December 27, 2007

ಮುಮ್ಮಡಿ ಟಾಮಿಯ ಸ್ಮರಣೆ !

'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’ ಹಾಡನ್ನು ಎಲ್ಲರೂ ಹಾಡುತ್ತಿದ್ದ ಕಾಲದಲ್ಲಿ ಎಲ್ಲ ನಾಯಿಗಳ ಹೆಸರೂ ಟಾಮಿಯೆಂದೇ ಇತ್ತು. ನಮ್ಮ ಮನೆಯ 'ಮುಮ್ಮಡಿ ಟಾಮಿ’ಗಂತೂ ಚಪ್ಪಲಿ ಕಚ್ಚುವ ಚಟ. ಬಹಳ ಅಪರೂಪಕ್ಕೆ ಮನೆಗೆ ಬಂದಿದ್ದವರ ಚಪ್ಪಲಿಯನ್ನೇ ಇದು ಹಾರಿ ಎಗರಿಸಿದ ನಂತರವಂತೂ ಅದಕ್ಕೊಂದು ಮುಕ್ತಿ ಕಾಣಿಸಬೇಕೆಂದೇ ಅಪ್ಪ ನಿರ್ಧರಿಸಿದರು. ಹಾಗೆ ಬೆಳಬೆಳಗ್ಗೆ ನಾಯಿಯನ್ನು ಐದು ಕಿಮೀ ದೂರದ ಗುಡ್ಡದ ತುದಿಯಲ್ಲಿ ಬಿಟ್ಟು ಬರುವುದೆಂದು ಆ ನೆಂಟರನ್ನೂ ಒಡಗೂಡಿಕೊಂಡು ಹೋದರು. ಮಧ್ಯಾಹ್ನವಾದರೂ ಇಬ್ಬರ ಸುಳಿವೇ ಇಲ್ಲ. ಎಲಾ ಎಲಾ, ಅಂದುಕೊಂಡು ದಾರಿ ಬದಿಗೆ ಹೋಗಿ ನೋಡಿದರೆ ಟಾಮಿ ಬಾಲ ಅಲ್ಲಾಡಿಸುತ್ತಾ ನಿಂತಿತ್ತು . ಹತ್ತು ನಿಮಿಷಗಳ ನಂತರ ಅಪ್ಪ ಬಂದರು ! ವಾಸನಾ ಗ್ರಹಿಕೆಯಲ್ಲಿ ಈ ನಾಯಿಗಳು ಪ್ರಚಂಡವಲ್ವೆ?

ಮಕ್ಕಳ ಪತ್ರಿಕೆ 'ಬಾಲಮಂಗಳ’ ಆಗ ನಮ್ಮಲ್ಲೆಲ್ಲ ಭಾರೀ ಜನಪ್ರಿಯ. ಅಲ್ಲಿ ಬರುವ ಸರ್ವಶಕ್ತ -ದುಷ್ಟಶಿಕ್ಷಕ ಇಲಿರಾಯ 'ಡಿಂಗ’ ಹಾರಲೂಬಲ್ಲ. ಬಾಲಮಂಗಳದಲ್ಲೇ ಬರುವ ಇನ್ನೊಂದು ಕತೆಯ ಕುದುರೆಯ ಹೆಸರು 'ಡಿಕ್ಕಿ’ ಅಂತ. ಹಾಗೆ ನಮ್ಮ ಮನೆ ನಾಯಿಗಳಿಗೂ ಡಿಂಗ-ಡಿಕ್ಕಿ ಅನ್ನೋ ಹೆಸರುಗಳು ಬಂದವು. ಈಗಿನಂತೆ 'ಜಾತಿ ನಾಯಿ’ಗಳೇ ಬೇಕು ಅನ್ನುವ ಹುಚ್ಚು ಹಳ್ಳಿಗಳಿಗಿನ್ನೂ ಬಂದಿರಲಿಲ್ಲ. ಹಾಗಾಗಿ 'ನಾಯಿ ಜಾತಿ’ಯವೆಲ್ಲಾ ಮುಕ್ತವಾಗಿ ಓಡಾಡಿಕೊಂಡಿದ್ದವು. "ಯಾರೇ ಬಂದರೂ ನಾಯಿ ಬೊಗಳಬೇಕು’ ಅನ್ನುವುದಷ್ಟೇ ಮನೆಯವರ ನಿರೀಕ್ಷೆ. ಆದರೆ ಬೆಕ್ಕಿನಂತಿರುವವರ ಮನೆಗಳಿಗೂ ಆಲ್ಸೇಷನ್, ಡಾಬರ್‌ಮನ್, ಪೊಮೇರಿಯನ್, ಮುದೋಳ ನಾಯಿಗಳು ಬರತೊಡಗಿದಂತೆ ನಾಯಿ ಸಾಕುವುದೂ ಒಂದು ಪ್ರತಿಷ್ಠೆ ಅನಿಸತೊಡಗಿತು. 'ಅವರ ಮನೆಯ ನಾಯಿ 'ಭೀಮ’ ತೋಟದಲ್ಲಿ ಎಲ್ಲೇ ತೆಂಗಿನಕಾಯಿ ಬಿದ್ದರೂ ತಕ್ಷಣ ಓಡಿಹೋಗಿ ಕಚ್ಚಿಕೊಂಡು ಬರುತ್ತದೆ, ಇವರ ಮನೆ ನಾಯಿ, ಕಣ್ಣೆದುರು ಅನ್ನವಿದ್ದರೂ ಯಜಮಾನ ಹೇಳದೆ ತಿನ್ನುವುದಿಲ್ಲವಂತೆ, ಮೇಲಿನ ಗದ್ದೆ ಮನೆಯವರ ನಾಯಿ ಕಾಲೆತ್ತದೆ ಉಚ್ಚೆ ಹೊಯ್ಯುತ್ತದಂತೆ, (ಸುಳ್ಳಲ್ಲ ನಂಬಿ !) ದೇವಸ್ಥಾನದ ಪೂಜೆ ಭಟ್ರ ಮನೆ ನಾಯಿಗೂ ವಾರಕ್ಕೆ ಒಂದುಸಲ ಮೀನು ತಂದುಕೊಡ್ತಾರಂತೆ ! ’ ಹೀಗೆ ನಾಯಿಸುದ್ದಿಗಳು ನಿಧಾನವಾಗಿ ಎಲ್ಲೆಡೆ ಹರಡತೊಡಗಿದವು.

ಇದರಿಂದಾಗಿ ಹಳ್ಳಿ ನಾಯಿಗಳಿಗೂ ರಾಜ, ರಾಣಿ, ಟೈಗರ್, ಬಾಕ್ಸರ್, ಲೂಸಿ, ಟೈಸನ್ ಎಂಬ ಹೆಸರುಗಳನ್ನು ಕರುಣಿಸಲಾಯಿತು. ಸಕಲೇಶಪುರದ ಯಾವುದೋ ಎಸ್ಟೇಟು ಧಣಿಗಳ ಮನೆಯಿಂದ, ನನ್ನ ಅಜ್ಜನಮನೆಗೆ ಬಂದ ಎರಡು ಮುದೋಳ ನಾಯಿಗಳಂತೂ ಸುತ್ತಲಿನ ನೂರಾರು ಮನೆಗಳಲ್ಲಿ ಪ್ರಖ್ಯಾತಿ ಪಡೆದವು. ಬಹಳ ಸ್ಲಿಮ್ ಆಗಿ, ಉದ್ದಕ್ಕೆ ಎತ್ತರಕ್ಕೆ ಬೆಳೆವ ಆ ಜಾತಿನಾಯಿ ಮರಿಗಳನ್ನು , ದೇವರನ್ನು ತಂದಂತೆ ಸಕಲೇಶಪುರದಿಂದ ತರಲಾಯಿತು. ಅವುಗಳಿಗಾಗಿ ಹೊಸ ಗೋಣಿ, ಹೊಸ ತಟ್ಟೆ ಮತ್ತು ಅತ್ತೆ ಕೈಯಾರೆ ಹೊಲಿದ ಹೊಸ ಹೊದಿಕೆ. ಅವುಗಳಿಗೆ ಕೊಡುವ ನಾಯಿ ಬಿಸ್ಕೆಟನ್ನು ಕೆಲಸದವನೊಬ್ಬ ಕದ್ದ್ದು ತಿನ್ನುತ್ತಾನೆ ಎಂಬುದಂತೂ, ಬಳಿಯ ಅಂಗಡಿಕಟ್ಟೆಯಲ್ಲಿ ಸಂಜೆಯ ಹೊತ್ತು ಸೇರುವ ಜನರ ಮಾತಿಗೆ ರಸಗವಳವಾಯಿತು ! ಹೀಗೆ ಹಳ್ಳಿಯಲ್ಲೂ ನಾಯಿಗಳು ಇತಿಹಾಸದ ಪುಟ ಸೇರುವುದಕ್ಕೆ ಸಿದ್ಧವಾದದ್ದು ಕೆಲವು ಹಳಬರ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಯಿತು.

'ಹಾಸಿಗೆಗೆಲ್ಲಾ ನಾಯೀನ ಕರಕೊಂಡು ಬರೋದು ಅಂದ್ರೆ ಎಂತದು ಮಾರಾಯ್ರೆ , ಈ ನಾಯಿ ಜನ್ಮ , ಅಂತ ಇನ್ನು ಬೈಲಿಕ್ಕೂ ಸಾಧ್ಯ ಇಲ್ಲ ! ಎಷ್ಟೇ ಆದ್ರೂ ನಾಯಿ ಕಾಲೆತ್ತದೆ, 'ಅದು’ ಕಂಡಾಗ ಬಾಯಿ ಹಾಕದೆ ಇರ್‍ತದಾ?’ ಅಂತ ಕೆಲವರು ಆಡಿಕೊಂಡರು. ಆದರೆ ಯಾರ ಆಕ್ಷೇಪಗಳಿಗೂ ಲಕ್ಷ್ಯ ಕೊಡದೆ ಸಮಾಜದಲ್ಲಿ ನಾಯಿಯ ಸ್ಥಾನಮಾನ ಮಾತ್ರ ಹೆಚ್ಚಾಗುತ್ತಾ ಬಂತು. ನಮ್ಮ ಬಳಿ ಇರುವುದು ಬ್ಲ್ಯಾಕ್ ಅಂಡ್ ವೈಟ್ ಮೊಬೈಲ್ ಅಂತ ತೋರಿಸಿಕೊಳ್ಳಲು ನಾಚಿಕೆಯಾದಂತೆ, ನಮ್ಮ ಮನೆಯಲ್ಲಿರುವುದು ಊರು (ಕಂತ್ರಿ !)ನಾಯಿ ಅಂತ ಹೇಳಿಕೊಳ್ಳಲು ಬಹುತೇಕರು ಹಿಂಜರಿಯತೊಡಗಿದರು. 'ಕುಲ್ಕುಂದ ಜಾತ್ರೆ’ಯೆಂದೇ ಪ್ರಸಿದ್ಧವಾಗಿದ್ದ ದನದ ಜಾತ್ರೆಗೆಲ್ಲ ಮಂಕುಬಡಿದರೂ, ಬೆಂಗಳೂರಿನಲ್ಲಿ 'ಶ್ವಾನ ಪ್ರದರ್ಶನ’, ಅಮೆರಿಕದಲ್ಲಿ ನಾಯಿಗಳ ಫ್ಯಾಷನ್ ಸ್ಪರ್ಧೆ ಅಂತೆಲ್ಲ ಜನ ಪತ್ರಿಕೆಗಳಲ್ಲಿ ಓದತೊಡಗಿದ ನಂತರವಂತೂ ಶ್ವಾನ ಪ್ರಜ್ಞೆ ಜನರಲ್ಲಿ ಬೇರೂರತೊಡಗಿತು. ಟಿವಿ, ಫ್ರಿಜ್ಜು , ಸೋಲಾರ್‌ನ ಅವಶ್ಯಕತೆಗಳಂತೆ 'ಜಾತಿ ನಾಯಿ’ಯೂ ಒಂದು ಅವಶ್ಯ ಸಂಗತಿಯಾಯಿತು. ಹೀಗೆಲ್ಲ ಆಗಿ, ಮನೆ ಕಾಯಬೇಕಾದ ನಾಯಿಯನ್ನು , ಮನೆಯವರೇ ಕಾಯಬೇಕಾದ ಪರಿಸ್ಥಿತಿ ಬಂದದ್ದು (ಕು)ಚೋದ್ಯವಲ್ವೆ ? ಹಾಗಿದ್ದರೆ ಇದನ್ನೂ 'ನಾಯಿಪಾಡು’ ಅನ್ನಬಹುದೇ? (ವಿದ್ವಾಂಸರು ಪರಿಶೀಲಿಸಬೇಕು !)

ಶ್ವಾನ ಸಂಕುಲ ಬೆಳೆದು ಬಂದ ಹಾದಿಯ ವಾಸನೆ ಹಿಡಿದು ಮೊನ್ನೆ ಮೊನ್ನೆ ಮನೆಗೆ ಹೋಗಿದ್ದಾಗ, ತಮ್ಮ ತಂದಿರುವ ಆಲ್ಸೇಷನ್ ಮರಿ ನನ್ನ ಹೊಸ ಚಪ್ಪಲಿ ಕಚ್ಚಿ , ನಾಯಿ ಬಾಲ ಡೊಂಕು ಅನ್ನೋದು ಸಾಬೀತಾಯಿತು. ಮುಮ್ಮಡಿ ಟಾಮಿಗೆ ಈ ಅಕ್ಷರ ಕಂಬನಿ !

Read more...

December 22, 2007

ಮಾತಿಗೆ ಸೋತ ಕರ್ನಾಟಕ

ಸಾಹಿತಿ, ಕಲಾವಿದರು ಸಮಾಜಕ್ಕೆ ಸ್ಪಂದಿಸುವ ರೀತಿ ಹೇಗಿರಬೇಕು ಅನ್ನುವ ಬಗ್ಗೆ ಇತ್ತೀಚೆಗಂತೂ ತೀರಾ ಗೊಂದಲಗಳಾಗಿವೆ. ಅವರು ಏನೇ ಬರೆಯಲಿ, ಮಾಡಲಿ- ಪ್ರಸಿದ್ಧರಾದ ನಂತರ, ಹಿರಿಯರು ಅನ್ನಿಸಿಕೊಂಡು ಪ್ರಶಸ್ತಿ, ಹೊಗಳಿಕೆ, ಜನರ ಅಭಿಮಾನ ಪಡೆದುಕೊಂಡ ಬಳಿಕ, ಸಮಾಜದ ಸಂಕಷ್ಟಗಳಿಗೂ ಸ್ಪಂದಿಸಬೇಕು ಎನ್ನುವುದಂತೂ ಸ್ಪಷ್ಟ. ಆದರೆ ಹೇಗೆ ಎಂಬುದೇ ಪೇಚಿಗೆ ಸಿಲುಕಿಸುವ ಪ್ರಶ್ನೆ !

ಇನ್ನು ಮುಂದೆ ಸಾಹಿತ್ಯ ವೇದಿಕೆಗಳನ್ನು ಹತ್ತುವುದಿಲ್ಲವೆಂದು ಒಮ್ಮೆ ಘೋಷಿಸಿದ್ದ ಯು.ಆರ್.ಅನಂತಮೂರ್ತಿಯವರು ತಮ್ಮ ಮಾತು ಸೋತ ಭಾರತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ , ಮಾತಿನ ಅಖಾಡದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಘೋಷಿಸಿದರು. ಪೇಪರ್‍ನೋರು ಏನಾದ್ರೂ ಬರೀರಿ, ಯಾರು ಏನಾದ್ರೂ ಹೇಳ್ಕಳಿ ತಾನಂತೂ ಮಾತಾಡಿಯೇ ತೀರುತ್ತೇನೆ ಅಂದರು. ಅಂತೆಯೇ ಅನಂತಮೂರ್ತಿಯವರು ಎಲ್ಲವನ್ನೂ ಚೆಂಡಾಡಿದ್ದು ೨೧ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್‍ಯಕ್ರಮದಲ್ಲಿ ! ಅಲ್ಲಿ ಸಾಹಿತ್ಯದ ಪೊರೆ ಕಳಚಿ ಸಕಾಲಿಕವಾಗಿ ಮಾತಾಡಿದ್ದು:

ಒಟ್ಟಾಗಿ ಹಿಂಸೆ ಮಾಡಿದ್ರೆ ಶಿಕ್ಷೆ ಆಗಲ್ಲ !
ಎಡದವರು ಭವಿಷ್ಯದ ದೃಷ್ಟಿಯಿಂದ ನಕ್ಸಲ್ ಕೆಲಸಗಳಲ್ಲಿ ತೊಡಗಿದ್ದರೆ, ಬಲದವರು ಭೂತಕಾಲದ ರಾಮನನ್ನು ಮುಂದಿಟ್ಟುಕೊಂಡಿದ್ದಾರೆ. ಕೋಮುವಾದ ರೇಬೀಸ್‌ನಂತಾಗಿದ್ದರೆ, ನಕ್ಸಲ್ ಚಟುವಟಿಕೆ ಕ್ಯಾನ್ಸರ್ ಇದ್ದಂಗೆ. ಹೀಗೆ ಎಡ-ಬಲದ ಹಿಂಸೆಯ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ತಸ್ಲಿಮಾ ಬಂಗಾಲಿ. ನಾವೆಲ್ಲರೂ ನಂಬುವ ಸೆಕ್ಯುಲರಿಸಂಗಾಗಿ ಆಕೆ ಬಹಳ ಧೈರ್ಯ ಮಾಡಿದ್ದಾಳೆ. ಗ್ರೇಟ್ ನಾವೆಲ್ ಬರೆದಿದ್ದಾಳೆ. ಬಂಗಾಲದಲ್ಲೇ ಇರಬೇಕು ಅಂತ ಆಸೆ ಪಡ್ತಾಳೆ. ಅವಳಿಗೆ ಅವಕಾಶ ಇಲ್ಲದಂಗೆ ನಮ್ಮ ಮನಮೋಹನ್‌ಸಿಂಗ್ ಸರಕಾರ ಮಾಡಿದೆ. ಅವಳು ಬಂಗಾಲದಲ್ಲಿ ಇರಕ್ಕೆ ಸಾಧ್ಯವಿಲ್ಲದಂಗೆ ಅಲ್ಲಿನ ಕಮ್ಯುನಿಸ್ಟರು ಮಾಡಿದ್ದಾರೆ. ಇಬ್ರಿಗೂ ನಾಚಿಕೆ ಆಗಬೇಕು. ನರೇಂದ್ರ ಮೋದಿ ಮುಖವಾಡದ ಮೋದಿ ಆಗಿದ್ದಾನೆ. ಮೊನ್ನೆ ಇಲೆಕ್ಷನ್‌ನಲ್ಲಿ ಎಲ್ರೂ ಮೋದಿನ ಮುಖವಾಡನೇ ಹಾಕ್ಕೊಂಡಿದ್ರು. ನನಗೇನನಿಸ್ತು ಅಂದ್ರೆ ಮೋದಿನೂ ಕೂಡಾ ಮೋದಿಯ ಮುಖವಾಡ ಹಾಕ್ಕೊಂಡಿದ್ದಾನೆ ಅಂತ ! ವಾಜಪೇಯಿಯವರಿಗೆ, ಅಡ್ವಾಣಿಯವರಿಗೂ ಒಂದು ಹ್ಯೂಮನ್ ಫೇಸ್ ಇದೆ. ಆದರೆ ಮೋದಿಗಿಲ್ಲ. ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಜಿನ್ನಾನ ಹೊಗಳಿದ್ರು. ತಾನು ರಿಟೈರಾದ ಮೇಲೆ ಭಾರತಕ್ಕೆ ಬಂದು ವಾಸಿಸ್ತೇನೆ. ತನ್ನ ಮೂಲ ಮನೇನ ನಾಶ ಮಾಡಬೇಡಿ ಅಂತ ಜಿನ್ನಾ ನೆಹರೂಗೆ ಪತ್ರ ಬರೆದರು ಅಂತ ಒಂದು ಕತೆಯಿದೆ. ಭಾರತ-ಪಾಕಿಸ್ತಾನ ವಿಭಜನೆಯಾಗಿದೆ ಎಂಬ ಕಲ್ಪನೆಯೇ ಇಲ್ಲದೆ, ಭಾರತದ ರಾಯಭಾರಿಗಳ ಜತೆಗಿನ ಶಿಷ್ಟಾಚಾರದ ನಡವಳಿಕೆಯೇ ಜಿನ್ನಾರಿಗೆ ಮರೆತುಹೋಗಿರುತ್ತಿತ್ತಂತೆ. These are all good stories !

ನಾನು ಇತ್ತೀಚೆಗೆ ಗುಜರಾತ್‌ಗೆ ಹೋಗಿದ್ದೆ. ಅಲ್ಲಿ ಎಷ್ಟು ಜನ ಮನೆಮಠ ಕಳ್ಕೊಂಡಿದ್ದಾರೆ, ಎಷ್ಟು ಜನ ತೊಂದ್ರೆ ಅನುಭವಿಸಿದ್ದಾರೆ, ಗರ್ಭಿಣಿ ಹೆಂಗಸಿಗೇ ತ್ರಿಶೂಲ ಹಾಕಿದ್ದಾರೆ. ಹಿಂದುಗಳನ್ನು ಕೊಂದ ಮುಸ್ಲಿಮರಿಗೂ ಶಿಕ್ಷೆಯಾಗಲಿಲ್ಲ, ಮುಸ್ಲಿಮರನ್ನು ಕೊಂದ ಹಿಂದುಗಳಿಗೂ ಶಿಕ್ಷೆಯಾಗಲಿಲ್ಲ. ಇಂದಿರಾಗಾಂಧಿ ಸತ್ತಾಗ ಸಿಕ್ಖರನ್ನು ಕೊಂದ್ರು. ಆಗ ಯಾರಿಗೂ ಶಿಕ್ಷೆ ಆಗಲಿಲ್ಲ. ಗುಜರಾತ್‌ನಲ್ಲೂ ಹಿಂದುಗಳು, ಮುಸ್ಲಿಮರನ್ನು ಕೊಂದವರಿಗೆ ಶಿಕ್ಷೆಯಾಗಲಿಲ್ಲ . ಅಂದರೆ ಈ ದೇಶದಲ್ಲಿ ಒಟ್ಟಾರೆಯಾಗಿ ಹಿಂಸೆ ಮಾಡಿದ್ರೆ ಶಿಕ್ಷೆ ಆಗಲ್ಲ ಅಂತ ಎಲ್ಲರಿಗೂ ಗೊತ್ತಾಗಿದೆ. ತಸ್ಲಿಮಾಗೆ ರಕ್ಷೆ ಮೋದಿಗೆ ಶಿಕ್ಷೆ ಅಂತ ಹೇಳಿದ ಕೂಡಲೇ ನಾನು ಎಲ್ಲರ ವಿರೋಧ ಕಟ್ಟಿಕೊಳ್ಳುತ್ತೇನೆ. ಅದ್ರೂ ಪರವಾಗಿಲ್ಲ. ಅಂತಹ ಕೆಲಸ ಆದಾಗಲೇ ಹಿಂದು ಧರ್ಮ ಮತ್ತೆ ತನ್ನ ಸನಾತನ ಸ್ವರೂಪವನ್ನ ಪಡ್ಕೊಳ್ಳತ್ತೆ. ಅದಕ್ಕೆ ಎಲ್ಲರನ್ನೂ ಒಳಗೊಳ್ಳುವ, ಶಿಶುನಾಳ ಷರೀಫರಂಥವರನ್ನು ಸೃಷ್ಟಿಸುವ, ದೇವರೇ ಇಲ್ಲ ಅನ್ನುವ ಅಲ್ಲಮನನ್ನು ಸೃಷ್ಟಿಸುವ ಶಕ್ತಿ ಬರತ್ತೆ. ಈಗ ಎಲ್ಲ ಜನರೇನೂ ಕೆಟ್ಟವರಾಗಿಲ್ಲ. ಆದರೆ ವಾತಾವರಣ ಕೆಟ್ಟುಹೋಗಿದೆ. ತಸ್ಲಿಮಾಗೆ ರಕ್ಷೆ-ಮೋದಿಗೆ ಶಿಕ್ಷೆ ಕೊಡಲಾಗದ ವಾತಾವರಣ ಸೃಷ್ಟಿಯಾಗಿದೆಯಲ್ಲ, ಇದು ಬಹಳ ಕೆಟ್ಟದು.

ಒಳ್ಳೆಯವನಾಗಿರಬೇಕೆಂಬ ಒತ್ತಾಯ
ಈಗಿನ ದುರಾಡಳಿತ ನೋಡಿದಾಗ ಹಿಂದೆಲ್ಲಾ ಹೀಗಿರಲಿಲ್ಲ ಅನ್ಸತ್ತೆ. ವಿರೋಧ ಪಕ್ಷದಲ್ಲಿದ್ದ ಗೋಪಾಲ ಗೌಡರು ಒಂದ್ಸಾರಿ ಬಜೆಟ್ ಸ್ಪೀಚನ್ನ ಮೆಟ್ನಲ್ಲಿ ಹೊಡದು ಗಲಾಟೆ ಮಾಡಿದ್ರು. ಆಗ ಆಡಳಿತದಲ್ಲಿದ್ದ ನಿಜಲಿಂಗಪ್ಪ ಪಕ್ಷದವರು ಅದಕ್ಕೆ ಬಹಳ ವಿರೋಧ ವ್ಯಕ್ತಪಡಿಸಿ, ಅದಕ್ಕೆ ಶಿಕ್ಷೆಯಾಗಬೇಕು ಅಂದ್ರು. ಆಗ ಗೋಪಾಲಗೌಡರು "ನಾನಿದನ್ನ ಬ್ಲಡ್‌ಪ್ರೆಶರ್‌ನಿಂದ ಮಾಡಿದೆ. ನೀವಿದನ್ನು ಕ್ಷಮಿಸಬೇಕು ಅಂತ ಕೂಡಾ ನಾನು ಕೇಳಲ್ಲ. ನೀವು ಕ್ಷಮಿಸಿದ್ರೆ ಮತ್ತೊಂದ್ಸಾರಿ ಈ ತಪ್ಪನ್ನ ಮಾಡಬಹುದಾದ ಪ್ರಲೋಭನೆ ನನ್ನಲ್ಲಿ ಉಳಿದಿರತ್ತೆ’ ಅಂದರು. ಆಗೆಲ್ಲಾ ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ತಾ ಇದ್ರು. ನನ್ನ ಬಹಳ ಸ್ನೇಹಿತರು ಎಂ.ಪಿ. ಪ್ರಕಾಶ್. ಅವರು ತಮ್ಮ ತಪ್ಪನ್ನ ಒಪ್ಪಿಕೊಳ್ತಾ ಇದ್ದಾರಾ? ಜನ ಎಲ್ಲಾ ಒಳ್ಳೆಯವರೇ. ಹಿಂದೆ, ಒಳ್ಳೆಯವನಾಗಿದ್ದವನಿಗೆ ಒಳ್ಳೆಯವನಾಗಿಯೇ ಇರಬೇಕೆಂಬ ಒತ್ತಾಯ ಇತ್ತು. ಈಗ ಅದಿಲ್ಲ. "ಒಳ್ಳೆತನ ಸಹಜವೇನಲ್ಲ, ಅದು ಅಸಹಜವೂ ಅಲ್ಲ’ ಅಂತ ಬರೆದರು ಅಡಿಗರು. ಹಿಂದಿನ ರಾಜಕೀಯದಲ್ಲಿ opponent ಇರ್‍ತಾ ಇದ್ದ. enemy ಇರಲಿಲ್ಲ. ಈಗ ಬರೀ ವೈರಿಗಳೇ ತುಂಬಿದ್ದಾರೆ. ರಾಜಕಾರಣಿಗಳು ರಂಪದಲ್ಲೇ ಸುಖ ಪಡ್ತಿದಾರೆ. ಈ ರಾಜಕೀಯ ಸರಿ ಹೋಗಬೇಕಾದರೆ ಗಾಂಧಿ ರೂಪಿಸಿದ ಉಪ್ಪಿನ ಸತ್ಯಾಗ್ರಹದಂತಹ ಕಾರ್‍ಯಕ್ರಮಗಳು ನಡೀಬೇಕು. ಗಾಂಧಿಯ ಮೂರು ಮಂಗಗಳ ಕಾನ್ಸೆಪ್ಟನ್ನು ನಾವು ಮೊದಲು ಅಳವಡಿಸಿಕೊಳ್ಳಬೇಕು. ಮತದಾನ ಕಡ್ಡಾಯ ಮಾಡಿ, ಮತದಾನ ಮಾಡದವರಿಗೆ ಯಾವುದಾದರೂ ರೀತಿ ದಂಡ ವಿಧಿಸೋ ವ್ಯವಸ್ಥೆ ಆದರೆ ಒಳ್ಳೇದು.

ಅರ್ಹತೆ ಇದ್ದರೆ ಕುಟುಂಬದವರೆಲ್ಲಾ ರಾಜಕಾರಣ ಮಾಡಿದರೆ ತಪ್ಪಿಲ್ಲ. ಆದರೆ ಕುಟುಂಬಕ್ಕಾಗಿಯೇ ರಾಜಕಾರಣ ಮಾಡುವುದು ತಪ್ಪು. ಎಂ.ಪಿ.ಪ್ರಕಾಶ್ ಮೊದಲಾದವರಿದ್ದಾಗ ದೇವೇಗೌಡ್ರು ಕುಮಾರಸ್ವಾಮೀನ ಮುಖ್ಯಮಂತ್ರಿ ಮಾಡಿದ್ದು ಕುಟುಂಬಕ್ಕಾಗಿಯೇ ಮಾಡಿದ ರಾಜಕಾರಣ.ಆದರೆ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡ್ತಾ ಇದ್ದಾಗ ಅದನ್ನು ಮಾಡ್ತಾ ಮಾಡ್ತಾ ಒಳ್ಳೆಯವರಾಗಿ ಬಿಡ್ತಾರೆ ಅಂತನ್ನಿಸಿತ್ತು ನನಗೆ. ನಾವು ತೋರುಗಾಣಿಕೆಗೆ ಮಾಡೋದು ಕೂಡಾ ಸ್ವಲ್ಪ ಒಳಗೆ ಹೋಗಿಬಿಡತ್ತೆ. ಅದು ಮನುಷ್ಯ ಸ್ವಭಾವ. ಈಗ ಮನುಷ್ಯನ ಮನಸ್ಸಿನಲ್ಲಿ ತೀರಾ ಗೊಂದಲ ಆಗಿಬಿಟ್ಟಿದೆ. ಹಾಗಂತ ಪ್ರಜಾಸತ್ತೆ ಇಲ್ಲದೆ ನಾವು ಬದುಕ್ಕಾಗಲ್ಲ. ಹಾಗಾಗಿ ಶುದ್ಧವಾಗಿರುವುದೆಲ್ಲವೂ ಪ್ರಜಾಸತ್ತೆಯ ಪ್ರಕ್ರಿಯೆಯಲ್ಲಿ ಶುದ್ಧವಾಗಬೇಕು. ಎಲ್ಲ ಸರಿ ಹೋಗಬೇಕಾದರೆ ಮೊದಲು ಗಣಿಕಾರಿಕೆ ನಿಲ್ಲಿಸಬೇಕು. ಅದನ್ನು ರಾಷ್ಟ್ರೀಕರಣ ಮಾಡಿ, ಇಲ್ಲಾ ನೀವೇ ಕಬ್ಬಿಣ ತಯಾರಿಸಿ ಮಾರಿ. ಈ ಅದಿರು ಮಾರೋದರ ವಿರುದ್ಧ ದೊಡ್ಡ ಚಳವಳಿ ಆಗಬೇಕು. ಬೆಂಗಳೂರಲ್ಲಿ ಆಕಾಶ ಕಾಣದಂಗೆ ನಿಂತಿರೋ ಪೋಸ್ಟರ್‍ಸ್ ಮತ್ತು ಅಡ್ವರ್‌ಟೈಸ್‌ಮೆಂಟ್ ಅಂತೂ violence on the eyes !
ಗುರುಪೀಠಗಳು ನಾಶವಾಗೋದು ಇಷ್ಟವಿಲ್ಲ
ಈಗ ಯಾವ ಸಭೆ ನೋಡಿದ್ರೂ ಕಾವಿ ಧರಿಸಿದವರಿರ್‍ತಾರೆ. ಒಂದು ಕಾಲದಲ್ಲಿ ಇವರೆಲ್ಲ ಪ್ರೈಮರಿ ಸ್ಕೂಲ್ ಮಕ್ಕಳಿಗೆ ಪಾಠ ಮಾಡಿ ಒಳ್ಳೇ ಕೆಲಸ ಮಾಡಿದ್ರು. ಆದರೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ಮಾಡ್ತಾ ಸ್ಟೇಜ್‌ಗೆ , ರಾಜಕಾರಣಕ್ಕೆ ಬಂದ್ರು. ನನಗೆ ಗುರುಪೀಠಗಳು ನಾಶವಾಗೋದು ಇಷ್ಟವಿಲ್ಲ. ನಾನು ಒಂದ್ಸಾರಿ ಪೇಜಾವರ ಸ್ವಾಮಿಗಳಿಗೆ ಹೇಳಿದ್ದೆ. ನೀವು ಹೀಗೇ ಮುಸ್ಲಿಂ ದ್ವೇಷ ಬೆಳೆಸ್ತಾ ಇದ್ರೆ, ನೀವು ನಮಗೆ ಗುರುಗಳಾಗಿದ್ರೂ ನಾನು ನಿಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಕ್ಕೆ ಆಗಲ್ಲ, ಮಾಡಲ್ಲ. ಯಾಕಂದ್ರೆ ನಮ್ಮ ತಾಯಿಗೆ ಅವರ ಬಗ್ಗೆ ಬಹಳ ಭಕ್ತಿ ಇತ್ತು. ದಿತರನ್ನೆಲ್ಲಾ ಹತ್ತಿರ ಸೇರಿಸಬಾರದು ಅಂತದ್ಕೊಂಡಿದ್ದ ಆ ತಾಯಿ, ಸ್ವಾಮಿಗಳು ದಲಿತರ ಕೇರಿಗೆ ಹೋದ್ರು ಅಂತಾದ ಕೂಡ್ಲೇ, ದಲಿತರ ಕೇರಿಗೆ ಹೋಗೋದು ತಪ್ಪಲ್ಲ ಅಂದಿದ್ರು.

ಅಮೆರಿಕಕ್ಕೆ ಹೋದೋರಿಗೆ ಕೃಷ್ಣಪೂಜೆ ಅಧಿಕಾರ ಇಲ್ಲ ಅಂತ ಕೇಳಿದಾಗ ಬಹಳ ಖುಶಿಯಾಯ್ತು ! ಯಾಕಂದ್ರೆ ಈ ಅಮೆರಿಕಕ್ಕೆ ಹೋಗೋದು ಎಂಥಾ ಹುಚ್ಚು ಹಿಡಿದಿದೆ ಅಂದರೆ, ಕೊನೇ ಪಕ್ಷ ಅವರಿಗೆ ಅದೊಂದಾದ್ರೂ ನಿರ್ಬಂಧ ಇರ್‍ಲಿ ಅಂತ ! ನಿಜವಾಗಿ ಪೇಜಾವರ ಸ್ವಾಮಿಗಳು ಏನು ಹೇಳಬೇಕಿತ್ತು ಅಂದ್ರೆ, ಪರಮಾತಿ ಶೂದ್ರ ಬೇಕಾದ್ರೂ ಕೃಷ್ಣ ಪೂಜೆಯ ಅಧಿಕಾರ ಪಡ್ಕೋಬಹುದು, ಅಮೆರಿಕಕ್ಕೆ ಹೋಗಿ ಬಂದವ್ರಿಗೆ ಮಾತ್ರ ಇಲ್ಲ ಅಂತ ! ಅದು ರೆವಲ್ಯೂಷನರಿ ಸ್ಟೆಪ್. ಈ ಅಮೆರಿಕನೈಸೇಷನ್ ನಮಗೆ ಬಹಳ ಅನ್ಯಾಯ ಮಾಡಿದೆ.

ದೇವರು ಬೇರೆಬೇರೆ ರೀತಿಯಲ್ಲಿ ಲಭ್ಯನಾದ
'All religions are imperfect’ ಅನ್ನೋ ಮಾತಿದೆ. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ದೇವರ ಕಲ್ಪನೆ ಹೀಗೇ ಅಂತ ಇದೆ. ನಮ್ಮಲ್ಲಿ ಬೇರೆ ಬೇರೆ ಕಲ್ಪನೆ ಸಾಧ್ಯ. ಪುತಿನ ಹೇಳಿದ್ರು- ದೇವರ ಕಲ್ಪನೆಗಳೆಲ್ಲಾ ಬೇರೆ ಬೇರೆ. ದಾರಿ ಒಂದೇ ಇರತ್ತೆ-ಅಂತ. ಅಂದ್ರೆ ನಾವೂ ಉಪವಾಸ ಮಾಡ್ತೀವಿ, ಅವರೂ ಮಾಡ್ತಾರೆ... ಹೀಗೆ. ಎಲ್ಲ ರಿಲಿಜನ್‌ಗಳೂ imperfect ಆದ್ರಿಂದ ಅವೆಲ್ಲಾ ಒಟ್ಟಿಗೇ ಇರ್‍ತವೆ. ಮನುಷ್ಯನಿಗೆ ದೇವರ ಹುಡುಕಾಟ ಅಂತ ಒಂದಿದ್ರೆ ಎಲ್ಲವೂ ಬೇಕಾಗುತ್ತೆ. ಬೌದ್ಧ ಧರ್ಮದಲ್ಲಿ ಗೃಹಸ್ಥನಾಗಿರೋದು ಕಷ್ಟ. ಅದು ಸನ್ಯಾಸಿ ಧರ್ಮ ಇದ್ದಂಗೆ. ಅದಕ್ಕೇ ಲಿಂಗಾಯಿತ ಧರ್ಮ ಬಹಳ ದೊಡ್ಡದು. ಅಲ್ಲಿ ಗೃಹಸ್ಥನಾಗಿದ್ದೂ ದೇವರನ್ನು ಹುಡುಕೋದು ಸಾಧ್ಯ. ಸಾಕಾರ, ನಿರಾಕಾರ, ಸಗುಣ, ನಿರ್ಗುಣ ಎಲ್ಲವಕ್ಕೂ ಅವಕಾಶ ಇದೆ. ವೈದಿಕ ಮತದ ಕೆಲವು ದುಶ್ಚಟಗಳನ್ನೂ ಅದು ನಿವಾರಿಸತ್ತೆ. ಅಸ್ಪೃಶ್ಯತೆ ಬಗ್ಗೆ ಧೈರ್ಯದ ನಿಲುವು ತಗೊಳ್ತು. ಆದರೆ ಕರ್ನಾಟಕದಲ್ಲಿ ಅದು ಮಠಾಧೀಶರ ಕೈಲಿ ಸಿಲುಕಿರೋದ್ರಿಂದ ಕಷ್ಟ !

ಸಿಲೋನ್‌ನಲ್ಲಿ ಬೌದ್ಧರು ಅಂದ್ರೆ ಸಮಸ್ಯೆ.. ಅವರು ತಮಿಳರ ಕೊಲೆಗೆ ಕಾರಣರಾಗ್ತಾರೆ. ಆದರೆ ಬರ್ಮಾದಲ್ಲಿ ಬೌದ್ಧರಿಂದಲೇ ಕ್ರಾಂತಿ ಆಗಿದೆ. ವಿಯೆಟ್ನಾಂನಲ್ಲಿ ಬೌದ್ಧ ಧರ್ಮ ಒಳ್ಳೇ ಕೆಲಸ ಮಾಡ್ತು. ಒಂದು ಕಡೆ ಒಳ್ಳೇದು ಮಾಡ್ತು, ಇನ್ನೊಂದು ಕಡೆ ಕೆಟ್ಟದು. ಹಾಗಾಗಿ ಬೌದ್ಧಧರ್ಮ ಅಥವಾ ಇನ್ನೊಂದಕ್ಕೆ ಕನ್‌ವರ್ಷನ್ ಆಗೋದ್ರಿಂದ ಏನೂ ಪ್ರಯೋಜನ ಇಲ್ಲ ಅಂತ ನನಗನಿಸಿಬಿಟ್ಟಿದೆ. ನಾನು ಮದುವೆಯಾದಾಗ ನನ್ನ ಮಾವನಿಗೆ ನಾನು ಕ್ರಿಶ್ಚಿಯನ್ ಆದ್ರೆ ಒಳ್ಳೇದು ಅನಿಸ್ತು. ನನ್ನ ತಾಯಿತಂದೆಗೆ ಅವಳು ಹಿಂದೂ ಆದ್ರೆ ಒಳ್ಳೇದು ಅನ್ಸಿತ್ತು. ಆದರೆ ನಾವು ಎರಡೂ ಮಾಡದೇ ಇರೋದರಿಂದ ನಮಗೆಷ್ಟು ಒಳ್ಳೇದಾಯಿತು ಅಂದ್ರೆ ದೇವರು ಬೇರೆಬೇರೆ ರೀತಿಯಲ್ಲಿ ನಮಗೆ ಲಭ್ಯನಾದ. ಹೀಗಾಗಿ ಪ್ರತಿಯೊಂದು ಮನೆಯಲ್ಲಿ ಬೇರೆಬೇರೆ ಮತಧರ್ಮದವರು ಇದ್ರೇ ಒಳ್ಳೇದೇನೇ. ಎಲ್ಲ ಧರ್ಮಗಳೂ imperfect ಆಗಿರೋದ್ರಿಂದ ಒಂದು ಇಡೀ ಸಂಸಾರ ಅದನ್ನ perfect ಮಾಡತ್ತೆ ಅನ್ಸತ್ತೆ. ಮೈನಾರಿಟಿಗಳು ಕಮ್ಯುನಲ್ ಆದರೆ ಅವರು ನಾಶವಾಗ್ತಾರೆ. ಮೆಜಾರಿಟಿ ಜನ ಕಮ್ಯುನಲ್ ಆದ್ರೆ ರಾಷ್ಟ್ರಾನೇ ನಾಶವಾಗತ್ತೆ. ಕೋಮುವಾದ ಹಿಮ್ಮೆಟ್ಟಿಸಬೇಕಾದರೆ ಸೆಕ್ಯುಲರಿಸಂನವರೂ ಗೀತೆ, ಮಹಾಭಾರತ, ಉಪನಿಷತ್‌ಗಳನ್ನು ತಿಳ್ಕೋಬೇಕು. ಕರ್ನಾಟಕದಲ್ಲಿ ಬಂದಿರುವಂಥ ರಾಜಕೀಯ-ಸಾಮಾಜಿಕ ಅಧೋಗತಿ, ಎಲ್ಲಾ ಪ್ರಜಾಪ್ರಭುತ್ವದಲ್ಲೂ ಒಂದಲ್ಲಒಂದು ಕಾಲದಲ್ಲಿ ಬಂದಿದೆ ಅನ್ಸತ್ತೆ. ಹಾಗಂತ ಇದಕ್ಕೆ ಪರಿಹಾರ ಏನು? I don't know !

***************
ತಮ್ಮ ಅನೂಹ್ಯ ಯೋಚನೆಗಳಿಂದ ನಮ್ಮನ್ನು ಬೆರಗುಗೊಳಿಸುವ ಅನಂತಮೂರ್ತಿಯವರನ್ನು ಹೊರತುಪಡಿಸಿದರೆ, ಹಿರಿಯರಾದ ಕಣವಿ, ಜಿಎಸ್‌ಎಸ್, ನಿಸಾರ್, ಬಲ್ಲಾಳ-ನಂತರದ ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎನ್‌ಎಸ್‌ಎಲ್ ಮೊದಲಾದವರ್‍ಯಾರೂ ತುಟಿಯನ್ನೂ ಕದಲಿಸುತ್ತಿಲ್ಲ. ಕಳೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವೇರಿ, "ಕನ್ನಡಾಂಬೆಯ ಆಶೀರ್ವಾದ ಆಶೀರ್ವಾದ’ ಅಂತ ಬಾರಿಬಾರಿಗೂ ಅನ್ನುತ್ತಿದ್ದ ನಿಸಾರ್, ತಮಗೂ ಕರ್ನಾಟಕಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಮೌನವಾಗಿರುವುದು ಹೇಗೆ ಸಾಧ್ಯವಾಗುತ್ತದೆನ್ನುವುದೇ ಪರಮಾಶ್ಚರ್ಯ. ಕೃಷಿ-ನೆಲಜಲ-ಭಾಷೆ-ಪರಿಸರ ಹೀಗೆ ಕಲೆಗೆ ಪೂರಕವೇ ಆಗಿರುವ ವಿಷಯಗಳ ವಿವಾದ ಭುಗಿಲೆದ್ದಾಗ, ಕಂಟಕ ಬಂದಾಗಲಾದರೂ ಸ್ಪಂದಿಸಬೇಡವೆ? ಆದರೆ ಕರ್ನಾಟಕದ ನಾನಾ ಭಾಗಗಳಲ್ಲಿರುವ-ತಕ್ಕಮಟ್ಟಿಗೆ ಜನಸಾಮಾನ್ಯರಲ್ಲೂ ಹೆಸರು ಸಂಪಾದಿಸಿರುವವರೂ ಗುಮ್ಮನಗುಸಕರಂತೆ ಕುಳಿತಿರುವುದು ನೋಡಿದರೆ ಬೇಜಾರಾಗುತ್ತದೆ.

'ಅವರೆಲ್ಲ ನೆಹರೂ ಮೈದಾನದಲ್ಲಿ ಬೆರಳೆತ್ತಿ ಭಾಷಣ ಮಾಡುವುದು ಬೇಡ ಮಾರಾಯ್ರೆ . ಅಲ್ಲಿ ಇಲ್ಲಿ ನಡೆಯುವ ಸಣ್ಣಪುಟ್ಟ ಕಾರ್‍ಯಕ್ರಮಗಳಲ್ಲೋ, ಪತ್ರಿಕೆಗಳಿಗೆ ಲೇಖನ ಬರೆಯುವ ಮುಖಾಂತರವೋ, ಕನಿಷ್ಠ ಪಕ್ಷ ತಮ್ಮ ಊರುಗಳಿಗೆ ಸಂಬಂಧಿಸಿದ ವಿಷಯಗಳ ಬಗೆಗಾದರೂ "ಸಾಮಾಜಿಕ ಸ್ಪಂದನ’ ತೋರಬಹುದಲ್ಲ. ವಿವಾದಕ್ಕೆಡೆಗೊಡದ ಹಾಗೆ ಬರೆಯುವುದು ಮಾತಾಡುವುದು ಸಾಧ್ಯವಿದೆ ಎಂಬುದನ್ನೂ ಇವರಿಗೆ ಹೇಳಿಕೊಡಬೇಕಾಗಿಲ್ಲ. ಸಾಮಾಜಿಕ ಸ್ಪಂದನಕ್ಕೆ ಇವರೆಲ್ಲ ತೋರಿದ ನಿರುತ್ಸಾಹದಿಂದಾಗಿಯೇ ಬಾಯಿಹರುಕರೆಲ್ಲ ದೊಡ್ಡ ಮಾತುಗಾರರು-ಮುಂದಾಳುಗಳು ಆಗಿದ್ದಾರೆ ’ ಅಂತ ಮಿತ್ರರೊಬ್ಬರು ಹೇಳುವಾಗ ತಥ್ಯ ಇದೆ ಅನ್ನಿಸಿತು. ಸಾಹಿತಿ-ಕಲಾವಿದರು ನಾಡಿನ ಬಗ್ಗೆ ತೋರಿದ ನಿರ್ಲಕ್ಷ್ಯದಿಂದಾಗಿಯೇ ಹಳದಿ ಕಣ್ಣಿನ ಸೇನೆ-ವೇದಿಕೆಗಳು ಹುಟ್ಟಿಕೊಂಡವೆ ?

'ಬಾಂಗ್ಲಾದಲ್ಲಿ ತನ್ನ ಪತಿಯ ಒಡೆತನದ ಪತ್ರಿಕೆಗೂ ತಸ್ಲಿಮಾ ಲೇಖನಗಳನ್ನು ಬರೆಯುತ್ತಿದ್ದಳು. ಅವು ತುಂಬ ಭಾವುಕತೆಯಿಂದ ಮತ್ತು ಉದ್ವಿಗ್ನತೆಯಿಂದ ಕೂಡಿರುತ್ತಿದ್ದವು. ಸಂಪಾದಕರಾಗಿದ್ದ ನನ್ನ ಪತಿ ಅವನ್ನು ಬಹುಜನಕ್ಕೆ ಒಪ್ಪಿತವಾಗುವ ರೀತಿಯಲ್ಲಿ ಎಡಿಟ್ ಮಾಡಿ ಪ್ರಕಟಿಸುತ್ತಿದ್ದರು. ಆದರೆ ಏನನ್ನೂ ಕೈ ಬಿಡುತ್ತಿರಲಿಲ್ಲ’ ಎನ್ನುತ್ತಾಳೆ, ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ "ಡೆಮಾಕ್ರಸಿ ವಾಚ್’ನ ನಿರ್ದೇಶಕಿ (ಹೆಸರು ಮರೆತೆ). ತಿಂಗಳ ಹಿಂದೆ ಅನಂತಮೂರ್ತಿ ಹೇಳಿದ್ದರು "ಬಿಜೆಪಿಯನ್ನು ಬ್ರಾಹ್ಮಣರು ಕೈಬಿಡಬೇಕು’. ಆ ಮಾತಿನಿಂದ ಎಷ್ಟು ಜನರಿಗೆ ಏನನ್ನು ಮನವರಿಕೆ ಮಾಡಲು ಸಾಧ್ಯ ? 'ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸಕ ಬಲ ಹೊಂದಿರುವ ಪಕ್ಷವೊಂದು ಅಧಿಕಾರ ಪಡೆಯಲು ಅನರ್ಹ’ ಎಂದರೆ ಪ್ರಶ್ನೆಗಳು ಕಡಿಮೆ ಇದ್ದಾವೇನು?

ಚರ್ಚೆ-ಭಾಷಣಗಳಲ್ಲಿ ಅಂತಹ ಮಾತುಗಳು ಸರಿ ಅಂತಲೇ ಅಂದುಕೊಳ್ಳೋಣ. ಆದರೆ ಕೇವಲ ಮಾತಿನಲ್ಲೇ ನಾವು ಸೋಲುತ್ತ ಗೆಲ್ಲುತ್ತ ಇದ್ದರೆ ಸಾಕೆ? ಪರಿಣಾಮವೇ ಲಕ್ಷ್ಯವಾದ ಪ್ರಾಯೋಗಿಕ ಕೆಲಸಗಳಲ್ಲಿ ಜನರಿಗೆ ಮನವರಿಕೆಯಾಗುವ ಹಾಗೆ, 'ಸಾಮಾಜಿಕ ಸ್ಪಂದನ’ ತೋರುವ, ಉಂಟು ಮಾಡುವ ದಾರಿ ಯಾವುದು? ಎಲ್ಲ ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀಟಿ, ನಿರ್ದಿಂಗತವಾಗಿ ಏರಿ ಒಳ್ಳೆಯದನ್ನು ಮಾಡುವ ಬಗೆ ಹೇಗೆ?
We don't know !

Read more...

December 19, 2007

ದ್ವಾ ಸುಪರ್ಣಾ- ಕೊನೆಯ ಭಾಗ

ಮನೆಯ ಅಂಗಳದ ಮೂಲೆಯ ಚೆರ್ರಿ ಮರದಲ್ಲಿ
ನಾನು ನೋಡುವಾಗಲೆಲ್ಲ
(ಲೆಕ್ಕವಿಲ್ಲದಷ್ಟು ಸಲ)
ಕೂತಿರುತ್ತವೆ ಎರಡು ಹಕ್ಕಿಗಳು. ಕಪ್ಪು ಕಪ್ಪಗೆ !
ನೀವು ಕೇಳಿರುವ ಉಪನಿಷತ್ತಿನ
'ದ್ವಾ ಸುಪರ್ಣಾ’ (ಸಯುಜಾ ಸಖಾಯ)
ಹಕ್ಕಿಗಳ ಹಾಗಲ್ಲ ಇವು
ಎರಡು ಅಕ್ಷರಶಃ ಸುಮ್ಮನೇ ಕೂತಿವೆ.
ನನಗೇಕೋ ಸಾವನ್ನು ಸ್ವಾಗತಿಸಲೆಂಬಂತೆ
ಕಾಣುತ್ತಿವೆ.
ರಾಶಿ ರಾಶಿ ಚೆರ್ರಿ ಹಣ್ಣಿವೆ, ಎಲೆಗಳ ಅಡಿಯಲ್ಲಿ
ಹಕ್ಕಿ ಕಣ್ಣಿನಂತೆ ಹೊಳೆಯುತ್ತವೆ.
ಇವು ನೋಡುವುದೇ ಇಲ್ಲ ಆ ಕಡೆ
ಬಹುಶಃ ಈ ಜೋಡಿ ಹಣ್ಣು ತಿಂದು
ಸುಸ್ತಾಗಿವೆ.
ಅಥವಾ ಹಸಿವೆಯನ್ನೇ ಮರೆತಂತಿವೆ.
ಇಂದೇ ಮರದ ಒಂದೇ ಗೆಲ್ಲಿನಲ್ಲಿ
ಎರಡು ಹಕ್ಕಿಗಳು ಹೀಗೆ
ಹತ್ತಿರ ಹತ್ತಿರ ಕೂತಿವೆ-ಅಷ್ಟೆ.

-ಸಂಧ್ಯಾದೇವಿ
('ಬೆಂಕಿ ಬೆರಳು-ಮಾತು ಚಿಟ್ಟೆ-ಮುರಿದ ಮುಳ್ಳಿನಂತೆ ಜ್ಞಾನ' ಸಂಕಲನದಿಂದ)

ಒಂದು ಹಣ್ಣ ತಿನ್ನುತ್ತ ಇನ್ನೊಂದು ಸುಮ್ಮನೆ ನೋಡುತ್ತ ಕುಳಿತಿರುವ ಉಪನಿಷತ್ತಿನ ಜೋಡಿ ಹಕ್ಕಿಗಳು-
ಸಾವನ್ನು ಸ್ವಾಗತಿಸಲೋ ಎಂಬಂತೆ ಸುಮ್ಮನೆ ಹತ್ತಿರ ಹತ್ತಿರ ಕೂತಿರುವ ಹಕ್ಕಿಗಳು-
'ಇದು ಅದೇ’ ಎಂಬಂತೆ ಅದ್ವೈತದಲ್ಲಿ ಕುಳಿತಿರುವ ಚೊಕ್ಕಾಡಿಯ ಹಕ್ಕಿಗಳು-
ಹಣ್ಣ ತಿನ್ನುವ, ಇನ್ನೊಂದು ತಾನೇ ಹಣ್ಣಾಗುವ ಸುರೇಶರ ಹಕ್ಕಿಗಳು-
ರಾಮಾನುಜನ್‌ರಿಗೆ ಪಕ್ಕದ ಮನೆ ಸಂಸಾರದಂತೆ ಕಾಣುವ ಹಕ್ಕಿಗಳು-
ಪ್ರಣಯದಾಟದಲ್ಲಿ ನಿರತವಾಗಿದ್ದಾಗಲೇ ಬೇಡನ ಬಾಣಕ್ಕೆ ತುತ್ತಾಗಿ ವಾಲ್ಮೀಕಿಯ ರಾಮಾಯಣಕ್ಕೆ ಪ್ರೇರಣೆಯಾದ ಕ್ರೌಂಚ ಪಕ್ಷಿಗಳು !
ಇದು ಎಲ್ಲ ಪ್ರಾಣಪಕ್ಷಿಗಳ ಕತೆಯಲ್ವೆ?

Read more...

December 13, 2007

ದ್ವಾ ಸುಪರ್ಣಾ -ಭಾಗ ೨

ದ್ವಾ ಸುಪರ್ಣಾ
ದಟ್ಟ ಹಸಿರನು ಹೊದ್ದ
ಮರದ ಬಲಿಷ್ಠ ಬಾಹುಗಳ ಆಸರೆಯಲ್ಲಿ ಹಕ್ಕಿ
ರೆಕ್ಕೆಗೆ ತಾಗಿ ಇನ್ನೊಂದು ಹಕ್ಕಿ
ಮರವೋ-ಮಿನುಗಿಸುತ ಮೈತುಂಬ ಹಣ್ಣ ಚುಕ್ಕಿ
ಬೀಸುವುದು ಎಲೆಯ ಚೌರಿ.

ಹಣ್ಣ ಕುಕ್ಕುವ, ಗುಟುಕ ನುಂಗುವ, ಒಂದು ಹಕ್ಕಿಯ ರೀತಿ
ನೋಡುತ್ತ ಕುಳಿತ ಹಕ್ಕಿ ಕಣ್ಣಿನ ಪ್ರೀತಿ
ಜೀವೋತ್ಸವಕ್ಕೆ ಮೈಮರೆತ ವೃಕ್ಷವೆ ಸಾಕ್ಷಿ !
ಯಾವ ನಂಟಿನ ಅಂಟು ಈ ಹಕ್ಕಿ, ಈ ಮರಕ್ಕೆ ?

ಮರಕ್ಕೆ ಹಕ್ಕಿಯ ಕೊರಳು
ಆಳದಾಸೆಗೆ ನೆಗೆತ ನೀಲಿ ಬಾನಿನ ನಡುವೆ
ಆಗುತ್ತದೆ ಹಕ್ಕಿ: ಮರದ ಅಂಗೋಪಾಂಗ
ಹರಿವ ಜೀವರಸಕ್ಕೆ ಕಿವಿ:
ಹಸಿರೆಲೆಯ ಮರ್ಮರ ಮೊರೆತ, ಮೌನದಿ ಮೊಳೆತ
ಹೂವು ಹಣ್ಣಿನ ಸಹಜ ಸಂಭ್ರಮಕ್ಕೆ
ಬೆರಗಿನರ್ಭಕ ದೃಷ್ಟಿ.

ಹಕ್ಕಿಗಳ ರೆಕ್ಕೆಯೆರಚನ್ನು ಮರ
ಮರದ ನೆಲಬಾನ ಪಯಣವನು ಹಕ್ಕಿ
ವೀಕ್ಷಿಸುತ್ತದೆ ಸತತ ಧ್ಯಾನಸ್ಥ ನಿಲುವಿನಲ್ಲಿ.

ಸ್ಥಗಿತ ಕಾಲದ ಆಚೆ, ಹುತ್ತಗಟ್ಟಿದ ಹಾಗೆ
ಮರಕ್ಕೆ ಹಕ್ಕಿಯ ರೆಕ್ಕೆ
ಎಲೆ ಮೂಡಿ ಹಕ್ಕಿ ದೇಹಕ್ಕೆ
ಹಕ್ಕಿ ಮರವಾಗಿ, ಮರವೇ ಹಕ್ಕಿಯಾಗಿ,
ಹುಬ್ಬಿನಿಬ್ಬದಿಯ ಗರಿ ಬಿಚ್ಚಿದರೆ,
ಗರುಡನಂತೆರಗಿ
ಆಕಾಶದವಕಾಶದಲ್ಲಿ ಸ್ಥಿರವಾದರೆ,
ಒಂದು ಮತ್ತೊಂದಕ್ಕೆ ನೆರಳಾದರೆ-
ಇವೆಲ್ಲ ತಮ್ಮ ಪ್ರತಿಬಿಂಬ ಮೂಡಿಸುತ್ತವೆ
ವಿಶಾಲ ಚಾಚಿನ ಗಗನ ನೇತ್ರದಲ್ಲಿ
ಒಂದರೊಳಗೆಂದೆನುವ
ಇದು ಅದೇ ಎನ್ನುವ ಸೂತ್ರದಲ್ಲಿ.

- ಸುಬ್ರಾಯ ಚೊಕ್ಕಾಡಿ

ದ್ವಾಸುಪರ್ಣಾ (ಹೊಸ ಅರ್ಥದಲ್ಲಿ)
ಒಂದು ಹಕ್ಕಿ ಹಸಿದಂತೆ
ಹಸಿವೆಯೇ ಕಣ್ಣಾಗಿ
ಕುಕ್ಕಿ ಕುಕ್ಕಿ ತಿನ್ನುವುದು ಹಣ್ಣನ್ನು ಕುಕ್ಕಿ ;
ಬಳಿಯಲ್ಲಿ
ತಿನ್ನದೇ ಕುಳಿತ ಇನ್ನೊಂದನ್ನು ನೋಡುವುದು:
ಮಗು ತುಟಿ ಇಟ್ಟಂತೆ
ಸುಮ್ಮನೇ ತಾಯ ಮೊಲೆಯಲ್ಲಿ

ಇನ್ನೊಂದು ಹಕ್ಕಿ
ಹಸಿವೆ ಇದ್ದೂ ತಿನ್ನದೆ
ತಾನೇ ಹಣ್ಣಾದಂತೆ
ಬರೇ ನೋಡುವುದು ನೋಡುವುದು
ತಿನದೇ ತಿಂದಂತೆ :

ಅಥವಾ
ತಾನೇ ಮೊಲೆಯಾಗಿ
ಇಳಿದು ಬಂದಂತೆ ಹೆಣ್ಣು
ಪ್ರಿಯತಮನ ಎದೆಗೆ ಹಾತೊರೆದು
ಕೊಟ್ಟು ಅವನ ತುಟಿಗೆ ಮೊಲೆ ಇಟ್ಟು .

- ಡಾ. ನಾ. ಮೊಗಸಾಲೆ

(ಮೊಗಸಾಲೆಯವರು ಹೊಸ ಅರ್ಥದಲ್ಲಿ ಅಂತ ಬರೆದುಕೊಂಡಿರುವ ಕವಿತೆ ಕೆ.ಪಿ.ಸುರೇಶ ಪದ್ಯದ ಪ್ರತಿಬಿಂಬದಂತಿರುವುದು ಕುತೂಹಲಕಾರಿ. ಸುರೇಶರ ಕವನ ಪ್ರಕಟವಾದ ಮೂರು ವರ್ಷಗಳ ನಂತರ ಮೊಗಸಾಲೆಯವರು ಪ್ರಕಟಿಸಿದ 'ಇಹಪರದ ಕೊಳ’ದಲ್ಲಿರುವ ಕವಿತೆ ಇದು.)

Read more...

December 07, 2007

ದ್ವಾ ಸುಪರ್ಣಾ

'ವೇದೋಪನಿಷದಗಳ ಭೂತಗನ್ನಡಿಯೊಳಗೆ ಪಡಿಮೂಡಿದಾಕೃತಿಗೆ ತಾನೆ ಮುಗ್ಧ’ ಅಂತ 'ಶ್ರೀರಾಮನವಮಿಯ ದಿವಸ’ದಲ್ಲಿ ಬರೆದರು ಅಡಿಗರು. ಪಡಿಮೂಡಿದ ಆಕೃತಿಗೆ ವಾಲ್ಮೀಕಿ ಮುಗ್ಧನಾದ ಎನ್ನುವುದಕ್ಕಿಂತಲೂ, ವೇದ-ಉಪನಿಷತ್ತುಗಳಿಂದ ಮೂಡಿದ ಆಕೃತಿಗೆ ಅಲ್ಲವೇ ಮುಗ್ಧನಾದದ್ದು, ಅದಕ್ಕೆ ಮುಗ್ಧನಾಗದಿರಲು ಸಾಧ್ಯವೆ?- ಅಂತಲೂ ಅಡಿಗರು ಕೇಳುತ್ತಿರುವಂತೆ ಈಗ ಅನ್ನಿಸುತ್ತಿದೆ !


ಪಿಯುಸಿ ಫೇಲಾಗಿ ಮನೆಯಲ್ಲಿ ಕುಕ್ಕುರುಬಡಿದ ಕಾಲದಲ್ಲಿ ಭಗವದ್ಗೀತೆ, ಉಪನಿಷತ್, ಜಿಡ್ಡು ಕೃಷ್ಣಮೂರ್ತಿ ಅಂತ ನಾನು ಒಂದಷ್ಟು ಓದಿಕೊಳ್ಳತೊಡಗಿದೆ. ತತ್ತ್ವ ಜಿಜ್ಞಾಸೆಯಲ್ಲಿ-ತರ್ಕದಲ್ಲಿ ಕೊಂಚ ಆಸಕ್ತಿ ಹುಟ್ಟಿ ವೇದಾಂತ ಬ್ರಹ್ಮಾಂಡದ ಒಳಹೊಕ್ಕರೆ ಬಿಡಿಸಿಕೊಳ್ಳುವುದು ಸುಲಭವಲ್ಲ. ಆದರೆ ಲೌಕಿಕದ ಜಗತ್ತಿಗೆ ಅದರ ನೇರ ಉಪಯೋಗ ಏನೂ ಇಲ್ಲದ್ದರಿಂದ (ಅಂದರೆ ಸಾಹಿತ್ಯದಂತೆ ಬಹುಜನರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ, ಬರವಣಿಗೆಯ ಕಲೆ ಕಲಿಸುವುದಿಲ್ಲ, ಎಲ್ಲೆಂದರಲ್ಲಿ ಉದ್ಧರಿಸಲಾಗುವುದಿಲ್ಲ, ಉಪನಿಷತ್ ಓದುವುದು ಕೆಲಸ ಸಿಗಲು ಸಹಕಾರಿಯಲ್ಲ, ಯುವಕರು ಅದನ್ನು ಓದುವುದಂತೂ ಹಾಸ್ಯಾಸ್ಪದ...) ಅವುಗಳಿಂದ ಕಳಚಿಕೊಂಡೆ. ಆದರೆ...ಬದುಕಿನಲ್ಲಿ ನಂಬಿಕೆಯಿಟ್ಟವನು ದೇವರನ್ನೂ ನಂಬಿರಬೇಕು (!); ಇರುವುದು ಸಾವು, ಮೀರುವುದೇ ಬದುಕು -ಅಂತ ನಾನು ನಂಬಿರುವುದರಿಂದ ಅವುಗಳೆಡೆಗಿನ ಸೆಳೆತವಂತೂ ಇದ್ದೇ ಇದೆ. ಹಾಗಾಗಿಯೇ ಕೆಲವರಿಗಾದರೂ ಇಷ್ಟವಾಗಬಹುದೆಂಬ ಆಸೆಯೊಂದಿಗೆ ಪ್ರಯೋಗವೊಂದನ್ನು ಇಲ್ಲಿ ಮಾಡುತ್ತಿದ್ದೇನೆ. ನಮ್ಮ ಹಲವಾರು ಕವಿಗಳನ್ನು ಪ್ರಭಾವಿಸಿದ, ಶ್ವೇತಾಶ್ವತರ ಉಪನಿಷತ್‌ನಲ್ಲಿ ಬರುವ ಒಂದು ಮಂತ್ರ ಹೀಗಿದೆ :

ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೇ
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯ-
ನಶ್ನನ್ನನ್ಯೋ ಅಭಿಚಾಕಶೀತಿ
(ಯಾವಾಗಲೂ ಜತೆಯಲ್ಲಿರುವ, ಸಖರಾದ ಎರಡು ಹಕ್ಕಿಗಳು ಒಂದೇ ವೃಕ್ಷವನ್ನು ಆಶ್ರಯಿಸಿಕೊಂಡಿವೆ. ಅವೆರಡರಲ್ಲಿ ಒಂದು ಸವಿಯಾದ ಹಣ್ಣನ್ನು ತಿನ್ನುತ್ತಿದೆ. ಇನ್ನೊಂದು ತಿನ್ನದೆ ನೋಡುತ್ತಿದೆ.) ಈ ಹಕ್ಕಿಗಳು ಯಾವುವು ಎಂಬುದಕ್ಕೆ ಉಪನಿಷತ್ ತನ್ನದೇ ಅರ್ಥ ಹೇಳುತ್ತದೆ. ಆದರೆ ನಮ್ಮ ಕವಿಗಳು ಅದನ್ನು ಕವನಗಳಲ್ಲಿ ಕಟ್ಟಿದ ಬಗೆಯನ್ನು ಮೂರು ಕಂತುಗಳಲ್ಲಿ ಇಲ್ಲಿ ಕೊಡುತ್ತೇನೆ. ಇದು ಮೊದಲ ಕಂತು. ನಿಮ್ಮ ತರ್ಕ-ಕುತರ್ಕಗಳಿಗೆಲ್ಲ ಸ್ವಾಗತ !

ದ್ವಾಸುಪರ್ಣಾ
ಅನಾದಿಯಿಂದಲೂ ಹೀಗೆ,
ಒಂದು ಹಕ್ಕಿ ಹಣ್ಣ ತಿನ್ನುವುದು
ಇನ್ನೊಂದು ಅದರ ನೋಡುವುದು ?
ಹಿತ್ತಲ ಮೆಟ್ಟಿಲಲಿ ಮಗು
ಅಳು ಮೊಗಕೆ ಮೆತ್ತಿದ ಅನ್ನ
ತಾಯ ಕೈಯಲಿ ತಟ್ಟೆ , ತುತ್ತನ್ನ
ಸ್ತನ ಸ್ರವಿಸುವುದು ಮಗುವ
ಅಳು ಹಟದ ಭಾವಕ್ಕೆ

ತೊಟ್ಟಿಲ ಜೀಕಿಂದ
ಹಾಸಿಗೆ ಮೆತ್ತೆಯೊತ್ತು ;
ತಾಯ್ತುಟಿಯ ಮಮತೆ ಮುತ್ತು .
ಆಕೆ ಮಗ್ಗುಲಾಗುವಳು
ಸ್ತನ ಸ್ಪರ್ಶ ಬೆದೆಕರೆಯ
ರತಿ ಬಯಕೆ ಹದಕೆ
ಒಂದು ಹಕ್ಕಿ ಹಣ್ಣ ತಿನುವುದು
ಇನ್ನೊಂದು ಹಣ್ಣೇ ತಾನಾಗುವುದು.
-ಕೆ.ಪಿ.ಸುರೇಶ
(ಯು.ಆರ್.ಅನಂತಮೂರ್ತಿಯವರ ಮುನ್ನುಡಿಯೊಂದಿಗೆ 'ದಡ ಬಿಟ್ಟ ದೋಣಿ’ ಕವನ ಸಂಕಲನ ಪ್ರಕಟಿಸಿದ್ದಾರೆ. ಲ್ಯಾಟಿನ್ ಅಮೆರಿಕದ ಬಗ್ಗೆ ಎಡುವರ್ಡೊ ಗೆಲಿಯಾನೋ ಬರೆದಿರುವ ಪುಸ್ತಕವನ್ನು 'ಬೆಂಕಿಯ ನೆನಪು’ ಎಂದು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.)



ಪಕ್ಕದ ಮನೆಯಲ್ಲಿ ಉಪನಿಷತ್ತು
ಸೀಬೇ ಮರ. ಕೊಂಬೆ, ಕವೆ-
ಯಲ್ಲಿ ಎರಡು ಹಕ್ಕಿ
ಒಂದು ಹಣ್ಣು ಕುಕ್ಕಿ ಹೆಕ್ಕಿ
ತಿನ್ನುತ್ತಿದೆ. ಹಸಿವು, ದಾಹ.

ಮತ್ತೊಂದು ಸುಮ್ಮನೆ ಕೂತು
ನೋಡುತ್ತಿದೆ. ಮೈಯೆಲ್ಲ ಕಣ್ಣು.

ಹೀಗೆ ಒಬ್ಬ ಗಂಡ. ಅವನ ಹೆಂಡತಿ
ಪಕ್ಕದ ಮನೆ ಸಂಸಾರ.

-ಎ.ಕೆ.ರಾಮಾನುಜನ್



Read more...

December 03, 2007

ಹೊರಟಾಗ

ಮಿನುಗುತ್ತಿದ್ದ ಅಮ್ಮನ ಮುಖ
ಇದ್ದಕ್ಕಿದ್ದಂತೆ ಆರಿಸಿದ ದೀಪ.
ಕಣ್ಣುಗಳು ಬಾಡಿ, ಗಂಟಲ ಸೆರೆ ಉಬ್ಬಿ
'ಛೇ, ಇವತ್ತು ಗಿಡಕ್ಕೆ ನೀರೇ ಹಾಕಿಲ್ಲ’
ಎಂಬ ವಿಷಯಾಂತರ ಯತ್ನದಲ್ಲಿ
ಅಪ್ಪ ಬಂದು ಅಮ್ಮನ ಸ್ವರದಲ್ಲಿ ಮಾತಾಡುತ್ತಾರೆ
ಕಂಪಿಸುತ್ತದೆ ಅವಳ ಧ್ವನಿ.
ಕೊನೇ ಕ್ಷಣದಲ್ಲಿ ಮತ್ತೊಂದಷ್ಟು ಕೆಲಸಗಳ ನೆನಪಿಸಿಕೊಂಡು
'ಹಾಗಿದ್ರೆ ಪೈಪ್ ಹಾಕೋ ಕೆಲ್ಸ, ಸ್ಕೂಟರ್ ರಿಪೇರಿ ಮಾಡಿಸ್ತೇವೆ,
ಹೊಸ ಡ್ರಮ್, ಒಂದು ಫೈಬರ್ ಚಯರ್ ತಗೊಳ್ತೇವೆ’ ಕ್ಷಣ ತಡೆದು
'ಮತ್ತೆ ಎಂತದ್ದಕ್ಕೂ ಮುಂದಿನ ತಿಂಗಳು ಬರ್ತೀಯಲ್ಲ’
ಎಂದು ಒಳ ನಡೆಯುತ್ತಾಳೆ, ಕತ್ತಲಲ್ಲಿ ಕೈ ಬೀಸುತ್ತೇನೆ.

ಅಂಗನವಾಡಿಗೆ, ಶಾಲೆಗೆ ಹೊರಟಾಗ-ಇದೇ ಅಮ್ಮ
ಉಲ್ಲಾಸದ ಮೂಟೆ; ದೂರದ ಕಾಲೇಜಿಗೆ ಹೊರಟಾಗ ಕೊಂಚ ಮಂಕು
ಅಪ್ಪನೇ ಹೊರಟುಹೋದಾಗ ನಾಲ್ಕು ದಿನಗಳ ಸಂಕಟ
ಮತ್ತೆ ಒಳಗೊಳಗೆ ಬೇಯುತ್ತ ಬಸಿವ ಬೆವರು, ದೇವರು ದಿಂಡರು.

ಅವಳು ಯಾವತ್ತೂ ಎಲ್ಲಿಗೂ ಹೊರಡುವುದಿಲ್ಲ
ಬಾ ಎಂದರೂ ಇಲ್ಲ, ಹೋಗೆಂದರೂ ಇಲ್ಲ
ಕಾರಣವಿಷ್ಟೆ- ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ.

Read more...

November 28, 2007

ತುಂಡು ಪದ್ಯಗಳು


ಸಾವು ಹತ್ತಿರ ಬಂದಾಗ

ಕೆಲವರಿಗೆ ತಿಳಿಯುತ್ತದಂತೆ.

ತಿಳಿದ ಬಳಿಕ ಸತ್ತರೆ

ಅದನ್ನು ಸತ್ತದ್ದು ಎನ್ನಬಹುದೆ?
-------------------------
ಸಾವಿಗೆ ಯಾವ ನಿಯಮಗಳೂ ಇಲ್ಲ .
ಬದುಕಿನಂತೆ.


ಸಾವಿನ ಸವಾರಿ ಬರುವುದು
ಕೋಣನ ಮೇಲೆಯೇ
ಹಾಗಾಗಿಯೇ ಹಲವರಿಗೆ ಗೊತ್ತಾಗುವುದಿಲ್ಲ.

-------------------------

ಸಾಯುವವನಿಗೂ ಇರುವ ಕೊನೆಯ ಆಸೆ
ಕೊಲ್ಲುವವನಿಗಿರುವುದಿಲ್ಲ

ಬದುಕುವವನಿಗೂ ಇರುವ ಕೊನೆಯ ಆಸೆ
ಬದುಕಿಸುವವನಿಗಿರುವುದಿಲ್ಲ.

ಕೊಲ್ಲುವವನು ಬದುಕಿಸುವವನು ಒಬ್ಬನೇ ಆಗುವುದು ಹೀಗೆ.


ಸತ್ರೆ-ಹೋಗ್ಲಿ ಬಿಡಿ ಅನ್ನೋಹಾಗೆ

ಹುಟ್ಟಿದ್ರೆ-ಬರ್‍ಲಿ ಬಿಡಿ ಅನ್ನೋ

ಜನಕ ಮಹಾರಾಜರೂ ಇದ್ದಾರಾ?
-------------------

ಸಾವಿನ ಬಗ್ಗೆ ಬರೆದಿಟ್ಟು ಸಾಯುವುದು

ಓದಿ ಸಾಯುವುದಕ್ಕಿಂತ ಒಳ್ಳೆಯದು !

Read more...

November 22, 2007

ನೀಲಿ ರೆಕ್ಕೆಗಳ ಅಳಿಲು

ಗೆಳೆಯ, ಕವಿ ಹರೀಶ್ ಕೇರ ಬರೆದ ಪುಟ್ಟ ಕತೆ 'ನೀಲಿ ರೆಕ್ಕೆಗಳ ಅಳಿಲು’.
ಅದನ್ನು ಓದಿದಾಗ, ೧೯೮೪ರಲ್ಲೇ ಶ್ರೀ
ಕೃಷ್ಣ ಚೆನ್ನಂಗೋಡ್ ಅವರು ಬರೆದ ಪದ್ಯ 'ನಿರಂತರ’ ನೆನಪಾಯಿತು. ಮಧ್ಯ ವಯಸ್ಸಿನಲ್ಲೇ ತೀರಿಕೊಂಡ ಚೆನ್ನಂಗೋಡರ, ’ಇಲ್ಲದೆ ಇದ್ದಾಗ’ ಎಂಬ ನಾಲ್ಕನೆಯ ಸಂಕಲನದಲ್ಲಿರುವ ಪದ್ಯವದು. ಅದನ್ನು ಓದದೆ ಹರೀಶ್ ಬರೆದ ಈ ಮಾರ್ದವ ಕತೆ ಗದ್ಯದ ಕಾವ್ಯಶಕ್ತಿಗೂ ಸಾಕ್ಷಿಯಾಗಿದೆ. ಗದ್ಯ-ಪದ್ಯದ ಈ ಜುಗಲ್‌ಬಂದಿ ಓದಿ ಆನಂದಿಸಿ.


ನೀಲಿ ರೆಕ್ಕೆಗಳ ಅಳಿಲು
ಳಿಲುಗಳಿಗೆ ರೆಕ್ಕೆಗಳಿರುವುದಿಲ್ಲ. ಆದರೆ ನಾನು ಸಣ್
ಣವನಿದ್ದಾಗ ಒಂದು ಅಳಿಲನ್ನು ನೋಡಿದೆ. ನೀಲಿ ಬಣ್ಣದ ಆ ಅಳಿಲು ತನ್ನ ಕಡು ನೀಲಿ ರೆಕ್ಕೆಗಳನ್ನು ಪಟಪಟ ಬಡಿಯುತ್ತಾ ಹಾರುತ್ತಿತ್ತು. ಒಂದು ಸಂಜೆ ಶಾಲೆ ಬಿಟ್ಟಿತು. ನೀಲಿ ಬಿಳಿ ಬಣ್ಣದ ಪತಂಗಗಳ ಮಹಾಪೂರವೊಂದು ಹೊರನುಗ್ಗಿತು. ಅವು ರೆಕ್ಕೆಗಳನ್ನು ಪಟಪಟಿಸುತ್ತ, ದಿಕ್ಕುದಿಕ್ಕಿಗೆ ಹಾರಿಹೋದವು. ಇದುವರೆಗೂ ಕಲಕಲವೆಂದು ಎಡೆಬಿಡದೆ ಹಾಡುತ್ತಿದ್ದ ಶಾಲೆ, ಪದವೇ ಕಳೆದುಕೊಂಡಂತೆ ಮೌನವಾಯಿತು.

ನಾನು ಮತ್ತು ಪುಟ್ಟಿ ಶಾಲೆಯ ಮೆಟ್ಟಿಲುಗಳನ್ನು ಇಳಿದು,
ಅಂಗಳವನ್ನು ದಾಪು ಹೆಜ್ಜೆಗಳಿಂದ ದಾಟಿ, ಮಣ್ಣುಧೂಳಿನ ಹಾದಿಯಲ್ಲಿ ಇತರ ಮಕ್ಕಳೊಂದಿಗೆ ಮುನ್ನಡೆದೆವು. ಸಂಜೆಯ ಆಕಾಶ ಕೊಂಚ ಕೆಳಗೆ ಬಾಗಿದಂತೆ ಇತ್ತು. ಅದಕ್ಕೆ ಕಾರಣ ಬಾನಿನಲ್ಲಿ ಗೊಂಚಲು ಹಿಂಡು ಕರಿ ಮೋಡಗಳು ತೂಗುತ್ತಿದ್ದವು. ಇನ್ನೇನು ಈಗ ಗುಡುಗಿ ಧಾರಾಕಾರ ಮಳೆ ಬೀಳಬಹುದು ಎಂಬಂತೆ.

ಪುಟ್ಟಿ ನನಗಿಂತ ಎರಡು ಕ್ಲಾಸು ದೊಡ್ಡವಳು. ನಾವಿಬ್ಬರೂ ಅಂದು ಕೊಡೆ ತಂದಿರಲಿಲ್ಲ. ನಮ್ಮ ಮನೆಗಳು ದೂರದಲ್ಲಿದ್ದವು. ನನ್ನನ್ನು ಮನೆಗೆ ತಲುಪಿಸಿ ಪು
ಟ್ಟಿ ಅವಳ ಮನೆಗೆ ಹೋಗಬೇಕಿತ್ತು. ಗುಡ್ಡವೊಂದರ ತಪ್ಪಲಿನಲ್ಲಿದ್ದ ನಮ್ಮ ಮನೆಗಳಿಗೆ ಇಕ್ಕಟ್ಟಾದ, ಹಾವಿನಂತೆ ಅಂಕುಡೊಂಕಾಗಿ ಹರಿಯುವ, ಧೂಳು ತುಂಬಿದ, ಅಕ್ಕಪಕ್ಕ ಕಾಡು ಕವಿದ ಕಾಲುಹಾದಿಗಳ ಮೂಲಕ ಹೋಗಬೇಕಿತ್ತು.

ನಮ್ಮ ಜತೆಗಿದ್ದ ಮಕ್ಕಳು ನಮ್ಮಿಂದ ಕವಲುಗೊಂಡು ಅವರವರ ಮನೆಗಳತ್ತ ಹಾದಿ ಹಿಡಿದರು. ನಾವಿಬ್ಬರೇ ನಮ್ಮ ದಾರಿಯಲ್ಲಿ. ಪುಟ್ಟಿ ಪಕ್ಕನೆ 'ಬಾ, ಪಕ್ಕದ ಗುಡ್ಡದಲ್ಲಿ ನೇರಳೆ ಹಣ್ಣಾಗಿದೆ. ಕೊಯ್ದು ತಿನ್ನುವ, ಇಂದು ಬೆಳಿಗ್ಗೆ ಬರುವಾಗ ನೋಡಿದೆ’ ಎಂದಳು. 'ಮಳೆ ಬಂದರೆ ಏನು ಮಾಡುವುದು ?’ ಎಂದೆ. 'ಬರಲಿಕ್ಕಿಲ್ಲ ಬಾ, ಇಂದು ಬಿಟ್ಟರೆ ನಾಳೆ ಗೋಪಿ ಕಿಟ್ಟಿ ಎಲ್ಲ ತಿಂದು ಮುಗಿಸಿಬಿಡುತ್ತಾರೆ’ ಎಂದಳು. ಆಮೇಲೆ ನನ್ನನ್ನು
ಎಳೆದುಕೊಂಡೇ ದಾರಿ ತೊರೆದು ಗುಡ್ಡದತ್ತ ನುಗ್ಗಿದಳು. ದಾರಿ ಇರಲಿಲ್ಲ ; ನುಗ್ಗಿದ್ದೆ ದಾರಿ. ಅಕ್ಕಪಕ್ಕದಲ್ಲಿ ಸರಳಿ ಕುಂಟಾಲ ಕೇಪಳ ಗಿಡಗಳು, ಚಾಕಟೆ ನೋಕಟೆ ನೆಲ್ಲಿ ಮರಗಳು, ಸುತ್ತ ಹಬ್ಬಿದ ಮಾದೇರಿ ಬಳ್ಳಿಗಳು. ಚಡ್ಡಿ ಹಾಕಿದ ತೊಡೆಗಳಿಂದ ಕೆಳಗೆ ನಗ್ನ ಕಾಲುಗಳಿಗೆ ತೊಡರುವ ಕಿನ್ನರಿ ಮುಳ್ಳುಗಳು. ಮುಂದೆ ಧಾವಿಸುತ್ತಿರುವ ಪುಟ್ಟಿಯ ಲಂಗ ಯಾವ್ಯಾವುದೋ ಪೊದೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿದೆ. ಅದನ್ನು ಎಳೆದು ಬಿಡಿಸುತ್ತ ಗುಡ್ಡದಲ್ಲಿ ಇನ್ನೂ ಮೇಲಕ್ಕೆ ನಾವು. ನೇರಳೆ ಗಿಡಗಳ ತುಂಬ ಗೊಂಚಲು ಗೊಂಚಲು ಕಪ್ಪು ಕಪ್ಪು ಹಣ್ಣುಗಳು. ಗೆಲ್ಲುಗಳು ಕೆಳಕ್ಕೆ ಜಗ್ಗಿಕೊಂಡಿದ್ದವು. ಇಬ್ಬರೂ ಕೈನಿಲುಕಿನಲ್ಲಿರುವ ಕೊಂಬೆಗಳತ್ತ ನುಗ್ಗಿದೆವು. ಒಮ್ಮೆ ಕೈಹಾಕಿ ಜಗ್ಗಿದರೆ ಹಿಡಿತುಂಬ ಹಣ್ಣುಗಳು ಬಂದವು. ನಾಲಿಗೆಯ ಮೇಲೆ ಹುಳಿ ಹುಳಿ ಸಿಹಿ ಸಿಹಿ ಒಗರು. ಕೆಲವೇ ಕ್ಷಣಗಳಲ್ಲಿ ನಾಲಿಗೆ ಬಾಯಿ ಕೈ ಎಲ್ಲ ಕಪ್ಪಾಗಿ ಹೋಯ್ತು.

ಅದೇ ಕ್ಷಣದಲ್ಲಿ ಮೋಡಗಳು ಒಡೆದುಹೋದಂತೆ ಇದ್ದಕ್ಕಿದ್ದಂತೆ ಸಣ್ಣಗೆ ಮಳೆ ಸುರಿಯತೊಡಗಿತು. ಏಕಾಏಕಿ ಬಂದ ಹನಿಮಳೆಯಿಂದ ಖುಷಿಯಾಯಿತು. ಹಣ್ಣು ಜಗ್ಗುತ್ತ ನ
ಾವು ನೆನೆಯತೊಡಗಿದೆವು. ಮೊದಲ ಹನಿಗಳು ನಮ್ಮ ಹಣೆಯನ್ನು ತೋಯಿಸಿ ಹಣೆಯ ಮೇಲಿನಿಂದ ಇಳಿದು ಮೂಗಿನ ತುದಿಯಲ್ಲಿ ಕ್ಷಣಕಾಲ ಕುಳಿತು ತುಟಿಯಲ್ಲಿ ಇಂಗಿದವು. ನಿಧಾನವಾಗಿ ಮಳೆ ಜೋರಾಯಿತು. ಈಗಂತೂ ಪೂರಾ ಒದ್ದೆಯಾದೆವು. ಇಬ್ಬರಿಗೂ ಗಾಬರಿಯಾಯಿತು. ಒದ್ದೆಯಾದರೆ ಮನೆಯಲ್ಲಿ ಅಮ್ಮನಿಂದ ಬಯ್ಯಿಸಿಕೊಳ್ಳಬೇಕಾಗುತ್ತದೆ. ಪುಟ್ಟಿ ನನ್ನನ್ನೂ ಕರೆದುಕೊಂಡು ಪೊದೆಯೊಳಗೆ ನುಗ್ಗಿದಳು. ಅಲ್ಲಿಗೆ ಮಳೆ ಅಷ್ಟು ಸುಲಭವಾಗಿ ಸುರಿಯುವಂತಿರಲಿಲ್ಲ.

ನಿನ್ನ ನಾಲಿಗೆ ತೋರಿಸು ಅಂದಳು. ಕಪ್ಪಾಗಿದೆಯಲ್ಲಾ ಅಂದಳು. ನಿನ್ನದೂ ಹಾಗೇ ಆಗಿದೆ ಎಂದಾಗ ನಕ್ಕಳು. ಆಮೇಲೆ ಗಂಟಲನ್ನು ನೋಡಿ ಇದೇನೋ ಉಬ್ಬಿಕೊಂಡಿದೆ ಅಂದಳು. ಬಳಿಕ ಹುಡುಗರಿಗೆ ಹಾಗಿರುತ್ತದೆ, ನಮಗಿರೊಲ್ಲ ಎಂದಳು. ನನ್ನ ತಲೆ ನೆಂದಿದೆ ಅಂದೆ. ಒರೆಸ್ತೇನೆ ಎಂದವಳು, ನನ್ನ ತಲೆಯನ್ನು ಬಗ್ಗಿಸಿ ಅವಳ ಲಂಗದಿಂದ ಉಜ್ಜತೊಡಗಿದಳು. "ಇವತ್ತು ಕೆಂಪು ಚಡ್ಡಿ ಹಾಕಿದ್ದಿ ಕಾಣಿಸ್ತಿದೆ’ ಅಂತ ಕೀಟಲೆ ಮಾಡಿದೆ. ಫಟ್ಟನೆ ತಲೆಗೆ ಮೊಟಕಿ ಕೆಂಗಣ್ಣು ಬೀರಿದಳು. ಅಳು ಬಂತು. ಕೂಡಲೇ ತಬ್ಬಿಕೂಂಡು, ಅಳಬೇಡ ಮಾರಾಯ ಎಂದಳು. ಬೆಚ್ಚಬೆಚ
್ಚಗೆ ಅನಿಸಿತು. ಮತ್ತೆ ಹಾಗೇ ಕುಳಿತಿದ್ದೆವು. ಮಳೆ ಸಣ್ಣಗೆ ಹನಿಯುತ್ತಿತ್ತು.

ಆಗ ಅಳಿಲು ಕಾಣಿಸಿತು. ನಮ್ಮಿಂದ ಎರಡು ಗಿಡದಾಚೆಗೆ, ನೇರಳೆ ಗಿಡವೊಂದರ ಮೇಲೆ ಕುಳಿತಿತ್ತು. ಸುಮ್ಮನೆ ಕುಳಿತು ಹಣ್ಣು ಮುಕ್ಕುತ್ತಿದ್ದುದರಿಂದ ಇದುವರೆಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಹಿಂದಿನ ಎರಡು ಕಾಲುಗಳಲ್ಲಿ ಕೊಂಬೆಯನ್ನು ಹಿಡಿದು ಕುಳಿತು, ಮುಂದಿನ ಎರಡು ಕೈಗಳಲ್ಲಿ ಹಣ್ಣು ಹರಿದು ತಿನ್ನುತ್ತಿತ್ತು. ಆಮೇಲೆ ಇದ್ದಕ್ಕಿದ್ದಂತೆ ಕೊಂಬೆಯ ಮೇಲೆ ಓಡಿ, ಜಿಗಿಯಿತು. ಆಗ ಅದರ ಎರಡೂ ಪಕ್ಕಗಳಲ್ಲಿ ವಿಸ್ತಾರವಾದ ಎರಡು ರೆಕ್ಕೆಗಳು ಬಿಚ್ಚಿಕೊಂಡವು. ಕಡುನೀಲಿ ರೆಕ್ಕೆಗಳು
. ಆಮೇಲೆ ಬಡಿದುಕೊಂಡವು, ಮೇಲೂ ಕೆಳಗೂ. ಹಾರುತ್ತಿದ್ದಾಗ ನಮಗೆ ಕಾಣಿಸಿದ್ದು- ಪಟಪಟನೆ ಮೇಲೆ ಕೆಳಗೆ ಬಡಿದುಕೊಂಡ ನೀಲಿ ರೆಕ್ಕೆಗಳು, ಊದಾ ಬಣ್ಣದ ಹೊಟ್ಟೆ, ಹಿಂದೆ ಉದ್ದಕ್ಕೆ ಚಾಚಿಕೊಂಡ ಕಂದು ಕಪ್ಪು ಮಿಶ್ರಿತ ಕುಚ್ಚು ಕುಚ್ಚಿನ ಬಾಲ, ಗಾಳಿಯಲ್ಲಿ ಹಿಂದಕ್ಕೆ ಈಸುತ್ತಿದ್ದ ಮುಂಗಾಲುಗಳು, ಎವೆತೆರೆದ ಕಂಗಳು ಮತ್ತು ಮುಂದಕ್ಕೆ ಚಾಚಿಕೊಂಡ ಮೂತಿ. ಗಕ್ಕನೆ ಕೊಂಬೆಗೆ ಎಗರಿ ಸರಸರನೆ ಓಡಿತು. ಮತ್ತೆ ಕೊಂಚ ಉದಾಸವಾಗಿ ಕುಳಿತು ಬೆನ್ನು ತುರಿಸಿಕೊಂಡಿತು. ಆಗ ಮಡಿಸಿಕೊಂಡ ನೀಲಿ ರೆಕ್ಕೆಗಳು ಕೊಂಚ ಬಿಡಿಸಿಕೊಂಡವು. ಮತ್ತೆ ಏನೋ ನೆನಪಾದವರಂತೆ ಕೊಂಬೆಯಲ್ಲೆ ಹಿಂತಿರುಗಿತು. ಕುಳಿತಿತು.

ನಾವಿಬ್ಬರೂ ಅಳಿಲನ್ನು ಏಕಕಾಲಕ್ಕೆ ನೋಡಿದ್ದೆವು. ಇಬ್ಬರೂ ದಿಗ್ಭೃಮೆ ಕವಿದ ಮೌನದಲ್ಲಿ, ಅದು ಕೊಂಚವೇ ಕದಡಿದರೂ ಮುಂದಿರುವ ಅಳಿಲು ಇಲ್ಲದಂತೆ ಮಾಯವಾಗಿಬಿಡುತ್ತದೆ ಎಂಬ ಅನಿಸಿಕೆಯಲ್ಲಿ ಕುಳಿತಿದ್ದೆವು. ಅದೇನು ಮಾಯಾವಿ ಅಳಿಲೋ, ಗಳಿಗೆ ಗಳಿಗೆಗೂ ಚಂಚಲಗೊಂಡಂತೆ ಕೊಂಬೆಕೊಂಬೆಯಲ್ಲಿ ಚಕಚಕ ಜೀಕುತ್ತಿತ್ತು. ಕ್ಷಣ ನಿಂತಲ್ಲಿ ನಿಲ್ಲುತ್ತಿರಲಿಲ್ಲ. ನಮ್ಮ ಕಣ್ಣುಗಳು ಅಳಿಲು ಹೋ
ದಲ್ಲಿ ಹಾಯುತ್ತಿದ್ದವು. ರೆಕ್ಕೆಗಳ ನೀಲಿ ಒಮ್ಮೆ ಮೈಗೆ ಹರಡಿಕೊಂಡಂತೆ ಅಳಿಲು ತೀರ ಬೇರೆಯೇ ಆಗಿ, ಸಂಜೆ ಮುಗಿಯುತ್ತಿರುವ ಬೆಳಕಿನ ಕೊನೆಯ ಕಿರಣಗಳು ಎಲ್ಲೋ ತೂರಿಬಂದು ತಟ್ಟಿದರೆ ಮತ್ತೆ ಅಳಿಲು ಬೇರೆಯೇ ಆಗಿ, ಎಲೆಗಳ ನಡುವೆ ಮಾಯವಾಗುವಾಗ ಮತ್ತೆ ಮೂಡುವಾಗ ಬೇರೆಯೇ ಆಗಿ, ರೆಕ್ಕೆ ಬಡಿದಾಗ ಸಿಡಿವ ಹನಿಗಳ ತುಂತುರಿನಲ್ಲಿ ಬೇರೆಯೇ ಆಗಿ ಕಾಣುತ್ತಿತ್ತು. ಕುಂಟಾಲ ಗಿಡದಡಿಯಲ್ಲಿ ಮರೆವು ಕವಿದಂತೆ ಮೌನ, ಮಂಪರು ಕವಿದಂತೆ ಮೌನ. ಎಡೆಬಿಡದೆ ಸುರಿಯುತ್ತಿರುವ ಹನಿಮಳೆ, ದಟ್ಟೈಸಿ ತೂಗುತ್ತಿರುವ ಕರಿಮೋಡ, ಕವಿಯುತ್ತಿರುವ ಕತ್ತಲೆ, ಮುಂದೆ ಹೌದೋ ಅಲ್ಲವೋ ಎಂಬಂತೆ ಕಾಣುತ್ತಿರುವ ಅಳಿಲು, ಎಲ್ಲವೂ ಮಂಪರಿನ ಲೋಕದಲ್ಲಿ ನಡೆಯುತ್ತಿರುವಂತೆ, ಮುಗಿಯಲಾರದ ಕನಸೊಂದು ಹಚ್ಚಡ ಹೊಚ್ಚಿದಂತೆ.

ಇದ್ದಕ್ಕಿದ್ದಂತೆ ಪುಟ್ಟಿ "ಏಳು ಹೋಗುವಾ’ ಅಂದಳು.
ದಗ್ಗನೆದ್ದಂತೆ ಕಣ್ಣ ಮುಂದಿದ್ದ ಅಳಿಲು ಅಲ್ಲಿ ಇರಲೇ ಇಲ್ಲವೆಂಬಂತೆ ಮಾಯವಾಗಿತ್ತು. ನಾವಿಬ್ಬರೂ ಸರಸರ ನಡೆದು ಮನೆ ಸೇರಿಕೊಂಡೆವು. ದಾರಿಯಲ್ಲೆಲ್ಲೂ ಪುಟ್ಟಿ ಮಾತನಾಡಲಿಲ್ಲ, ನಾನೂ ಕೂಡ. ಮನೆಗೆ ಬಂದ ಬಳಿಕ ಅಪ್ಪ ಅಮ್ಮನಿಗೆ 'ನಾನಿಂದು ಹಾರುವ ಅಳಿಲು ಕಂಡೆ’ ಎಂದು ಹೇಳಿದೆ. ಅವರು ನಂಬಲಿಲ್ಲ. ಮರುದಿನ ಶಾಲೆಗೆ ಹೊರಟ ಹೊತ್ತಿಗೆ, ಪುಟ್ಟಿಯ ಅಮ್ಮ ಬಂದರು. "ಇವತ್ತು ಪುಟ್ಟಿ ಶಾಲೆಗೆ ಬರೊಲ್ಲ, ನೀ ಹೋಗೋ’ ಎಂದರು. 'ಯಾಕೆ ?’ ಅಂತ ಕೇಳಿದೆ. 'ಅವಳು ಹೊರಗೆ ಕೂತಿದಾಳೆ. ನಿಂಗೊತ್ತಾಗಲ್ಲ, ಅಮ್ಮ ಎಲ್ಲಿದಾರೆ ?’ ಎಂದು ಮನೆಯೊಳಗೆ ಹೋದರು. ನನ
ಗೆ ನಿಜಕ್ಕೂ ಗೊತ್ತಾಗಲಿಲ್ಲ. ನಾನು ನೀಲಿ ರೆಕ್ಕೆಗಳ ಅಳಿಲನ್ನು ನೋಡಿದ್ದೇನೆ ಎಂದು ಹೇಳಿದರೆ ಇದುವರೆಗೆ ಯಾರೂ ನಂಬಿಲ್ಲ. ಆದರೆ ಪುಟ್ಟಿ ಅಳಿಲಿನ ಬಗ್ಗೆ ಯಾರ ಹತ್ತಿರವೂ ಇದುವರೆಗೆ ಹೇಳಿಲ್ಲ ಅಂತ ಕಾಣುತ್ತದೆ.

-ಹರೀಶ್ ಕೇರ--------------------------------------------------------------
ಮಕ್ಕಳ ಬಗ್ಗೆ, ಮಕ್ಕಳ ಪದ್ಯದ ಲಯದಲ್ಲಿ, ವಯಸ್ಕರಿಗಾಗಿ ಬರೆದ ಪದ್ಯ !

ನಿರಂತರ
ಲಂಗದ ಹುಡುಗಿಯು ಅಂಗಳದಂಚಿಗೆ
ಬಂದಳು ಸಂಜೆಯ ಹೊತ್ತು
ನನಗೂ ಆಕೆಗು ವರ್ಷಗಳಂತರ
ಇದ್ದುದರರಿವೆನಗಿತ್ತು

ಮನೆಯ ಹಿಂದಿನ ಗುಡ್ಡವನೇರಲು
ದೊಡ್ಡವಳಾಕೆಯು ಮುಂದೆ
ಶಿಳ್ಳೆ ಹೊಡೆಯುತ ನಾನೂ ನಡೆದಿರೆ
ದಾರಿಯು ಇಬ್ಬರದೊಂದೆ

ಹೆಜ್ಜೆ ಹೆಜ್ಜೆಗೂ ಛೇಡಿಸುತಿದ್ದಳು
ನಾನೋ ರೇಗಿಸುತಿದ್ದೆ
ಕಿತ್ತ ಗೋಡಂಬಿಯ ಕೊರೆಯುತ್ತಿದ್ದಳು
ನಾನೂ ತಿನ್ನುತಲಿದ್ದೆ

ಏರಿನಲೊಂದು ತರುವಿಗೆ ಒರಗಿ
ನಿಂತಳು ನಾನೂ ಜರುಗಿ
ಸನಿಹಕೆ ಆಕೆಯ ಕಂಗಳು ಕೆಂಪು
ಮನದಲ್ಲೇನೋ ಜರಗಿ

ಥಟ್ಟನೆ ನನ್ನೆಡೆ ನೋಡುತ ಏಕೋ
ರೆಂಬೆಗೆ ಬಡಿದಳು ಕತ್ತಿ
ಏನೋ ಒಂಥರಾ ನನಗೂ ಆಕೆಯು
ಸವರಲು ಬೆನ್ನನು ಒತ್ತಿ

ಬಡಿದಾ ರಭಸಕೆ ಚಿಮ್ಮಿತು ಕತ್ತಿ
ಹುಡುಕಲು ಹೊರಟಳು ಬಗ್ಗಿ
ಸಿಕ್ಕಲು ಹಿಡಿಗೆ ಸಿಕ್ಕಿಸಿ ನೆಲಕೆ
ಕುಕ್ಕಲು ಕಣ್ಣಲಿ ಸುಗ್ಗಿ

ತಬ್ಬುತ ತಡವುತ ಖುಶಿಯಲಿ ಎದ್ದೆವು
ಕೊಡಹುತ ಮೈಕೈ ಧೂಳು
ಮೇಗಡೆ ಆಗಸದಂಗೈಯಲ್ಲಿ
ಚಂದ್ರ ಗೋಡಂಬಿಯ ಸೀಳು.

-ಶ್ರೀಕೃಷ್ಣ ಚೆನ್ನಂಗೋಡ್

Read more...

November 14, 2007

ಬ್ಲಾಗ್ ಧ್ಯೇಯಗೀತೆ

ಬ್ಲಾಗಲ್ ಬರಿಯೋದಂದ್ರೆ ಬಹಳ ಸುಲ್ಬದ್ ಕೆಲ್ಸ ಅನ್ಬೇಡಿ
ಬಾಗ್ಲಲ್ ಬಂದೂ ಬ್ಯಾಬ್ಯಾ ಅನ್ನೋರ್ ಮಾತು ಕೇಳ್ಲೇಬೇಡಿ

ಎಷ್ಟ್ ಬರೆದ್ರೂ ಮಾತಾಡಲ್ಲ ಕೆಲೋರು ಭಾರೀ 'ಟೈಟು’
ಕಾಲ್ ಕೆರ್‍ಕೊಂಡ್ ಜಗಳಕ್ಕೋದ್ರೂ ಸಿಕ್ಕಾಪಟ್ಟೆ ಸೈಲೆಂಟು!

ಹಗ್ಲು ರಾತ್ರಿ ಕುಟ್ಟಿದ್ರೂನು ಇಲ್ಲ ಸಂಬ್ಳ-ಪ್ರಶಸ್ತಿ
ಆಫೀಸ್ ಟೈಮಲ್ಲಿ ಬ್ಲಾಗ್ ಓದೋರ ಸಂಖ್ಯೆ ಬಹ್ಳ ಜಾಸ್ತಿ !
ಬ್ಲಾಗಿಂಗ್ ಅಂದ್ರೆ ಬರೀ ಹುಚ್ಚು ಬ್ಲಾಗರ್ ಅಂದ್ರೆ ಕೋಡು
ಹೇಳೋರಿಲ್ಲ ಕೇಳೋರಿಲ್ಲ ಓದೋರಿಲ್ಲ ಪಾಡು!

'ಅವ್ರಿವ್ರ್ ಬಗ್ಗೆ , ಲೋಕದ್ ಬಗ್ಗೆ ಹೇಳಿದ್ದೇ ಹೇಳ್ಕೊತಾನೆ
ಇವ್ನ ಜಂಭ, ಒಳಗಿನ್ ಬುರುಡೆ ಸುಮ್ನೆ ತೋರ್‌ಸ್ತಾನೆ'
ಅಂತಂದ್ಕೊಂಡೆ ನೋಡ್ಕೊಂಡ್ ಓದ್ಕಂಡ್ ಹೋಗ್ತಿರೋದು ನೀವೆ
ಬರ್‍ಕೊಂಡ್ ಬರ್‍ಕೊಂಡ್ ಚಚ್ಚಾಕ್ತಿರೋದು ಲೆಕ್ಕಕ್ಕಿಲ್ದ ನಾವೇ!

ಹೈಸ್ಕೂಲ್ ಹುಡ್ಗಿ ಕನ್ನಡಿ ಮುಂದೆ ಕೂತ್ಕಂಡಿರೋ ಹಂಗೆ
ಮಾನಿಟ್ರ್ ಮುಂದೆ ಕಣ್‌ಬಿಟ್ಕೊಂಡು 'ನೆಟ್ಟು’ ಬಿಚ್‌ಹಾಕೊಂಡು
ಬ್ಲಾಗಿನೊಳಗೆ ಪೇಪರ್‍ನೋರು ಎಲ್ಲಾ ಬಾಗ್ಲು ತಕ್ಕೊಂಡು
ಓದಿ ಓದಿ ಬರಿಯೋದೊಂದು ಎಲ್ರೂ ಓದೋವಂತದ್ದು
ಏನೂ ಓದ್ದೆ ಬರಿಯೋದೊಂದು ಯಾರೂ ಬರಿಯಾಕಾಗದ್ದು!

ಹಿಂಗೆ ಬರ್‍ಕೊಂಡ್ ಬರ್‍ಕೊಂಡ್ ಒಯ್ತಾ ಇದ್ರೆ ಏನಾಗುತ್ತೊ ಗೊತ್ತಿಲ್ಲ
ತಿಳಿಯೋವರ್‍ಗೆ, ನಿಮ್ ಅಮ್ಮನ್ ಆಣೆ, ಬರಿಯೋದಂತೂ ನಿಲ್ಸಲ್ಲ!

Read more...

November 09, 2007

ನಗರದ ನಂದಾದೀಪದ ಸುತ್ತ ಹಳ್ಳಿಯ 'ಅಕ್ಷರ’ಚಿಟ್ಟೆ

ಬೆಂಗಳೂರಿನಲ್ಲಿ ಹಚ್ಚಿದ ನಕ್ಷತ್ರಕಡ್ಡಿಗಳಲ್ಲಿ ಹಲವರಿಗೆ ಊರಿನ ದಾರಿ ಕಾಣುತ್ತಿರುತ್ತದೆ. ಗಗನಕ್ಕೆ ಚಿಮ್ಮಿದ ರಾಕೆಟ್‌ನಲ್ಲಿ ಮನಸ್ಸು ಪ್ರಯಾಣ ಮಾಡುತ್ತದೆ. ಊರು ಬಿಟ್ಟು ಬಂದು ಪ್ರತಿರಾತ್ರಿಯೂ ಬೆಂಗಳೂರಿನ ನಿಯಾನ್ ದೀಪಗಳ ಬೆಳಕಿನಲ್ಲಿ ಮೀಯುತ್ತಿರುವವರಿಗೆ, ಇದು ಹಳ್ಳಿಯ ಅಕ್ಷರದೀಪ. ಊರಿಗೆ ಹೋಗಲು ಟಿಕೆಟ್, ರಜೆ ಸಿಕ್ಕದವರಿಗೆ ಬೋನಸ್ !


ತುಳಸೀಕಟ್ಟೆಯ ಸುತ್ತಲೂ ಹತ್ತಾರು ಪುಟ್ಟ ಪುಟ್ಟ ಕ್ಯಾಂಡಲ್‌ಗಳು ಉರಿಯುತ್ತಿವೆ. ನಾಲ್ಕು ಮೂಲೆಗಳಿಗೆ ಮಾತ್ರ ಒಂದೊಂದು ಮಣ್ಣಿನ ಹಣತೆ. (ಅವು ಊರಲ್ಲೀಗ ಸಿಗುವುದಿಲ್ಲವೆಂದು ಬೆಂಗಳೂರಿನ "ಬಿಗ್ ಬಜಾರ್’ನಿಂದ ತರಿಸಿದ್ದು. ) ಕಟ್ಟೆಯಲ್ಲಿ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆದ ತುಳಸೀ ಗಿಡ. ಅದರ ಕದಿರುಗಳನ್ನೆಲ್ಲ ಅಮ್ಮ ಸಂಜೆಯಷ್ಟೇ ಕಿತ್ತಿದ್ದಾಳೆ. ಕಟ್ಟೆಯೆದುರು ಸೆಗಣಿ ಸಾರಿಸಿ ಒಪ್ಪವಾದ ನೆಲದಲ್ಲಿ ಹೂವಿನೆಳೆಯ ರಂಗೋಲಿ. ಪಕ್ಕದಲ್ಲಿ ಬಲಿಯೇಂದ್ರ ಹಾಗೂ ಆತನ ಪತ್ನಿಯ ಪ್ರತೀಕವಾಗಿ ಹಾಲೆ ಮರದ ಎರಡು ಕಂಬಗಳು. (ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಬಲಿ ಚಕ್ರವರ್ತಿಯು ಬಲಿ ಪಾಡ್ಯಮಿಯ ಈ ಒಂದುದಿನ ಮಾತ್ರ ಭೂಮಿಗೆ ಬರುತ್ತಾನಂತೆ) ನಾಲ್ಕಡಿ ಎತ್ತರದ ಆ ಎರಡು ಕಂಬಗಳಿಗೆ ಅಡ್ಡಕ್ಕೆ ಮತ್ತು ಮೂಲೆಯಿಂದ ಮೂಲೆಗೆ ಅಡಿಕೆ ಮರದ ಸಲಕೆಗಳು. ಅವು ಮುಚ್ಚಿ ಹೋಗುವಂತೆ ತುಳಸಿ, ಲಂಬಪುಷ್ಪ, ಕೇಪಳೆ, ದಾಸವಾಳ, ಸದಾಮಲ್ಲಿಗೆ, ರಥಪುಷ್ಪ ಹೀಗೆ ಅಂಗಳದಲ್ಲಿ ಬೆಳೆದ, ತೋಟದಲ್ಲಿ ಕೈಗೆ ಸಿಕ್ಕಿದ ಹೂಗಳ ಹಾರ. ಗೋಲಿಕಾಯಿಯಷ್ಟು ದೊಡ್ಡದಿರುವ ಹಸಿರು ಅಂಬಳ ಕಾಯಿಗಳನ್ನು ಬಾಳೆನಾರಿನಲ್ಲಿ ಸುರಿದು ಸಿದ್ಧವಾದ ಉದ್ದನೆಯ ಮಾಲೆ. ಮನೆಯೆದುರಿನ ತುಳಸೀಕಟ್ಟೆಯೇ ಬೃಂದಾವನವಾಗುವುದಕ್ಕೆ ಇನ್ನೇನು ಬೇಕು ?

ಮುದುಕ ನಾರಾಯಣ ಆಚಾರಿ ನಿನ್ನೆಯೇ ಬಂದು ಮರದ ಅಟ್ಟೆಯನ್ನು ಅಂಗಳದೆದುರಿನ ಗಿಡವೊಂದರಲ್ಲಿ ಸಿಕ್ಕಿಸಿ ಹೋಗಿದ್ದಾನೆ. ಚತುರ್ಭುಜಗಳ ಆ ಮೂರು ಅಟ್ಟೆಗಳನ್ನು ಬಲಿಯೇಂದ್ರನ ಮರಕ್ಕೆ ಕಿರೀಟದಂತೆ ತೊಡಿಸಲಾಗುತ್ತದೆ. ಕಳೆದ ಬಾರಿ ಅದನ್ನು ಮೂವತ್ತು ರೂಪಾಯಿಗೆ ಮಾಡಿಕೊಟ್ಟಿದ್ದ ಆಚಾರಿ, ಈ ಬಾರಿ ನಲ್ವತ್ತಾದರೂ ಕೊಡಬೇಕೆಂದು ಪಟ್ಟು ಹಿಡಿದಿದ್ದಾನೆ. 'ಪ್ರತಿ ವರ್ಷ ಹತ್ತತ್ತು ರೂಪಾಯಿ ಜಾಸ್ತಿ ಮಾಡಿದ್ರೆ ಹೇಗೆ? ಅಡಿಕೆ ರೇಟು ಹಾಗೆ ಜಾಸ್ತಿಯಾಗ್ತಾ ಹೋಗ್ತದಾ?’ ಅಂತ ಹೇಳಿಕೊಂಡೇ ಅಪ್ಪ ನಲ್ವತ್ತು ರೂಪಾಯಿ ಕೊಟ್ಟಿದ್ದಾರೆ. 'ಪಾಪ, ಇವ ಇರುವಷ್ಟು ದಿನ ತಂದುಕೊಟ್ಟಾನು. ಇನ್ನು ಇವನ ಮಕ್ಕಳು ಮರದ ಕೆಲ್ಸ ಮಾಡ್ತಾ ಇದ್ದಾರೋ ಇಲ್ವಾ ಅನ್ನೋದೇ ಗೊತ್ತಿಲ್ಲ. ಮಾಡಿದರೂ ಅವರು ಇದನ್ನೆಲ್ಲಾ ಮನೆ ಬಾಗಿಲಿಗೆ ತರ್‍ತಾರಾ? ಅಥವಾ ನಮ್ಮ ಮಕ್ಕಳಾದರೂ ಈ ಬಲಿಯೇಂದ್ರ ಹಾಕ್ತಾರೆ ಅಂತ ಏನು ಗ್ಯಾರಂಟಿ?’ ಎನ್ನುತ್ತಾ ಕನ್ನಡಕದ ಮೇಲಿನಿಂದ ಮಕ್ಕಳನ್ನು ನೋಡಿ ನಗುತ್ತಾರೆ. ಆದರೆ ಅವರ ಪ್ರಶ್ನೆಯಲ್ಲಿ, ಹಾಸ್ಯದಲ್ಲಿ - ಮಕ್ಕಳು ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆನ್ನುವ ಅಚಲ ವಿಶ್ವಾಸ ತುಂಬಿದಂತಿರುತ್ತದೆ !

ಬಲಿ ಪಾಡ್ಯಮಿಯ ದಿನದ ಸಂಜೆಯಲ್ಲೂ ವಿಶೇಷ ಆಹ್ಲಾದವಿದೆ. ಅಡುಗೆಮನೆ ಸತತವಾಗಿ ಶಬ್ದ ಮಾಡುತ್ತಲೇ ಇರುತ್ತದೆ. ಮಕ್ಕಳು ಹೂ ಕೊಯ್ದು ಬಲಿಯೇಂದ್ರನ ಅಲಂಕಾರದಲ್ಲಿ ಮಗ್ನರಾಗಿದ್ದಾರೆ ; ಆಗಾಗ ತಲೆ ಮೇಲೆತ್ತಿ ಆಕಾಶ ಶುಭ್ರವಾಗಿರುವುದನ್ನು ಕಂಡು ಖುಶಿಗೊಳ್ಳುತ್ತಾರೆ. ಸೀಮೆಎಣ್ಣೆ ತುಂಬಿ ಹೊಸಬತ್ತಿ ಹಾಕಿದ ಹಿತ್ತಾಳೆಯ ದೀಪಗಳನ್ನೆಲ್ಲ ಸಾಲಾಗಿ ಜೋಡಿಸಿದ ಅಜ್ಜಿ 'ಇಕೊ ನೋಡು, ಕಾಲಾಳು...ರಥ...ಆನೆ...ಮಂತ್ರಿ ಎಲ್ಲ ರೆಡಿ’ ಅನ್ನುತ್ತಿದ್ದಾರೆ. ಮುಗಿಯದ ಕೆಲಸಕ್ಕೆ ಬಯ್ದುಕೊಳ್ಳುತ್ತಾ , ಒಬ್ಬರಾದ ನಂತರ ಒಬ್ಬರಿಗೆ ಸ್ನಾನಕ್ಕೆ ಹೋಗುವ ಧಾವಂತ. ಎಲ್ಲರ ಎಲ್ಲ ಕೆಲಸಗಳಲ್ಲೂ ಏನೋ ಚುರುಕುತನ.
ರಾತ್ರಿಯ ಬೆಳಕಿಗಾಗಿ ಸಂಜೆ ನಿಧಾನವಾಗಿ ಕಾವೇರಿಸಿಕೊಳ್ಳುತ್ತಿದೆ.

ರಾತ್ರಿ ಎಂಟಕ್ಕೆ ಅಪ್ಪ ಬಿಳಿ ಪಂಚೆಯುಟ್ಟು ಮೈಮೇಲೆ ಶಾಲನ್ನು ಎಳೆದುಕೊಳ್ಳುತ್ತಾ ಬಲಿಯೇಂದ್ರನ ಎದುರು ಆಗಮಿಸುತ್ತಾರೆ. ಪೂಜೆಗೆ ಬೇಕಾದ ಪರಿಕರಗಳನ್ನೆಲ್ಲಾ ಸಿದ್ಧಪಡಿಸಿಡುವ ಜವಾಬ್ದಾರಿ ಹೆಂಗಸರದ್ದ್ದು. ಅಪ್ಪನಿಗೆ ಮಂತ್ರಗಳೇನೂ ಸರಿಯಾಗಿ ಬರುವುದಿಲ್ಲ . (ಅಂದರೆ ಏನೇನೂ ಬರುವುದಿಲ್ಲ ಅಂತಲೇ ಅರ್ಥ ! ) ಆದರೆ ಕ್ರಿಯೆ ಬಹಳ ಜೋರು. ಹರಿವಾಣ, ಕೌಳಿಗೆ ಸಕ್ಕಣ, ಹೂವು-ಗಂಧ ತಕ್ಷಣ ಕೈಗೆ ಸಿಗದಿದ್ದರೆ ಸಿಟ್ಟೇ ಬಂದೀತು ! ಸೀರೆ ಎತ್ತಿ ಕಟ್ಟಿ ಎತ್ತರೆತ್ತರದ ಹಳೆ ಮನೆಯ ಮೆಟ್ಟಿಲುಗಳನ್ನು ಹತ್ತಿಳಿಯುತ್ತಾ "ದೀಪಕ್ಕೆ ಬತ್ತಿ ಹಾಕುದ್ರಲ್ಲಿ , ಗಂಧ ತೇಯೋದ್ರಲ್ಲಿ ನಾನು ಎಕ್ಸ್‌ಪರ್ಟು’ ಅಂತ ಅಜ್ಜಿ ಹೇಳುವುದನ್ನು ಅವರ ಬಾಯಿಯಿಂದಲೇ ಕೇಳಬೇಕು. ಅಮ್ಮನಿಗೆ ಮಾತ್ರ, ಎಲ್ಲಿ ಯಾವುದಕ್ಕೆ ಅಪ್ಪ ಬೈಯುತ್ತಾರೋ ಅಂತ ಭಯ. ಮೂವತ್ತು ವರ್ಷಗಳಿಂದ ಬರುತ್ತಿರುವ ಮನೆ ಕೆಲಸದವನಿಗೋ, ಅಂದು ಭಾರೀ ನಿಷ್ಠೆ , ಶ್ರದ್ಧಾ ಭಕ್ತಿ. ಸಾಯಂಕಾಲ ಮಿಂದು ಮಡಿಯಾಗಿ ಬಂದರೆ ರಾತ್ರಿಯ ಬಾರಣೆ ಮುಗಿದ ನಂತರ ಎಲೆಅಡಿಕೆ ಹಾಕಿ ಮಾತಾಡಿ ಹನ್ನೊಂದು ಗಂಟೆಗೇ ಅವನು ಹೊರಡುವುದು. 'ನೀವು ಪಟಾಕಿ ಹೊಟ್ಟುಸುದ್ರಲ್ಲಿ ನನ್ನ ದೀಪ ನಂದಿ ಹೋಯ್ತು’, 'ರಾಮಾ, ನಿಮ್ಮ ಪಟಾಕಿ ಶಬ್ದಕ್ಕೆ ಕೈಲಿದ್ದ ಮಜ್ಜಿಗೆಯೂ ಚೆಲ್ಲಿ ಹೋಯ್ತು ’ ಅಂತೆಲ್ಲ ಹೇಳಿಕೊಳ್ಳುವ ಅಮ್ಮ-ಚಿಕ್ಕಮ್ಮ-ಅಜ್ಜಿ -ಅತ್ತೆಯಂದಿರು, ಮಕ್ಕಳಿಗೆ ಯಾವ ಲೆಕ್ಕ? ಬಿದಿರಹಿಂಡಿಲಿಂದ (ಫ್ಲವರ್‌ಪಾಟ್)ಎತ್ತರಕ್ಕೆ ಚಿಮ್ಮಿದ ಅಗ್ನಿವರ್ಷದ ಬೆಳಕಿನಲ್ಲಿ ಸುತ್ತಲಿನ ಬಣ್ಣದ ಕ್ರೋಟನ್ ಗಿಡಗಳೂ ತೀರಾ ಮಂಕಾಗಿ ಕಾಣುತ್ತವೆ.

ಕವಿ ಅಡಿಗರು ಹೇಳುತ್ತಾರೆ 'ಮಿಂಚು ಕತ್ತಲ ಕಡಲ ಉತ್ತು ನಡೆದಿದೆ ಬೆಳಕು ಹಡಗು ದಿಗ್ದೇಶಕ್ಕೆ , ಸಿಡಿಮದ್ದಿನುಂಡೆ ಪ್ರತಿ ಮನೆಯಲ್ಲಿ !’ ಅಜ್ಜಿ ತನ್ನೆಲ್ಲ ಶಕ್ತಿ ಒಗ್ಗೂಡಿಸಿ ತೇಲುಗಣ್ಣಾಗಿಸಿ ಶಂಖ ಊದುತ್ತಾರೆ. ಎರಡಡಿ ಅಗಲದ ಹರಿವಾಣಕ್ಕೆ ಸಿಂಬೆ ಸುತ್ತಿದ ಕೋಲಿನಿಂದ ಭಂ ಭಂ ಭಂ ಎಂದು ಚಿಕ್ಕಯ್ಯ ಬಾರಿಸುತ್ತಾರೆ. ಮಕ್ಕಳಿಗೆಲ್ಲ ಅದೊಂದು ರೋಮಾಂಚಕಾರಿ ದೃಶ್ಯ. ಒಂಬತ್ತು ಗಂಟೆಗೆ ಪೂಜೆ ಮುಗಿಯುತ್ತದೆ. ತೋಟದಾಚೆಗಿನ ದೇವಸ್ಥಾನದಲ್ಲೂ 'ಬಲೀಂದ್ರ ಬಲೀಂದ್ರ ಕೂ, ಬಲೀಂದ್ರ ಬಲೀಂದ್ರ ಕೂ’ ಎಂದು ಊರವರೆಲ್ಲ ಕೂಗಿ ಬಲಿಯೇಂದ್ರನನ್ನು ಭೂಮಿಗೆ ಕರೆಯುವ ಸ್ವರ ಕೇಳಿದಾಗಲೇ ಮನೆಯಲ್ಲಿದ್ದವರಿಗೂ ಪೂಜೆ ಪೂರ್ತಿಯಾದ ತೃಪ್ತಿ. ಗೋಪೂಜೆಗೆಂದು ಹಟ್ಟಿಗೆ ಹೋಗಿ ದನ ಗಂಗೆಗೆ ಕತ್ತಲಲ್ಲೇ ಆರತಿ ಎತ್ತುವಾಗಲಂತೂ ಆ ಪರಿಸರವೇ ಪೂರ್ತಿ ಹೊಸದಾಗಿ ಕಾಣಿಸುತ್ತದೆ. ನಾವು ತಿನ್ನುವ ಬರಿಯಕ್ಕಿ ದೋಸೆ, ಬಿಸಿನೀರು ಕಡುಬು, ಸಿಹಿ ಅವಲಕ್ಕಿ , ಸೇಮಿಗೆಗಳನ್ನು ಅದೊಂದು ದಿನ ತಿನ್ನಲು ದನಕ್ಕೂ ಕೊಡುತ್ತಾರೆ. ಅದಕ್ಕೆ ಆರತಿ ಎತ್ತಿ, ತೀರ್ಥ ಪ್ರೋಕ್ಷಿಸಿದ ಮೇಲೆ ಹಣೆಗೆ ನಾಮ ಹಾಕುವುದಕ್ಕೆ ಮಾತ್ರ ಅಪ್ಪ ಬಹಳ ಪರದಾಡಬೇಕಾಗುತ್ತದೆ. ಘಂಟಾಮಣಿ - ಪಟಾಕಿಗಳ ಸದ್ದು , ಆರತಿಯ ಬೆಳಕಿಗೆ ಹೆದರುತ್ತಾ ದೋಸೆಗೆ ನಾಲಗೆ ಚಾಚುತ್ತಾ ಅದು ಗೋಣು ತಿರುಗಿಸುತ್ತಲೇ ಇರುತ್ತದೆ. ಎಳೆಯ ಹೊರಟ ನಾಮಗಳೆಲ್ಲಾ ಮೂತಿಗೋ, ಕೊಂಬಿಗೋ ತಾಗುತ್ತವೆ. ಅಂತೂ ಆ ಕಂದು ದನದ ಹಣೆಯ ಮೇಲೆ ಮಾತ್ರ ಬೆಳ್ಳಗೆ ಕೂದಲಿರುವಲ್ಲಿಗೇ ಕುಂಕುಮದ ನಾಮ ಎಳೆಯುತ್ತಾರೆ ಅಪ್ಪ. ಆಗ ಹಸು ಅತ್ಯಂತ ವಿಚಿತ್ರವಾಗಿ ಕಾಣಿಸುತ್ತದೆ .

'ದೀಪಗಳು ಮಂಗಳ ಪ್ರತೀಕಗಳಾಗಿ ಲೋಕದಲ್ಲಿ ಎಲ್ಲ ಸ್ಥಳಗಳಲ್ಲೂ ಬೆಳಗುತ್ತಿವೆ. ದೇವರು ಹಚ್ಚಿಟ್ಟಿರುವ ದೀಪ ಸೂರ್ಯ !’ ಎನ್ನುವ ಹಿರಿಯ ಕವಿ ಪುತಿನ ಬರೆದಿದ್ದಾರೆ- "ಅನಿರ್ವಚನೀಯವಾದ ಧ್ವನಿ ಸೌಂದರ್ಯವುಳ್ಳ ಅನರ್ಘ್ಯ ದೀಪೋಪಮೆಯೊಂದು, ವಿರಹತಪ್ತ ರಾಮ, ರಾವಣ ವಧೆಯಾದ ನಂತರ ಸೀತೆಯನ್ನು ಹತ್ತಿರಕ್ಕೆ ಕರೆಯಿಸಿಕೊಂಡು ನೋಡಿ ಆಡುವ ಕಿಡಿಮಾತುಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಪ್ರಾಪ್ತಚಾರಿತ್ರ ಸಂದೇಹಾ ಮಮ ಪ್ರತಿಮುಖೇ ಸ್ಥಿತಾ
ದೀಪೋ ನೇತ್ರಾತುರಸ್ಯೇವ ಪ್ರತಿಕೂಲಾಸಿ ಮೇ ಧೃಡಂ
ನಿನ್ನ ನಡವಳಿಕೆಯ ವಿಷಯದಲ್ಲಿ ಸಂದೇಹ ಹುಟ್ಟುವ ಸ್ಥಿತಿ ನನಗೆ ಬಂದಿದೆ. ನನ್ನಿದಿರು ನೀನು ಈಗ ನಿಂತಿದ್ದೀಯೆ. ಕಣ್ಣಿಗೆ ಬೇನೆ ಹಿಡಿದಿರುವವನಿಗೆ ದೀಪ ಹೇಗೋ ಹಾಗೆ ಈಗ ನೀನು ನನಗೆ ಹಿತವಾಗಿಲ್ಲ. ಇದು ನಿಜ. "ದೀಪೋ ನೇತ್ರಾತುರಸ್ಯೇವ’. ಆ ವೇಳೆಯಲ್ಲಿ ರಾಮ ತನ್ನ ಸೀತೆಯಲ್ಲಿ ಯಾವ ದೋಷವನ್ನೂ ಕಾಣಲಾರ, ದೀಪದಂತೆ ಆಕೆ ಶುದ್ಧೆ, ಕಲ್ಯಾಣಯುಕ್ತೆ, ತೇಜಸ್ವಿನಿ. ಬೇನೆ ಇರುವುದು ಲೋಕಾಪವಾದ ಭೀತನಾದ ತನ್ನಲ್ಲಿ , ತನ್ನ ಕಣ್ಣಿನಲ್ಲಿ. ಈ ಬೇನೆಯನ್ನು ತಂದಿರುವುದು ತಮ್ಮಿಬ್ಬರಿಗೂ ಬಾಹ್ಯವಾದ ಬಹಿಸ್ಸಮಾಜ-ತಮ್ಮ ನಿಯಂತ್ರಣಕ್ಕೆ ಮೀರಿದುದು.’

ಅವಾಗವಾಗ ಕಣ್ಣುಗಳನ್ನು ಉಜ್ಜಿಉಜ್ಜಿ ನೋಡಿಕೊಳ್ಳುತ್ತಿದ್ದೇವೆ. ಕಣ್ಣು ನೋವೆ? ನಿದ್ದೆ ಎಳೆಯುತ್ತಿದೆಯೆ? ಅಥವಾ ಈಗ ಎಚ್ಚರವಾಯಿತೆ?! 'ದೀಪಂ ದರ್ಶಯಾಮಿ’ ಅಂತ ಭಟ್ಟರು ಆರತಿ ಎತ್ತಿ ತೋರಿಸಿದಾಗೆಲ್ಲ ಅದು ನಂದಿಹೋಗುತ್ತಿದೆ. ಕರ್ಪೂರ ಕೊಟ್ಟ ಅಂಗಡಿಯವನಿಗೆ ಅವರು ಮಂತ್ರದ ಮಧ್ಯೆ ಬಯ್ಯುತ್ತಿದ್ದಾರೆ. ದೀಪಾವಳಿ ದಿನವೇ ಸೀಮೆಎಣ್ಣೆಗಾಗಿ ಕ್ಯೂ ನಿಲ್ಲಬೇಕಾಗಿ ಬಂದದ್ದಕ್ಕೆ ಗಂಡ ಕಸಿವಿಸಿಗೊಂಡಿದ್ದಾನೆ. ಜೋಪಾನವಾಗಿಟ್ಟಿದ್ದ ಹಳೇ ಪಂಚೆಯ ಒಂದು ತುಂಡನ್ನಷ್ಟೇ ಜಾಗ್ರತೆಯಿಂದ ಹರಿದು ಹೆಂಡತಿ ಹೊಸ ಬತ್ತಿ ತಯಾರಿಸುತ್ತಿದ್ದಾಳೆ. ಹಬ್ಬದ ಹಿಂದಿನ ದಿನ ಕೆಲವರ ಕಣ್ಣುಗಳೇ ಸುಟ್ಟುಹೋಗಿವೆ. ಯಾವನೋ ಅಪ್ಪ ಒಂದು ಸಾವಿರ ರೂಪಾಯಿ ಬೆಲೆಬಾಳುವ ಆಕಾಶಬುಟ್ಟಿಯನ್ನು ಮಗನಿಗೆ ತಂದುಕೊಟ್ಟಿದ್ದಾನೆ.
ಬೆಳಕು ಕೆಲವನ್ನು ತೋರಿಸುತ್ತದೆ. ಕತ್ತಲು ಕೆಲವನ್ನು ಮುಚ್ಚಿಡುತ್ತದೆ.

Read more...

November 07, 2007

ಸುಖದ ಸ್ಯಾಂಪಲ್‌ಗಳು

ಕಾಶ ಅಸ್ತವ್ಯಸ್ತವಾಗಿತ್ತು. ಚಂದ್ರ ಮಂಕಾಗಿದ್ದ. ಜನ ಗೆಲುವಾಗಿದ್ದರು! ಕಿಶೋರ್ ಕುಮಾರ್‌ನ ಹಾಡು ಹಿತವಾಗಿ ಕೇಳಿಬರುತ್ತಿತ್ತು. 'ಮೇರೆ ಸಾಮ್‌ನೆವಾಲಿ ಕಿಡ್‌ಕೀ ಮೆ, ಏಕ್ ಚಾಂದ್ ಕಾ ಟುಕ್‌ಡಾ ರಹತಾ ಹೆ...’ ಪೆಲಿಕನ್ ಬಾರ್‌ನ ಒಳಗೆ ಬಲ್ಬುಗಳು ಕೂಡಾ ಮಂಕಾಗಿ ಉರಿಯುತ್ತಿದ್ದವು.

ತಮ್ಮೆಲ್ಲಾ ಕಷ್ಟಗಳನ್ನು ಒಂದು ಗುಟುಕಿನಲ್ಲಿ ಮರೆಯುವುದಕ್ಕೆ ಜನ ಬಂದಿದ್ದಾರೆ. ಇನ್ನು ಕೆಲವರು, ಒಂದು ಗುಟುಕು ಹೀರಿ ತಮ್ಮ ಸಂತಸ ಹೆಚ್ಚಿಸಿಕೊಳ್ಳಲು ಕಾತುರರಾಗಿದ್ದಾರೆ. ಮೀಸೆ ಮೂಡದ ತರುಣರು, ಮೀಸೆ ಹಣ್ಣಾದ ಮುದುಕರು, ನಲುವತ್ತರ ಬ್ರಹ್ಮಚಾರಿ
ಗಳು ಸೇರಿದ್ದಾರೆ. ಎಲ್ಲರ ಮನಸ್ಸಿನ ಉಯ್ಯಾಲೆಗಳಲ್ಲಿ ಕನಸಿನ ರಾಜಕುಮಾರಿಯರು ಜೀಕುತ್ತಿದ್ದಾರೆ. ಮಹಾನಗರಗಳ ವಿಲಕ್ಷಣ ಸುಖದ ಕೇಂದ್ರಗಳಾದ ’ಡ್ಯಾನ್ಸಿಂಗ್ ಬಾರ್’ಗಳು ಕನಸಿನ ಮನೆಗಳು. ಈ ಪೆಲಿಕನ್ ಬಾರ್‌ನಲ್ಲಿ ನರ್ತಿಸುತ್ತಿರುವ ಎಂಟೂ ಮಂದಿ ಯುವತಿಯರು ಪರಮರೂಪಸಿಗಳಂತೆ ಕಾಣುತ್ತಿದ್ದಾರೆ. ಹೊಳೆಯುತ್ತಿರುವ ಅವರ ಕಣ್ಣುಗಳಲ್ಲಿ ಸೆಳೆತವಿದೆ. ಹೆಜ್ಜೆಗಳಲ್ಲಿ ಹಿಡಿತವಿದೆ. ಅವರಲ್ಲಿ ಒಬ್ಬಳಂತೂ ಎಲ್ಲರ ಪತ್ನಿಯರಿಗಿಂತ, ಎಲ್ಲರ ಪ್ರಿಯತಮೆಯರಿಗಿಂತ, ಆಹ್ ಎಷ್ಟೊಂದು ಮಜಬೂತಾಗಿದ್ದಾಳೆ. ಅವಳು ನಕ್ಕಾಗಲೆಲ್ಲ ಯಾರಿಗೂ ಯಾರೂ ಕಾಣುತ್ತಿಲ್ಲವಲ್ಲ.

ಸಾಗರದಲ್ಲಿ ದೋಣಿಯೊ
ಂದು ತುಯ್ದಾಡುತ್ತಿದೆ. ಅದರಲ್ಲಿ ಒಂಟಿ ಮನುಷ್ಯನೊಬ್ಬ ನಿಂತಿದ್ದಾನೆ. ಅವನ ನಡುವಿಗಷ್ಟೇ ಬಟ್ಟೆಯ ತುಂಡೊಂದು ಸುತ್ತಲ್ಪಟ್ಟಿದೆ. ಸಮುದ್ರಕ್ಕೆ ಬಲೆ ಹರಡಿದ್ದಾನೆ. ಇದಿರು ದೂರದಲ್ಲಿ, ಬಹುದೊಡ್ಡ ಕಟ್ಟಡದ ಆರನೇ ಮಹಡಿಯವರೆಗೂ ಬಾಲ್ಕನಿಗಳು ಆಗಸಕ್ಕೆ ಚಾಚಿ ನಿಂತದ್ದು ಈ ವ್ಯಕ್ತಿಗೆ ಕಾಣಿಸುತ್ತಿದೆ. ಥಂಡಿ ಹವಾ ಚಲಿಸುತ್ತಿದೆ. ಆ ಬಾಲ್ಕನಿಯೊಂದರ ಆರಾಮ ಕುರ್ಚಿಯಲ್ಲಿ ಬಿಳಿಯ ಅರೆಬೆತ್ತಲೆ ದೇಹ ಕುಳಿತಿದೆ. ದೋಣಿ ಮತ್ತೆ ತುಯ್ದಾಡುತ್ತಿದೆ. ಆ ಬಾಲ್ಕನಿಯಲ್ಲಿ ಕುಳಿತು ಸಾಗರವನ್ನೊಮ್ಮೆ ನೋಡಬೇಕು. ಒಂದಲ್ಲ ಒಂದು ದಿನ ಅಂತಹ ಮನೆಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಆಸೆ ಇವನನ್ನು ಕಾಡುತ್ತಿದೆ.

ಅತ್ತ ಬಾಲ್ಕನಿಯಲ್ಲಿ
ುಳಿತಿದ್ದ ವ್ಯಕ್ತಿಯು ಕಣ್ಣೀರು ಸುರಿಸುತ್ತಿದ್ದಾನೆ. ದೂರದ ಸಮುದ್ರದಲ್ಲಿ ತೇಲುತ್ತಿರುವ ವ್ಯಕ್ತಿಯು ಆತನಿಗೆ ಆಶಾಗೋಪುರದಂತೆಯೇ ಕಾಣಿಸುತ್ತಿದ್ದಾನೆ. ಮೆಟ್ಟಿಲಿಳಿದು ಸಮುದ್ರದ ಕಡೆ ಹೊರಟಿದ್ದಾನೆ. ತನ್ನೆಲ್ಲಾ ದುಃಖವನ್ನು ಮರೆಯಲು ಆತ ಹೋಗುತ್ತಿದ್ದಾನೆ. ಸಾಗರ ಉಕ್ಕೇರುತ್ತಿದೆ, ಕತ್ತಲಾಗುತ್ತಿದೆ.

*****
ಕಹಿ ಬಿಯರು. ಕಹಿ ಸಿಗರೇಟು. ಗರಂ ಚಿಕನ್ ಚಿಲ್ಲಿ. ಇಲ್ಲಿ ತತ್ತ್ವಜ್ಞಾನಿಗಳು ಕುಳಿತಿದ್ದಾರೆ. ಜಾಣ ಸರ್ದಾರ್ಜಿಗಳು ಬಿಯರ್ ಹೀರುತ್ತಿದ್ದಾರೆ. ಯಾರೋ ಒಬ್ಬ ಕಳೆದುಹೋದ ಪ್ರಿಯತಮೆಗಾಗಿ ಸಿಗರೇಟು ಸುಡುತ್ತಿದ್ದಾನೆ. ಒಂದಷ್ಟು ಜನ ಹವಾಯಿ ಚಪ್ಪಲಿಯ ಕುಡುಕರು ಮೂಲೆಯಲ್ಲಿ ಕುಳಿತಿದ್ದಾರೆ. ಇಲ್ಲಿ ಋಷಿಗಳು ಆರಾಮವಾಗಿ ಸಿಗರೇಟು ಸೇದುತ್ತಾರೆ. ರಾಕ್ಷಸರು ಮಗುವಿನ ಜೊತೆ ಮಾತಾಡುತ್ತಾರೆ. ಫೋಟೋಗ್ರಾಫರ್‌ನು ಸ್ಮೈಲ್ ಸ್ಮೈಲ್ ಅನ್ನುತ್ತಿರುವಾಗಲೇ ಮತ್ತಷ್ಟು ಗಂಭೀರವಾಗಿ ಫೋಸ್ ಕೊಡುವವರಂತೆ ಕೆಲವರು ಕುಳಿತಿದ್ದಾರೆ. ಮುಂದಿನ ಜನ್ಮಕ್ಕಾಗುವಷ್ಟು ನೋಟುಗಳನ್ನು ಕಟ್ಟಿಟ್ಟವರೂ, ನಾಳೆಯ ಅಡುಗೆಗಾಗಿ ಒಂದು ಹೊರೆ ಸೌದೆಯನ್ನು ಹುಡುಕಬೇಕಾದವರೂ ಅಮಲೇರಿ ಕುಳಿತಿದ್ದಾರೆ. ಇಲ್ಲಿ ಉಕ್ಕಿಹರಿವ ನದಿಗಳಿವೆ. ಕುಂಟನೊಡ್ಡಿದ ಕೈಯಿದೆ. ಅಲಂಕಾರದ ಭಾರವಿದೆ. ಸ್ವಭಾವದ ಸಹಜತೆಯಿದೆ.

ಕೆಲವೊಮ್ಮೆ ಇಂತಹ ಜಾಗಗಳಲ್ಲೇ ವಿಚಿತ್ರವಾದ ’ಥ್ರಿಲ್ಲಿಂಗ್ ಥಾಟ್’ಗಳು ಹುಟ್ಟಿಕೊಳ್ಳುತ್ತವೆ. ಒಬ್ಬ ಕ್ಯಾಶಿಯರ್‌ನ ಬಳಿ ಅರಚುತ್ತಿದ್ದ " ಆ ಚಂದ್ರಲೋಕದ ಟ್ಯೂಬ್‌ಲೈಟ್ ಆಫ್ ಮಾಡಿ!’. ಇನ್ನೊಬ್ಬನ ಸ್ಟೇಟ್‌ಮೆಂಟು-"ಭೂಮಿ ತಿರುಗುತ್ತಿರುವುದು ಕುಡುಕರ ಶಕ್ತಿಯಿಂದ!’. ಕುರುಚಲು ಗಡ್ಡ ಬಿಟ್ಟಿದ್ದ, ಜೋಳಿಗೆ ಚೀಲವೊಂದನ್ನು ಹೆಗಲಿಗೆ ಹಾಕಿಕೊಂಡೇ ಇದ್ದ ವ್ಯಕ್ತಿಯೊಬ್ಬ "ನಿನ್ನೆ ರಾತ್ರಿಯೂ ಇದೇ ಥರಾ ಏರಿಳಿಯುತ್ತಿದ್ದೆ. ಕಡಲು ಕೂಡಾ ಸ್ತಬ್ಧವಾಗಿತ್ತು’ ಎಂದವನೇ ಮುಂದುವರಿಸಿ "ನೂರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಹೇಳುತ್ತದೆ. ನೂರು ಚಿತ್ರಗಳಲ್ಲಿ ಹೇಳಲಾಗದ್ದನ್ನು ಒಂದು ಬಾಟಲಿ ಹೇಳಿಸುತ್ತದೆ’ ಎಂದು ಸುಮ್ಮನಾದ. ಅವನ ಬಳಿಯೇ ಕುಡಿಯದೆ ಕುಳಿತಿದ್ದವನೊಬ್ಬ ಹೇಳಿದ್ದು ಹೀಗೆ-’ಕುಡುಕರ ಜೊತೆ ಗೆಲ್ಲುವುದು ಸುಲಭ. ಸೋಲುವುದು ಕಷ್ಟ!’. ಲೋಡಾಗಿದ್ದವನೊಬ್ಬನನ್ನು ತಮಾಷೆ ಮಾಡಲೆಂದು ಮತ್ತೊಬ್ಬ ತನ್ನ ಎರಡು ಬೆರಳುಗಳನ್ನು ಎತ್ತಿಹಿಡಿದು "ಇದೆಷ್ಟೊ?’ ಎಂz. ಅವನು "ಒಬ್ಬೊಬ್ರೇ ಕೇಳಿ, ಉತ್ತರ ಕೊಡ್ತೀನಿ’ ಅಂದ!

ಒಂಭತ್ತು...ಹತ್ತು....ಹನ್ನೊಂದು...ಸಮಯವೂ ಏರುತ್ತಿದೆ. ಸುವರ್ಣ ಲಂಕೆಯ ದೊರೆ ರಾವಣನಂತಹ ಕಟ್ಟಾಳು ಕ್ಯಾಶಿಯರ್‌ನ ಸ್ಥಾನದಲ್ಲಿ ಕುಳಿತಿದ್ದಾನೆ. ಅವನ ಕೈಯಲ್ಲಿ ನೂರು ಐನೂರರ ನೋಟುಗಳು ಚಕಚಕನೆ ಚಲಿಸುತ್ತಿವೆ. ಅವನ ಮೇಲೆ ಮಾತ್ರ ಪ್ರಕಾಶಮಾನವಾದ ಬೆಳಕು ಬಿಡಲಾಗಿದೆ. ನರ್ತಕಿಯರ ಕಾಲುಗಳು ಮಗುವಿನ ಅಂಗಾಲುಗಳಂತೆ ಎತ್ತೆತ್ತಲೋ ಹೆಜ್ಜೆ ಇರಿಸುತ್ತವೆ. ನರ್ತಕಿಯ ಗುಡಿಸಲಲ್ಲಿ ಮಗು ಅಮ್ಮನಿಗಾಗಿ ಕಾದುಕಾದು ಬಸವಳಿದಿದೆ. ಅತ್ತ ಇತ್ತ ಸುತ್ತಮುತ್ತ ಜನ ಜನ ಜನ. ಯಾರೋ ಒಬ್ಬ ಹಾಡುತ್ತಾನೆ "ಜನ ಗಣ ಮನ’.
*****
ಮಣ್ಣಿನ ಮೋಟು ಗೋಡೆ. ಹರಕಲು ಒರಟು ಚಾಪೆ. ಅಲ್ಲಲ್ಲಿ ಸೋರುವ ಛಾವಣಿ. ಮೈಯ ಮೇಲೆ ಕುಳಿತಿರುವ ರೇಡಿಯೊ ಹದವಾಗಿ ಹಾಡುತ್ತಿದೆ. ಸೀಮೆಎಣ್ಣೆ ತುಂಬಿಕೊಂಡ ಪುಟ್ಟ ಬಾಟಲಿಯ ದೀಪ ಹದವಾಗಿ ಉರಿಯುತ್ತಿದೆ. ಆ ರೇಡಿಯೊವನ್ನು ಎರಡೂ ಕೈಗಳಲ್ಲಿ ತಬ್ಬಿಕೊಂಡು ’ವಿವಿಧ್ ಭಾರತಿ’ಯ ಹಾಡುಗಳನ್ನು ಕೇಳುವುದರಲ್ಲಿ ಹೇಳಲಾಗದ ಸುಖವಿದೆ. ಆ ಹಾಡು ಮತ್ತು ಬೆಳಕು ಸುತ್ತಲಿನ ಒಂದಷ್ಟು ಜಾಗದಲ್ಲಿ ಆನಂದಮಯ ಏಕಾಂತವನ್ನು ಸೃಷ್ಟಿಸುತ್ತಿದೆ.

ದೋಣಿ ದಡದಲ್ಲಿದೆ, ಆಕಾಶ ಸ್ವಚ್ಛವಾಗಿದೆ. ಚಂದಿರ ಹೊರಗೆ ಬೆಳಗುತ್ತಿದ್ದಾನೆ. ಎತ್ತಲೋ ಓಡುತ್ತಿದ್ದಾನೆ.
(ಐದು ವರ್ಷಗಳ ಹಿಂದೆ ಬರೆದದ್ದು)


Read more...

October 30, 2007

ಇವರು ಹೀಗಂತಾರೆ.....

(ವಿವರಕ್ಕೆ 'ನಟನಾ ವಿಶಾರದರಿಗೆ ಪೊಡಮಟ್ಟು ಬಣ್ಣಿಪೆನೀ ಕತೆಯ...’ ಬರೆಹ-ಪ್ರತಿಕ್ರಿಯೆ ಗಮನಿಸಿ)
ನನಗೂ ಈ ಬಾರಿಯ ತಿರುಗಾಟದ ನಾಟಕಗಳ ಬಗ್ಗೆ ಅನೇಕ ಸಮಸ್ಯೆಗಳಿವೆ. ನನ್ನ ತಕರಾರನ್ನು ಚನ್ನಕೇಶವ, ರಘುನಂದನರೊಡನೆ ಎತ್ತಿದ್ದೇನೆ, ಚರ್ಚಿಸಿದ್ದೇನೆ. ಅವರ ಪ್ರಾಮಾಣಿಕ ಉತ್ತರಗಳನ್ನು (ಸಮಜಾಯಿಷಿಗಳಲ್ಲ) ಆಲಿಸಿದ್ದೇನೆ ಮತ್ತು ಹೆಗ್ಗೋಡಿನಲ್ಲಿ ನಡೆದ ಪ್ರಥಮ ಪ್ರದರ್ಶನಕ್ಕೂ ಎಚ್.ಎನ್. ಕಲಾಕ್ಷೇತ್ರದಲ್ಲಿ ನಡೆದ ಎರಡನೇ ಪ್ರದರ್ಶನಕ್ಕೂ ನಡುವೆ ಸಾಕಷ್ಟು ಬದಲಾವಣೆ ಕಂಡಿದ್ದೇನೆ. ಜನವರಿಯಲ್ಲಿ ರಂಗಶಂಕರದಲ್ಲಿ ನಡೆವ ಪ್ರದರ್ಶನಕ್ಕೂ ಹೋಗಲಿದ್ದೇನೆ. ಒಂದು ತಂಡದ ಬಗ್ಗೆ ಅವರ ಪ್ರಯೋಗಗಳ ಬಗ್ಗೆ ಸಮರ್ಥವಾಗಿ ಚರ್ಚಿಸಲು ಇವೆಲ್ಲ ಸಿದ್ಧತೆಗಳು ಹಾಗು ಗಂಭೀರವಾಗಿ ವಿಮರ್ಶಿಸಲು ಒಂದು ನಿರ್ದಿಷ್ಟ ಚೌಕಟ್ಟು ಅಗತ್ಯ ಎಂದು ಭಾವಿಸಿದ್ದೇನೆ. ಸಾಹಿತ್ಯ ವಿಮರ್ಶೆಯ ಮಾನದಂಡಗಳನ್ನು ಪ್ರದರ್ಶನಕಲೆಗಳ ವಿಮರ್ಶೆಗೆ ಬಳಸಲಾಗದು - ಇಲ್ಲಿಯ ಸಮಸ್ಯೆಗಳೇ ಬೇರೆ ರೀತಿಯದ್ದು, ಅಲ್ಲವೇ?

ನೀವು ಗಂಗಾಧರ ಚಿತ್ತಾಲರ ಉದಾಹರಣೆಯನ್ನು ಕೊಟ್ಟಿದ್ದೀರಿ. ನಾನು ಎಚ್.ಎಸ್. ಬಿಳಿಗಿರಿಯವರ ಪದ್ಯಗಳನ್ನು ಉದಾಹರಿಸುವೆ. ಬಹಳಷ್ಟು ಮಂದಿ ಅಶ್ಲೀಲವೆಂದು ಮೂಗು ಮುರಿಯುವಂಥ ಪದ್ಯಗಳನ್ನವರು ಬರೆದಿದ್ದಾರೆ. ಕಾಮವನ್ನೇ ಕೇಂದ್ರವಸ್ತುವನ್ನಾಗಿಟ್ಟುಕೊಂಡ ಕೃತಿಗಳೆಲ್ಲವೂ ಈ ಅಪಾಯವನ್ನು ಎದುರಿಸಬೇಕು. ಅದರಲ್ಲೂ ಪ್ರದರ್ಶನಕಲೆಯಾದ ನಾಟಕದಲ್ಲಿ ಅಶ್ಲೀಲವಾಗಬಹುದೆಂಬ ಕಾರಣಕ್ಕೆ ಆಂಗಿಕವನ್ನು ಬಿಟ್ಟು ಸಂಭಾಷಣೆಗಳ ಮೊರೆಹೋದರೆ ಅದು ನಾಟಕವಾಗದೆ ತಾಳಮದ್ದಳೆಯಾದೀತು / ಭಾಷಣವಾದೀತು. (ಒಂದೊಮ್ಮೆ ಚಿತ್ತಾಲರ ಕಾಮಸೂತ್ರವನ್ನೇ ಅಭಿನಯಿಸುವುದಾದರೆ ಆ ಪ್ರಯೋಗ ಹೇಗಾಗಬಹುದು ಎಂಬ ಕುತೂಹಲವಾಗುತ್ತಿದೆ. ಏಕೆಂದರೆ ಅದು ಕಾಮವನ್ನು ಕುರಿತ ಗಂಭೀರ ಕಾವ್ಯ. ಲೋಕೋತ್ತಮೆಯಂಥ ತಮಾಷೆ ಅಲ್ಲಿಲ್ಲ). ಈ ನೆಲೆಯಲ್ಲಿ ನೋಡಿದಾಗ ನನಗೆ ನಾಟಕದ ಪ್ರಾರಂಭದಲ್ಲಿ ನಟರು (ಅದರಲ್ಲೂ ಮಹಿಳಾ ಪಾತ್ರಗಳು) ಹೇಳುವ ಮಾತುಗಳು ಬಹಳ ಮುಖ್ಯ ಎನ್ನಿಸುತ್ತೆ – “ಇದೊಂದು ಭಂಡ ನಾಟಕ. ಇಷ್ಟು ಚಿಕ್ಕವರು ಏನೆಲ್ಲ ಮಾತಾಡುತ್ತಾರೆ ಎಂದು ಬೇಸರಿಸದಿರಿ. ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ ಎಂದು ನಂಬಿದ್ದೇವೆ. ಆದರೂ ಇದು ಅತಿ ಎನ್ನಿಸಿದರೆ ಕ್ಷಮಿಸಿ' – ನಾನು ಇಡೀ ನಾಟಕವನ್ನು ನೋಡುವಾಗ ಆಗಾಗ ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದೆ.

ನೀವು ಮೂಲ ಗ್ರೀಕ್ ನಾಟಕ ಲೈಸಿಸ್ಟ್ರಾಟದ ಬಗ್ಗೆ ಓದಿಲ್ಲವೆಂಬ ಅನುಮಾನ ನನ್ನದು. ನಾಟಕದ ಇಂಗ್ಲೀಷ್ ಅನುವಾದ ಮತ್ತು ಅದನ್ನು ಇಂದಿಗೂ ಪ್ರದರ್ಶಿಸುವ ವಿದೇಶೀ ತಂಡಗಳ ಪ್ರಯೋಗಗಳನ್ನು ಗಮನಿಸಿದರೆ, ಅವರು ಬಳಸುವ ಭಾಷೆ, ಅವರ ಹಾವಭಾವ, ರಂಗದ ಮೇಲೆ ನಗ್ನರಾಗಿ ಬರುವುದು ಇತ್ಯಾದಿಗಳನ್ನು ನೋಡಿದರೆ ಲೋಕೋತ್ತಮೆ ನಿಜಕ್ಕೂ ನಮ್ಮ ನೆಲಕ್ಕೆ ಹತ್ತಿರವಾದ ತೀರಾ ಮುಜುಗರವುಂಟುಮಾಡದ ಪ್ರಯೋಗವಾಗಿದೆ ಎಂದೇ ನನ್ನ ಅನಿಸಿಕೆ. ಒಂದು ಮೂಲದ ಪ್ರಕಾರ 1976ರಲ್ಲಿ ಮೊಜಾರ್ಟನ ಒಪೇರಾ ಮಾದರಿಯಲ್ಲಿ ಈ ನಾಟಕವನ್ನು ಆಡಲಾಯ್ತು. ಹಾಡು ನೃತ್ಯಗಳಿಂದ ಕೂಡಿದ ಲೋಕೋತ್ತಮೆ ಬಹುಶಃ ಈ ಪ್ರಯೋಗಕ್ಕೆ ಹತ್ತಿರವಾದುದ್ದಾಗಿದೆ. ಚನ್ನಕೇಶವರೊಂದಿಗೆ ಚರ್ಚಿಸಬಹುದು.
ನಾಟಕವೊಂದನ್ನು ವಿಮರ್ಶಿಸುವಾಗ ಹಿಂದಿನ ಬೇರೆ ಯಾವುದೋ ಪ್ರಯೋಗದ ಜೊತೆಗಿನ ಹೋಲಿಕೆ / ಅಥವಾ ಅ ಕಾಲದ ನಟರ ಹೋಲಿಕೆ ಸರಿಯಲ್ಲ ಎಂಬುದು ನನ್ನ ಸ್ಪಷ್ಟ ನಿಲುವು. ನಿಮ್ಮ ಬರಹದಲ್ಲಿ ಇಂತಹ ಹೋಲಿಕೆಗಳ ಹೊರತು ಯಾವುದೇ ವಿಮರ್ಶೆಯ ಚೌಕಟ್ಟು ಅಥವಾ ಮಾನದಂಡ ಇರುವುದು ಕಾಣಲಿಲ್ಲ. ಕೇವಲ ಒಂದು ಪ್ಯಾರಾದಲ್ಲಿ ನಾಟಕದ ಮತ್ತು ತಂಡದ ಭವಿಷ್ಯದ ಬಗ್ಗೆ ಬರೆದದ್ದು ಓದಿ ಆಶ್ಚರ್ಯವಾಯ್ತು. ನಾನು ಅವರ ಪರ ವಕಾಲತ್ತು ಮಾಡುತ್ತಿಲ್ಲ. ಈ ನಾಟಕದ ಬಗೆಗಿನ ನನ್ನ ಸಮಸ್ಯೆಗಳು ಹೀಗಿವೆ:

  • ನಾಟಕದ ವೇಗ – ಘಟನೆಗಳು ಚಕಚಕನೆ ನಡೆಯುತ್ತ ಹೋಗುತ್ತವೆ. ದೃಶ್ಯದಿಂದ ದೃಶ್ಯಕ್ಕೆ, ಹಾಡಿನಿಂದ ಜಗಳಕ್ಕೆ, ಹೀಗೆ. ಎಲ್ಲಿಯೂ ಒಂದರೆಕ್ಷಣ ನಿಂತು ಯೋಚಿಸಲು ಅನುವುಮಾಡಿಕೊಡುವುದಿಲ್ಲ. ಇದರಿಂದ ಒಟ್ಟಾರೆ ಆಶಯದ ಗಾಂಭೀರ್ಯಕ್ಕೆ ಹೊಡೆತ ಬಿದ್ದಿದೆ.
  • ಯುದ್ಧದ ಪರಿಣಾಮಗಳನ್ನು ಕುರಿತು ನಡೆಯುವ ಸಂಭಾಷಣೆಗಳು ಅದಕ್ಕೂ ಮೊದಲು ನಡೆದ ಘಟನೆಗಳ ಭರದಲ್ಲಿ ಕೊಂಚ ಮಂಕಾಗಿ ಕಾಣುತ್ತವೆ.
ಆದರೆ ಇದೊಂದು ವೈನೋದಿಕ ನಾಟಕ (ಹಾಗು ಮೂಲಕ್ಕೆ ನಿಷ್ಠವಾಗಿದೆ) ಎಂಬುದನ್ನು ನೆನಪಿನಲ್ಲಿಟ್ಟು ನೋಡಿದಾಗ ಹೆಚ್ಚಿನ ಆಭಾಸವಾಗುವುದಿಲ್ಲ ಎಂದು ನನ್ನ ಅನಿಸಿಕೆ. ಚಾಪ್ಲಿನ್ ಮಾದರಿಯ ಸಿನೆಮಾದ ಬಗ್ಗೆ ಚರ್ಚಿಸುವಾಗ ಬರ್ಗಮನ್ನನ ಸಿನೆಮಾಕ್ಕೆ ಬಳಸುವ ಮಾನದಂಡಗಳನ್ನು ಯಥಾವತ್ತಾಗಿ ಬಳಸಲಾಗದು ಅಲ್ಲವೇ? ಚಾಪ್ಲಿನ್ ಮಾಡುವ ಅಂಗ ಚೇಷ್ಟೆಗಳು ಅಥವಾ ಜಾಕ್ವೆಸ್ ತಾತಿಯ ಅಸಂಬದ್ಧವೆನಿಸುವ ಕ್ರಿಯೆಗಳು ನಗೆಯುಕ್ಕಿಸುವುದಷ್ಟೇ ಅಲ್ಲ ನಂತರ ಗಂಭೀರ ಚಿಂತನೆಗೂ ದಾರಿಮಾಡಿಕೊಡುತ್ತವೆ. ಲೋಕೋತ್ತಮೆಯಲ್ಲಿರುವ ವಿಷಯವೇ ಸೊಂಟದ ಕೆಳಗಿನದು. ಈ ವಿಷಯದ ಪೋಲಿತನ ಮತ್ತು ಅದು ಎಲ್ಲರೂ ಅನುಭವಿಸಬಹುದಾದ ತೀವ್ರತೆಯನ್ನು ಕಟ್ಟಿಕೊಡಬಹುದಾದ ಸಾಧ್ಯತೆಯೇ ಅರಿಸ್ಟೋಫೆನಸ್ ಹೀಗೆ ಬರೆಯಲು ಕಾರಣವಾಗಿರಬಹುದು. ನಾಟಕದಲ್ಲಿ ಅದನ್ನು ಅಭಿನಯಿಸುವಾಗ ಆ ತೀವ್ರತೆಯೇ ಪ್ರೇಕ್ಷಕರಾದ ನಮಗೆ ದಾಟಬೇಕು. ದಾಟಿದೆ ಕೂಡ. ಆದರೆ ನಾಟಕ (ನಾನು ಈ ಮೇಲೆ ಹೇಳಿದ ಕಾರಣಗಳಿಗಾಗಿ) ಯುದ್ಧದ ಪರಿಣಾಮಗಳನ್ನು ಅದೇ ತೀವ್ರತೆಯಿಂದ ದಾಟಿಸುವಲ್ಲಿ ಸಂಪೂರ್ಣ ಯಶಸ್ಸು ಕಾಣುವುದಿಲ್ಲ. ಆ ಸಾಧ್ಯತೆ ಇನ್ನೂ ಜೀವಂತವಾಗಿರುವ ಪ್ರಯೋಗ ಇದಾದ್ದರಿಂದ ನಾನಿದನ್ನು ಸಂಪೂರ್ಣವಾಗಿ ತಳ್ಳಿಹಾಕುವುದಿಲ್ಲ.

ಉಂಡಾಡಿಗುಂಡ ಕೂಡ ಸಂಪೂರ್ಣ ಯಶಸ್ವೀ ಪ್ರಯೋಗವಲ್ಲದಿದ್ದರೂ ನಿರಾಸೆಗೊಳಿಸುವಂಥದ್ದೇನೂ ಅಲ್ಲ ಎಂಬುದು ನನ್ನ ಭಾವನೆ. ಬೆಂಗಳೂರಿನಲ್ಲಿ ಸಾಧ್ಯವಾದಾಗಲೆಲ್ಲ ನಾಟಕ ನೋಡುವ, ಗೆಳೆಯರೊಂದಿಗೆ ಚರ್ಚಿಸುವ ನನಗೆ ‘ತಿರುಗಾಟ' ಇಂದಿಗೂ ಒಂದು ಸಮರ್ಥ ರೆಪರ್ಟರಿ ಎಂಬುದರಲ್ಲಿ ಯಾವ ಸಂದೇಹವಿಲ್ಲ. ನಾನಾ ಬಗೆಯ ಒತ್ತಡಗಳಲ್ಲಿ ಕಾರ್ಯನಿರ್ವಹಿಸುವ ಇಂಥ ತಂಡಗಳು ಜೀವಂತವಾಗಿರುವುದೇ ಸಂತೋಷ ಹಾಗು ಹೆಮ್ಮೆಯ ವಿಷಯ ಎಂದುಕೊಂಡಿದ್ದೇನೆ. ಅದೂ ನಾನಾ ಬಗೆಯಲ್ಲಿ ಬೇರೆ ಬೇರೆ ತಂಡದ ನಾಟಕಗಳು ನಿರಾಸೆಗೊಳಿಸಿದ ಮೇಲೆ. ಉದಾಹರಣೆಗಳೊಂದಿಗೆ ವಿವರಿಸಬಲ್ಲೆ – ಸದ್ಯಕ್ಕೆ ಅದು ಈ ಚರ್ಚೆಯ ವ್ಯಾಪ್ತಿಯಲ್ಲಿಲ್ಲ!
- ಪ್ರಶಾಂತ್ ಪಂಡಿತ್
en.wikipedia.org/wiki/Lysistrata
en.wikisource.org/wiki/Lysistrata
-------------------------------------------------------------
ಚಂಪಕಾವತಿಯಿಂದ
1- 'ಪ್ರದರ್ಶನ ಕಲೆಯಾದ ನಾಟಕದಲ್ಲಿ ಆಂಗಿಕವನ್ನು ಬಿಟ್ಟು ಸಂಭಾಷಣೆಗಳ ಮೊರೆ ಹೋದರೆ ಅದು ನಾಟಕವಾಗದೆ ತಾಳಮದ್ದಳೆ/ಭಾಷಣವಾದೀತು’ ಎಂದಿದ್ದೀರಿ.
ಒಪ್ಪಿಗೆ. ಆದರೆ ಆಂಗಿಕಗಳು ಇನ್ನಷ್ಟು ಒಳ್ಳೆಯ ರೂಪಕಗಳಾಗಬೇಕಿತ್ತೆಂಬುದು ನನ್ನ ಅಭಿಪ್ರಾಯ. ಅದು ವೈನೋದಿಕ ನಾಟಕ ಹೌದು. ಆದರೆ ನಾಟಕದ ಒಳಗಿರುವ ಜೀವನ ಸತ್ಯವನ್ನು ಆಂಗಿಕಗಳು ಪ್ರತಿಬಿಂಬಿಸದೆ ಹಾಸ್ಯಕ್ಕಷ್ಟೆ ಸೀಮಿತವಾದವು ಎಂಬುದು ಮೊದಲ ದೂರು.
2- ನಾನು ಮೂಲವನ್ನು ಓದಿಲ್ಲ ಮತ್ತು ನಾಟಕಕ್ಕೆ ಬರುವಾಗ ಅದರ ಹೆಸರು "ತಿಲೋತ್ತಮೆ’ ಅಂತಲೇ ತಿಳಕೊಂಡಿದ್ದೆ. ಯಾವುದೋ ನಮ್ಮ ಪುರಾಣದ ನಾಟಕ ಇರಬೇಕು ಅಂದುಕೊಂಡಿದ್ದೆ! ಹಾಗೆಯೇ ನಾಟಕಕ್ಕೆ ಬರುವ ಮುಕ್ಕಾಲುಪಾಲು ಜನರೂ ನಾಟಕದ ಪಠ್ಯವನ್ನೇನೂ ಓದಿರುವುದಿಲ್ಲ. ನಾಟಕ ಇಷ್ಟವಾಗುವುದು-ಆಗದಿರುವುದು ಅಂದಿನ ಪ್ರದರ್ಶನದಿಂದ ಮಾತ್ರ. ಬಳಿಕ ಅದು ಯಾಕೆ ಇಷ್ಟವಾಯಿತು ಅಥವಾ ಆಗಲಿಲ್ಲ ಎಂಬುದಕ್ಕೆ ಕಾರಣಗಳನ್ನು ಹುಡುಕುತ್ತೇವೆ ಅಷ್ಟೆ. (ನಾಟಕ ನೋಡುತ್ತಿರುವಾಗಲೇ ವಿಮರ್ಶೆ ಆರಂಭಿಸಿದರೆ ಅದು ಶಿಕ್ಷಾರ್ಹ ಅಪರಾಧ! ಧಾರ್ಮಿಕ ಕ್ರಿಯೆಗಲ್ಲಿ ತಪ್ಪು ಕಂಡರೂ ನಡೆಯುತ್ತಿರುವಾಗ ಹೇಳಬಾರದೆಂದು ಹಿರಿಯರು ಹೇಳುತ್ತಾರೆ.) ನಮ್ಮಲ್ಲಿ ನಾಟಕ ಪಠ್ಯದ ವಿಮರ್ಶೆಯಾಗುತ್ತಿದೆಯೇ ಹೊರತು ಪ್ರದರ್ಶನದ ವಿಮರ್ಶೆಯಾಗುವುದು ಬಹಳ ಕಡಿಮೆ. ನನಗೆ ಪಠ್ಯಕ್ಕಿಂತ ಪ್ರದರ್ಶನ ಇಷ್ಟ. ಅದನ್ನು ವಿಮರ್ಶಿಸುವಾಗ ಹಳೆಯ ನಾಟಕ/ಕಲಾವಿದರ ನೆನಪು ಬೇಡ ಅಂದರೆ ಹೇಗೆ? ಸಾಹಿತ್ಯದಲ್ಲಾದರೂ ಹಳಬರನ್ನೆಲ್ಲ ಮರೆತು ಹೊಸಬರ ಬಗ್ಗೆ ವಿಮರ್ಶೆ ಮಾಡಲು ಸಾಧ್ಯವೆ?
3- 'ವಿದೇಶಿ ತಂಡಗಳು ಈ ನಾಟಕದಲ್ಲಿ ನಗ್ನರಾಗಿ ರಂಗಕ್ಕೆ ಬರುವುದು ಇತ್ಯಾದಿ ನೋಡಿದರೆ ಲೋಕೋತ್ತಮೆ ನಮ್ಮ ನೆಲಕ್ಕೆ ಹತ್ತಿರವಾದ ತೀರಾ ಮುಜುಗರ ಉಂಟುಮಾಡದ ಪ್ರಯೋಗ’ ಎಂದಿದ್ದೀರಿ. ಮುಜುಗರವಾಗುತ್ತದೆ, ಪೋಲಿತನ ಜಾಸ್ತಿ ಎಂಬುದೆಲ್ಲ ನನ್ನ ಆಕ್ಷೇಪವೇ ಇಲ್ಲ. ಮನರಂಜನೆಯಷ್ಟೇ ಸಾಕೆಂದಾದರೆ "ಲಾಫ್ಟರ್ ಚಾಲೆಂಜ್’ ಕಾರ್ಯಕ್ರಮ ನೋಡಿದಂತೆ ಇದನ್ನೂ ಧಾರಾಳ ನೋಡಬಹುದು. ಮೂಲಕ್ಕೆ ನಿಷ್ಠವಾಗಿದೆ ಎಂಬ ಮಾತ್ರಕ್ಕೆ ಏನಾದರೂ ಉಪಯೋಗವಾದೀತೆಂದು ಅನ್ನಿಸುವುದಿಲ್ಲ. ಅಲ್ಲಿಯ ಹೂವನ್ನೇ ಇಲ್ಲಿ ತಂದು ತೋರಿಸುವುದಕ್ಕಿಂತ ಅದರ ಚಿತ್ರವನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆ ಎಂಬುದೇ ಕಲೆಯ ಹೆಚ್ಚುಗಾರಿಕೆ. ಸಾಮಾನ್ಯ ಮಟ್ಟದಿಂದ ಅಸಾಮಾನ್ಯಕ್ಕೆ ಏರಿಸುವ ಎಲ್ಲ ಅವಕಾಶಗಳೂ ಈ ನಾಟಕದ ವಸ್ತುವಿನಲ್ಲಿ ಇದೆ ಅಂದುಕೊಂಡಿದ್ದೇನೆ. "ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ’ ಎಂಬ ವಿಶಿಷ್ಟ ಮಾತನ್ನು ಅರ್ಥ ಮಾಡಿಸುವ, ಸ್ಪಷ್ಟಪಡಿಸುವ, ಪುಷ್ಟೀಕರಿಸುವ ಸಂಗತಿಗಳು ಪ್ರದರ್ಶನದಲ್ಲಿ ಇವೆಯೆ?
4- ಈ ಪ್ರದರ್ಶವನ್ನು ನೋಡಿದಾಗ ಹೃದಯಕ್ಕೆ ತಟ್ಟುವ, ಆಹ್ ಎನ್ನಿಸುವ ಕ್ಷಣಗಳು (ನಾನು ಈ ಹಿಂದೆ ಹೇಳಿರುವ ಎರಡು ಸಂದರ್ಭ ಬಿಟ್ಟರೆ) ಬೇರೆ ಬರಲೇ ಇಲ್ಲ. ಕಣ್ಣು-ಮೂಗು ಅರಳಿಸಿ, ಹುಬ್ಬೇರಿಸುವುದೇ ಒಳ್ಳೆಯ ಅಭಿನಯ ಅಂತ ನನಗನಿಸುವುದಿಲ್ಲ. ಇಷ್ಟವಾದರೆ ಅದಕ್ಕೆ ಕಾರಣಗಳನ್ನು ಹುಡುಕುವ ಸಂದರ್ಭ ಬಹಳ ಕಡಿಮೆ. ಇಷ್ಟವಾಗದಿದ್ದಾಗ (ಅದೂ ಪ್ರತಿಷ್ಠಿತ ತಂಡದ್ದು) ಬಗೆದು ನೋಡುವುದು ಅಗತ್ಯ-ಸಹಜ ಅಲ್ವೆ?
5- 'ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ’ ನನ್ನಲ್ಲಿ ಸ್ವಲ್ಪ ಇರುವುದು ಹೌದು. ಅದು ಬ್ಲಾಗ್ ನೀಡುವ ಸ್ವಾತಂತ್ರ್ಯ ಹಾಗೂ ಪ್ರಾಯ ದೋಷ ಮಾರಾಯ್ರೆ.
ನೀನಾಸಂನ ಕಲಾವಿದರು-ನೇತಾರರ ಬಗ್ಗೆ ಸಕಲ ಗೌರವ ಪ್ರೀತಿ ಇಟ್ಟುಕೊಂಡೇ ಈ ಎಲ್ಲ ಅಕ್ಷರಗಳ ದುಂದುವೆಚ್ಚ !



Read more...

October 26, 2007

ಅಡಪರ ಸೆಟ್ಟಿಂಗ್‌ನಲ್ಲಿ ಒಂದು ಸಿಟ್ಟಿಂಗ್

ರೆಹಗಾರ, ಸಂಗೀತಗಾರ, ಚಿತ್ರ ಕಲಾವಿದ ಹೀಗೆ ಯಾರೇ ಆಗಿರಲಿ, ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ವಿವರವಾಗಿ ಮತ್ತು ಸ್ಪಷ್ಟವಾಗಿ ಹೇಳುವವರು ಕಡಿಮೆ. ಒಂದೆರಡು ಮಾಮೂಲಿ ಉದಾಹರಣೆಗಳಲ್ಲೇ ಅವರು ತಡಬಡಾಯಿಸುತ್ತಾರೆ. ಆದರೆ....ಆರಡಿ ಮೀರಿದ ಆಜಾನುಬಾಹು, ಗಂಭೀರ ನಡೆನುಡಿಯ, ಕರ್ನಾಟಕದ ಅಪ್ರತಿಮ ಸೆಟ್ ಡಿಸೈನರ್ ಶಶಿಧರ ಅಡಪ ಮೊದಲ ಭೇಟಿಯಲ್ಲೇ ನನ್ನ "ಬಲಿ’ ತೆಗೆದುಕೊಂಡರು. (ಔಟ್ ಮಾಡಿದರು ಅನ್ನೋದಕ್ಕೆ ಕನ್ನಡ ಕ್ರಿಕೆಟ್ ಭಾಷೆ !) ’ಪ್ರತಿರೂಪಿ’ ಸಂಸ್ಥೆಯ ಮಾಲೀಕನಾಗಿ ಜಾಹೀರಾತು ದೃಶ್ಯಾವಳಿಗೆ ಸೆಟ್ ವಿನ್ಯಾಸ ಮಾಡುವುದು ಅವರ ಮುಖ್ಯ ವೃತ್ತಿ . ಜತೆಗೆ ನಾಟಕ, ಸಭಾಕಾರ್‍ಯಕ್ರಮಗಳಿಗೆ, ಮಧ್ಯೆಮಧ್ಯೆ ಸಿನಿಮಾ ಕಲಾ ನಿರ್ದೇಶನ. ಎಲ್ಲದರಲ್ಲೂ ಅಚ್ಚಳಿಯದ ಛಾಪು. ಅವರ ಸ್ಪಷ್ಟ ಮಾತುಗಳನ್ನು ಇಲ್ಲಿ ಹೊಡೆದುಕೊಂಡಿದ್ದೇನೆ (ಟೈಪ್ ಮಾಡಿದ್ದೇನೆ !).

ಭಾಗ-೧
ಪಾತಕಿಗಳ ಬದುಕಿನಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಜೀವನದಲ್ಲೂ ’ಆ ದಿನಗಳು’ ಇದ್ದೇಇವೆ ! ಆ ಬಗ್ಗೆ ಹೇಳಿ. ಸುಮಾರು ೧೯೭೮ರಲ್ಲಿ ನಾನು ದಕ್ಷಿಣಕನ್ನಡದಿಂದ ಬೆಂಗಳೂರಿಗೆ ಬಂದಾಗ ಹೇಳೋದಕ್ಕೆ ಏನೂ ಇರಲಿಲ್ಲ ! ವಿಶೇಷ ಅಕಾಡೆಮಿಕ್ ಶಿಕ್ಷಣ, ಹಣದ ಬೆಂಬಲ, ಏನಾಗಬೇಕೆಂಬ ನಿರ್ಧಾರ ಯಾವುವೂ ಇರಲಿಲ್ಲ. ಮಧ್ಯಮ ವರ್ಗದಿಂದ ಬಂದಿದ್ದರಿಂದ ಕೊಟ್ಟ ಕೆಲಸ ಮಾಡುವ, ಹೊಂದಾಣಿಕೆಯ ಮನೋಭಾವವೊಂದು ಇತ್ತು. ಹೀಗಾಗಿ ಎನ್‌ಜಿಒಗಳಿಗೆ ಸೇರಿಕೊಂಡು ಕೆಲ್ಸ ಮಾಡ್ತಾ ದೇಶ-ವಿದೇಶ ಸುತ್ತಿದ್ದರಿಂದಾಗಿ ನನಗೊಂದು ವರ್ಲ್ಡ್ ವಿಷನ್ ಸಿಕ್ಕಿತು. ಅಮೆರಿಕ ಅಧ್ಯಕ್ಷರ ಚಯರ್ ಹೇಗಿರತ್ತೆ, ವ್ಯಾನ್‌ಗೋನ ಪೇಂಟಿಂಗ್ ಹೇಗಿರತ್ತೆ ಎಂಬ ತರಹದ ವಿವರಗಳು ತಿಳಿದವು. ಸಿನಿಮಾ ಕಲಾ ನಿರ್ದೇಶಕನಿಗಂತೂ ಅದು ಅನಿವಾರ್ಯ. ನಾನಾ ಕಾಲಗಳಲ್ಲಿ ದೇಶಗಳಲ್ಲಿ ಆದ ಬದಲಾವಣೆಗಳ ಅರಿವು ಇದ್ದಾಗ ಸಿನಿಮಾದಲ್ಲೂ ಕಾಲ-ದೇಶ ದೋಷವಿಲ್ಲದೆ ಪ್ರತಿಕೃತಿ ನಿರ್ಮಿಸೋಕೆ ಸಾಧ್ಯ ಅಂತ ಈಗ ಅನ್ಸತ್ತೆ.
ನಾಗಾಭರಣ, ಸಿಜಿಕೆ ಮೊದಲಾದವರ ಜತೆಸೇರಿ ನಾಟಕಗಳ ಮೂಲಕವೇ ವೇದಿಕೆ ಹಿಂದೆ ಬಂದವರಲ್ವೆ ನೀವು? ಹೌದು. ನಾಗಾಭರಣರ "ಗೀತ ಮಾಧುರಿ’ ನೃತ್ಯ ರೂಪಕ, ಸಿಜಿಕೆ ನಿದೇಶನದ ಮಹಾಚೈತ್ರ ನಾಟಕ ಇವುಗಳಲ್ಲೆಲ್ಲ ಸಿಕ್ಕಿಸಿಕ್ಕಿದ ಕೆಲಸ ಮಾಡೋದು. ಆಗ ದೊರೆತ ಬರೆಹಗಾರ-ಕಲಾವಿದರ ಸಖ್ಯ ಸಿನಿಮಾಕ್ಕೂ ಎಳೆದು ತಂದಿತು. ನಾವೆಲ್ಲ ನಾನ್‌ಫಾರ್ಮಲ್ ಆಗಿ ಕಲಿತದ್ದೇ ಜಾಸ್ತಿ. ಕಲರ್,ಡಿಸ್ಟೆಂಪರ್, ಪಿಗ್ಮೆಂಟು, ಡ್ರೈ ಬ್ರೆಷ್ ಅನ್ನೋದನ್ನೆಲ್ಲಾ ಬಿಟ್ಟು ಮಣ್ಣನ್ನೇ ಜಾಳಿಸಿ, ಫೆವಿಕಾಲ್ ಸೇರಿಸಿ, ಗಟಾರ್ ಪಂಪ್ ತಂದು ಹುಣ್ಣಿಯಾಲದಲ್ಲಿ ಮನೆ ಗೋಡೆಗೆ ಬಳಿದದ್ದು, ನಾಗಮಂಡಲದಲ್ಲಿ ಬಹಳ ಮೆಚ್ಚುಗೆ ಪಡೆದ ಮದುವೆ ದೃಶ್ಯಕ್ಕೆ ಮಾಡಿದ ಬಾಳೆಮಂಟಪ ಕೂಡಾ ನಮ್ಮ ಕಾಮನ್‌ಸೆನ್ಸ್ ಹಾಗೂ ಹಳ್ಳಿಯವರಿಂದ ಎರವಲು ಪಡೆದ ಜ್ಞಾನದ್ದು. ಹಾಗಂತ ಆರ್ಟ್ ಫಿಲಂಗಳಿಗೇ ನಾನು ಕೆಲಸ ಮಾಡಿದರೂ, ಅವುಗಳಲ್ಲಿ ಮೂರು ಜನಪ್ರಿಯವೂ ಆದವು. ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ ಮತ್ತು ನಾಗಮಂಡಲ. ಇದರಿಂದ ಜನ ಗುರುತಿಸೋದಕ್ಕೆ ಸಾಧ್ಯ ಆಯ್ತು. ನಾಗಮಂಡಲ, ಕಾನೂರು ಹೆಗ್ಗಡಿತಿ, ಸಿಂಗಾರೆವ್ವಗಳಿಗೆ ಪ್ರಶಸ್ತಿ ಬಂದಾಗ, ಅದು ಕೆಲಸದಲ್ಲೊಂದು ಪ್ರಮೋಶನ್ ಅಂತ ತಿಳ್ಕೊಂಡವನು ನಾನು. ಕೆಲವರು ಅವಾರ್ಡ್‌ನ್ನ ಸಾಮಾಜಿಕ ಗೌರವ ಅಂತ ತಿಳ್ಕೊಂಡು ಸುಮ್ಮನಾಗ್ತಾರೆ. ಆದರೆ ನಮ್ಮ ಫೀಲ್ಡಲ್ಲಿ ಅದನ್ನ ಕ್ಯಾಶ್ ಆಗಿ ಬದಲಾಯಿಸೋದು ಹೇಗೆ ಅಂತಲೇ ನಾನು ಯೋಚಿಸೋದು.
ಕಲಾಕ್ಷೇತ್ರದಲ್ಲಿ ರಾತ್ರಿ ಹನ್ನೊಂದೂವರೆ ತನಕ ನಾಟಕ ಪ್ರಾಕ್ಟೀಸ್ ಮಾಡಿ ಪ್ರಕಾಶ್ ರೈ, ನೀವೆಲ್ಲಾ ಚಿತ್ರಾನ್ನ ತಿಂದು, ಟಿವಿಎಸ್ ಹತ್ಕೊಂಡು ಹೋಗ್ತಾ ಇದ್ದಿರಿ. ಈ ಫೋರ್ಡ್ ಕಾರು-ಡ್ರೈವರು ಎಲ್ಲಿಂದ?! ನಾನೂ ಬೆಂಗಳೂರು ಬಿಟ್ಟು ಬಾಂಬೆಗೆ ಹೋಗಿದ್ರೆ ಇದಕ್ಕಿಂತ ನಾಲ್ಕು ಪಟ್ಟು ಸಂಪಾದನೆ ಮಾಡಬಹುದಿತ್ತು. ಅದು ಬೇಡ. ನನಗೆ ಕನ್ನಡ-ಕನ್ನಡಿಗರು-ಕರ್ನಾಟಕ ಬೇಕು ಅಂತ ಇಲ್ಲಿ ಉಳಿದುಕೊಂಡದ್ದು. "ಅಗ್ನಿವರ್ಷ್’ ಅಂತಹ ದೊಡ್ಡ ಹಿಂದಿ ಸಿನಿಮಾಕ್ಕೆ ಕೆಲಸ ಮಾಡಿದಾಗಲೂ ಕನ್ನಡದ ಕಾರ್ಪೆಂಟರ್, ಪೈಂಟರ್‌ಗಳನ್ನೇ ಕರ್‍ಕೊಂಡು ಹೋಗಿದೀನಿ. ಆದರೆ ೨೫-೩೦ ಜನಕ್ಕೆ ಪ್ರತಿದಿನ ಕೆಲಸ ಕೊಡೋವಷ್ಟಾಗ್ತೀನಿ ಅಂತ ಕನಸಿನಲ್ಲೂ ಆವತ್ತು ಅಂದುಕೊಂಡಿರಲಿಲ್ಲ. ಈಗ ಜಾಹೀರಾತು ಫಿಲ್ಮ್ ತಯಾರಿಯಲ್ಲಿ ನಮ್ಮ "ಪ್ರತಿರೂಪಿ’ ಸೌತ್‌ಇಂಡಿಯಾದಲ್ಲಿ ಲೀಡಿಂಗ್ ಕಂಪನಿ ! ಮೊನ್ನೆ ಮೊನ್ನೆ ವೊಡಾಫೋನ್ ಆದ ಹಚ್ ನಾಯಿಗೆ ಮಾಡಿದ ಮನೆಯ ಸೆಟಿಂಗ್ ನಮ್ಮದೇ. ಸ್ವಿಫ್ಟ್ ಕಾರು, ವಾಟಿಕಾ ಹೀಗೆ ದೊಡ್ಡ ದೊಡ್ಡ ಪ್ರಾಡಕ್ಟ್‌ಗಳ ಜಾಹೀರಾತು ನಿರ್ಮಾಣದಲ್ಲಿ ಕೆಲಸ ಮಾಡಿದ ಹೆಮ್ಮೆ ನಮ್ಮ ತಂಡಕ್ಕೆ.ಅತ್ಯಂತ ಸೊಫಿಸ್ಟಿಕೇಟೆಡ್ ವರ್ಕ್ ನಮ್ಮದು. ಆರ್ಟಿಸ್ಟ್, ಗ್ರಾಫಿಕ್ ಡಿಸೈನರ್, ಇಂಟರ್‌ನೆಟ್ ಎಲ್ಲಾ ಇವೆ. ಇವನ್ನೆಲ್ಲ ನಾನು ಬಾಂಬೆನಲ್ಲಿ ಅಂತಾರಾಷ್ಟ್ರೀಯ ನಿರ್ದೇಶಕರಿಂದ ಕಲಿತದ್ದು. ನನ್ನ ಬಳಿ ಒಳ್ಳೇ ಬುಕ್ ಕಲೆಕ್ಷನ್ ಇದೆ, ಬಿಟ್ರೆ ಅರುಣ್ ಸಾಗರ್ ಹತ್ರ ಇದೆ.
ನಾಟಕದ ರಂಗಸಜ್ಜಿಕೆಗೂ ಸಿನಿಮಾದ್ದಕ್ಕೂ ಏನು ಮುಖ್ಯ ವ್ಯತ್ಯಾಸ? ನಾಟಕದಲ್ಲಿ ಒಂದು ಡೈರೆಕ್ಷನ್‌ನಲ್ಲಿ ಕಾಣೋ ಸೆಟ್ಟಿಂಗ್ ಇದ್ರೆ ಸಾಕು. ಸಿನಿಮಾದಲ್ಲಿ ಕ್ಯಾಮರಾ ಎಲ್ಲ ಕಡೆಗೂ ತಿರುಗುತ್ತೆ. ನಾಟಕದಲ್ಲಿ ನೋಡೋದು ಮನಸ್ಸು. ಸಿನಿಮಾದಲ್ಲಿ ಕ್ಯಾಮರಾ. ಮನಸ್ಸು ಅಪೂರ್ಣವನ್ನ ಪೂರ್ಣ ಮಾಡಿಕೊಳ್ಳುತ್ತೆ ! ಕ್ಯಾಮರಾ ಯೋಚನೆ ಮಾಡಲ್ಲ, ಕಂಪ್ಲೀಟ್ ಮಾಡಲ್ಲ. ಎಸ್. ರಾಮಚಂದ್ರ ಹೇಳೋರು, "ಕ್ಯಾಮರಾ ಫ್ರೇಮ್‌ನ ಹೊರಗೆ ಅರಮನೆ ಇದ್ರೂ ಲೆಕ್ಕಕ್ಕಿಲ್ಲ’ ಅಂತ.
ಒಡನಾಟಕ್ಕೆ ಸಿಕ್ಕ ಹಿರಿಯರ ಕತೆ ಹೇಳ್ತೀರಾ? ಸಾಮಾನ್ಯದಿಂದ ಅದ್ಭುತ ಸೃಷ್ಟಿ ಮಾಡಬಲ್ಲ ಕನ್ನಡದ ಅತ್ಯುತ್ತಮ ಕ್ಯಾಮರಾಮ್ಯಾನ್ ಎಸ್. ರಾಮಚಂದ್ರ ಅವರು. ಕಾನೂರು ಹೆಗ್ಗಡತಿಯ ಎತ್ತಿನಗಾಡಿ ದೃಶ್ಯದಲ್ಲಿ ನಿಜವಾಗಿ ಗಾಡಿ ಓಡಿಯೇ ಇಲ್ಲ ! ಬರೀ ಚಕ್ರ ತಿರುಗುತ್ತೆ, ಮರಗಳು ಓಡುತ್ವೆ. ಎಲ್ಲೀವರೆಗೆ ಅಂದರೆ ಡಮ್ಮಿ ಕೊಂಬುಗಳನ್ನು ಶೂಟ್ ಮಾಡಿ ಗಾಡಿ ಓಡೋ ಥರದ ಎಫೆಕ್ಟ್ ಕೊಟ್ಟಿದ್ದಾರೆ ! ಎಲ್ಲೂ ದುಂದುವೆಚ್ಚ ಮಾಡದ ಕಾಸರವಳ್ಳಿಯವರ ಎಕನಾಮಿಕ್ಸ್ ಕೂಡಾ ಬಹಳ ಇಷ್ಟ. ಒಂದು ಡಲ್‌ಗ್ರೀನ್ ಡಬ್ಬ ಇಡಿ, ಅದರ ಎದುರು ಸಿಲ್ವರ್ ಚೆಂಬು ಇಡಿ ಅಂತ, ಬರೀ ಎರಡು ವಸ್ತುಗಳಿಂದ ಒಂದು ಫ್ರೇಮ್‌ಗೆ ಡೆಪ್ತ್ ಕ್ರಿಯೇಟ್ ಮಾಡ್ತಾರೆ.
ನನಗೆ ಅತ್ಯಂತ ಖುಶಿ ಕೊಟ್ಟ ಆರ್ಟ್ ಡೈರೆಕ್ಷನ್, "ದ್ವೀಪ’ ಸಿನಿಮಾದ್ದು. ಇನ್ನೊಂದು ಕವಿತಾ ಲಂಕೇಶ್‌ರ "ದೇವೀರಿ’. ಅಲ್ಲಿ ೩೫ ಪರ್ಸೆಂಟ್ ಸಿನಿಮಾ ಸ್ಲಮ್‌ನಲ್ಲಿ ನಡಿಯತ್ತೆ. ಆದರೆ ಅಷ್ಟೂ ಬರೀ ಸೆಟ್ಟಿಂಗ್ಸ್.
ಕೆಲವರು ಏನೇ ಕಮೆಂಟ್ ಮಾಡಿದ್ರೂ ಕಾರ್ನಾಡ್ ಅವರ ಮನುಷ್ಯತ್ವ ವಿಶೇಷವಾದ್ದು. ತೀರ್ಥಹಳ್ಳಿಯಲ್ಲಿ ಶೂಟಿಂಗ್ ಮಾಡ್ತಾ ಇದ್ದಾಗ ಉದ್ದ ಬಾಲದ ಹಕ್ಕಿಯೊಂದು ಕಾಣಿಸ್ತ್ತು. ಅದನ್ನ ನಮ್ಮೂರಲ್ಲಿ ಪಿಂಗಾರ ಹಕ್ಕಿ ಅಂತಾರೆ ಅಂತ ಜತೆಯಲ್ಲಿದ್ದವನಿಗೆ ಹೇಳಿದೆ. ಆಗ ಕಾರ್ನಾಡ್‌ರು, ಅದನ್ನ ಬರ್ಡ್ ಆಫ್ ಪ್ಯಾರಡೈಸ್ ಅಂತಾರೆ, ನಿಮಗೂ ಹಕ್ಕಿ ನೋಡೋ ಹುಚ್ಚು ಇದಿಯಾ ಅಂದ್ರು. ರಾತ್ರಿ ರೂಮಿಗೆ ಕರೆದು ಸಲೀಂ ಅಲಿ ಪುಸ್ತಕ ಕೈಗೆ ಕೊಟ್ಟು ಇದರಲ್ಲಿ ಯಾವುದಾದ್ರೂ ಹಕ್ಕಿ ಕಂಡರೆ ಗುರುತಿಸಿ, ಹೊಸತು ಕಂಡ್ರೆ ನನ್ನ ಕರೀರಿ ಅಂದ್ರು !
ಈಗ ಶಿರಸಿಯಲ್ಲಿರುವ ಹಿರಿಯರಾದ ನಜೀರ್ ಅವರನ್ನಂತೂ ಕನ್ನಡದ ಕಲಾ ನಿರ್ದೇಶಕರು ನೆನಪಿಸಿಕೊಳ್ಳಲೇಬೇಕು. ೭೦ರ ಆರಂಭದ ಹೊತ್ತಿಗೆ ಮೆಡ್ರಾಸ್‌ನಲ್ಲಿ ನಡೀತಿದ್ದ ಕೆಲಸಗಳೆಲ್ಲಾ ಬೆಂಗಳೂರಲ್ಲೇ ಆಗತೊಡಗಿದಾಗ ಕನ್ನಡದ ಕಾರ್ಪೆಂಟರ್, ಪೈಂಟರ್‌ಗಳನ್ನು ಬೆಳೆಸಿದವರೇ ಅವರು. ಕನ್ನಡದವರಿಗೆ ಕೆಲಸ ಸಿಗಬೇಕು ಅಂತ ಅವರಿಗೆ ಹೃದಯದಲ್ಲಿತ್ತು .
ನಿಮ್ಮ ಸೆಟ್ಟಿಂಗ್ಸ್ ಬಹಳ ಬಹಳ ಕಲಾತ್ಮಕ. ಎಲ್ರಿಗೂ ಒಪ್ಪಿಗೆಯಾಗೋದು ಕಷ್ಟ ಅನ್ನೋ ಅಭಿಪ್ರಾಯವೂ ಇದೆಯಲ್ಲ? ನನಗೂ ರೊಮ್ಯಾಂಟಿಕ್ ಇಮೇಜಸ್, ಕಮರ್ಷಿಯಲ್ ಇಮೋಷನ್ ಬಯಸೋದ್ರ ಬಗ್ಗೆ ಏನೇನೂ ತಕರಾರಿಲ್ಲ. ಪ್ರಾಡಕ್ಟ್ ಮಾರುವ ಗುರಿಯೇ ಮುಖ್ಯವಾಗಿರುವ ಜಾಹೀರಾತು ಸಿನಿಮಾಗೆ ನಾನು ಕೆಲಸ ಮಾಡೋನೇ. ಜಗಜಗ ಅನ್ನೋ ಸಾಂಗ್ ಸೆಟ್‌ಗಳ ಬಗ್ಗೆ ದ್ವೇಷ ಇಲ್ಲ. ಈಗಲೂ ನಾನು ಒಳ್ಳೆ ಕಮರ್ಷಿಯಲ್ ಸೆಟ್ ಹೊಡೀಬಲ್ಲೆ. ಆದರೆ ನನ್ನ ತಕರಾರಿರುವುದು ತೀರಾ ಬಾಲಿಶ ಹುಚ್ಚುಗಳ ಬಗ್ಗೆ ಮಾತ್ರ. ಇರೋಟಿಕ್ ಫೀಲಿಂಗ್ ಬಗ್ಗೆ ನಮ್ಮಲ್ಲಿ ಹಳೆ ಮನೋಭಾವವೇ ಇದೆ. ಹೊಕ್ಕಳಿಗೆ ಮುತ್ತು ಕೊಡೋದು, ತೊಡೆ ತೋರಿಸೋದು ಇಷ್ಟೇ ಅಂತ ತಿಳ್ಕೊಂಡಿದ್ದಾರೆ. ಆಧುನಿಕ ಮನುಷ್ಯನ ಫೀಲಿಂಗ್‌ಗಳು ಬೇರೆಬೇರೆ ಥರ ಇವೆ. ಸೂರಿಗೆ ಆ ಪ್ರಜ್ಞೆ ಇದೆ. ತನ್ನ ಸಿನಿಮಾಗಳಲ್ಲಿ ಕಲರ್, ಟೆಕ್ಸ್‌ಚರ್, ಸರ್ಫೇಸ್ ಎಲ್ಲ ಚೆನ್ನಾಗಿ ಬಳಸ್ತಾನೆ. ಅವನ ಹೊಸ ಚಿತ್ರ "ಇಂತಿ ನಿನ್ನ ಪ್ರೀತಿಯ’ ದಲ್ಲಿ ಬಾತ್‌ಟಬ್ ದೃಶ್ಯವನ್ನೂ ಅಗ್ಲಿ ಆಗದೆ ತೀರಾ ಡಿಫರೆಂಟ್ ಆಗಿ ತೋರಿಸೋದಕ್ಕೆ ಟ್ರೈ ಮಾಡಿದ್ದೇವೆ. ಸಿಕ್ಕಿದ್ದನ್ನು ಪಕ್ಕನೆ ಗ್ರಹಿಸುವ ಸೂರಿಯಂತಹ ಹೊಸ ಯುವಕರಿಗೆ, ನನಗೆ ಗೊತ್ತಿದ್ದನ್ನು ಹೇಳೋಕೂ ಬಹಳ ಖುಶಿ. "ನೀವು ಕೊಟ್ಟಿದ್ದನ್ನೆಲ್ಲಾ ರೇಪ್ ಮಾಡ್ಬಿಟ್ಟೆ ಸಾರ್’ ಅಂತಾನೆ !

Read more...

October 17, 2007

ನಟನಾ ವಿಶಾರದರಿಗೆ ಪೊಡಮಟ್ಟು ಬಣ್ಣಿಪೆನೀ ಕತೆಯ...

ಈ ಬಾರಿಯ ನೀನಾಸಂ ತಿರುಗಾಟದ ತಂಡದಲ್ಲಿ ಆರು ಜನ ಹುಡುಗಿಯರು. ಇಷ್ಟೊಂದು ಹುಡುಗಿಯರು ತಂಡದಲ್ಲಿರುವುದು ಪ್ರಥಮವೇನೋ. ಅವರಲ್ಲಿ ಒಬ್ಬಳು ಮಾತ್ರ ಕಳೆದ ವರ್ಷವೂ ಇದ್ದವಳು. ಸುಮಾರು ಎಂಟು ಜನ ಹುಡುಗರಲ್ಲಿ ಬಹುಶಃ ಮೂವರು ಮಾತ್ರ ಹಳಬರು. ಆದರೆ ಕೆಲವರ್ಷಗಳ ಹಿಂದೆ ಬಹುತೇಕ ಕಲಾವಿದರು ಎರಡುಮೂರು ತಿರುಗಾಟ ಮಾಡುವುದು ಸಾಮಾನ್ಯವಾಗಿತ್ತು ಅಂತ ನೆನಪು.

ನನ್ನ ಒಲವಿನ ನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದ ಆಲ್‌ಟೈಮ್ ಫೇವರಿಟ್ ನಾಟಕಗಳಾದ "ಕೆಂಪು ಕಣಗಿಲೆ’ ಮತ್ತು "ಚಿರೇಬಂದೀವಾಡೆ’ಗಳನ್ನು ನೆನಪಿಸಿಕೊಂಡರೆ ಈಗ ದುಃಖವಾಗುತ್ತದೆ ! ನಾನು ಆಗ ಸಣ್ಣವನಿದ್ದುದರಿಂದ ಇಷ್ಟವಾಯಿತೋ, ಈಗ "ನಾನು’ ಬೆಳೆದು ಬುದ್ಧಿ ಬೆಳೆಯದೆ ಇರುವುದರಿಂದ ಈಗಿನದ್ದು ಇಷ್ಟವಾಗುವುದಿಲ್ಲವೋ, ಸರಿಯಾಗಿ ಗೊತ್ತಿಲ್ಲ. ವರ್ಷದ ಹಿಂದೆ ಮರುತಿರುಗಾಟದಲ್ಲಿ ಪ್ರದರ್ಶಿಸಿದ 'ಕೇಶಪಾಶ ಪ್ರಪಂಚ’ (ನಿ:ಐತಾಳ) ಹೊರತುಪಡಿಸಿದರೆ ಮೂರ್‍ನಾಲ್ಕು ವರ್ಷಗಳ ನೀನಾಸಂ ನಾಟಕ --ಡ್ಯಾಶ್ ಡ್ಯಾಶ್--!

ಕಳೆದ ವರ್ಷದ ನಾಟಕಗಳ ಬಗ್ಗೆ ( ಮುಖ್ಯವಾಗಿ ಇಕ್ಬಾಲ್‌ರು ನಿರ್ದೇಶಿಸಿದ್ದರ ಬಗ್ಗೆ) ವಿ.ಕ.ದಲ್ಲಿ ಕಟುವಾಗಿ ಬರೆದು, ಕೆಲವರಿಂದ ಹೀಯಾಳಿಸಿಕೊಂಡೆ. ಹಾಗಾಗಿ ಈ ಸಾರಿಯೂ ಬೊಂಡ ಕೆತ್ತುವ ಆಸೆಯಿಲ್ಲ ! ಧರ್ಮೇಂದ್ರಕುಮಾರ್ ಅರಸ್, ಅಚ್ಯುತ, ಅರಸ್ ಪತ್ನಿ ಶೈಲಜಾ(ಈಗ ಎಲ್ಲರೂ ಸೀರಿಯಲ್ ನಟನಾ ವಿಶಾರದರು)ಮೊದಲಾದವರಿದ್ದ ೨೦೦೦-೦೧ರ ತಂಡಕ್ಕೇ ನೀನಾಸಂ ಕತೆ ----- ಅಂತ ಈಗ ಅನ್ನಿಸಲಾರಂಭಿಸಿದೆ !
ಈಗಿನ ತಿರುಗಾಟದ ಮೊದಲ ನಾಟಕ "ಇ ನರಕ ಇ ಪುಲಕ’ಕ್ಕೆ ಹೋಗದೆ (ಕೆಲವರ ಹಿತವಚನದ ಮೇರೆಗೆ ) ಚೆನ್ನಕೇಶವ ನಿರ್ದೇಶನದ "ಲೋಕೋತ್ತಮೆ’ ನೋಡಹೋದೆ. ಸಕತ್ ಮನರಂಜನೆ ಅಂತಂದರು ಕೆಲವರು. ಕೊನೆಯ ಸಾಲಿನಲ್ಲಿ ಕುಳಿತಿದ್ದ ಕಾಲೇಜು ಹುಡುಗಹುಡುಗೀರು ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆಯುತ್ತಿದ್ದರು. ಎರಡು ರಾಜ್ಯಗಳ ನಡುವೆ ನಡೆಯುವ ಯುದ್ಧ ತಪ್ಪಿಸಿ ಶಾಂತಿ ಏರ್ಪಡಿಸಲು, ಎರಡೂ ಕಡೆಯ ಹೆಂಗಸರು ಒಟ್ಟಾಗಿ ಗಂಡಸರನ್ನು ಬಹಿಷ್ಕರಿಸುವ ನಾಟಕವದು. ಹೆಂಗಸರೆಲ್ಲ ಮನೆ ಬಿಟ್ಟು ಕೋಟೆ ಸೇರಿ ಗಂಡಸರ ಕಾಮವಾಂಛೆಗೆ ಸಹಕರಿಸುವುದಿಲ್ಲವೆಂದೂ, ತಮ್ಮ ಆಸೆಗಳನ್ನೂ ತಡೆದುಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆ. ರತಿಸುಖದ ಆಸೆ ಅದುಮಿಡಲಾಗದ ಗಂಡ-ಹೆಂಡಂದಿರ ವರ್ತನೆಗಳೇ ನಾಟಕದ ಘಟನಾವಳಿ. ಯುದ್ಧ-ಶಾಂತಿಗಿಂತ ಹೆಚ್ಚಾಗಿ , ಲೈಂಗಿಕತೆಯ ಬಲ-ದೌರ್ಬಲ್ಯಗಳನ್ನು ಹೇಳುತ್ತ, ಗಂಡು-ಹೆಣ್ಣು ಎಲ್ಲ ವಿಷಯಗಳಲ್ಲೂ ಸಮಾನರು ಅಂತ ನೀತಿ ಹೇಳಲಾಗುತ್ತದೆ. ನಾಟಕದ ಪೂರ್ತಿ ಎಲ್ಲರ ಬುದ್ಧಿಯೂ ಸೊಂಟದ ಕೆಳಗೇ ! ಮದಿರೆ-ಮಾನಿನಿ-ಮಾಂಸ ವರ್ಜಿಸಿದ, ಸಭ್ಯ ಮರ್ಯಾದಸ್ಥ ಮಡಿವಂತರು ಬಹುತೇಕರಲ್ಲ ! ಹಾಗಿದ್ದೂ , ೨೦೦೧ರಲ್ಲಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗದ, ಆನಗಳ್ಳಿ ನಿರ್ದೇಶನದ "ಜುಜುಬಿ ದೇವರ ಜುಗಾರಿಯಾಟ’ ಇದಕ್ಕಿಂತ ಎಷ್ಟೋ ಹೆಚ್ಚು ಪಾಲು ರಂಜನೆ ಕೊಡುವ ನಾಟಕ ಎನ್ನುತ್ತೇನೆ. ಅದರಲ್ಲಿನ ನೆರಳು-ಬೆಳಕು, ಅಭಿನಯ, ರಂಗಪರಿಕರ, ದೈಹಿಕ ಕಸರತ್ತು , ರಂಗತಂತ್ರ ಭೋ ಚೆನ್ನಾಗಿತ್ತು . (ನಾಟಕದ ವಸ್ತು ನಿರ್ವಹಣೆಯ ಸಮರ್ಪಕತೆ ಬಗ್ಗೆ ಬೇರೆ ಮಾತು.)

*****

ಬಹುಶಃ ೨೦೦೦ನೇ ಇಸವಿ ಇರಬೇಕು. ದ್ವಿತೀಯ ಪಿಯುಸಿಯಲ್ಲಿ ಲಾಗ (ಎಲ್ಲ ಅರ್ಥಗಳಲ್ಲಿ !) ಹೊಡೀತಿದ್ದ ಹುಡುಗ. ಕಾಲೇಜಿಗೆ ಒಂದು ವಾರ ಚಕ್ಕರ್ ಒಗೆದು ನೀನಾಸಂ ತಲುಪಿದಾಗ ರಾತ್ರಿ ಹತ್ತೂವರೆ. ಸಂಸ್ಕೃತಿ ಶಿಬಿರದ ಮೊದಲನೇ ದಿನದ "ಸಕ್ಕರೆ ಗೊಂಬೆ’(ನಿ:ಅಕ್ಷರ) ನಾಟಕ ಮುಗಿಸಿಕೊಂಡು ಎಲ್ಲರೂ ಊಟಕ್ಕೆ ಹೋಗ್ತಾ ಇದ್ರು. ಹುಡುಗ ಏಕಾಂಗಿ, ಅಪರಿಚಿತ ಸ್ಥಳ, ಸಂಕೋಚ ಸ್ವಭಾವ. ಹೊಸನಗರದಲ್ಲಿ ಒಂದೂವರೆ ಗಂಟೆ ಕಾದುಕಾದು ಆದ ಮಂಡೆಬಿಸಿ ಬೇರೆ. ಎದುರು ಕಂಡ ಕೋಣೆಯ ಒಳನುಗ್ಗಿದ. ವೀಳ್ಯದಸಂಚಿಯೊಳಗೆ ಕೈಯಿಟ್ಟುಕೊಂಡೇ ನಿದ್ದೆ ಹೋದಂತಿತ್ತು ಒಂದು ಮುದಿ ಜೀವ. ಫೋಟೊದಲ್ಲಷ್ಟೇ ಸುಬ್ಬಣ್ಣರನ್ನು ನೋಡಿದ್ದ ಅವನಿಗೆ ಅವರೇ ಆಗಿರಬಹುದೇ ಎಂಬ ಅನುಮಾನ. ಹೊರಗೆ ನಡೆಯುತ್ತಿರುವ ಅವಸರ-ಗಲಾಟೆ ನೋಡಿದರೆ, ಸಂಸ್ಥೆಯ ಮುಖ್ಯಸ್ಥನೊಬ್ಬ ಹೀಗೆ ಕುಳಿತಿರಲು ಸಾಧ್ಯವೆ ಎಂಬ ಪ್ರಶ್ನೆ.. ಕೊನೆಗೂ ಅಳುಕಿನಿಂದಲೇ ಮಾತಾಡಿದ. ಯಾರನ್ನೋ ಕರೆದು ವ್ಯವಸ್ಥೆ ಮಾಡಿದರು. ಆ ರಾತ್ರಿ ಸುಖ ನಿದ್ದೆ. ಅವರೇ ಕೆ.ವಿ. ಸುಬ್ಬಣ್ಣ ಅಂತ ಮರುದಿನ ಖಚಿತವಾಯಿತು !

*****

ಹೈಸ್ಕೂಲಿನಲ್ಲಿದ್ದ ೯೪-೯೫ರ ದಿನಗಳಲ್ಲಿ ನೋಡಿದ "ಹೂಹುಡುಗಿ’, ನಂತರದ ವರ್ಷದ "ಚಿರೇಬಂದಿವಾಡೆ’ ಹೀಗೆ ವರ್ಷದ ಮೂರು ನಾಟಕಗಳಲ್ಲಿ ಒಂದಾದರೂ ನೀನಾಸಂ ನಾಟಕ ನೋಡದೆ ಇರುತ್ತಿರಲಿಲ್ಲ. ಕಾರಂತರ ನಿರ್ದೇಶನದ "ಕಿಂದರಿಜೋಗಿ’ಯಿಂದ ಶುರುವಾಗಿ ಕಳೆದ ಹತ್ತು ವರ್ಷಗಳಲ್ಲಿ ರಂಗಾಯಣದ ಇಪ್ಪತ್ತೈದು ನಾಟಕಗಳನ್ನಾದರೂ ನೋಡಿರಬಹುದು. ಅಲ್ಲಿಯ ಸರಕಾರಿ ನಟರ ಕತೆಯೂ ಈಗ ಶೋಚನೀಯವೇ.


ಪ್ರತಿಷ್ಠಿತ ನೀನಾಸಂ-ರಂಗಾಯಣ ನಾಟಕಗಳಿಗಿಂತ ಹೊರತಾದ- ವಿನಾಯಕ ಜೋಶಿ ನಿರ್ದೇಶನದ ಶ್ರೀನಿವಾಸ ವೈದ್ಯರ ನಾಟಕ "ಶ್ರಾದ್ಧ’, ಪೂರ್ಣಚಂದ್ರ ತೇಜಸ್ವಿ (ಸೀರಿಯಲ್ ಆಕ್ಟರ್)ನಿರ್ದೇಶನದ "ಭ್ರಮೆ’, ಸುರೇಂದ್ರನಾಥ್ ನಿರ್ದೇಶನದ "ನಾನೀನಾದರೆನೀನಾನೇನಾ’, ಟಾಪ್‌ಕಾಸ್ಟ್ ತಂಡದ ಹೆಸರು ನೆನಪಾಗದ ಒಂದು ನಾಟಕ, ಅಂತರಂಗ ತಂಡದ "ಹುತ್ತದಲ್ಲಿ ಹುತ್ತ’ ಬಹಳ ಸತ್ವಯುತ ಪ್ರದರ್ಶನಗಳು. ಆದರೆ ೨೪ ಗಂಟೆ ನಾಟಕ ಕ್ಷೇತ್ರದೊಳಗಿರುವ ನಟರಿದ್ದೂ ಹವ್ಯಾಸಿ ಕಲಾವಿದರು , ಕಾಲೇಜು ಹುಡುಗರ ನಾಟಕಕ್ಕಿಂತ ಮೇಲೇರಲಾಗದಿದ್ದರೆ ಏನು ಫಲ? ಮುಂದಿನ ೨೦ನೇ ತಾರೀಖಿನಿಂದ ವಾರ ಪೂರ್ತಿ ರಂಗಶಂಕರದಲ್ಲಿ ಹೊಸ ನಾಟಕಗಳೇ ಇವೆ. ಪುರುಸೊತ್ತು ಮಾಡ್ಕೊಳ್ಳಿ.

-ಕಲಾಮಾತೆಯ ಪಾದದೂಳಿಯಲ್ಲಿ ಬಿದ್ದುಕೊಂಡಿರುವ

'ಪಾಪಿ ಮುಂಡೆ ಬಿಕನಾಸಿ ರಂಡೆ ಮಾಯಾವಿ ರಂಬೆ ಹಲ್ಕಾ ಪೋಲಿಗಳು’

Read more...

October 14, 2007

ಇದು ಬ್ರೇಕಿಂಗ್ ನ್ಯೂಸ್ ಅಲ್ಲ !

ಳೆದ ಬಾರಿ ಊರಿಗೆ ಹೋಗಿದ್ದಾಗ ಒಂದು ವಿಶೇಷ ಸುದ್ದಿ ಸಿಕ್ಕಿತು.ಅಷ್ಟೊಂದು ಅಪರೂಪದ ಆ ಘಟನೆ, ಲೋಕಲ್ ಪತ್ರಿಕೆಗಳಲ್ಲಾದರೂ ಬರಬೇಕಿತ್ತು . ಜನರ ನಡುವೆಯಾದರೂ ಗಹನ ಚರ್ಚೆಯಾಗಬೇಕಿತ್ತು . ಊರಿನ ಸಾಹಿತಿಗಳಾದರೂ ಆ ಬಗ್ಗೆ ಒಂದು ಪದ್ಯವೋ ಲೇಖನವೋ ಬರೆಯಬಹುದಾಗಿತ್ತು. ಆದರೆ ಆ ಸುದ್ದಿ ಏನೂ ಆಗದೆ, ಕೆಲವರ ನಾಲಗೆಯಲ್ಲಷ್ಟೇ ಹೊರಳಿ ಸತ್ತುಹೋಯಿತು.

ದ.ಕ.ದ ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡು ಮೂವರು ಅಣ್ಣತಮ್ಮಂದಿರ ಮಧ್ಯಮವರ್ಗದ ಕುಟುಂಬವೊಂದು ಬದುಕುತ್ತಿತ್ತು. ಮದುವೆ ಆಗಿ ಮಕ್ಕಳನ್ನೂ ಪಡೆದಿದ್ದ ಆ ಮೂವರು, ನಾಲ್ಕೈದು ತಿಂಗಳ ಹಿಂದೆ ಆಸ್ತಿ ಪಾಲು ಮಾಡಿಕೊಂಡು, ಹೊಸ ಮನೆ ಕಟ್ಟಿ ಪ್ರತ್ಯೇಕವಾಗಿ ಬದುಕುತ್ತಿದ್ದರು. ಹೀಗೆ ವಿಭಕ್ತವಾಗಿದ್ದ ಅಣ್ಣತಮ್ಮಂದಿರು, ಈಗ ಹೊಸ ಮನೆಗೆ ಬೀಗ ಹಾಕಿ ಮತ್ತೆ ಹಳೆ ಮನೆಯಲ್ಲೇ ಎಲ್ಲರೊಂದಾಗಿ ಬದುಕುತ್ತಿದ್ದಾರೆ ! ಇದು "ಬ್ರೇಕಿಂಗ್’ ನ್ಯೂಸ್ ಹೇಗಾದೀತು?


ನಾನಾ ಪ್ರಶ್ನೆಗಳು ನಾಲಗೆ ತುದಿಯಲ್ಲೇ ಇವೆ. ಇದು ಜಾಗತೀಕರಣಕ್ಕೆ ಪುಟ್ಟ ಕುಟುಂಬವೊಂದು ಸಡ್ಡು ಹೊಡೆದ ರೀತಿಯೆ? ಅಥವಾ ಕೃಷಿಯೊಂದನ್ನೇ ನಂಬಿಕೊಂಡ ವಿಭಕ್ತ ಕುಟುಂಬವೊಂದು ಬದುಕುವುದೇ ಕಷ್ಟ ಎಂಬ ಆರ್ಥಿಕ ಕಾರಣವೆ? ಅವಿಭಕ್ತ ಕುಟುಂಬದ ಲಾಭಗಳ ಅರಿವೆ? ಆರೋಗ್ಯ ಸಂಬಂಧಿ ಸಮಸ್ಯೆಗಳೆ? ಅಥವಾ ಯಾರಾದರೂ ಜ್ಯೋತಿಷಿಗಳು ಏನಾದರೂ ಹೇಳಿದರೆ?!


ಸುಮಾರು ಏಳು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಒಂಭತ್ತು ಜನರಿದ್ದರು. ಈಗ ಮೂವರು ! ಕಳೆದ ಆರೇಳು ವರ್ಷಗಳಲ್ಲಿ ದ.ಕ.ದಲ್ಲಂತೂ ನೂರಾರು ಕುಟುಂಬಗಳು ಛೇದನಗೊಂಡವು. ಮೌಲ್ಯಗಳು ಹೊಸದಾಗಿ ಬಂದಂತೆ ಬದುಕುವ ಶೈಲಿಯಲ್ಲೂ ಬದಲಾವಣೆ ಅಗತ್ಯವಾಯಿತೇನೋ. ದೊಡ್ಡಮನೆ, ಆಳುಕಾಳು, ತೋಟಗದ್ದೆಗಳೆಲ್ಲ ನಿಷ್ಪ್ರಯೋಜಕ-ಹೊರೆ ಅಂತ ಜನ ಭಾವಿಸತೊಡಗಿದಂತೆ ಈ ಪಾಲು ಪಂಚಾತಿಕೆ ಆರಂಭವಾಗಿರಬೇಕು.


ಹಳ್ಳಿ-ನಗರ ಸಂಪರ್ಕ ಜಾಸ್ತಿಯಾದಂತೆ ಹಳ್ಳಿಗರನ್ನು ಸೆಳೆಯತೊಡಗಿದ್ದು ನಗರಗಳ ಸುಖ ಲೋಲುಪತೆ. ಪ್ರತಿಮನೆಯ ಒಬ್ಬರಾದರೂ ಬೆಂಗಳೂರು ಸೇರಿ, ರಾಜಧಾನಿಯ ರಂಪಾಟಗಳು ಊರುಗಳನ್ನೂ ತಲುಪತೊಡಗಿದವು. ಕಾಂಚಾಣದ ಆಸೆ ಕೈಹಿಡಿದೆಳೆಯಿತು. ದುಡ್ಡೊಂದಿದ್ದರೆ ಎಲ್ಲವೂ ಸಾಧ್ಯ ಎಂಬ ಯೋಚನೆಗೆ ನಗರಗಳು ಇಂಬು ನೀಡಿದವು. ಮಹಾನಗರಗಳಲ್ಲಿ ಹೆಚ್ಚಾದ ಉದ್ಯೋಗವಕಾಶದಿಂದಾಗಿ ಹಳ್ಳಿಯಿಂದ ನಗರಕ್ಕೆ "ಸಾಂಸ್ಕೃತಿಕ ವಲಸೆ’ಯೂ ಆರಂಭವಾಯಿತು. ಚಿತ್ರ ಕಲಾವಿದರು, ನಟರು, ಒಳ್ಳೆಯ ಮಾತುಗಾರರು ನಗರಗಳ ಟಿವಿ-ಪತ್ರಿಕೆ-ರೇಡಿಯೊಗಳೊಳಗೆ ನುಗ್ಗಿಕೊಂಡರು. ಹುಡುಗಿಯರೂ ಉನ್ನತ ವಿದ್ಯಾಭ್ಯಾಸ ಮಾಡತೊಡಗಿ, ಹಳ್ಳಿಯಲ್ಲಿರುವ ಹುಡುಗರನ್ನು ಅವರು ಒಪ್ಪುವುದಿಲ್ಲ ಎಂಬಂತಾಯಿತು. ಎಂಜಿನಿಯರಿಂಗ್-ಮೆಡಿಕಲ್ ಆಸೆಯು ಹುಚ್ಚು ಕುದುರಿಯೇರಿ ಸಾಗಿತು. ತೋಟಕ್ಕೆ ಹೋಗೋದು, ಹಾಲು ಕರೆಯೋದು, ಸೆಗಣಿ ತೆಗೆಯೋದು ಪರಮಕಷ್ಟವೆಂಬ ಭಾವ ಮಹಿಳೆಯರಲ್ಲಂತೂ ಹೆಚ್ಚಾಗಿ ಬೇರೂರತೊಡಗಿತು. ಪೇಟೆಯಲ್ಲಿರುವ ಹುಡುಗರಾದರೆ, ಅವರೊಂದಿಗೆ ಅಪ್ಪ ಅಮ್ಮ ಇರುವುದಿಲ್ಲ ಎಂಬುದು, ವಿವಾಹ ಬಂಧನದ ಮುಖ್ಯ ಸಂಗತಿಯಾಯಿತು. ಹಳ್ಳಿಯಲ್ಲಿರುವ ಹುಡುಗನಿಗೆ ವಧು ನೋಡುವುದಕ್ಕೆ ಹೊರಡುವ ಮೊದಲು ಅಪ್ಪ ಮಗನಿಗೆ ಹೇಳಿದರು -"ಅಪ್ಪ ಅಮ್ಮ ಇರುವ ಹುಡುಗ ಆದೀತು ಅನ್ನುವ ಹುಡುಗಿಯಾದರೆ ನೀನು ನೋಡು, ಅಪ್ಪ ಅಮ್ಮ ಇಲ್ಲದ ಹುಡುಗನೇ ಆಗಬೇಕು ಅಂತಾದರೆ ನಾನು ನೋಡುತ್ತೇನೆ !’

ಬರ-ಪ್ರವಾಹ-ಅತಿವೃಷ್ಟಿಗಳ ಜತೆಗೆ ಬೆಳೆಗಳ ಬೆಲೆ ಕುಸಿದು, ಕೃಷಿಯೊಂದನ್ನೇ ನಂಬಿದರೆ ಕಂಗಾಲು ಎಂಬ ಭಾವ ದೃಢವಾಯಿತು. ಮನೆಯಲ್ಲಿ ಜನ ಜಾಸ್ತಿ ಇದ್ದಷ್ಟೂ ಖರ್ಚು ಜಾಸ್ತಿ , ಉತ್ಪಾದನೆ ನಾಸ್ತಿ ಎಂಬ ವಾದ ಶುರುವಾಯಿತು. ತನ್ನ ಮಗುವಿನ ಭವಿಷ್ಯದ ಬಗ್ಗೆ ಸಂಪೂರ್ಣ ಲಕ್ಷ್ಯ ಕೊಡಲು ತನಗೆ ಕಷ್ಟವಾಗುತ್ತಿದೆ ಎಂಬುದು ಕೂಡು ಕುಟುಂಬದ ಎಲ್ಲ ತಂದೆತಾಯಂದಿರ ಯೋಚನೆಯಾಯಿತು. "ಬೆಂಗಳೂರಲ್ಲೇ ಇರೋದು ನಮಗೆ ಬೇಡ. ಎಲ್ಲ ವ್ಯವಸ್ಥೆಗಳಿರುವ ಹಳ್ಳಿಮನೆ ನಮಗೆ ಬೇಕು. ಬೇಕಾದಾಗ ಸಿಟಿಗೆ ಹೋಗಿ ಬರುವಂತಿರಬೇಕು’ ಈ ಮಾತನ್ನು ಹಳ್ಳಿಯ ಅಮ್ಮಂದಿರು ಆಗಾಗ ಹೇಳಲಾರಂಭಿಸಿದರು. ಈಗಲೂ ಯಂತ್ರದಂತೆ ಏನಾದರೊಂದು ಕೆಲಸ ಮಾಡುತ್ತಿರುವ ಅಜ್ಜಿಯಂದಿರಿಗೆ ಇಂತಹ ಬಯಕೆಗಳು ಇರಲಿಲ್ಲ. ಸಮೂಹಪ್ರಜ್ಞೆ ಕಡಿಮೆಯಾಗುತ್ತಾ ಸ್ವಾರ್ಥ ಜಾಗೃತವಾಗತೊಡಗಿತು.


ಹೀಗೆ ನಾವು ಹೇಳುತ್ತಲೇ ಹೋಗಬಹುದು ! ಆದರೆ ಪ್ರತಿಯೊಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಮನೆ ವಿಭಜನೆಗೆ ತನ್ನದೇ ಕಾರಣವನ್ನು ಹೇಳುವುದೇ ಸಂಸಾರದ ವಿಸ್ಮಯ. ವಿಭಕ್ತ-ಅವಿಭಕ್ತ ಕುಟುಂಬಗಳಲ್ಲಿ ಯಾವುದು ಉತ್ತಮ ಯಾವುದು ಕನಿಷ್ಠ ಎಂಬುದು ಪ್ರಶ್ನೆಯಲ್ಲ. ಬೇರೆಬೇರೆ ಮನೆಗಳಲ್ಲಿದ್ದೂ ಒಂದೇ ಮನೆಯಲ್ಲಿದ್ದಂತೆ ಕೊಡುಕೊಳ್ಳುವಿಕೆಯಲ್ಲಿ ವ್ಯವಹರಿಸುತ್ತ, ಸರಸವಾಡುತ್ತ ಬದುಕುವ ಜನ ಕೂಡಾ ಇದ್ದಾರೆ. ತಮ್ಮತಮ್ಮ ಪಾಲಿಗಾಗಿ ಮಹಾಯುದ್ಧವನ್ನೇ ನಡೆಸಿದ ಕೌರವಪಾಂಡವರೂ ನಮ್ಮೊಳಗಿದ್ದಾರೆ. "ಇಹ ಸಂಸಾರೇ ಬಹು ದುಸ್ತಾರೇ...ಕೃಪಯಾ ಪಾರೇ ಪಾಹಿ ಮುರಾರೆ...!


ಆ ಸಮ್ಮಿಶ್ರ ಸರಕಾರ ಶಾಶ್ವತವಾಗಿರಲಿ ಅಂತ ಹಾರೈಸೋಣ. ಆದರೆ....
ಒಡೆದಿದ್ದ ಮನೆ ಒಂದಾಗುವುದಕ್ಕೆ- ಆರ್ಥಿಕ ಸಮಸ್ಯೆಯೇ ಮುಖ್ಯ ಕಾರಣ ಅಂತಾದರೆ ನಿಮಗೆ ದುಃಖವಾಗುತ್ತದೆಯೆ?

Read more...

October 04, 2007

೩೦೭, ೩೦೬ ಮತ್ತು ?

ನಾವು ಕೊಚ್ಚಿಕೊಂಡದ್ದೇ (ಹೊಗಳಿಕೊಂಡದ್ದೇ)ಬಂತು. ಕೊಚ್ಚಿಯಲ್ಲಿ ಕೊನೆಗೂ ಕೊಚ್ಚಿ ಹೋದದ್ದು ಇಂಡಿಯಾ. ಸೈಮಂಡ್ಸ್ ಮತ್ತು ಹ್ಯಾಡಿನ್‌ರಂತೂ ನಮ್ಮ ಬೌಲರುಗಳನ್ನು ಕೊಚ್ಚಿ ಹಾಕಿದರು.

ಟಾಸ್ ಹಾಕುವುದಕ್ಕೆ ಬಂದ ಆಸ್ಟ್ರೇಲಿಯಾ ತಂಡದ ನಾಯಕ ಗಿಲ್‌ಕ್ರಿಸ್ಟ್ ಐದು ನಿಮಿಷ ಕಾಯುವಂತೆ ಮಾಡಿದ ಧೋನಿ ೨೨೨ ರನ್‌ಗಳ ತನಕ ಗೂಟ ಕಾದದ್ದೇ ಬಂತು. ಗಂಗೂಲಿ ನಾಯಕರಾಗಿದ್ದಾಗ, ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಟಾಸ್‌ಗಾಗಿ ಕಾಯುವಂತೆ ಮಾಡುತ್ತಿದ್ದರಂತೆ.

ಟಿವಿ ಚಾನೆಲ್ ಒಂದರ ಖಾಸಗಿ ಕಾರ್‍ಯಕ್ರಮಕ್ಕಾಗಿ ನಗರದಿಂದ ಸುಮಾರು ೩೪ಕಿಮೀ ದೂರ ಹೋದ ಧೋನಿಗೆ, ಪಂದ್ಯದ ಆರಂಭಕ್ಕೆ ಮೊದಲು ಪತ್ರಕರ್ತರ ಜತೆ ಮಾತಾಡುವುದಕ್ಕೂ ಸಮಯ ಸಿಗಲಿಲ್ಲ. ಪತ್ರಿಕಾಗೋಷ್ಠಿಗಾಗಿ ಕಾದಿದ್ದ ಪತ್ರಕರ್ತರೆಲ್ಲ ಮ್ಯಾನೇಜರ್ ಹೇಳಿದ್ದನ್ನೇ ಬರಕೊಳ್ಳಬೇಕಾಯಿತು. ಗಿಲ್‌ಕ್ರಿಸ್ಟ್ ಮಾತ್ರ ಉದಾಸೀನ ಮಾಡಲಿಲ್ಲ.

ಹಲವು ದಿನಗಳಿಂದ ಮಳೆ ಸುರಿದು ತೊಪ್ಪೆಯಾಗಿದ್ದ ಅಂಗಣವನ್ನು ಶ್ರಮಪಟ್ಟು ಸಿದ್ಧಗೊಳಿಸಿದವರು ಮುಖ್ಯ ಕ್ಯುರೇಟರ್ ಪಿ.ವಿ. ರಾಮಚಂದ್ರನ್. ಅಲ್ಲಿ ನೀರು ಹಿಂಡುವ ಕೂಲಿಯಾಳುಗಳ ಸಂಬಳ ದಿನಕ್ಕೆ ರೂ.೩೦೦. ಮುಖ್ಯ ಕ್ಯುರೇಟರ್‌ಗೂ ಸಿಕ್ಕಿದ್ದು ಅವರಿಗಿಂತ ಬರೀ ೧೦೦ರೂ. ಹೆಚ್ಚು ! ರಾಮಚಂದ್ರನ್ ಈಗ ಮುಖ ಹಿಂಡುತ್ತಿದ್ದಾರೆ.

ಟಾಸ್ ಗೆದ್ದ ಬಹಳಷ್ಟು ಪಂದ್ಯಗಳಲ್ಲಿ ಭಾರತ ಸೋಲುತ್ತಿದೆಯೇ ಎಂಬ ಪ್ರಶ್ನೆ ನನ್ನದು. ನೆಟ್‌ನಲ್ಲಿ ನಡೆಸಿದ ಅವಸರದ ಜಾಲಾಟದಲ್ಲಿ ಉತ್ತರ ಸಿಗಲಿಲ್ಲ. ಈ ಬಗ್ಗೆ ಯಾರಾದರೂ ಅಂಕಿಅಂಶಗಳನ್ನು ನೀಡುವಿರಾ?
೫ರಂದು ಸುಲ್ತಾನರ ನಗರಿ ಹೈದರಾಬಾದ್‌ನಲ್ಲಾದರೂ ನಾವು "ಏಕ್ ದಿನ್ ಕಾ ಸುಲ್ತಾನ್’ ಆಗಲೆಂದು ಹಾರೈಸೋಣ.

ಇಂಡ್ಯಾ ಇಂಡ್ಯಾ ಇಂಡ್ಯಾ...

Read more...

September 27, 2007

'ಮೂಷಿಕ' ವಾಹನ - ಕನ್ನಡ ಪ್ರೇಮ !

ಕನ್ನಡ ಬ್ಲಾಗರ್‌ಗಳು ಗಮನಿಸಬೇಕಾದ ಸಂಗತಿ ಇದು.
'maa' 'moo' ಈ ಎರಡು ಕನ್ನಡದ ಅಕ್ಷರಗಳು ನಮ್ಮ ಯುನಿಕೋಡ್‌ನಲ್ಲಿ ಒಂದೇರೀತಿ ಕಾಣಿಸುತ್ತವೆ. ಅಲ್ಲದೆ 'ರ’ ಅಕ್ಷರಕ್ಕೆ 'ಯ’ ಒತ್ತಕ್ಷರವಾಗಿ ಬರುವ ಪದಗಳಿಗೆಲ್ಲ ಅರ್ಕ ಒತ್ತುಗಳನ್ನೇ ಬಳಸಬೇಕು. ಆದರೆ rank ನಂತಹ ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಇದು ಬಹಳ ಪೇಚಿಗೆ ಸಿಲುಕಿಸುತ್ತದೆ. ಅಲ್ಲಿ ಅರ್ಕ ವನ್ನೂ ಬಳಸುವಂತಿಲ್ಲವಲ್ಲ ! ಸೆ.೨೪ರಂದು ಕರ್ನಾಟಕ ಸರಕಾರ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಎಲ್ಲ ಸರಕಾರಿ ಕಚೇರಿಗಳಲ್ಲಿ ಮೈಕ್ರೋಸಾಫ್ಟ್ ಉತ್ಪನ್ನಗಳನ್ನೇ ಬಳಸುವ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಹೀಗಾದರೆ ನಮ್ಮೆಲ್ಲ ಸರಕಾರಿ ದಾಖಲೆಪತ್ರಗಳಲ್ಲೂ ಮೇಲೆ ಹೇಳಿದ ಕಾಗುಣಿತ ತಪ್ಪು ಕಾಣಿಸಿಕೊಳ್ಳಲಿದೆ.

ಸೆಪ್ಟೆಂಬರ್ ೨೭ರ ಉದಯವಾಣಿಯ ಬೆಂಗಳೂರು ಆವೃತ್ತಿಯ ಮುಖಪುಟದಲ್ಲಿ 'ಕಾಗದ ರಹಿತ ಸರಿ, ಕಾಗುಣಿತ ರಹಿತ?’ ಎಂಬ ವರದಿಯೊಂದು ಪ್ರಕಟವಾಗಿದೆ. ಉದಯವಾಣಿ ಪತ್ರಕರ್ತ, ಬ್ಲಾಗರ್ ಎನ್.ಎ.ಎಂ. ಇಸ್ಮಾಯಿಲ್ ಆ ಬಗ್ಗೆ ಎಚ್ಚರಿಸಿದ್ದಾರೆ. ಅದಕ್ಕೆ ಫಲ ಸಿಗಲಿ.

'ಋ’ ಅಕ್ಷರವನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕೆಂದು ಘನ ಸರಕಾರ ತೀರ್ಮಾನಿಸಿದಾಗ ಕವಿ ಜಿ.ಕೆ.ರವೀಂದ್ರ ಕುಮಾರ್ ಬರೆದ 'ಋ ಎಂಬ ಋಣದ ಪದ್ಯ’ ಕವಿತೆಯ ಕೊನೆಯ ಸಾಲುಗಳು-

ಏಣಿ ಇನ್ನೂ ನಿಂತುಕೊಂಡಿದೆ
ಅ ಎಂಬ ಅರಸನ ಮಕ್ಕಳು
ಸ್ನೇಕ್ ಅಂಡ್ ಲ್ಯಾಡರ್ ಆಡುತ್ತಿವೆ

ಉ ಊ ಊರುತ್ತ ಎ ಏ ಏಣಿ ಹತ್ತುತ್ತಿರುವವರಾರು?
ಯಾರೋ x y z ಇರಬೇಕು.
x y z ಗಳನ್ನು ಎಚ್ಚರಿಕೆಯಿಂದ ನೋಡೋಣ.

Read more...

ರಾಮನೇ ತುಂಡರಿಸಿದ ಸೇತು ನಮಗೆ ಬೇಕೆ ?

ನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ. ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ. ಬಡ ಜುಣುಗಿನಂತಿದ್ದ ಆ ಮಂಗ, ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ, ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ, ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ. ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ. ಅರ್ಜುನ ಮೂರು ಬಾರಿ ಬಾಣಗಳ ಸೇತುವೆ ಕಟ್ಟುವುದು, ಹನುಮಂತ ಮುರಿಯುವುದು. ಮುರಿಯುವುದಕ್ಕಾಗದಿದ್ದರೆ ಹನುಮಂತನು ರಾಮದಾಸ್ಯವನ್ನು ಬಿಟ್ಟು ಅರ್ಜುನನ ದಾಸನಾಗುವುದು, ಸೇತು ಮುರಿಯಲ್ಪಟ್ಟರೆ ಅರ್ಜುನ ಬೆಂಕಿಗೆ ಹಾರಿ ದೇಹತ್ಯಾಗ ಮಾಡುವುದೆಂದು ಪಂಥವಾಗುತ್ತದೆ. ಆದರೆ ಮೂರು ಬಾರಿಯೂ ಅರ್ಜುನ ಕಟ್ಟಿದ ಬಾಣಗಳ ಸೇತುವೆ ಹನುಮಂತನಿಂದ ಮುರಿಯಲ್ಪಟ್ಟಾಗ, ಅರ್ಜುನ ಕೃಷ್ಣನನ್ನು ಸ್ತುತಿಸುತ್ತ ಅಗ್ನಿಪ್ರವೇಶಕ್ಕೆ ಸಿದ್ಧನಾಗುತ್ತಾನೆ. ಆಗ ವೃದ್ಧ ಬ್ರಾಹ್ಮಣನ ವೇಷದಲ್ಲಿ ಕೃಷ್ಣ ಅಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಕ್ಷಿಯಿಲ್ಲದೆ ನಡೆದ ನಿಮ್ಮ ಪಂಥ ಊರ್ಜಿತವಲ್ಲ. ಇನ್ನೊಮ್ಮೆ ಇದನ್ನು ನಡೆಸಿ ಎನ್ನುತ್ತಾನೆ. ಕೂರ್ಮಾವತರಾವನ್ನು ತಾಳಿ ಅರ್ಜುನನ ಬಾಣದ ಸೇತುವೆಯನ್ನು ಆಧರಿಸುತ್ತಾನೆ. ಆಗ ಸೇತುವನ್ನು ಮುರಿಯಲಿಕ್ಕಾಗದೆ ಸೋತ ಹನುಮನಿಗೆ ಶ್ರೀರಾಮನಾಗಿ ದರ್ಶನ ನೀಡಿ, ಪಾರ್ಥನ ರಥದ ಧ್ವಜಾಗ್ರದಲ್ಲಿ ನೀನಿದ್ದು ಸೇವೆಯನ್ನು ಸಲ್ಲಿಸು ಎನ್ನುತ್ತಾನೆ.

ಶರಸೇತು ಮತ್ತು ರಾಮಸೇತು
ಇದು ಮಹಾಭಾರತದ ಪ್ರಕ್ಷಿಪ್ತ ಭಾಗ. ಆದರೆ ಯಕ್ಷಗಾನ ತಾಳಮದ್ದಳೆಯಲ್ಲಿ ಬಹಳ ಪ್ರಸಿದ್ಧವಾದ "ಶರಸೇತು ಬಂಧನ’ ಎಂಬ ಪ್ರಸಂಗ. ಅರ್ಜುನ-ಹನುಮಂತರ ನಡುವೆ ಕುಶಲ ವಾದ ವಿವಾದಕ್ಕೆ, ದೇವರು-ದೇವ ಭಕ್ತರೆಲ್ಲ ಒಂದೇ ಎಂಬ ಕೃಷ್ಣನ ಮಾತಿಗೆ ಇದು ಒಳ್ಳೆಯ ಹೂರಣವನ್ನೊದಗಿಸುತ್ತದೆ. ತಾಳಮದ್ದಳೆಯ ವೈಶಿಷ್ಟ್ಯ ಇರುವುದೇ ಪಾತ್ರಗಳ ಪ್ರತಿಸೃಷ್ಟಿಯಲ್ಲಿ. ಕೃಷ್ಣನ ಪಾತ್ರ ವಹಿಸಿದ ರಾಮ ಜೋಯಿಸ್ ಎಂಬ ಅರ್ಥಧಾರಿಯೊಬ್ಬರು, ರಾಮನಾಗಿ ಹನುಮನಿಗೆ ದರ್ಶನ ಕೊಟ್ಟ ಬಳಿಕ ಹೇಳುತ್ತಾರೆ- "ಈಗ ರಾಮನಾಗಿರುವುದೂ ನನಗೆ ಕಷ್ಟವಾಯಿತು !’ ತಾಳಮದ್ದಳೆಯ ಕೃಷ್ಣ ಮಾತ್ರ ಇಂತಹ ಮಾತನ್ನು ಉದ್ಗರಿಸಬಲ್ಲ ! ರಾಮನ ವ್ಯಕ್ತಿತ್ವದ ಎತ್ತರವನ್ನೂ , ತ್ರೇತಾಯುಗದ ನಂತರದ ದ್ವಾಪರ ಯುಗದ ಗುಣವನ್ನೂ ಆ ಒಂದು ವಾಕ್ಯ ತುಂಬಿಕೊಡುತ್ತದೆ.

ತಮ್ಮ ಕಾಲದ್ದೇ ಮಹಾನ್, ತಾವೇ ದೇವರ ಅಸಾಮಾನ್ಯ ಸೇವಕರು ಎಂಬ ಹನುಮನ ಅಹಂಕಾರವನ್ನು ಮುರಿಯುವುದು ಮತ್ತು ಅರ್ಜುನನಿಗೂ ಹಿಂದಿನ ಕಾಲದ ಮಹಾತ್ಮೆ ಅರಿವಾಗುವಂತೆ ಮಾಡುವುದು - ಈ ಎರಡು ಸಂಕಲ್ಪಗಳು ಪ್ರಸಂಗದಲ್ಲಿವೆ. ರಾವಣಾದಿಗಳನ್ನು ಕೊಂದು ಲಂಕೆಯಿಂದ ಹಿಂದಿರುಗುವಾಗ ರಾಮನು ತಾನೇ ಕಟ್ಟಿಸಿದ ಸೇತುವನ್ನು ಬಾಣ ಮುಖೇನ ತುಂಡರಿಸುತ್ತಾನೆ. ಇಲ್ಲಿಯೂ ಕೃಷ್ಣನು ಕೂರ್ಮಾವತಾರವನ್ನು ತೊರೆದ ಕೂಡಲೇ ಬಾಣದ ಸೇತುವೆಯೂ ಸಮುದ್ರಪಾಲಾಗುತ್ತದೆ. ಸೇತುವೆ ಹೇಗೆ ನಿರ್ಮಾಣವಾಯಿತು ಎಂಬುದಕ್ಕಿಂತ ಯಾಕೆ ನಿರ್ಮಾಣವಾಯಿತು ಎಂಬುದಕ್ಕೆ ಹೆಚ್ಚು ಮಹತ್ವ. ಹಾಗಾಗಿಯೇ ರಾಮನ ಸೇತುವೆಗೆ ಅಳಿಲು ಕೂಡಾ ತನ್ನ ಸೇವೆ ಸಲ್ಲಿಸಿದ್ದು ! ಕೇವಲ ಸೇತುವೆ ನಿರ್ಮಾಣವಷ್ಟೇ ಗುರಿಯಾಗಿದ್ದರೆ ಅಳಿಲಿನ ಸೇವೆ ಅಗತ್ಯವಿತ್ತೇ? ಅರ್ಜುನ ಮೊದಲು ಶರಸೇತುವನ್ನು ನಿರ್ಮಿಸಿದಾಗ, ವಾನರರನ್ನು ಹೀಯಾಳಿಸುವ ತನ್ನ ಸಾಮರ್ಥ್ಯವನ್ನು ಮೆರೆಸುವ ಉದ್ದೇಶವಷ್ಟೇ ಇತ್ತು, ಹಾಗಾಗಿ ಶರಸೇತು ಮುರಿದುಹೋಯಿತು. ಕೃಷ್ಣ ಬಂದಾಗ ಹನುಮನ ಅಹಂಕಾರವನ್ನೂ ಮುರಿಯುವ ಉದ್ದೇಶ ಇತ್ತು, ಸೇತುವೆ ಮುರಿಯಲಿಲ್ಲ !

ಕರುಣಾನಿಧಿಯವರ ದರ್ಪದ ಮಾತು ತಪ್ಪೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಹಡಗು ಸಂಚಾರ ಮಾರ್ಗದ ಲಾಭನಷ್ಟಗಳ ಬಗ್ಗೆ ಚರ್ಚಿಸದೆ "ರಾಮ ಕಟ್ಟಿದ ಸೇತುವೆ ಉಳಿಯಬೇಕು’ ಅಂತ ರಚ್ಚೆ ಹಿಡಿಯುವುದರಲ್ಲಿ ಯಾವ ಅರ್ಥವೂ ಇಲ್ಲ. ಸಮುದ್ರವನ್ನು ಕಲಕದಿರುವುದರಿಂದ ಲಾಭ ಹೆಚ್ಚೋ ಅಥವಾ ಹೊಸ ಮಾರ್ಗ ರಚನೆಯಿಂದ ಹೆಚ್ಚೋ ಅನ್ನುವುದು ಚರ್ಚೆಯಾಗಬೇಕಾದ್ದು. ಅದನ್ನು ಬಿಟ್ಟು, ಅಗಸನ ಸಂಶಯಕ್ಕೆ ಉತ್ತರವಾಗಿ ಪತ್ನಿಯನ್ನೇ ತೊರೆದ ಆ ರಾಜಾರಾಮನನ್ನು ನಂಬುವ ನಾವು, ಸೇತುವೆಯ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದರೆ ರೌದ್ರಾವತಾರ ತಾಳಬೇಕೇ?!

ಕೃಷ್ಣನ ದ್ವಾರಕಾ ನಗರಿ ಸಮುದ್ರದಲ್ಲಿ ಮುಳುಗಿದ್ದು ಸುಳ್ಳು ಅನ್ನುತ್ತಿದ್ದ ನಾವು ಗುಜರಾತ್ ಸಮುದ್ರದಾಳದಲ್ಲಿ ಪಟ್ಟಣದ ಕುರುಹುಗಳು ಪತ್ತೆಯಾದ ಬಳಿಕ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತಾಯಿತು ! ಕ್ರಿ.ಪೂ. ೧೫೦೦ ವರ್ಷಗಳ ಹಿಂದಿನ ಸಿಂಧೂ ನಾಗರಿಕತೆಯೇ ಪ್ರಾಚೀನ ಎಂದಿದ್ದ ನಮಗೆ ಪ್ರಾಚೀನ ಕೃತಿಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸರಸ್ವತಿ ನದಿ ಒಣಗಿದ್ದು ೫೦೦೦ ವರ್ಷಗಳ ಹಿಂದೆ ಎಂಬುದು ಅಚ್ಚರಿ ಹುಟ್ಟಿಸಿತು. ಉತ್ತರ ಭಾರತದಲ್ಲಿ ಅದರ ಹರಿವಿದ್ದ ಪ್ರದೇಶಗಳ ಚಿತ್ರವನ್ನು ನಾಸಾ ಒದಗಿಸಿತು. ಹೀಗೆ ಇವುಗಳ ಬಗೆಗೆಲ್ಲಾ ನಮಗೆ ಹೇಳುತ್ತಿರುವುದು ಅಮೆರಿಕದಂಥ ದೇಶಗಳು ! ನಾವು ಮಾಡಿದ ಸಂಶೋಧನೆ ಅತ್ಯಲ್ಪ .

೧೮೬೦ರಲ್ಲಿ ಬ್ರಿಟಿಷರಿಂದ ಸೇತುಸಮುದ್ರಂ ಯೋಜನೆ ಪ್ರಸ್ತಾಪಿಸಲ್ಪಟ್ಟಿತ್ತು. ೧೯೫೫ರಲ್ಲಿ ಸೇತುಸಮುದ್ರಂ ಪ್ರಾಜೆಕ್ಟ್ ಸಮಿತಿಯನ್ನು ಕೇಂದ್ರ ಸರಕಾರ ರಚಿಸಿತ್ತು. ೧೯೯೯ರಲ್ಲಿ ವಾಜಪೇಯಿವರು ಪ್ರಧಾನಿಯಾಗಿದ್ದಾಗ ಯೋಜನೆಗೆ ವಿಶೇಷ ರೂಪುರೇಷೆ ಬಂತು. ೨೦೦೦-೦೧ರ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಅಧ್ಯಯನಕ್ಕಾಗಿ ೪.೮ ಕೋಟಿ ಬಿಡುಗಡೆ ಮಾಡಲಾಗಿತ್ತು. ಬಳಿಕ ೨ ಜೂನ್ ೨೦೦೫ರಂದು ಪ್ರಧಾನಿ ಮನಮೋಹನ್ ಸಿಂಗ್ ಈ ಯೋಜನೆ ಉದ್ಘಾಟಿಸಿದರು. ಹೀಗೆ ಈ ದೀರ್ಘ ಕಾಲವೇ ಯೋಜನೆಯ ಬಗೆಗಿನ ಸಂಶಯಗಳನ್ನು ಹೆಚ್ಚಿಸುತ್ತದೆ. ನದಿ ತಿರುವು ಯೋಜನೆಗಳೇ ನೂರಾರು ಸಂಶಯಗಳನ್ನು ಹುಟ್ಟುಹಾಕಿರುವಾಗ ಅವಕ್ಕಿಂತ ದೊಡ್ಡದಾದ ಈ ಯೋಜನೆಯ ಬಗ್ಗೆ ಆಳ ವಿಮರ್ಶೆ ಬೇಡವೆ?

ಯೋಜನೆ ಇರಲಿ, ಸೇತುಭಂಗ ತಪ್ಪಲಿ ?!
ಸೇತುವನ್ನು ಉಳಿಸಬೇಕು ಎನ್ನುವಲ್ಲಿ ಉದ್ದೇಶ ಏನು? ಕೇವಲ ಭಕ್ತಿ-ನಂಬಿಕೆಯೆ? ಲವ-ಕುಶರು ಅಯೋಧ್ಯೆಗೆ ಬಂದು ಆಸ್ಥಾನಮಂಟಪದಲ್ಲಿ ರಾಮಾಯಣವನ್ನು ಹಾಡಿದಾಗ, ಇದು ಯಾರ ಕತೆಯಪ್ಪಾ ಎಂಬಂತೆ ಪ್ರೇಕ್ಷಕರ ನಡುವೆ ಕೂತು ಕೇಳಿದವನು ರಾಮ ! ಅಂಥವನು ಮುಟ್ಟಿದ್ದು ಕಟ್ಟಿದ್ದು ಎಲ್ಲವೂ ಹಾಗೆಯೇ ಉಳಿಯಬೇಕು, ಪೂಜೆ ಪುರಸ್ಕಾರಕ್ಕೆ ಒಳಗಾಗಬೇಕು ಅನ್ನುವಿರಾದರೆ, ರಾಮ ಮೆಟ್ಟಿದ ಕಲ್ಲು ಕೂಡಾ ಕಲ್ಲಾಗಿ ಉಳಿಯಲಿಲ್ಲ , ಆಕೆ ಮೊದಲಿನ ಪರಿಶುದ್ಧ ಅಹಲ್ಯೆಯಾದಳು ! "ಅಷ್ಟಕ್ಕೂ, ಸೇತುವೆಯನ್ನು ಕಟ್ಟಿಸಿದ್ದು ರಾಮ, ಕಟ್ಟಿದವರು ಕಪಿಗಳು. ಆ ದೇವರೇ ಈಗ ನಮ್ಮಲ್ಲಿ ಇನ್ನೊಂದು ಹಡಗು ದಾರಿಯನ್ನು ಕಟ್ಟಿಸುತ್ತಾನೆಂದೋ ಮಾಡಿಸುತ್ತಾನೆಂದೂ ನಂಬಬಹುದಲ್ಲ ?!’ ಅಂತ ಕೇಳಿದರೊಬ್ಬರು. ಇದು ಕುಹಕವಲ್ಲ, ನಮ್ಮ ನಂಬಿಕೆಗಳು ಎಷ್ಟೊಂದು ಬಲಹೀನವಾಗಿವೆ ಎನ್ನುವುದಕ್ಕೆ ಉದಾಹರಣೆ.

ಭಾರತೀಯರಿಗೆ ಪ್ರತಿಯೊಂದು ಪ್ರಕೃತಿನಿರ್ಮಿತ ವಸ್ತುವೂ ದೇವರೇ ಆಗಿರುವಾಗ ಯಾವುದನ್ನಾದರೂ ಪರಮಪವಿತ್ರವಾಗಿಸುವುದು ಕಷ್ಟವೇನಲ್ಲ ! ಯೋಜನೆಯೇ ಮೂರ್ಖತನದ್ದು ಎನ್ನುತ್ತಿದ್ದ ಬಿಜೆಪಿ ಪಕ್ಷವೀಗ,"ಯೋಜನೆ ಇರಲಿ, ಸೇತುಭಂಗ ತಪ್ಪಲಿ’ ಅಂತ ರಾಗ ಬದಲಿಸಿದೆ. ಸೇತುವೆ ರಾಮ ರಚಿಸಿದ್ದೇ ಅಂತಾದರೂ, ಹಳೆಬೀಡು ಬೇಲೂರು ದೇವಾಲಯಗಳು ಅಥವಾ ತಾಜಮಹಲ್ ರೂಪದಲ್ಲಿ ಅದನ್ನು ಉಳಿಸಿಕೊಳ್ಳುವುದು, ಜನರಿಗೆ ತೋರಿಸುವುದು ಸಾಧ್ಯವಿಲ್ಲವಲ್ಲ. ಕೇವಲ ಸ್ಯಾಟಲೈಟ್ ಫೋಟೊ ನೋಡಿ ಆವೇಶಕ್ಕೊಳಗಾಗುವವರು ದೇವರಮನೆಯಲ್ಲೂ ಅದನ್ನಿಟ್ಟುಕೊಳ್ಳಬಹುದಲ್ಲ. ಇನ್ನು , ರಾಮ ಐತಿಹಾಸಿಕ ವ್ಯಕ್ತಿ ಅಂತಾದರೆ ಮಾತ್ರ ಆತ ದೇವರು ಅಂತನಿಸಿಕೊಳ್ಳುವುದೇ?
ನೀತಿ- ಆಸ್ತಿಕರಾದವರು ತಮ್ಮ ನಂಬಿಕೆ ಆಚರಣೆಗಳ ತಾತ್ತ್ವಿಕ ವೈಚಾರಿಕ ಆಳವನ್ನು , ಘನತೆಯನ್ನು ಹೆಚ್ಚಿಸಿಕೊಳ್ಳಬೇಕು, ಇಲ್ಲವಾದರೆ ಕರುಣಾನಿಧಿಯಂತಹ ಹುಂಬರಿಂದ ಉಗಿಸಿಕೊಳ್ಳಬೇಕು !

ತಾಳಮದ್ದಳೆ ಪುರಾಣ
'ತಾಳಮದ್ದಳೆ ಪ್ರಸಂಗ’ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಹೇಳುತ್ತಾರೆ-"ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಪ್ರಶ್ನೆ ಕೇಳಿದರೆ ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ.’ ಹೌದು, ಪುರಾಣಗಳ ಬಗ್ಗೆ ಅಸಾಮಾನ್ಯವಾದ ಚರ್ಚೆಯನ್ನು ಯಕ್ಷಗಾನ ತಾಳಮದ್ದಳೆಗಳು ನಡೆಸುತ್ತವೆ. ಅಲ್ಲಿನ ಪ್ರಸಂಗಗಳಲ್ಲಿ ಎಷ್ಟೋ ಬಾರಿ ರಾಮನೆದುರು ವಾಲಿ, ರಾವಣರು (ಮಾತಿನಲ್ಲಿ) ಗೆಲ್ಲುತ್ತಾರೆ ! ಖಂಡಿತವಾಗಿ ರಾವಣನ ಸಂಹಾರ ಮಾಡಬಲ್ಲ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ಮೊದಲು ರಾಮನಾಗಿ ದೇರಾಜೆ ಸೀತಾರಾಮಯ್ಯ , ವಿಭೀಷಣನ ಅನುಮತಿ ಕೇಳುತ್ತಾರೆ ! ಪುರಾಣಗಳು ಹೀಗೆ ನಮ್ಮ ಅರಿವಿನ ವಿಸ್ತಾರದ ಭಾಗವಾಗಿ ಬರಬೇಕು. ನಂಬುವ ಮತ್ತು ಸಂಶಯಿಸುವ ಎರಡು ಗುಣಗಳೂ ರಾಮಾಯಣ-ಮಹಾಭಾರತಗಳಲ್ಲಿವೆ. ಸಂಶಯ ನಿವಾರಣೆಯಾಗಬೇಕೆಂದರೆ ಸೀತೆಯಾದರೂ ಅಗ್ನಿದಿವ್ಯವನ್ನು ಹಾಯ್ದು ಬರಬೇಕು, ಗರ್ಭವತಿಯಾದರೂ ಅರಮನೆಯನ್ನು ತೊರೆಯಬೇಕು. ಕಡಲತೀರದಲ್ಲಿ ವಿಭೀಷಣನಿಗೆ ರಾಮ ಪಟ್ಟಾಭಿಷೇಕ ಮಾಡಿದಾಗ ಯಾರೋ ಕೇಳಿದರಂತೆ - ಒಂದುವೇಳೆ ರಾವಣ ಸೋಲದಿದ್ದರೆ ವಿಭೀಷಣನಿಗೆ ಏನು ಮಾಡುತ್ತೀಯೆ?-"ಅವನಿಗೆ ಅಯೋಧ್ಯೆಯ ಪಟ್ಟವನ್ನು ಬಿಟ್ಟುಕೊಡುತ್ತೇನೆ !’ ಅನ್ನುತ್ತಾನೆ ವಾಲ್ಮೀಕಿಯ ಶ್ರೀರಾಮಚಂದ್ರ. ಅಂತಹ ರಾಮಭಕ್ತರ ನಂಬಿಕೆಗಳು ಅಭಿವೃದ್ಧಿಗೆ ಮಾರಕವಾಗದೆ ಪೂರಕವಾಗಿರಲಿ. "ನಂಬದೆ ಕೆಡುವರಲ್ಲದೆ, ನಂಬಿ ಕೆಟ್ಟವರಿಲ್ಲವೋ..’ ಎಂಬ ವಾಣಿ ನಿಜವಾಗಲಿ.

ಸೇತುವೆಯ ಮೂಲಕ ಲಂಕೆಗೆ ಹೋದ ರಾಮ ಮರಳಿದ್ದು ಪುಷ್ಪಕವಿಮಾನದಲ್ಲಿ ಎಂಬುದು ಮರೆತುಹೋಗದಿರಲಿ !

Read more...

September 23, 2007

ಹೂಬಾಣದ ಗುರಿ

ದಿನೈದು ವರ್ಷದ ಹುಡುಗಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಹದಿನೇಳು ವರ್ಷದ ತನ್ನ ಪ್ರಿಯಕರನ ಜತೆಗೂಡಿಕೊಂಡು ! ಕಳೆದ ಸೆಪ್ಟೆಂಬರ್ ೧೯ರಂದು ಈ ಘಟನೆ ನಡೆದದ್ದು , ಅಂತಹ ಮಾಯಾನಗರಿಯೇನೂ ಅಲ್ಲದ ಮೈಸೂರಿನಲ್ಲಿ . ಮೈಮನಗಳ ಪುಳಕಕ್ಕೆ ಮಕ್ಕಳೂ ಎಷ್ಟೊಂದು ಬಲಿಯಾಗುತ್ತಿದ್ದಾರೆಂದು ಯೋಚಿಸುವಂತೆ ಮಾಡಿದೆ ಇದು. "ಈ ವಯಸ್ಸಿನಲ್ಲಿ ಪ್ರೀತಿಪ್ರೇಮ ಅಂತೆಲ್ಲಾ ಬೇಡ. ಓದಿನಲ್ಲಿ ಶ್ರದ್ಧೆ ವಹಿಸು’ ಅಂತ ಅಮ್ಮ ಆಗಾಗ ಹೇಳುತ್ತಿದ್ದರಂತೆ. ಪ್ರತಿದಿನ ಪ್ರೀತಿ-ಪಾಠದ ನಡುವಿನ ಆಯ್ಕೆಯ ಬಗ್ಗೆ ತಾಯಿ ಮಗಳಿಗೆ ಜಗಳ ನಡೆಯುತ್ತಿತ್ತಂತೆ. ಅದೇ ಹುಡುಗಿಯ ಪಿತ್ತವನ್ನು ನೆತ್ತಿಗೇರಿಸಿದೆ. ಹುಡುಗ ಹುಡುಗಿ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆ ತಾಯಿ ಜೀವಕ್ಕೆ ಗತಿ ಕಾಣಿಸಿದ್ದಾರೆ.

ಕೊಲೆ ಮಾಡಿದರೆ ತಮ್ಮ ಮೇಲೆ ಅನುಮಾನ ಬರುತ್ತದೆ, ತಾವು ಸಿಕ್ಕಿಬೀಳಬಹುದು, ಶಿಕ್ಷೆಯಾಗಬಹುದು ಎಂಬುದನ್ನೇ ಯೋಚನೆ ಮಾಡದಷ್ಟು ಮುಗ್ಧರೇನಲ್ಲ ಆ ಮಕ್ಕಳು. ಹಾಗಾದರೆ ಭವಿಷ್ಯದ ಯೋಚನೆಯಿಲ್ಲದೆ, ನ್ಯಾಯಅನ್ಯಾಯಗಳ ವಿವೇಕವಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿದ ಮನಸ್ಸುಗಳೆರಡು ಉದ್ರೇಕದಿಂದ ಮಾಡಿದ ಕೆಲಸವಾ ಇದು? ಅಮ್ಮನ ಬಗೆಗಿನ ಹೆಚ್ಚಿನ ಸಿಟ್ಟು ಅಥವಾ ತಮ್ಮ ಪ್ರೀತಿಯ ಗಾಢತೆ-ಇವೆರಡರಲ್ಲಿ ಯಾವುದು ಈ ಕೃತ್ಯಕ್ಕೆ ಮುಖ್ಯ ಪ್ರೇರಣೆಯಾಯಿತು? ಅಮ್ಮನೆಂಬ ಕಂಟಕವನ್ನೇ ನಿವಾಳಿಸಿ ಒಗೆಯಬೇಕೆನ್ನುವ ಮನಸ್ಥಿತಿ ಉಂಟಾಗಲು ಕಾರಣಗಳೇನು? ಅಮ್ಮನೂ ಏನಾದರೂ ದಗಲ್ಬಾಜಿ ಕೆಲಸ ಮಾಡಿರಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳೇನೇ ಇರಲಿ, ನಡೆದುಹೋಗಿರುವಂತದ್ದು ಮಾತ್ರ ಭಯಾನಕ.

ದಕ್ಷಿಣಕನ್ನಡದಲ್ಲಿ ಇಬ್ಬರು ಎದುರೆದುರು ನಿಂತು ಬಯ್ದಾಡಿಕೊಂಡರೆ ಫಿನಿಷ್! ಅಂದರೆ....ಜೀವನಪರ್ಯಂತ ಅವರೆಂದೂ ಮಾತಾಡುವುದಿಲ್ಲ. "ಇಕಾ, ಆ ವಿಷಯ ನಿನಗೆ ಬೇಡ...ಜಾಸ್ತಿಯಾಯ್ತು ನಿಂದು....ನಿನ್ನ ಅಧಿಕಪ್ರಸಂಗ ಎಲ್ಲ ಬೇಡ...ನಾನು ಬೇಡದ್ದೆಲ್ಲಾ ಹೇಳ್‌ಬೇಕಾಗ್ತದೆ...’ ಅಂತ ನಿಧಾನವಾಗಿ ಅಲ್ಲಿ ಬೈಗುಳದ ಕಾವು ಆರಂಭವಾದರೆ ಈ ಬೆಂಗಳೂರಿನಲ್ಲೆಲ್ಲ "ಬೋಸೂರಂ’ಗಳಿಂದಲೇ ಅರ್ಚನೆ ಶುರು. ಬೈಗುಳವು ಇಲ್ಲಿನಷ್ಟು ಸಹಜ ಸಲೀಸಲ್ಲ ದಕ್ಷಿಣಕನ್ನಡಿಗರಿಗೆ. ಸುಳ್ಳು ಹೇಳುವುದು ನಮಗೆ ಸಲೀಸಾಗಿದೆ. ಅಶಿಸ್ತು ಎನ್ನುವುದು ಕೆಲವರ ಸ್ವಭಾವಕ್ಕೊಂದು ಗರಿಯೆಂದೇ ಒಪ್ಪಿಕೊಳ್ಳಲಾಗಿದೆ ! ಈಗ ಕೊಲೆ ಮಾಡುವುದು ಕೂಡಾ ಕೆಲವರಿಗೆ ಸರಾಗವಾಗುತ್ತಿದೆಯೆ? ಈ ಬಗೆಗಿನ ಅಪರಾಧಿ ಭಾವ, ಪಾಪಪ್ರಜ್ಞೆ ಕಡಿಮೆಯಾದದ್ದೂ ಇದಕ್ಕೆ ಮುಖ್ಯ ಕಾರಣವಲ್ಲವೆ? "ಕೊಲೆ ಮಾಡೋದು ಏನ್ ಮಹಾ’ ಎಂಬ ಭಾವನೆ ಕೆಲವು ಆಫ್ರಿಕನ್ ದೇಶಗಳಲ್ಲಿರುವಂತೆ ನಮ್ಮಲ್ಲೂ ಬಂದರೆ ಪಡ್ಚ ಪಡ್ಚ .

*****
ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೇಕು ಅನ್ನುವುದರ ಹಿಂದೆ ಕಾಂಡೋಮ್ ಕಂಪನಿಗಳ ಲಾಬಿಯಿದೆ ಅಂತೆಲ್ಲ ಕೂಗಾಡುವವರು, ಲೈಂಗಿಕ ಶಿಕ್ಷಣದ ಅಗತ್ಯ ಉಂಟಾಗಲು ಕಾರಣಗಳೇನು ಎಂಬುದನ್ನೂ ಯೋಚಿಸಿದರೆ ಒಳ್ಳೆಯದು. (ಹಿಂದೆ ರೋಗಗಳು ಕಡಿಮೆ ಇದ್ದವು ಔಷಧ-ಚಿಕಿತ್ಸೆ ವ್ಯವಸ್ಥೆಯೂ ಕಡಿಮೆಯಿತ್ತು. ಈಗ ರೋಗಗಳು ಹೆಚ್ಚಾಗಿವೆ ಚಿಕಿತ್ಸಾಲಯಗಳೂ ಜಾಸ್ತಿಯಾಗಿವೆ, ವಿಷಯವೂ ಹೆಚ್ಚು ಗೊತ್ತಿರಬೇಕು-ಅಂತೆಲ್ಲ ಮಾತಿನ ಚಮತ್ಕೃತಿ ತೋರುವುದನ್ನು ಬಿಡೋಣ.) ಹಿಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣ ಇಲ್ಲದಿದ್ದರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನೈತಿಕ ಶಿಕ್ಷಣವಂತೂ ಇತ್ತು. ಆದರೆ ನೈತಿಕತೆಯ ಮಾನದಂಡವೇ ಕುಗ್ಗಿಹೋಗಿರುವ ಈ ಕಾಲದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯ ಕಂಡುಬರುತ್ತಿದೆ. ಅಂದರೆ, ಲೈಂಗಿಕ ಶಿಕ್ಷಣ ಪಡೆದರೆ ಅನೈತಿಕವಾದದ್ದದ್ದನ್ನೂ ನೈತಿಕವಾಗಿಸಬಹುದು ಎಂಬಂತಿದೆ ಕೆಲವರ ಧಾಟಿ. ಯಾವುದನ್ನಾದರೂ ಗೋಪ್ಯವಾಗಿಟ್ಟು ಭಯವನ್ನೋ ಗೌರವವನ್ನೋ ಹುಟ್ಟಿಸುವ ಕಾಲ ಇದಲ್ಲ ಅನ್ನುವುದನ್ನು ಒಪ್ಪೋಣ. ಆದರೆ ಗೌಪ್ಯತೆಯನ್ನು ಭೇದಿಸುವಾಗ ತಿಳಿದದ್ದನ್ನು ನಿರ್ವಹಿಸುವ, ಧರಿಸುವ ಶಕ್ತಿಯೂ ಇರಬೇಕು. ಹಾಗಾಗಿ ವಿಷಯ ತಿಳಿದ ಮಾತ್ರಕ್ಕೆ ಆತ ಪ್ರಾಜ್ಞ ಅನಿಸಿಕೊಳ್ಳುವುದಿಲ್ಲ. ಲೈಂಗಿಕಶಿಕ್ಷಣ ಅನ್ನುವುದು ತಾಂತ್ರಿಕವೆನ್ನಬುಹುದಾದ ಮಾಹಿತಿಯಷ್ಟೆ. ಅದನ್ನು ಮಕ್ಕಳಿಗೆ ಕೊಡಬೇಕಾದರೆ ಅದಕ್ಕಾಗಿ ಮಕ್ಕಳನ್ನು ಮಾನಸಿಕವಾಗಿ ಮೊದಲು ತಯಾರು ಮಾಡೋಣ.

ಗೊತ್ತಿದ್ದೂ ಗೊತ್ತಿದ್ದೂ ಸುಳ್ಳು ಹೇಳುವ, ತಪ್ಪು ಮಾಡುವ ಮನಸ್ಥಿತಿ ಹೆಚ್ಚಾಗುತ್ತಿದೆಯೆಂದರೆ ಗೊತ್ತಾಗುವುದರಲ್ಲೇ ಏನೋ ಸಮಸ್ಯೆ ಇದೆ ಅಂತಲೇ ಅರ್ಥ ! ಹಾಗಾಗಿ ಲೈಂಗಿಕ ಶಿಕ್ಷಣದ ಜತೆಜತೆಗೆ ನೈತಿಕ ಶಿಕ್ಷಣವೂ ಮನಮುಟ್ಟುವ ಹಾಗೆ ಮಕ್ಕಳಿಗೆ ದೊರೆಯಬೇಕಾದ್ದು ಇಂದಿನ ತುರ್ತು ಅಗತ್ಯ . ಕೆಲವು ಮಾಷ್ಟ್ರುಗಳೇ ಹಲ್ಕಟ್ ಮಾಡುತ್ತಿರುವಾಗ ಮಕ್ಕಳಿಗೆ ಸರಿದಾರಿ ತೋರಬೇಕಾದ ಜವಾಬ್ದಾರಿ ಶಾಲೆ, ಮನೆ, ಸಮಾಜ ಮೂರರ ಮೇಲೂ ಇದೆ. ಕಾಂಡೋಮ್ ಧರಿಸಿ ಏನ್ ಬೇಕಾದ್ರೂ ಮಾಡಿ ಅಂತ ತುತ್ತೂರಿ ಊದುವುದನ್ನು ಬಿಟ್ಟು , ಯಾವುದು ಸಹಜ ಯಾವುದು ಅಸಹಜ, ಯಾವುದು ಸಕ್ರಮ ಯಾವುದು ಅಕ್ರಮ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ-ಅರಿವು ಬೇಕಲ್ಲ. ಶಾಲಾ ಲೈಂಗಿಕ ಶಿಕ್ಷಣವು ಕಾಮವಾಂಛೆಯನ್ನು ನಿಯಂತ್ರಿಸುವ ಸಂಗತಿಯಾಗಿ ಬೋಧಿಸಲ್ಪಡಬೇಕೇ ಹೊರತು ಉತ್ತೇಜಿಸುವಂತಲ್ಲ.
*****
ನಮ್ಮೆಲ್ಲರ ಸಂಬಂಧಗಳಿಗೆ ಲಾಂಗ್ ಲಾಸ್ಟಿಂಗ್ ಪವರನ್ನು ನೀಡಿದ್ದು ಈ ದೇಶದ ಋಣದ ಕಲ್ಪನೆ. ಆದರೀಗ ಹಣ, ಅಧಿಕಾರ, ಕಾಮ ಇತ್ಯಾದಿಯಷ್ಟೆ ಸಂಬಂಧ ಸೇತುಗಳಾಗುತ್ತಿವೆ. ಭಾರತದ ಅತ್ಯುಚ್ಚ ಮೌಲ್ಯಗಳಲ್ಲಿ ಒಂದಾದ "ಋಣ’ದ ಕಲ್ಪನೆ ಕಡಿದುಹೋಗುತ್ತಿದೆ. ಮೊದಲು ಪಿತೃ ಋಣ, ಅನ್ನ ಋಣ, ದೇವ ಋಣ, ವಿದ್ಯಾ ಋಣಗಳೆಲ್ಲ ಎಂದೂ ತೀರದವುಗಳಾಗಿ ಬಿಂಬಿಸಲ್ಪಡುತ್ತಿದ್ದವು. ನಮ್ಮ ನ್ನೆಲ್ಲ ಬಂಧಿಸಿಡುತ್ತಿದ್ದುದರಲ್ಲಿ ಅವುಗಳ ಪಾಲೂ ದೊಡ್ಡದು. ಆದರೆ ದುಡ್ಡಿನ ಗುಡ್ಡದೆದುರು ಅವೆಲ್ಲ ಕರಗಿಹೋಗಿವೆ. ಯಾರಾದರೂ ತೀರಿಕೊಂಡಾಗ "ಅವನಿಗೆ ಭೂಮಿಯ ಋಣ ಮುಗಿದುಹೋಯಿತು’ ಅಂತ ಹಿರಿಯರು ಹೇಳುತ್ತಾರಲ್ಲ, ಎಂತಹ ದೊಡ್ಡ ಮಾತು ಅದು ! ಭೂಮಿಯ ಋಣವನ್ನು ತೀರಿಸುವುದಕ್ಕೆ ಸಾಧ್ಯವೇ ನಮಗೆ? ಆದರೆ ಮೈಸೂರಿನ ಕಿಶೋರಿಗೆ ಅಮ್ಮನ ಋಣವೇ ಅಷ್ಟು ಬೇಗ ಮುಗಿದುಹೋಯಿತೇ? ಅಥವಾ ಅಮ್ಮನಿಗೆ ಮಗಳ ಋಣ ಕಳೆದುಹೋಯಿತೇ?

ಒಂದು ಜೀವದ ಪ್ರೀತಿಯನ್ನು ಗೆದ್ದವರಿಗೆ ಇನ್ನೊಂದು ಜೀವದ ಪ್ರೀತಿಯನ್ನು ಪಡೆಯಲಾಗದಿದ್ದರೆ ಹೋಗಲಿ, ಇಂಥಾ ಪಾಪಕರ್ಮಕ್ಕೆ ಕ್ಷಮೆಯಿರಲಾರದು. ಮೈಸೂರಿನ ಆ ಘಟನೆಯನ್ನೂ , ಊರಿನಲ್ಲಿ ಮನೆಯನ್ನು ಮುನ್ನಡೆಸುತ್ತಿರುವ ನನ್ನ ಅಮ್ಮನನ್ನೂ ನೆನೆಸಿಕೊಳ್ಳುತ್ತಿದ್ದೇನೆ. ಅವಳ ಮುಖದಲ್ಲಿನ ಉದ್ವೇಗ ಹೆಚ್ಚಾದಂತಿದೆ.

Read more...

September 21, 2007

ನಮ್ಮಯ ಸವಾರಿ ಊರಿಗೆ ಹೋದದ್ದು...

(ಇದೊಂಥರಾ ಬರವಣಿಗೆಯ ತಾಲೀಮು. ಈ ದಿನಚರಿಯನ್ನು ಹೀಗೆ ಎಷ್ಟೂ ಬರೆಯುತ್ತಾ ಹೋಗಬಹುದು. ಒಂದುವೇಳೆ, ನಿಮ್ಮ ಈವತ್ತಿನ ದಿನಚರಿಯೂ ಓದುವುದೇ ಆಗಿದ್ದರೆ...ಮತ್ತೇನು ? ಓದಿಕೊಳ್ಳಿ ! )

ಒಂದು ಅಸಡ್ಡಾಳ ಓರೆ ನಗೆ. ಮೆಜೆಸ್ಟಿಕ್‌ನಲ್ಲಿ ಕಂಡ ಮುಖಕ್ಕೆ ನನ್ನ ಪರಿಚಯ ಹತ್ತಿದಂತಿದೆ. ಮಹಾನಗರವನ್ನು ನಿರ್ಲಕ್ಷಿಸಬಲ್ಲ ನಿಲುವು. ನನ್ನೆಡೆಗೆ ಎರಡ್ಹೆಜ್ಜೆ ಹಾಕಿ ಗಕ್ಕನೆ ನಿಂತಿದ್ದಾನೆ. ಇನ್ನು ಅವನಿಗೆ ದಿವ್ಯ ನಿರ್ಲಕ್ಷ್ಯವೊಡ್ಡಿ ಕೈ ಬೀಸಿಕೊಂಡು ಸಾಗುವುದು ಕಷ್ಟ. ಒಂದು ವೇಳೆ ಹಾಗೆ ಹೊರಟರೂ, ಕೈಹಿಡಿದೆಳೆದು ನಿಲ್ಲಿಸಿದರೆ...? ಎತ್ತಿದ್ದ ಸೂಟ್‌ಕೇಸ್, ಬ್ಯಾಗುಗಳನ್ನು ಕುಕ್ಕಿ, ಬೆಂಚಿನ ಮೇಲೆ ಕುಂಡೆಯೂರಿದರೆ...ಆ ಪಾಪಾತ್ಮ ಎತ್ತಲೋ ನೋಡುತ್ತ ಗಮನವನ್ನೆಲ್ಲ ಇತ್ತಲೇ ಇಟ್ಟಂತಿದೆ. ಅವನ ಭಂಗಿಗಳಲ್ಲೂ ಬಲವಿದೆ. ಎಲ್ಲೋ ನೋಡಿದ, ಮಾತನಾಡಿದ ನೆನಪು ತೀರ ಅಸ್ಪಷ್ಟ .

ಎದ್ದು ನಡೆವ ಎಂದರೆ...ಮತ್ತೆ ತಿರುಗಿ ಮಕಮಕ ನೋಡುತ್ತಾನೆ, ಸೂಳೇ ಮಗ. ಕಳ್ಳನೋ,ಸುಳ್ಳನೋ, ಗೆಳೆಯನೋ,ಬಂಧುವೋ ಅಂತ ನಿರ್ಧರಿಸುವುದು ಕಷ್ಟ. ಎದ್ದು ನಡೆದರಾಯಿತು, ಈ ಜನ ಸಾಗರದ ಮಧ್ಯೆ ಭಯವೇನು ? ಎದ್ದು ನಡೆವ ಎಂದರೆ ಕಾಲು ಕಟ್ಟಿದಂತಾಗಿದೆ. ಥತ್, ಬುದ್ಧಿಗೆ ಮಂಕು ಬಡಿದಂತಿದೆ.

ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣ ಮೆಜೆಸ್ಟಿಕ್‌ನ ರಾತ್ರಿ ಹತ್ತರ ಆ ಜನ ಜಂಗುಳಿಯಲ್ಲಿ ಸಿಕ್ಕಿದ ಮನುಷ್ಯ ನಮ್ಮ ಸುಳ್ಯ ತಾಲೂಕಿನವರೇ ! "ಕೃಷಿ ಮೇಳ ನೋಡುವ ಅಂತ ನಾನು-ಫ್ರೆಂಡ್ ಬೈಕ್ನಲ್ಲಿ ಬೆಳಗ್ಗೆ ೪ ಗಂಟೆಗೆ ಊರಿಂದ ಹೊರಟು ಮಧ್ಯಾಹ್ನ ತಲುಪಿದೆವು. ಮೇಳ ಅಷ್ಟೇನೂ ಚೆನ್ನಾಗಿರಲಿಲ್ಲ. ಅವನು ಏನೋ "ಕೆಲಸ’ ಇದೆ ಅಂತ ಇಲ್ಲಿ ಉಳಿದುಕೊಂಡಿದ್ದಾನೆ. ಹಾಗಾಗಿ ನಾನೀಗ ಬಸ್ಸಿಗೆ ಹೊರಟದ್ದು’ ಎಂದರು. ಅಷ್ಟೇ ಆಗಿದ್ದರೆ ಅಂತಹ ಆಶ್ಚರ್‍ಯವೇನೂ ಇರಲಿಲ್ಲ. ಆದರೆ..."ನಾನೊಂದು ಯಕ್ಷಗಾನ ತಂಡ ಮಾಡಬೇಕು ಅಂತಿದ್ದೇನೆ. ಬೆಂಗಳೂರಿನಲ್ಲಿ ಒಳ್ಳೆಯ ಪ್ರೋತ್ಸಾಹ, ಕಾರ್‍ಯಕ್ರಮ ಸಿಗಬಹುದು ಅಂತ ನನ್ನ ಲೆಕ್ಕಾಚಾರ. ಪ್ರಾಯೋಜಕರು ಯಾರಾದ್ರೂ ನಿಮಗೆ ಗೊತ್ತಾ?’ ಅನ್ನಬೇಕೇ ! ಯಕ್ಷಗಾನವೂ ಉಳಿದು ಬೆಳೆಯಲು ಬೆಂಗಳೂರೇ ಆಗಬೇಕೇ?

ಸಾಂಸ್ಕೃತಿಕ ವಲಸೆ ?
ಸಕಲೇಶಪುರದ ರಂಗಕರ್ಮಿ ಪ್ರಸಾದ್ ರಕ್ಷಿದಿಯವರು ಹೇಳಿದ್ದು ಬಸ್‌ನಲ್ಲಿ ಕುಳಿತಾಗ ನೆನಪಾಯಿತು- "ಇಲ್ಲಿ ನಾವೊಂದು ರಂಗತಂಡವನ್ನು ಕಟ್ಟುವುದೇ ಕಷ್ಟವಾಗಿದೆ. ಪ್ರತಿವರ್ಷ ಮೂರ್‍ನಾಲ್ಕು ಕಲಾವಿದರು ಬೆಂಗಳೂರು ಪಾಲಾಗುತ್ತಿದ್ದಾರೆ. ಪತ್ರಿಕೆ, ಟಿವಿ ಮಾಧ್ಯಮಗಳಿಗೆ ಬಹಳಷ್ಟು ಜನ ಸೇರಿಕೊಳ್ಳುತ್ತಿದ್ದಾರೆ. ಒಬ್ಬಿಬ್ಬರು ಬಹಳ ಹಳೆಯ ಕಲಾವಿದರನ್ನು ಬಿಟ್ಟರೆ ಪ್ರತಿವರ್ಷದ ನಮ್ಮ ನಾಟಕಕ್ಕೆ ಹೊಸಬರನ್ನೇ ಹುಡುಕಬೇಕು’.

ಓದಿ ಕಲಿತು ಉದ್ಯೋಗ ಅರಸುತ್ತಾ ಈ ಮಹಾನಗರ ಪಾಲಾಗುವ ತರುಣರ ಜತೆಗೆ ಒಂದು "ಸಾಂಸ್ಕೃತಿಕ ವಲಸೆ’ಯೂ ನಡೆಯುತ್ತಿದೆಯೇ? ಎಲ್ಲ ಅಕಾಡೆಮಿಗಳ ಹೆಡ್ಡಾಫೀಸು, ಸಂಸ್ಕೃತಿ ಇಲಾಖೆಯ ಭಂಡಾರ ಬೆಂಗಳೂರಲ್ಲಿದೆ. ಬೇಕಾಬಿಟ್ಟಿ ಪತ್ರಿಕೆ, ಟಿವಿ ಮಾಧ್ಯಮಗಳಿವೆ. ಸುವರ್ಣ ಮಂತ್ರಾಕ್ಷತೆ ನೀಡಬಲ್ಲ ಕಂಪನಿಗಳು-ದೊಡ್ಡ ಕುಳಗಳು ಇದ್ದಾವೆ. ಹೀಗಾಗಿ ಹಳ್ಳಿಯ ಕಲಾವಿದರು-ಬರೆಹಗಾರರು ಕೂಡಾ ಬೆಂಗಳೂರು ಸೇರುತ್ತಿದ್ದಾರೆಯೇ?

ಊರಿನ ಶಾಲೆಗಳ ವಾರ್ಷಿಕೋತ್ಸವಗಳು ಎಸ್‌ಡಿಎಂಸಿ ರಾಜಕೀಯದಲ್ಲಿ ನರಳಿ ನಿಂತುಹೋಗಿವೆ. ದೇವಸ್ಥಾನದ ಜಾತ್ರೋತ್ಸವಗಳು ಕೇಸರೀಕರಣಗೊಂಡು ಜಡವಾಗಿವೆ. ಮನೆ ಮನೆ ಗೋಷ್ಠಿ ಮಾಡೋಣ ಅಂದರೆ ಹಲವರು ನಾನಾ ಕಾರಣಕ್ಕೆ ಮಾತು ಬಿಟ್ಟಾಗಿದೆ. ಸಾಹಿತ್ಯ ಪರಿಷತ್ ಅಂತೂ ಅಬ್ಬೇಪಾರಿಗಳ ವಶವಾಗಿ ತಾಲೂಕು ಸಾಹಿತ್ಯ ಸಮ್ಮೇಳನವೆಂಬುದು ಅಜ್ಜನ ತಿಥಿಗಿಂತಲೂ ಖರಾಬ್ ಆಗಿದೆ. ಉದ್ಯೋಗ ಹಿಡಿಯಲಷ್ಟೇ ಕೆಚ್ಚೆದೆಯಿಂದ ಓದುವ ಹಾಗೂ ಪೋಲಿ ತಿರುಗುವ ಎರಡು ಗುಂಪುಗಳ ಚಟುವಟಿಕೆಗೆ ಕಾಲೇಜುಗಳು ಸೀಮಿತವಾಗಿವೆ. ಇನ್ನೊಂದೆಡೆ ಬೆಳೆದದ್ದೆಲ್ಲ ಕೈಕೊಡುತ್ತಿದೆ. ಕೂಲಿಗೆ ಜನ ಸಿಗದೆ, ಅಗತ್ಯ ವಸ್ತುಗಳ ಬೆಲೆ ಏರಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನು ಸಾಂಸ್ಕೃತಿಕ ಪ್ರಜ್ಞೆಯಾದರೂ ಎಲ್ಲಿಂದ ಬರಬೇಕು ಪ್ರಭೂ?

ಹೀಗಾಗಿ, ಬದುಕಿ ಉಳಿದರೆ ಬೇಡಿ ತಿಂದೇನು ಅಂತ ಜನ ಮಹಾನಗರಗಳತ್ತ ಮುಖ ಮಾಡಿದ್ದಾರೆ. "ಒಂಚೂರು ಬರೆಯಲು, ನಟಿಸಲು, ಚಿತ್ರ ಬಿಡಿಸಲು, ಡ್ಯಾನ್ಸ್ ಮಾಡಲು, ಹಾಡು ಹೇಳಲು...ಹೀಗೇ ಏನಾದರೂ ಗೊತ್ತಿದ್ದರೆ ಸಾಕು. (ಅಥವಾ ಚೂರುಪಾರು ಇಂಗ್ಲಿಷ್ ಬರುತ್ತದೆಂದರೆ ಅದರ ಮಜಾ, ಗತ್ತೇ ಬೇರೆ)ಸ್ವಲ್ಪ ಕಾಂಟಾಕ್ಟ್ ಬೆಳೆಯುವವರೆಗಷ್ಟೆ . ಆಮೇಲೆ ದುಡ್ಡೇ ದುಡ್ಡು’ ಅನ್ನುವುದು ಹಲವು ಯುವ ಪ್ರತಿಭಾವಂತರ ಅಂಬೋಣ ! ಹಾಗಂತ ಹಳ್ಳಿಯಲ್ಲಿ ಏನೂ ನಡೆಯುತ್ತಿಲ್ಲ ಅಂತಲ್ಲ. ಆದರೆ ಮೊದಲಿನ ಗುಣಮಟ್ಟ ಯಾವ ಕಾರ್‍ಯಕ್ರಮಗಳಲ್ಲೂ ಕಾಣುವುದಿಲ್ಲ. ಭಾಷಣಕಾರರು, ಕಾರ್‍ಯಕ್ರಮ ನಿರ್ವಾಹಕರು, ನಾಟಕದ ನಟ-ನಿರ್ದೇಶಕರು, ಯಕ್ಷಗಾನ ಕಲಾವಿದರು, ಬರೆಹಗಾರರು-ಊಹೂಂ ಫಸ್ಟ್‌ಕ್ಲಾಸ್ ಎನ್ನಬಹುದಾದಂಥವರನ್ನು ಹುಡುಕಿಹುಡುಕಿ ಸುಸ್ತಾಗುವುದು ಮಾತ್ರ. ಕೆಲವು ಹಳಬರು ಮಣಮಣ ಅನ್ನುತ್ತಿದ್ದಾರೆ. ಏನಾಗಿದೆ ಊರಿಗೆ ? (ದೊಡ್ಡವನಂತೆ ಬರೆದಿದ್ದರೆ ಕ್ಷಮಿಸಿ, ನಿಮ್ಮ ಅಭಿಪ್ರಾಯ ತಿಳಿಸಿ)

ಹುಟ್ಟಿಸಿದವನು ಈ ಸಲ ಹುಲ್ಲು ಮೇಯಿಸುವುದು ಗ್ಯಾರಂಟಿ
ಮಡಿಕೇರಿಯ ಘಾಟಿ ಇಳಿಯುತ್ತಿರುವಾಗ ಚುಮುಚುಮು ಬೆಳಕು. ಸಂಪಾಜೆ ಬಂತೆಂದರೆ, ಬೆಂಗಳೂರಿನ ಗಾಳಿ ಎಷ್ಟೊಂದು ಮಂದ-ದಪ್ಪ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ! ಒಂದೆಡೆ ೪೦ಕಿಮೀ ದೂರದ ಮಡಿಕೇರಿ, ಇನ್ನೊಂದೆಡೆ ಸುಮಾರು ೯೦ ಕಿಮೀ ದೂರದಲ್ಲಿ ಜಿಲ್ಲಾ ಕೇಂದ್ರ ಮಂಗಳೂರು-ಇವುಗಳ ಮಧ್ಯೆ ಇರುವುದು ನಮ್ಮ ಸುಳ್ಯ ತಾಲೂಕು. ಕೊಂಚ ಓಲಾಡಿದರೆ ಅತ್ತ ಕೇರಳ ರಾಜ್ಯ . ಜಿರಿಜಿರಿ ಮಳೆ ಹೊಯ್ಯುತ್ತಲೇ ಇದೆ. ಕಾಲಿಟ್ಟಲ್ಲೆಲ್ಲ ಕೆಸರು, ಹಸಿರು. ಜನರಿಗೆ ಮಳೆ ಎಂದರೆ ಅಲರ್ಜಿ ಆಗುವಷ್ಟು , ಭೂಮಿ ಕುಡಿಕುಡಿದು ಮಿಕ್ಕುವಷ್ಟು ಈ ಬಾರಿ ಜಲಧಾರೆ ಆಗಿದೆ. "ಇಂಥಾ ಮಳೆ ನಾನು ಇದುವರೆಗೆ ನೋಡಿಲ್ಲ ’ ಅಂತ ಅಜ್ಜಿಯೇ ಹೇಳುತ್ತಿದ್ದಾರೆ. ಎಲ್ಲ ವಾಹನಗಳೂ ಕೆಸರು ಮೆತ್ತಿಕೊಂಡು ಅಸಹ್ಯವಾಗಿವೆ. ಪ್ರತಿಯೊಬ್ಬರ ಪ್ಯಾಂಟೂ ಮೊಳಕಾಲವರೆಗೆ. ಎಲ್ಲೆಲ್ಲೂ ಕೊಡೆಗಳದ್ದೇ ರಾಜ್ಯ . ತೋಡು, ಹೊಳೆಗಳು ಕೆಂಪು ನೀರು ತುಂಬಿಕೊಂಡು ಮುನ್ನುಗ್ಗುತ್ತಿವೆ. ನೀರು-ಹುಲ್ಲು ಬಿಟ್ಟರೆ ತೋಟದಲ್ಲಿ ಇನ್ನೇನೂ ಇಲ್ಲ. ಹುಟ್ಟಿಸಿದವನು ಈ ಸಲ ಹುಲ್ಲು ಮೇಯಿಸುವುದು ಗ್ಯಾರಂಟಿ . ನಮ್ಮ ಮನೆಯಂತೂ, ಆಗಷ್ಟೆ ಪತ್ತೆಯಾದ ಕ್ರಿಸ್ತಪೂರ್ವ ಕಾಲದ ಕಟ್ಟಡದಂತೆ ಕಾಣುತ್ತಿದೆ ! ಅಷ್ಟದಿಕ್ಕುಗಳಲ್ಲೂ ಹುಲ್ಲು ಬೆಳೆದು ನಿಂತಿದೆ. ಹುಲ್ಲು ಬೆಳೆಯಬಾರದೆಂದು ಅಂಗಳಕ್ಕೆ ಹಾಕಿದ್ದ ತೆಂಗಿನಮರದ ಮಡಲು (ಗರಿ) ಗೊಬ್ಬರವಾಗುತ್ತಿದೆ. ಕಾಲಿಟ್ಟಲ್ಲೆಲ್ಲ ಜಾರುತ್ತದೆ. ಕಿಟಕಿ ಬಾಗಿಲೂ ವ್ಯವಸ್ಥಿತವಾಗಿಲ್ಲದ ನಮ್ಮ ಮನೆಯಲ್ಲಿ ಮಳೆಗಾಲವನ್ನು ಅನುಭವಿಸುವುದಕ್ಕೆ ವಿಶೇಷ ಅಭ್ಯಾಸ ಬೇಕು ಮಾರಾಯ್ರೆ !

ತೋಳ್ಪಾಡಿ ಪುಸ್ತಕ
ಕನ್ನಡ-ಇಂಗ್ಲಿಷ್-ಸಂಸ್ಕೃತಗಳಿಂದ ಸತ್ತ್ವವನ್ನು ಹೀರಿಕೊಳ್ಳುತ್ತಿರುವ, ಸಾಹಿತ್ಯ-ಯಕ್ಷಗಾನ-ಅಧ್ಯಾತ್ಮ - ಕೃಷಿಯಲ್ಲಿ ತೊಡಗಿಕೊಂಡಿರುವ ಲಕ್ಷ್ಮೀಶ ತೋಳ್ಪಾಡಿಯವರು ಇರುವುದು ಪುತ್ತೂರು ತಾಲೂಕಿನ ಶಾಂತಿಗೋಡು ಎಂಬ ಹಳ್ಳಿಯಲ್ಲಿ . ಬರೆಹದ ಬಿಗಿಯನ್ನು ಮಾತಿನಲ್ಲಿ , ಮಾತಿನ ಓಘವನ್ನು ಬರೆಹದಲ್ಲಿ ಸಾಧಿಸಬಲ್ಲ ತೋಳ್ಪಾಡಿ ನಿಶ್ಚಿಂತ ಚಿಂತಕರು ! "ನಿಮ್ಮ ಬರೆಹಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಮಾಡುತ್ತೇನೆ ’ ಅಂತಂದು, ಅವರ ಶಾಂತಿಯನ್ನು ನಾನು ಹಾಳು ಮಾಡಿ ವರ್ಷವೇ ಕಳೆಯಿತು ! "ನಿಮ್ಮ ಬರೆಹಗಳ ಪುಸ್ತಕ ತರುತ್ತೇವೆ’ ಅಂತ ಸಂಪಾದಕ, ಪ್ರಕಾಶಕರೇ ದುಂಬಾಲು ಬಿದ್ದರೂ ಕ್ಯಾರೇ ಮಾಡದ ವಿಭೂತಿಪುರುಷ ಈ ತೋಳ್ಪಾಡಿ. ಸಿಕ್ಕ ಸಿಕ್ಕ ಸಾರ್ವಜನಿಕ ಕಾರ್‍ಯಕ್ರಮಗಳಲ್ಲಿ ಭಾಷಣ ಮಾಡುತ್ತಲೇ, ಫಕ್ಕನೆ ಒಂದು ದಿನ ಒಂದಿಬ್ಬರು ಗೆಳೆಯರೊಂದಿಗೆ ಆಗುಂಬೆಯ ಕಾಡಿಗೆ ಹೋಗಿ ಎರಡು ರಾತ್ರಿ ಕಳೆದು ಬರುವಂಥವರು.

ಭಗವದ್ಗೀತೆಯ ಸರ್ವೋಪನಿಷಧೋ ದೋಗ್ಧಾ ಗೋಪಾಲ ನಂದನಃ’ ಶ್ಲೋಕವನ್ನು ನೆನಪಿಸಿಕೊಳ್ಳುತ್ತ , ಹೆಬ್ಬೆರಳು-ತೋರುಬೆರಳನ್ನು ಜೋಡಿಸಿ ಉಳಿದ ಬೆರಳುಗಳನ್ನು ನೇರವಾಗಿಸಿ ತೋರುವ ಜ್ಞಾನಮುದ್ರೆಯನ್ನೇ ಅಡ್ಡಲಾಗಿ ಹಿಡಿದರೆ.... ಅದು ಹಾಲು ಕರೆಯುವ ಕೈಯಾಗುತ್ತದೆ !-ಎಂದು ಹೊಳೆಯುವುದು ಇವರ ಚಿಂತನಾಕ್ರಮಕ್ಕೊಂದು ಸಣ್ಣ ಉದಾಹರಣೆ.ಈ ಬಾರಿಯೂ ನನ್ನ ದೂರವಾಣಿ ಕರೆ ಪೂರ್ತಿ ಫಲಪ್ರದವಾಗದಿದ್ದರೂ ಸಂಗ್ರಹವಾಗಿರುವ ಲೇಖನಗಳನ್ನು ಕೊಂಚ ತಿದ್ದಿ ಕೊಡುತ್ತೇನೆಂಬ ಅವರ ಮಾತನ್ನು ಊರ್ಜಿತದಲ್ಲಿರಿಸಿದೆ ! (ಅಪಾಯ...ಇಲ್ಲಿ ಕ್ಲಿಕ್ ಮಾಡಬೇಡಿ...ಮುಂದುವರಿಯಲೂಬಹುದು !)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP