December 22, 2007

ಮಾತಿಗೆ ಸೋತ ಕರ್ನಾಟಕ

ಸಾಹಿತಿ, ಕಲಾವಿದರು ಸಮಾಜಕ್ಕೆ ಸ್ಪಂದಿಸುವ ರೀತಿ ಹೇಗಿರಬೇಕು ಅನ್ನುವ ಬಗ್ಗೆ ಇತ್ತೀಚೆಗಂತೂ ತೀರಾ ಗೊಂದಲಗಳಾಗಿವೆ. ಅವರು ಏನೇ ಬರೆಯಲಿ, ಮಾಡಲಿ- ಪ್ರಸಿದ್ಧರಾದ ನಂತರ, ಹಿರಿಯರು ಅನ್ನಿಸಿಕೊಂಡು ಪ್ರಶಸ್ತಿ, ಹೊಗಳಿಕೆ, ಜನರ ಅಭಿಮಾನ ಪಡೆದುಕೊಂಡ ಬಳಿಕ, ಸಮಾಜದ ಸಂಕಷ್ಟಗಳಿಗೂ ಸ್ಪಂದಿಸಬೇಕು ಎನ್ನುವುದಂತೂ ಸ್ಪಷ್ಟ. ಆದರೆ ಹೇಗೆ ಎಂಬುದೇ ಪೇಚಿಗೆ ಸಿಲುಕಿಸುವ ಪ್ರಶ್ನೆ !

ಇನ್ನು ಮುಂದೆ ಸಾಹಿತ್ಯ ವೇದಿಕೆಗಳನ್ನು ಹತ್ತುವುದಿಲ್ಲವೆಂದು ಒಮ್ಮೆ ಘೋಷಿಸಿದ್ದ ಯು.ಆರ್.ಅನಂತಮೂರ್ತಿಯವರು ತಮ್ಮ ಮಾತು ಸೋತ ಭಾರತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ , ಮಾತಿನ ಅಖಾಡದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಘೋಷಿಸಿದರು. ಪೇಪರ್‍ನೋರು ಏನಾದ್ರೂ ಬರೀರಿ, ಯಾರು ಏನಾದ್ರೂ ಹೇಳ್ಕಳಿ ತಾನಂತೂ ಮಾತಾಡಿಯೇ ತೀರುತ್ತೇನೆ ಅಂದರು. ಅಂತೆಯೇ ಅನಂತಮೂರ್ತಿಯವರು ಎಲ್ಲವನ್ನೂ ಚೆಂಡಾಡಿದ್ದು ೨೧ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್‍ಯಕ್ರಮದಲ್ಲಿ ! ಅಲ್ಲಿ ಸಾಹಿತ್ಯದ ಪೊರೆ ಕಳಚಿ ಸಕಾಲಿಕವಾಗಿ ಮಾತಾಡಿದ್ದು:

ಒಟ್ಟಾಗಿ ಹಿಂಸೆ ಮಾಡಿದ್ರೆ ಶಿಕ್ಷೆ ಆಗಲ್ಲ !
ಎಡದವರು ಭವಿಷ್ಯದ ದೃಷ್ಟಿಯಿಂದ ನಕ್ಸಲ್ ಕೆಲಸಗಳಲ್ಲಿ ತೊಡಗಿದ್ದರೆ, ಬಲದವರು ಭೂತಕಾಲದ ರಾಮನನ್ನು ಮುಂದಿಟ್ಟುಕೊಂಡಿದ್ದಾರೆ. ಕೋಮುವಾದ ರೇಬೀಸ್‌ನಂತಾಗಿದ್ದರೆ, ನಕ್ಸಲ್ ಚಟುವಟಿಕೆ ಕ್ಯಾನ್ಸರ್ ಇದ್ದಂಗೆ. ಹೀಗೆ ಎಡ-ಬಲದ ಹಿಂಸೆಯ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ತಸ್ಲಿಮಾ ಬಂಗಾಲಿ. ನಾವೆಲ್ಲರೂ ನಂಬುವ ಸೆಕ್ಯುಲರಿಸಂಗಾಗಿ ಆಕೆ ಬಹಳ ಧೈರ್ಯ ಮಾಡಿದ್ದಾಳೆ. ಗ್ರೇಟ್ ನಾವೆಲ್ ಬರೆದಿದ್ದಾಳೆ. ಬಂಗಾಲದಲ್ಲೇ ಇರಬೇಕು ಅಂತ ಆಸೆ ಪಡ್ತಾಳೆ. ಅವಳಿಗೆ ಅವಕಾಶ ಇಲ್ಲದಂಗೆ ನಮ್ಮ ಮನಮೋಹನ್‌ಸಿಂಗ್ ಸರಕಾರ ಮಾಡಿದೆ. ಅವಳು ಬಂಗಾಲದಲ್ಲಿ ಇರಕ್ಕೆ ಸಾಧ್ಯವಿಲ್ಲದಂಗೆ ಅಲ್ಲಿನ ಕಮ್ಯುನಿಸ್ಟರು ಮಾಡಿದ್ದಾರೆ. ಇಬ್ರಿಗೂ ನಾಚಿಕೆ ಆಗಬೇಕು. ನರೇಂದ್ರ ಮೋದಿ ಮುಖವಾಡದ ಮೋದಿ ಆಗಿದ್ದಾನೆ. ಮೊನ್ನೆ ಇಲೆಕ್ಷನ್‌ನಲ್ಲಿ ಎಲ್ರೂ ಮೋದಿನ ಮುಖವಾಡನೇ ಹಾಕ್ಕೊಂಡಿದ್ರು. ನನಗೇನನಿಸ್ತು ಅಂದ್ರೆ ಮೋದಿನೂ ಕೂಡಾ ಮೋದಿಯ ಮುಖವಾಡ ಹಾಕ್ಕೊಂಡಿದ್ದಾನೆ ಅಂತ ! ವಾಜಪೇಯಿಯವರಿಗೆ, ಅಡ್ವಾಣಿಯವರಿಗೂ ಒಂದು ಹ್ಯೂಮನ್ ಫೇಸ್ ಇದೆ. ಆದರೆ ಮೋದಿಗಿಲ್ಲ. ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಜಿನ್ನಾನ ಹೊಗಳಿದ್ರು. ತಾನು ರಿಟೈರಾದ ಮೇಲೆ ಭಾರತಕ್ಕೆ ಬಂದು ವಾಸಿಸ್ತೇನೆ. ತನ್ನ ಮೂಲ ಮನೇನ ನಾಶ ಮಾಡಬೇಡಿ ಅಂತ ಜಿನ್ನಾ ನೆಹರೂಗೆ ಪತ್ರ ಬರೆದರು ಅಂತ ಒಂದು ಕತೆಯಿದೆ. ಭಾರತ-ಪಾಕಿಸ್ತಾನ ವಿಭಜನೆಯಾಗಿದೆ ಎಂಬ ಕಲ್ಪನೆಯೇ ಇಲ್ಲದೆ, ಭಾರತದ ರಾಯಭಾರಿಗಳ ಜತೆಗಿನ ಶಿಷ್ಟಾಚಾರದ ನಡವಳಿಕೆಯೇ ಜಿನ್ನಾರಿಗೆ ಮರೆತುಹೋಗಿರುತ್ತಿತ್ತಂತೆ. These are all good stories !

ನಾನು ಇತ್ತೀಚೆಗೆ ಗುಜರಾತ್‌ಗೆ ಹೋಗಿದ್ದೆ. ಅಲ್ಲಿ ಎಷ್ಟು ಜನ ಮನೆಮಠ ಕಳ್ಕೊಂಡಿದ್ದಾರೆ, ಎಷ್ಟು ಜನ ತೊಂದ್ರೆ ಅನುಭವಿಸಿದ್ದಾರೆ, ಗರ್ಭಿಣಿ ಹೆಂಗಸಿಗೇ ತ್ರಿಶೂಲ ಹಾಕಿದ್ದಾರೆ. ಹಿಂದುಗಳನ್ನು ಕೊಂದ ಮುಸ್ಲಿಮರಿಗೂ ಶಿಕ್ಷೆಯಾಗಲಿಲ್ಲ, ಮುಸ್ಲಿಮರನ್ನು ಕೊಂದ ಹಿಂದುಗಳಿಗೂ ಶಿಕ್ಷೆಯಾಗಲಿಲ್ಲ. ಇಂದಿರಾಗಾಂಧಿ ಸತ್ತಾಗ ಸಿಕ್ಖರನ್ನು ಕೊಂದ್ರು. ಆಗ ಯಾರಿಗೂ ಶಿಕ್ಷೆ ಆಗಲಿಲ್ಲ. ಗುಜರಾತ್‌ನಲ್ಲೂ ಹಿಂದುಗಳು, ಮುಸ್ಲಿಮರನ್ನು ಕೊಂದವರಿಗೆ ಶಿಕ್ಷೆಯಾಗಲಿಲ್ಲ . ಅಂದರೆ ಈ ದೇಶದಲ್ಲಿ ಒಟ್ಟಾರೆಯಾಗಿ ಹಿಂಸೆ ಮಾಡಿದ್ರೆ ಶಿಕ್ಷೆ ಆಗಲ್ಲ ಅಂತ ಎಲ್ಲರಿಗೂ ಗೊತ್ತಾಗಿದೆ. ತಸ್ಲಿಮಾಗೆ ರಕ್ಷೆ ಮೋದಿಗೆ ಶಿಕ್ಷೆ ಅಂತ ಹೇಳಿದ ಕೂಡಲೇ ನಾನು ಎಲ್ಲರ ವಿರೋಧ ಕಟ್ಟಿಕೊಳ್ಳುತ್ತೇನೆ. ಅದ್ರೂ ಪರವಾಗಿಲ್ಲ. ಅಂತಹ ಕೆಲಸ ಆದಾಗಲೇ ಹಿಂದು ಧರ್ಮ ಮತ್ತೆ ತನ್ನ ಸನಾತನ ಸ್ವರೂಪವನ್ನ ಪಡ್ಕೊಳ್ಳತ್ತೆ. ಅದಕ್ಕೆ ಎಲ್ಲರನ್ನೂ ಒಳಗೊಳ್ಳುವ, ಶಿಶುನಾಳ ಷರೀಫರಂಥವರನ್ನು ಸೃಷ್ಟಿಸುವ, ದೇವರೇ ಇಲ್ಲ ಅನ್ನುವ ಅಲ್ಲಮನನ್ನು ಸೃಷ್ಟಿಸುವ ಶಕ್ತಿ ಬರತ್ತೆ. ಈಗ ಎಲ್ಲ ಜನರೇನೂ ಕೆಟ್ಟವರಾಗಿಲ್ಲ. ಆದರೆ ವಾತಾವರಣ ಕೆಟ್ಟುಹೋಗಿದೆ. ತಸ್ಲಿಮಾಗೆ ರಕ್ಷೆ-ಮೋದಿಗೆ ಶಿಕ್ಷೆ ಕೊಡಲಾಗದ ವಾತಾವರಣ ಸೃಷ್ಟಿಯಾಗಿದೆಯಲ್ಲ, ಇದು ಬಹಳ ಕೆಟ್ಟದು.

ಒಳ್ಳೆಯವನಾಗಿರಬೇಕೆಂಬ ಒತ್ತಾಯ
ಈಗಿನ ದುರಾಡಳಿತ ನೋಡಿದಾಗ ಹಿಂದೆಲ್ಲಾ ಹೀಗಿರಲಿಲ್ಲ ಅನ್ಸತ್ತೆ. ವಿರೋಧ ಪಕ್ಷದಲ್ಲಿದ್ದ ಗೋಪಾಲ ಗೌಡರು ಒಂದ್ಸಾರಿ ಬಜೆಟ್ ಸ್ಪೀಚನ್ನ ಮೆಟ್ನಲ್ಲಿ ಹೊಡದು ಗಲಾಟೆ ಮಾಡಿದ್ರು. ಆಗ ಆಡಳಿತದಲ್ಲಿದ್ದ ನಿಜಲಿಂಗಪ್ಪ ಪಕ್ಷದವರು ಅದಕ್ಕೆ ಬಹಳ ವಿರೋಧ ವ್ಯಕ್ತಪಡಿಸಿ, ಅದಕ್ಕೆ ಶಿಕ್ಷೆಯಾಗಬೇಕು ಅಂದ್ರು. ಆಗ ಗೋಪಾಲಗೌಡರು "ನಾನಿದನ್ನ ಬ್ಲಡ್‌ಪ್ರೆಶರ್‌ನಿಂದ ಮಾಡಿದೆ. ನೀವಿದನ್ನು ಕ್ಷಮಿಸಬೇಕು ಅಂತ ಕೂಡಾ ನಾನು ಕೇಳಲ್ಲ. ನೀವು ಕ್ಷಮಿಸಿದ್ರೆ ಮತ್ತೊಂದ್ಸಾರಿ ಈ ತಪ್ಪನ್ನ ಮಾಡಬಹುದಾದ ಪ್ರಲೋಭನೆ ನನ್ನಲ್ಲಿ ಉಳಿದಿರತ್ತೆ’ ಅಂದರು. ಆಗೆಲ್ಲಾ ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ತಾ ಇದ್ರು. ನನ್ನ ಬಹಳ ಸ್ನೇಹಿತರು ಎಂ.ಪಿ. ಪ್ರಕಾಶ್. ಅವರು ತಮ್ಮ ತಪ್ಪನ್ನ ಒಪ್ಪಿಕೊಳ್ತಾ ಇದ್ದಾರಾ? ಜನ ಎಲ್ಲಾ ಒಳ್ಳೆಯವರೇ. ಹಿಂದೆ, ಒಳ್ಳೆಯವನಾಗಿದ್ದವನಿಗೆ ಒಳ್ಳೆಯವನಾಗಿಯೇ ಇರಬೇಕೆಂಬ ಒತ್ತಾಯ ಇತ್ತು. ಈಗ ಅದಿಲ್ಲ. "ಒಳ್ಳೆತನ ಸಹಜವೇನಲ್ಲ, ಅದು ಅಸಹಜವೂ ಅಲ್ಲ’ ಅಂತ ಬರೆದರು ಅಡಿಗರು. ಹಿಂದಿನ ರಾಜಕೀಯದಲ್ಲಿ opponent ಇರ್‍ತಾ ಇದ್ದ. enemy ಇರಲಿಲ್ಲ. ಈಗ ಬರೀ ವೈರಿಗಳೇ ತುಂಬಿದ್ದಾರೆ. ರಾಜಕಾರಣಿಗಳು ರಂಪದಲ್ಲೇ ಸುಖ ಪಡ್ತಿದಾರೆ. ಈ ರಾಜಕೀಯ ಸರಿ ಹೋಗಬೇಕಾದರೆ ಗಾಂಧಿ ರೂಪಿಸಿದ ಉಪ್ಪಿನ ಸತ್ಯಾಗ್ರಹದಂತಹ ಕಾರ್‍ಯಕ್ರಮಗಳು ನಡೀಬೇಕು. ಗಾಂಧಿಯ ಮೂರು ಮಂಗಗಳ ಕಾನ್ಸೆಪ್ಟನ್ನು ನಾವು ಮೊದಲು ಅಳವಡಿಸಿಕೊಳ್ಳಬೇಕು. ಮತದಾನ ಕಡ್ಡಾಯ ಮಾಡಿ, ಮತದಾನ ಮಾಡದವರಿಗೆ ಯಾವುದಾದರೂ ರೀತಿ ದಂಡ ವಿಧಿಸೋ ವ್ಯವಸ್ಥೆ ಆದರೆ ಒಳ್ಳೇದು.

ಅರ್ಹತೆ ಇದ್ದರೆ ಕುಟುಂಬದವರೆಲ್ಲಾ ರಾಜಕಾರಣ ಮಾಡಿದರೆ ತಪ್ಪಿಲ್ಲ. ಆದರೆ ಕುಟುಂಬಕ್ಕಾಗಿಯೇ ರಾಜಕಾರಣ ಮಾಡುವುದು ತಪ್ಪು. ಎಂ.ಪಿ.ಪ್ರಕಾಶ್ ಮೊದಲಾದವರಿದ್ದಾಗ ದೇವೇಗೌಡ್ರು ಕುಮಾರಸ್ವಾಮೀನ ಮುಖ್ಯಮಂತ್ರಿ ಮಾಡಿದ್ದು ಕುಟುಂಬಕ್ಕಾಗಿಯೇ ಮಾಡಿದ ರಾಜಕಾರಣ.ಆದರೆ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡ್ತಾ ಇದ್ದಾಗ ಅದನ್ನು ಮಾಡ್ತಾ ಮಾಡ್ತಾ ಒಳ್ಳೆಯವರಾಗಿ ಬಿಡ್ತಾರೆ ಅಂತನ್ನಿಸಿತ್ತು ನನಗೆ. ನಾವು ತೋರುಗಾಣಿಕೆಗೆ ಮಾಡೋದು ಕೂಡಾ ಸ್ವಲ್ಪ ಒಳಗೆ ಹೋಗಿಬಿಡತ್ತೆ. ಅದು ಮನುಷ್ಯ ಸ್ವಭಾವ. ಈಗ ಮನುಷ್ಯನ ಮನಸ್ಸಿನಲ್ಲಿ ತೀರಾ ಗೊಂದಲ ಆಗಿಬಿಟ್ಟಿದೆ. ಹಾಗಂತ ಪ್ರಜಾಸತ್ತೆ ಇಲ್ಲದೆ ನಾವು ಬದುಕ್ಕಾಗಲ್ಲ. ಹಾಗಾಗಿ ಶುದ್ಧವಾಗಿರುವುದೆಲ್ಲವೂ ಪ್ರಜಾಸತ್ತೆಯ ಪ್ರಕ್ರಿಯೆಯಲ್ಲಿ ಶುದ್ಧವಾಗಬೇಕು. ಎಲ್ಲ ಸರಿ ಹೋಗಬೇಕಾದರೆ ಮೊದಲು ಗಣಿಕಾರಿಕೆ ನಿಲ್ಲಿಸಬೇಕು. ಅದನ್ನು ರಾಷ್ಟ್ರೀಕರಣ ಮಾಡಿ, ಇಲ್ಲಾ ನೀವೇ ಕಬ್ಬಿಣ ತಯಾರಿಸಿ ಮಾರಿ. ಈ ಅದಿರು ಮಾರೋದರ ವಿರುದ್ಧ ದೊಡ್ಡ ಚಳವಳಿ ಆಗಬೇಕು. ಬೆಂಗಳೂರಲ್ಲಿ ಆಕಾಶ ಕಾಣದಂಗೆ ನಿಂತಿರೋ ಪೋಸ್ಟರ್‍ಸ್ ಮತ್ತು ಅಡ್ವರ್‌ಟೈಸ್‌ಮೆಂಟ್ ಅಂತೂ violence on the eyes !
ಗುರುಪೀಠಗಳು ನಾಶವಾಗೋದು ಇಷ್ಟವಿಲ್ಲ
ಈಗ ಯಾವ ಸಭೆ ನೋಡಿದ್ರೂ ಕಾವಿ ಧರಿಸಿದವರಿರ್‍ತಾರೆ. ಒಂದು ಕಾಲದಲ್ಲಿ ಇವರೆಲ್ಲ ಪ್ರೈಮರಿ ಸ್ಕೂಲ್ ಮಕ್ಕಳಿಗೆ ಪಾಠ ಮಾಡಿ ಒಳ್ಳೇ ಕೆಲಸ ಮಾಡಿದ್ರು. ಆದರೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ಮಾಡ್ತಾ ಸ್ಟೇಜ್‌ಗೆ , ರಾಜಕಾರಣಕ್ಕೆ ಬಂದ್ರು. ನನಗೆ ಗುರುಪೀಠಗಳು ನಾಶವಾಗೋದು ಇಷ್ಟವಿಲ್ಲ. ನಾನು ಒಂದ್ಸಾರಿ ಪೇಜಾವರ ಸ್ವಾಮಿಗಳಿಗೆ ಹೇಳಿದ್ದೆ. ನೀವು ಹೀಗೇ ಮುಸ್ಲಿಂ ದ್ವೇಷ ಬೆಳೆಸ್ತಾ ಇದ್ರೆ, ನೀವು ನಮಗೆ ಗುರುಗಳಾಗಿದ್ರೂ ನಾನು ನಿಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಕ್ಕೆ ಆಗಲ್ಲ, ಮಾಡಲ್ಲ. ಯಾಕಂದ್ರೆ ನಮ್ಮ ತಾಯಿಗೆ ಅವರ ಬಗ್ಗೆ ಬಹಳ ಭಕ್ತಿ ಇತ್ತು. ದಿತರನ್ನೆಲ್ಲಾ ಹತ್ತಿರ ಸೇರಿಸಬಾರದು ಅಂತದ್ಕೊಂಡಿದ್ದ ಆ ತಾಯಿ, ಸ್ವಾಮಿಗಳು ದಲಿತರ ಕೇರಿಗೆ ಹೋದ್ರು ಅಂತಾದ ಕೂಡ್ಲೇ, ದಲಿತರ ಕೇರಿಗೆ ಹೋಗೋದು ತಪ್ಪಲ್ಲ ಅಂದಿದ್ರು.

ಅಮೆರಿಕಕ್ಕೆ ಹೋದೋರಿಗೆ ಕೃಷ್ಣಪೂಜೆ ಅಧಿಕಾರ ಇಲ್ಲ ಅಂತ ಕೇಳಿದಾಗ ಬಹಳ ಖುಶಿಯಾಯ್ತು ! ಯಾಕಂದ್ರೆ ಈ ಅಮೆರಿಕಕ್ಕೆ ಹೋಗೋದು ಎಂಥಾ ಹುಚ್ಚು ಹಿಡಿದಿದೆ ಅಂದರೆ, ಕೊನೇ ಪಕ್ಷ ಅವರಿಗೆ ಅದೊಂದಾದ್ರೂ ನಿರ್ಬಂಧ ಇರ್‍ಲಿ ಅಂತ ! ನಿಜವಾಗಿ ಪೇಜಾವರ ಸ್ವಾಮಿಗಳು ಏನು ಹೇಳಬೇಕಿತ್ತು ಅಂದ್ರೆ, ಪರಮಾತಿ ಶೂದ್ರ ಬೇಕಾದ್ರೂ ಕೃಷ್ಣ ಪೂಜೆಯ ಅಧಿಕಾರ ಪಡ್ಕೋಬಹುದು, ಅಮೆರಿಕಕ್ಕೆ ಹೋಗಿ ಬಂದವ್ರಿಗೆ ಮಾತ್ರ ಇಲ್ಲ ಅಂತ ! ಅದು ರೆವಲ್ಯೂಷನರಿ ಸ್ಟೆಪ್. ಈ ಅಮೆರಿಕನೈಸೇಷನ್ ನಮಗೆ ಬಹಳ ಅನ್ಯಾಯ ಮಾಡಿದೆ.

ದೇವರು ಬೇರೆಬೇರೆ ರೀತಿಯಲ್ಲಿ ಲಭ್ಯನಾದ
'All religions are imperfect’ ಅನ್ನೋ ಮಾತಿದೆ. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ದೇವರ ಕಲ್ಪನೆ ಹೀಗೇ ಅಂತ ಇದೆ. ನಮ್ಮಲ್ಲಿ ಬೇರೆ ಬೇರೆ ಕಲ್ಪನೆ ಸಾಧ್ಯ. ಪುತಿನ ಹೇಳಿದ್ರು- ದೇವರ ಕಲ್ಪನೆಗಳೆಲ್ಲಾ ಬೇರೆ ಬೇರೆ. ದಾರಿ ಒಂದೇ ಇರತ್ತೆ-ಅಂತ. ಅಂದ್ರೆ ನಾವೂ ಉಪವಾಸ ಮಾಡ್ತೀವಿ, ಅವರೂ ಮಾಡ್ತಾರೆ... ಹೀಗೆ. ಎಲ್ಲ ರಿಲಿಜನ್‌ಗಳೂ imperfect ಆದ್ರಿಂದ ಅವೆಲ್ಲಾ ಒಟ್ಟಿಗೇ ಇರ್‍ತವೆ. ಮನುಷ್ಯನಿಗೆ ದೇವರ ಹುಡುಕಾಟ ಅಂತ ಒಂದಿದ್ರೆ ಎಲ್ಲವೂ ಬೇಕಾಗುತ್ತೆ. ಬೌದ್ಧ ಧರ್ಮದಲ್ಲಿ ಗೃಹಸ್ಥನಾಗಿರೋದು ಕಷ್ಟ. ಅದು ಸನ್ಯಾಸಿ ಧರ್ಮ ಇದ್ದಂಗೆ. ಅದಕ್ಕೇ ಲಿಂಗಾಯಿತ ಧರ್ಮ ಬಹಳ ದೊಡ್ಡದು. ಅಲ್ಲಿ ಗೃಹಸ್ಥನಾಗಿದ್ದೂ ದೇವರನ್ನು ಹುಡುಕೋದು ಸಾಧ್ಯ. ಸಾಕಾರ, ನಿರಾಕಾರ, ಸಗುಣ, ನಿರ್ಗುಣ ಎಲ್ಲವಕ್ಕೂ ಅವಕಾಶ ಇದೆ. ವೈದಿಕ ಮತದ ಕೆಲವು ದುಶ್ಚಟಗಳನ್ನೂ ಅದು ನಿವಾರಿಸತ್ತೆ. ಅಸ್ಪೃಶ್ಯತೆ ಬಗ್ಗೆ ಧೈರ್ಯದ ನಿಲುವು ತಗೊಳ್ತು. ಆದರೆ ಕರ್ನಾಟಕದಲ್ಲಿ ಅದು ಮಠಾಧೀಶರ ಕೈಲಿ ಸಿಲುಕಿರೋದ್ರಿಂದ ಕಷ್ಟ !

ಸಿಲೋನ್‌ನಲ್ಲಿ ಬೌದ್ಧರು ಅಂದ್ರೆ ಸಮಸ್ಯೆ.. ಅವರು ತಮಿಳರ ಕೊಲೆಗೆ ಕಾರಣರಾಗ್ತಾರೆ. ಆದರೆ ಬರ್ಮಾದಲ್ಲಿ ಬೌದ್ಧರಿಂದಲೇ ಕ್ರಾಂತಿ ಆಗಿದೆ. ವಿಯೆಟ್ನಾಂನಲ್ಲಿ ಬೌದ್ಧ ಧರ್ಮ ಒಳ್ಳೇ ಕೆಲಸ ಮಾಡ್ತು. ಒಂದು ಕಡೆ ಒಳ್ಳೇದು ಮಾಡ್ತು, ಇನ್ನೊಂದು ಕಡೆ ಕೆಟ್ಟದು. ಹಾಗಾಗಿ ಬೌದ್ಧಧರ್ಮ ಅಥವಾ ಇನ್ನೊಂದಕ್ಕೆ ಕನ್‌ವರ್ಷನ್ ಆಗೋದ್ರಿಂದ ಏನೂ ಪ್ರಯೋಜನ ಇಲ್ಲ ಅಂತ ನನಗನಿಸಿಬಿಟ್ಟಿದೆ. ನಾನು ಮದುವೆಯಾದಾಗ ನನ್ನ ಮಾವನಿಗೆ ನಾನು ಕ್ರಿಶ್ಚಿಯನ್ ಆದ್ರೆ ಒಳ್ಳೇದು ಅನಿಸ್ತು. ನನ್ನ ತಾಯಿತಂದೆಗೆ ಅವಳು ಹಿಂದೂ ಆದ್ರೆ ಒಳ್ಳೇದು ಅನ್ಸಿತ್ತು. ಆದರೆ ನಾವು ಎರಡೂ ಮಾಡದೇ ಇರೋದರಿಂದ ನಮಗೆಷ್ಟು ಒಳ್ಳೇದಾಯಿತು ಅಂದ್ರೆ ದೇವರು ಬೇರೆಬೇರೆ ರೀತಿಯಲ್ಲಿ ನಮಗೆ ಲಭ್ಯನಾದ. ಹೀಗಾಗಿ ಪ್ರತಿಯೊಂದು ಮನೆಯಲ್ಲಿ ಬೇರೆಬೇರೆ ಮತಧರ್ಮದವರು ಇದ್ರೇ ಒಳ್ಳೇದೇನೇ. ಎಲ್ಲ ಧರ್ಮಗಳೂ imperfect ಆಗಿರೋದ್ರಿಂದ ಒಂದು ಇಡೀ ಸಂಸಾರ ಅದನ್ನ perfect ಮಾಡತ್ತೆ ಅನ್ಸತ್ತೆ. ಮೈನಾರಿಟಿಗಳು ಕಮ್ಯುನಲ್ ಆದರೆ ಅವರು ನಾಶವಾಗ್ತಾರೆ. ಮೆಜಾರಿಟಿ ಜನ ಕಮ್ಯುನಲ್ ಆದ್ರೆ ರಾಷ್ಟ್ರಾನೇ ನಾಶವಾಗತ್ತೆ. ಕೋಮುವಾದ ಹಿಮ್ಮೆಟ್ಟಿಸಬೇಕಾದರೆ ಸೆಕ್ಯುಲರಿಸಂನವರೂ ಗೀತೆ, ಮಹಾಭಾರತ, ಉಪನಿಷತ್‌ಗಳನ್ನು ತಿಳ್ಕೋಬೇಕು. ಕರ್ನಾಟಕದಲ್ಲಿ ಬಂದಿರುವಂಥ ರಾಜಕೀಯ-ಸಾಮಾಜಿಕ ಅಧೋಗತಿ, ಎಲ್ಲಾ ಪ್ರಜಾಪ್ರಭುತ್ವದಲ್ಲೂ ಒಂದಲ್ಲಒಂದು ಕಾಲದಲ್ಲಿ ಬಂದಿದೆ ಅನ್ಸತ್ತೆ. ಹಾಗಂತ ಇದಕ್ಕೆ ಪರಿಹಾರ ಏನು? I don't know !

***************
ತಮ್ಮ ಅನೂಹ್ಯ ಯೋಚನೆಗಳಿಂದ ನಮ್ಮನ್ನು ಬೆರಗುಗೊಳಿಸುವ ಅನಂತಮೂರ್ತಿಯವರನ್ನು ಹೊರತುಪಡಿಸಿದರೆ, ಹಿರಿಯರಾದ ಕಣವಿ, ಜಿಎಸ್‌ಎಸ್, ನಿಸಾರ್, ಬಲ್ಲಾಳ-ನಂತರದ ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎನ್‌ಎಸ್‌ಎಲ್ ಮೊದಲಾದವರ್‍ಯಾರೂ ತುಟಿಯನ್ನೂ ಕದಲಿಸುತ್ತಿಲ್ಲ. ಕಳೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವೇರಿ, "ಕನ್ನಡಾಂಬೆಯ ಆಶೀರ್ವಾದ ಆಶೀರ್ವಾದ’ ಅಂತ ಬಾರಿಬಾರಿಗೂ ಅನ್ನುತ್ತಿದ್ದ ನಿಸಾರ್, ತಮಗೂ ಕರ್ನಾಟಕಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಮೌನವಾಗಿರುವುದು ಹೇಗೆ ಸಾಧ್ಯವಾಗುತ್ತದೆನ್ನುವುದೇ ಪರಮಾಶ್ಚರ್ಯ. ಕೃಷಿ-ನೆಲಜಲ-ಭಾಷೆ-ಪರಿಸರ ಹೀಗೆ ಕಲೆಗೆ ಪೂರಕವೇ ಆಗಿರುವ ವಿಷಯಗಳ ವಿವಾದ ಭುಗಿಲೆದ್ದಾಗ, ಕಂಟಕ ಬಂದಾಗಲಾದರೂ ಸ್ಪಂದಿಸಬೇಡವೆ? ಆದರೆ ಕರ್ನಾಟಕದ ನಾನಾ ಭಾಗಗಳಲ್ಲಿರುವ-ತಕ್ಕಮಟ್ಟಿಗೆ ಜನಸಾಮಾನ್ಯರಲ್ಲೂ ಹೆಸರು ಸಂಪಾದಿಸಿರುವವರೂ ಗುಮ್ಮನಗುಸಕರಂತೆ ಕುಳಿತಿರುವುದು ನೋಡಿದರೆ ಬೇಜಾರಾಗುತ್ತದೆ.

'ಅವರೆಲ್ಲ ನೆಹರೂ ಮೈದಾನದಲ್ಲಿ ಬೆರಳೆತ್ತಿ ಭಾಷಣ ಮಾಡುವುದು ಬೇಡ ಮಾರಾಯ್ರೆ . ಅಲ್ಲಿ ಇಲ್ಲಿ ನಡೆಯುವ ಸಣ್ಣಪುಟ್ಟ ಕಾರ್‍ಯಕ್ರಮಗಳಲ್ಲೋ, ಪತ್ರಿಕೆಗಳಿಗೆ ಲೇಖನ ಬರೆಯುವ ಮುಖಾಂತರವೋ, ಕನಿಷ್ಠ ಪಕ್ಷ ತಮ್ಮ ಊರುಗಳಿಗೆ ಸಂಬಂಧಿಸಿದ ವಿಷಯಗಳ ಬಗೆಗಾದರೂ "ಸಾಮಾಜಿಕ ಸ್ಪಂದನ’ ತೋರಬಹುದಲ್ಲ. ವಿವಾದಕ್ಕೆಡೆಗೊಡದ ಹಾಗೆ ಬರೆಯುವುದು ಮಾತಾಡುವುದು ಸಾಧ್ಯವಿದೆ ಎಂಬುದನ್ನೂ ಇವರಿಗೆ ಹೇಳಿಕೊಡಬೇಕಾಗಿಲ್ಲ. ಸಾಮಾಜಿಕ ಸ್ಪಂದನಕ್ಕೆ ಇವರೆಲ್ಲ ತೋರಿದ ನಿರುತ್ಸಾಹದಿಂದಾಗಿಯೇ ಬಾಯಿಹರುಕರೆಲ್ಲ ದೊಡ್ಡ ಮಾತುಗಾರರು-ಮುಂದಾಳುಗಳು ಆಗಿದ್ದಾರೆ ’ ಅಂತ ಮಿತ್ರರೊಬ್ಬರು ಹೇಳುವಾಗ ತಥ್ಯ ಇದೆ ಅನ್ನಿಸಿತು. ಸಾಹಿತಿ-ಕಲಾವಿದರು ನಾಡಿನ ಬಗ್ಗೆ ತೋರಿದ ನಿರ್ಲಕ್ಷ್ಯದಿಂದಾಗಿಯೇ ಹಳದಿ ಕಣ್ಣಿನ ಸೇನೆ-ವೇದಿಕೆಗಳು ಹುಟ್ಟಿಕೊಂಡವೆ ?

'ಬಾಂಗ್ಲಾದಲ್ಲಿ ತನ್ನ ಪತಿಯ ಒಡೆತನದ ಪತ್ರಿಕೆಗೂ ತಸ್ಲಿಮಾ ಲೇಖನಗಳನ್ನು ಬರೆಯುತ್ತಿದ್ದಳು. ಅವು ತುಂಬ ಭಾವುಕತೆಯಿಂದ ಮತ್ತು ಉದ್ವಿಗ್ನತೆಯಿಂದ ಕೂಡಿರುತ್ತಿದ್ದವು. ಸಂಪಾದಕರಾಗಿದ್ದ ನನ್ನ ಪತಿ ಅವನ್ನು ಬಹುಜನಕ್ಕೆ ಒಪ್ಪಿತವಾಗುವ ರೀತಿಯಲ್ಲಿ ಎಡಿಟ್ ಮಾಡಿ ಪ್ರಕಟಿಸುತ್ತಿದ್ದರು. ಆದರೆ ಏನನ್ನೂ ಕೈ ಬಿಡುತ್ತಿರಲಿಲ್ಲ’ ಎನ್ನುತ್ತಾಳೆ, ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ "ಡೆಮಾಕ್ರಸಿ ವಾಚ್’ನ ನಿರ್ದೇಶಕಿ (ಹೆಸರು ಮರೆತೆ). ತಿಂಗಳ ಹಿಂದೆ ಅನಂತಮೂರ್ತಿ ಹೇಳಿದ್ದರು "ಬಿಜೆಪಿಯನ್ನು ಬ್ರಾಹ್ಮಣರು ಕೈಬಿಡಬೇಕು’. ಆ ಮಾತಿನಿಂದ ಎಷ್ಟು ಜನರಿಗೆ ಏನನ್ನು ಮನವರಿಕೆ ಮಾಡಲು ಸಾಧ್ಯ ? 'ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸಕ ಬಲ ಹೊಂದಿರುವ ಪಕ್ಷವೊಂದು ಅಧಿಕಾರ ಪಡೆಯಲು ಅನರ್ಹ’ ಎಂದರೆ ಪ್ರಶ್ನೆಗಳು ಕಡಿಮೆ ಇದ್ದಾವೇನು?

ಚರ್ಚೆ-ಭಾಷಣಗಳಲ್ಲಿ ಅಂತಹ ಮಾತುಗಳು ಸರಿ ಅಂತಲೇ ಅಂದುಕೊಳ್ಳೋಣ. ಆದರೆ ಕೇವಲ ಮಾತಿನಲ್ಲೇ ನಾವು ಸೋಲುತ್ತ ಗೆಲ್ಲುತ್ತ ಇದ್ದರೆ ಸಾಕೆ? ಪರಿಣಾಮವೇ ಲಕ್ಷ್ಯವಾದ ಪ್ರಾಯೋಗಿಕ ಕೆಲಸಗಳಲ್ಲಿ ಜನರಿಗೆ ಮನವರಿಕೆಯಾಗುವ ಹಾಗೆ, 'ಸಾಮಾಜಿಕ ಸ್ಪಂದನ’ ತೋರುವ, ಉಂಟು ಮಾಡುವ ದಾರಿ ಯಾವುದು? ಎಲ್ಲ ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀಟಿ, ನಿರ್ದಿಂಗತವಾಗಿ ಏರಿ ಒಳ್ಳೆಯದನ್ನು ಮಾಡುವ ಬಗೆ ಹೇಗೆ?
We don't know !

1 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP