May 19, 2013

ಶೇಷಶಾಯಿ


ಬೆಳಗ್ಗೆ ಆರೂ ಮುಕ್ಕಾಲಕ್ಕೆ ಎದ್ದೆ. ಏಳಕ್ಕೆ ಬೈಕು ಸ್ಟಾರ್‍ಟು ಮಾಡಿದೆ. ಚುನಾವಣಾ ಆಯೋಗ ವ್ಯವಸ್ಥೆ ಮಾಡಿದ್ದ ನಂಬರಿನಿಂದ ನಿನ್ನೆ ಮೊಬೈಲಿಗೆ ಬಂದ ಮೆಸೇಜಿನಲ್ಲಿ ಮತಗಟ್ಟೆಯ ವಿಳಾಸ ಸ್ಪಷ್ಟವಾಗಿತ್ತು. ಸರಕಾರಿ ಮಾಡೆಲ್ ಪ್ರೈಮರಿ ಸ್ಕೂಲ್, ದಾಸರಹಳ್ಳಿ, ಶ್ರೀನಗರ, ಗವಿಗಂಗಾಧರೇಶ್ವರ ದೇವಸ್ಥಾನದ ಎದುರು, ರೂಂ ನಂಬರ್ ೬. ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿದ ಬಳಿಕ, ಮೊದಲ ಬಾರಿ ವೋಟು ಮಾಡುವ ಉತ್ಸಾಹ. ನಾನೂ ಇಲ್ಲಿಯವನೇ ಅಂತ ಸ್ವಲ್ಪ ಹೆಚ್ಚಾದ ಭಾವ.

ದಾರಿ ಉದ್ದಕ್ಕೂ ಸ್ಟೀಲ್ ಟೇಬಲ್‌ಗಳು, ಫೈಬರ್ ನೀಲಿ-ಕೆಂಪು ಚಯರ್‌ಗಳನ್ನು ಹಾಕಿ ನೂರಾರು ಜನ ಕೂತಿದ್ದರು. ಏಳರ ಹೊತ್ತಿಗಾಗಲೇ ಕಾವು ಏರತೊಡಗಿತ್ತು. ಕಾಳಿದಾಸ ಸರ್ಕಲ್‌ನಲ್ಲಿ ಬಿಳಿ ಅಂಗಿ ತೊಟ್ಟು, ಸೆಖೆಗೆ ಕಾಲರ್ ಮೇಲೆಳೆದುಕೊಳ್ಳುತ್ತಿದ್ದವನ ಕತ್ತಿನಲ್ಲಿ ನಾಲ್ಕಿಂಚು ದಪ್ಪದ ಚಿನ್ನದ ಸರ ಆಗಲೇ ಹೊಳೆಯುತ್ತಿತ್ತು. ಆತನ ಕೈ ಬೆರಳುಗಳ ಉಂಗುರಗಳು, ಚಿನ್ನದ ಬಣ್ಣದ ವಾಚು, ಬಿಳಿ ಚಪ್ಪಲಿ ನೋಡಿ, ಮನಸ್ಸಲ್ಲೇ ಕ್ಯಾಕರಿಸಿಕೊಂಡು ಹೋದೆ. ಇನ್ನೇನು ಗವಿಗಂಗಾಧರೇಶ್ವರ ದೇವಸ್ಥಾನ ತಲುಪಬೇಕು ಅನ್ನೋವಾಗ ಒಂದು ಮತಗಟ್ಟೆ ಕಾಣಿಸಿತು. ವಾಹ್, ದೇವಸ್ಥಾನದ ವಿರುದ್ಧ ದಿಕ್ಕಿನಲ್ಲೇ ಇದೆಯಲ್ಲ ಅಂತ ಬೈಕು ಸ್ಟಾಂಡು ಎಳೆದೆ. ಮತ್ತೆ ಊಟದ ಟೇಬಲುಗಳು. ಕಾಗದದ ಹಾಳೆಗಳನ್ನು ಮತ್ತೆ ಮತ್ತೆ ತಿರುಗಿಸುತ್ತಿರುವ ಪಾರ್ಟಿ ಕಾರ್ಯಕರ್ತರು. ನನ್ನ ವೋಟರ್ ಐಡಿಯನ್ನ ಅವರತ್ತ ಚಾಚಿದೆ.

’ಅಲ್ಲಾರೀ ರಾಘವೇಂದ್ರ ಬ್ಲಾಕ್‌ನೋರು ಇಲ್ಲಿ ತನಕಾ ಬರ್‍ತೀರಲ್ಲ, ಇಲ್ಲಿರೋದು ಸೆಕೆಂಡ್ ಕ್ರಾಸ್ ಮತ್ತು ಫೋರ್ತ್ ಕ್ರಾಸ್‌ದು ಮಾತ್ರ’ ಅಂದರು. ’ನಮ್ದು ಮಾಡೆಲ್ ಸ್ಕೂಲ್ ಅಂತ ಮೆಸೇಜು ಬಂದಿದೆ. ಎಲ್ಲಿ ಬರತ್ತೆ ಅದು?’ ಅಂತ ಕೇಳಿದೆ. ’ಮೇಲ್ಗಡೆ ಇರಬೇಕು ನೋಡಿ’ ಅಂತ ತೀರ ನಿರ್ಲಕ್ಷ್ಯದಿಂದ ಅಂದರು. ಈಗ ನನಗೆ ಕೊಂಚ ಅವಮಾನವೂ, ಅನುಮಾನವೂ ಒಟ್ಟಿಗೇ ಆಯಿತು !  ಬೈಕು ಸ್ಟಾಂಡೆಳೆದು ನೇರವಾಗಿ ದೇವಸ್ಥಾನದ ಎದುರು ನಿಲ್ಲಿಸಿದೆ. ನೂರು ಮೀಟರ್ ದೂರದಲ್ಲಿ ಇನ್ನೊಂದು ಮತಗಟ್ಟೆ. ಅಲ್ಲಿ ಶಿಶುವಿಹಾರ ಅಂತ ಬರೆದಿತ್ತು. ನಮ್ಮ ಏರಿಯಾದ ಹೆಸರೂ ಹೊರಗಿದ್ದ ಪಟ್ಟಿಯಲ್ಲಿ ಇರಲಿಲ್ಲ. ಪೊಲೀಸರನ್ನು ವಿಚಾರಿಸಿದರೆ, ಮುಂದೆ ಇರಬೇಕು ನೋಡಿ ಅಂದರು. ಮತ್ತೆ ಮುಂದಕ್ಕೆ ಹೋದದ್ದಾಯಿತು. ಅದೂ ದೇವಸ್ಥಾನದ ಎದುರಲ್ಲೇ ಇನ್ನೊಂದು ಮತಗಟ್ಟೆ . ಆದರೆ.. ಊಹೂಂ ಮಾಡೆಲ್ ಸ್ಕೂಲ್ ಅಲ್ಲ. ಆ ಮತಗಟ್ಟೆಯ ಎದುರು ಬೈಕು ಕೊಂಚ ಹೆಚ್ಚೇ ಡುರುಡುರು ಶಬ್ದ ಮಾಡಿದ್ದಕ್ಕೆ ಪೊಲೀಸೊಬ್ಬ ಲಾಠಿ ಎತ್ತಿ ಬೈದೇಬಿಟ್ಟ !

ವಾಚು ನೋಡಿದರೆ ಗಂಟೆ ಎಂಟೂವರೆ ! ಹೊಟ್ಟೆ ಚುರುಚುರು ಅನ್ನುತ್ತಿತ್ತು. ಎಲ್ಲಪ್ಪಾ ಇದೆ ಈ ಮಾಡೆಲ್ ಸ್ಕೂಲ್ ಅಂದುಕೊಂಡು, ದಾರಿಯುದ್ದಕ್ಕೂ ಇರುವ ಟೇಬಲ್‌ಗಳಲ್ಲಿ ವಿಚಾರಿಸಿಕೊಂಡು ಮನೆ ಬಳಿ ಬಂದಾಗ ಗಂಟೆ ಒಂಭತ್ತು. ಈ ಬಾರಿ ಓಟು ಹಾಕಕ್ಕಾಗಲ್ಲ ಅಂತ ಅನ್ನಿಸತೊಡಗಿದರೂ, ಛಲ ಬಿಡದೆ ಮತ್ತೆ ಮಾಡೆಲ್ ಸ್ಕೂಲನ್ನು ಗೂಗಲಿಸಿದ್ದಾಯಿತು. ಅರ್ಧ ಗಂಟೆ ಗೂಗಲ್‌ನಲ್ಲಿ ಸುತ್ತಾಡಿದರೂ ನನಗೆ ಯಾವ ದಾರಿಯೂ ಸಿಗಲಿಲ್ಲ. ವೋಟರ್ ಸ್ಲಿಪ್ ಮನೆಮನೆಗೆ ತಲುಪಿಸ್ತೀವಿ ಅಂದೋರು ತಲುಪಿಸಲಿಲ್ಲ. ಈಗ ಮೆಸೇಜು ಕಳ್ಸಿರೋ ಅಡ್ರೆಸ್‌ನಲ್ಲಿ ಮತಗಟ್ಟೆಯೂ ಇಲ್ಲ ಅಂತ ಎಲ್ಲರಿಗೂ ಮನಸೋಇಚ್ಚೆ ಬೈದುಕೊಂಡೆ.

ಗಂಟೆ ಹತ್ತಾಗಿತ್ತು. ನಮ್ಮ ಸೀರಿಯಲ್ ಆರ್ಟಿಸ್ಟ್‌ಗಳು, ಸಿನಿಮಾ ತಾರೆಯರು ಓಟ್ ಹಾಕಿ ಓಟ್ ಹಾಕಿ ಅಂದಿದ್ದು, ನಮ್ಮ ಅಪ್ಪ ಊರಿನಲ್ಲಿ ಮನೆಮನೆ ಸುತ್ತಿ ಪ್ರಚಾರ ಮಾಡುತ್ತಿದ್ದಿದ್ದು, ನಾವು ಹೈಸ್ಕೂಲಿನಲ್ಲಿ ಮಂತ್ರಿಮಂಡಲ ರಚನೆಗೆ ಓಟು ಮಾಡಿದ್ದು ಇತ್ಯಾದಿ ಎಲ್ಲ ನೆನಪಾಗಿ ಕೊನೇ ಪ್ರಯತ್ನ ಅಂತ ಮನೆಯಿಂದ ಹೊರಟೆ. ಕಾಳಿದಾಸ ಸರ್ಕಲ್‌ನಿಂದ ಬಲಕ್ಕೆ ತಿರುಗಿದೆ. ಈಗ ಅಲ್ಲಿ ಹೊಸ ಟೇಬಲ್‌ಗಳು ಬಂದಿದ್ದವು. ವೋಟರ್ ಐಡಿಯನ್ನು ಮತ್ತೆ ಅವರತ್ತ ಚಾಚಿದೆ. ಒಂದೆರಡು ಟೇಬಲ್ಗಳಲ್ಲಿ ವಿಚಾರಿಸಿದ ಬಳಿಕ, ಮತ್ತೊಂದರಲ್ಲಿ ನಮ್ಮ ೧೪ನೇ ಮುಖ್ಯರಸ್ತೆಯ ಪ್ರಿಂಟ್‌ಔಟ್‌ಗಳು ಸಿಕ್ಕಿದವು. ಪರವಾಗಿಲ್ವೇ..ಅಲ್ಲಿ ಕೂತಿದ್ದ ನಾಲ್ವರು ಹುಡುಗಹುಡುಗಿಯರು ಒಂದು ಟ್ಯಾಬ್‌ನ್ನೂ ಹಿಡಿದುಕೊಂಡು, ಅದರಲ್ಲಿ ಸೀರಿಯಲ್ ನಂಬರ್ ಹುಡುಕುತ್ತಿದ್ದರು. ಕಾರ್ಡ್ ಕೊಟ್ಟು, ಪಟ್ಟಿಯಲ್ಲಿ ಈ ಹೆಸರಿದೆಯಾ ನೋಡಿ ಅಂದೆ. ಕೂತಿದ್ದವಳು ’ಸಿಗ್ತಿಲ್ಲಾ ಅಂಕಲ್’ ಅಂದಳು. ಹಾಗಿದ್ದರೆ ಒಂಚೂರು ೧೫ನೇ ಮುಖ್ಯರಸ್ತೆಯ ಪ್ರಿಂಟ್‌ಔಟ್‌ಗಳಲ್ಲೂ ನೋಡಿ ಅಂದೆ. ’ಇಲ್ಲ ಅಂಕಲ್. ಎರಡರಲ್ಲೂ ಇಲ್ಲ ಅಂಕಲ್’ ಅಂದಳು. ಹೆಸರು ಸಿಗದೆ ಇದ್ದಿದ್ದು ಬೇರೆ, ನನ್ನ ವಯಸ್ಸಿನವಳೊಬ್ಬಳು ನನ್ನನ್ನೇ ಅಂಕಲ್, ಅಂಕಲ್ ಅನ್ನೋದು ಬೇರೆ- ಹೀಗೆ ಎರಡೂ ಸೇರಿ ಸಿಟ್ಟು ಮೂಗಿನ ತುದಿಗೆ ಬಂತು.

ಅದು ಯಾವ ದೇವರ ದಯೆಯೊ ಗೊತ್ತಿಲ್ಲ. ಅವಳು ದೂರದಿಂದ ಕರೆದಳು ’ಅಂಕಲ್ ಬನ್ನಿ ಬನ್ನಿ..ಸಿಗ್ತು.’ ವೋಟರ್ ಸ್ಲಿಪ್‌ನಲ್ಲಿ ವಯಸ್ಸು ನಮೂದಿಸಿದ ಆ ಹುಡುಗಿ, ವೋಟರ್ ಸ್ಲಿಪ್ ಕೊಡುತ್ತಾ ’ತಗೊಳ್ಳಿ ಸರ್’ ಅಂದ್ಳು. ಖುಶಿ ಇಮ್ಮಡಿ. ’ಎಲ್ಲಿದೆ ಮಾಡೆಲ್ ಸ್ಕೂಲ್?’ ಅಂದೆ. ’ಇಲ್ಲೇ ಮೇಲಕ್ಕಿದೆ ನೋಡಿ’ ಅಂದಳು. ಹತ್ತೆಜ್ಜೆ ಹಾಕಿದರೆ ಅಲ್ಲೇ ಇದೆ ಮಾಡೆಲ್ ಸ್ಕೂಲು. ನನಗೆ ಬಂದ ಮೆಸೇಜಿನಲ್ಲಿ ದೇವಸ್ಥಾನದ ಎದುರೇ ಇದೆ ಅಂದಿದ್ದ ಆ ಸ್ಕೂಲ್‌ಗೂ ದೇವಸ್ಥಾನಕ್ಕೂ ಇರೋದು ೧ ಕಿಮೀ ದೂರ ! ಆನ್‌ಲೈನ್ ಮೂಲಕ ಸರಾಗವಾಗಿ ವೋಟರ್ ಐಡಿ ಮಾಡಿಸಿಕೊಂಡಿದ್ದ ನಾನು, ಈ ವೋಟರ್ ಸ್ಲಿಪ್‌ಗಾಗಿ, ಮತಗಟ್ಟೆ ಹುಡುಕೋದಕ್ಕಾಗಿ ಪಟ್ಟ ಕಷ್ಟವನ್ನು ನೆನೆನೆನೆದು, ವೋಟ್ ಮಾಡಿದ ನಂತರವೂ ಮಾಡೆಲ್ ಸ್ಕೂಲಿನ ಮತಗಟ್ಟೆಯಲ್ಲಿ ಅರ್ಧ ಗಂಟೆ ಕುಳಿತಿದ್ದು ಬಂದೆ ! ಬೆಳಗ್ಗೆ ಏಳಕ್ಕೆ ಮನೆಯಿಂದ ಹೊರಟ ನಾನು, ವೋಟ್ ಮಾಡಿ ಹೊರ ಬಂದಾಗ ಗಂಟೆ ಹನ್ನೊಂದಾಗಿತ್ತು.

ಸಂಜೆ ಐದಕ್ಕೆ ಮುಗಿಯಬೇಕಿದ್ದ ಮತದಾನವನ್ನು ಆರು ಗಂಟೆಯವರೆಗೆ ವಿಸ್ತರಿಸಿದ್ದರು. ಆದರೆ ಆರು ಗಂಟೆಗೇ ಮೋರ್ ಮಾಲ್‌ನಲ್ಲಿ ಜನ ತುಂಬಿತುಳುಕುತ್ತಿದ್ದರು. ಅಲ್ಲಿ ಮಾವಿನ ಹಣ್ಣುಗಳನ್ನು ಆರಿಸುವಾಗ, ಕುರುಕುರೆಗೆ ಕೈ ಹಾಕುವಾಗ, ಶರ್ಟುಗಳನ್ನು ಕನ್ನಡಿಯೆದುರು ಹಿಡಿದು ನೋಡುವಾಗ, ಕ್ರೆಡಿಟ್ ಕಾರ್ಡುಗಳನ್ನು ಗೀಚಿ ಸಹಿ ಹಾಕುವಾಗ, ನಾನು ಅವರೆಲ್ಲರ ಬೆರಳುಗಳನ್ನೇ ನೋಡುತ್ತಿದ್ದೆ. ಊಹೂಂ..ಎಲ್ಲೂ ಶಾಯಿಯ ಗುರುತೇ ಇಲ್ಲ. ಯಾರೋ ಖರೀದಿಸಿದ್ದನ್ನು ಪ್ಲಾಸ್ಟಿಕ್‌ಗಳಿಗೆ ತುಂಬುವ ಕೆಲವು ಕೈಗಳಲ್ಲಿ ಶಾಯಿ ಗುರುತು ಕಾಣಿಸಿತು. ರಾತ್ರಿ ಮನೆಗೆ ಹಿಂದಿರುವಾಗ, ಹಲವು ಬೀದಿಗಳಲ್ಲಿ ಪೇಪರುಗಳು ಚೆಲ್ಲಾಡಿದ್ದವು. ಕೆಲವು ಬೀದಿಗಳಲ್ಲಿ ಇನ್ನೂ ಟೇಬಲುಗಳು ಮಾತ್ರ ಉಳಿದಿದ್ದವು. ಮನೆಗೆ ಬಂದರೆ,ನಮ್ಮ ಅಪಾರ್ಟ್‌ಮೆಂಟಿನ ಸೆಕ್ಯುರಿಟಿ ಗಾರ್ಡ್, ರೂಪಾಯಿ ೫೦೦ರ ಆಸೆಗೆ ವೋಟು ಮಾಡಲು ರಾಮನಗರಕ್ಕೆ ಹೋಗಿದ್ದ. ಉಳಿದ ಮನೆಗಳವರು, ನಮ್ಮದು ಮಹಾಲಕ್ಷ್ಮಿ ಲೇಔಟ್‌ನಲ್ಲಿದೆ, ನಂದಿನಿ ಲೇಔಟ್‌ನಲ್ಲಿದೆ..ಅಷ್ಟು ದೂರ ಹೋಗಲಿಕ್ಕಾಗಲಿಲ್ಲ ಅಂದರು ! ಟಿವಿ ಒಂಭತ್ತರಲ್ಲಿ ಹೂಗಾರ್, ಟೇಬಲ್ ಸುತ್ತ ನಾಲ್ವರನ್ನು ಕೂರಿಸಿಕೊಂಡು ಮಾತಾಡುತ್ತಿದ್ದ. ಪಾಲ್ಗಡಲಲ್ಲಿ ಮಲಗಿರುವ ಶೇಷಶಾಯಿಯಂತೆ ನಾನೂ, ಟಿವಿಯೆದುರು ಮಲಗಿಕೊಂಡು ನನ್ನ ಬೆರಳ ಶಾಯಿಯನ್ನು ನೋಡಿಕೊಂಡೆ. ಶೇಕಡಾ ಅರುವತ್ತೋ ಅರುವತ್ತೆರಡೋ ಮತದಾನ. ಯಾವುದಕ್ಕೂ ಬಹುಮತ ಬಾರದೆ ಮುಂದೆ ಚೌಕಾಸಿ ವ್ಯಾಪಾರ. ನಾವು ನಂಬಿ ನಮ್ಮಿಂದ ವೋಟು ಪಡೆದುಕೊಂಡವನೇ ನಾಳೆ ಯಾವ ಆಪರೇಷನ್‌ಗೆ ಬಲಿಯಾಗುತ್ತಾನೋ ಯಾರಿಗೆ ಗೊತ್ತು?

ಈ ಶೇಷಶಾಯಿಗೆ ಇನ್ನೆಷ್ಟು ಆಯುಸ್ಸು?!    
(On May 5th 2013)

Read more...

June 09, 2012

ರಮೇಶ ಎಂಬ ಖಳನಾಯಕ

ರಮೇಶ ಎಂಬ ಖಳನಾಯಕ

ಮಾತಿನಲಿ ಮಹಾ ಜಿಪುಣ ಕೊಂಕು ಗೇಲಿಯಲಿ ನಿಪುಣ 
ಕಣ್ಣಿನಲಿ ಕೆಂಡ, ಚೂರಿ ಮೀಸೆ, ಎದೆ ಕಬ್ಬಿಣದ ಕುಲುಮೆ 
ನರ ಉಬ್ಬಿದ ಆಜಾನುಬಾಹು, ಮರುಕದಲ್ಲಿ ವೀರಬಾಹು !
ಸದಾ ಕನ್ಯಾಬಂಧನ, ದೀರ್ಘ ಚುಂಬನ, ಕರೆವಾಣಿ ರಿಂಗಣ.

ಒರಟು ದಪ್ಪ ಬೆರಳುಗಳಲಿ ಪೋಣಿಸಿಕೊಳುವ ಸಿಗರೇಟು 
ತ್ರಿಕಾಲ 'ಅನಾಮಿಕಾಭ್ಯಾಂ ನಮಃ ಮಧ್ಯಮಾಭ್ಯಾಂ ನಮಃ'  
ಹೆಸರು ರಮೇಶ ಕೋಪ ಹಮೇಶಾ ಅನುಗಾಲ ಪರವಶ.

ಹುಟ್ಟು ಪ್ರತಿಭಾವಂತ ಸಾಹಸವಂತ ಕ್ಷಣಕ್ಷಣಕು ಧಾವಂತ
ವಯಸ್ಸಿನಲಿ ಸಣ್ಣ, ಕೆಂಪು ತುಟಿ ಸುಂದರಿಯರಿಗೆ ಸುಣ್ಣ !
ಪಾತ್ರ ಪ್ರವೀಣ, ನಟನಾ ಜಾಣ, ಪ್ರೀತಿಯಲಿ ದುಶ್ಯಾಸನ.
ಅಕಾರಣ ವೈರಿ, ಅನಗತ್ಯ ವ್ಯಾಮೋಹಿ, ಅತ್ಯಧಿಕ ಗರ್ವಿ
ಮಾತಿನ ಮೊನೆಯಲ್ಲಿ ಎಲ್ಲವನೂ ಚುಚ್ಚಿಡುವ ಪ್ರವೃತ್ತಿ
ಮಹಾರಾಜನ ವೇಷ ಕಳಚಿದರೂ ಬೇಕು ಪಟ್ಟದ ಕತ್ತಿ !

ಕೇಳಿ ಅವನ ಅಟ್ಟಹಾಸ -
'ಬರಲಿ ಎಲ್ಲಿದ್ದಾನೆ ವರಾಹ, ಎಲ್ಲಿ ನರಸಿಂಹ?'
ಅವರ ಎದೆ ಸೀಳುವ ಉಗುರಿಗೂ ಹಾಕಿದ್ದಾನೆ ಬಣ್ಣ ! 
ಎಲ್ಲರೂ ಅಂತಾರೆ ಇವನಿಗೆ ಅಣ್ಣ ಅಣ್ಣ
ಇದೆಂಥಾ ಬಾಂಡ್  ಅಣ್ಣ
ಇವನೆ ಖಳನಾಯಕ - ಎಲ್ಲರಿಗೂ ಅಣ್ಣ !

Read more...

April 04, 2012

ಸೀತೆ ಕಂಡ ರಾಮನವನಮಿ !


ಜಿಂಕೆಗೆ ಆಸೆಪಟ್ಟು ಮೋಸಹೋದ ಸೀತೆ, ರಾಮನ ನಿಜಭಕ್ತ ಹನುಮಂತನೇ ಕಣ್ಣೆದುರು ಬಂದರೂ ನಂಬುವುದು ಹೇಗೆ? ಮಾಯಾಜಿಂಕೆಯನ್ನು ಬಯಸಿದ ಸೀತೆಯನ್ನು ಅಗ್ನಿಪರೀಕ್ಷೆಗೊಡ್ಡದೆ ರಾಮನಾದರೂ ಸ್ವೀಕರಿಸುವುದು ಹೇಗೆ? ಚಿನ್ನವಾದರೂ ಪುಟಕ್ಕಿಡಬೇಕು ಅಂತ ರಾಮನಿಗೆ ಅನ್ನಿಸಿತಾ? ಸೀತೆಯ ಬದುಕಿನಲ್ಲಿ ಮೂರು ಮಹತ್ವದ ಘಟ್ಟಗಳು- ಮಾಯಾಜಿಂಕೆಯನ್ನು ಬಯಸಿದ್ದು, ಹನುಮಂತನಿಂದ ರಾಮನ ಉಂಗುರ ಸ್ವೀಕರಿಸಿ ತನ್ನ ಚೂಡಾಮಣಿಯನ್ನು ಕೊಟ್ಟದ್ದು ಮತ್ತು ಅಯೋಧ್ಯೆಯಲ್ಲಿ ಅಗ್ನಿಪರೀಕ್ಷೆಗೆ ಒಳಗಾದದ್ದು.
ಇವುಗಳಲ್ಲಿ ಈ ಉಂಗುರ ಪ್ರಕರಣ, ಯಕ್ಷಗಾನ ತಾಳಮದ್ದಳೆಯಲ್ಲಿ ’ಚೂಡಾಮಣಿ’ ಪ್ರಸಂಗವೆಂದೇ ಪ್ರಸಿದ್ಧ. ನಾಲ್ಕು ಜನ ಚಕ್ಕಮಕ್ಕಳ ಹಾಕಿ ಕುಳಿತರೆ, ಭಾಗವತರು- ಚೆಂಡೆ, ಮದ್ದಳೆ ವಾದಕರು ಇದ್ದರೆ ಸಾಕು, ತಾಳಮದ್ದಳೆ ಶುರು. ಈ ರಾಮನವಮಿಗೆ ಅಂತಹುದೊಂದು ತಾಳಮದ್ದಳೆ. ರಾತ್ರಿಯ ಕಾಲ. ಸೀತೆ ಅಶೋಕವನದಲ್ಲಿ ಕಣ್ಣೀರುಗರೆಯುತ್ತಾ ಕುಳಿತಿದ್ದಾಳೆ. ಸುತ್ತ ರಾಕ್ಷಸ ಸ್ತ್ರೀಯರಿದ್ದಾರೆ. ರಾವಣ ತನ್ನ ಸಕಲ ಸಂಪತ್ತನ್ನೂ ಮೆರೆಸುತ್ತಾ, ಅಲ್ಲಿಗೆ ಪರಿವಾರ ಸಹಿತ ಬಂದಿದ್ದಾನೆ. ಶೃಂಗಾರ ರಾವಣನಾಗಿದ್ದಾನೆ. ತನ್ನ ಮದುವೆಯಾಗೆಂದು ಪರಿಪರಿಯಾಗಿ ಸೀತೆಯನ್ನು ಬೇಡಿಕೊಂಡಿದ್ದಾನೆ. ಆದರೆ ಅವಳು ಹುಲ್ಲುಕಡ್ಡಿಯೊಂದನ್ನು ಎದುರಿಗಿಟ್ಟು ಅದನ್ನೇ ದಿಟ್ಟಿಸಿ ಮಾತನಾಡುತ್ತಾ ರಾವಣನನ್ನು ಜರಿದಿದ್ದಾಳೆ. ಕೋಪಗೊಂಡ ರಾವಣ ಚಂದ್ರಹಾಸ ಖಡ್ಗವನ್ನೆತ್ತಿ ಕಡಿಯಲು ಮುಂದಾದರೆ, ಪಟ್ಟದರಸಿ ಮಂಡೋದರಿ ತಡೆದಿದ್ದಾಳೆ. ಸೀತೆಗೆ ಯೋಚಿಸಲು ಎರಡು ತಿಂಗಳ ಗಡುವು ನೀಡಿ ಹೋಗಿದ್ದಾನೆ ದಶಕಂಠ. ಮರದ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಹನುಮಂತ, ರಾಮಕತೆಯನ್ನು ಹೇಳುತ್ತ ಸೀತೆಯ ಎದುರು ಬರುತ್ತಾನೆ. ’ಹಾ ಸೀತಾ ಹಾ ಲಕ್ಷ್ಮಣಾ’ ಅಂತ ಕೇಳಿದ ಬಳಿಕ, ಸೀತೆ ರಾಮನ ದನಿಯನ್ನೇ ಕೇಳಿಲ್ಲ! ಅವನ ಯಾವ ವಾರ್ತೆಯೂ ಅವಳಿಗೆ ತಲುಪಿಲ್ಲ. ಪಾಯಸದಿಂದ ಜನಿಸಿದ ರಾಮನ ನಾಮವೇ ಈಗ ಸೀತೆಗೆ ಪಾಯಸ- ರಾಮ ನಾಮ ಪಾಯಸ. ಅಂತಹ ಸೀತೆಯ ಕಣ್ಣೆದುರು ಬಂದ ಹನುಮಂತ, ರಾಮ ನೀಡಿದ ಉಂಗುರವನ್ನು ಅವಳಿಗೆ ನೀಡುತ್ತಾನೆ. ಆ ನೆನಪಿನುಂಗುರ ಸೀತೆಯಲ್ಲಿ ಲಹರಿ ಎಬ್ಬಿಸಿದೆ.

’ನನ್ನ ಕೂಗು ಯೋಜನ ಯೋಜನ ದಾಟಿ ಕೊನೆಗೂ ನಿನಗೆ ಕೇಳಿಸಿತಾ? ಇದು ನನ್ನದೇ ದನಿ ಅಂತ ನಿನಗೆ ಅನಿಸಿತಾ?! ನನ್ನ ಬೊಗಸೆಯಲ್ಲೇ ಮೂಡಿ ಬಂದೆಯಾ ಪ್ರಭು ರಾಮಾ.. ನಿನ್ನನ್ನು ನನ್ನ ಕಣ್ಣುಗಳಿಗೆ ಒತ್ತಿಕೊಂಡಿದ್ದೇನೆ. ನನ್ನ ದೇವರು ಅಂದುಕೊಂಡಿರುವ ಈ ಉಂಗುರಕ್ಕೆ ನನ್ನ ಕಣ್ಣೀರಿನಿಂದಲೇ ಅಭಿಷೇಕ ಮಾಡುತ್ತೇನೆ. ಆ ದುಷ್ಟ ಹಿಡಿದೆಳೆದ ಈ ಕೈಗಳಿಂದ ಏನನ್ನಾದರೂ ತಿನ್ನಲು, ನನ್ನ ಮುಖವನ್ನೇ ಮುಟ್ಟಿಕೊಳ್ಳಲೂ ನಾನು ಹೇಸುತ್ತಿದ್ದಾಗ, ನೀನೇ ಬಂದು ನನ್ನ ಕೈಯೊಳಗೆ ಕುಳಿತೆಯಲ್ಲ! ಈ ಸುವರ್ಣ ಲಂಕೆ ನಿನ್ನೊಂದು ಚಿನ್ನದ ಉಂಗುರಕ್ಕೂ ಸಮವಲ್ಲ ರಾಮಾ.

ಮಿಥಿಲೆಯಲ್ಲಿ ನಡೆದ ಸ್ವಯಂಯವರದಲ್ಲಿ ಸೇರಿದ ರಾಜಮಹಾರಾಜರ ನಡುವೆ, ಶ್ರೀರಾಮಚಂದ್ರ ಶಿವಧನುಸ್ಸನ್ನು ಬಲಗೈಯಲ್ಲಿ ಎತ್ತಿ ಹಿಡಿದು ಎಡಗೈಯಲ್ಲಿ ಹೆದೆಯೇರಿಸುವಾಗ ನನಗೆ ಕಂಡ ಉಂಗುರ ಇದು. ಪಂಚವಟಿಯಲ್ಲಿ ರಕ್ಕಸರ ಅಟ್ಟಹಾಸಕ್ಕೆ ಬೆದರಿದ ನಾನು, ಇವರ ಕೈಯನ್ನು ಹಿಡಿದುಕೊಳ್ಳುತ್ತಿದ್ದಾಗ ಸಿಗುತ್ತಿದ್ದ ಉಂಗುರ ಇದು. ಆ ಶ್ರೀಕರದ ಉಂಗುರ. ನನ್ನ ಪ್ರಿಯಕರನ ಕರದ ಉಂಗುರ. ನೀನು ನಿಜವಾದ ಕರಸೇವಕ ಹನುಮಾ.


ತಾಯಿಗೆ ಮಗುವಿನ ಕೂಗು ಕರ್ಕಶ ಅಲ್ಲ, ಸಿಂಹದ ಮರಿಗೆ ಅಮ್ಮನ ಘರ್ಜನೆಯೂ ಕರ್ಕಶ ಅಲ್ಲ. ಆದರೆ ಸಂಬಂಧಗಳು ಹಳಸಿಹೋದಾಗ ಉಪದೇಶವೂ ಕರ್ಕಶವಾಗಿ ಕೇಳುತ್ತದೆ. ರಾಮನ ಮಂಜುಳ ಮಾತುಗಳನ್ನೇ ಕೇಳಿದ ನಾನು, ಹತ್ತು ಬಾಯಿಗಳಲ್ಲೂ ಹೊಲಸು ಮಾತಾಡುವ ಈ ಧೂರ್ತನ ಕರ್ಣ ಕರ್ಕಶ ಮಾತುಗಳನ್ನು ಹೇಗೆ ಸಹಿಸಿಕೊಳ್ಳಲಿ? ಸಾಮವೇದವನ್ನೇ ಹಾಡಿ ಶಿವನನ್ನು ಮೆಚ್ಚಿಸಿದವನು ಆ ರಾಕ್ಷಸ ಅಂತ ಹೇಗೆ ನಂಬಲಿ? ಆದರೆ ಆವತ್ತು ನಾನಾಡಿದ ಮಾತುಗಳು, ಆ ಲಕ್ಷ್ಮಣನಿಗೆ ಹೇಗೆ ಕರ್ಕಶವಾಗಿ ಕೇಳಿರಬಹುದು ಅಂತ ಈಗ ನನಗೆ ಅರ್ಥವಾಯಿತು. ಪ್ರಿಯ ಮೈದುನ ಲಕ್ಷ್ಮಣ ಎಳೆದ ರೇಖೆಗಳನ್ನೇ ದಾಟಿದ ನಾನು, ಇಂದು ಈ ಧೂರ್ತ ಎಲ್ಲಿ ಗೆರೆ ದಾಟಿ ಬಿಡುತ್ತಾನೋ ಅನ್ನುವ ಭಯದಲ್ಲೇ ಇಬ್ಬರ ಮಧ್ಯೆ ಹುಲ್ಲುಕಡ್ಡಿ ಇಟ್ಟದ್ದು. ಆಗ ನಾನು ಲಕ್ಷ್ಮಣನನ್ನು ನೆನಪಿಸಿಕೊಂಡಿದ್ದೆ ಹನುಮಾ. ರಾಕ್ಷಸನಾದ ರಾವಣ ನನಗೆ ತೃಣಸಮಾನ ಅಂದುಕೊಂಡೆ. ಜತೆಗೆ ಈ ಲಂಕೆಯಲ್ಲಿ ಒಂದು ಹುಲ್ಲುಕಡ್ಡಿಯಾದರೂ ನನಗೆ ಆಸರೆಯಾಗಬಾರದೇ ಅಂದುಕೊಂಡೆ. ಆ ರಕ್ಕಸನಿಗೂ ನಾನು ತೃಣಸಮಾನಳೇ. ಆದರೆ ಮನಸ್ಸಿನಲ್ಲೇ ವೃಣವಾಗಿರುವಾಗ, ತೃಣವಾದರೂ ಬೇಕು ಅನಿಸಿದರೆ ಬೇಕು. ಕೊಂದೇಬಿಡುತ್ತೇನೆಂದು ಖಡ್ಗವೆತ್ತಿದ. ಆಗ ಅವನನ್ನು ತಡೆದದ್ದು ಪಟ್ಟದ ರಾಣಿ ಮಂಡೋದರಿ. ನಾನೇನೂ ಭಯಪಟ್ಟಿರಲಿಲ್ಲ. ನಾನು ಮಂಡೋದರಿಯ ಹೊಟ್ಟೆಯನ್ನು ನೋಡುತ್ತಿದ್ದೆ. ಹೆತ್ತ ಕರುಳಲ್ಲವೆ ಅವಳದ್ದು? ಅವನು ಲಂಕಾರಾಜ್ಯದ ಅಧಿಪತಿಯಾದರೂ ತಿರುಕನಂತೆ ಬಂದ. ಹೆಂಡತಿ ಜತೆಗೇ ಇದ್ದರೂ ಪರನಾರಿಯ ಮೇಲೆ ಆಸೆಪಟ್ಟ. ಆವತ್ತು ನನ್ನಲ್ಲಿ ಬೇಡುವುದಕ್ಕೆ ಬಂದ, ಇವತ್ತು ಕಾಡುವುದಕ್ಕೆ ಬಂದ. ಆ ಪರಮ ಧೂರ್ತ ಮೂರು ಜನ್ಮ ಅಲ್ಲ, ಏಳು ಜನ್ಮವೆತ್ತಿ ಬಂದರೂ ನರಕವನ್ನೇ ಸೇರುವನಲ್ಲದೆ ವೈಕುಂಠವನ್ನಲ್ಲ!

ತನ್ನ ಗಂಡನ ಕ್ಷೇಮಸಮಾಚಾರವನ್ನೇ ಮತ್ತೊಬ್ಬರ ಬಳಿ ಕೇಳಿ ತಿಳಿಯಬೇಕಾದ ಪರಿಸ್ಥಿತಿ ಯಾವ ಹೆಣ್ಣಿಗೂ ಬರಬಾರದು ಹನುಮಾ. ನಾನು ಜತೆಗಿಲ್ಲದ ನನ್ನವರು ಹೇಗಿದ್ದಾರೆ? ಅವರು ಅಯೋಧ್ಯೆಯಿಂದ ಹೊರಟಾಗ, ಕಾನನವನ್ನು ಹೊಕ್ಕ ಸೂರ್ಯನ ಹಾಗಿದ್ದರು. ನನ್ನೊಂದಿಗೆ ಹುಣ್ಣಿಮೆಯ ಚಂದ್ರನಂತೆ ಶಾಂತವಾಗಿದ್ದರು. ಈಗ ಸೊರಗಿದ್ದಾರಾ? ಕೊರಗುತ್ತಾರಾ? ಒಬ್ಬರೇ ಇದ್ದಾಗ ಏನು ಮಾಡುತ್ತಾರೆ? ಅಯೋಧ್ಯೆಯನ್ನು ತೊರೆದದ್ದಕ್ಕೆ ಅವರಿಗೆ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅಪ್ಪ ದಶರಥ ಮಹಾರಾಜರ ಮರಣ ವಾರ್ತೆ ಕೇಳಿದಾಗ ಮಾತ್ರ ಅವರ ಮುಖ ನೋಡುವ ಹಾಗಿರಲಿಲ್ಲ. ಅವರಿಂದ ನಾನೂ ದೂರವಾದ ಬಳಿಕ ಹೇಗಿದ್ದರು? ಛೆ ನಿನಗೇನು ಗೊತ್ತು? ಆ ಲಕ್ಷ್ಮಣನಲ್ಲಿ ಕೇಳಬೇಕಿತ್ತು. ಹೇಗಿದ್ದಾನೆ ಅವನು? ತನ್ನ ಲಕ್ಷ್ಯವನ್ನೆಲ್ಲ ಅಣ್ಣನಲ್ಲೇ ಇಟ್ಟ ಲಕ್ಷ್ಮಣ, ನನ್ನ ಬಗ್ಗೆ ಏನಾದರೂ ಹೇಳಿದನಾ? ನನ್ನ ಬಗ್ಗೆ ನನ್ನವರು ಆಡಿದ ಮಾತುಗಳನ್ನು ಹೇಳಿದೆ, ಅವರ ಉಂಗುರವನ್ನು ಕೊಟ್ಟೆ, ಲಕ್ಷ್ಮಣ ಏನೂ ಹೇಳಲೇ ಇಲ್ವಾ? ಅಯೋಧ್ಯೆಯ ವಾರ್ತೆ ಏನಾದರೂ ಇದೆಯಾ? ಊರ್ಮಿಳೆ ಹೇಗಿದ್ದಾಳಂತೆ? ಲಕ್ಷ್ಮಣ ಹೇಗಿದ್ದಾನೆ ಹೇಳು. ಹನುಮಾ, ಲಕ್ಷ್ಮಣ ಹೇಗಿದ್ದಾನೆ ಹೇಳು.
ರಾಮ ಸೀತೆಯರ ಕತೆಯನ್ನು ನೀನು ಎಷ್ಟೊಂದು ಚೆಂದದಿಂದ, ಆನಂದದಿಂದ ಹೇಳಿದೆ. ರಾಮಕಥಾ ಶ್ರವಣದ ಪುಣ್ಯವನ್ನೂ ನನಗೆ ಕೊಟ್ಟೆ. ಋಷಿಮುನಿಗಳು ಅವರ ಬಗ್ಗೆ ಹೇಳಿದ್ದರು. ಶಬರಿ ಕೊಂಡಾಡಿದ್ದಳು. ಆದರೆ ರಾಮ-ಸೀತೆಯರ ಏಕಾಂತದ ಕ್ಷಣಗಳ ವಿವರವನ್ನೂ ರಾಮನ ಬಾಯಿಯಿಂದ ಆಲಿಸಿ, ಅದನ್ನು ನನಗೆ ಹೇಳಿದ್ದು ನೀನೊಬ್ಬನೇ. ಬಾಯಿ ಮುಚ್ಚು. ನಿನ್ನನ್ನು ರಾಮನೇ ಕಳುಹಿಸಿದ್ದೆಂದು ನನಗೆ ದೃಢವಾಯಿತು. ನಮ್ಮಿಬ್ಬರ ಏಕಾಂತದ ಕತೆಯನ್ನೇ ಇನ್ನೂ ಹೇಳಬೇಡವೋ!


ಆ ರಾಮನಿಗಾಗಿ ಎಷ್ಟೋ ಸಮಯದಿಂದ ಗುಹ ಕಾದಿದ್ದ, ಪ್ರತಿದಿನ ಹಣ್ಣುಗಳನ್ನು ಕೊಯ್ದಿಟ್ಟು ಮುದುಕಿ ಶಬರಿ ಕಾದಿದ್ದಳು, ನಾನು ಕಾಯುವುದರಲ್ಲಿ ಹೆಚ್ಚೇನು? ಎಲ್ಲೋ ಮಣ್ಣಿನಲ್ಲಿ ನನ್ನಪ್ಪನಿಗೆ ಸಿಕ್ಕಿದ ನಾನು ರಾಮನಿಗೆ ಸಿಕ್ಕೆ. ಆದರೆ ಅಯೋಧ್ಯೆಯ ಮಣ್ಣು ಅವರಿಗೆ ತಪ್ಪಿಹೋಯಿತು! ಈಗ ಅಯೋಧ್ಯೆಯೂ ಇಲ್ಲ, ನಾನೂ ಇಲ್ಲ. ಪುತ್ರಕಾಮೇಷ್ಠಿಯ ಮೂಲಕ ಅಯೋಧ್ಯೆ ಅವರನ್ನ ಪಡೆದುಕೊಂಡಿತು. ಸ್ವಯಂವರದ ಮೂಲಕ ಅವರು ನನ್ನನ್ನ ಪಡೆದುಕೊಂಡರು. ಆದರೀಗ ಅವರು ಅಯೋಧ್ಯೆಯಲ್ಲೂ ಇಲ್ಲ, ಅವರ ಜತೆಗೆ ನಾನೂ ಇಲ್ಲ! ಒಂದು ಮಳೆಗಾಲವೇ ಕಳೆಯಿತು. ಆ ಸಮುದ್ರಕ್ಕಿಂತ ಹೆಚ್ಚು ನನ್ನ ಮನಸ್ಸು ಉಕ್ಕೇರಿ ಇಳಿದದ್ದಾಯ್ತು. ಅವರಿಲ್ಲಿಗೆ ಬರುವುದಕ್ಕೆ ಇನ್ನೆಷ್ಟು ದಿನ ಬೇಕಾದೀತು? ತನ್ನ ಬಾಣದಿಂದ ಅವರು ಸಮುದ್ರವನ್ನು ಬತ್ತಿಸಿಯಾರು, ಗೊತ್ತು. ಆದರೆ ನನ್ನ ಕಣ್ಣೀರು?

’ಅಯ್ಯೋ ಶಿವನೇ..’ ಅಂತ ತಲೆ ಮುಟ್ಟಿಕೊಂಡರೆ ನನ್ನ ಕೈಗೆ ಸಿಗುವುದು ಈ ಚೂಡಾಮಣಿ. ತಗೋ ಈ ಚೂಡಾಮಣಿಯನ್ನು, ಆ ದುಷ್ಟನ ಕೈಗೆ ನನ್ನ ಕೇಶರಾಶಿ ಸಿಕ್ಕಾಗಲೂ ಉಳಿದುಕೊಂಡ ಈ ಮಣಿಯನ್ನು, ನನ್ನ ಕಣ್ಣೀರಿನಲ್ಲಿ ತೊಳೆದ ಚೂಡಾಮಣಿಯನ್ನು. ಅವರ ಪಾದಕ್ಕೆ ನನ್ನ ತಲೆಯನ್ನು ಚಾಚಿದ್ದೇನೆಂದು ತಿಳಿಯಲಿ. ಚೂಡಾಮಣಿಯೂ ಇಲ್ಲದ ನನ್ನ ಕೇಶರಾಶಿಯನ್ನು ಅವರು ಬಂದಾಗಲೇ ಮತ್ತೆ ಕಟ್ಟುತ್ತೇನೆ. ಇದನ್ನು ಅವರ ಪದತಲದಲ್ಲಿಡು. ಆಗ ಅವರ ಮಾತು-ಮುಖ ಹೇಗಿದ್ದೀತು?! ಮತ್ತೆ ಸಿಕ್ಕಾಗ ಹೇಳಬೇಕು ನೀನು’ -ಸೀತೆ ಕತ್ತಲಲ್ಲಿ ಕಣ್ಣು ನೆಟ್ಟಳು. ಆ ಕತ್ತಲಿನಲ್ಲೂ ಶ್ಯಾಮವರ್ಣದ ರಾಮ ಆಕೆಗೆ ಕಾಣುತ್ತಿದ್ದ.
kendasampige.com

Read more...

February 24, 2012

ನಮ್ಮ ಪರ್ಮನೆಂಟ್ ಅಡ್ರೆಸ್ !



Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP