January 30, 2009

‘ಕರ್ಣ’ ಕಠೋರ

ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರಬಂದಿದ್ದಾನೆ ಕೃಷ್ಣ . ಆಗ ಕರ್ಣನನ್ನು ಕರೆದು ರಥದಲ್ಲಿ ಕೂರಿಸಿಕೊಂಡು ಆತನ ಜನ್ಮ ರಹಸ್ಯವನ್ನು ಬಿಚ್ಚಿಡುತ್ತಾನೆ. ಮಹಾಭಾರತದಲ್ಲಿ ಅದೊಂದು ವಿಶೇಷ ಸಂದರ್ಭ; ಕರ್ಣ ಭೇದನ. ನೀನು ಸೂತ ಪುತ್ರನಲ್ಲ ಕುಂತಿಯ ಮಗ. ಇದನ್ನು ಈಗ ಲೋಕಕ್ಕೆ ಪ್ರಕಟಿಸಿದರೆ, ಪಾಂಡವರು-ಕೌರವರು ಒಂದಾಗಿ ನೀನು ಹಸ್ತಿನಾವತಿಯ ಮಹಾರಾಜನಾಗಬಹುದು, ಮುಂದೆ ನಡೆಯಲಿರುವ ಮಹಾಯುದ್ಧ ತಪ್ಪಿಸಬಹುದು ಎನ್ನುತ್ತಾನೆ ಕೃಷ್ಣ. ಆಗ ಕರ್ಣ ಮನಸ್ಸಿಗೆ ಬಂದದ್ದನ್ನು ಹೀಗೆ ಹೇಳಿರಬಹುದೆ?!-

‘ಕೃಷ್ಣಾ , ಸಾಕು ಸಾಕು. ನಿನ್ನ ಮಾತು ‘ಕರ್ಣ’ ಕಠೋರ. ಅಪ್ಪ ಅದಿರಥ, ಮಿತ್ರ ಕೌರವ ; ನನಗೆ ಸಾಕಿದವರು ಬೇಕು. ಸಾಗಹಾಕುವವರಲ್ಲ. ನೀನು ಸುಳ್ಳಾಡುವವನಲ್ಲವೆಂದು ಗೊತ್ತು. ವೈರಿ ಕಂಸನನ್ನೇ ಅಶರೀರವಾಣಿಯ ಮೂಲಕ ಎಚ್ಚರಿಸಿ ನಂತರ ಹುಟ್ಟಿದ ನೀನು ದೇವರೆಂದು ಬಲ್ಲೆ. ಆದರೆ ಹತಭಾಗ್ಯನಾದ ನನ್ನನ್ನು ಈಗ ದೇವರಾಗಿಸುವ ಪ್ರಯತ್ನಕ್ಕೆ ಕೈಹಾಕಬೇಡ !
ಶಾಪ ಕೊಡುವುದರಲ್ಲಿ ಸಿದ್ಧಹಸ್ತರಾದ ದೂರ್ವಾಸರು ಕೌಮಾರ್ಯದಲ್ಲಿದ್ದ ಕುಂತಿಯ ಸೇವೆಯನ್ನು ಮೆಚ್ಚಿ , ಮಕ್ಕಳನ್ನು ನೀಡಬಲ್ಲ ಮಂತ್ರಗಳನ್ನು ಬೋಧಿಸಿದರೇ? ಅದೂ ಒಂದಲ್ಲ ಐದು. ಆ ಮಂತ್ರಗಳಿಂದ ಹುಟ್ಟಿದ ಪಾಂಡವರು ಒಳ್ಳೆಯವರು ಅನ್ನಿಸಿಕೊಂಡರೆ, ಅದೇ ಮಂತ್ರದಿಂದ ಹುಟ್ಟಿದ ನಾನು ಕೆಟ್ಟವನಾದೇನೇ? ಇಲ್ಲ. ಆದರೆ ನನ್ನನ್ನು ಕೆಟ್ಟವನನ್ನಾಗಿಸಲು ಈಗ ನೀನು ಯತ್ನಿಸುತ್ತಿದ್ದೀಯ. ಕುಂತಿಯು ಸೂರ್ಯನ ಮೂಲಕ ನನ್ನನ್ನು ಪಡೆದಳಾದರೂ ನನಗೆ ಸಿಕ್ಕಿದ್ದು ಕತ್ತಲೆಯ ಬದುಕು. ಕುಮಾರಿಯಾಗಿದ್ದ ಆಕೆ ಅಂದು ಬರಬಹುದಾಗಿದ್ದ ಅಪವಾದಕ್ಕೆ ಹೆದರಿದ್ದಳು. ಈಗ ನನಗೆ ಅಪವಾದವನ್ನು ಕಟ್ಟುವ ಯತ್ನ ಮಾಡುತ್ತಿದ್ದೀಯಾ. ಶಂತನುವಿನ ಪತ್ನಿಯಾಗಿದ್ದ ಗಂಗೆ ತನ್ನ ಏಳೂ ಮಕ್ಕಳನ್ನು ನದಿಗೆಸೆದು ಮೋಕ್ಷ ಕರುಣಿಸಿದಳಂತೆ. ಆದರೆ ಕುಂತಿ ಅದೇ ಗಂಗೆಯಲ್ಲಿ ನನ್ನನ್ನು ತೇಲಿ ಬಿಟ್ಟಳು. ಗಂಗೆಯೂ ನನ್ನನ್ನು ಮುಳುಗಿಸಲಿಲ್ಲ. ಹಸ್ತಿನಾವತಿಯ ಕುಡಿಯೊಂದು ಉಳಿಯಲೆಂದು ಆಕೆಗೂ ಅನ್ನಿಸಿರಬೇಕು !

ನನ್ನ -ಪಾಂಡವರ ವೈರದ ಮಧ್ಯೆಯೂ ಎಲ್ಲವನ್ನೂ ಸಹಿಸಿ, ಹೆಣ್ಣೊಬ್ಬಳು ಈ ಜನ್ಮ ವೃತ್ತಾಂತ ಬಚ್ಚಿಟ್ಟಿದ್ದಾಳೆಂದರೆ, ಆಕೆ ನಿಜವಾಗಿ ಸಹನಾಮೂರ್ತಿ ಧರ್ಮರಾಯನ ತಾಯಿಯೇ ! ನೀನು ದೇವರಾಗಿ ಮಾತಾಡು, ರಾಜಕೀಯ ನಿಷ್ಣಾತನಂತೆ ಆಡಬೇಡ. ಈ ಸತ್ಯವನ್ನು ಒಪ್ಪಿದರೂ ನಾನು ಕೌರವನ ಪಕ್ಷ ಬಿಡಲಾರೆನೆಂದು ನಿನಗೆ ಗೊತ್ತು. ಹಾಗಾಗಿ ಈ ಹಿಂದೆಂದೂ ಹೇಳದೆ ಈಗ ಹೇಳುತ್ತಿದ್ದೀಯೆ. ಕೌರವನ ಸಾಮ್ರಾಜ್ಯ ಪತನಕ್ಕೆ ನೀನು ಮೊದಲ ಹೆಜ್ಜೆಯಿಟ್ಟಿರುವುದು ಈ ಕರ್ಣನ ಎದೆಯ ಮೇಲೆ. ‘ಪಾಂಡವರನ್ನು ನನ್ನ ಪ್ರಾಣಗಳಂತೆ ರಕ್ಷಿಸುತ್ತೇನೆ ’ಎಂದು ಕುಂತಿಗೆ ಮಾತು ಕೊಟ್ಟವನಂತೆ ನೀನು. ಆ ಪಾಂಡವರಲ್ಲಿ ನಾನೂ ಇದ್ದೇನೆಯೆ?!

Read more...

January 23, 2009

ಎಲ್ಲ ಉತ್ತರಗಳನ್ನು ಬಲ್ಲವರಿಗೆ

'ಸ್ಲಂ ಡಾಗ್ ಮಿಲಿಯನೇರ್’ನ ಹೆಚ್ಚುಗಾರಿಕೆಯಿರುವುದು, ಅದು ವಾಸ್ತವವನ್ನು ತೋರಿಸಿದೆ ಅಂತ ಮಾತ್ರ ಅಲ್ಲ. ವಾಸ್ತವವನ್ನು ತೋರಿಸಿದ್ದರೂ ಡಾಕ್ಯುಮೆಂಟರಿಯಾಗದೇ ಉಳಿದಿದೆ ಮತ್ತು ಭಾರತದ ನಾನಾ ಸಂಗತಿಗಳಿಗೆ ಮುಖಾಮುಖಿಯಾಗಿದೆ ಎಂಬುದರಿಂದ. ವಾಸ್ತವವನ್ನು ಬೇರೆ ರೀತಿಯೂ ತೋರಿಸಬಹುದಿತ್ತಾದರೂ, ಈಗ ಇರುವುದೂ ಬಹಳ ಕಲಾತ್ಮಕವಾಗಿ, ಆನಂದದಾಯಕವಾಗಿಯೇ ಇದೆ. ಇಲ್ಲಿ ಹಿಂಸೆ-ಕ್ರೌರ್ಯ, ಗಲೀಜು ವಿಜೃಂಭಿಸಿದೆ ಅನ್ನುವುದು, ಕೈ ಮಣ್ಣಾಗದವರ ಅನಿಸಿಕೆಯಷ್ಟೇ. ಆ ಸಿನಿಮಾಗಿಂತ ಹೆಚ್ಚಿನ ಹಿಂಸೆ-ಕ್ರೌರ್ಯ ನಮ್ಮ ಕನ್ನಡ ಸಿನಿಮಾಗಳಲ್ಲೇ ಇದೆ. ಆ ಸಿನಿಮಾಗಿಂತ ಹೆಚ್ಚಿನ ಗಲೀಜು ಈ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಧಾರಾಳವಾಗಿ ಕಣ್ಣೆದುರಿಗಿದೆ.

‘ಇಂಡಿಯಾ ಅಂದರೆ ಇಷ್ಟು ಮಾತ್ರ’ಅಂತ ಸಿನಿಮಾದಲ್ಲೆಲ್ಲೂ ಹೇಳಿಲ್ಲ. ಅಷ್ಟಕ್ಕೂ ಕರಣ್ ಜೋಹರ್ ತೋರಿಸುವ ಮೋಜುಮಸ್ತಿ-ಹೈಫೈ ಇಂಡಿಯಾವೇ ರಿಯಲ್ ಇಂಡಿಯಾ ಅಂತ ನೀವು ಒಪ್ಪುತ್ತೀರಾ? ಆಗ ಯಾಕೆ ಯಾರೂ ಮಾತಾಡುವುದಿಲ್ಲ? ಹೇಲಿನಿಂದ ಎದ್ದು ಬರುವ ಹುಡುಗನ ದೃಶ್ಯ ನೋಡಿ ನಾನು ಹಾಗೂ ಸ್ನೇಹಿತರಂತೂ ನಗೆಯಾಡಿ ಸಂತೋಷಪಟ್ಟೆವು. ಅಮಿತಾಬ್ ಕೂಡಾ ಅಸಹ್ಯಪಡದೆ ಆಟೊಗ್ರಾಫ್ ಕೊಟ್ಟಿರುವಾಗ, ನಮಗೆ ಅಸಹ್ಯವಾಗುವುದು ಏನಿದೆ?! ಆ ದೃಶ್ಯ ಅಮಿತಾಬ್ ಅಥವಾ ಸಿನಿಮಾಗಳು ಭಾರತದಲ್ಲಿ ಹೊಂದಿರುವ ಪ್ರಭಾವ ಶಕ್ತಿಯನ್ನೂ ತೋರಿಸುತ್ತದೆ. ಅಷ್ಟಕ್ಕೂ ಬಚ್ಚನ್ ಸಿನಿಮಾದ ಬಗ್ಗೆ ಕಿಡಿ ಕಾರಿದ್ದಾರೆಂದು ತಪ್ಪು ವರದಿಗಳು ಪ್ರಕಟವಾಗಿವೆ. ಅದಕ್ಕೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಮತ್ತೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಜಮಾಲ್‌ನನ್ನು ಚಾಯ್‌ವಾಲಾ ಎನ್ನುತ್ತಾ ಅನಿಲ್‌ಕಪೂರ್ ಅಣಕಿಸುವುದು, ಪೊಲೀಸರು ಯಾವ್ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ವಿಚಾರಣೆಗೆ ಒಯ್ಯುವುದು ಇವೆಲ್ಲಾ ಭಾರತದಲ್ಲಿ ಪ್ರತಿದಿನ ನಡೆಯುವಂಥದ್ದೇ. ಅದು ವಿಚಿತ್ರ ಕಾನ್ಸೆಪ್ಟ್ ಏನೂ ಅಲ್ಲ. ಇನ್ನು ಆ ಸಿನಿಮಾ ಆಸ್ಕರ್‌ಗೆ ಅರ್ಹವೋ ಅಲ್ಲವೋ ಅನ್ನುವುದು ಬೇರೆಯೇ ಚರ್ಚೆ. ಅದಕ್ಕೆ ಬೇರೆಯೇ ಸಿದ್ಧತೆ ಬೇಕು. ಬಹಳ ಬೇಸರದ ಸಂಗತಿಯೆಂದರೆ, ಇದರಲ್ಲಿ ರಾಮನನ್ನು ಅಪಮಾನಿಸಲಾಗಿದೆ, ಇದರಿಂದಾಗಿ ಭಾರತದ ಮರ್ಯಾದೆ ಹೋಯಿತು ಅಂತೆಲ್ಲ ಕೆಲವರು ಹುಯಿಲೆಬ್ಬಿಸಿರುವುದು. ಇದರಲ್ಲಿ ಕ್ಯಾಮೆರಾ ಹಿಡಿದ ರೀತಿ ‘ಸಿಟಿ ಆಫ್ ಗಾಡ್’ನಂತೆಯೇ ಇದೆ ಇತ್ಯಾದಿ ಕಮೆಂಟ್‌ಗಳ ನಡುವೆಯೂ, ಅತ್ಯುತ್ತಮ ಸಿನಿಮಾಗಳಲ್ಲಿ ಸ್ಲಂ ಡಾಗ್ ಮಿಲಿಯನೇರ್ ಒಂದು ಅನ್ನುವುದನ್ನು ನಾವೆಲ್ಲಾ ಯಾವ ಅನುಮಾನವಿಲ್ಲದೆ ಒಪ್ಪಿಕೊಳ್ಳಬಹುದು. ಕೆಲ ದಿನಗಳ ಹಿಂದೆ ಸಾಂಗತ್ಯ ಬ್ಲಾಗ್‌ಗಾಗಿ ಒಂದಷ್ಟು ಬರೆದಿದ್ದೇನೆ. ಪುರುಸೊತ್ತಿದ್ದರೆ ಓದಿರೆಂದು ಬಿನ್ನಹ.

Read more...

January 14, 2009

ಆಹಾ ಎಂಥಾ ಧಾವಂತ

ಕಣ್ಣೆವೆಗಳು ನಿಶ್ಚಲವಾಗಿವೆ . ಹುಬ್ಬು ಮೇಲಕ್ಕೇರಿ, ಹಣೆಯಲ್ಲಿ ನಿರಿಗೆಗಳು ಮೂಡಿ, ಕುರ್ಚಿ ಮೇಲಿನ ಹಿಡಿತ ಬಿಗಿಯಾಗಿದೆ. ತೆರೆಯ ಮೇಲೆ ಕೆದರಿದ ಕೂದಲಿನ, ಬೆವರಿಳಿದ ಮುಖದ ಪುರುಷ ಸಿಂಹ, ಎರಡೂ ಕೈಗಳಿಂದ ಸ್ಟೇರಿಂಗ್‌ನ್ನು ಅತ್ತಿಂದಿತ್ತ ಇತ್ತಿಂದತ್ತ ಒಂದೇಸಮ ತಿರುಗಿಸುತ್ತಿದೆ. ಕಾಲು ಎಕ್ಸ್‌ಲೇಟರ್‌ನ್ನು  ಸಂಪೂರ್ಣ ಅದುಮಿ ಹಿಡಿದಿದೆ. ಅಟ್ಟಿಸಿಕೊಂಡು ಹೋಗುತ್ತಿವೆ  ಖಳನಾಯಕನ ಪಡೆಯ ಬೈಕುಗಳು. ನಾಯಕನ ಕಾರಿನಲ್ಲಿ ಆ ಹುಡುಗಿ ಗುಬ್ಬಿ ಹಕ್ಕಿ. ಭ್ರೂ.....ಮ್...
ಬೆಂಕಿ, ಹೊಗೆ , ಸದ್ದು ಢಮಾರ್. ನಿಧಾನಕ್ಕೆ ಕೈಕೈ ಹಿಡಿದು ಎದ್ದು ಬರುತ್ತಿರುವ ನಾಯಕನಾಯಕಿಯರು. ಚಪ್ಪಾಳೆ, ಸಿಳ್ಳು !
ಅದೆಷ್ಟು ಸಲ ನಾವೆಲ್ಲ ನೋಡಿದ್ದೀವಲ್ಲ ಈ ನಾನಾ ಬಗೆಯ ಚೇಸಿಂಗ್‌ಗಳನ್ನು . ಕಳ್ಳ-ಪೊಲೀಸರು, ನಾಯಕ -ಖಳನಾಯಕರು... ಆದರೆ  ಇಂತಹ ಚೇಸಿಂಗ್‌ಗಳಲ್ಲಿ ವಾಹನಗಳನ್ನು ಹೊರತುಪಡಿಸಿದರೆ ನಂತರ ನೆನಪಾಗುವವು ಕುದುರೆಗಳು. ಲಕ್ಷಾಂತರ ರೂಪಾಯಿಗಳ ಪಣವನ್ನಿಟ್ಟುಕೊಂಡು ಅವು ಓಡುತ್ತಿದ್ದರೆ ಹೊರಗೂ, ಎದೆಯಲ್ಲೂ ಟಕ ಟಕ . ಹಳ್ಳಿ ಹಬ್ಬಗಳಲ್ಲಿ ಕಟ್ಟುಮಸ್ತಾದ ಹೋರಿಗಳು ಓಡುತ್ತಿದ್ದರೆ ಹುಡುಗರಿಗೆ ಓಡಿ,ಹಿಡಿದು ನಿಲ್ಲಿಸುವ ತವಕ.  ಚೇಸಿಂಗ್ ಅಂದರೆ  ಹೀಗೆಯೇ, ಮನುಷ್ಯರಿಗೆ ಯಾವತ್ತೂ ರೋಮಾಂಚನ. ಬಾಲ್ಯದ ಕಳ್ಳ-ಪೊಲೀಸ್ ಆಟದಿಂದಲೇ ಶುರು. ಓಡುವುದಕ್ಕಿಂತ ಓಡಿಸುವುದು ಸುಲಭವಾದರೂ, ಎಳೆಯರ ಕಳ್ಳ-ಪೊಲೀಸ್ ಆಟದಲ್ಲಿ ಓಡುವುದಕ್ಕೇ ಎಲ್ಲರಿಗೆ ಹುಮ್ಮಸ್ಸು. ಯಾಕೆಂದರೆ ಒಬ್ಬ ಪೊಲೀಸನಿಗೆ ಕಳ್ಳರು ಸಿಗುವುದೇ ಇಲ್ಲ ! ಅದೋ ನೋಡಿ. ಕೈತಪ್ಪಿಸಿಕೊಂಡು  ಓಡುತ್ತಿರುವ ಮಗುವನ್ನು ಹಿಡಿಯಲು ಧುಮುಗುಡುತ್ತ  ಬೆನ್ನತ್ತಿದ್ದಾಳೆ ಅಮ್ಮ . ಬಾಲವೆತ್ತಿ ಓಡುತ್ತಿರುವ ಸಾಧು ಪ್ರಾಣಿಗಳನ್ನು ನ್ಯಾಷನಲ್ ಜಿಯೊಗ್ರಫಿಕ್‌ನಲ್ಲಿ ಚೇಸ್ ಮಾಡುತ್ತಿವೆ ಹುಲಿ-ಸಿಂಹಗಳು. ಬೀದಿ ನಾಯಿಗಳನ್ನು ಅಟ್ಟುತ್ತಿದೆ ನಿಮ್ಮ ಮನೆಯ ಟಾಮಿ. ಟಾಮ್ ಅಂಡ್ ಜೆರ್ರಿಯಲ್ಲಿ ಇಲಿಯನ್ನು ಬೆನ್ನತ್ತಿದೆ ಬೆಕ್ಕು. 'ಅಗೋ ಅಗೋ ಬಸ್ ಶಬ್ದ ಕೇಳ್ತಾ ಉಂಟು' ಅಂತನ್ನುತ್ತಾ ಬಸ್ ಹಿಡಿಯಲು ನೂರು ಮೀಟರ್ ದೂರದಿಂದ ಬಸಬಸ ಓಡುತ್ತಿದ್ದಾರೆ ಹಳ್ಳಿ ಹೆಂಗಸರು. ವಿಖ್ಯಾತ ಸಿನಿಮಾ ಶೋಲೆಯಲ್ಲಿ ಧಮೇಂದ್ರ-ಅಮಿತಾಬ್‌ರಿದ್ದ ರೈಲನ್ನು ಕುದುರೆಗಳಲ್ಲಿ ಬೆಂಬತ್ತಿದೆ ಗಬ್ಬರ್‌ಸಿಂಗ್‌ನ ಪಡೆ. ಇವನ್ನೆಲ್ಲ ನೋಡದವರು ಯಾರು?

ಇದು ವೇಗದ ಜಗತ್ತು. ಹಿಂದೆ ಬಿದ್ದವರಿಗೆ ಇಲ್ಲಿ ಜಾಗವಿಲ್ಲ. ಓಡುವುದರಲ್ಲಿ ಓಡಿಸುವುದರಲ್ಲಿ ಪರಿಣತರಾದಷ್ಟೂ ನಿಮಗೆ ಏಳಿಗೆ ! ಆಸೆಗಳನ್ನು, ಕನಸುಗಳನ್ನು ಅಷ್ಟೇ ಯಾಕೆ, ನಮ್ಮ ಕೆಲಸವಾಗಬೇಕಾದರೆ ಬೆನ್ನುಬೀಳಲೇಬೇಕು, ಚೇಸ್ ಮಾಡಲೇಬೇಕು. ಬ್ರಿಟಿಷರು (ಮುಖ್ಯವಾಗಿ) ಬೇಟೆಯಾಡುವುದಕ್ಕಾಗಿ ಬಳಸುವ ಖಾಸಗಿ ಭೂಮಿಗೆ  ಚೇಸ್ (chase) ಎಂದೇ ಕರೆಯುತ್ತಾರೆ.  ಹಾಗೆ ನೋಡಿದರೆ ಸೃಜನಶೀಲವಾದದ್ದೆಲ್ಲ  ಜೀವಂತವಾಗಿರುವುದು ಇಂತಹ ಚಲನಶೀಲತೆಯಲ್ಲೇ. ಚಲನಶೀಲತೆ ಅಂದರೆ ಒಂದಲ್ಲ ಒಂದರ ಬೆಂಬತ್ತುವುದೇ. ಸಂಗೀತಗಾರನ ಸ್ವರ-ತಾಳಗಳಲ್ಲಿ, ಚಿತ್ರಗಾರನ  ಸ್ಟ್ರೋಕ್‌ಗಳಲ್ಲಿ, ಕವಿಯ ಪದ-ಸಾಲುಗಳಲ್ಲೂ ಈ ಗುಣವಿದೆ. 
'ಬುಲೆಟ್‌ನ ಶಬ್ದ ಬಲಭಾಗದಲ್ಲಿ ಕೇಳಿಸುತ್ತಿತ್ತು. ಹಿಂದೆ ತಿರುಗಿ ನೋಡಿದೆ. ಬುಲೆಟ್ ನೂರು ಅಡಿಗಳಿಗಿಂತಲೂ ಹತ್ತಿರ ಬಂದುಬಿಟ್ಟಿತ್ತು. ಅದರಲ್ಲಿ ಇಬ್ಬರು ಕುಳಿತಿದ್ದರು. ಇಬ್ಬರೂ ಪೊಲೀಸ್ ಡ್ರೆಸ್‌ನಲ್ಲಿದ್ದರು. ಹಿಂದುಗಡೆ ಕುಳಿತಿದ್ದವರ ಕೈಯಲ್ಲಿ ರಿವಾಲ್ವರ್ ಕಾಣಿಸಿತು. ಯಾವುದೇ ಕಾರಣಕ್ಕೂ ತಿರುಗಿ ನೋಡಬೇಡವೆಂದು ಕೊತ್ವಾಲ ಅರಚುತ್ತಿದ್ದಾನೆ. ಕೊನೆಯ ಪಕ್ಷ ಹಿಂದೆ ನೋಡುತ್ತಿದ್ದರೆ ರಿವಾಲ್ವರ್ ಯಾವ ದಿಕ್ಕಿನಲ್ಲಿದೆಯೆಂದಾದರೂ ನೋಡಬಹುದು. ತಲೆ ಬಾಗಿಸಬಹುದು, ಮೈಯನ್ನು ವಾಲಿಸಬಹುದು. ಕೊತ್ವಾಲ ಅಷ್ಟು ವೇಗವಾಗಿ ಗಾಡಿಯನ್ನು ಓಡಿಸುತ್ತಿದ್ದರೂ ತನ್ನ ಎಡಗೈಯಿಂದ ಒಂದೆರಡು ಬಾರಿ `ಹಿಂದೆ ನೋಡಬೇಡ್ರಿ' ಎಂದು ಬಲವಾಗಿ ಹೊಡೆದ. ಬುಲೆಟ್ ಗಾಡಿ ನಮ್ಮ ಬಲಕ್ಕಿತ್ತು. ಹಿಂದೆ ಕುಳಿತಿದ್ದವನು ರಿವಾಲ್ವರ್ ಹಿಡಿದುಕೊಂಡು ಶಿವರಾಂರವರ ಹಿಂದಿನಿಂದ ಎಡಗಡೆಯಿದ್ದ ನಮ್ಮ ಕಡೆ ಗುರಿ ಮಾಡಲು ಯತ್ನಿಸಿದುದು ನನಗೆ ಕಾಣಿಸಿತ್ತು. ಆ ದಿಕ್ಕಿನಿಂದ ಟಾರ್ಗೆಟ್ ಮೇಲೆ ಗುಂಡು ಹಾರಿಸುವುದು ಸ್ವಲ್ಪ ಮಟ್ಟಿಗೆ ತ್ರಾಸದಾಯಕವಾಗಿತ್ತು. ನಾನು ಹಿಂದಕ್ಕೂ ತಿರುಗಿ ನೋಡದೆ ಕಾತುರದಿಂದ ನನ್ನ ಗಮನವನ್ನೆಲ್ಲಾ ಕಿವಿಗಳ ಮೇಲೆ ಹರಿಸಿದ್ದೆ. ಬಹುಶ ನಾನು ಹಿಂದಿರುಗಿ ನೋಡಿ ಐದು ಸೆಕೆಂಡ್‌ಗಳಷ್ಟು ಆಗಿರಲಿಲ್ಲ. ಬುಲೆಟ್ ನಮ್ಮ ಎಡಭಾಗಕ್ಕೆ ಸರಿದಿತ್ತು. ಈಗ ಏಮ್ ತೆಗೆದುಕೊಳ್ಳುವುದು ಕಷ್ಟವಿರಲಿಲ್ಲ. ನಮ್ಮ ಎಡಭಾಗಕ್ಕೆ ಬುಲೆಟ್ ಸರಿದ ನಂತರವಂತೂ, ನನ್ನೊಳಗೆ ಇದ್ದ ಕಿಂಚಿತ್ ಭರವಸೆಯೂ ಬತ್ತಿಹೋಯಿತು.'
ಪೊಲೀಸ್ ಅಧಿಕಾರಿ ಶಿವರಾಂ ಅವರಿಂದ , ಬೆಂಗಳೂರಿನ ಪ್ರಮುಖ ಪಾತಕಿ ಕೊತ್ವಾಲನೊಡನೆ ತಪ್ಪಿಸಿಕೊಂಡ ಬೈಕ್ ಚೇಸ್‌ನ ಸತ್ಯ ಘಟನೆಯನ್ನು `ದಾದಾಗಿರಿಯ ದಿನಗಳಲ್ಲಿ ' ಅಗ್ನಿಶ್ರೀಧರ್ ಚಿತ್ರಿಸಿರುವ ಕೆಲವು ಸಾಲುಗಳಿವು.

೨೦೦೬ ಮಾರ್ಚ್ ೧೨. ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಕಲಿಗಳು ಚಚ್ಚಿದ್ದೇ ಚಚ್ಚಿದ್ದು. ೫೦ ಓವರುಗಳಲ್ಲಿ ಭರ್ತಿ ೪೩೪ ರನ್‌ಗಳು. ಆದರೆ ಆಮೇಲೆ ಶುರುವಾಯ್ತಲ್ಲ ಆಫ್ರಿಕನ್ನರ ಆರ್ಭಟ. ಆ ರನ್‌ಗಳ ಬೆಟ್ಟ ಏರುತ್ತಾ, ೧೧೧ ಎಸೆತಗಳಲ್ಲಿ ಹರ್ಷಲ್ ಗಿಬ್ಸ್ ೧೭೫, ಗ್ರೇಮ್ ಸ್ಮಿತ್ ೯೦ ರನ್‌ಗಳು, ದ.ಆಫ್ರಿಕಾ ೪೩೮ ! ಆಸ್ಟೇಲಿಯಾ ಸೋತು ಸಪ್ಪೆ. ಅಟ್ಟಾಡಿಸಿ ಹೊಡೆಯುವುದೆಂದರೆ  ಅದು. ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಲು ಟೆಸ್ಟ್‌ನ ಕೊನೆಯ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ  ಏಳು ವಿಕೆಟ್‌ಗಳಿಗೆ ೪೧೮ ರನ್ ಒಟ್ಟುಗೂಡಿಸಿ ಗೆದ್ದದ್ದು ಕೂಡಾ ಬೆಂಬತ್ತಿ ಪಡೆದ ಅತಿ ದೊಡ್ಡ  ವಿಜಯ. ಆಮೀರ್ ನಾಯಕತ್ವದ ಭಾರತ ತಂಡ, ಬ್ರಿಟಿಷರು ಪೇರಿಸಿದ ಮೊತ್ತವನ್ನು  `ಲಗಾನ್' ಸಿನಿಮಾದಲ್ಲಿ ಬೆಂಬತ್ತುವ ಬಗೆ ನೆನಪಾಯಿತಾ? ಹಾಗಂತ ಬೆಂಬತ್ತುವ ಬಗೆಯೆಲ್ಲವೂ ವೇಗ ಪ್ರಧಾನವೇ ಅಲ್ಲ. ಪತ್ತೇದಾರಿ ಕಾದಂಬರಿಗಳಲ್ಲಿ ರಹಸ್ಯ ಭೇದಿಸಲು ಒಂದೊಂದೇ ಸುಳಿಗಳನ್ನು ದಾಟುತ್ತ ಸಾಗುವ ಗೂಢಚಾರರ ಎಚ್ಚರಿಕೆಯ ಹೆಜ್ಜೆ ಬಹಳ ನಿಧಾನ . ಚದುರಂಗದಾಟದಲ್ಲಿ ಒಬ್ಬನ ಹಿಂದೆ ಮತ್ತೊಬ್ಬ ನಿಧಾನ ನಿಧಾನ ಬೆನ್ನು ಹತ್ತುತ್ತ ಲೆಕ್ಕಾಚಾರದ ನಡೆ.
ಮೊನ್ನೆ ಮೊನ್ನೆ  ೨೯ರ ನಡುರಾತ್ರಿ ಒಂದು ಗಂಟೆ. ಗೆಳೆಯರೊಂದಿಗೆ ಬೈಕ್ ರೇಸ್ ಮಾಡುತ್ತಿದ್ದ  ೧೯ರ ವಯಸ್ಸಿನ ಕಾಲೇಜು ಹುಡುಗ ಮೊಹ್ಮದ್ ಅಕ್ರಂ ಪಾಷಾ, ಬೆಂಗಳೂರಿನ  ರಸ್ತೆಗಳಲ್ಲಿ  ಸಾವನ್ನೇ ಬೆಂಬತ್ತಿದವನಂತೆ ಓಡಿದ. ಟ್ರಿನಿಟಿ ಸರ್ಕಲ್‌ನಿಂದ ಶುರುವಾಗಿ, ಹಳೆ ಏರ್‌ಪೋರ್ಟ್ ರಸ್ತೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡಿ, ಸೇನೆಯ ಬ್ರಿಗೇಡಿಯರ್ ಮನೆ ಟೆರೇಸ್ ಹತ್ತಿದ. ಅಲ್ಲಿಂದ ಮನೆಗೆ ಫೋನ್ ಮಾಡಿ, ತನಗೆಂದು ಬಂದ ಕಾರು ಹತ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನೋಡಿದನಂತೆ. ಟೆರೇಸ್‌ನಿಂದ ಜಿಗಿದು ಓಡುವಾಗ ಮಿಲಿಟರಿ ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದ. ಶರಣಾಗತನಾಗದೆ ಆ ಪರಿ ಓಡಿದ್ದನೆಂದರೆ, ಅದ್ಯಾವ ಸಿನಿಮಾಗಳಲ್ಲಿ ಯಾರೋ ಹಾಗೆ ತಪ್ಪಿಸಿಕೊಂಡಿದ್ದನ್ನು ನೋಡಿದ್ದನೋ ಅಥವಾ ಲಡಕಾಸು ಕೋವಿಗಳ ಈ ಭದ್ರತಾ ಪಡೆಯವರಿಗೆ ಏನೂ ಮಾಡಲಾಗದು ಅಂದುಕೊಂಡನೋ, ಸಿಕ್ಕಿಬಿದ್ದರೆ ಆ ರಾತ್ರಿ ಪೊಲೀಸರು ಕೊಡಬಹುದಾದ 'ಆತಿಥ್ಯ'ಕ್ಕೆ ಹೆದರಿದನೋ, ಟಿವಿ-ಪತ್ರಿಕೆಗಳಲ್ಲಿ ನಾಳೆ ತನ್ನ ಮುಖವನ್ನು ಎಲ್ಲರೂ ಕಾಣುವಂತಾದೀತೆಂದು ಅಪಮಾನದಿಂದ ಕುಗ್ಗಿದನೋ ಅಥವಾ ತಾನೆಲ್ಲಿದ್ದೇನೆ ಎಂಬುದೂ ಅರಿವಿಲ್ಲದೆ ತೀರಾ ಹುಡುಗಾಟದಂತೆ  ಓಡಿದನೋ, ಅವನಿಗೇ ಗೊತ್ತು. ಅಂತೂ ಆ ಕಾಳರಾತ್ರಿ ಆತನ ರೇಸಿಂಗ್ ಹುಚ್ಚು ಬದುಕಿನ ಟ್ರ್ಯಾಕನ್ನೇ ಕಿತ್ತು ಬಿಸಾಡಿತ್ತು. ಓಡೋಡಿ ಮಡಿದ ಆ ಹುಡುಗನಿಗೆ ಈ ಬರೆಹ ಅರ್ಪಣೆ.    
***            
ಅದೋ, ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ಹೊರಟಿದ್ದಾನೆ. ಟಿಫಿನ್ ಕ್ಯಾರಿಯರ್‌ಗಳು ತುಂಬಿಕೊಂಡು ಹಬೆ ಬಳಿದು  ಕುಳಿತಿವೆ.  ಪರ್ಸ್‌ನಿಂದ ಹಳೆಯ ಹತ್ತು ರೂಪಾಯಿ ನೋಟು ಹುಡುಕಿ ತೆಗೆದು, ಬಸ್ಸಿಗೆ ಕೊಡಲೆಂದು ಅಂಗಿ ಜೇಬಲ್ಲಿಟ್ಟಿದ್ದಾನೆ ಅಪ್ಪ.  ತನ್ನನ್ನು ಬೇಗ ಎಬ್ಬಿಸದೆ ಸ್ಕೂಲಿಗೆ ತಡವಾಯಿತೆಂದು ಮಗಳು ಬಡಬಡಿಸುತ್ತಿದ್ದಾಳೆ. ಇವತ್ತು ನೀನು ಐಸ್‌ಕ್ರೀಮ್ ತಿನ್ನಬಹುದೆಂದು ಮಗಳ ಲಂಗದ ಜೇಬಿಗೆ ಐದು ರೂ. ನಾಣ್ಯ ಹಾಕಿದ್ದಾಳೆ ಅಮ್ಮ. ಕಂಟ್ರಾಕ್ಟರು ಈಗಲೋ ಇನ್ನೊಂಚೂರು ಹೊತ್ತಿನಲ್ಲೋ ಬಂದಾನೆಂದು ಕೂಲಿಯಾಳುಗಳು ಕಾಯುತ್ತಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ತರುಣ, ಬೇಗ ಮನೆ ಸೇರಲು ಬೈಕಿನ ಎಕ್ಸಲೇಟರ್ ಹಿಂಡಿದ್ದಾನೆ. ಎಲ್ಲರೂ ಹೊರಗಡಿಯಿಡುತ್ತಿದ್ದಂತೆ ಒಂದು ಧಾವಂತದಲ್ಲಿ ಸಿಲುಕಿ ಜಗತ್ತು ಸಣ್ಣಗೆ ಕಂಪಿಸುತ್ತಿದೆ. 
ಹೊತ್ತೇರುತ್ತಿದ್ದಂತೆ  ಓಟದ ಥ್ರಿಲ್ ಮಾಯವಾಗಿ ಜಗತ್ತು ಉದ್ವೇಗಗೊಳ್ಳುತ್ತಿದೆ. ಕಂಕುಳಲ್ಲಿ ಪೊರಕೆ-ಕೈಯಲ್ಲಿ ನೀಲಿ ಕಸದ ಬುಟ್ಟಿ ಹಿಡಿದಾಕೆ, ಗರುಡಾ ಮಾಲ್‌ನ ಎಸ್ಕಲೇಟರ್‌ನಲ್ಲಿ ಮೇಲೆ ಬರುತ್ತಿದ್ದಾಳೆ. ಹಿಡೀರಿ ಹಿಡೀರಿ ಅಂತ ಕೂಗುತ್ತಿದ್ದಂತೆ, ಮೊಬೈಲನ್ನು ಸೆಳೆದುಕೊಂಡವನು ಬಸ್ಸಿಳಿದು ಅದೃಶ್ಯನಾಗಲು ಯತ್ನಿಸುತ್ತಿದ್ದಾನೆ. ಐಎಎಸ್ ಪರೀಕ್ಷೆಗಿದು ಮೂರನೇ ಎಟೆಂಪ್ಟು ಅಂದವನು, ಕಳೆದೆರಡು ದಿನಗಳಿಂದ ಎಚ್ಚರಾಗಿಯೇ ಇದ್ದಾನೆ. ಈ ಬಾರಿ ಸಂಬಳ ಹೆಚ್ಚಾದೀತೆಂದು, ತಿಂಗಳ ಕೊನೆಗೆ ದುಡ್ಡು ಉಳಿದೀತೆಂದು, ಈ ವರ್ಷವಾದರೂ ತಿರುಪತಿಗೆ ಹೋಗಿ ಹರಕೆ ತೀರಿಸಬಹುದೆಂದು ಆ ಪಟ್ಟಣಿಗ ಕನಸು ಕಂಡಿದ್ದಾನೆ.  ಕನಸಿನಲ್ಲೂ ನನಸಿನಲ್ಲೂ ಓಡುತ್ತಿದೆ ದುನಿಯಾ ; ಗೆಲುವಿಗಾಗಿ, ಲಾಭಕ್ಕಾಗಿ, ಕೀರ್ತಿಗಾಗಿ. ಬೆಳಗ್ಗೆ ಅಟ್ಟಿದ ದನಕರು ಸಂಜೆ ಹಟ್ಟಿಗೆ ಬರುತ್ತವೆ. ಎಲ್ಲೋ ಹಾರಿ ಹೋದ ಹಕ್ಕಿ ಸಾಯಂಕಾಲ ಗೂಡಿಗೆ ಮರಳುತ್ತದೆ. ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ಹೋದವನು ಹಿಂತಿರುಗುತ್ತಾನೆಯೇ? ಓಡಿ ಹೋದ ಹುಡುಗ ಮತ್ತೆ ಮನೆಗೆ ಬರುತ್ತಾನೆಯೇ? 

ಮುಂದೋಡಿದವ ತನಗಾಗಿ ವೇಗ ತಗ್ಗಿಸುತ್ತಾನೆಂಬ, ಹಿಂದಿದ್ದವನ ನಂಬಿಕೆ ಸುಳ್ಳಾಗಿದೆ. ಓಡುವುದರಷ್ಟೇ ತಪ್ಪಿಸಿಕೊಳ್ಳುವುದೂ ಮುಖ್ಯ ಅಂತ ಕತ್ತಲಲ್ಲಿ ಗಂಡ ಹೆಂಡತಿಗೆ ಹೇಳುತ್ತಿದ್ದಾನೆ. ಆತನ ಕಣ್ತುಂಬಿರುವುದು ಅವಳ ಕೈಗೆ ಗೊತ್ತಾಗಿದೆ.
(ಕಳೆದ ಭಾನುವಾರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ)
        

Read more...

January 08, 2009

ಒಂದು ಶುಭ ಸಮಾಚಾರ

ಹಾಸನ ಜಿಲ್ಲೆಯಲ್ಲಿರುವ ಸಕಲೇಶಪುರದಿಂದ, ತೇಜಸ್ವಿಯವರ ಊರು ಮೂಡಿಗೆರೆಗೆ ಹೋಗುವ ಹಾದಿಯಲ್ಲಿದೆ ರಕ್ಷಿದಿ. ಅಲ್ಲಿಂದ ಒಂದು ಕಿಮೀ ಮುಂದೆ ಬೆಳ್ಳೇಕರೆ. ಒಂದೆರಡು ಅಂಗಡಿಗಳಷ್ಟೇ ಇರುವ, ಈ ಎರಡು ಸ್ಥಳಗಳ ಮಧ್ಯೆ ಇದೆ ರಕ್ಷಿದಿ ಶಾಲೆ. ಈ ೮ರಿಂದ ೧೧ರವರೆಗೆ ಅಲ್ಲಿ ರಂಗ ಜಾತ್ರೆ. ೮ರಂದು 'ಜೈ ಕರ್ನಾಟಕ ಸಂಘ-ಬೆಳ್ಳೇಕೆರೆ' ಹಾಗೂ ಶಾಲಾ ಮಕ್ಕಳ ನಾಟಕಗಳ ಪ್ರದರ್ಶನ. ೯ ಮತ್ತು ೧೦ರಂದು ನೀನಾಸಂ ನಾಟಕಗಳು. ೧೧ರಂದು ಮೈಸೂರಿನ 'ನಟನ' ತಂಡದ ನಾಟಕ. ಇದುವರೆಗೆ ಚಂಪಕಾವತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ 'ಬೆಳ್ಳೇಕೆರೆಯ ಹಳ್ಳಿ ಥೇಟರ್' ಪುಸ್ತಕವಾಗಿ ಆ ರಂಗೋತ್ಸವದಲ್ಲಿ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ
 'ಅಭಿನವ ಪ್ರಕಾಶನ' ಇದನ್ನು ಪ್ರಕಟಿಸಿದೆ.
ಹಿರಿಯ ಚಿಂತಕ ಜಿ.ರಾಜಶೇಖರ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ:
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು 'ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ'ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್, ಮಲೆನಾಡಿನ ಹಳ್ಳಿಯೊಂದರ ರಂಗ ಚಳವಳಿಯ ಕಥನವನ್ನಷ್ಟೇ ಅಲ್ಲ, ಅದು ಆ ಪ್ರದೇಶದ ಜನರ, ಅಂದರೆ ಮನೆಗಳ, ಸಂಸಾರಗಳ ದುಃಖ ದುಮ್ಮಾನ ಹಾಗೂ ಸುಖ ಸಂತೋಷಗಳ ಕಥನವೂ ಆಗಿದೆ. ಈ ಕೃತಿ ರಂಗ ಅಧ್ಯಯನದ ದೃಷ್ಟಿಯಿಂದ ಉಪಯುಕ್ತ ಮಾಹಿತಿ ಒದಗಿಸುವುದರ ಜತೆಗೆ ಸೊಗಸಾದ ಕಾದಂಬರಿಯಂತೆಯೂ ಓದಿಸಿಕೊಳ್ಳುತ್ತದೆ. ರಂಗ ನಿಷ್ಠೆಯ ಜೊತೆ ಮನುಷ್ಯ ಸ್ವಭಾವದ ಓರೆಕೋರೆಗಳ ಬಗೆಗೂ ಲೇಖಕರು ತೋರುವ ಗಾಢ ಅನುರಕ್ತಿಯಿಂದಾಗಿ ಈ ಕೃತಿಯ ಗದ್ಯ ಹೃದಯಂಗಮವಾಗಿದೆ.ಅಕ್ಷರ ಜ್ಞಾನವಿಲ್ಲದ ಆದರೆ ಸ್ವಾಭಿಮಾನಿಯಾದ ದುಡಿಮೆಗಾರ ತರುಣನೊಬ್ಬ ಸ್ವಾಧ್ಯಾಯಿಯಾಗಿ ಅಕ್ಷರ ಕಲಿಯುವ ವೃತ್ತಾಂತದೊಂದಿಗೆ ಪ್ರಾರಂಭವಾಗುವ ಈ ಕೃತಿ, ಸಮುದಾಯವೊಂದು ಅಕ್ಷರ ಮತ್ತು ರಂಗಭೂಮಿಗಳ ಜೊತೆ ಅನುಸಂಧಾನದ ಮುಖಾಂತರ ಸ್ವಾತಂತ್ರ್ಯ, ಅಸ್ಮಿತೆಗಳತ್ತ ನಡೆಯುವುದರ ರೋಮಾಂಚಕ ಕಥನವಾಗಿದೆ.
***
 ಈವರೆಗೆ 'ಚಂಪಕಾವತಿ'ಯಲ್ಲಿ ಮಾತ್ರ ಲಭ್ಯವಿದ್ದ, ಪ್ರಸಾದ್ ರಕ್ಷಿದಿಯವರ ಆ ಗ್ರಾಮೀಣ ರಂಗಭೂಮಿಯ ಆತ್ಮಕಥನಕ್ಕೆ ನೀವು ತೋರಿದ ಪ್ರೀತಿ ದೊಡ್ಡದು. ನನ್ನ ಅನಿಯಮಿತ ಪ್ರಕಾಶನದ ಮಧ್ಯೆಯೂ, ಆ ಕಂತುಗಳನ್ನು ಓದಿ ಪ್ರತಿಕ್ರಿಯಿಸಿದ ಎಲ್ಲವನ್ನೂ ಲೇಖಕರ ಗಮನಕ್ಕೆ ತರಲಾಗಿದೆ. ಪ್ರತಿಕ್ರಿಯಿಸಿದವರಿಗೆ, ಇಲ್ಲಿ ಬಳಸಲು ಅವಕಾಶ ಕೊಟ್ಟ ಪ್ರಸಾದ್ ರಕ್ಷಿದಿಯವರಿಗೆ ಕೃತಜ್ಞತೆಗಳು. 'ಜೈ ಕರ್ನಾಟಕ ಸಂಘ ಬೆಳ್ಳೇಕೆರೆ'ಯ ಬಹ್ವಂಶ ಚಟುವಟಿಕೆಗಳ ನೆಲೆ ರಕ್ಷಿದಿ ಶಾಲೆ. (ಇತ್ತೀಚೆಗೆ ತನ್ನದೇ ಜಾಗದಲ್ಲಿ ಪ್ರತ್ಯೇಕ ಹೊಸ ರಂಗಮಂದಿರದ ನಿರ್ಮಾಣ ಕಾರ್ಯವೂ ಆರಂಭಿಸಿದೆ)ಆ ರಕ್ಷಿದಿ ಶಾಲೆ ಮಂಜೂರಾದದ್ದು ಹೇಗೆಂಬ ಬರೆಹದೊಂದಿಗೆ ಈ ಹಳ್ಳಿ ಥೇಟರ್ ಸರಣಿಗೆ ಮುಕ್ತಾಯ ಹಾಡುತ್ತಿದ್ದೇವೆ.   

ದೇವೇಗೌಡರು ಮತ್ತು ಶಾಲೆ
ನಮ್ಮಲ್ಲಿ ಅನೇಕರಿಗೆ ಮದುವೆಯಾಯಿತು. ನನಗಿಂತ ಹಿರಿಯರಿಬ್ಬರಿಗೆ ಮೊದಲೇ ಮದುವೆಯಾಗಿತ್ತು. ನಾನೂ ಸಂಸಾರಸ್ತನಾದೆ. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಈಗ ಡೈರಿ ಫಾರಂ ಮತ್ತು ತೋಟದ ಜವಾಬ್ದಾರಿ ಎರಡೂ ನನ್ನ ಮೇಲೇ ಬಿದ್ದಿತ್ತು. ನನಗೆ ಸಹಾಯಕನಾಗಿ ಕೃಷ್ಣಮೂರ್ತಿ ಎಂಬವರೊಬ್ಬರು ಹೊಸಬರು ಬಂದಿದ್ದರು. ನಮ್ಮ ರಾತ್ರಿ ಶಾಲೆ ಕುಂಟುತ್ತ ಸಾಗಿತ್ತು. ದೊಡ್ಡವರೆಲ್ಲ ಈವೇಳೆಗೆ ತಕ್ಕಮಟ್ಟಿಗೆ ಓದು ಬರಹ ಕಲಿತದ್ದರಿಂದ ಅವರೆಲ್ಲ ಶಾಲೆಗೆ ಬರುವುದನ್ನು ಕಡಿಮೆ ಮಾಡಿದ್ದರು.  ಹೊಸ ಹುಡುಗರನ್ನು ಮತ್ತು ಮಕ್ಕಳನ್ನು ಕ್ಯಾಮನಹಳ್ಳಿ ಅಥವಾ ಗಾಣದ ಹೊಳೆಯ ಸರ್ಕಾರಿ ಶಾಲೆಗೆ ಸೇರಿಸಿದ್ದೆವು.  ಆ ಕೆಲವು ಮಕ್ಕಳಷ್ಟೇ ರಾತ್ರಿ ಶಾಲೆಗೆ ಬಂದು ಹೋಂ ವರ್ಕ್ ಮಾಡುತ್ತಿದ್ದರು. ನಾವೆಲ್ಲ ಪುರುಸೊತ್ತಿದ್ದಾಗ ಹೋಗಿ ಹರಟೆ ಹೊಡೆಯುತ್ತಿದ್ದೆವು. ಕ್ಯಾಮನಹಳ್ಳಿ ಮತ್ತು ಗಾಣದಹೊಳೆ ಶಾಲೆಗಳು ನಮ್ಮಲ್ಲಿಂದ ಮಕ್ಕಳಿಗೆ ಹೋಗಿ ಬರಲು ಸ್ವಲ್ಪ ದೂರವಾಗುತ್ತಿದ್ದುದರಿಂದ ರಕ್ಷಿದಿಯಲ್ಲೇ ಒಂದು ಸರ್ಕಾರಿ ಶಾಲೆ ಮಾಡಿದರೆ ಒಳ್ಳೆಯದೆಂದು ಯೋಚಿಸಿದೆವು.
ಆ ವೇಳೆಗೆ ಶಿವಶಂಕರ ಡಿಗ್ರಿ ಮುಗಿಸಿ ಊರಿಗೆ ಬಂದರು. ಶಿವಶಂಕರ ಮದನಾಪುರದವರು. ಅವರಿಗೆ ರಕ್ಷಿದಿಯಲ್ಲಿ ಸಣ್ಣ ತೋಟವಿದೆ. ಶಿವಶಂಕರ ಅವರ ತಂದೆ ಮಲ್ಲೇಗೌಡರು ಮತ್ತು ನಮ್ಮ ಗುಂಪಿನ ಇನ್ನೊಬ್ಬ ಸದಸ್ಯ ಮುರಳೀಧರ ಅವರ ತಂದೆ ಮಸ್ತಾರೆ ಮಲ್ಲಪ್ಪಗೌಡರು ಇವರಿಬ್ಬರೂ ಆ ಕಾಲದ ಒಳ್ಳೆಯ ಶಿಕಾರಿ ಜೋಡಿ. ಈ ಸ್ನೇಹಿತರು ಶಿಕಾರಿ ಮಾಡದ ಕಾಡು ಸುತ್ತಮುತ್ತ  ಎಲ್ಲೂ ಇಲ್ಲವೆಂದು ಸುತ್ತಲಿನ ಹಲವು ಗ್ರಾಮಗಳ ಜನರು ಮಾತನಾಡಿಕೊಳ್ಳುತ್ತಿದ್ದರು. ಮಲ್ಲಪ್ಪ ಗೌಡರು ಆ ಕಾಲದ ಗಣ್ಯ ಪ್ಲಾಂಟರ್‌ಗಳಲ್ಲಿ ಒಬ್ಬರು. ನಾವೆಲ್ಲ ಚಿಕ್ಕಂದಿನಲ್ಲಿ ನೋಡಿದ್ದ ಮಲ್ಲಪ್ಪಗೌಡರು ಅವರ ನಡುವಯಸ್ಸಿನಲ್ಲಿಯೇ ತೀರಿಕೊಂಡಿದ್ದರು. ಈಗ ಮಲ್ಲೇಗೌಡರೂ  ಕೂಡಾ ಶಿಕಾರಿ ಮಾಡುತ್ತಿರಲಿಲ್ಲ.  ಒಳ್ಳೆಯ ನಾಟಿ ವೈದ್ಯರೂ ಆಗಿರುವ ಮಲ್ಲೇಗೌಡರು   ಕೆಲಕಾಲ ಶಾಲೆಯಲ್ಲಿ ಮೇಷ್ಟ್ರ ಕೆಲಸವನ್ನೂ ಮಾಡಿ  ಸರ್ಕಾರಿ ತಾಬೇದಾರಿ ಕೆಲಸ ಬೇಡವೆಂದು ಬಿಟ್ಟುಬಿಟ್ಟಿದ್ದರಂತೆ. ಇವರಿಗೆ ಮದನಾಪುರದಲ್ಲಿ ಮನೆಯಿದ್ದು ಅಲ್ಲೂ ಸ್ವಲ್ಪ ಜಮೀನಿದೆ. ಮದನಾಪುರಕ್ಕೆ ರಕ್ಷಿದಿಯಿಂದ ನಾಲ್ಕೈದು ಕಿ.ಮೀ ದೂರವಿದೆ. ರಕ್ಷಿದಿಯಲ್ಲಿನ ತೋಟದ ಉಸ್ತುವಾರಿಗೆಂದು ಶಿವಶಂಕರ ರಕ್ಷಿದಿಯಲ್ಲೇ ಬಂದು ಉಳಿಯತೊಡಗಿದರಲ್ಲದೆ  ನಮ್ಮ ಗುಂಪಿನ ಸದಸ್ಯರೂ ಆದರು. ನಾವೆಲ್ಲ ಸೇರಿ ಶಾಲೆಗಾಗಿ ಹಲವು ತಿಂಗಳುಗಳ ಪ್ರಯತ್ನ ನಡೆಸಿದ ನಂತರ ರಕ್ಷಿದಿಗೊಂದು ಪ್ರಾಥಮಿಕ ಶಾಲೆ ಮಂಜೂರಾಯ್ತು. ಆದರೆ ಶಾಲೆ ನಡೆಸಲು ಕಟ್ಟಡ ಇರಲಿಲ್ಲ. ಛೇರ್‍ಮನ್ ಸಿದ್ದಪ್ಪನವರು ಒಂದು ವರ್ಷದೊಳಗಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಷರತ್ತಿನೊಡನೆ ಪಂಚಾಯತ್ ಕಟ್ಟಡವನ್ನೇ ಬಿಟ್ಟುಕೊಟ್ಟರು. ಶಾಲೆಗೆ ಉಪಾಧ್ಯಾಯರು ಇರಲಿಲ್ಲ ಶಿವಶಂಕರ ಉಚಿತಸೇವೆಯ ಅಧ್ಯಾಪಕರಾಗಲು ಒಪ್ಪಿ ರಕ್ಷಿದಿ ಶಾಲೆಯ ಪ್ರಪ್ರಥಮ ಉಪಾಧ್ಯಾಯರಾದರು. ಹೀಗೆ " ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ-ರಕ್ಷಿದಿ" ಪ್ರಾರಂಭವಾಯಿತು. ನಾವು ಗ್ರಾಮಪಂಚಾಯತ್‌ಗೆ ನೀಡಿದ ವಾಗ್ದಾನದಂತೆ  ಒಂದು ವರ್ಷದೊಳಗೆ ಶಾಲೆಗಾಗಿ ಬೇರೆ ಕಟ್ಟಡ ಕಟ್ಟಿಕೊಳ್ಳಬೇಕಿತ್ತು. ಅಲ್ಲದೆ ಪಂಚಾಯತ್‌ನಲ್ಲಿ ಸಭೆ ಸಮಾರಂಭಗಳಿದ್ದಾಗ ಶಾಲೆಗೆ ರಜೆ ಕೊಡಬೇಕಾಗುತ್ತಿತ್ತು. ಇದರಿಂದಾಗಿ ಆಗಾಗ ಪಾಠಕ್ಕೆ ತೊಂದರೆಯಾಗುತ್ತಿತ್ತು.
ಆಗ ಪಂಚಾಯತ್‌ನ ಕಾರ್ಯದರ್ಶಿಯಾಗಿದ್ದ ಜಯಪ್ರಕಾಶ ಬೆಳ್ಳೇಕೆರೆಯಲ್ಲೇ ವಾಸವಿದ್ದರಲ್ಲದೆ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ನಮ್ಮೆಲ್ಲರಿಗೆ ಒಳ್ಳೆಯ ಸ್ನೇಹಿತರಾಗಿದ್ದ ಜಯಪ್ರಕಾಶ ಸ್ವತ : ಓಡಾಡಿ ಶಾಲೆಗೆ ಒಂದು ಕೊಠಡಿಯನ್ನು ಮಂಜೂರು ಮಾಡಿಸಿಕೊಟ್ಟರು. ಕಟ್ಟಡವೇನೋ ಮಂಜೂರಾಗಿತ್ತು. ಆದರೆ ಕಟ್ಟಲು ಸ್ಥಳವೇ ಇರಲಿಲ್ಲ. ಪಕ್ಕದಲೇ ಇದ್ದ ಸರ್ಕಾರಿ ಜಾಗವೂ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅರಣ್ಯ ಇಲಾಖೆಯ ಪಾಲಾಗಿತ್ತಲ್ಲದೆ ರೈತಸಂಘದ ವಿರುದ್ದವಾಗಿ  ನಾವೇ ಅರಣ್ಯ ಇಲಾಖೆಯ ಬೆಂಬಲಕ್ಕೆ ನಿಂತು ಅಲ್ಲಿ ಗಿಡ- ಮರ, ಬಿದಿರು ಇತ್ಯಾದಿ ನೆಡಿಸಿದ್ದೆವು. ಅಲ್ಲೀಗ ಶಾಲೆಯ ಕಟ್ಟಡವನ್ನು ಕಟ್ಟಲು ಅರಣ್ಯ ಇಲಾಖೆ ತಕರಾರು ಮಾಡಿತು. ಗಿಡ ನೆಡುವಾಗ ನಮ್ಮ ಸಹಾಯ , ಬೆಂಬಲ ಪಡೆದವರೇ ಶಾಲೆಯ ಕಟ್ಟಡ ಕಟ್ಟಲು ಅಡ್ಡಿ ಮಾಡಿದರು.
ಅಂದಿನ ಶಾಸಕರಾಗಿದ್ದ ಬಿ.ಡಿ ಬಸವರಾಜ್‌ರಲ್ಲಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡೆವು. ಅವರು ಅರಣ್ಯ ಇಲಾಖೆ ಜಮೀನನ್ನು ಶಾಲೆಗೆ ಮಂಜೂರು ಮಾಡಲು ಬರುವುದಿಲ್ಲವೆಂದೂ, ಆದರೆ ನೀವು ನಿಮ್ಮಷ್ಟಕ್ಕೆ  ಆ ಸ್ಥಳದಲ್ಲಿ ಶಾಲೆಯ ಕಟ್ಟಡ ಕಟ್ಟಿ; ಮುಂದೆ ನೋಡೋಣ ಎಂದರು. ನಮಗೆ ಅಷ್ಟೇ ಸಾಕಾಗಿತ್ತು. ನಾವು ಕೂಡಲೇ ರಕ್ಷಿದಿಯಲ್ಲಿಹಾನುಬಾಳು- ಸಕಲೇಶಪುರ ರಸ್ತೆಯಿಂದ ನೂರಡಿ ದೂರದಲ್ಲಿ ರಸ್ತೆಗೆ ಕಾಣದಂತೆ ಬಿದಿರು ಮೆಳೆಗಳ ನಡುವೆ ಒಂದಿಷ್ಟು ಜಾಗವನ್ನು ತಟ್ಟು ಮಾಡಿ ಒಬ್ಬ ಕಂಟ್ರಾಕ್ಟರನ್ನು ಹಿಡಿದು ಕಟ್ಟಡ ಕಟ್ಟಿ ಬಿಟ್ಟೆವು. ನಮ್ಮ ಪ್ರಭಾಕರ-ವೀರಸಿದ್ದೇಶ ಇವರೆಲ್ಲಾ ಗಾರೆ ಕೆಲಸ ಮಾಡಿದರು. ಗಾಣದ ಹೊಳೆಯ ಅಬ್ಬಾಸ್ ಅನ್ನುವ ಕಂಟ್ರಾಕ್ಟರನಿಗೆ ಬಿಲ್ ಆಗದಿದ್ದರೆ ನಾವು ಕೊಡುತ್ತೇವೆಂದು ಹೇಳಿ ಕೆಲಸಕ್ಕೆ ಕರೆದುಕೊಂಡು ಬಂದಿದ್ದೆವು. ಶಾಲೆಯ ಉದ್ಘಾಟನೆಯೂ ಆಯಿತು. ಆದರೆ ನಮ್ಮ ಭಯ ನಿಜವಾಯಿತು. ಕಟ್ಟಡಕ್ಕೆ ಹಣ ಕೊಡಬೇಕಾದ ಬಿ.ಡಿ ಒ ಸಾಹೇಬರು ಇದು ಅರಣ್ಯ ಇಲಾಖೆ ಜಾಗವಾದ್ದರಿಂದ ಬಿಲ್ ಕೊಡಲು ಬರುವುದಿಲ್ಲವೆಂದು ತಕರಾರು ತೆಗೆದರು. ಕಂಟ್ರಾಕ್ಟರ್ ನಮ್ಮನ್ನು ಪೀಡಿಸತೊಡಗಿದ. ನಾವು ದುಡ್ಡಿಲ್ಲದೆ ಕಂಟ್ರಾಕ್ಟರ್‌ನಿಂದ ಕದ್ದು ತಿರುಗುವ ಪರಿಸ್ಥಿತಿ ಬಂತು!.
ಆಗ ಲೋಕೋಪಯೋಗಿ ಮಂತ್ರಿಗಳಾಗಿದ್ದ ಹೆಚ್.ಡಿ ದೇವೇಗೌಡರು ಇದೇ ದಾರಿಯಾಗಿ ಬರುವ ಕಾರ್ಯಕ್ರಮವಿದೆ ಎಂದು ತಿಳಿಯಿತು. ಆ ದಿನ ನಾವೆಲ್ಲ ಸೇರಿ ಶಾಲೆಯ ಮಕ್ಕಳನ್ನೂ ಮತ್ತೊಂದಷ್ಟು ಗ್ರಾಮಸ್ಥರನ್ನೂ ಸೇರಿಸಿ ದಾರಿಯಲ್ಲಿ ಗುಂಪುಕಟ್ಟಿ ನಿಂತು ದೇವೇಗೌಡರನ್ನು ತಡೆದು ನಿಲ್ಲಿಸಿ ನಮ್ಮ ಅಹವಾಲನ್ನು ಸಲ್ಲಿಸಿದೆವು. ನಮ್ಮ ಸಮಸ್ಯೆಗಳನ್ನೆಲ್ಲಾ ಕೇಳಿದ ದೇವೇಗೌಡರು, ಜೊತೆಯಲ್ಲೇ ಇದ್ದ ಬಿ.ಡಿ.ಒ ಸಾಹೇಬರಿಗೆ 
" ಯಾವ ಸ್ಕೂಲ್ ರೀ ಇದು" 
" ಪ್ರೈಮರಿ ಸ್ಕೂಲ್ ಸಾರ್ "
" ಅಂದರೆ ಯಾರದ್ದು ಸ್ಕೂಲ್ "
" ಗೌರ್ಮೆಂಟ್ ಸ್ಕೂಲ್ ಸಾರ್" 
" ಸರೀರಿ, ಜಾಗ ಯಾರದ್ದು ?"
" ಸೋಷಿಯಲ್ ಫಾರೆಸ್ಟ್ ಸಾರ್" 
" ಅಂದ್ರೆ ಸರ್ಕಾರಿ ಜಾಗ ಅಲ್ವೇನ್ರಿ"
" ಹೌದು ಸಾರ್, ಆದ್ರೆ...........!"
" ಆದ್ರೆ ಗೀದ್ರೆ ಏನೂ ಇಲ್ಲ, ಸರ್ಕಾರಿ ಜಾಗದಲ್ಲಿ ಸರ್ಕಾರಿ ಶಾಲೆ ಕಟ್ಟಿದ್ದಾರೆ ಅಷ್ಟೆ ಅಲ್ವೇನ್ರಿ ? ಒಟ್ಟಿನಲ್ಲಿ ಮಕ್ಕಳಿಗೆ ಅನುಕೂಲ ಆಗ್ಬೇಕು. ಒಂದು ವಾರದೊಳಗೆ ಬಿಲ್ ಸೆಟ್ಲ್ ಮಾಡಿ ನನಗೆ ವರದಿ ಮಾಡಿ- ನೋಟ್ ಮಾಡ್ಕೊಳ್ಳಿ" ಎಂದರು. ಹಣ ಮಂಜೂರಾಯಿತು. 
ಕೂಡಲೇ ಸುತ್ತ ಕಾಡು ಕಡಿದು ಕಾಡೊಳಗಿದ್ದ ಶಾಲೆ ರಸ್ತೆಗೆ ಕಾಣುವಂತೆ ಮಾಡಿದೆವು. 

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP