಪು ದಂಡಗಳು, ಸಾಲ ವಸೂಲಿ ಇನ್ನಿತರ ಎಲ್ಲಾ ವ್ಯವಹಾರಗಳಿಗೂ ಆಗಲೇ ಸಮಯ. ಹಾಗಾಗಿ ಅಪ್ಪನೂ ತಲೆಬಿಸಿಯಲ್ಲಿದ್ದರು. ಈಗಿನಂತೆ ಕ್ಯಾಲುಕುಲೇಟರ್, ಕಂಪ್ಯೂಟರ್‌ಗಳು ಇರಲಿಲ್ಲ. ಎಲ್ಲಾ ಲೆಕ್ಕಗಳೂ ಗುಣಾಕಾರ ಭಾಗಹಾರ ಕೈಬರಹಗಳಲ್ಲೇ ಆಗಬೇಕಿತ್ತು. ಕತ್ತಲಾದರೆ ಬೆಳಕಿಗೆ ಚಿಮಣಿ ದೀಪ. ಕೆಲಸದವರಿಗೂ ಅಷ್ಟೇ, ಕೈಗೆ ದುಡ್ಡು ಸಿಕ್ಕಿದೊಡನೆ- ಅಂಗಡಿ ಸಾಲದವನಿಗೆ, ಕಾಸಿನ ಬಡ್ಡಿಯವನಿಗೆ, ಹೆಂಡದಂಗಡಿಗೆ ಬಾಕಿ ಸಲ್ಲಿಸಿ- ತನಗೆಷ್ಟು ಉಳಿದೀತು ಎಂಬ ಚಿಂತೆ. ವಾರದ ಲೆಕ್ಕವನ್ನೆಲ್ಲ ಬರೆದು ಮಾರನೆ ಬೆಳಗ್ಗೆಯೇ ಲೆಕ್ಕದ ವರದಿಯನ್ನು ತೋಟದ ಮಾಲೀಕರಿಗೆ ಕಳುಹಿಸಬೇಕಿತ್ತಾದ್ದರಿಂದ ಪ್ರತಿ ಬುಧವಾರವೂ ಅಪ್ಪನಿಗೆ ಪಿತ್ತ ನೆತ್ತಿಯಲ್ಲೇ ಇರುತ್ತಿತ್ತು.

ಮನೆ ಎದುರಿನ ಕೋಣೆಯೇ ಎಸ್ಟೇಟಿನ ಆಫೀಸ್. ಒಂದು ದೊಡ್ಡ ಮೇಜಿನ ಹಿಂದೊಂದು ಒಂಟಿ ಕಾಲಿನ ಸ್ಟೂಲು. ಲೆಕ್ಕದ ಪುಸ್ತಕಗಳನ್ನು ಇಡಲು ಪಕ್ಕದ ಗೋಡೆಯಲ್ಲೊಂದು ಮೊಳೆ ಹೊಡೆದು ತಂತಿಯಿಂದ ತೂಗಾಡಿಸಿದ ಹಲಗೆ. ಸ್ವಲ್ಪ ದೂರದಲ್ಲೊಂದು ಸಣ್ಣ ಬೆಂಚು. ಆಫೀಸೆಂದರೆ ಇಷ್ಟೇ. ಅಪ್ಪ ಒಂಟಿ ಕಾಲಿನ ಸ್ಟೂಲಿನಲ್ಲಿ ಕುಳಿತು ಒಬ್ಬೊಬ್ಬರನ್ನಾಗಿ ಹೆಸರು ಕರೆಯುತ್ತಿದ್ದರು. ಹೆಸರು ಕರೆಯುತ್ತಿದ್ದಂತೆ ಆಳುಗಳೆಲ್ಲ ಬಂದು ಸಂಬಳದ ಪಟ್ಟಿಯಲ್ಲಿ ಹೆಬ್ಬೆಟ್ಟು ಒತ್ತಿ ವಾರದ ಸಂಬಳ ಪಡೆಯಬೇಕಿತ್ತು. ಅಪ್ಪ ಅವರ ವಾರದ ಹಾಜರಿಯನ್ನೂ- ಒಟ್ಟು ಸಂಬಳವನ್ನೂ ಗಟ್ಟಿಯಾಗಿ ಓದಿ ಹೇಳುತ್ತಿದ್ದರು. ಕೆಲವೊಮ್ಮೆ ಕೆಲಸಗಾರರಿಗೆ ಕೊಟ್ಟ ಸಾಲದ ಬಾಕಿ ವಸೂಲಿಗಾಗಿ ತಕರಾರು- ಇನ್ನಿತರ ಯಾವುದೇ ವಿಷಯಗಳ ಬಗ್ಗೆ, ವಿಚಾರಣೆ-ಜಗಳ-ಅಪ್ಪನಿಂದ ಬೈಗಳು-ಎಲ್ಲವೂ ಇರುತ್ತಿತ್ತು. ಸಾಮಾನ್ಯವಾಗಿ ಬಟವಾಡೆ ದಿನ ಅಮ್ಮನೂ ಅಲ್ಲೇ ಬಂದು ಸಣ್ಣ ಬೆಂಚಿನ ಮೇಲೆ ಕೂರುತ್ತಿದ್ದಳು. ಸಾಲದ ಬಾಕಿ ವಸೂಲಿಯನ್ನು, ಇನ್ನಿತರ ಕೆಲಸಗಳನ್ನು ಅಮ್ಮ ಅಪ್ಪನಿಗೆ ಕೆಲವೊಮ್ಮೆ ನೆನಪಿಸುತ್ತಿದ್ದಳು. ಹೆಚ್ಚಿನ ಆಳುಗಳೆಲ್ಲ ಹೆಬ್ಬೆಟ್ಟು ಒತ್ತಿ, ಶಾಯಿ ಮೆತ್ತಿದ ಬೆರಳನ್ನು ಮೇಜಿಗೆ ಒರೆಸುತ್ತಿದ್ದರು. ಅಮ್ಮ ಅದನ್ನು ನೋಡಿ ಸಿಡಿಮಿಡಿಗೊಂಡು ಅವರಿಗೆ ಬಯ್ಯುತ್ತಿದ್ದಳು. ಹಾಗಾಗಿ ಆಳುಗಳೆಲ್ಲ ಅಮ್ಮ ಎದುರಿಗೆ ಇದ್ದಾಗಲೆಲ್ಲಾ ರುಜು ಮಾಡಿದ ನಂತರ ಶಾಯಿ ಮೆತ್ತಿದ ಹೆಬ್ಬೆಟ್ಟನ್ನು ತಮ್ಮ ತಲೆಗೇ ಉಜ್ಜಿಕೊಳ್ಳುತ್ತಿದ್ದರು! ಅಂದಿನ ಬಟವಾಡೆ ಮುಗಿಯುತ್ತಾ ಬಂದಿತ್ತು. ಅಪ್ಪ ಕರೆದರು,

'ಲಕ್ಷ್ಮಯ್ಯ......' ಲಕ್ಷ್ಮಯ್ಯ ಸುಮಾರು ಹದಿನೆಂಟು ವರ್ಷದ ಕಟ್ಟುಮಸ್ತಾದ ಆಳು. ಅಲ್ಲದೆ ಒಳ್ಳೇ ಕೆಲಸಗಾರನೂ ಆಗಿದ್ದು ಹೇಳಿದ ಕೆಲಸವನ್ನು ಮುತುವರ್ಜಿಯಿಂದ ಮಾಡುತ್ತಿದ್ದ. ಹಾಗಾಗಿ ಹೆಚ್ಚಿನ ಜವಾಬ್ದಾರಿಯ ಕೆಲಸಗಳನ್ನು ಅಪ್ಪ ಅವನಿಗೇ ವಹಿಸುತ್ತಿದ್ದರು. ಇತರ ಆಳುಗಳು ಕೂಡಾ 'ರೈಟರಿಗೆ ಬೇಕಾದವ' ನೆಂದು ಅವನಿಗೆ ಸ್ವಲ್ಪ ಹೆದರುತ್ತಿದ್ದರು.

ಲಕ್ಷ್ಮಯ್ಯ ಬಂದು ಹೆಬ್ಬೆಟ್ಟು ಪ್ಯಾಡಿಗೆ ಒತ್ತಿ ರುಜು ಮಾಡಬೇಕೆನ್ನುವಷ್ಟರಲ್ಲಿ- ಅವನ ಹೆಸರಿನ ಪಟ್ಟಿ ಅಪ್ಪನಿಗೆ ಕಾಣಿಸಲಿಲ್ಲ. ಹೆಬ್ಬೆಟ್ಟು ಒತ್ತಲು ಹುಡುಕುತ್ತಿದ್ದ ಲಕ್ಷ್ಮಯ್ಯನಿಗೆ 'ನಿಲ್ಲು ನಿಲ್ಲು' ಎಂದರು. ಲಕ್ಷ್ಮಯ್ಯ ಸುಮ್ಮನೆ ನಿಂತ. ಒಂದೆರಡು ಕ್ಷಣದಲ್ಲಿ ಅಭ್ಯಾಸ ಬಲದಿಂದ ಹೆಬ್ಬೆಟ್ಟಿಗೆ ಮೆತ್ತಿದ ಶಾಯಿಯನ್ನು ಮೇಜಿಗೇ ಒರೆಸಿದ. ಅಮ್ಮ ಕಿಡಿಕಿಡಿಯಾದಳು. 'ನಿಂಗೂ ಬುದ್ಧಿ ಇಲ್ವ ಲಕ್ಷ್ಮಯ್ಯ, ಮೆತ್ತಿದಿಯಲ್ಲ ಮೇಜಿಗೆ' ಎಂದಳು. ಲಕ್ಷ್ಮಯ್ಯ ಗಾಬರಿಯಾಗಿ ಅಲ್ಲಿದ್ದ ಯಾವುದೋ ಕಾಗದವನ್ನು ತೆಗೆದು ಮೇಜಿಗೆ ಮೆತ್ತಿದ ಶಾಯಿಯನ್ನು ಒರೆಸಿಬಿಟ್ಟ. ಅವನ ದುರಾದೃಷ್ಟಕ್ಕೆ ಅದು ಅಪ್ಪ ಏನೋ ಲೆಕ್ಕ ಬರೆದಿಟ್ಟ ಹಾಳೆಯಾಗಿತ್ತು. 'ಹಾಳು ಮಾಡಿದಿಯಲ್ಲ ಎಲ್ಲ. ನಾನಿನ್ನು ಒಂದು ಗಂಟೆ ಕೂತುಕೊಂಡು ಬರೀಬೇಕು. ನಿಮಗೆಲ್ಲಾ ಒಂದು ಸೈನ್ ಮಾಡೋದು ಕಲಿಯಕ್ಕೇನು ರೋಗ- ಒಳ್ಳೇ ಕೋಣನ ಹಾಗೆ ಬೆಳೆದಿದ್ದೀಯ' ಅಪ್ಪ ಜೋರಾಗಿಯೇ ಹೇಳಿದರು. ಉಳಿದ ಕೆಲಸದವರಲ್ಲಿ ಹೆಚ್ಚಿನವರಿಗೆ ಲಕ್ಷ್ಮಯ್ಯನ ಬಗ್ಗೆ ಸಣ್ಣ ಅಸೂಯೆಯೂ- ಸ್ವಲ್ಪ ಹೆದರಿಕೆಯೂ ಇದ್ದುದರಿಂದ ಈಗ ಅವನಿಗೇ 'ಮರ್ಯಾದಿ' ಆಗುತ್ತಿರುವುದನ್ನು ನೋಡಿ ಖುಷಿಪಡಲು ಸುತ್ತ ಸೇರಿದರು.

ಲಕ್ಷ್ಮಯ್ಯನಿಗೂ ಅವಮಾನವಾದಂತಾಗಿ 'ಏನೋ ಒಂದು ಸಣ್ಣ ತಪ್ಪಾದ್ರೆ ಅದಕ್ಯಾಕೆ ಹಂಗೆ ಕೂಗಾಡ್ತೀರಿ ಅಯ್ಯ" ಎಂದ. 'ಇನ್ನೇನು ನಿಂಗೆ ಹಾರ ಹಾಕಿ ಕೈ ಮುಗೀತೀನಿ. ನಾನು ಅಷ್ಟು ಕಷ್ಟಪಟ್ಟು ಬರೆದದ್ನೆಲ್ಲ ಹಾಳು ಮಾಡಿದೆ. ಎರಡಕ್ಷರ ಕಲಿಯಕ್ಕೇನು ರೋಗ ನಿಮಗೆಲ್ಲಾ' ಎಂದು ಇನ್ನಷ್ಟು ಬೈದರು. ಲಕ್ಷ್ಮಯ್ಯನಿಗೆ ಭಾರೀ ಅವಮಾನವಾಯ್ತು. 'ನಂಗೆ ಸಂಬ್ಳನೇ ಬೇಡ ನೀವೇ ಮಡಿಕ್ಕಳಿ' ಎಂದು ಸಿಟ್ಟಿನಿಂದ ದುಡುದುಡು ಹೋಗಿಬಿಟ್ಟ. ಅಪ್ಪನೂ ಸ್ವಲ್ಪ ಹೊತ್ತು ಕೂಗಾಡುತ್ತಾ ಇದ್ದರು. ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಬೇಸಗೆ ರಜೆ ಬಂದಿತ್ತು. ಲಕ್ಷ್ಮಯ್ಯ ಅಪ್ಪನಿಗೆ ಹೇಗೆ ಹತ್ತಿರದವನೋ- ನನಗೂ ಹಾಗೇ. ರಜಾದಿನಗಳಲ್ಲಿ ಕಾಡು ಕಾಡು ಸುತ್ತಲು-ಅವನೇ ಬೇಕು. ನಾನು ಸಣ್ಣವನಾದರೂ ರೈಟರ ಮಗನಾದುದರಿಂದ ನನ್ನನ್ನು ಉಳಿದ ಆಳುಗಳೆಲ್ಲ ಬಹುವಚನದಿಂದ 'ಹೋಗಿ ಬನ್ನಿ' ಎನ್ನುತ್ತಿದ್ದರು. ಲಕ್ಷ್ಮಯ್ಯ ಮಾತ್ರ ಸಲುಗೆಯಿಂದ 'ಹೋಗು-ಬಾ' ಎನ್ನುತ್ತಿದ್ದ. ಮರದಿಂದ ಹಲಸಿನ ಹಣ್ಣು ಕಿತ್ತುಕೊಡಲು, ಬೇರೆ ಕಾಡು ಹಣ್ಣುಗಳನ್ನು ಕೊಯ್ದುಕೊಡಲು-ಎತ್ತಿನಹಳ್ಳದಲ್ಲಿ ಈಜಾಡಲು ಹೋಗಲು-ಸಕಲೇಶಪುರದ ಜಾತ್ರೆಗೆ ಹೋಗಿ ಸಿನಿಮಾ ನೋಡಿ-ರಾತ್ರಿಯೆಲ್ಲ ನಿದ್ದೆಗೆಟ್ಟು ಜಾತ್ರೆ ಸುತ್ತಿ ಬರಲು, ನನಗೆ ಲಕ್ಷ್ಮಯ್ಯನೇ ಜೊತೆ. ಕಳೆದ ವರ್ಷ ಜಾತ್ರೆಯಲ್ಲಿ ನನಗೆ ಲಕ್ಷ್ಮಯ್ಯ 'ಆಯಿರತ್ತಿಲ್ ಒರುವನ್’ ಸಿನಿಮಾ ತೋರಿಸಿದ್ದ. ಹಾಗಾಗಿ ಅಪ್ಪ ಮತ್ತು ಲಕ್ಷ್ಮಯ್ಯನ ಜಗಳದಿಂದ ಅತ್ಯಂತ ಆತಂಕಕ್ಕೊಳಗಾದವನು ನಾನೇ. ಇವರ ಜಗಳದಿಂದ ಲಕ್ಷ್ಮಯ್ಯನ ಒಡನಾಟ ತಪ್ಪಿದರೆ ಎಂಬ ಚಿಂತೆಯ ಜೊತೆಗೆ, ಯಾರದ್ದು ಸರಿ ಎಂದು ತಿಳಿಯದ ಗೊಂದಲವೂ ಸೇರಿತು. ಇದೇ ಚಿಂತೆಯಲ್ಲಿ ರಾತ್ರಿ ಮಲಗಿದವನಿಗೆ ತುಂಬ ಹೊತ್ತು ನಿದ್ದೆಯೇ ಬರಲಿಲ್ಲ.

ರಜಾ ದಿನಗಳಾದ್ದರಿಂದ ಬೆಳಿಗ್ಗೆ ಅಮ್ಮನೂ ಬೇಗ ನನ್ನನ್ನು ಕರೆಯುತ್ತಿರಲಿಲ್ಲ. ನಾನು ತಡವಾಗಿ ಎದ್ದು ಕಣ್ಣುಜ್ಜಿಕೊಂಡು ಹೊರಗೆ ಬರುವಾಗ ನನಗೊಂದು ಆಶ್ಚರ್ಯ ಕಾದಿತ್ತು. ಅಪ್ಪನೂ ಲಕ್ಷ್ಮಯ್ಯನೂ ಹಿಂದಿನ ದಿನ ಏನೂ ಆಗಿಲ್ಲವೆಂಬಂತೆ ಮಾತಾಡುತ್ತಿದ್ದರು! ಅಪ್ಪ ಲಕ್ಷ್ಮಯ್ಯನಲ್ಲಿ ಸಕಲೇಶಪುರದಿಂದ ಏನೋ ಸಾಮಾನು ತರಲು ಹೇಳುತ್ತಿದ್ದರು. ಅವನೂ ಇನ್ನೇನೋ ಹೇಳಿ ಅದಕ್ಕೆಂದು ದುಡ್ಡು ತೆಗೆದುಕೊಳ್ಳುತ್ತಿದ್ದ. ಇವರು ಯಾವಾಗ ರಾಜಿಯಾದರು? ಲಕ್ಷ್ಮಯ್ಯ ಯಾವಾಗ ತನ್ನ ಸಂಬಳ ತೆಗೆದುಕೊಂಡ?-ತಿಳಿಯಲಿಲ್ಲ. ನನಗಂತೂ ಖುಷಿಯಾಗಿತ್ತು. ಲಕ್ಷ್ಮಯ್ಯ ಅಪ್ಪನೊಂದಿಗೆ ಮಾತುಕತೆ ಮುಗಿಸಿ ಹೊರಟಾಗ ನಾನು ಅವನ ಹಿಂದೆಯೇ ಹೋದೆ. ಅವನು ನನ್ನನ್ನು ಚಕ್ಕೋತದ ಹಣ್ಣಿಗಾಗಿ ಎಲ್ಲಿಗೋ ಕರೆದೊಯ್ಯುವ ಆಶ್ವಾಸನೆ ನೀಡಿದ್ದ. 'ಲಕ್ಷ್ಮಯ್ಯ ಚಕ್ಕೋತ್ನಣ್ಣು' ಎಂದೆ. 'ಮಧ್ಯಾಹ್ನ ಬೇಗ ಬರ್‍ತೀನಿ ಹೋಗಾಣ' ಯಾಕೋ ಲಕ್ಷ್ಮಯ್ಯ ಹೆಚ್ಚು ಮಾತಾಡಲಿಲ್ಲ- 'ನೀನು ಹೋಗು ಮನೆಗೆ ' ಅಂದುಬಿಟ್ಟ. (ಇನ್ನೂ ಇದೆ)

Read more...

March 17, 2008

ಸಿಟಿ ಗೀತ

ಶಾಪಿಂಗ್ ಮಾಲ್‌ನ ಮುಂದೆ
ಮಿನಿ ಸ್ಕರ್ಟಿನ ಹಿಂದೆ
ಅಂಟಿಕೊಂಡ ಚ್ಯೂಯಿಂಗಮ್ಮು
ಎಳೆ ಎಳೆದಷ್ಟೂ
ರೇಶಿಮೆಯ ಎಳೆಯಂತೆ ಬರುವುದರ
ನೋಡುತ್ತ ಕಚಕಚ ಅಗಿಯುತ್ತ
'ಬಿಗ್ ಬಬಲ್' ಊದುತ್ತ
ಅವಳ ಕಣ್ಣಿನಲ್ಲೇ ತಿಂದರು.
***
ಆಕೆ ಎಳೆದ 'ಸೆಂಟರ್ ಫ್ರೆಶ್’ ಚ್ಯೂಯಿಂಗಮ್ಮು
'ಸೆಂಟರ್ ಶಾಕ್’ನಂತೆ ಕೈಗೆ, ಬ್ಯಾಗಿಗೆ, ಗೋಡೆಗೆ
ಕಾರಿಗೆ, ಬಸ್ಸಿಗೆ, ಎಲ್ಲರ ಮೈಗೆ
ನೋವಿನೆಳೆಯಂತೆ ಅಂಟಿ ಹಬ್ಬುತ್ತಿರಲು...
***
'ಅಗಿದಗಿದು ತಿನ್ನು’ ಅಂತ
ಅಮ್ಮ ಅಂದದ್ದು ನೆನಪಾಗಿ
ಕಣ್ಣ ಕೊನೆ ಒರೆಸಿದರೆ
ನಗರವೇ ಅಗಿಯುತ್ತಿತ್ತು ಜಗಿಯುತ್ತಿತ್ತು
ನುಂಗಲೂ ಆಗದೆ, ಉಗುಳಲೂ ಬಾರದೆ.

Read more...

March 09, 2008

ಜೀಕೆ ಮಾಸ್ತರರ ಪ್ರಣಯ ಪ್ರಸಂಗ

ಪುಟ್ಟದಾದ ಡಬ್ಬದೊಳಗೆ ರಬ್ಬರ್ ಹಾವಿದೆ ಅಂತ ಗೊತ್ತಿದ್ದಾಗಲೂ ಮುಚ್ಚಳ ತೆಗೆದಾಗ ಹೌಹಾರುವುದಿದೆಯಲ್ಲ...ಅದು ನಾಟಕ ! ಅಂದರೆ ಭಯಗೊಳ್ಳುವ ನಟನೆ ಮಾಡಿದರೂ , ನಿಜವಾಗಿ ಭಯ ಪಟ್ಟರೂ ಅದು ನಾಟಕವೇ. ಭಯವಾದ ನಟನೆ ಮಾಡಿದರೆ ಮುಚ್ಚಳ ತೆಗೆವವನದ್ದು ನಾಟಕ, ನಿಜವಾಗಿ ಭಯಪಟ್ಟರೆ ಡಬ್ಬ ಕೊಟ್ಟವನದ್ದು ಒಳ್ಳೆಯ ನಾಟಕ ಅಂತಲೂ ಅನ್ನಬಹುದು !

ಇವೆಲ್ಲ ಸಾಧ್ಯವಾದದ್ದು ಕಳೆದ ಶುಕ್ರವಾರ (ಮಾರ್ಚ್ ) ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆದ ನೀನಾಸಂ ನಾಟಕದಲ್ಲಿ, ’ಜೀಕೆ ಮಾಸ್ತರರ ಪ್ರಣಯ ಪ್ರಸಂಗದಲ್ಲಿ. ಮರು ತಿರುಗಾಟದ ಆಪ್ತ ರಂಗಭೂಮಿ ಪ್ರದರ್ಶನದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಒಳ್ಳೆಯ ಬೆಳೆ ತೆಗೆಯುತ್ತಿರುವ ನೀನಾಸಂ, ಬಾರಿ ಬಂಪರ್ ಬೆಳೆ ಹೊಡೆದಿದೆ. ಬಯಲು ರಂಗದಲ್ಲಿ ಭಾರೀ ಜನಸ್ತೋಮದ ಎದುರೂ ಮಾಡಬಹುದಾದ ಕತೆಯುಳ್ಳ ನಾಟಕವನ್ನು , ಆಪ್ತ ರಂಗಭೂಮಿಯ ಸಕಲ ಸಾಧ್ಯತೆಗಳೂ ಮೇಳೈಸುವ ಹಾಗೆ ಪ್ರದರ್ಶಿಸಿದ್ದೇ ಅನನ್ಯ ಸಾಧನೆ. ಕಳೆದೆರಡು ವರ್ಷಗಳ ಪ್ರದರ್ಶನಗಳಲ್ಲಿ ಏಕಮುಖವಾಗಿದ್ದ ವೇದಿಕೆಯನ್ನು ತೊರೆದು ಸಿದ್ಧಪಡಿಸಿದ ಆಯತಾಕಾರದ ವೇದಿಕೆ; ಕಡಿಮೆ ಉದ್ದದ ಎರಡು ಬದಿಗಳಲ್ಲಿ ತೆರೆ ಇಳಿಬಿಟ್ಟು, ಇನ್ನೆರಡು ಬದಿಗಳಲ್ಲಿ ಪ್ರೇಕ್ಷಕರನ್ನು ಕುಳ್ಳಿರಿಸಿಕೊಂಡು ಮಾಡಿದ ಪ್ರಯೋಗ ಇದು. ಆದರೆ ಎರಡೂ ಬದಿಗಳಲ್ಲಿ ಇದ್ದ ಪ್ರೇಕ್ಷಕರು ಮೈಮರೆತು ನಾಟಕ ನೋಡಿದರು, ಪರಸ್ಪರ ಮುಖ ನೋಡಲಿಲ್ಲ !


ಪರಿಚಯ ಪತ್ರದಲ್ಲಿ ನಿರ್ದೇಶಕ ಕೆ.ವಿ.ಅಕ್ಷರ ಹೀಗೆ ಹೇಳಿದ್ದಾರೆ- 'ಸಾಂಪ್ರದಾಯಿಕ ಯೋಚನಾ ಕ್ರಮದ ಪ್ರಕಾರ ಸಂಭಾಷಣಾ ಕೇಂದ್ರಿತವಾದದ್ದು ನಾಟಕವೆಂದೂ, ನಿರೂಪಣಾ ಪ್ರಧಾನವಾದದ್ದು ಕಾದಂಬರಿಯೆಂದೂ ನಾವು ಭಾವಿಸುತ್ತೇವೆ. ಆದರೆ ಅಂಥ ವರ್ಗೀಕರಣ ಮುರಿದು ನಿರೂಪಣಾತ್ಮಕವಾದ, ಆದರೆ ನಾಟಕೀಯ ಗುಣಗಳಲ್ಲಿ ಶ್ರೀಮಂತವೂ ಆಗಿರುವ ಹೊಸ ಪ್ರಸ್ತುತಿ ಮಾರ್ಗವೊಂದನ್ನು ಹುಡುಕಲಿಕ್ಕೆ ಸಾಧ್ಯವೆ ಎಂಬ ದಿಕ್ಕಿನಲ್ಲಿ ಈ ಪ್ರಯೋಗ ಕೈಚಾಚಿದೆ...ವಾಸ್ತವ ಮತ್ತು ವಾಸ್ತವೇತರದ ನಡುವಿನ ಹಾಗೂ ನಿರೂಪಣೆ ಮತ್ತು ಪ್ರದರ್ಶನದ ನಡುವಿನ ಮಿಶ್ರ ಮಾರ್ಗವೊಂದನ್ನು ಇಲ್ಲಿ ಕಟ್ಟಲು ಹವಣಿಸಲಾಗಿದೆ. ಕಾದಂಬರಿಯೊಂದನ್ನು ನಾಟಕವಾಗಿ ರೂಪಾಂತರಿಸದೆ, ನಾಟಕೀಯ ಅಂಗಾಂಶಗಳೊಂದಿಗೆ ಪ್ರಸ್ತುತಿ ಮಾಡುವ ಹೊಸ ಮಾದರಿಯೊಂzನ್ನು ಇಲ್ಲಿ ಪ್ರಯತ್ನಿಸಲಾಗಿದೆ.’ ನಿರ್ದೇಶಕರ ಉದ್ದೇಶ ಅಷ್ಟೇ ಸ್ಪಷ್ಟವಾಗಿ ಪ್ರದರ್ಶನದಲ್ಲೂ ಈಡೇರಿರುವುದು ಸಂತಸದ ಸಂಗತಿ.

ಈ ನಿರೂಪಣಾ ವಿಧಾನ ಎಷ್ಟು ಶಿಸ್ತುಬದ್ಧವೂ ಸ್ವಚ್ಚವೂ ಆಗಿದೆಯೆಂದರೆ , ಜೀಕೆ ಮಾಸ್ತರರ ಪಾತ್ರವನ್ನು, ನಾಲ್ವರು ಒಬ್ಬರಾದ ಮೇಲೆ ಒಬ್ಬರಂತೆ ಬದಲಿಸುತ್ತಿರುವಾಗಲೂ, ಅಭಿನಯದಲ್ಲಿ ಜೀಕೆಯೇ ಆಗಿದ್ದು , ಮಾತಿನಲ್ಲಿ ಮಾತ್ರ ಒಮ್ಮೆ ಪಾತ್ರವಾಗಿ, ಮರುಕ್ಷಣ ನಿರೂಪಕನಾಗಿ ಬದಲಾದಾಗಲೂ ರಸಭಂಗವಾಗುವುದಿಲ್ಲ. ದೈಹಿಕ ಕಸರತ್ತುಗಳನ್ನು ಅತಿಯಾಗಿಸದೆ ಬಳಸಿದ ಕ್ರಮವೂ ಮೆಚ್ಚುವಂತಿದೆ. ಜೀಕೆ ಮಾಸ್ತರರ ಮಗ ಹೊಟ್ಟೆ ನೋವಿನಿಂದ ಸತ್ತ ಎನ್ನುವಲ್ಲಿ ಬಳಸುವ ಕ್ಲಿಷ್ಟವಾದ ದೈಹಿಕ ಕಸರತ್ತು (ಪ್ರೇಕ್ಷಕರೇ ಒಮ್ಮೆ ಹೊಟ್ಟೆ ಮುಟ್ಟಿಕೊಳ್ಳುವಂತೆ ಮಾಡುವ !) ಇದಕ್ಕೆ ಒಳ್ಳೆಯ ಉದಾಹರಣೆಯಾದೀತು. ಸಾಯಂಕಾಲ ಜೀಕೆ ಮಾಸ್ತರರು ರೋಜಾಗೆ ಕಾಯುತ್ತಿರುವಾಗ ಕೇಳಿಬರುವ " ಸಂಜೆ ಯಾಕಾಗಿದೆ ನೀನಿಲ್ಲದೇ...’ ಹಾಡು -ಟಿವಿಯ ಸರ್ಕಾರ್ ಪ್ರಯೋಗ ನೆನಪಿಸಿದರೂ, ಸಿನಿಮಾ ಹಾಡುಗಳನ್ನು ನಾಟಕದಲ್ಲಿ ಬಳಸಿರುವ ಕ್ರಮ ರುಚಿ ಹೆಚ್ಚಿಸುವಂತೆಯೇ ಇದೆ.


ಅತ್ಯಂತ ಕಡಿಮೆ ರಂಗಸಜ್ಜಿಕೆಗಳಿದ್ದಾಗ ರಂಗವನ್ನು ತುಂಬಿಸುವುದು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆದರೆ ಇಲ್ಲಿ ರಂಗದ ಮಧ್ಯೆ ಇಳಿಬಿಟ್ಟಿದ್ದ ಸುರುಳಿ ಸುತ್ತಿದ ಬಟ್ಟೆ, ಅದ್ಭುತ ರಂಗ ಪರಿಕರವಾಗಿ ಕೆಲಸ ಮಾಡಿದೆ. 'ನಟರು ಬಹುಮುಖಿ’ಗಳಾಗಲೂ ಇದು ಸುಲಭ ಸಾಧನವಾಗಿದೆ. ಮುಖ್ಯವಾದ ಜೀಕೆ ಮಾಸ್ತರು ಮತ್ತು ರೋಜಾಳ ಪಾತ್ರಗಳನ್ನು ಏಳೆಂಟು ಜನ ಸೇರಿ ನಿರ್ವಹಿಸಿರುವುದರಿಂದ ನಾಟಕಕ್ಕೊಂದು ಒಳ್ಳೆಯ ಹರಿವು ಲಭಿಸಿದೆ.

ಭಾರೀ ರಂಗಸಜ್ಜಿಕೆ , ಪರಿಕರ, ಬೆಳಕಿನ ಗೌಜಿ ಗದ್ದಲದೊಂದಿಗೆ ಮಾಡುವ ನಾಟಕಗಳು ಅಭಿನಯ ಮತ್ತು ಕತೆಯ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ತಟ್ಟುವುದು ಬಹಳ ಕಷ್ಟದ ಕೆಲಸ. 'ವಿಶ್ವವಿಖ್ಯಾತವಾಗಿರುವ ಡ್ಯಾಷ್ ಆರ್ಟ್ಸ್’ ನಿರ್ಮಿಸಿದ ಇಂಗ್ಲೆಂಡಿನ ಟಿಮ್ ಸಪಲ್ ನಿರ್ದೇಶಿಸಿದ "ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್’ ನಾಟಕವನ್ನು ಕೆಲವು ತಿಂಗಳುಗಳ ಹಿಂದೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನೋಡಿದ್ದೆ, ಇಂಡಿಯಾ ಮತ್ತು ಶ್ರೀಲಂಕಾದ ಕಲಾವಿದರುಳ್ಳ,ಇಂಗ್ಲಿಷ್-ತಮಿಳು-ಮಲೆಯಾಳಂ-ಸಂಸ್ಕೃತ-ಹಿಂದಿ-ಬಂಗಾಳಿ... ಹೀಗೆ ಹಲವು ಭಾಷೆಗಳನ್ನಿಟ್ಟುಕೊಂಡು ನಡೆದ ನಾಟಕ ಅದು. ಕೆಲವು ಲಕ್ಷ ರೂಪಾಯಿಗಳ ಖರ್ಚಿನಲ್ಲಿ ಸಿದ್ಧವಾದ ಅದರಲ್ಲಿ ರಂಗಸಜ್ಜಿಕೆ-ಬೆಳಕು-ದೈಹಿಕ ಕಸರತ್ತುಗಳ ಭಾರೀ ವೈಭವವಿತ್ತು. ಆದರೆ ಕೊನೆಗೂ ಅವಷ್ಟೇ ಮುನ್ನೆಲೆಗೆ ಬಂದು ಅಭಿನಯವೂ ಕತೆಯೂ ಹಿನ್ನೆಲೆಗೆ ಸರಿದಂತಾಯಿತು. ಆ ಕ್ಷಣಕ್ಕೇನೋ ಚಕಿತಗೊಳಿಸುವ ಆ ವೈಭವ ಬಹಳ ಬೇಗ ಕಾವು ಕಳೆದುಕೊಂಡಿತು. ನಾಟಕವನ್ನು ಸಿನಿಮಾ ಥರಾ ಮಾಡಬೇಕಾ ಎಂಬ ಪ್ರಶ್ನೆ ನನ್ನಲ್ಲಿ ಮತ್ತೆ ಮತ್ತೆ ಹುಟ್ಟಿಕೊಂಡಿತು. ನೀನಾಸಂನ ಈ ಸರಳ ಪ್ರಭಾವಿ ನಾಟಕ ಆ ಪ್ರಶ್ನೆಗೆ ಉತ್ತರದಂತಿದೆ. ಯಕ್ಷಗಾನ ವೇಷಧಾರಿಗೆ ಆಸ್ಥಾನ ಮಂಟಪ, ಅಂತಃಪುರ, ಯುದ್ಧರಂಗದಲ್ಲೂ ಒಂದೇ ವೇಷಭೂಷಣ, ಅದೇ ರಂಗಸಜ್ಜಿಕೆ. ಸಂದರ್ಭವನ್ನು ಆತ ಚೆನ್ನಾಗಿ ಅಭಿನಯಿಸಿದರೆ ನಾವು ಸುಲಭವಾಗಿ ಅದಕ್ಕೆ ಹೊಂದಿಕೊಳ್ಳುತ್ತೇವೆ. ಅದೇ ನಾಟಕದಲ್ಲೂ ನಡೆದಿದೆ. ಕಾಲೇಜಿನ ಕ್ಲಾಸ್ ರೂಂ, ಪ್ರಿನ್ಸಿಪಾಲ್ ಛೇಂಬರು, ಜೀಕೆ ಮಾಸ್ತರರ ಮನೆ, ಪಿಕ್ನಿಕ್ಗೆ ಹೋದ ತಾಣ, ಹುಬ್ಬಳ್ಳಿಯ ಲಾಡ್ಜು ಹೀಗೆ ಹತ್ತಾರು ತಾಣಗಳ ಪ್ರಸ್ತಾಪವಿದ್ದರೂ ಅವು ಯಾವುದೇ ರಂಗಸಜ್ಜಿಕೆಯಿಲ್ಲದೆ ತುಂಬಿಕೊಂಡು ಬಂದಿವೆ. ಒಳ್ಳೆಯ ಕತೆ ಮತ್ತು ಅಭಿನಯ ಇದ್ದಾಗ, ಬೇರೇನೂ ಇಲ್ಲದೆಯೂ ನಾಟಕವೊಂದು ಹೇಗೆ ಸಫಲವಾಗುತ್ತದೆ ಎನ್ನುವುದರ ಪ್ರತೀಕ ಇದು.

ಹುಡುಗರ ವಿಭಾಗದಲ್ಲಿ ನೀನಾಸಂ ತಂಡ ಕಳೆದ ಬಾರಿಗಿಂತಲೂ ಹೆಚ್ಚು ಶಕ್ತಿಯುತ ಅನ್ನಿಸುತ್ತದೆ. ಜೀಕೆ ಮಾಸ್ತರರ ಪಾತ್ರ ನಿರ್ವಹಿಸುವ ನಾಲ್ವರೂ (ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕುಮಾರ್ ಸುಳ್ಯ,----,----) ಮತ್ತು ಗಿರಪ್ಪ ಹಾಗೂ ಎಮ್ಟಿ ಪಾತ್ರಧಾರಿಗಳು ಅಭಿನಯದಲ್ಲಿ ಹಬ್ಬಿಕೊಂಡಿದ್ದಾರೆ. ಹಳೆಯ ಕೃತಿಯೊಂದನ್ನು ನಾಟಕ ಮಾಡಿದಾಗ ಅದು ನಾನಾ ಥರದ ಕೊಸರುಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಆದರೆ ನಾಟಕ ಮುಗಿದಾಗಲೂ ಕಾದಂಬರಿಯ ಕರ್ತೃ ಕಂಬಾರರು ಉಲ್ಲಸಿತರಾಗಿದ್ದದ್ದು ನೋಡಿದರೆ ನಾಟಕ ಎಲ್ಲ ಥರದಲ್ಲೂ ಯಶಸ್ವಿ ಅನಿಸುತ್ತದೆ .
ಅಮರಾ ಮಧುರಾ ಪ್ರೇಮ...ಬಾ ಬೇಗ ಚಂದಮಾಮಾ...

(ಫೋಟೊ ಕೃಪೆ :ಕೆ.ಎಸ್.ರಾಜಾರಾಂ)
(ಕಳೆದ ವರ್ಷದ ನಾಟಕದ ಚರ್ಚೆಗೆ ಇಲ್ಲಿ ಹೋಗಬಹುದು)

Read more...

March 01, 2008

ಪೇಟೆಯ ಪಾಡ್ದನ

೧೧
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಈ ಅಕ್ಷರಗಳಲಿ ದುಃಖ ತುಂಬಿದ್ದೇವೆ
ತುಳುಕದಂತೆ ನೋಡಿಕೊಳ್ಳಿ
ಕಣ್ಣೀರು.
***
ದಿನ ರಾತ್ರಿ ನಾಜೂಕು ನೇವರಿಸಿ
ತೆವಳುತ್ತಿದೆ ಈ ಪೇಟೆ ಹುಳ
ಕಾಲ್ಬೆರಳ ಹಿಡಿದು ನಿತಂಬ ಹೊಟ್ಟೆ ದಾಟಿ
ನಿನ್ನ ಹೊಕ್ಕಳು ಕಂಕಳೂ ಚೆಂದ ಅನ್ನುತ್ತಿದೆ
ಉದುರಿಸಿದ ರೆಕ್ಕೆಗಳ ನಮಗೆ ಅಂಟಿಸುತ್ತಿದೆ
ಅಂಗುಲ ಅಂಗುಲ ಮುಕ್ಕುತ್ತಿದೆ.
***
ತೆಂಕ ಕೋಣೆ, ಗೀಟು ಕೋಣೆ
ಮೂಡು ಜಗಲಿ, ತುಂಡು ಜಗಲಿ
ಗುಂಡಿ ಕೋಣೆ, ದೇವರ ಕೋಣೆ
ಈಗಷ್ಟೆ ಯಾರನ್ನೋ ಕಳುಹಿಸಿ ಅರೆ ತೆರೆದುಕೊಂಡಿವೆ.
***
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಇದೋ ಸುರಿದ್ದಿದ್ದೇವೆ ತುಪ್ಪ
ನಿಮ್ಮ ಬೆಂಕಿಗೆ, ತೃಪ್ತರಾಗಿ.
ಇದು ಇನ್ನೊಂದು ಪುತ್ರಕಾಮೇಷ್ಠಿ
ನಮ್ಮ ಮಕ್ಕಳ ನಮಗೆ ದಯಪಾಲಿಸಿ.

Read more...

February 26, 2008

ಪವಿತ್ರ ಬೆರಳಲ್ಲೆತ್ತಿ ನೋಡಿದೆವು ಆ ಅಗ್ರಹಾರವ !

ಯಾವ ಮನೆಯವರು ಸ್ವಾಗತಿಸಿದರೋ ತಿಳಿಯದು !
ಎರಡೆರಡು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತಿ, ಮುಖ್ಯ ಬಾಗಿಲಲ್ಲೇ ತಲೆ ಬಗ್ಗಿಸಿ, ಮುಂದಿನ ಬಾಗಿಲಿಗೆ ಕಾಲು ಕುಂಟಾಗಿಸಿ, ಸೊಂಟ, ಬೆನ್ನನ್ನೂ ಬಾಗಿಸಿ, ಕಾಲು ಎತ್ತಿಟ್ಟು ಒಂದೊಂದೇ ಹೊಸ್ತಿಲು ದಾಟುತ್ತಾ, ಹಿತ್ತಲಲ್ಲಿ ಹೊರಬಂದು, ಎರಡನೇ ಮನೆಯ ಬಚ್ಚಲು ಹೊಕ್ಕು ಕೈಕಾಲು ತೊಳೆದು, ಎದುರಿನ ಹಟ್ಟಿಯಲ್ಲಿ ಹೊರಬಂದು, ಮೂರನೇ ಮನೆಯ ಪಾಯಿಖಾನೆಯಲ್ಲಿ ಅವಸರದಲ್ಲೇ ಒಂಚೂರು ಕಾಲ ಕಳೆದು, ನಾಲ್ಕನೇ ಮನೆಯಲ್ಲಿರುವ ಮೂಲ ದೇವರಿಗೆ ಕೈಮುಗಿದು, ಐದನೇ ಮನೆಯಲ್ಲಿ ಕೆಲ ದಿನಗಳ ಹಿಂದೆ ಉಪನಯನಕ್ಕೆ ಮಾಡಿದ್ದ ಸ್ವೀಟು ತಿಂದು, ಆರನೇ ಮನೆಯ ಪಡಸಾಲೆಗೆ ಬಂದು, ಅಲ್ಲಿ ಶಿವರಾಮ ಕಾರಂತ-ಗಂಗೂಬಾಯಿ ಹಾನಗಲ್‌ರಂಥ ಮಹಾರಥರೇ ಉಳಿದುಕೊಂಡಿದ್ದರು ಎಂಬುದು ತಿಳಿದು, ಸುಸ್ತಾಗಿ, ಇನ್ನುಳಿದ ಆರು ಮನೆಗಳಿಗೆ ಸಾಯಂಕಾಲ ಬರುವುದಾಗಿ ಹೇಳಿದೆವು !

ಒಂದು ಮನೆಯ ಮಾಡು ಇನ್ನೊಂದಕ್ಕೆ ತಾಗಿಕೊಂಡು ಉದ್ದಕ್ಕೂ ಹನ್ನೆರಡು ಮನೆಗಳು. ಐದಡಿ ಅಗಲದ ಮಣ್ಣಿನ ಗೋಡೆಗಳು, ಒಂದಡಿ ದಪ್ಪದ ಮರದ ಬಾಗಿಲುಗಳು, ಗೋಡೆಗಳಲ್ಲಿ ತೂಗುತ್ತಿರುವ ಶಂಕರಾಚಾರ್ಯ, ಶ್ರೀಧರಸ್ವಾಮಿ, ರಾಮಕೃಷ್ಣ ಪರಮಹಂಸ ಮತ್ತು ದೇವಾನುದೇವತೆಗಳು. ಮಧ್ಯೆ ಅಚ್ಚರಿ ಹುಟ್ಟಿಸುವ ಕುವೆಂಪು, ಶಿವರಾಮ ಕಾರಂತರ ಫೋಟೊಗಳು. ಮನೆಯೆದುರಿನ ಚಿಟ್ಟೆಗಳಲ್ಲಿ ಕಾಟನ್ ಸೀರೆಯುಟ್ಟು ಕುಳಿತಿರುವ ಮುದುಕಿಯರು, ಗಡಿಬಿಡಿಯಲ್ಲಿ ಓಡಾಡುತ್ತಿರುವ ತಲೆಯಂಚು ಬಿಳಿಯಾದ ಗಂಡಸರು. ಆದರೆ ಬಿಳಿ ಪಂಚೆಯಿಟ್ಟುಕೊಂಡು, ಕೂದಲು ಸರಿಮಾಡಿಕೊಳ್ಳುತ್ತಾ ಎಲ್ಲ ಮನೆಗಳಿಂದ ಹೊರಬರುತ್ತಿರುವವರನ್ನು ಆಚೀಚೆಯ ಮನೆಯವರು, ‘ಎಂಥ ಡಾಕ್ಟ್ರೆ, ನೋಡದ್ದೆ ಸುಮಾರು ಸಮಯ ಆತು’, ‘ಹೋ ಎಂಜಿನಿಯರು ಬೆಂಗ್ಳೂರಿಲಿ ಚಳಿ ಹೇಂಗಿದ್ದು?’, ‘ಎಂತ ಕೂಸೆ, ಟಿವಿ ಕೆಲ್ಸ ಹೇಂಗಿದ್ದು?’ ಅನ್ನತೊಡಗಿದಾಗ ನಮಗೂ ಒಂಚೂರು ಗಲಿಬಿಲಿಯಾದದ್ದು ಹೌದು ! ಅಲ್ಲಿ ಉಳಿದುಕೊಂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ, ನಾಲ್ಕೈದು ಮನೆಯ ಬಚ್ಚಲುಗಳಲ್ಲಿ ಕೀಜಿ, ಹಿತ್ತಾಳೆ, ಪ್ಲಾಸ್ಟಿಕ್, ಸ್ಟೀಲು ತಂಬಿಗೆಗಳಿಂದ ತೆಳ್ಳಗಿನ ತಣ್ಣನೆಯ ನೀರು ಎತ್ತೆತ್ತಿ ಸುರಿದುಕೊಂಡು ಮನಸೋಇಚ್ಚೆ ಮಿಂದೆವು.


ಇಂತಹುದೊಂದು ಮಾಯಕದಂಥ ಘಟನಾವಳಿ ಜರಗಿದ್ದ್ದು , ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಸೊರಬ ತಾಲೂಕಿಗೆ ಸೇರಿದ ಊರೊಂದರ ಬ್ರಾಹ್ಮಣರ ಅಗ್ರಹಾರದಲ್ಲ. ಜಗಳವಿಲ್ಲದೆಯೂ ಜೀವಂತವಾಗಿರುವ, ಪೇಟೆಯ ಸೋಂಕಿಗೆ ತುತ್ತಾಗದೆ-ಹಳ್ಳಿಯ ಜಾಡ್ಯಕ್ಕೂ ಸಿಲುಕದೆ ಕಂಗೊಳಿಸುತ್ತಿರುವ ಆ ಲೋಕ, ಹಳ್ಳಿ ಭಾರತದ ಒಂದು ರಸಘಟ್ಟಿ. ಮನೆಯ ಒಬ್ಬರನ್ನೋ ಇಬ್ಬರನ್ನೋ ನಗರಕ್ಕೆ ಕಳುಹಿಸಿ, ಹಳ್ಳಿ ಕಲುಷಿತವಾಗದಂತೆ ನೋಡಿಕೊಳ್ಳುತ್ತ, ಊರಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಹೆಮ್ಮೆಯಿಂದ ಸುಖವಾಗಿ ಬದುಕುವುದನ್ನು ರೂಢಿಸಿಕೊಂಡಿರುವ ಈ ಜನ ಹಳ್ಳಿಯ ಮಿಕಗಳಾಗಿಲ್ಲ ,ಪೇಟೆಯ ಬಕಾಸುರರೂ ಅಲ್ಲ.


ಕಪ್ಪಗಿನ ಮರದ ಮಂಟಪದ ಮೇಲೆ ಕೆಂಪು ದಾಸವಾಳ ಹೂವುಗಳು. ಎದುರು ಕುಳಿತುಕೊಳ್ಳಲು ಕೂರ್ಮಾಕೃತಿಯ ಮರದ ಮಣೆ. ಉರಿಯುತ್ತಿರುವ ದೀಪ, ತೂಗುತ್ತಿರುವ ಕೆಂಪು ಮಡಿ ಬಟ್ಟೆ -ಇವೆಲ್ಲ ಆ ದೇವರ ಕೋಣೆಗಳ ಪಾವಿತ್ರ್ಯವನ್ನು ಸಾರಿ ಹೇಳುತ್ತಿದ್ದವು. ಬಹಳ ದಿನಗಳಿಂದ ಮೂಲೆ ಪಾಲಾದಂತೆ ಬಟ್ಟೆ ಮುಚ್ಚಿಕೊಂಡಿದ್ದ ಟಿವಿ, ನಮ್ಮಲ್ಲಿ ಹೆಚ್ಚಿನವರ ಕಣ್ಣಿಗೂ ಬೀಳಲಿಲ್ಲ. ಪ್ರತಿ ಮನೆಯಲ್ಲೂ ಮರದ ಪತ್ತಾಯಗಳು, ಒತ್ತು ಸೇಮಿಗೆ ಮಣೆಗಳು, ದಪ್ಪದ ಬಾಜಾರ ಕಂಬಗಳು, ಮರದ ಪೆಟ್ಟಿಗೆಗಳು, ಕಿರಿದಾದ ಬಾಯಿಯ ತಳ ಕಾಣದ ಆಳ ಬಾವಿಗಳು, ಹೊರಗೆ ಬಗೆಬಗೆಯ ಬಣ್ಣಗಳ ದಾಸವಾಳ ಹೂವಿನ ಗಿಡಗಳು...


ಜೋಲು ಮಂಚದ ಮೇಲೆ ಕುಳಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ರಾಯರು, ರ್‍ಯಾಡಲ್ ಶ್ರುತಿಪೆಟ್ಟಿಗೆ ಆನ್ ಮಾಡಿ, ಕಣ್ಣುಮುಚ್ಚಿ ಶ್ರುತಿ ಪರೀಕ್ಷಿಸಿಕೊಳ್ಳತೊಡಗಿದರು. ಆಗ ಕೆಲವರಿಗೆ ನಗು ತಡೆಯಲಿಕ್ಕಾಗದಿದ್ದರೂ ‘ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ....’ ಎಂದು ಆರಂಭಿಸಿದಾಗ ನೆಲದಲ್ಲಿ ಚಕ್ರಮುಟ್ಟ ಹಾಕಿ ಕುಳಿತಿದ್ದ ಮೂವತ್ತು ಜನರೂ ರೋಮಾಂಚನಗೊಂಡರು . ರಾಯರೂ ಉತ್ಸಾಹಭರಿತರಾಗಿ ‘ಅಕ್ಕಿಯೊಳಗನ್ನವ ಮೊದಲಾರು ಕಂಡವನು...’ಅಂತ ನಾಲ್ಕು ಮಂಕುತಿಮ್ಮನ ಕಗ್ಗವನ್ನೂ ಹಾಡದೇ ನಿಲ್ಲಿಸಲಿಲ್ಲ. ಹಾಸಿಗೆಯಿಂದ ಏಳಲಿಕ್ಕಾಗದ ಅವರ ಹೆಂಡತಿ, ಒಳಕೋಣೆಯ ಮಂಚದಲ್ಲಿ ಒಂಚೂರೂ ಬೆನ್ನು ಬಗ್ಗಿಸದೆ ತದೇಕಚಿತ್ತೆಯಾಗಿ ಬಟ್ಟೆ ಹೊದ್ದು ಕುಳಿತಿರುವುದನ್ನು ಕಂಡ ನಮ್ಮ ಹೆಂಗಸರು ಪಾದಕ್ಕೆರಗಿ ಆಶೀರ್ವಾದ ಬೇಡಿದರು. ಅಜ್ಜಿಯ ಕೆನ್ನೆಯ ಒಂದು ಮಡಿಕೆಯೂ ಮಿಸುಕಲಿಲ್ಲ.


ಅಡಿಕೆ ಚಪ್ಪರದ ಕೆಳಗೆ ಕುಳಿತಿದ್ದ ನಮ್ಮ ಬಾವನೂ ಭಾವೀ ಅಕ್ಕನೂ ಉಂಗುರ ಬದಲಾಯಿಸಿಕೊಂಡರು. ಉಳಿದ ಹುಡುಗರು ನಾವೆಲ್ಲ ಒಬ್ಬೊಬ್ಬಳ ಬಲಗೈಯನ್ನು ಎಡಗೈಯಲ್ಲಿ ಹಗುರವಾಗಿ ಹಿಡಿದು ಮೈಮರೆತು, ಉಂಗುರವನ್ನು ಬೆರಳುಗಳಿಗೆ ತೊಡಿಸುತ್ತಿದ್ದಾಗ ...
ಆಗುಂಬೆಯ ಘಾಟಿಯಲ್ಲಿ ಇಳಿಯುತ್ತಿದ್ದ ನಮ್ಮ ಬಸ್ಸು ಒಮ್ಮೆಲೆ ಬ್ರೇಕ್ ಹಾಕಿತು !

Read more...

ನಗರ ಸ್ವರ


10

ಇದು ದ್ವಿಚಕ್ರ ನಗರ
ವೇಷ ಮರೆಸಿದವರಿಗೆ ಬಂಡಿ ಅನ್ನ

ಬಕಾಸುರರ ಸಾಕಿದವರಿಗಷ್ಟೇ ಅಭಯ.

ಕುಂಬಾರನ ಮನೆಯಲ್ಲಿ

ದೊಣ್ಣೆ ನಾಯಕರಿಗೇನು ಕೆಲಸ? ಗೊತ್ತಿಲ್ಲ

ಸದಾ ಹೊರಟು-ನಿಂತವರೇ ಎಲ್ಲ .

ಎಣ್ಣೆ ನೋಡುತ್ತ ಮೀನು ಕಚ್ಚಿ ಎಳೆವವರು

ಗುರುವಿಗಿದಿರು ಶಿಷ್ಯನನ್ನೇ ಹೆದೆಯೇರಿಸುವರು;

ಒಬ್ಬಳಿಗೆ ಐವರು ಹೆಚ್ಚಾಯಿತೆ ? ಇಲ್ಲ

ನೂರ ಐದಾದರೂ ಅಡ್ಡಿಯಿಲ್ಲ
ಕೃಷ್ಣನಂತೂ ಇತ್ತ ಬರುವುದಿಲ್ಲ .

Read more...

February 21, 2008

ಪೇಟೆ ಪದ್ಯ

8
ಬೆಳಗ್ಗೆ ಪೇಟೆಗೆ ಬಂದ,
ಸಿಗಲಿಲ್ಲ ಅಂತ ಪಟ್ಟಣ ಸೇರಿದ.
ಬೇಜಾರಾಗಿ ಮಧ್ಯಾಹ್ನದೂಟಕ್ಕೆ
ನಗರ ಪ್ರವೇಶಿಸಿ,
ಸಂಜೆ ಸುತ್ತಾಟದಲಿ ಸಿಗುವುದೆಂದು
ಮಹಾ ನಗರಿಗೆ ಬಂದ.
ರಾತ್ರಿ ದಿಕ್ಕು ತಪ್ಪಿ ಅಲೆಯುತ್ತಿದ್ದಾಗ
ಹಾ ಸಿಕ್ಕಿತು...ಬೇಕಾದ್ದೆಲ್ಲ ಸಿಕ್ಕಿತು...
ಊರ ಹಾದಿ ಮರೆತ.

ಅವನ ಮುದಿ ಅಮ್ಮ
ಪ್ಯಾಂಟು ತೊಳೆದಾಗ ಸಿಕ್ಕ ಎರಡು ರೂಪಾಯಿ ನೋಟನ್ನು
ಬೆಳಗಿನ ಬಿಸಿಲಲಿ ಜೋಪಾನ ಒಣಗಿಸುತ್ತಿದ್ದಳು.
ಎದ್ದು ಬಂದ, ನೋಡಿ ನಕ್ಕ !
9
ಇಲ್ಲಿ ಆಕಾಶ ಕಾಣಲ್ಲ ಗೊತ್ತು
ಅವಕಾಶಕ್ಕೆ ಕೊರತೆಯಿಲ್ಲ
ಇದ್ದರೆ ರಿಬೋಕ್, ಇಲ್ಲದಿದ್ದರೆ ಹವಾಯಿ
ತಲೆಯೆತ್ತಿ ನಡೆಯಬಹುದು ತಲೆ ಮರೆಸಿಕೊಳ್ಳಲೂಬಹುದು !
ಹಾದರಕ್ಕೆ ಆದರಕ್ಕೆ
ಕೃತಜ್ಞತೆಗೆ ಕೃತಘ್ನತೆಗೆ
ಇಲ್ಲಿ ಅಂಥ ವ್ಯತ್ಯಾಸವಿಲ್ಲ
ನುಡಿದಂತೆ ನಡೆವ, ಹುಸಿ ಗೌರವದ ಭಾರವಿಲ್ಲ !

ಬಡವರು ಬೆಳೆದು ದೊಡ್ಡವರಾಗಬಹುದು
ಪ್ರೀತಿಸಿದವರು ದ್ವೇಷವಿಲ್ಲದೆ ಬದುಕಬಹುದು
ಇಲ್ಲಿ ಎಲ್ಲವೂ ವಾಚ್ಯ , ಪರವಾಗಿಲ್ಲ ,
ಊರಲ್ಲಿ ಅವಾಚ್ಯ.

Read more...

ದಿವಾಕರರ ಕೆನ್ನೆಯೂ ಕೆಂಪಾಗಲಿ !

ವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಸಂಪಾದಕತ್ವದಲ್ಲಿ 'ಸಾಹಿತ್ಯ ಸಂಸ್ಕೃತಿಗೆ ಮೀಸಲಾದ ವಿಚಾರವೇದಿಕೆ’ ಎಂಬ ಅಡಿಶೀರ್ಷಿಕೆಯೊಂದಿಗೆ ಪ್ರಕಟವಾಗುತ್ತಿದ್ದ ಸಾಹಿತ್ಯ ಪತ್ರಿಕೆ 'ಸಮೀಕ್ಷಕ. ೧೯೬೬ರ ಫೆಬ್ರವರಿ ಸಂಚಿಕೆಯ ಮುಖಪುಟ ಮೊದಲನೆಯದು, ಹಿಂಬದಿಯ ಪುಟ ಎರಡನೆಯ ಚಿತ್ರ. ಅದರಲ್ಲಿ ಈ ಸಂಚಿಕೆಗೆ ಬರೆದಿರುವ ಲೇಖಕರ ಹೆಸರುಗಳಿವೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಇದರ ಮುಖ್ಯೋದ್ದೇಶ ಸಂಪಾದಕರು ಹೇಳಿಕೊಂಡಂತೆ ಹೀಗಿದೆ- 'ವಿಚಾರವಂತ ಲೇಖಕರಿಂದ ಉತ್ತಮ ಲೇಖನಗಳನ್ನು ಬರೆಸಿ ಪ್ರಕಟಿಸುವುದು; ಆ ಮೂಲಕ ಕನ್ನಡದಲ್ಲಿ ವಿಮರ್ಶಾ ಪ್ರಜ್ಞೆ ಬೆಳೆಯಲು ಕೈಲಾದ ಪ್ರಯತ್ನ ಮಾಡುವುದು. ಪತ್ರಿಕೆಯ ಸಲಹಾಗಾರರಾಗಿ -ಜಿ.ಎಚ್. ನಾಯಕ್ ಮತ್ತು ಎಚ್.ಎಂ.ಚನ್ನಯ್ಯರ ಹೆಸರಿವೆ. ಆದರೆ ಈ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.


ಮದರಾಸಿನ ವಿಜಯ ರಾಘವಾಚಾರಿ ರಸ್ತೆಯಿಂದ ಈಗಷ್ಟೆ ಎದ್ದು ಬಂದಂತಿರುವ ಎಸ್.ದಿವಾಕರ್ ಛೋಟಾ ಕತೆಗಳ ಉದ್ದನೆ ಮನುಷ್ಯ. ತುಟಿಗಳೆಡೆ ಸಿಗರೇಟು ಸಿಕ್ಕಿಸಿಕೊಂಡು 'ಏನು ಮತ್ತೆ ಸಮಾಚಾರ?’ ಅನ್ನುತ್ತಲೇ ಫಕ್ಕನೆ ಅಡಿಗರದೋ ಬೇಂದ್ರೆಯದೋ ನಾಲ್ಕು ಸಾಲು ಹೇಳಿ ನಮ್ಮನ್ನು ಗಲಿಬಿಲಿ ಮಾಡುವ, ನೂರೆಂಟು ಪದ್ಯಗಳನ್ನು ಹೃದಯ ಪಾಠ ಮಾಡಿಕೊಂಡಿರುವ ಈ ತೆಳ್ಳಗಿನ ದೇಹಿ, ಏನೆಲ್ಲ ಬಲ್ಲರು ಎಂಬುದನ್ನು ಎಲ್ಲ ಬಲ್ಲವರಿಲ್ಲ ! ಈ ಅಪ್ಪಟ ಕರಿಯ ಹೇಳುವುದನ್ನು ಕೇಳಿದಾಗೆಲ್ಲ ನಾವು ಹೇಳುತ್ತೇವೆ ಯೆಸ್ ದಿವಾಕರ್ ಸಾರ್. ಈಗ ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನಲ್ಲಿ ಉದ್ಯೋಗಿಯಾಗಿರುವ ಈ ಅಕ್ಷರ ಜೀವಿ, ೬೦ರ ದಶಕದ 'ಸಮೀಕ್ಷಕ’ದಲ್ಲಿ ಪ್ರಕಟಿಸಿರುವ 'ಪ್ರಾಯ’ ಎಂಬ ಅಮೋಘ ಪದ್ಯವನ್ನು ಅವರ ಕ್ಷಮೆ ಕೋರಿ ಇಲ್ಲಿ ಕೊಡಲಾಗಿದೆ !
ಪ್ರಾಯ
ಬುಳಬುಳನೆ ಸುಳಿವಂಥ ಸವಿನೋವಿನವತಾರ
ನರಗಳಲಿ ಜುಮ್ಮೆನುವ ನೀರವ ರವ ;
ಅಡಿಯಿಂದ ಮುಡಿವರೆಗೆ ಯಾರೊ ಕಾಣದೆ ಬಂದು
ಕಚಕುಳಿಯನಿಟ್ಟಂಥ ಹೊಸ ಅನುಭವ !

ಕಣ್ಣೆದುರು ಯಾವುದೋ ಹೊಸ ಲೋಕ. ಕೆನ್ನೆಯಲಿ
ಕೆಂಪು ತೆರೆ ಮೇಲೆದ್ದು ಇಳಿಯುತಿರಲು;
ಸೆರಗ ಸುತ್ತಿತ್ತು ಬೆರಳು, ವೀಣೆಯಾಯಿತು ಕೊರಳು
ಅರಿವಿಲ್ಲದೆಯೆ ಬೆಳೆದು ಬಂತು ನೆರಳು-
ಚಿಟ್ಟೆಯಾಯಿತು ಹಾರಿ ಕಂಬಳಿಹುಳು!

ಬೆಳೆಸಿದೊಲುಮೆಯ ಫಲಕೆ ಚಿಕ್ಕದಾಯಿತು ರವಿಕೆ
ಅಣೆಕಟ್ಟಿನೊಳನೀರ ನುಗ್ಗು ನೂಕು
ಇರುವೆ ಕಚ್ಚಿದ ತೊಡೆಯ ತುರಿಸಿಕೊಳ್ಳುವ ಬಯಕೆ
ರಾತ್ರಿಯಾಗುವವರೆಗೆ ಕಾಯಬೇಕು !

ಗಾಳಿ ಮೈದಡವಿದರೆ, ಬೆವೆತ ಮೈ ಬೆದರಿದರೆ
ಬಂಡೆ ಬಿರುಕಿನ ಕಪ್ಪೆ ನೆಗೆದ ಸದ್ದು-
ಬರುವ ಚಳಿಗಾಲದಲಿ ಬೆಚ್ಚಗಿರುವುದು ಹೇಗೆ?
ಕಿಟಕಿಯಾಚೆಗೆ ನೋಟ ಕದ್ದು ಕದ್ದು;
ಹೊರಳಾಟ ಹಾಸಿಗೆಯ ಮೇಲೆ ಬಿದ್ದು !
-ಎಸ್.ದಿವಾಕರ್

Read more...

February 18, 2008

ಸಿಟಿ ಗೀತ

6
ಈಗ ಜನಿವಾರ ಧಾರಣೆ
ಈಗ ಕಿರೀಟ ಧಾರಣೆ
ಈಗ ಲಿಂಗ ಧಾರಣೆ
ಈಗ ಮುದ್ರೆ ಧಾರಣೆ
ಶ್...ಮಾತಾಡಬೇಡಿ. ಅವೆಲ್ಲ ಯಾರಿಗೆ ಬೇಕು?
ಈಗ ಪೇಟೆ ಧಾರಣೆ.

7

ಗಣಪ ಗಣಪ ಏಕದಂತ

ಪಚ್ಚೆಕಲ್ಲು ಪಾಣಿಪೀಠ

ಮುತ್ತಿನುಂಡೆ ಹೊನ್ನಗಂಟೆ

ಗಂಟಲು ಕಟ್ಟಿತು.

'ಅಮ್ಮಾ ಪ್ಲೀ...ಸ್ ಎಎಕ್ಸೆನ್ ಚಾನೆಲ್ ನೋಡ್ಲಾ?’
ದೇವರಿಗೆ ಉದಾಸೀನವಾಯಿತು !

Read more...

February 13, 2008

ಅಂತಃ'ಪುರ’ ಗೀತೆ

5
ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೋಡಯ್ಯನಿನ್ ಮಗಳ ಮುಖದಂದ.
ಅಲ್ಲಿ ದುಡಿದದ್ದೆಲ್ಲ ಬಾಡಿಗೆ ಬದುಕಿಗೆ ದಂಡ
ಈ ತೋಟ, ತಿಥಿ ಊಟ, ಬಿಡೋದೇನೋ ಭಂಡ?
ಇಲ್ಲಿದ್ರೂ ಕುಡೀತೀಯ ಶನಿವಾರ ಹೆಂಡ !

ಗಂಗೆಯಾ ನೊರೆ ಹಾಲು, ಒಂದೆಲಗ ಸಿಹಿ ತಂಬ್ಳಿ
ಮೂಲೆ ತೋಟದ ಮಾವಿನ ಮಿಡಿ
ನೀ ನೆಟ್ಟಿರೋ ಇನ್ನೊಂದು ಕುಡಿ?!
ಮರೆವೆಯಾ ಹೃದಯದ ದೇವಾನಂದ.

ಈ ಸಾಲ ಸಾಲದೂಂತ
ಆ ನಕ್ಷತ್ರಿಕನಲ್ಲಿ ಕೇಳಬೇಡ,
ದುಡಿದರೆ ಅಲ್ಲಿ ಊಟ ಸಿಗತ್ತೆ ಹಸಿವಿರಲ್ಲ,
ಬಸ್ಸು ನೂರಿದ್ದರೂ ಸೀಟು ಸಿಗಲ್ಲ,
ಏದುಸಿರು ನಿಟ್ಟುಸಿರೂ ಸಹಜವಲ್ಲ
ಗುರುತು ನೆನಪು ಉಳಿಯದಲ್ಲಿ ಬದುಕಬೇಡ.
***
ಹೋಗೋದಿದ್ರೆ ಹೋಗು
ಹಚ್ಕೊಂಡು ಸಿಗರೇಟು
ಕೊಟ್ಟೋಗು ಪಾಪುಗೂ ಒಂದೇಟು
ಅದಾದ್ರೂ ಕೈಗೂಸು ಅಳತಿರ್ಲಿ ಅಳುವಷ್ಟು
ಕರು ಬಿಟ್ಕೊಂಡು ಬರ್‍ತೀನಿ ನಿಲ್ಲೊಂದು ತಾಸು.

ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೀ ಹೋಗ್ತೀನಿ ಅಂದ್ರ...
ನನ್ ಎದೆ ಕೆಂಡ.
--------------------------
(ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕಾಡೊಳಗಿನ ಊರೊಂದರಲ್ಲಿ ಅಡಿಕೆ ಕೃಷಿಯಲ್ಲಿ ಬದುಕುತ್ತಿದ್ದ ನಾಲ್ವರ ಮಧ್ಯಮ ವರ್ಗದ ಕುಟುಂಬ. ಮಗಳು ದೂರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹೈಸ್ಕೂಲು ಓದುತ್ತಿದ್ದಳು. ಮಗನಿಗೆ ಐದಾರು ವರ್ಷ. ನಲವತ್ತರ ವಯಸ್ಸಿನ ಆ ಮನೆಯ ಯಜಮಾನ ಆರೇಳು ಕೋಣೆಗಳ ಹೊಸ ತಾರಸಿ ಮನೆ ಕಟ್ಟಿಸಿದರು. ಗೃಹಪ್ರವೇಶವಾದ ತಿಂಗಳಲ್ಲೇ ಬೆಂಗಳೂರಿಗೆ ಬಂದು ಸಣ್ಣ ಕೋಣೆ ಹಿಡಿದರು. ಯಾಕೆ ಅಂತೀರಾ? ಬೆಂಗಳೂರಲ್ಲಿ ದುಡಿದು ಸಂಪಾದಿಸಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲು !
ಹಳ್ಳಿಗಳಲ್ಲಿರುವ 'ಸ್ಥಿತಿವಂತ-ಗುಣವಂತ’ ಹುಡುಗರನ್ನೂ ಧಿಕ್ಕರಿಸಿ ನಗರದಲ್ಲಿರುವ ಹುಡುಗನೇ ಆಗಬೇಕೆಂದು ಬಹುತೇಕ ಯುವತಿಯರು ಪಟ್ಟು ಹಿಡಿಯುತ್ತಿರುವ ಕಾಲದಲ್ಲಿ, ಈ ಮನೆಯ ಸ್ಥಿತಿ ಕೊಂಚ ವ್ಯತ್ಯಸ್ಥವಾಗಿದೆ ಅವರ ಪತ್ನಿ ಏನಂದರೋ ಗೊತ್ತಿಲ್ಲ. ಅಂತೂ ಈ ಪದ್ಯ ಅರ್ಧ ಹೊಸೆದಿರುವಾಗ, ಆ ಘಟನೆ ನೆನಪಾಗಿ ಬರೆದುಕೊಂಡಿದ್ದೇನೆ.)

Read more...

February 09, 2008

ಸಿಟಿ ಗೀತ

3

ಗಲಗಲ ಅಲುಗುತ್ತಿದೆ ಈ ನಗರ
ಬೆಳೆದು ಅಗಲಗಲ ಜಗದಗಲ.
ಇವತ್ತು ಬರ್ಲಾ, ನಾಳೆ ಆಗಲ್ಲ
ಪೈನ್‌ಕಿಲ್ಲರ್ ಮಾತ್ರೆ ತರ್ಲಾ, ಸಂಬಳ ಸಾಕಾಗಲ್ಲ
ಆ ಓನರ್ ಸರಿಯಿಲ್ಲ, ನೆಟ್ ಕನೆಕ್ಟ್ ಆ..ಗ್ತಿ..ಲ್ಲಾ..

ಅಮ್ಮ ಫೋನ್ ಮಾಡಿ ಅಂದಳು,
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?

4
ಮೊನ್ನೆ ಬಂದವಳು ಅಂದಳು-
ಹೌದು, ಗದಗುಡುತ್ತಿದೆ ಶಹರ
ನಗ ತುಂಬಿದ ನಗರ
ತುಯ್ಯುತಿರುವ ಸಾಗರ.

ಈ ನಗರಿಗೆ ಹತ್ತಾರು ಕಂಪನಾಂಕ
ಅಂಕ, ಬಿಂಕ, ಎಲ್ಲದಕ್ಕೂ ಸುಂಕ
ಇಲ್ಯಾಕೆ ಊದ್ತೀಯೋ ಶಂಖ?

ನಾನಂದೆ-
ಇದೋ ಮೂಗು ಹಿಡಿದೆ ಅಮ್ಮಾ, ಕಣ್ಮುಚ್ಚು
ಈ ನಗರವ ಕೊಂಚ ಕಲಕಿಸಿದೆ
ಕುಡಿದುಬಿಡು.
----------------------
('ಪೇಟೆಯ ಪಾಡ್ದನ’ವನ್ನು ಪ್ರಕಟಿಸಿದ ಅವಧಿ ಮತ್ತು ದಟ್ಸ್‌ಕನ್ನಡ ಜಾಲತಾಣಗಳಿಗೆ ಕೃತಜ್ಞತೆಗಳು. ಲೋಗೊ ಕೃಪೆ-ಅಪಾರ)

Read more...

February 06, 2008

ಪೇಟೆಯ ಪಾಡ್ದನ

1
ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು .

ಕಣ್ಣುಜ್ಜಿ ನೋಡಿಕೊಳ್ಳಿ ,ಅಗೋ ...
ಆ ಗೊಂಬೆಯೂ ಮಾರಾಟವಾಯಿತು !

2
ಇದು ಉದ್ಯೋಗ ಪರ್ವದ ಭಾಗ .
ದ್ಯೂತ ಪ್ರಸಂಗ .
ತನ್ನನ್ನೇ ಒತ್ತೆಯಿಟ್ಟು ಸೋತ ರಾಯನಿಗೆ
ಇನ್ನೊಬ್ಬಳ ಒತ್ತೆಯಿಡಲು ಅಧಿಕಾರವಿದೆಯೆ?
ಓಲೇಲಯ್ಯಾ ಐಸಾ, ಎಳೀರಿ ಸೀರೆ, ಎಸೆಯಿರಿ ಪೈಸಾ
'ಗಿನ್ನಿಸ್ ದಾಖಲೆಗೆ ಇನ್ನೊಂಚೂರು' ಅಂದ
ಕೃಷ್ಣಾ ಮಾಲ್ ಸೀರೆ ಸೆರಗು ಎಷ್ಟು ಚೆಂದ !

ಹೋ ಅದೋ ಮತ್ತೆ ದಾಳ, ಗಾಳ, ಗೆದ್ದೆವು , ಮನೆಹಾಳ.
ಸೋತವರಿಗೆ ಹನ್ನೆರಡು ವರ್ಷ ಹಳ್ಳಿವಾಸ
ಗೆದ್ದವರಿಗೊಂದು ವರ್ಷ ನಗರದಜ್ಞಾತವಾಸ !

Read more...

February 01, 2008

ನಡೆದು ನಡೆದು ಬರ್ರಿ...ಪುರಾಣದ ಕಾಲುಭಾಗ

ತಲೆ ಇದ್ದರೂ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ ?

ಕಲ ಪ್ರಾಣಿಗಳಲ್ಲಿ ಮನುಷ್ಯರ ಹೆಚ್ಚುಗಾರಿಕೆ ಕಂಡುಬಂದದ್ದು ಮಾತಾಡುವುದರಿಂದ ಹಾಗೂ ಎರಡೇ ಕಾಲುಗಳಲ್ಲಿ ನಡೆಯುವುದರಿಂದ. (ಬುದ್ಧಿಶಕ್ತಿಯಿಂದ ಅಂತಲೂ ಹೇಳಿಯಾರು, ನಿಮಗೆಂದಾದರೂ ಹಾಗೆ ಸತ್ಯವಾಗಿ ಅನ್ನಿಸಿದೆಯೆ?!) ಆದರೆ ಇವೆಲ್ಲಕ್ಕಿಂತಲೂ ವಿಶೇಷ ಅನಿಸಿದ್ದು ...ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ತಾಕತ್ತು ಇರುವುದರಿಂದ ! ಯಾವುದಕ್ಕುಂಟು ಈ ಭಾಗ್ಯ? ಈ ಭಂಗಿಗಿರುವ ಘನತೆ-ಗತ್ತು , ಯೋಗಾಸನದವರು ತಲೆ ಮೇಲೆ ಕಾಲು ಹಾಕಿದರೂ ಉಂಟೆ? ಹಾಗಾಗಿ ನಾವೆಲ್ಲ ಹೇಳಬೇಕು 'ಕಾಲಾಯ’ ತಸ್ಮೈ ನಮಃ

ಕಾಲುಭಾಗ, ಕಾಲುದಾರಿ, ಕಾಲುಂಗುರ (ಕಾಲ್ಬೆರಳುಂಗುರ ಅಲ್ಲ !) ಪದಗಳಲ್ಲದೆ ಕಾಲುವೆ, ಕಾಲಂ ಪದಗಳೂ ಕಾಲಿನಿಂದಲೇ ಬಂದದ್ದು ಅಂತ ಸಾಧಿಸಿದರೆ ತೋರಿಸಬಹುದು. ಯಾಕೆಂದರೆ ಹುಡುಕುತ್ತಿದ್ದ ಬಳ್ಳಿಯಾದರೂ ತೊಡರುವುದು ಕಾಲಿಗೆ ತಾನೆ ! ಬಲಗಾಲಿಟ್ಟು ಒಳಗೆ ಬಂದರೆ ಎಲ್ಲವೂ ಶುಭಪ್ರದ. ಕಾಲಿನಲ್ಲೇ ಇರುವ ಪಾದಕ್ಕಿಂತ ಪವಿತ್ರವಾದದ್ದು ನಮ್ಮಲ್ಲಿ ಬೇರ್‍ಯಾವುದೂ ಇಲ್ಲ. ಪಾಂಡವರು ರಾಜಸೂಯ ಯಾಗ ಮಾಡುವಾಗ, ಅತಿಥಿಗಳ ಪಾದ ತೊಳೆಯುವ ಪುಣ್ಯದ ಕೆಲಸ ನನಗಿರಲಿ ಅಂದನಂತೆ ದೇವ ಶ್ರೀಕೃಷ್ಣ . ಯಾರಾದರೂ ಹೊಸ ರಂಗಕ್ಕೆ ಪ್ರವೇಶಿಸಿದಾಗ ಪದಾರ್ಪಣೆ ಅನ್ನದೆ ಶಿರಾರ್ಪಣೆ ಅಂತೆಲ್ಲ ಅನ್ನುವುದುಂಟೆ? ಕಾಲಿಗೆ ಬಿದ್ದರೆ ಆತ ಪೂರ್ತಿ ಶರಣಾಗತ ಎಂಬುದರಲ್ಲೆ ಸುಳ್ಳುಂಟೆ? ಯಾವ ನೃತ್ಯವಾದರೂ ಪ್ರಧಾನವಾದ ಗೆಜ್ಜೆಯನ್ನು ಕಾಲಿಗಲ್ಲದೆ ಕುತ್ತಿಗೆಗೆ ಕಟ್ಟುತ್ತಾರೆಯೆ? ತಲೆ ಇದ್ದರೂ ನಾವು ಕೆಲವು ಸಲ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ? ಹೀಗೆ ಮಹಿಮಾನ್ವಿತವಾದ ಕಾಲುಳ್ಳ ಕಾಲಾಳುಗಳಾದ ನಮಗೆ ಯಾವ ವಿಷಯವೂ ಕಾಲಕಸಕ್ಕೆ ಸಮ ಎನಿಸದಿರಲಿ.

ಈಗ ಕಾಲ್ಬುಡಕ್ಕೆ ಬರೋಣ. ಅಂದರೆ ಕಾಲಿನ ಮುಖ್ಯ ಕಾರ್‍ಯವಾದ ನಡಿಗೆಯ ಬಗ್ಗೆ ಗಮನಿಸೋಣ. ಈ ನಡಿಗೆಗೂ ನಡತೆಗೂ ಹತ್ತಿರದ ಸಂಬಂಧ ಇರುವುದು ತಮಗೆ ಗೊತ್ತಿದೆ. ದೇವರ ಗರ್ಭಗುಡಿಯ ಮುಂದಿನ ದಾರಿಗೆ 'ನಡೆ’ ಅನ್ನುತ್ತಾರೆ. ಸಭೆಯ ನಡಾವಳಿಯಂತೆ ದೈವದ ನಡಾವಳಿ ಅಂತ ದಕ್ಷಿಣಕನ್ನಡದ ಭೂತಕೋಲ ನಡೆಸುವುದಕ್ಕೆ ಹೇಳುತ್ತಾರೆ ! ನಮ್ಮ ಕೆಲವು ರಾಜಕೀಯ ಪುಢಾರಿಗಳು ಹೀಗೆ ಹಾಡುವುದೂ ಉಂಟು-'ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ಮುಂದೆ, ನನ್ನ ಹಿಂದೆಯೆ ನೀನು ನುಗ್ಗಿ ನಡೆ ಮುಂದೆ !’ ಆದರೆ ನಡಿಗೆಯಿಂದಲೇ ಮನುಷ್ಯನೊಬ್ಬನ ಗುಣ ಸ್ವಭಾವವೂ ಕೊಂಚಮಟ್ಟಿಗೆ ಅರಿವಾದೀತು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ನಡೆವವರದ್ದು ನಿಧಾನ ಪ್ರವೃತ್ತಿಯೆಂದೂ, ದಾಪುಗಾಲು ಹಾಕುತ್ತ ಹೋಗುವವರು ಗಡಿಬಿಡಿ ಸುಬ್ರಾಯರೆಂದೂ ಕೆಲವರು ವಿಶ್ಲೇಷಿಸಬಹುದು. ಅಂತೂ ಕಾಲ್ನ-ಡಿಗೆ ಎಲ್ಲರೂ ಬರಲೇಬೇಕು ಬಿಡಿ.

ಕೊಂಚ ಹಿಂದಕ್ಕೆ ಕಾಲಿಟ್ಟರೆ...ನಮ್ಮ ಕವಿಗಳ ಗಮನವೆಲ್ಲ ಹಂಸಗಮನೆ, ಮದಗಜಗಮನೆಯರ ಮೇಲೆಯೇ. ನೀ ನಡೆವ ದಾರಿಯಲಿ ಅದೂ ಇದೂ ಹಾಸಿರಲಿ ಅಂತ ಹಾಡಿದ ಜನರೆಷ್ಟಿಲ್ಲ? ಇತ್ತೀಚೆಗೆ ಕ್ಯಾಟ್‌ವಾಕ್, ಡಾಗ್‌ವಾಕ್‌ಗಳೆಲ್ಲ ಹೆಚ್ಚಾದ ನಂತರವಷ್ಟೇ, ನಡಿಗೆಯಲ್ಲಿ ಮುಖ್ಯವಾದ ಕಾಲುಗಳಿಗೂ ಮುಖಸೌಂದರ್‍ಯದಷ್ಟೇ ಪ್ರಾಮುಖ್ಯ ಸಿಕ್ಕಿದ್ದು. 'ಕಾಲುಗಳ ಕಾಳಜಿ’ ಈಗ ಸೌಂದರ್‍ಯಶಾಸ್ತ್ರದ ಮುಖ್ಯಪಾಠಗಳಲ್ಲೊಂದು. 'ನುಡಿದರೆ ಮುತ್ತಿನ ಹಾರದಂತಿರಬೇಕು’...ನಡೆದರೆ ಏನು ಅಂತ ನೀವಿನ್ನು ಸೇರಿಸಬೇಕು ! ಕಣ್ಣಿನ ಬಗೆಗಷ್ಟೇ ಹೊಗಳುತ್ತಿದ್ದವರೀಗ 'ನೀಳ ಕಾಲುಗಳ ಸುಂದರಿ’ ಅಂತ ವರ್ಣಿಸತೊಡಗಿರುವುದು ಕಾಲುಪ್ರಿಯರಿಗೆ ಸಂತಸದ ಸುದ್ದಿಯೇ. (ಇನ್ನು , ಕಚ್ಚಿ ಎಳೆಯೋ ಕಾಲಿನ ಬಗ್ಗೆ ಯೋಚಿಸಬೇಡಿ ಮಾರಾಯ್ರೆ) ಫ್ಯಾಷನ್ ಷೋ ಎಂಬ ಶೋಕಿ ಶುರುವಾದ ಮೇಲಂತೂ ಚೆಂದದ ಕಾಲುಗಳ ಒಂದೊಂದು ಹೆಜ್ಜೆಗೂ ಲಕ್ಷ ರೂಪಾಯಿ. 'ಮೆಲ್ಲಮೆಲ್ಲನೇ ಬಂದಳೇ/ ಬಂದನೇ’ ಎರಡಕ್ಕೂ ಡಿಮ್ಯಾಂಡ್. 'ನಡೆದರೆ ನಡು ಬಗ್ಗದಂತಿರಬೇಕು’ ಅನ್ನುತ್ತಾ ರ್‍ಯಾಂಪ್ ಏರುವ ಪ್ರದರ್ಶನ ಗೊಂಬೆಗಳ ಕೈಹಿಡಿಯುವುದೇ ಕಾಲಲ್ಲವೇ? ಆಹಾ 'ಕಾಲೇಷು’ ರಮ್ಯಂ !

ದಕ್ಷಿಣಕನ್ನಡ-ಉಡುಪಿಯ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ , ದೇವರ ಮೂರ್ತಿಯನ್ನು ಸುಮಾರು ೧೫ ಕೆಜಿ ತೂಕದ ಅರ್ಧಚಂದ್ರಾಕೃತಿಯ ಬೆಳ್ಳಿಯ ಪ್ರಬಾಳೆಯಲ್ಲಿಟ್ಟು ಒಬ್ಬನೇ ಹೊತ್ತುಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಆತನ ಜತೆಗೆ ವಾದ್ಯ-ಚೆಂಡೆಯವರೂ ಇರುತ್ತಾರೆ. ಹದಿನೈದಿಪ್ಪತ್ತು ಕೆಜಿ ಭಾರ ಹೊತ್ತ ಆ ವ್ಯಕ್ತಿ ಎರಡೂ ಕೈಗಳನ್ನು ಬೀಸುತ್ತಾ ತಲೆಯ ಮೇಲೆ ನಿಂತಿರುವ ದೇವರೆಡೆಗೆ ಸಂಪೂರ್ಣ ಧ್ಯಾನವಿಟ್ಟು ಹೆಜ್ಜೆ ಹಾಕುವ ನಡಿಗೆ ಬಹಳ ವಿಶಿಷ್ಟ. ಇನ್ನು ಮಲೆನಾಡಿನ ಹೊಲದ ಹಾದಿಗಳಲ್ಲಿ, ಅಡಿಕೆಮರ ಹಾಕಿದ ಸಂಕಗಳಲ್ಲಿ , ಸೊಂಟದಲ್ಲಿ ಕೊಡ ಇಟ್ಟುಕೊಂಡು ಬರುವಲ್ಲಿ ಜನರ ನಡಿಗೆಗಳನ್ನು ಗಮನಿಸಿದರೆ ಕಾಲ್ನಡಿಗೆಯ ಕಾಲಂಶ ಮಹಾತ್ಮೆಯಾದರೂ ಅರಿವಾದೀತು.

ನಿಂದು ಕಾಗೆಕಾಲು ಅಕ್ಷರ
ಪ್ರೈಮರಿಯಲ್ಲಿ ಸೊಟ್ಟಮೊಟ್ಟ ಅಕ್ಷರ ಬರೆವವರಿಗೆ 'ನಿಂದು ಕಾಗೆಕಾಲು ಅಕ್ಷರ’ ಅಂತ ಮಾಷ್ಟ್ರು ಹೇಳುವುದುಂಟು. ಉದ್ದಕ್ಕಿದ್ದವರಿಗೆ ಕೊಕ್ಕರೆಗಾಲು ಅಂತ ಸಹಪಾಠಿಗಳು ಹೀಯಾಳಿಸುವುದುಂಟು. ಕಾಲು ಕೆರೆದು ಜಗಳಕ್ಕೆ ಬರುವ ಅವರ ಮುಕ್ಕಾಲು ಬುದ್ಧಿಗೂ ಉತ್ತರಿಸದೆ ಬಿಡಬೇಡಿ. ಕಾಗೆ ಕಾಲು ತಲೆಗೆ ತಗುಲಿದರೆ ಆತನ ಅಂತ್ಯಕಾಲ ಸಮೀಪಿಸಿತೆಂದೇ ಅರ್ಥ, ಹುಷಾರ್. ಇನ್ನು ಕತ್ತೆ ಕಾಲಿನ ಒದೆಯ ಬಗ್ಗೆ ನಿಮಗೆ ಹೇಳಬೇಕಾದೀತೇ?! ಹಾಲು ಕರೆವಾಗ ಎಷ್ಟು ಜನರ ಕಾಲಿಗೆ ಎಷ್ಟೆಷ್ಟು ಸಲ ಹಸು ತುಳಿದಿದೆ ಅಂತ ಮನೆಯ (ಹಳೆ)ಹೆಂಗಸರನ್ನು ಕೇಳಿ. ಮನುಷ್ಯನಿಗೆ- ಓಡಾಡಲು, ವಾಹನ ಚಲಾಯಿಸಲು, ತುದಿಗಾಲಿನಲ್ಲಿ ನಿಂತು ಇಣುಕಲು (ಇದು ಮಾನವರ ವಿಶೇಷ ಸಾಮರ್ಥ್ಯ) ಕಾಲ್ಗಳೇ ಬೇಕಲ್ಲ. ಮಹಾಭಾರತ ನಡೆದದ್ದೇ ಕೌರವನ ತೊಡೆಯ ಮೇಲೆ, ತಿಳಕೊಳ್ಳಿ.....ಅಂತ ಸಮಾಧಾನವಾಗಿ ಹೇಳಿ !

ಆದರೂ ಸತ್ಯ ಹೇಳುತ್ತೇನೆ. ಕಾಲುಗಳಿಂದ ಇರುವ ಒಂದೇಒಂದು ತೊಂದರೆ ಎಂದರೆ ಒಡೆವ ಅಂಗಾಲು. ಅದೆಷ್ಟು ಮುಲಾಮು, ಆಯುರ್ವೇದ ಉಪಚಾರಗಳು ಬಂದರೂ ಒಡೆಯುವ ಕಾಲುಗಳು ಒಡೆಯುತ್ತಲೇ ಇವೆ. ಒಡೆದುಒಡೆದು ಚಂಬಲ್ ಕಣಿವೆಗಳಂತಾಗಿ, ಕಪ್ಪು ಮಣ್ಣು ತುಂಬಿಕೊಂಡು, ರಕ್ತ ಒಸರುತ್ತಾ , ಊರಲಾಗದಷ್ಟು ನೋಯುತ್ತಾ, ಕೊಂಚ ವಾಸನೆ ಹೊರಡಿಸುತ್ತಾ ಛೆ ಛೆ ಸಾಕಪ್ಪಾಸಾಕು. ಹಾಗಾಗಿಯೇ ನಮ್ಮ ಕೆಲವು 'ನಗರದೇವತೆ’ಗಳ ಪಾದಾಂಬುಜ ನೆಲವನ್ನೇ ಸ್ಪರ್ಶಿಸುವುದಿಲ್ಲ. ಅವುಗಳಿಗೆ ಯಾವತ್ತೂ ಮೆತ್ತನೆ ಚೀಲ. ಕೆಲವರ ಕೆನ್ನೆಗಿಂತ ಅವರ ಅಂಗಾಲು ನುಣು[. ಎಷ್ಟೆಂದರೆ ಅವರ ಕಾಲನ್ನೇ ನಮ್ಮ ಕೆನ್ನೆಗೆ ಒತ್ತಿಕೊಳ್ಳೋಣ ಅನಿಸುವಷ್ಟು !
ಕಾಲಿನ ಬಗ್ಗೆಯೇ ಆದರೂ ಕೈಯಲ್ಲೇ ಬರೆಯಬೇಕಾಗಿಬಂದ ಈ ಬರೆಹವನ್ನು ನಿಮ್ಮ ಕಾಲಿಗೆ ಹಾಕುತ್ತಿದ್ದೇನೆ. ಇದು ಪುರಾಣದ 'ಕಾಲು’ಭಾಗ ಅಷ್ಟೆ. ಕೈಹಿಡಿದು...ಅಲ್ಲಲ್ಲ...ಕಾಲು ಹಿಡಿದು ಒಪ್ಪಿಸಿಕೊಳ್ಳಿ !

Read more...

January 26, 2008

ಪದ್ಯಗಳ ಆರಾಧನೆ !

‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಎಂಬ ಮೊದಲ ಸಂಕಲನದಲ್ಲೇ ನೂರಕ್ಕೂ ಹೆಚ್ಚಿನ ಕವಿತೆಗಳೊಂದಿಗೆ ಮೆರವಣಿಗೆ ಹೊರಟ ಪುತ್ತೂರಿನ ಸಂಧ್ಯಾದೇವಿಯವರು, ಬರೆದದ್ದೆಲ್ಲ ಪದ್ಯವೇ ಆಗುತ್ತದೇನೋ. ಹಾಗಂತ ಮತ್ತೆ ಮತ್ತೆ ಓದಿ, ವಿಮರ್ಶಿಸಿ, ಕಾವ್ಯ ವಿಮರ್ಶೆಯ ಪರಿಕರಗಳೊಂದಿಗೆ ತಿಣುಕಾಡಲು ಈ ಕವಿತೆಗಳಲ್ಲಿ ಅವಕಾಶವಿಲ್ಲ. ಇದು ತಾಜಾ ತಾಜಾ. ಒಮ್ಮೆ ನಾಲಗೆಯ ಮೇಲಿಟ್ಟುಕೊಂಡರೆ ಕರಗುವ ತನಕ ಚಪ್ಪರಿಸುತ್ತಿರಬಹುದು. ಮುಗಿದ ಮೇಲೆ ಹೋಯಿತು. ಬೇರೆಯದೇ ಬೇಕು ! ಸಂಧ್ಯಾದೇವಿಯವರ ಪದ್ಯಗಳಲ್ಲಿ , ಸಾಲಿನಿಂದ ಸಾಲಿಗೆ ರಸೋತ್ಕರ್ಷವಾಗುವ ಬಗೆ ಅನನ್ಯ. ಇವರೆದುರು ನಮ್ಮ ಬಹುಪಾಲು ಕವಿಗಳನ್ನು ನಿವಾಳಿಸಿ ತೆಗೆಯಬೇಕು ಅಂತ ನನ್ನ ತಮ್ಮ ಹೇಳುತ್ತಿದ್ದ ! ಪದ-ರಸ-ವಿಚಾರ ಈ ಮೂರನ್ನೂ ಕರಡಿಸಿ ಕುಡಿಸುವ ಇವರ ಕಾವ್ಯ ಸುಧೆಯ ಒಂದು ಹೊಸ ಗುಟುಕು ಇಲ್ಲಿದೆ.
ನೆನಪು

ಕೈಯಲ್ಲಿ ಹಿಡಿದ
ಚಹಾ ಕಪ್ಪಿನಲ್ಲಿ
ನಿನ್ನ ನೆನಪಿದೆ.

ಸುರುಳಿ ಸುರುಳಿಯಾಗಿ
ಮೇಲೇಳುವ
ಹಬೆಯ ಬಳ್ಳಿಯಿದೆ.

ಚಹಾದಲ್ಲಿರುವ ಅವೆರಡು
ಅತಿ ಸೂಕ್ಷ್ಮ
ನಾಜೂಕು.

ತಣಿಯಬಾರದು
ಮುಗಿಯಲೂ ಬಾರದು
ಹಾಗೆ ಹೀರಿದೆ ಚಹಾವೆಂಬ ನೆನಪನ್ನು !

ಹಬ್ಬಿತು ರುಚಿ
ಹಬೆಯ ಬಳ್ಳಿ.

ದೊಡ್ಡವರು

ಓ... ನೀನು ಭೂಮ
ನಾನು ಭಾಮಾ !

ಮಹಲಿನ ಉಪ್ಪರಿಗೆಯ ಮೂಲೆಯಲ್ಲಿ
ಬೀದಿಯ ಸಂದಿಗೊಂದಿನಲ್ಲಿ
ಎಲ್ಲಿ ಸೇರಿದರಲ್ಲಿ
ಅದುವೆ ಸುಧಾಮ.

ಸುದಾಮ ನಿನಗೆ ಸ್ನೇಹಿತ
ನಾನೂ ನೋಡಿದ್ದೇನೆ.

ದೊಡ್ಡವರು ಮಾತ್ರ ಸಣ್ಣವರ
ಹತ್ತಿರ ಬರುತ್ತಾರೆ
ಬಂದು ಪಾದವನ್ನೂ ಮುಟ್ಟುತ್ತಾರೆ
ತೊಳೆಯುತ್ತಾರೆ ಕೂಡಾ.

ಏನು? ಸೇವಕನ ಸೇವೆಯನ್ನು
ಮಾಡುವುದುಂಟೇ ...ದೊರೆ?

ಅವನು ದೊರೆಯಲ್ಲ
ದೇವರೇ !
---------------
ಪಾಶ

ಓರೆ ಮೇಲೆ ಏರಿದ
ಒಂದು ಹುಬ್ಬು !

ಅಯ್ಯೋ...ಅದು ಹುಬ್ಬಲ್ಲ
ನನ್ನ ಪಾಲಿನ ಪಾಶ.
ನನ್ನ ಮೇಲಿನ ಪರೀಕ್ಷೆ.

ಓ ಪ್ರೇಮವೇ...
ನನ್ನ ಪರವಶವೇ...
ನನ್ನನ್ನು ಕಟ್ಟಿ ಹಾಕಿದ ನೋಟವೇ...

ಸೋತಿದ್ದೇನೆ ನೋಡು
ನಿನ್ನ ಕೈಯಲ್ಲಿ ಹಿಡಿದ
ವಿಷದ ಬಟ್ಟಲಿನಲ್ಲಿ

ನನ್ನ ನೀಲಿಯಾದ ತುಟಿಗಳಿವೆ .
ಕುಡೀ...ಇನ್ನು ನೀನು
ವಿಷ ಕುಡಿ .

- ಸಂಧ್ಯಾದೇವಿ

Read more...

January 24, 2008

ದೊಡ್ಡವರ 'ಸಣ್ಣ ಕೆಲಸ'

ದೊಡ್ಡವರು 'ಸಣ್ಣ ಕೆಲಸ ’ ಮಾಡಿದರೂ ಸಾಕು, ತಕ್ಷಣ ಪ್ರಚಾರ ಪಡೆದುಕೊಳ್ಳುತ್ತಾರೆ. ಮಿಲಿಟರಿ ಪ್ಯಾಂಟು, ಉದ್ದನೆಯ ಶೂ ಧರಿಸಿ, ವಿಹಾರ ತಾಣವೊಂದರಲ್ಲಿ ಸಿನಿಮಾದ ರ್‍ಯಾಂಬೊನಂತೆ ಬರಿ ಮೈಯಲ್ಲಿ ಫೋಸು ಕೊಟ್ಟ ರಷ್ಯಾದ ಅಧ್ಯಕ್ಷ ವ್ಲಾದಿಮರ್ ಪುಟಿನ್, ಜಗತ್ತಿನಾದ್ಯಂತ ಟಿವಿ-ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಬಾರಿ ನಮ್ಮ ಗಣರಾಜ್ಯೋತ್ಸವ ಸಮಾರಂಭಕ್ಕೆ ದೇಶದ ಅತಿಥಿಯಾಗಿ ಬಂದವರೂ ಇವರೇ. ಈ ಬಾರಿಯ ಅತಿಥಿ, ಫ್ರಾನ್ಸ್ ದೇಶದ ಅಧ್ಯಕ್ಷನಾಗಿ ಗದ್ದುಗೆ ಏರಿರುವ ೫೩ರ ಹರೆಯದ ನಿಕೊಲಸ್ ಸರ್ಕೊಜಿ ಕೂಡಾ ಬಲು ರಸಿಕರಂತೆ !

ಬಲಪಂಥೀಯರೆಂದು ಗುರುತಿಸಿಕೊಂಡ ಇವರು, ಪ್ರಚಂಡ ಮಾತುಗಾರ, ಸರ್ಕೊ ಎಂಬ ಹೆಸರಿನಲ್ಲಿ ಪ್ರಖ್ಯಾತ. ಅಮೆರಿಕದ ಪ್ರಸಿದ್ಧ ಪತ್ರಿಕೆ 'ವ್ಯಾನಿಟಿ ಫೇರ್’ ನಿಂದ ಅತ್ಯುತ್ತಮವಾಗಿ ಡ್ರೆಸ್ ಮಾಡಿದ ವ್ಯಕ್ತಿಯಾಗಿ ಫುಟ್‌ಬಾಲ್ ತಾರೆ ಬೆಕಮ್ ಮತ್ತಿತರರೊಂದಿಗೆ ೬೮ನೇ ಸ್ಥಾನ ಪಡೆದವರು. ಫ್ರಾನ್ಸ್‌ನ ಸಾಂಪ್ರದಾಯಿಕ ಸಾಮಾಜಿಕ ಮತ್ತು ಆರ್ಥಿಕ ನೀತಿಗಳಿಂದ ಅಮೆರಿಕ ಶೈಲಿಯತ್ತ ತುಡಿಯುವವನೆಂದು ಅವರನ್ನು ಬಣ್ಣಿಸಲಾಗುತ್ತದೆ. ಹಣಕಾಸು ಸೇರಿದಂತೆ ಹಲವು ಖಾತೆಗಳಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಆದರೆ ಫ್ರಾನ್ಸ್‌ನ ಸಮೃದ್ಧ ಸಾಂಸ್ಕೃತಿಕ ಪರಂಪರೆಯಂತೆ ಇವರ ಜೀವನ ಶೈಲಿಯೂ ಸಮೃದ್ಧ !

೧೯೮೪ರಲ್ಲಿ ಸಿಸಿಲಿಯಾ ಎಂಬಾಕೆ , ತಾನು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವನ ಜತೆಗಿನ ವಿವಾಹವನ್ನು ತಿರಸ್ಕರಿಸಿ, ಪ್ರಸಿದ್ಧ ಟಿವಿ ನಿರೂಪಕನಾಗಿದ್ದ ಜಾಕ್ವೆಸ್ ಮಾರ್ಟಿನ್ ಎಂಬವನಿಗೆ ಉಂಗುರ ತೊಡಿಸಿದಳು. ೨೬ ವರ್ಷದ ಆಕೆ ಆಗ ೯ ತಿಂಗಳ ಗರ್ಭಿಣಿ ಮತ್ತು ಮಾರ್ಟಿನ್‌ಗೆ ಕೇವಲ ೫೨ ವರ್ಷ ! ಆ ಮದುವೆಯನ್ನು ನೆರವೇರಿಸಿಕೊಟ್ಟವನು ಪ್ಯಾರಿಸ್ ಬಳಿಯ ಆ ಪಟ್ಟಣದ ಮೇಯರ್ ಆಗಿದ್ದ ನಿಕೊಲಸ್. ಆಗಲೇ ಮದುವಯಾಗಿದ್ದ ಸರ್ಕೊಜಿ, ನಂತರ ಬಯಸಿದ್ದು ಅದೇ ಸಿಸಿಲಾಳನ್ನು ! ಹಾಗೆ ೯೬ರಲ್ಲಿ ಅವಳನ್ನು ಮದುವೆಯಾಗಿ ಒಬ್ಬ ಮಗನೂ ಜನಿಸಿದ.

ಆದರೆ ೨೦೦೫ರಲ್ಲಿ ಸಿಸಿಲಾ ಬದುಕಿನ ಬಗ್ಗೆ ವದಂತಿಗಳು ಹರಡತೊಡಗಿದವು. ಇನ್ನೊಂದೆಡೆ ಫ್ರಾನ್ಸ್ ಅಧ್ಯಕ್ಷ ಸ್ಥಾನಕ್ಕಾಗಿ ಸರ್ಕೊ ಸ್ಪರ್ಧಿಸಿದರು. ಪ್ರಚಾರದ ಒಂದೆರಡು ಜಾಗಗಳಲ್ಲಷ್ಟೇ ಕಾಣಿಸಿಕೊಂಡ ಸಿಸಿಲಾ ಬಳಿಕ ಮಾಯವಾದಳು. ಆದರೆ ಸರ್ಕೊ ಪ್ರಚಾರ ನಡೆಸುತ್ತಿದ್ದ ಸ್ಥಳಗಳಲ್ಲಿ ಕಂಡ ಕೆಲವು ಬ್ಯಾನರ್‌ಗಳಲ್ಲಿ ಈ ಮಾತುಗಳಿದ್ದವಂತೆ- 'ಸಿಸಿಲಾ ಮತ್ತೆ ಅವನನ್ನು ಸೇರಿದ್ದಾಳೆ. ಯಾಕೆಂದರೆ ಅವನ ಸೋಲಿಗೆ ಆಕೆಯೇ ಕಾರಣ ಅಂತ ದೂಷಿಸಲ್ಪಡುವುದನ್ನು ಅವಳು ಬಯಸುವುದಿಲ್ಲ. ಅವಳು ಮೂಲೆಗೆ ಸರಿದಿದಾಳೆ. ಅವನನ್ನು ಪ್ರೀತಿಸುವುದಿಲ್ಲ. ಆದರೆ ಅವನಿಗಾಗಿ ಆಕೆ ತನ್ನದೆಲ್ಲವನ್ನೂ ನೀಡಿದ್ದಾಳೆಂದು ತೋರಿಸಲು ಬಯಸಿದ್ದಾಳೆ!’.೨೦೦೭ರ ಮೇ ತಿಂಗಳಲ್ಲಿ ಸರ್ಕೊ ಫ್ರಾನ್ಸ್ ಅಧ್ಯಕ್ಷರಾಗಿ ಗದ್ದುಗೆ ಏರಿದರು. 'ಸಿಸಿಲಾ: ಎ ಪೋಟ್ರೈಟ್’ ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತನೊಬ್ಬ ಪುಸ್ತಕವನ್ನೂ ಬರೆದದ್ದಾಯಿತು. ಸರ್ಕೊ ಬಗ್ಗೆ ಸಿಸಿಲಾ ಬಹಳ ಕೆಟ್ಟ ಮಾತುಗಳನ್ನು ಆಡಿದ್ದಾಳೆ ಎಂದೂ ಅದರಲ್ಲಿ ದಾಖಲಿಸಲಾಗಿತ್ತು. ಆ ಪುಸ್ತಕ ನಿಷೇಧಿಸುವಂತೆ ಆಕೆ ಕೋರ್ಟ್ ಕಟ್ಟೆ ಏರಿದಳು. ಆದರೆ ಸಿಸಿಲಾ-ಸರ್ಕೊ ಸಂಬಂಧ ಹಳಸಿದ್ದು, ಅವರಿಬ್ಬರೂ ದೂರವಾದದ್ದು ಸ್ಪಷ್ಟವಾಗಿತ್ತು. ಅಕ್ಟೋಬರ್ ೧೮ ರಂದು ನಿಕೊಲಸ್ ತನ್ನ ಪತ್ನಿ ಸಿಸಿಲಾಗೆ ವಿಚ್ಛೇದನ ನೀಡಿರುವುದಾಗಿ ಅಧ್ಯಕ್ಷರ ಸಚಿವಾಲಯ ಪ್ರಕಟಿಸಿತು. ಆದರೆ 'ಅಬ್ಬಾ ಸರ್ಕೊನ ಸೊಕ್ಕೆ’ ಅಂತ ಎಲ್ಲರೂ ಮೂಗ ಮೇಲೆ ಬೆರಳಿಡುವಂತೆ, ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ವಾರಪತ್ರಿಕೆಯೊಂದು , ಮಾಜಿ ಮಾಡೆಲ್ ಕಾರ್‍ಲಾ ಬ್ರೂನಿ ಜತೆ ದೇಶದ ಅಧ್ಯಕ್ಷರು ಸುತ್ತಾಡುವ ಫೋಟೊಗಳನ್ನು ಪ್ರಕಟಿಸಿತು! ಸರ್ಕೊ ರಾಸಲೀಲೆ ಮತ್ತೆ ಆರಂಭವಾಯಿತು.

ತನ್ನೆಲ್ಲ ವಿಲಾಸಿ ಬದುಕಿನ ಮಧ್ಯೆಯೂ, ಭಾರತ ಸಂಜಾತ-ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಸೇರಿದಂತೆ ಇಬ್ಬರು ನೊಬೆಲ್ ವಿಜೇತರನ್ನು ತನ್ನ ಸಲಹೆಗಾರ ಮಂಡಳಿಯ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದಾರೆ ಸರ್ಕೊಜಿ. ಫ್ರಾನ್ಸ್‌ನ ಪ್ರಗತಿ ಹಾಗೂ ಜೀವನ ಮಟ್ಟದ ಸುಧಾರಣೆಯ ಬಗ್ಗೆ ಸೇನ್ ವಿಶ್ಲೇಷಣೆ ಮಾಡುತ್ತಾರಂತೆ. ಪ್ರಗತಿಯ ಬಗ್ಗೆ ಹೇಳುತ್ತಿರುವ ಅಂಕಿಅಂಶಗಳು ಹಾಗೂ ನಿತ್ಯ ಜೀವನದಲ್ಲಿ ಹೆಚ್ಚುತ್ತಿರುವ ಸಂಕಷ್ಟಗಳ ಬಗ್ಗೆ ಸೇನ್‌ನಂಥವರು ತಮಗೆ ಉತ್ತರಿಸಬೇಕಾಗಿದೆ ಎಂದು ಸರ್ಕೊ ಹೇಳಿದ್ದಾರೆ.

ಆದರೆ ಸದ್ಯದಲ್ಲೇ ಸರ್ಕೊ ಮತ್ತು ಬ್ರೂನಿ ಉಂಗುರ ಹಾಕಿಕೊಳ್ಳುವುದು ನಿಶ್ಚಯ ಎಂಬಲ್ಲಿಗೆ ಈ ಪ್ರೇಮಪ್ರಸಂಗ ಬಂದು ನಿಂತಿದೆ. ಪ್ರತಿ ವಾರಾಂತ್ಯವನ್ನೂ ಒಂದೊಂದು ದೇಶದಲ್ಲಿ ಕಳೆಯುತ್ತಾ , ಸರಕಾರಿ ಕೆಲಸಗಳನ್ನು ಅಧ್ಯಕ್ಷರು ನಿರ್ಲಕ್ಷಿಸುತ್ತಿದ್ದಾರೆಂದು ವಿರೋಧಿ ಪಕ್ಷಗಳು , ಪತ್ರಿಕೆಗಳು ಆರೋಪ ಹೊರಿಸುತ್ತಿವೆ. ಮೊನ್ನೆ ಮೊನ್ನೆ ಸೌದಿ ಅರೇಬಿಯಾಕ್ಕೆ ಪ್ರವಾಸ ಹೊರಟಿದ್ದ ಈ ಘನತೆವೆತ್ತ ಅಧ್ಯಕ್ಷರಿಗೆ ಆ ದೇಶ 'ನಮ್ಮಲ್ಲಿ ವಿವಾಹವಾಗದ ಸಂಬಂಧಗಳನ್ನು ಮಾನ್ಯ ಮಾಡುವುದಿಲ್ಲ. ಅದು ನಮ್ಮ ಧಾರ್ಮಿಕ ಸಂಪ್ರದಾಯಗಳಿಗೆ ವಿರೋಧವಾದದ್ದು. ಪ್ರೇಯಸಿಯರನ್ನೆಲ್ಲ ಮನೆಯಲ್ಲೇ ಬಿಟ್ಟು ಬನ್ನಿ’ ಅಂತ ಬಿಚ್ಚುನುಡಿ ಆಡಿತು. ಆದರೆ ನಮ್ಮ ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಕೆ ಫ್ರಾನ್ಸ್‌ನ ಪ್ರಥಮ ಮಹಿಳೆ ಆದಾಳೇ ಅಂತ ನಮ್ಮವರು ಬಹಳ ತಲೆ ಕೆಡಿಸಿಕೊಂಡರು. ಫ್ರಾನ್ಸ್ ಜತೆ ಆಡಬೇಕಾದ ಅಣುಬಂಧದ ವಿಷಯಕ್ಕಿಂತಲೂ ಹೆಚ್ಚಿನ ಪ್ರಚಾರ ಫ್ರಾನ್ಸ್ ದೇಶದ 'ಪ್ರಥಮ ಗೆಳತಿ’ಗೆ ಸಿಕ್ಕಿತು ! ದಿಲ್ಲಿಯ ಒಬೆರಾಯ್ ಹೋಟೆಲ್‌ನ ೩,೬೦೦ ಚದರಡಿಗಳ ಅದ್ಧೂರಿ ಕೊಹಿನೂರ್ ಕೋಣೆಯನ್ನೂ ಸರ್ಕೊ ಹೆಸರಿಗೆ ಯಾವತ್ತೋ ಬುಕ್ ಮಾಡಲಾಗಿತ್ತು. ಆದರೆ ಕೊನೆಗೂ ಬ್ರೂನಿ ಭಾರತಕ್ಕೆ ಬರುತ್ತಿಲ್ಲ ಎಂಬ ಪ್ರಕಟಣೆ ಹೊರಬಿದ್ದಿದೆ. ಆಕೆಯೀಗ ಮೂರು ತಿಂಗಳ ಪಾಪುವನ್ನು ಹೊತ್ತವಳಂತೆ, ಪಾಪ!

ಆದ್ರೂ ಬರ್ತಾನಲ್ಲಪ್ಪೋ...

Read more...

January 19, 2008

ಯಲ್ಲಾಪುರದ ಹಳ್ಳಿಯಲ್ಲಿ ಹುಟ್ಟಿ , ಕವಿಭೂಮಿ ಧಾರವಾಡದಲ್ಲಿ ಬದುಕುತ್ತಿದ್ದ ರವೀಂದ್ರ ಮಾವಖಂಡ ಎಂಬ ಜವ್ವನಿಗ ,ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬರೆದಿರುವ ಈ ಸಾಲುಗಳು, ನಾವು ಮುಟ್ಟಿಮುಟ್ಟಿ ನೋಡಿಕೊಳ್ಳುವಂತಿವೆ ! ಓದಿ ಹೇಳಿ.


ಅವ್ವ ರೊಟ್ಟಿಗೆ

ಗೋಧಿ ಹಿಟ್ಟನು

ಮಿದ್ದುತ್ತಿರುವಷ್ಟೇ

ಸಹಜ ಸರಾಗದಲ್ಲಿ

ನಾದುತ್ತಿದೆ ಎಲ್ಲರ

ಈ ಚರ ಶಹರ

ನೀಚರ ಶಹರ

ಬಳಲುತ್ತಿದ್ದ ಬಾಳು

ಆಕಾರ ವಿಕಾರವಾದ

ವಿಷಾದ ಮರೆತು

ಬೇಯುತಿದೆ

ಈ ನಗರದ ಅಗೋಚರ

ಅಡುಗೆ ಕೋಣೆಗಳ

ನೂರಾರು ಕಾವಲಿಗಳಲ್ಲಿ

ಪಾಳಿಯಲ್ಲಿ ಧೂಳಿಯಲ್ಲಿ

ಎದ್ದು ಬಿದ್ದು ಅಲ್ಲಿ ಇಲ್ಲಿ.

Read more...

ಸಿಗರೇಟು ಸೇದುವ ಹುಡುಗರು

ಗಿಜಿಗಿಜಿ ಜಾತ್ರೆಯಂಗಡಿ ಕೊನೆಗೆ
ಮನೆಯ ತೋಟದ ಮೂಲೆಗೆ
ಹೈಸ್ಕೂಲ್ ಟಾಯ್ಲೆಟ್ ಹಿಂದೆ

ಕಳ್ಳ ಕಿಸೆಯಲಿ ಮುರಿದ ಸಿಗರೇಟಿಗೆ
ಕಡ್ಡಿ ತೂರಿಸಿ ನೇರವಾಗಿಸಿ
ಕಣ್ಮುಚ್ಚಿ ಕೊಂಚ ಹೊಗೆ ಒಳಗೆಳೆದು
ಬೂದಿ ಹೊಡೆವಾಗ ಸಿಗರೇಟೇ ಕೈಜಾರಿ
ಮತ್ತೆರಡು ಕಡ್ಡಿ ಗೀರಿ ಕೆಮ್ಮುತ್ತ ...
ಆಹಾ ದಂ ಮಾರೋ ದಂ ದಂ .

ಛೆ, ಇನ್ನೆರಡು ಜಾಸ್ತಿ ತಗೋಬಹುದಿತ್ತು
ಇಲ್ಲ ಅಭ್ಯಾಸವಾದರೆ ಕಷ್ಟ !
ಮಾರ್‍ಲ್‌ಬರೋಗೆ ಅರುವತ್ತು ರೂಪಾಯಿ
ಚೈನ್ ಸ್ಮೋಕರ್ ಶಾರುಕ್ ಎಂಥ ಸಿಪಾಯಿ
ಅಂತೆಲ್ಲ ಗಿಲೀಟು ಮಾತಾಡುತ್ತ ಎಳೆಯುತ್ತ
ಸಿಗರೇಟು ಸೇದೋರೆಲ್ಲ ಕೆಟ್ಟೋರಾ ಅಂತ ವೇದಾಂತ
ಶಿವರಾಜ್ ಕುಮಾರ್ ಸಿನಿಮಾದಲ್ಲಿ ‘ಸಂತ ’ !

ರಜನಿ ಸ್ಟೈಲ್ ಗೊತ್ತಾ, ಫ್ರೆಂಚ್ ಇನ್‌ಹೇಲರ್ ಬರತ್ತಾ?
ಹೊಗೆಯಲ್ಲೇ ಲವ್ ಸಿಂಬಲ್ ಆ...ಆ...ವ್...ವ್...
ಉಫ್...ಹಿಂಗೆ ಮಾಡೋಕಾಗತ್ತ,
ಹನೀಫನ ಅಂಗಡೀಲಿ ಲೈಟ್ಸ್ ಸಿಗತ್ತಾ?

ಕಾಲೇಜಿಗೋದ್ರೆ ಇದು ಕಾಮನ್ನು , ಫ್ಯಾಷನ್ನು
ಬೇಕಾದ್ರೆ ತಗೋ ನಿನ್ನ ಡವ್ವಿನ ಪರ್ಮಿಷನ್ನು !
ಎನ್ನುತ್ತ ಹೊಗೆ ಕಾರುತ್ತ ಹೈ-ಸ್ಕೂಲು ಹುಡುಗರು ...

ಅಪ್ಪ ಆಷ್‌ಟ್ರೇನಲ್ಲಿ ಸಿಗರೇಟು ಮುರಿದರು
ಮೇಷ್ಟ್ರು ಹುಡುಗರ ಬೆನ್ನು ಮುರಿದರು .
ಮೊನ್ನೆ ಅಪ್ಪನ ತಿಥಿಗೆ ಊರಿಗೆ ಹೋಗಿದ್ದಾಗ ,
ಬೆನ್ನಿಗೆ ಎಣ್ಣೆ ಹಚ್ಚಿ ಅಮ್ಮ ತಿಕ್ಕುತ್ತಿದ್ದಾಗ ,
ಇವೆಲ್ಲ ಯಾಕೋ ನೆನಪಾಯಿತು .

-ಸುಧನ್ವಾ
(ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ, ಫೋಟೊ:ಯಜ್ಞ)


Read more...

January 13, 2008

ಪ್ರಶ್ನೆಗಳಿರುವುದು 'ಕೇಳುವುದಕ್ಕೆ’ !

ಸುಮಾರು ಎರಡು ತಿಂಗಳಿಗೊಂದರಂತೆ ಪ್ರಕಟವಾಗುತ್ತಿದ್ದ "ಕವನ ಮತ್ತು ಕಾವ್ಯ ವಿಮರ್ಶೆಗಳ ಋತುಪತ್ರಿಕೆ’-ಕವಿತಾ. ೧೯೬೪ರ 'ವರ್ಷ’ ಋತುವಿನ ಸಂಚಿಕೆಯ ಮುಖಪುಟ ಇಲ್ಲಿದೆ. ಬಾಕಿನ ಅವರು ಪ್ರಧಾನ ಸಂಪಾದಕರಾಗಿದ್ದ ಈ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಘನಶ್ಯಾಮ, ಕಿರಣ ಮತ್ತು ನಾ. ರಾಮಾನುಜರಿದ್ದರು. ಬೆಂಗಳೂರಿನ ಬಸವನಗುಡಿಯ 'ಗೆಳೆಯರ ಪ್ರಕಾಶನ’ದ ಹೆಸರಲ್ಲಿ ಇದು ಹೊರಬರುತ್ತಿತ್ತು. ಸಂಪುಟಕ್ಕೆ 'ಹೂವು ಎಂದು, ಸಂಚಿಕೆಗೆ 'ಎಸಳು’ ಎಂದೂ ಹೆಸರಿಟ್ಟುಕೊಂಡಿದ್ದರು. ಈ ಮೂರನೆ ಸಂಚಿಕೆಯ ಕೊನೆಗಿರುವ ಸಂಪಾದಕೀಯ, ಈಗ ಯಾರೋ ಬರೆದಿಟ್ಟಂತೆ ಕಾಣುತ್ತಿರುವುದು ವಿಶೇಷ !

'ನಾವು ಹೊಸ ಬರಹಗಾರರಿಗೆ ಅವಕಾಶ ಕೊಡಬೇಕೆಂದು ಪ್ರಾರಂಭದಲ್ಲೇ ಸಂಕಲ್ಪಿಸಿದ್ದೆವು. ಆದರೆ ಹೊಸ ಲೇಖಕರಿಂದ ಪ್ರಕಟಣೆಗೆ ಯೋಗ್ಯವಾದ ಕೃತಿಗಳು ಬರುತ್ತಿಲ್ಲ. ಉತ್ಸಾಹೀ ತರುಣ ಬರಹಗಾರರು ನಮ್ಮ ಸಾಹಿತ್ಯದ ಬೆಳವಣಿಗೆಯನ್ನು ಗಮನಿಸದೆ ತಾವೂ ಸಾಕಷ್ಟು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸದೆ, ಬರೆದದ್ದೇ ಪ್ರಕಟಣೆಯಾಗಬೇಕೆಂಬ ಆಕಾಂಕ್ಷೆಯೊಂದನ್ನು ಮಾತ್ರ ಇಟ್ಟುಕೊಂಡು, "ಹೆಸರಿಗೋಸ್ಕರ’ ಬರೆಯುವ ಪ್ರಯತ್ನ ನಡೆಸಿದರೆ ಏನೇನೂ ಸಾರ್ಥಕವೆನಿಸದು. ಇದರಿಂದ ಉತ್ತಮ ಸಾಹಿತ್ಯವಾಗಲಿ, ಕಾವ್ಯವಾಗಲಿ ಸೃಷ್ಟಿಯಾಗದು. ಸಾಹಿತ್ಯ ನಡೆದು ಬಂದ ದಾರಿಯನ್ನು ಸತತವಾಗಿ ಅಭ್ಯಸಿಸಿ, ಮುಂದೆ ನಡೆಯಲು ಬೇಕಾದ ಶಕ್ತಿಯನ್ನು ಗಳಿಸಲು ತರುಣ ಲೇಖಕರು ಸಿದ್ಧರಾಗಬೇಕು. ಈ ದಿಸೆಯಲ್ಲಿ ಹೆಜ್ಜೆ ಹಾಕಲು ನಾಡಿನ ಹೊಸ ಬರಹಗಾರರು ವಿಚಾರ ಕ್ರಾಂತಿಯ ಆಂದೋಳನವನ್ನು ನಡೆಸುವರೆಂದು ನಂಬುತ್ತೇವೆ’.

ಕ.ವೆಂ. ರಾಜಗೋಪಾಲ, ಲಂಕೇಶ್, ಚಂಪಾ, ಗಿರಡ್ಡಿ, ಚೊಕ್ಕಾಡಿ, ನಾಡಿಗ, ದೇಶ ಕುಲಕರ್ಣಿ ಮೊದಲಾದವರು ಈ ಕವಿತಾದಲ್ಲಿ ಕಾಣಿಸಿಕೊಂಡಿದ್ದಾರೆ. ೧೯೬೪ರಲ್ಲಿ ಇವರೆಲ್ಲ ಹಿರಿಯರೂ, ಹಳೆಯ ಬರೆಹಗಾರರೂ ಆಗಿಹೋಗಿದ್ದರೆ? 'ಹೊಸಬರ ಕವನ ಸಂಕಲನ ಪ್ರಿಂಟ್ ಮಾಡೋದಕ್ಕೂ ಅವರು(ಒಬ್ಬರ ಹೆಸರು ಹೇಳಿ) ರೆಡಿ ಇದ್ದಾರೆ. ಆದರೆ ಒಳ್ಳೇ ಪುಸ್ತಕಗಳೇ ಅವರಿಗೆ ಸಿಗ್ತಾ ಇಲ್ಲ ಮಾರಾಯಾ’ ಅಂದಿದ್ದರು ಮೊನ್ನೆ ಮೊನ್ನೆ ಜಯಂತ ಕಾಯ್ಕಿಣಿ. ತರುಣ ಲೇಖಕರಿಂದ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ ಎಂಬ ಮಾತನ್ನುಆದಿಕವಿ ಪಂಪನಿಂದ ಇಂದಿನ ತನಕವೂ ಪ್ರತಿದಿನ ಕೇಳುತ್ತಲೇ ಹೇಳುತ್ತಲೇ ಸಾಹಿತ್ಯ ತನ್ನ ಪಾಡಿಗೆ ತಾನು ಬೆಳೆಯುತ್ತ ಬಂದಿದೆಯೇ? ಅಷ್ಟಕ್ಕೂ ತರುಣರು ಮಾತ್ರ ಚೆನ್ನಾಗಿ ಬರೆಯಬೇಕು ಯಾಕೆ?! ಪ್ರಶ್ನೆಗಳಿರುವುದು 'ಕೇಳುವುದಕ್ಕೆ’ !

Read more...

January 08, 2008

'ಅದಾಗಿ’ ನೀವು ಕ್ಷೇಮವೇ?

ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ 'ಕಾಂಗರೋದ್ಧಾರಿ’ ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು. ಅಣ್ಣ ಬಲರಾಮನಂತಿರುವ 'ಬೆಣ್ಣೆಮುದ್ದೆ’ ಬನ್ಸನನಿಗೆ ವಂದನೆಗಳು. ಹುಬ್ಬಳ್ಳಿಯವರ ಬಾಯಲ್ಲಿ 'ಪಾಂಟಿಂಗ’ , ದ.ಕ.ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು.
ಅದಾಗಿ ನಾವು ಕ್ಷೇಮ. 'ಅದಾಗಿ’ ನೀವು ಕ್ಷೇಮವೇ?!

ವಾಮನನು ತಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಿಂದ ಭೂಮಿಯನ್ನೇ ಅಳೆಯುವಾಗ ಗಂಗಾನದಿಯು ಅವನ ಕಾಲ್ಬೆರಳ ಸಂದಿಯಿಂದ ಹುಟ್ಟಿಕೊಂಡಿತಂತೆ.! ಇಂತಹ ಪುಣ್ಯಭೂಮಿ ಭಾರತವೇ ಈಗ ನಿಮ್ಮ ಕೈಬೆರಳುಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ನೋಡಿ ಬಹಳ ಖೇದವಾಯಿತು. ನಾವೆಲ್ಲ ದೀಪಿಕಾಳ ಪಡುಕೋಣೆಯಲ್ಲಿದ್ದಾಗ ನೀವು ನಮ್ಮ mood ಹಾಳುಮಾಡಿಬಿಟ್ಟಿರಿ. ಕನ್ನಡಿಗನಾದ ನಾಯಕ ಕುಂಬ್ಳೆ ಅಂಗಳದಲ್ಲಿ, ಕನ್ನಡತಿ ದೀಪಿಕಾ ಪೆವಿಲಿಯನ್‌ನಲ್ಲಿ -ಗೆಲುವನ್ನೇ ಧ್ಯಾನಿಸುತ್ತಿರುವಾಗ ನೀವು ಎಲ್ಲರನ್ನೂ ಡ್ರೆಸ್ಸಿಂಗ್ ರೂಮಿಗೆ ಕಳುಹಿಸಿದ್ದು ನಮಗೆಲ್ಲ ಬಹಳ ಮುಜುಗರ ಉಂಟುಮಾಡಿತು.
ಅಂಪೈರುಗಳು ಹಿಂಗೂ ಕೈ ಎತ್ತೋದಾ?!

ಮೊದಲ ಇನ್ನಿಂಗ್ಸ್‌ನಲ್ಲಿ ೧ ರನ್ ಮಾಡುವುದಕ್ಕೆ ೪೧ ಬಾಲ್‌ಗಳನ್ನು ಪರೀಕ್ಷಿಸಿದ ಕನ್ನಡಿಗ ದ್ರಾವಿಡ್, ಎರಡನೇ ಇನ್ನಿಂಗ್ಸ್‌ನಲ್ಲಿ ೧೦೩ ಬಾಲ್‌ಗಳಲ್ಲಿ ಕೇವಲ ೩೮ ರನ್ ಹೊಡೆದಿದ್ದಾಗಲೂ, ಅವನು ಬ್ಯಾಟ್ ತಗುಲಿಸದಿರುವಾಗಲೇ ಔಟ್ ಅಂದುಬಿಟ್ಟಿರಲ್ಲ! ಭಾರತದ ಮಹಾಗೋಡೆ ನಿಮ್ಮ ತಾಳ್ಮೆಯನ್ನೂ ಪರೀಕ್ಷಿಸಿದರೆ? ದಾದಾ ಹೊಡೆದ ಚೆಂಡನ್ನು ಕ್ಲಾರ್ಕ್ ನೆಲಕ್ಕೊತ್ತಿ ಹಿಡಿದರೂ ನೀವದನ್ನು ಕೈಗೆತ್ತಿಕೊಂಡಿರಿ. ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್ ತೆಗೆದುಕೊಂಡದ್ದಕ್ಕೇ ಮಂಗನಂತೆ ಮೈದಾನದಲ್ಲಿ ಉರುಳು ಸೇವೆ ಮಾಡಿದ ಭಜ್ಜಿ, ಸೈಮಂಡ್ಸನ್ನು "ಮಂಗ’ ಅಂತ ಬೈದಾನೇ?! ಕೊನೆಯ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗಂಟಿಕೊಂಡೇ ಇದ್ದು ಅಜರಾಮರನಾಗಿರುವ ನಮ್ಮ ಕುಂಬ್ಳೆಗೆ ಬ್ರಾಡ್‌ಹಾಗ್ ಉಪಯೋಗಿಸಿದ ಪದ ನಿಮಗೆ ಕೇಳಿಸಲಿಲ್ಲ, ಇರಲಿ. ಮೊದಲ ಇನ್ನಿಂಗ್ಸ್‌ನಲ್ಲಿ ಸೈಮಂಡ್ಸ್ ೩೦ ರನ್ ಗಳಿಸಿದ್ದಾಗಲೇ ಔಟಾದರೂ, ಅವನಿಗೆ ನೀವು ತೋರಿದ ಕೃಪಾಕಟಾಕ್ಷ ದೊಡ್ಡದು. ಅವನೆದುರೂ ಮಂಗನಾಗುವ ಗತಿ ನಿಮಗ್ಯಾಕೆ ಬಂತು?
ನಮ್ಮ ವಾಸಿಂ ಜಾಫರ್ ಎರಡು ಟೆಸ್ಟ್‌ಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆಡಿಯೂ ಕೇವಲ ೨೨ ರನ್ (೪-೧೫-೩-೦) ಮಾಡಿ ಸ್ಪಷ್ಟವಾಗಿ ವಿಕೆಟ್ ಒಪ್ಪಿಸುತ್ತಿದ್ದುದನ್ನು ಮರೆತಿರಾ ಸಾಹೇಬರೆ?!

ನೀವು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಿದ್ದೀರೋ ಇಲ್ಲವೋ ನಾವು ಹೇಳಲಾರೆವು. ಆದರೆ ಬ್ಯಾಟ್ಸ್‌ಮನ್‌ಗಳು ಉದ್ದೇಶಪೂರ್ವಕ ಔಟಾದಂತೆ, ನಿಧಾನವಾಗಿ ಆಡಿದಂತೆ ಕಂಡರೆ ಮ್ಯಾಚ್‌ಫಿಕ್ಸಿಂಗ್ ಆರೋಪ ಹೊರಿಸುವುದು, ಬೌಲರ್‌ಗಳು ನಿಧಾನವಾಗಿ ಬೌಲಿಂಗ್ ಮಾಡಿದರೂ ದಂಡ ವಿಧಿಸುವುದು ಇತ್ಯಾದಿ ಇರುವಾಗ, ಒಂದೇ ಪಂದ್ಯದಲ್ಲಿ ಐದಾರು ಘೋರ ತಪ್ಪುಗಳನ್ನು ಮಾಡಿದ ನಿಮಗೆ ದಂಡನೆಯೇ ಇಲ್ಲವೇ? ಸರಿಯಾದ ಸಾಕ್ಷಿಯಿಲ್ಲದೆ ಏಕಪಕ್ಷೀಯವಾಗಿ ಭಜ್ಜಿಗೆ ಮೂರು ಪಂದ್ಯಗಳ ನಿಷೇಧ (ಮ್ಯಾಚ್‌ರೆಫ್ರಿ) ಹೇರುತ್ತೀರಾದರೆ, ಮುಂದಿನ ಎರಡು ಪಂದ್ಯಗಳಿಗಾದರೂ ಬಕ್ನರ್ ಬೇಡ ಅಂತ ದೃಶ್ಯಮುದ್ರಿಕೆಗಳ ಸಾಕ್ಷಿ ಸಮೇತ ನಾವಂದದ್ದು ತಪ್ಪಾದೀತೇ?

****
ಪ್ರಿಯ ಪಾಂಟಿಂಗ್- ನಿನ್ನ ಮುದ್ದು ನಗೆಗೆ, ಬ್ಯಾಟಿಂಗ್ ವೈಭವಕ್ಕೆ, ಫೀಲ್ಡಿಂಗ್ ಚಾಕಚಕ್ಯತೆಗೆ ನಾವೆಲ್ಲ ಮರುಳಾಗಿದ್ದ ಕಾಲವೊಂದಿತ್ತು. ಆದರೀಗ ನಮ್ಮ ಕಣ್ಣಿಗೆ ಕಟ್ಟುತ್ತಿರುವುದು, ನೀನು ಅಂಪೈರ್ ಬನ್ಸನನಿಗೆ ತೋರಿಸುತ್ತಿರುವ ಬೆರಳೊಂದೇ ! ನಿನ್ನ ತಂಡ ಸತತತ ೧೬ ಟೆಸ್ಟ್ ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿರಬಹುದು. ಆದರೆ ನಿಮಗಿನ್ನೂ ಟೆಸ್ಟಿಂಗ್ ಟೈಮ್ ಇದೆ ಅನ್ನುವುದನ್ನು ಮರೆಯಬೇಡಿ. ನಮ್ಮ ಕ್ಯಾನ್ಸರ್ ಆಸ್ಪತ್ರೆಗೆ ದೇಣಿಗೆ ನೀಡುತ್ತಿರುವ ಮೆಕ್‌ಗ್ರಾತ್ ಬಗ್ಗೆ, ಈ ಟಯರ್-ಇನ್ಶೂರೆನ್ಸ್ ತಗೊಳ್ಳಿ ಅಂತ ಮನೆ ಟಿವಿಯಲ್ಲಿ ಬಂದು ಒತ್ತಾಯಿಸುವ ಬ್ರೆಟ್‌ಲೀ ಮತ್ತು ನಿನ್ನ ಬಗ್ಗೆ ನಮಗೆಲ್ಲ ಒಂದು ತರಹದ ಪ್ರೇಮವಿತ್ತು. ನಮ್ಮ ಮಕ್ಕಳೂ ತಾನು ಪಾಂಟಿಂಗ್, ತಾನು ಸೈಮಂಡ್ಸ್ ಎಂದು ಆಡಿಕೊಳ್ಳುತ್ತಿದ್ದವು. ಈಗ ಅವರೂ ನಿಮ್ಮ ಬಗ್ಗೆ 'ಆಡಿಕೊಳ್ಳುವಂತಾಗಿದೆ’. ಬೇಕೆಂದಾಗ ಕ್ರೀಡಾಸ್ಫೂರ್ತಿಯ ಮಾತನ್ನೂ, ಬೇಡವೆಂದಾದಾಗ ಕ್ರೀಡೆಯಲ್ಲಿ ಇದು ಸಾಮಾನ್ಯ ಅಂತಲೂ ಹೇಳುತ್ತಿರುವ ನಿಮಗೆ, ನಿಮ್ಮದೇ ದೇಶದ ಮಾಧ್ಯಮಗಳು, ಜನ ಮಂಗಳಾರತಿ ಎತ್ತುತ್ತಿರುವುದು ಅರಿವಿಗೆ ಬರುತ್ತಿಲ್ಲವೆ?
ನೆನಪಿರಲಿ, ಕಾಂಗರೂಗಳ ಹೊಟ್ಟೆಯಲ್ಲಿ ಜೋತುಬಿದ್ದಿರುವ ಮರಿಗಳು ನಾವಲ್ಲ.

ಭಜ್ಜಿಗೆ ಹೇರಿರುವ ನಿಷೇಧ ತೆರವಾಗಬೇಕು, ಅಂಪೈರ್‌ಗಳ ಕಳಪೆ ನಿರ್ವಹಣೆಗೂ ದಂಡ ವಿಧಿಸುವ (ಹಣ-ಪಂದ್ಯ ನಿಷೇಧದ ರೂಪದಲ್ಲಿ) ಕ್ರಮ ಜಾರಿಗೆ ಬರಬೇಕು, ಈ ಕ್ರಿಕೆಟ್ ಸರಣಿ ಮುಂದುವರಿಯಬೇಕು-ಅಂತ ಬಯಸುತ್ತಿದ್ದ ನಮಗೆ ಹೊಸ ಸುದ್ದಿ ಸಮಾಧಾನ ತಂದಿದೆ.
****
೬೧ರ ಹರೆಯದ ಬಕ್ನರ್ ಸಾಹೇಬರೇ, ಸ್ವಲ್ಪ ದಿನ ಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಮನೆಯಲ್ಲಿರಿ ! ಆಗಲಾದರೂ ನಿಮ್ಮ ಬೆರಳು ನಿಮಗೆ ಕಾಣಿಸಿ ಹಳೆಯ ಮೈಮರೆವು ಹೋದೀತು. ನಮಗೆ ಹೊಸ 'ಬಿಲ್ಲಿ’ (ಬಿಲ್ಲಿ ಬೌಡೆನ್ ಅಂಪೈರ್) ಬಂದಿದೆ. ಹೇಗೋ ಆಟವಾಡಿಕೊಂಡಿರುತ್ತೇವೆ.

Read more...

January 07, 2008

ಒಮ್ಮೆ ಹೀಗಾಯಿತು...

ಗಾಢ ನಿದ್ದೆಯಲ್ಲಿ ಲೀನವಾಗಿದ್ದ ಅವನಿಗೆ ಎಚ್ಚರವಾದಾಗ ಮಧ್ಯರಾತ್ರಿ. ಬೆಳದಿಂಗಳ ಸೋನೆ ಮಳೆ ಸುರಿಯುತ್ತಿತ್ತು. ಈಗಷ್ಟೆ ಹಚ್ಚಿದ ಗಿಲೀಟಿನ ಚೂರುಗಳಂತೆ ತಾರೆಗಳು ಚಕಮಕ ಹೊಳೆಯುತ್ತಿದ್ದವು .ಹಿಂದಿನ ರಾತ್ರಿ ಯಕ್ಷಗಾನ ನೋಡಲು ಹೋಗಿದ್ದ ವೆಂಕಟೇಶ ಬೆಳಗ್ಗೆ ಮನೆ ತಲುಪಿದಾಗ - ತೋಟಕ್ಕೆ ದನಗಳು ನುಗ್ಗಿದ್ದವು, ನೀರು ಬರುವ ಪೈಪು ತುಂಡಾಗಿತ್ತು, ಮೂರ್‍ನಾಲ್ಕು ಬಾಳೆಗೊನೆಗಳು ಚೆನ್ನಾಗಿ ಬೆಳೆದು ಅಳಿಲು ತಿನ್ನಲು ಆರಂಭವಾಗಿತ್ತು ,ವಿದ್ಯುತ್ ತಂತಿಗೆ ಮರವೊಂದು ತಾಗಿ ಟ್ರಾನ್ಸ್‌ಫಾರ್ಮರ್ ಫ್ಯೂಸ್ ಹೋಗಿ ಕರೆಂಟು ಇಲ್ಲವಾಗಿತ್ತು ,ದನವೊಂದು ಏಳುವುದಕ್ಕಾಗದೆ ಮಲಗಿಕೊಂಡಿತ್ತು ,ಮನೆಯಲ್ಲೆಲ್ಲೋ ಒಂದು ಇಲಿ ಸತ್ತು ಅಸಾಧ್ಯ ವಾಸನೆ ಹೊಮ್ಮುತ್ತಿತ್ತು, ಮುರಿದ ಮರದ ಕವಾಟೊಂದನ್ನು ರಿಪೇರಿ ಮಾಡುವುದಕ್ಕೆ ಆಚಾರಿಯೊಬ್ಬ ಬರುವವನಿದ್ದ . ಈ ಎಲ್ಲಾ ಕೆಲಸಗಳು ಮುಗಿದು ವೆಂಕಟೇಶ ಚಾಪೆ ಬಿಡಿಸುವಾಗ ಸಂಜೆ ಐದು. ಮುಸ್ಸಂಜೆ ಹೊತ್ತು ಮಲಗಬಾರದು ಅಂತ ಮುದಿ ಅಮ್ಮ ಗೊಣಗಾಡುತ್ತಿದ್ದರೂ ,ಅವನು ಪರಲೋಕ ಸೇರುವವನಂತೆ ಅಡ್ಡಾಗಿದ್ದ !

ಆತ ಮಲಗಿದ್ದ ಮನೆ ಎದುರಿನ ಅರ್ಧ ಜಗಲಿಗೆ ಕತ್ತಲು, ಇನ್ನರ್ಧಕ್ಕೆ ಬೆಳ್ದಿಂಗಳು .ಆಕಾಶದಲ್ಲಿ ಯಾರೋ ಕತ್ತಲಿಂದ ಬೆಳದಿಂಗಳನ್ನು ಸೋಸುತ್ತಿರುವಂತಿತ್ತು. ಅಂಗಳದ ಅಂಚಿನ ಮುಳ್ಳಿನ ಬೇಲಿಯಿಂದಾಚೆ ಎಲ್ಲ ಕಪ್ಪಿನ ಬೆಟ್ಟ. ಕಪ್ಪು, ಬಿಳುಪು, ಬಿಸಿ, ತಣ್ಣಗೆ, ಗಾಳಿ, ಮಣ್ಣಿನ ಗಂಧ, ಬಣ್ಣ, ಆಕಾರ -ಸಕಲವೂ ಒಂದರೊಳಗೊಂದು ಸೇರಿ ಮಿಶ್ರಣಗೊಳ್ಳುತ್ತ , ನಾಟಕದ ಆರಂಭದ ಮೊದಲು ವೇದಿಕೆಯನ್ನು ಸಜ್ಜುಗೊಳಿಸುವಂತೆ ತಯಾರಾಗುತ್ತಿತ್ತು. ಆ ಇಳಿರಾತ್ರಿ, ಇದ್ದಕ್ಕಿದ್ದಂತೆ ಎಚ್ಚರಾದ ವೆಂಕಟೇಶನಿಗೆ ಅಮ್ಮನ ಗೊರಕೆ ಸ್ಪಷ್ಟವಾಗಿ ಕೇಳುತ್ತಿತ್ತು. ಬಚ್ಚಲ ಒಲೆ ಬದಿಯಲ್ಲಿ ಬಿದ್ದುಕೊಂಡಿದ್ದ ನಾಯಿ ಒಂಚೂರು ಗೋಣು ಎತ್ತಿ, ಬೌ ಎಂದು ಸಣ್ಣಗೆ ಧ್ವನಿ ಹೊರಡಿಸಿ ಸುಮ್ಮನಾಯಿತು. ಉಟ್ಟಿದ್ದ ಲುಂಗಿ ಕೈಗೆ ಸಿಗದೆ, ಬೆತ್ತಲೆ ತೊಡೆಗಳ ಮೇಲೆ ಬಟ್ಟೆ ಎಳೆದುಕೊಂಡು ಚಕ್ರಮುಟ್ಟ ಹಾಕಿ ಕುಳಿತುಕೊಂಡ. ಸಣ್ಣಗೆ ದೀಪ ಹತ್ತಿಸೋಣವಾ? ಅಮ್ಮನಿಗೆ ಎಚ್ಚರಾದರೆ ಒಂದರಮೇಲೊಂದು ಪ್ರಶ್ನೆ ಕೇಳಿಯಾಳು. ಎಲೆಅಡಿಕೆ ತಿನ್ನೋಣ ಅಂದರೆ ಯಾಕೋ ಮನಸ್ಸೇ ಬಾರದು. ಅಂಗಳದಲ್ಲಿ ನಾಲ್ಕು ಸುತ್ತು ನಡೆಯೋಣವೆಂದರೆ ಏಳಲೇ ಉದಾಸೀನ ಬಿಡಲಿಲ್ಲ . ಇನ್ನೇನು? ಸಂಜೆಯಿಂದ ಮಧ್ಯರಾತ್ರಿವರೆಗೆ ಬಂದ ಅಮೋಘ ನಿದ್ದೆಯ ಸುಖವನ್ನೇ ಮೆಲುಕು ಹಾಕುವವನಂತೆ ,ಕಣ್ಣುಗಳು ಹೂವಿನಂತೆ ಅರಳಿ ಹಗುರಾಗಿರುವುದನ್ನು ಅನುಭವಿಸತೊಡಗಿದ. ತಣ್ಣಗಿನ ಮುಖವನ್ನು ಎರಡೂ ಕೈಗಳಿಂದ ಮೆಲ್ಲನೆ ತಟ್ಟಿಕೊಂಡ. ದೇಹದಲ್ಲಿ ವಿಶೇಷ ಶಕ್ತಿ ಸಂಚಯವಾಗಿರುವುದನ್ನು ಕಂಡುಕೊಂಡ. ಆದರೆ ಇವೆಲ್ಲಾ ಕೆಲವು ನಿಮಿಷಗಳವರೆಗೆ ಅಷ್ಟೆ ! ಆಮೇಲೆ ನಿದ್ರೆ ಬಾರದ ಮಧ್ಯರಾತ್ರಿ, ಕರೆಂಟಿಲ್ಲದ ಮನೆಯಲ್ಲಿ ,ಇನ್ನೂ ಮದುವೆಯಾಗದ ನಲವತ್ತರ ಯುವಕ ಏನು ಮಾಡಬಹುದು ?!

ಅವನು ಮತ್ತೇನೂ ಮಾಡಲಿಲ್ಲ. ಅಮ್ಮನ ತೋಳು ಹಿಡಿದು ಎಬ್ಬಿಸಿದ. ಆಕೆ ಯಾವುದೋ ಸೆಳೆತಕ್ಕೆ ಸಿಕ್ಕ ಪ್ರಾಣಿಯಂತೆ ಕಂಡಳು. ಇಬ್ಬರೂ ಹೊರ ಜಗಲಿಯಲ್ಲಿ ಕುಳಿತುಕೊಂಡು ಕಣ್ಣಿನಲ್ಲಿ ಆಕಾಶವ ತುಂಬಿಸಿಕೊಳ್ಳತೊಡಗಿದರು. ಯೌವ್ವನದಲ್ಲೇ ಗಂಡನನ್ನು ಕಳೆದುಕೊಂಡ ಹೆಂಗಸು, ಇನ್ನೂ ಹೆಣ್ಣು ಸಿಗದ ಗಂಡಸು, ತಾರೆಗಳಿಗೆ ಕೊಕ್ಕೆ ಹಾಕಿದರು. ಚಂದ್ರನನ್ನು ಮೂಗಿನ ತುದಿಗೆ ಅಂಟಿಸಿಕೊಂಡವರಂತೆ ನೋಡಿದರು. ಮಂದವಾಗಿ ಬೀಸುತ್ತಿದ್ದ ಗಾಳಿಗೆ ತಮ್ಮ ನಿಟ್ಟುಸಿರು ಬೆರೆಸಿದರು. ದೇಹವನ್ನು ತೊರೆದು ಗಾಳಿಯಲ್ಲಿ ಅಡ್ಡಾಡುವ ಆತ್ಮಗಳಂತೆ ದೇಹವನ್ನು ತೊನೆದು ತೂಗಿಕೊಂಡರು. ಒಳಗಿನ ಎಲ್ಲ ಕಲ್ಮಶವನ್ನು ಹೊರಚೆಲ್ಲುವವರಂತೆ ಮೈಮರೆತರು. ಇಬ್ಬರಿದ್ದವರು ಒಬ್ಬರಾದರು. ಒಂಟಿಯಾಗಿ ತಮ್ಮನ್ನು ತಾವು ಕಳೆದುಕೊಂಡವರಂತೆ, ಕಾಲು ನೆಲಕ್ಕೂರದ ದೇವತೆಗಳಂತೆ -ಅಂಗಳ, ಆಕಾಶ, ಗಿಡಮರಗಳ ಮೇಲೆಲ್ಲ ಸುತ್ತಾಡಿ ಬಂದರು . ಮೋಡಗಳ ಹಾಸಿಗೆಯಲ್ಲಿ ಪವಡಿಸಿ ಸುಖಿಸಿದರು . ಇರುಳಿನ ಶಾಂತತೆಯನ್ನು ಎದೆಗೂಡಿನಲ್ಲಿ ತುಂಬಿಕೊಂಡರು.
ಮುಂಜಾವಿನ ಪಲ್ಲಟ ಆರಂಭವಾಯಿತು . ಬಚ್ಚಲೊಲೆಗೆ ಬೆಂಕಿ ಹಾಕಿ, ನೀರು ಕಾಯಿಸಲು ಹೊತ್ತಾಯಿತೆಂದು ಅಮ್ಮ ಒಳಗೆ ನಡೆದಳು . ‘ನೀರು ಕಾದ ಕೂಡ್ಲೇ ಎಬ್ಸು ’ಅಂತ ಇವನು ಮುಸುಕೆಳೆದುಕೊಂಡ. ಆ ದಿನ ಸೂರ್ಯನೂ ಏಳುವಾಗ ಕೊಂಚ ತಡಮಾಡಿದ.

Read more...

January 03, 2008

ಕುರುಕ್ಷೇತ್ರಕ್ಕೊಂದು ಆಯೋಗ

ಕ್ಷಗಾನ ತಾಳಮದ್ದಳೆಯಲ್ಲಿ ರಸಪೂರ್ಣ ಅರ್ಥಗಾರಿಕೆಗೆ ಹೆಸರಾದವರು ದೇರಾಜೆ ಸೀತಾರಾಮಯ್ಯ . ಅವರು ಬರೆದ ‘ಶ್ರೀರಾಮಾಯಣ ಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಪುಸ್ತಕಗಳು ಅಪೂರ್ವ ಒಳನೋಟಗಳ ರಾಮಾಯಣ -ಮಹಾಭಾರತದ ಮರುಸೃಷ್ಟಿಗಳು. ತಾಳಮದ್ದಳೆಯ ಕ್ಷೇತ್ರದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಇವರು, ನಂತರದ ೧೪ ವರ್ಷಗಳ ಬದುಕಿನಲ್ಲಿ ಬರೆದ ಪುಸ್ತಕಗಳಲ್ಲಿ ‘ಕುರುಕ್ಷೇತ್ರಕ್ಕೊಂದು ಆಯೋಗ’ವೂ ಒಂದು. ೧೯೮೧ರಲ್ಲಿ ಪ್ರಕಟವಾಗಿದ್ದ ಆ ಪುಸ್ತಕ ಕಳೆದ ವರ್ಷ ದ್ವಿತೀಯ ಮುದ್ರಣ ಕಂಡಿದೆ.

‘ಆಯೋಗವು ಕಲ್ಪಿತ ಮಾಧ್ಯಮವೇ ಆಗಿದ್ದರೂ ಅಲ್ಲಿ ವಿಚಾರಿಸಲ್ಪಡುವವರು ಮಹಾಭಾರತದ ಆ ಕಾವ್ಯಲೋಕದ ದೇಶಕಾಲಗಳಲ್ಲಿ ಅಸ್ತಿತ್ವವನ್ನುಳ್ಳವರು, ವಿವೇಚಿಸಲ್ಪಡುವ ಪುರಾವೆಗಳು, ಅದೇ ಅಲ್ಲಿನ ಪ್ರಾಸಂಗಿಕ ಘಟನೆಗಳು, ವಿಚಾರಮುಖದಿಂದ ವ್ಯಕ್ತಗೊಳ್ಳುವ ವ್ಯಕ್ತಿ ಸಹಜವಾದ ಅನಿಸಿಕೆಗಳು, ಪ್ರಸ್ತುತ ವೈಚಾರಿಕತೆಯ ಚಿಂತನೆಗಳು’ ಎನ್ನುತ್ತಾರೆ ಅವರು. ಧರ್ಮಪುರುಷನಾದ ಯಮನೇ ನ್ಯಾಯಮೂರ್ತಿಯಾಗಿರುವ ಈ ಆಯೋಗದ ಎದುರು, ಮಹಾಭಾರತದ ಮುಖ್ಯ ಪಾತ್ರಗಳು ಬಂದು ಮಾತಾಡುತ್ತವೆ. ಕೊನೆಯ ಮಾತು ಮಹಾಭಾರತವನ್ನು ಸೂತಪುರಾಣಿಕರ ಬಾಯಿಯಿಂದ ಕೇಳಿದ ಶೌನಕರದ್ದು ! ವಿಶೇಷವೆಂದರೆ ಎಲ್ಲ ಪಾತ್ರಗಳ ಹೇಳಿಕೆಗಳ ಕೊನೆಗೆ- ಪ್ರಾಸ್ತಾವಿಕ ಆರೋಪಗಳು, ಸಾಂದರ್ಭಿಕ ಆರೋಪಗಳೆಂದು ಪಟ್ಟಿ ಮಾಡಿ ಕಾರ್ಯಸಂಯೋಜಕ ಎಂಬ ಪಾತ್ರದ ಮೂಲಕ ಎಲ್ಲ ಹೇಳಿಕೆಗಳ ಪರಾಮರ್ಶೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ಸೀತಾರಾಮಯ್ಯರು ಎಲ್ಲ ಪಾತ್ರಗಳಲ್ಲೂ ಬಂದು ಇಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಪಾತ್ರಗಳ (ಯಕ್ಷಗಾನ ತಾಳಮದ್ದಳೆಯಲ್ಲಿ ಮಾಮೂಲಾಗಿ ಪ್ರಸ್ತಾಪವಾಗುವುದನ್ನು ಹೊರತುಪಡಿಸಿ)ಹೇಳಿಕೆಗಳ ಆಯ್ದ ಭಾಗಗಳ ಮೊದಲ ಕಂತು ಇಲ್ಲಿದೆ.
ದುರ್ಯೋಧನ
ಅಂಬಿಕೆಯ ಮಗ ಧೃತರಾಷ್ಟ್ರನು ಹುಟ್ಟು ಕುರುಡ, ಸಿಂಹಾಸನಕ್ಕೆ ಅನಧಿಕಾರಿ. ಅಂಬಾಲಿಕೆಯ ಪುತ್ರ ಪಾಂಡು ಮಹಾರೋಗಿ, ಪಟ್ಟಕ್ಕೆ ಆಗದು. ವಿದುರನು ದಾಸೀಪುತ್ರ, ಹೇಗೆ ಅರಸನಾಗುವುದು? ಆದುದರಿಂದ ‘ಮಧ್ಯಮಾರ್ಹತೆ’ ಎಂದೇನೋ ಕಾರಣ ಹುಡುಕಿ ಭೀಷ್ಮರೇ ಮುಂದೆ ನಿಂತು ಪಾಂಡುವಿಗೆ ಪಟ್ಟ ಕಟ್ಟಿದರು. ದಾಶರಾಜ ಪುತ್ರಿಯಾದ ಸತ್ಯವತಿಯು ಶಂತನು ಚಕ್ರವರ್ತಿಗೆ ವಿವಾಹಯೋಗ್ಯಳಾಗಿ ಮಹಾರಾಜ್ಞಿಯಾದಳು. ಅವಳ ಮಕ್ಕಳು ಮಹಾರಾಜರಾಗಿ ಸಿಂಹಾಸನವನ್ನೂ ಏರಿದರು. ಆದರೆ ಸಮರ್ಥನಿದ್ದರೂ ದಾಸೀಪುತ್ರನೆಂಬ ಕಾರಣಕ್ಕೆ ವಿದುರನು ಸಿಂಹಾಸನಕ್ಕೆ ಉಪೇಕ್ಷಿಸಲ್ಪಟ್ಟನು. ಧೃತರಾಷ್ಟ್ರ, ಪಾಂಡು ಈ ಇಬ್ಬರೂ ಸಿಂಹಾಸನಕ್ಕೆ ಆಗದವರು ಎಂದು ವೇದವ್ಯಾಸರೇ ಹೇಳಿದ್ದರಂತೆ. ಆದರೂ ಪಾಂಡುವಿಗೆ ಪಟ್ಟವಾಯಿತು. ಇಬ್ಬರೂ ಆಗದವರು, ಅವರಲ್ಲೇ ಒಬ್ಬನು ಬೇಕೆಂದಿದ್ದರೆ ಹಿರಿಯನೇ ಆಗಬಹುದಿತ್ತು, ಆಗಲಿಲ್ಲ !
ಸಿಂಹಾಸನಕ್ಕೆ ಅಯೋಗ್ಯರಾದವರು ವಿವಾಹಕ್ಕೂ ಅಯೋಗ್ಯರು, ಯಾಕೆ?ಅಯೋಗ್ಯತೆಯು ಮುಂದೆಯೂ ಅವರ ಸಂತತಿಯಲ್ಲಿ ಹರಿದು ಬರಬಾರದೆಂದು. ಅದಕ್ಕಾಗಿಯೇ ಅಲ್ಲವೇ ‘ಅಂಗವಿಕಲರಿಗೂ, ಮಹಾರೋಗಿಗಳಿಗೂ ಮದುವೆ ಮಾಡಿಸಬಾರದು’ ಎನ್ನುವುದು. ರಾಜಮನೆತನಗಳ ವಿಷಯದಲ್ಲಂತೂ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೂ ನನ್ನ ಅಪ್ಪನಿಗೂ ಚಿಕ್ಕಪ್ಪನಿಗೂ ಭೀಷ್ಮರು ಮದುವೆ ಮಾಡಿಸಿದರು.

*******
ಅಷ್ಟರಲ್ಲಿ ತಮ್ಮನಾದ ದುಶ್ಯಾಸನನು ಎದ್ದು ಅವಳ ಸೆರಗನ್ನು ಜಗ್ಗಿದ. ಅದು ಬೇಡವಿತ್ತು. ಆದರೂ ಅವನು ಒಂದಿಷ್ಟು ದುಡುಕಿಬಿಟ್ಟ. ‘ದ್ರೌಪದಿಯ ವಸ್ತ್ರಾಪಹಾರ’ ಎಂದು ವರ್ಣಿಸಿ ಹೇಳುವಷ್ಟು ಏನೂ ನಡೆಯಲಿಲ್ಲ. ಆದರೂ ಅಷ್ಟೇ ಆದರೂ ನಮ್ಮದು ಅಪರಾಧವೆಂದೇ ಹೇಳಬಹುದು. ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಳ್ಳಲೇಬೇಕು. ಆ ಅಪರಾಧಕ್ಕೆ ಅವಳ ದಿಟ್ಟತನವೂ ಒಂದು ಕಾರಣವಾಗಿ ಪರಿಣಮಿಸಿದೆ ಎಂಬುದನ್ನು ಸ್ಮರಿಸಿಕೊಳ್ಳಬೇಕು.
*******
ಕುರುಕ್ಷೇತ್ರದ ಯುದ್ಧದಲ್ಲಿ ಸತ್ತವರ ಬಂಧುಗಳು ಅತ್ತಿರಬಹುದು. ಗೆದ್ದವರಿಗೆ ರಾಜಪಟ್ಟವು ಸಿಕ್ಕಿರಬಹುದು. ಆದರೆ ಹುಟ್ಟಿ ಸಾಯುವವರೆಗೆ ಚೆನ್ನಾಗಿ ಬಾಳಿ ಬದುಕಿದವನು ನಾನು. ಅವರೂ ಬದುಕಿದರು. ಹೇಗೆ ಬಾಳಿದರೊ? ಅದನ್ನು ಇತಿಹಾಸ ಹೇಳಬೇಕು.

ಭೀಷ್ಮ
ನಮ್ಮ ತಂದೆ ಬಯಸಿದ್ದ ಆ ಹೆಣ್ಣು (ಯೋಜನಗಂಧಿ)ಅಪೂರ್ವವಾದ ತನ್ನ ತನುಗಂಧದಿಂದಲೇ ದಿವ್ಯ ಸಂಸ್ಕಾರದ ಪ್ರಭಾವವನ್ನು ವ್ಯಕ್ತಪಡಿಸುತ್ತಿರುವುದರಿಂದ ಮಹಾರಾಜ್ಞಿಯಾಗಲು ತಕ್ಕವಳೆಂದೇ ಚಕ್ರವರ್ತಿಗಳು ಮನಗಂಡಿರಬಹುದಾದ್ದರಿಂದ ಅಕುಲೀನತೆಯ ಪ್ರಶ್ನೆಗೆ ಅವಕಾಶವೆಲ್ಲಿ? ಈ ಮದುವೆಯು ಅಸಾಧುವಾದುದೇ ಆಗಿದ್ದರೆ, ನಮ್ಮ ತೀರ್ಥರೂಪರ ವಿಶೇಷವಾದ ಅಂತಃಶಕ್ತಿಯು ಹ್ರಾಸವಾಗಬೇಕಿತ್ತು. ಹಾಗೇನೂ ಆದಂತೆ ನನಗನಿಸುವುದಿಲ್ಲ. ‘ಸ್ವೇಚ್ಚಾಮರಣಿಯಾಗು’ ಎಂದು ನನ್ನನ್ನು ಹರಸಿ ಅನುಗ್ರಹಿಸಿದ್ದಾರೆ.

ಕರ್ಣ
‘ಕ್ಷತ್ರಿಯನಲ್ಲದ ಯಾರಿಗೂ ಇಂತಹ ಸಹಿಷ್ಣುತೆ ಬರಲಾರದು’ ಎಂದು ಹೇಳಿದ ಪರಶುರಾಮರು ಸಿಟ್ಟಿನಿಂದ ಶಾಪ ಕೊಟ್ಟರೂ, ಕ್ಷತ್ರಿಯನಿರಬೇಕು ಎಂದುದರಿಂದ ಕೌತುಕಪ್ರದವಾದ ಸಮಾಧಾನವೇ ಆಯಿತು.
ಪರಶುರಾಮ-ದ್ರೋಣ ಹಾಗೂ ಅರಣ್ಯ ಮಧ್ಯದಲ್ಲಿ ಶಾಪವಿತ್ತ ಬ್ರಾಹ್ಮಣ, ಹೀಗೆ ಮೂರು ಮಂದಿ ಬ್ರಾಹ್ಮಣರೇ ನನ್ನ ಉತ್ಕರ್ಷಕ್ಕೆ ಮಾರಕರಾದರು...ಆ ಜಾತಿಯ ಮೇಲೆ ಮಮಗೆ ತಿರಸ್ಕಾರವಿದ್ದರೂ ಅವರನ್ನು ಕರೆಕರೆದು ದಾನ ಕೊಡುತ್ತಿದ್ದೆ. ದಾನ ಮಾಡಿದ ಪುಣ್ಯಕ್ಕಾಗಿಯೂ ಅಲ್ಲ, ಆ ಕೊಳ್ಳುವವರ ಮೇಲಿನ ಅನುಕಂಪದಿಂದಲೂ ಅಲ್ಲ. ಆ ಬ್ರಾಹ್ಮಣರೆಂಬವರು ಬಂದು ನಿತ್ಯ ನನ್ನ ಮುಂದೆ ಕೈಚಾಚಲಿ ಎಂದು !
******
ಪಾಂಡವ ಪಕ್ಷವನ್ನು ಸೇರಬೇಕೆಂಬ ಕುಂತಿ-ಕೃಷ್ಣರ ಒತ್ತಾಯದ ಬಗ್ಗೆ ಸೀತಾರಾಮಯ್ಯರ ಕರ್ಣ ಯೋಚಿಸುವ ಬಗೆ ಹೀಗೆ -
ಶ್ರೀಕೃಷ್ಣನೆಂದಂತೆ ನಾನು ಮನಸ್ಸು ಮಾಡಿದ್ದರೆ ಈ ಯುದ್ಧವನ್ನು ನಿಲ್ಲಿಸಬಹುದಿತ್ತೋ ಏನೋ. ಅದಕ್ಕಾಗಿ ನಾನು ನನ್ನ ಸ್ವಾಮಿಗೆ ದ್ರೋಹ ಮಾಡಬೇಕಾಗಿತ್ತು. ನಮ್ಮ ನಮ್ಮ ಪ್ರತಿಜ್ಞೆಗಳೆಲ್ಲ ಹಾರಿಹೋಗಿ ದುರ್ಯಶಕ್ಕೇ ತುತ್ತಾಗಬೇಕಾಗಿತ್ತು. ಹಾಗೆ ಅದೆಲ್ಲವನ್ನೂ ಸಹಿಸಿಕೊಂಡು ಮೃತಪ್ರಾಯವಾಗಿ ಬದುಕುವುದಕ್ಕಿಂತ ಯುದ್ಧ ಮಾಡಿಯೇ ಸತ್ತರೇನಂತೆ? ಲೋಕದ ಕ್ಷೇಮಕ್ಕಾಗಿ ಎಂದು ಪ್ರತಿಜ್ಞೆಯನ್ನೆಲ್ಲಾ ಮೂಲೆಗೆ ತಳ್ಳಿ ಅಕೀರ್ತಿಯನ್ನು ಹೊತ್ತು ತನ್ನತನವನ್ನು ಕಳೆದುಕೊಳ್ಳುವುದಾದರೆ ಹಿಂದೆಯೇ ನಮ್ಮ ಹಿರಿಯರು ಆ ಕೆಲಸವನ್ನು ಮಾಡಬಹುದಾಗಿತ್ತು ! ಮಹಾರಾಜ್ಞಿ ಸತ್ಯವತೀದೇವಿಯವರೇ ಅಂದು ಭೀಷ್ಮರಿಗೆ ಹೇಳಿದ್ದರಂತೆ....‘ಮದುವೆಯಾಗು , ಸಿಂಹಾಸನವನ್ನೇರು, ವಂಶವನ್ನು ಬೆಳೆಸು, ಸಾಮ್ರಾಜ್ಯವನ್ನಾಳು..’ ಎಂದು. ಭೀಷ್ಮರು ಒಪ್ಪಲಿಲ್ಲ. ಮತ್ತೆ ‘..ನಿನ್ನ ತಮ್ಮನ ಕ್ಷೇತ್ರಗಳಲ್ಲಿ ನಿಯೋಗದ ಮೂಲಕ ಸಂತತಿಯನ್ನಾದರೂ ಕರುಣಿಸು’ ಎಂದರಂತೆ. ಅದಕ್ಕೂ ಭೀಷ್ಮರು ಒಡಂಬಡಲಿಲ್ಲ. ಕೊನೆಯ ಘಳಿಗೆಯಲ್ಲಾದರೂ ಭೀಷ್ಮರು ಪಟ್ಟವೇರಿದ್ದರೆ ಯುದ್ಧವು ತಪ್ಪುತ್ತಿತ್ತೋ ಏನೋ? ಹಾಗೆಂದು ಅವರಿಗೆ ಯಾಕೆ ಹೇಳಲಿಲ್ಲ? ಹೇಳಿದರೂ ಅವರು ಕೇಳುತ್ತಿರಲಿಲ್ಲವೆಂದೇ ಹೇಳಲಿಲ್ಲವೋ ಏನೋ? ಮತ್ತೆ ನಾನು ಕೇಳಿಯೇನೆಂದು ನಿರೀಕ್ಷಿಸಿದ್ದು ಯಾಕೆ? ಅಂತಹ ನಿರೀಕ್ಷೆಯೇನೂ ಇದ್ದಿರಲಾರದು. ಆದರೂ ಪ್ರಲೋಭನವನ್ನು ಒಡ್ಡಿದ್ದು ಯಾಕೆ? ಕಾನೀನನಾಗಿ ಹುಟ್ಟಿದವನಿಗೆ ಅವನ ತಾಯಿಯ ಗಂಡನ ಸೊತ್ತಿನಲ್ಲಿ ಹಕ್ಕು ಬರುತ್ತದಾದರೆ ಹಸ್ತಿನಾವತಿಗೆ ವೇದವ್ಯಾಸರೇ ಹಕ್ಕುದಾರರಾಗುವುದಿಲ್ಲವೆ? ...ಇದನ್ನೆಲ್ಲ ತಿಳಿದೂ ತಿಳಿದು ಶ್ರೀಕೃಷ್ಣನು ನನಗೆ ಇಂತಹಾ ಉಪದೇಶವನ್ನು ಮಾಡಿದ ಯಾಕೆ? ಪಾಂಡವರು ನನ್ನ ತಮ್ಮಂದಿರೆಂದು ನನಗೆ ತಿಳಿದ ಮೇಲೆ ಅವರ ಕುರಿತಾಗಿ ಹೆಚ್ಚಿನ ವಾತ್ಸಲ್ಯ ಉಂಟಾಗದಿದ್ದರೂ ದ್ವೇಷವು ಸಾಕಷ್ಟು ಕಡಿಮೆಯಾದೀತೆಂದು ಅವನು ಭಾವಿಸಿರಬಹುದಾದುದು ಸಹಜವೇ ಆಗಿತ್ತು. ಪಾಂಡವರ ಪಕ್ಷಕ್ಕೆ ನಾನು ಹೋಗುವವನಲ್ಲವಾದರೂ ಇದ್ದ ಕೌರವ ಪಕ್ಷದ ಬಲವು ತಕ್ಕಷ್ಟು ದುರ್ಬಲಗೊಳ್ಳಬಹುದೆಂದು ಅವನೆಣಿಸಿರಬಹುದಾದುದು ನಿಜವೇ ಆಗಿತ್ತು.
*******
ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಕೈಯನ್ನು ಹಿಂದಿನಿಂದ ಹೋಗಿ ಕತ್ತರಿಸು ಎಂದು ಸೇನಾಪತಿ ದ್ರೋಣರು ಕರ್ಣನಿಗೆ ಆದೇಶಿಸಿದ ಬಗ್ಗೆ -
ಆ ಕೆಲಸ ಆಗಲೇಬೇಕಿದ್ದರೆ ಯಾರೂ ಮಾಡಬಹುದಾಗಿತ್ತು. ಆದರೂ ಆಜ್ಞೆಯಾದದ್ದು ನನಗೆ. ಯಾಕೆ? ಎಂಥಾ ನಿಕೃಷ್ಟವಾದ ಕೆಲಸವನ್ನಾದರೂ ಉತ್ತಮ ವರ್ಣೀಯರೆಂಬವರು ಮಾಡಿಸುತ್ತಾರೆ. ಆದರೆ ಮಾಡುವುದಕ್ಕೆ ಕೀಳು ವರ್ಣೀಯನೊಬ್ಬ ಬೇಕು, ಅಷ್ಟೆ. ಅಲ್ಲಿ ನಡೆದದ್ದೂ ಹಾಗೆಯೇ ಇರಬೇಕು.
ಅರ್ಜುನನ್ನು ಕೊಲ್ಲಲೆಂದೇ ಕರ್ಣನು ತೆಗೆದಿಟ್ಟಿದ್ದ ಇಂದ್ರದತ್ತವಾದ ಮಹಾಶಕ್ತಿಯನ್ನು ಘಟೋತ್ಕಚನನ್ನು ಕೊಲ್ಲಲು ಪ್ರಯೋಗಿಸಬೇಕೆಂದು ಕೌರವನ ಮೂಲಕ ಕರ್ಣನಿಗೆ ಹೇಳಿಸಿದರು ದ್ರೋಣಾಚಾರ್ಯರಿಗೆ ಕರ್ಣನ ಪ್ರತಿಕ್ರಿಯೆ - ಭೀಮಾರ್ಜುನರ ಮಕ್ಕಳಿಬ್ಬರು ಸತ್ತರು. ಅರ್ಜುನನ್ನು ಬದುಕಿಸಿದರು.
( ೧೬೬ ಪುಟಗಳ ಈ ಪುಸ್ತಕದ ಬೆಲೆ ರೂ.೧೨೦. ಪ್ರತಿಗಳು ಬೇಕಿದ್ದರೆ ಪ್ರಕಾಶಕರ ಸಂಪರ್ಕಕ್ಕೆ - ೯೪೪೮೨೩೯೫೧೯)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP