November 15, 2009

ರಂಗಭೂಮಿಯ ತರುಣ ಮನಸು


ಕಾಲೇಜು ರಂಗಭೂಮಿ ಕೆಟ್ಟಿದೆ !
ಹತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಮೀಯುತ್ತಿದ್ದಾರೆ ನಟ-ನಿರ್ದೇಶಕ ಮಂಜುನಾಥ್ ಬಡಿಗೇರ್. ಸದ್ಯ ಬೆಂಗಳೂರು ಕಾರ್ಯಕ್ಷೇತ್ರ. 'ಯುವ ರಂಗಕರ್ಮಿಯಾಗಿ, ಸರಕಾರದಿಂದ - ಜನರಿಂದ ನೀವೇನು ನಿರೀಕ್ಷಿಸುತ್ತೀರಿ?' ಅಂತ ಪ್ರಶ್ನಿಸಿದರೆ, 'ಏನನ್ನೂ ನಿರೀಕ್ಷಿಸುವುದಿಲ್ಲ. ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಸಿಗಬೇಕಾದ್ದು ಸಿಗುತ್ತೆ' ಅನ್ನುವಷ್ಟು 'ನೇರ-ದಿಟ್ಟ-ನಿರಂತರ' ! 'ನಮಗೆ ತುಂಬಾ ಇಷ್ಟವಾದ್ದು, ತುಂಬಾ ಕಷ್ಟವಾದ್ದು ಅಂತ ಯಾವುದು ಇರೋಲ್ಲ. ಎಲ್ಲವನ್ನೂ ಇಷ್ಟ ಪಟ್ಟೇ ಕೇಳ್ತೇವೆ, ಮಾಡ್ತೇವೆ, ಆಸ್ವಾದಿಸ್ತೇವೆ' ಎನ್ನುವ ಮಂಜುನಾಥ್ ಮಾತುಗಳಿಗೆ, ಅವರ ಕೆಲಸಗಳೇ ಸಾಕ್ಷಿ. ನೀನಾಸಂ ಪದವೀಧರರಾಗಿ ಒಂದು ವರ್ಷ ತಿರುಗಾಟದಲ್ಲಿ ಭಾಗವಹಿಸಿದ್ದಾರೆ. 'ಜಾನಪದ ಲೋಕ'ದ ಜಾನಪದ ಡಿಪ್ಲೊಮಾ ಪಡೆದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ, ಗುರು ಸಂಜೀವ ಸುವರ್ಣರಿಂದ ಯಕ್ಷಗಾನವನ್ನು ಒಂದು ವರ್ಷ ಶಾಸ್ತ್ರೀಯವಾಗಿ ಅಭ್ಯಸಿಸಿದ್ದಾರೆ. ಪ್ರಕಾಶ್ ಚಕ್ರವರ್ತಿ ಂಬವರಲ್ಲಿ ಹಿಂದುಸ್ತಾನಿ ಕೊಳಲು ವಾದನವನ್ನು ಎರಡು ವರ್ಷಗಳ ಕಾಲ ಕಲಿತಿದ್ದಾರೆ !
ಹಳೆಯ ವೃತ್ತಿ ರಂಗಭೂಮಿ ಹೋಗಿ, ಈಗ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಹಭಾಗಿತ್ವ ಪಡೆಯುವವರೆಗೆ ಹೋಗಿದೆ. ನಾಟಕ ಕಮರ್ಷಿಯಲ್ ಮತ್ತು ಪ್ರೊಫೆಷನಲ್ ಆಗೋದರ ಬಗ್ಗೆ ಏನನ್ಸತ್ತೆ ಅಂತ ಕೇಳಿದರೆ- 'ನಾಟಕ ಕೇವಲ ಮನರಂಜನಾ ಮಾಧ್ಯಮ ಅಲ್ಲ. ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ರಸಾನುಭವವನ್ನು ಕೊಡುವಂಥದ್ದಾಗಿರಬೇಕು. ಹಾಗಾಗಬೇಕಾದರೆ ಅದರಲ್ಲಿ ವೃತ್ತಿಪರತೆ ಖಂಡಿತ ಇರಲೇಬೇಕು. ನಾಟಕ ಕಮರ್ಷಿಯಲ್ ಆಗಲಿ ಬೇಸರವಿಲ್ಲ. ಆದರೆ ಅದರಲ್ಲಿ ವೃತ್ತಿಪರತೆ ಇರಬೇಕು !'ಎನ್ನುತ್ತಾರೆ ಮಂಜುನಾಥ್. ನೀನಾಸಮ್ ಹಾಗೂ ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಗೆ ರಂಗಶಿಬಿರಗಳನ್ನು ನಡೆಸಿರುವುದರ ಜತೆಗೆ ಅಭಿನಯ ತರಬೇತುದಾರನಾಗಿ ಅವರು ಕೆಲಸ ಮಾಡಿದ್ದಾರೆ. ಹಂಸಲೇಖರವರ ದೇಸಿ ವಿದ್ಯಾಸಂಸ್ಥೆಯಲ್ಲಿ ನಾಟಕದ ಶಿಕ್ಷಕನಾಗಿ, 'ಆಶ್ರಯ' ಎಂಬ ಸ್ವಯಂಸೇವಾ ಸಂಸ್ಥೆಯಿಂದ ಸರಕಾರಿ ಬಾಲಕರ ಪರಿವೀಕ್ಷಣಾ ಮಂದಿರದಲ್ಲಿ ಬಾಲಾಪರಾಧಿಗಳ ಮನೋವಿಕಾಸಕ್ಕಾಗಿ ಎರಡು ವರ್ಷಗಳ ಕಾಲ ಸಂಪನ್ಮೂಲವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ಈ ಯುವ ಪ್ರತಿಭೆಗೂ ಕಾಲೇಜು ರಂಗಭೂಮಿಗೂ ಹತ್ತಿರದ ನಂಟಿದೆ. ಆದರೆ ಅಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಕೇಳಿದರೆ - 'ರಂಗಭೂಮಿ ವಲಯದಲ್ಲಿ ಕಾಲೇಜು ರಂಗಭೂಮಿಗೆ ವಿಶಿಷ್ಟ ಸ್ಥಾನವಿದೆ. ಇದರಿಂದ ಕಾಲೇಜಿಗೂ ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕವಾಗಿಯಲ್ಲದೆ ಅನೇಕ ರೀತಿಯಲ್ಲಿ ಉಪಯೋಗವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳಿಗೆ ನಾಟಕ ಮಾಡಿಸುವುದು ಮತ್ತು ಮಾಡುವುದು ಪ್ರತಿಷ್ಠೆಯ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಸಾಧನವಾಗದೆ ತಮ್ಮ ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳುವ ಒಂದು ವೇದಿಕೆಯಾಗಿದೆ. ಈವತ್ತಿನ ಕಾಲೇಜು ನಾಟಕಗಳು ಸ್ಪರ್ಧಾ ಕೇಂದ್ರಿತವಾಗಿರುತ್ತವೆ ಹಾಗೂ ಹೊರಗಿನ ಆಡಂಬರಗಳಿಂದ ವೈಭವೀಕರಿಸಲ್ಪಟ್ಟಿರುತ್ತವೆ. ಇದು ಮೊದಲು ಬದಲಾಗಬೇಕಿದೆ. 'ನಾಟಕ ಚಳವಳಿಯಲ್ಲ, ಅದೊಂದು ಸಡಗರ' ಎಂದಿದ್ದ ಬಿ.ವಿ.ಕಾರಂತರ ಮಾತು ನೆನಪಿಸುತ್ತ. 'ಬೀದಿ ನಾಟಕಗಳಲ್ಲೂ ಪಾಲ್ಗೊಂಡ ನಿಮ್ಮ ಅಭಿಪ್ರಾಯ ಏನು' ಅಂದರೆ- 'ಹೌದು, ಅದೊಂದು ಆಚರಣೆ. ಬೀದಿ ನಾಟಕ ಆರಂಭದ ಕಾಲದಲ್ಲಿ ಚಳವಳಿಯ ಉದ್ದೇಶದದಿಂದಲೇ ರೂಪ ತಳೆಯಿತು. ಈಗ ಅದು ಕೇವಲ ಮಾಹಿತಿ ತಲುಪಿಸುವ, ರಾಜಕೀಯ ಪಕ್ಷಗಳ, ಬಹುರಾಷ್ಟ್ರೀಯ ಕಂಪನಿಯ ಸರಕುಗಳ ಪ್ರಚಾರಕ್ಕಾಗಿ ಬಳಕೆಯಾಗುತ್ತಿದೆ' ಎಂಬ ಬೇಸರ ಅವರದ್ದು. 'ಮಾಧ್ಯಮ್' ಸ್ವಯಂ ಸೇವಾ ಸಂಸ್ಥೆಯಲ್ಲಿ ಬೀದಿ ನಾಟಕ ತಂಡದೊಂದಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು (ಏಡ್ಸ್, ಮಕ್ಕಳ ಹಕ್ಕುಗಳು, ಮಹಿಳಾ ಸಬಲೀಕರಣ, ಕೋಮು ಸೌಹಾರ್ದ...)ನಾಟಕಗಳಲ್ಲಿ ಭಾಗವಹಿಸಿದ ಅನುಭವ ಮಂಜುನಾಥ್ ಬೆನ್ನಿಗಿದೆ. ಚಿದಂಬರ ರಾವ್ ಜಂಬೆ, ವೆಂಕಟರಮಣ ಐತಾಳ, ರಘುನಂದನ, ಪ್ರಕಾಶ್ ಬೆಳವಾಡಿ, ಸುರೇಶ್ ಆನಗಳ್ಳಿ,ಕೆ ವಿ ಅಕ್ಷರ, ಅಭಿಲಾಶ್ ಪಿಳ್ಳೈ, ರಮೇಶ್ ವರ್ಮ(ಕೇರಳ), ಭರತ್ ಶರ್ಮಾ, ವಿಶ್ವಜಿತ್ (ಪಶ್ಚಿಮ ಬಂಗಾಳ), ಬಹ್‌ರುಲ್ ಇಸ್ಲಾಂ(ಅಸ್ಸಾಂ) ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಕರ್ನಾಟಕದ ಹಲವಾರು ತಂಡಗಳಿಗೆ, ಶಾಲಾಮಕ್ಕಳಿಗೆ, ಕಾಲೇಜುಗಳಿಗೆ, ಮತ್ತು ಸರಕಾರೇತರ ಸಂಸ್ಥೆಗಳಿಗೆ ರಂಗಭೂಮಿ ಕಾರ್‍ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. 'ಸಮಷಿ'ಯ ಭಾನುವಾರದ ರಂಗಶಾಲೆಯಲ್ಲಿ ಅಭಿನಯ ಶಿಕ್ಷಕನಾಗಿ, ಸಮಷ್ಟಿ ಮತ್ತು ಆದ್ಯಂತ ಎಂಬ ತಮ್ಮ ಹೆಚ್ಚಿನ ಪಾಲುಗಾರಿಕೆಯ ರಂಗತಂಡಗಳಲ್ಲಿ, ನಟ-ನಿರ್ದೇಶಕನಾಗಿದ್ದಾರೆ. 'ಬದುಕು ಅನ್ನೊ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ. ಟಿವಿ ಸಿನಿಮಾ ಕಡೆ ಗಮನವಂತೂಇದೆ. ಕಿರುಚಿತ್ರಗಳನ್ನು ನಿರ್ದೇಶಿಸುವ ಆಸೆಯಿದೆ' ಎನ್ನುವುದು ಈ ಕೆಚ್ಚೆದೆಯ ರಂಗಕರ್ಮಿಯ ಬಿಚ್ಚು ನುಡಿ.


ರಂಗಕರ್ಮಿ ಬೇರೆ ಮಾಧ್ಯಮದ ಮೂಲಕ ಗುರುತಿಸಿಕೊಳ್ಳೋದು ಅನಿವಾರ್ಯ!
ಇಪ್ಪತ್ತಾರರ ಹರೆಯದ ಮೌನೇಶ್ ಬಡಿಗೇರ್ ಕೂಡಾ ನೀನಾಸಂನಲ್ಲಿ ಕಡೆಯಲ್ಪಟ್ಟ ಪ್ರತಿಭೆ. ಕಳೆದ ಆರು ವರ್ಷಗಳಿಂದ ರಂಗಭೂಮಿಯನ್ನೆ ಕಣ್ರೆಪ್ಪೆಗಳಲ್ಲಿ ಕಾಪಾಡಿಕೊಂಡಿರುವ ಮೌನೇಶ್‌ರದ್ದು, ನೊಡಲು ಮುನಿ ವೇಶ ! ಉದ್ದ ಕೂದಲು-ಚೂಪು ಮೀಸೆ-ತೀಡಿದ ಗಡ್ಡ. ಹಂಸಲೇಖ ಅವರ 'ದೇಸಿ' ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ನಾಟಕ ಮಾಡಿಸಿದ್ದು, 'ಮಧ್ಯಮ್' ಎಂಬ ಎನ್‌ಜಿಒನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ-ಬೀದಿ ನಾಟಕದ ನಟನಾಗಿ ಕೆಲಸ ಮಾಡಿದ್ದು, 'ಸಮಷ್ಟಿ' ತಂಡದ ಭಾನುವಾರದ ನಾಟಕ ಶಾಲೆಯಲ್ಲಿ ಬೋಧನೆ, ಅಭಿಲಾಶ್ ಪಿಳ್ಳೈ -ಕೆ.ವಿ.ಅಕ್ಷರ-ರಘುನಂದನ-ವೆಂಕಟರಮಣ ಐತಾಳ್-ಇಕ್ಬಾಲ್ ಅಹಮದ್‌ರಂತಹ ಹಿರಿಯ ನಿರ್ದೇಶಕರ ಜತೆ ಕೆಲಸ ಮಾಡಿದ್ದು, ಇವೆಲ್ಲ ಅಣ್ಣ ಮಂಜುನಾಥ ಬಡಿಗೇರರ ದಿನಚರಿಯಂತೆಯೇ. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜು-ಕ್ರೈಸ್ಟ್ ಕಾಲೇಜು, ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜು...ಹೀಗೆ ಕಾಲೇಜು ರಂಗಭೂಮಿಯೊಂದಿಗೆ ಬೆರೆತ ಮೌನೇಶ್ ಆ ಬಗ್ಗೆ ಹೀಗೆ ಹೇಳುತ್ತಾರೆ- 'ಕಾಲೇಜು ರಂಗಭೂಮಿಯ ಬಗೆಗಿನ ಇತ್ತೀಚಿನ ಬೆಳವಣಿಗೆಗಳು ಆಶಾದಾಯಕವಾಗಿವೆ. ಎಲ್ಲ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಲ್ಲೂ ನಾಟಕದ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಕೆಲವೊಂದು ಕಾಲೇಜುಗಳಲ್ಲಿ 'ಥಿಯೇಟರ್ ಇನ್ ಎಜುಕೇಶನ್' ಅನ್ನು ಅಳವಡಿಸಿಕೊಂಡಿರುವುದು ರಂಗಭೂಮಿಯ ಮಹತ್ವವನ್ನು ಸೂಚಿಸುತ್ತದೆ. ಇದನ್ನ ಮನಗಂಡ ಕಾಲೇಜುಗಳು ಸಾಕಷ್ಟು ಬಜೆಟ್‌ಅನ್ನು ಮೀಸಲಿಡುತ್ತಿವೆ. ಇನ್ನು ಕೆಲವು ಕಾಲೇಜುಗಳು ರಂಗನಿರ್ದೇಶಕರ ಜತೆ ಚೌಕಾಸಿಗೆ ನಿಂತುಬಿಡುತ್ತವೆ ! ಸ್ಪರ್ಧೆ ಎಂಬ ಆಲೋಚನೆಯೇ ತುಂಬಾ ಕೆಡುಕನ್ನು ಒಳಗೊಂಡದ್ದಾಗಿದ್ದರೂ, ಕಾಲೇಜು ರಂಗದ ಮಟ್ಟಿಗೆ ಇದು ಫಲಪ್ರದವಾಗಿ ಕೆಲಸಮಾಡುತ್ತಿದೆ.
ಇಂತಹ ಯುವ ರಂಗಕರ್ಮಿ,'ರಂಗಭೂಮಿಯಲ್ಲೇ ಬದುಕು ಕಟ್ತೀವಿ ಅನ್ನೋ ಛಲ ಇದೆಯಾ? ಟಿವಿ-ಸಿನಿಮಾ ಕಡೆ ಗಮನ ಇದೆಯಾ?' ಎಂಬ ಪ್ರಶ್ನೆಗೂ ಅಣ್ಣನಿಗಿಂತ ಬೇರೆ ತರಹ ಉತ್ತರಿಸಿದರು. 'ಬದುಕು ಕಟ್ಟೋದು ಅಂದ್ರೆ ಯಾವ ಪರಿಭಾಷೆಯಲ್ಲಿ ಎಂದು ನನಗೆ ತಿಳೀತಿಲ್ಲ. ಭಾವನಾತ್ಮಕ ಬದುಕೆಂಬುದು ಈಗಾಗಲೇ ರಂಗಭೂಮಿಯಿಂದಲೇ ಕಟ್ಟಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಇನ್ನು ಪ್ರಾಪಂಚಿಕ ಬದುಕಿನ ಬಗ್ಗೆ ಯಥಾವತ್ತಾಗಿ ನಿರ್ಧರಿಸಿಲ್ಲ. ನಮ್ಮಂಥ ಕಸುಬುದಾರರ ಸಮಸ್ಯೆಯೆಂದರೆ, ಒಬ್ಬ ಸಿನಿಮಾ ನಟ ಅಥವಾ ಟಿವಿ ನಟನನ್ನು ಗುರುತಿಸಲು ಆ ಕ್ಷೇತ್ರದವರಿದ್ದಾರೆ. ಒಬ್ಬ ಯಶಸ್ವಿ ಐಟಿ ಉದ್ದಿಮೆದಾರನನ್ನು ಗುರುತಿಸಲು ಆ ಕ್ಷೇತವ್ರೂ ಸೇರಿದಂತೆ ಹಲವಾರು ದಾರಿಗಳಿವೆ. ಒಬ್ಬ ಸಾಹಿತಿ ತನ್ನ ಸಾಹಿತ್ಯದೊಂದಿಗೇ ನೇರವಾಗಿ ತಲುಪಬಲ್ಲ. ಆದರೆ ರಂಗಭೂಮಿಯ ಒಬ್ಬ ಕಲಾವಿದ, ಟಿವಿ ಅಥವಾ ಸಿನಿಮಾ ಮಾಧ್ಯಮದ ಮೂಲಕವೇ ಗುರುತಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಆದ್ದರಿಂದ ಇವತ್ತು ರಂಗಭೂಮಿಯ ಎಲ್ಲ ಪ್ರತಿಭಾವಂತರಿಗೂ ಅಭದ್ರತೆಯ ಸನ್ನಿವೇಶ ಎದುರಾಗಿದೆ. ಹಿಂದೆಲ್ಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರೂ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಕಿರು-ಹಿರಿತೆರೆ ಪ್ರವೇಶಿಸಿದವರೇ ಆಗಿದ್ದಾರೆ. ಆದ್ದರಿಂದ ರಂಗಭೂಮಿಯಲ್ಲೇ ಸ್ಥಿರವಾಗಿ ನಿಂತು ಸಾಧಿಸಿದವರು ಕಡಿಮೆಯೇ ಎನ್ನಬಹುದು. ಹಾಗಾಗಿ ನಮ್ಮಂಥ ಕಿರಿಯರಿಗೆ ಒಬ್ಬ ಆದರ್ಶವ್ಯಕ್ತಿತ್ವ ಎಂಬುದೊಂದು ಇಲ್ಲವಾಗಿದೆ. ಹಾಗೆ ಸ್ಥಿರವಾಗಿ ಉಳಿದ ಕೆಲವೇ ಕೆಲವು ಹಿರಿಯ ರಂಗ ಚೈತನ್ಯಗಳನ್ನು ನಾವು ಗಂಭೀರವಾಗಿ ಪರಿಗಣಿಸದೇ ಇರುವುದು ನಮ್ಮ ವ್ಯವಸ್ಥೆಯ ದುರಂತವೇ ಸರಿ.'
'ನಾಟಕ ಪ್ರೊಫೆಷನಲ್ ಆದಷ್ಟೂ ಅದು ಸಂತೋಷದ ವಿಷಯವೇ. ಪ್ರೊಫೆಷನಲ್ ಗುಣ ಕಡಿಮೆಯಾಗಿ ಬರೀ ಕಮರ್ಷಿಯಲ್ ಆದಷ್ಟೂ ಅದು ಅನಿವಾರ್ಯವಾಗಿ ಅತಿರಂಜನೆಯ ಗುಣಗಳನ್ನು ಅಳವಡಿಸಿಕೊಳ್ಳಲು ಹೊರಟುಬಿಡುತ್ತದೆ. ಅದು ಸ್ವಲ್ಪಅಪಾಯಕಾರಿಯೆನಿಸುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ಆಮಿಷಗಳು, ತಾಯಿಯ ಹೊಟ್ಟೆಯಲ್ಲಿನ ಭ್ರೂಣಕ್ಕೂ ನಿರಾಯಾಸವಾಗಿ ತಲುಪುತ್ತಿರುವ ಈ ಸಂದರ್ಭದಲ್ಲಿ , ಅದು ರಂಗಭೂಮಿಗೂ ಆವರಿಸಿರುವುದು ಆಶ್ಚರ್ಯವೇನೂ ಅಲ್ಲ. ಆದರೆ ಅದನ್ನು ಹೇಗೆ ಎಷ್ಟು ಮತ್ತು ಸಕಾರಣವಾಗಿ ಬಳಸುವುದು ಮುಖ್ಯ. ನಾಟಕ ಸಡಗರವೂ ಹೌದು, ಚಳವಳಿಯೂ ಹೌದು. ಸಮಾಜದ ಸೂಕ್ಷ್ಮವಾದ ಸಂಬಂಧ ಸಮಸ್ಯೆಗಳನ್ನು ಚಿತ್ರಿಸುವುದರ ಮೂಲಕ ಚಿಕಿತ್ಸಾತ್ಮಕವಾಗಿ ಕೆಲಸ ಮಾಡಬಲ್ಲದು. ವ್ಯವಸ್ಥೆಯ ಡಂಬಾಚಾರ ಪ್ರಶ್ನಿಸಬಲ್ಲದು.'
'ಆದ್ಯಂತ' ಎಂಬ ರಂಗತಂಡ ಕಟ್ಟಿಕೊಂಡಿರುವ ಮೌನೇಶ್, ಈಗ 'ಸಮಷ್ಟಿ' ತಂಡಕ್ಕಾಗಿ 'ಶಾಂಡಿಲ್ಯ ಪ್ರಹಸನ' ನಾಟಕ ನಿರ್ದೇಶಿಸುವುದರಲ್ಲಿ ಬ್ಯುಸಿ.ಸರಕಾರ ಮತ್ತು ಜನರಿಂದ ತಾನು ಬಯಸುವುದು 'ಆರ್ಥಿಕ ಸ್ಥಿರತೆ ಹಾಗೂ ಉತ್ತೇಜನವನ್ನು' ಎನ್ನುವುದು ಈ ಬೆವರ ಹುಡುಗನ ಮಾತು. 'ಪರಿತ್ಯಕ್ತ' ನಾಟಕದ, ಅಂಬಾತನಯ ಮುದ್ರಾಡಿ ರಚನೆಯ ಈ ಹಾಡು, ಮೌನೇಶ್‌ಗೆ ಬಹಳ ಪ್ರಿಯವಂತೆ, ನೀವೂ ಓದಿಕೊಳ್ಳಿ.
'ಇದಕಿಹುದು ಆದಿ ಇದಕಿಹುದು ಅಂತ್ಯ ತನ್ಮಧ್ಯೆ ಏಳು ಬೀಳು
ಭುವಿನಾಟ್ಯರಂಗ ಲೀಲಾತರಂಗ ನಟ ಬಾಧ್ಯನೇನು ಹೇಳು
ಕಣ್‌ದೂರಮಾಗೆ ಕೈಮಾಳ್ಕೆಯಲ್ಲಿ ಈ ಪಾತ್ರಧಾರಿ ಬಾಳು
ಅಭಿವ್ಯಕ್ತನಾರು ಪರಿತ್ಯಕ್ತನಾರು ಯಾರಿಲ್ಲಿ ಮೇಲು ಕೀಳು?'
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ )

Read more...

November 10, 2009

ಯಕ್ಷ ದಿಗ್ಗಜನಿಗೆ ನಮಸ್ಕಾರ

Read more...

September 02, 2009

ನಿಮ್ಮೊಂದಿಗೆ ಎರಡು ವಿಷಯಗಳು


ಬೆಂಗಳೂರು ಕ್ಲಿಕ್... ಕ್ಲಿಕ್
ಡಿಜಿಟಲ್ ಕ್ಯಾಮೆರಾಗಳು ಎಲ್ಲರ ಕೈಗೆ ಬಂದರೂ 'ಬಣ್ಣ-ಬೆಳಕು-ಕೋನ’ಗಳನ್ನು ಸರಿದೂಗಿಸಿಕೊಳ್ಳುವುದು ಬಹಳ ಸುಲಭವೇನೂ ಆಗಿಲ್ಲ. ಆದರೆ ಛಾಯಾಗ್ರಹಣ ರಂಗಕ್ಕೆ ಹೊಸ ಹರಿವು-ವ್ಯಾಪ್ತಿಯು ತಂತ್ರಜ್ಞಾನದ ಮೂಲಕ ಲಭ್ಯವಾಗಿದೆ. ಛಾಯಾಗ್ರಹಣ ಆಸಕ್ತರ ಸಂಖ್ಯೆ ವೇಗದಲ್ಲಿ ವೃದ್ಧಿಯಾಗುತ್ತಿದೆ. ಹೊಸ ಅಲೆಯ ಚಿತ್ರಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಆ.೨೮ರಿಂದ ೩೦ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ 'ಬೆಂಗಳೂರು ಫೋಟೊಗ್ರಫಿ ಕ್ಲಬ್', ಹಮ್ಮಿಕೊಂಡಿದ್ದ ನಾಲ್ಕನೇ ವಾರ್ಷಿಕ ‘ಛಾಯಾಚಿತ್ರ ಪ್ರದರ್ಶನ’ ಅದಕ್ಕೊಂದು ಸಾಕ್ಷಿ. ಸುಮಾರು ಐವತ್ತು ಜನ ಹವ್ಯಾಸಿ-ವೃತ್ತಿಪರ ಛಾಯಾಚಿತ್ರಗಾರರ ಫೋಟೊಗಳು 'ಮನಸ್ಸಿನ ಚೌಕಟ್ಟುಗಳು-೨೦೦೯' ಶೀರ್ಷಿಕೆಯಲ್ಲಿ ಅಲ್ಲಿ ಪ್ರದರ್ಶಿತವಾದವು. 'ಹವಾಮಾನ ಬದಲಾವಣೆ’ ಎಂಬ ವಿಷಯ ಕೇಂದ್ರವಾಗಿಟ್ಟು ಛಾಯಾಚಿತ್ರಗಳ ಪ್ರದರ್ಶನ, ವನ್ಯಜೀವಿ ಛಾಯಾಚಿತ್ರಗ್ರಾಹಕ ಜಯಂತ್ ಶರ್ಮಾ ಹಾಗೂ ಪ್ರಸಿದ್ಧರಾದ ಮಹೇಶ್ ಶಾಂತಾರಾಮ್ ಜತೆ ಸಂವಾದ, ಮತ್ತಷ್ಟು ವಿಶೇಷ.
೨೦೦೪ರಲ್ಲಿ ಇಂಟರ್‌ನೆಟ್‌ನಲ್ಲಿ ಸಿಕ್ಕ ನಾಲ್ಕು ಜನರ ಮಧ್ಯೆ ಆರಂಭವಾದ ಒಡನಾಟ, ಮುಂದಿನ ವರ್ಷಗಳಲ್ಲಿ ವಿಶೇಷವಾಗಿ ಬೆಳೆಯಿತು. ೨೦೦೬ರ ಕ್ಯಾಲೆಂಡರ್ ರೂಪಿಸಿ ೧೦೦ ಪ್ರತಿಗಳನ್ನು ಮಾರಿದ್ದು ಅವರಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ಛಾಯಾಚಿತ್ರ ಬೇಟೆಗಾಗಿ ಒಟ್ಟಾಗಿ ಹೋಗತೊಡಗಿದ ಗೆಳೆಯರ ಗುಂಪು ೨೦೦೬ ಫೆಬ್ರವರಿಯಲ್ಲಿ www.bangalorephotographyclub.com ಹುಟ್ಟು ಹಾಕಿತು. ವಾರ್ಷಿಕ ಛಾಯಾಚಿತ್ರ ಪ್ರದರ್ಶನವೂ ಆರಂಭವಾಯಿತು. ಈಗ ‘ಬಿಪಿಸಿ’ ಸಂಸ್ಥೆ ರಿಜಿಸ್ಟರ್ಡ್ ಆಗಿದೆ. ೮೦೦ಕ್ಕೂ ಹೆಚ್ಚು ನಾನಾ ರಾಜ್ಯ- ದೇಶಗಳ ಜನರ ಸದಸ್ಯತ್ವ ಹೊಂದಿದೆ. ಛಾಯಾಗ್ರಹಣ ಸಂಬಂಧಿತ ವಿಷಯಗಳ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತದೆ. ಕ್ಯಾಮೆರಾ-ಲೆನ್ಸ್‌ಗಳ ದರ, ಮಾರಾಟದ ಮಾತುಕತೆಗೆ ಅವಕಾಶವಿದೆ. ಛಾಯಾಗ್ರಹಣ ಕ್ಷೇತ್ರಕ್ಕೆ ಬಂದ ಹೊಸಬರಿಗಾಗಿ ಆಗಾಗ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಕನ್ನಡದ ಹೊಕ್ಕುಬಳಕೆ ತುಂಬ ಕಡಿಮೆಯಿದ್ದರೂ, ಅನುಭವಿ ಪೋಟೊಗ್ರಾಫರ್‌ಗಳ ಒಂದು ದೊಡ್ಡ ಸಮೂಹ ಅಲ್ಲಿದೆ. ಕ್ಯಾಮೆರಾ ಭಾಷೆ ಕಲಿಯಲು ಈ ಗುಂಪಿನಲ್ಲಿ ಸಾಧ್ಯವಿದೆ.


ಗುಹಾ ಪ್ರವೇಶದ ಬಳಿಕ...

'ಗುಹಾಗೆ ಕ್ರಿಕೆಟ್ ಬಿಟ್ಟು ಬೇರೇನು ಗೊತ್ತು?’ ಅಂತ ಕೆಲ ಪ್ರಸಿದ್ಧ ಬರಹಗಾರರರೇ ಹಾಸ್ಯ ಮಾಡುತ್ತಿದ್ದರೂ, ಭಾರತೀಯ ಇಂಗ್ಲಿಷ್ ಬರವಣಿಗೆಯಲ್ಲಿ ರಾಮಚಂದ್ರ ಗುಹಾ ಮುಂಚೂಣಿಗೆ ಬಂದಾಗಿದೆ. ಖ್ಯಾತ ಇತಿಹಾಸತಜ್ಞರಾದ ಅವರ ಮುಂದಿನ ಏಳು ಪುಸ್ತಕಗಳನ್ನು ಪ್ರಕಟಿಸುವುದಾಗಿ ‘ಪೆಂಗ್ವಿನ್ ಇಂಡಿಯಾ’ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ಸಂಸ್ಥೆ ನೀಡಿರುವ ಮುಂಗಡ ಹಣ ಸುಮಾರು ರೂ. ೯೭ ಲಕ್ಷ . ಇನ್ನೆರಡು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಾದ ‘ಹಾರ್ಪರ್ ಕಾಲಿನ್ಸ್’ ಮತ್ತು ‘ರ್‍ಯಾಂಡಮ್ ಹೌಸ್ ಇಂಡಿಯಾ’ಗಳೂ ಆ ಸ್ಪರ್ಧೆಯಲ್ಲಿದ್ದುವಂತೆ. ಅವೆರಡೂ ಸಂಸ್ಥೆಗಳು ಕೊಂಚ ಹೆಚ್ಚಿನ ಮೊತ್ತವನ್ನೊಡ್ಡಿದರೂ, ಗುಹಾ ಮಾತ್ರ ಪೆಂಗ್ವಿನ್‌ಗೆ ಒಲಿದಿದ್ದಾರೆ. ಬೂಕರ್ ಪ್ರಶಸ್ತಿ ಸನಿಹ ತಲುಪಿದ್ದ ಅಮಿತ್ವಘೋಷ್‌ಗೆ ಪೆಂಗ್ವಿನ್‌ನವರು ಕೊಟ್ಟಿದ್ದು ೫೫ ಲಕ್ಷರೂ.. ನಂದನ್ ನೀಲೇಕಣಿಯವರ 'ಇಮ್ಯಾಜಿನಿಂಗ್ ಇಂಡಿಯಾ’ಗೆ ರೂ.೨೫ ಲಕ್ಷ, ಅರವಿಂದ ಅಡಿಗರ ‘ವೈಟ್ ಟೈಗರ್’ಗೆ ೧೩ ಲಕ್ಷ . ಹಾಗಿರುವಾಗ ಸೃಜನೇತರ ವಿಭಾಗಕ್ಕೆ ಸೇರುವ ಗುಹಾ ಅವರಿಗೆ ಒಲಿದ ಈ ಲಕ್ಷ್ಮೀ ಕಟಾಕ್ಷ ಭಾರತೀಯ ಬರಹಗಾರರಿಗೆ ಹೊಸ ಭರವಸೆ. ಏಳು ಪುಸ್ತಕಗಳಲ್ಲಿ ಮೊದಲನೆಯದ್ದಾದ 'ದ ಮೇಕರ್‍ಸ್ ಆಫ್ ಮಾಡರ್ನ್ ಇಂಡಿಯಾ’ ೨೦೧೦ರಲ್ಲಿ ಹೊರಬರಲಿದೆ ಅಂತ ‘ಪೆಂಗ್ವಿನ್ ಇಂಡಿಯಾ’ ತಿಳಿಸಿದೆ. ೧೯ನೇ ಶತಮಾನದಿಂದ ಆಧುನಿಕ ಭಾರತ ಬೆಳೆದು ಬಂದ ಬಗೆಯನ್ನು ಪ್ರಭಾವಿ ರಾಜಕೀಯ ವ್ಯಕ್ತಿಗಳ ಮೂಲಕ ಅದರಲ್ಲಿ ಚಿತ್ರಿಸಲಾಗುವುದಂತೆ. ಅಲ್ಲದೆ ಅವರು ಮಹಾತ್ಮಾ ಗಾಂಧಿ ಜೀವನ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆಯಲಿರುವುದು ವಿಶೇಷ ಕುತೂಹಲ ಕಾರಣ.
ಡೆಹ್ರಾಡೂನ್‌ನಲ್ಲಿ ಹುಟ್ಟಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ರಾಮಚಂದ್ರ ಗುಹಾ, ಈ ೪೧ರ ವಯಸ್ಸಿನಲ್ಲೇ ಎತ್ತರಕ್ಕೇರಿದವರು. ಅವರೀಗ ವೃತ್ತಿಪರ ಬರಹಗಾರ ಮತ್ತು ಮಾತುಗಾರ. ಮೊನ್ನೆ ಮೊನ್ನೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಕೆ.ವಿ. ಸುಬ್ಬಣ್ಣರ ಇಂಗ್ಲಿಷ್‌ಗೆ ಅನುವಾದಿತ ಲೇಖನಗಳ ಸಂಕಲನ ಬಿಡುಗಡೆಯಾದಾಗ, ಗುಹಾ ಮಾತನಾಡಿದ ಶೈಲಿಯಲ್ಲಿ ಆ ವೃತ್ತಿಪರತೆ ಪ್ರತಿಬಿಂಬಿಸುತ್ತಿತ್ತು. ಪರಿಸರ-ಸಮಾಜ-ರಾಜಕೀಯ-ಕ್ರಿಕೆಟ್-ಇತಿಹಾಸ ಹೀಗೆ ನಾನಾ ಕ್ಷೇತ್ರಗಳ ಪರಿಣತರಾದ ಇವರು ವೃತ್ತಿಪರ ಚಿಂತಕರೂ ಹೌದಾ?! ಎಂಟು ಜನ ಹೊಸ ಕಾದಂಬರಿಗಳನ್ನು ಬರೆಯುತ್ತಿರುವಾಗಲೇ ವರನ್ನು ಪರೀಕ್ಷಿಸಿದ ಸಂದರ್ಶನ ಇತ್ತೀಚೆಗೆ ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿತ್ತು. ಕನ್ನಡದಲ್ಲಿ ಇಂತಹ ಬೆಳವಣಿಗೆಯೇ ಅಪರೂಪ. ಇನ್ನೂ ಲೈಬ್ರರಿಗಳನ್ನೋ , ಪ್ರಶಸ್ತಿಯಲ್ಲಿ ಸಿಕ್ಕ ಮೊತ್ತವನ್ನೋ ನಂಬಿಕೊಂಡಿರುವ ಕನ್ನಡ ಪ್ರಕಾಶನ ಉದ್ಯಮ, ಓದುಗರನ್ನು ನಂಬಿಕೊಳ್ಳುವಂತಾಗುವುದು ಎಂದು? ಬರಹಗಾರ ಕುಂ.ವೀ. ತಮ್ಮದೇ ಪ್ರಕಾಶನ ಸಂಸ್ಥೆ ಆರಂಭಿಸುತ್ತಿರುವುದು ಎಂತಹ ಬೆಳವಣಿಗೆ? ಬರವಣಿಗೆ-ಪುಸ್ತಕ ಪ್ರಕಾಶನ ಉದ್ಯಮವಾಗದಿದ್ದರೇ ಒಳ್ಳೆಯದಾ? ಹುಬ್ಬೇರುತ್ತದೆ ಅನೇಕ ಸಲ.
ಪೋಟೊ ಕೃಪೆ:www.geocities.com/nrutyas/d1.htm

Read more...

August 15, 2009

'ಇಲ್ಲದ ತೀರದಲ್ಲಿ' - ಇನ್ನೊಂದು ಹೊಸ ಪುಸ್ತಕದ ಬಗ್ಗೆ


ಈ ಅಕ್ಷರಗಳಲ್ಲಿ ದುಃಖವನ್ನು ತುಂಬಿದ್ದೇನೆ
ತುಳುಕದಂತೆ ನೋಡಿಕೊಳ್ಳಿ ಕಣ್ಣೀರು.
ದುಃಖ ಹೀರಿಕೊಂಡೂ
ಒದ್ದೆಯಾಗವು ಅಕ್ಷರಗಳು .

ಯಾವತ್ತೋ ಬರೆದಿಟ್ಟಿದ್ದ ಈ ನಾಲ್ಕು ಸಾಲು ಈಗ ನೆನಪಾಯಿತು. ಅದಕ್ಕೆ ಕಾರಣ, ಅರವಿಂದ ಚೊಕ್ಕಾಡಿಯವರ 'ಇಲ್ಲದ ತೀರದಲ್ಲಿ-ಅಪ್ಪನ ಬದುಕಿನೊಂದಿಗೆ ಸಂವಾದ’ ಎಂಬ ಇತ್ತೀಚೆಗಿನ ಪುಸ್ತಕ. ನೂರಮೂವತ್ತು ಪುಟಗಳ, ರೂ.ಅರುವತ್ತು ಬೆಲೆಯ ಈ ಪುಸ್ತಕವನ್ನು ಬಳ್ಳಾರಿಯ 'ಲೋಹಿಯಾ ಪ್ರಕಾಶನ' ಪ್ರಕಟಿಸಿದೆ. ತುಂಬ ಪ್ರಖರವಾದ ಕಟು ಸತ್ಯಗಳ ಗುಚ್ಛ ಅದು. ಅದಕ್ಕೆ ಪ್ರಮೀಳಾ ಚೊಕ್ಕಾಡಿ ಬರೆದ ಮುನ್ನುಡಿಯ ಆಯ್ದ ಭಾಗ ಹಾಗೂ ಪುಸ್ತಕ ಓದಿ ಅರವಿಂದರಿಗೆ ನಾನು ಬರೆದ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಒಂದ್ಹತ್ತು ನಿಮಿಷ ಇಲ್ಲಿ ಕಳೆದುಹೋಗಿ.

...ಮಾವ ನಮ್ಮನ್ನಗಲಿ ಮೂರು ತಿಂಗಳು ಕಳೆದ ಮೇಲೂ ಯಾವುದೋ ವಿಷಾದ ಭಾವ ನಮ್ಮನ್ನು ಕಾಡುತ್ತಿದೆ. ಅದು ಅವರ ಸಾವಿನದ್ದಾಗಿರದೆ ಅವರು ಕೊನೆಯ ದಿನಗಳಲ್ಲಿ ಬದುಕಿದ ರೀತಿಯಿಂದ ಬರುವ ವಿಷಾದವಾಗಿದೆ...ಮಾವ ತಮ್ಮ ಆಪ್ತ ವಿಚಾರಗಳನ್ನೆಲ್ಲ ನನ್ನಲ್ಲೇ ಹೇಳಿಕೊಳ್ಳುತ್ತಿದ್ದರು. ಅಪ್ಪ, ಅಮ್ಮ, ಅಣ್ಣ-ತಮ್ಮಂದಿರು, ಜೋಡುಪಾಲದ ಆಸ್ತಿ, ಕೆಲವೊಮ್ಮೆ ಪುರಾಣ, ಮಗದೊಮ್ಮೆ ರಾಜಕೀಯ, ಇನ್ನೊಮ್ಮೆ ಪ್ರಸ್ತುತ ಸಾಮಾಜಿಕ ಸ್ಥಿತಿಗತಿಗಳು, ವಣಾಶ್ರಮ ವ್ಯವಸ್ಥೆ ಹೀಗೆ ಉಮೇದು ಬಂದರೆ ಆ ದಿನವೆಲ್ಲ ತುಂಬಾ ಮಾತನಾಡುತ್ತಿದ್ದರು ಮಾವ. ನಾನು ಆಗಾಗ ಮಾವನನ್ನು ಕೆಣಕುವುದಿತ್ತು. ‘ಮಾವ, ಜೋಡುಪಾಲದ ಆಸ್ತಿಯಲ್ಲಿ ಪಾಲು ಸಿಕ್ಕಿದರೆ ನನಗೇನು ಕೊಡುತ್ತೀರಿ?’ ಎಂದು. ‘ನನಗೆ ನಾಲ್ಕು ಲಕ್ಷ ಸಿಕ್ಕಿದರೆ ನಿನಗೆ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ’ ಅನ್ನುತ್ತಿದ್ದರು ಮಾವ. ಆಗ ನಾನು ಹೇಳುತ್ತಿದ್ದೆ- 'ಮಾವ ನೀವು ಕೊಡುವ ಹಣವನ್ನು ಸೇರಿಸಿ ನಾನೊಂದು ವಾಷಿಂಗ್ ಮೆಷಿನ್ ತೆಗೆಯುವವಳಿದ್ದೇನೆ.' ಆಗ ಮಾವ ಹೇಳುತ್ತಿದ್ದರು-‘ನೀನು ವಾಷಿಂಗ್ ಮೆಷಿನ್ ತೆಗೆಯುವುದಾದರೆ ನಾನು ಹಣವನ್ನೇ ಕೊಡಲಾರೆ. ಅದನ್ನು ಹಾಗೆಯೇ ತೆಗೆದುಕೊಂಡು ಹೋಗಿ ನಿನ್ನ ಅಕೌಂಟ್‌ಗೆ ಹಾಕುತ್ತೀಯಾದರೆ ಮಾತ್ರ ನಾನು ನಿನಗೆ ಹಣ ಕೊಡಬಹುದು.' 'ಅಂದ ಹಾಗೆ ಮಾವ, ನಿಮಗೆ ಆಸ್ತಿಯಲ್ಲಿ ಯಾವಾಗ ಪಾಲು ಸಿಗುತ್ತದೆ?’ 'ನೀನಿಲ್ಲಿಂದ ಹೋಗ್ತೀಯೋ ಇಲ್ವೋ? ನಿನಗೇನು ಕೆಲಸ ಇಲ್ವಾ?’ ಎಂದು ನಗುತ್ತಾ ತಾವೇ ಎದ್ದು ಚಾಪೆ ಸೇರುತ್ತಿದ್ದರು...

...ಬಿಸಾಡಬಹುದಾದ ಕೈಚೀಲಗಳನ್ನು ಬಿಚ್ಚಿ ಹೊಸ ರೀತಿಯಲ್ಲಿ ಹೊಲಿಯುವುದು ಅವರ ಬಹಳ ಇಷ್ಟದ ಕೆಲಸ. ದಿನಪತ್ರಿಕೆಗಳನ್ನು ಸ್ವಲ್ಪವೂ ಕರೆ ಮಡಚದ ಹಾಗೆ ಅಚ್ಚುಕಟ್ಟಾಗಿ ಜೋಡಿಸಿಡುವುದು, ಬೇಡದ ಹಾಲಿನ ಕವರ್, ಪ್ಲಾಸಿಕ್ ಕವರ್, ಖಾಲಿ ಮದ್ದಿನ ಬಾಟಲ್‌ಗಳು, ಬಾರ ಹೋದ ಚಪ್ಪಲಿಗಳು ಇವೆಲ್ಲವನ್ನೂ ಮಾವ ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟು ಅನುಕೂಲವಾದಾಗ ಗುಜರಿ ಅಂಗಡಿಯಲ್ಲಿ ಮಾರಿ, ಸಿಕ್ಕಿದ ಹಣವನ್ನು ತಮ್ಮ ಅಕೌಂಟ್‌ನಲ್ಲಿಯೂ , ಮೊಮ್ಮಗಳ ಅಕೌಂಟ್‌ನಲ್ಲಿಯೂ ಜಮಾ ಮಾಡುತ್ತಿದ್ದರು. ಸಾಯುವ ಎರಡು ತಿಂಗಳ ಮೊದಲು ನನ್ನೆಲ್ಲಾ ನೋಟ್ಸ್ ಪುಸ್ತಕಗಳಿಗೆ ಮಾವ ನೀಟಾಗಿ ಬೈಂಡ್ ಹೊದೆಸಿಕೊಟ್ಟಿದ್ದರು....
...ಮೆಚ್ಚಿ ಮದುವೆಯಾದ ಅತ್ತೆ-ಮಾವ ಮೆಚ್ಚಿಕೊಂಡೇ ಬಾಳಬಹುದಾಗಿದ್ದ ಉನ್ನತ ಮಾನವೀಯ ಗುಣಗಳನ್ನು ಹೊಂದಿದ್ದೂ, ಒಂದೇ ಜೀವನ ದೋಣಿಯಲ್ಲಿ ಮುಖ ತಿರುಗಿಸಿಕೊಂಡು ಯಾನ ಮಾಡಿದರು. ಈಗ ಆ ಯಾನದಲ್ಲಿ ಮಾವನಿಲ್ಲ... -ಪ್ರಮೀಳಾ ಚೊಕ್ಕಾಡಿ

ಪ್ರಿಯ ಅರವಿಂದ ಚೊಕ್ಕಾಡಿಯವರಿಗೆ, ನಮಸ್ಕಾರ.
ಪುಸ್ತಕ ಕೈಗೆ ಬಂದಾಗ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ, ಮೊದಲು ಓದಿದ್ದು ಬೆನ್ನುಡಿ. ಅದನ್ನೋದಿದಾಗ ಮುನ್ನುಡಿಯನ್ನೂ ಪೂರ್ತಿ ಓದುವ ಮನಸ್ಸಾಯಿತು. ಮುನ್ನುಡಿ ಓದಿದ್ದೇ ಪುಸ್ತಕ ತೆರೆದು ಒಳಹೊಕ್ಕು ಕುಳಿತೆ. ಎರಡು ದಿನಗಳ ಎರಡೇ ಸಿಟ್ಟಿಂಗ್‌ಗಳಲ್ಲಿ ನೂರಮೂವತ್ತು ಪುಟಗಳ ಪುಸ್ತಕ ಓದಿ ಮುಗಿಸಿದಾಗ ತಲ್ಲಣಗೊಂಡಿದ್ದೆ. ನಾನು ಪುಸ್ತಕ ಓದುವುದು ನಿಧಾನ. ಅಲ್ಲದೆ ಎರಡುಮೂರು ಪುಸ್ತಕಗಳನ್ನಿಟ್ಟುಕೊಂಡು ಒಂದೊಂದನ್ನೇ ಚೂರುಚೂರು ಓದುತ್ತಿರುವುದು ಅಭ್ಯಾಸ. ಅಂತದ್ದರಲ್ಲಿ ನೀವು ಬರೆದ ಪುಸ್ತಕ, ಅದಕ್ಕೆ ಬೆನ್ನುಡಿ-ಮುನ್ನುಡಿಯಾಗಿ ನಿಮ್ಮ ಪತ್ನಿ ಪ್ರಮೀಳಾ ಚೊಕ್ಕಾಡಿ ಬರೆದ ಚೊಕ್ಕದಾದ ಬರಹ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ.

ನನ್ನಪ್ಪನ ಬಗೆಗಿನ ಲೇಖನಗಳ ಸಂಕಲನದಲ್ಲಿ ನಾನು ಹೀಗೆ ಬರೆದಿದ್ದೆ- 'ಈ ಪುಸ್ತಕವು ಅಪ್ಪ ಮತ್ತು ಮನೆಯ ಖಾಸಗಿ ವಿವರಗಳನ್ನು ಸಾರ್ವಜನಿಕಗೊಳಿಸುವ ಅಥವಾ ಸಾರ್ವಜನಿಕವಾಗಿ ಖಾಸಗೀಕರಣಗೊಳಿಸುವ (ಅಂದರೆ ಸಾರ್ವಜನಿಕವಾಗಿ ಇನ್ನಷ್ಟು ಆಪ್ತವಾಗಿಸುವ !) ಕೆಲಸ. ಇಲ್ಲಿ ಬಯಲಾಗುವ ಖಾಸಗಿ ವಿವರಗಳು ಅನಗತ್ಯ ಅನ್ನಿಸಬಹುದು. ಆದರೆ ಇನ್ನೊಂದು ಕಿಟಕಿಯಿಂದ ನೋಡಿದರೆ, ಸಾರ್ವಜನಿಕ ಜೀವನ ತುಂಬುವುದೇ ಇಂತಹ ಖಾಸಗಿ ವಿವರಗಳಿಂದಲೋ ಏನೋ? ಇವೆಲ್ಲವೂ ಕೊಂಚ ಝಗಮಗಿಸಿಯಾವು ಅಥವಾ ಸಪ್ಪೆಯಾಗಿ ಕಂಡಾವು. ಅದೇನಿದ್ದರೂ ಅಕ್ಷರಗಳ ಚಮತ್ಕೃತಿ ಅಷ್ಟೆ'. ಅತ್ತೆಯಂದಿರು, ಮಾವಂದಿರು, ದೊಡ್ಡಮ್ಮಂದಿರು ಎಲ್ಲರೂ ಬರೆದಿದ್ದರಿಂದ ಅದು ತೀರಾ ಖಾಸಗಿಯಾಗೇ ಇತ್ತು. ಆ ನೆನಪಿನಲ್ಲಿ ನಿಮ್ಮ ಪುಸ್ತಕ ತೆರೆದರೆ, ಇಲ್ಲೆಲ್ಲ ಹರಿದು ಹಂಚಿ ಹೋದ ಸಾಮ್ರಾಜ್ಯ. ಹಾಗಂತ ಅಪ್ಪನನ್ನು ಸಾರ್ವಜನಿಕವಾಗಿ ಮೆರೆಸುವ, ಆಪ್ತತೆಯ ನೆಪ ಹೇಳಿ ಭಾವನೆಗಳನ್ನು ಹೈಜಾಕ್ ಮಾಡುವ ಉದ್ದೇಶವೂ ಇಲ್ಲ. ಎಲ್ಲ ‘ನೇರ-ಸರಳ-ದಿಟ್ಟ-ನಿರಂತರ’. ಇದು ತಮಾಷೆ ಅಲ್ಲ. ಓದಿ ಕನಿಕರ-ಸಹಾನುಭೂತಿ ತೋರಿಸುವಂತಿಲ್ಲ. ಬೆಚ್ಚಿಬೀಳಿಸುವ ಭಯಾನಕತೆಯೊ, ಬರೀ ಶೋಕಗೀತೆಯೂ ಅಲ್ಲ. ನಮ್ಮಲ್ಲೆಲ್ಲ ಬಂಧುಗಳು ಸೇರಿದಾಗ 'ಸುಖದುಃಖ ಮಾತಾಡುವುದು' ಅಂತಿದೆಯಲ್ಲ, ಸುಮಾರಾಗಿ ಹಾಗೆಯೇ. ಹಾಗಾಗಿ ಕೆಲವೆಡೆ ಪದಗಳ ದುಂದುವೆಚ್ಚವೂ ಆಗಿದೆ. ಕವಿಯಲ್ಲದ ನೀವು, ಆ ಬಗ್ಗೆ ಚಿಂತಿಸಬೇಕಿಲ್ಲ ಬಿಡಿ. ಇಲ್ಲಿ ಅಪ್ಪ ಅಮ್ಮನ ವಿಮರ್ಶೆಯನ್ನೇ ಮಾಡಿದ್ದೀರಿ. ಹಾಗಾಗಿ ಈ ಪುಸ್ತಕದ ವಿಮರ್ಶೆ ಮಾಡುವುದು ಸುಲಭವೇನೂ ಅಲ್ಲ, ಆ ಉದ್ದೇಶವೂ ನನಗಿಲ್ಲ.

'ಸೃಜನಶೀಲ'ಅಂತ ಕರೆಯಲ್ಪಡುವ ಬರಹಗಳ ಯಾವುದೇ ತಂತ್ರಗಳನ್ನು ಬಳಸದೆ, ಏಕರೂಪವಾಗಿ, ನಿರುದ್ವಿಗ್ನವಾಗಿ, ಅಲಿಪ್ತರಾಗಿ ಬರೆದ ಶೈಲಿಯೇ ಇಷ್ಟವಾಯಿತು. ಇಲ್ಲಿ ಯಾರೂ ಹೀರೊ, ವಿಲನ್‌ಗಲ ವಿಜೃಂಭಣೆಯ ಕತೆ ಅಲ್ಲ. ಎಲ್ಲರೂ ಸಿಹಿ-ಉಪ್ಪು-ಹುಳಿ-ಖಾರದ ಮನುಷ್ಯರು. ಅನೇಕ ವ್ಯಕ್ತಿಗಳ ಯಶಸ್ಸಿನ ಕುರಿತ ಪುಸ್ತಕಗಳು ಇಂಗ್ಲಿಷ್‌ನಲ್ಲಿ ಬಹಳಷ್ಟಿವೆ. ನಿಮ್ಮದು ಯಶೋಗಾಥೆಯ ಪುಸ್ತಕ ಅಲ್ಲದಿದ್ದರೂ ಯಶಸ್ವಿ ಪುಸ್ತಕ. ತೀರಿಹೋದ ಅಪ್ಪನ ನೆನಪಿನಲ್ಲಿ ಬರೆದ ಇಂತಹ ಪುಸ್ತಕ, ಕನ್ನಡದಲ್ಲಿ ಇದೇ ಮೊದಲನೆಯದು ಅಂದುಕೊಂಡಿದ್ದೇನೆ. ನಾಲ್ಕು ಪುಟ ತಿರುವಿದಾಗಲೇ ರೇಜಿಗೆ ಹುಟ್ಟಿಸುವ ಅಭಿನಂದನ-ಸಂಸ್ಮರಣ ಗ್ರಂಥಗಳು ನೂರಾರು ಬರುತ್ತಿವೆ. ಆದರೆ ನಿಮ್ಮ ಪುಸ್ತಕ ನೆನಪಿನಲ್ಲುಳಿಯುತ್ತದೆ, ಬೆಳೆಯುತ್ತದೆ. ಯಾವ ಭಾಗ ಹೆಚ್ಚು ಇಷ್ಟವಾಯಿತು ಅಂತೇನಾದರೂ ನೀವು ಕೇಳುವುದಿದ್ದರೆ, ಬಹುಶಃ ‘ಅದೇಕೋ ಅಭಾಗ್ಯ ಈ ಭೀತಿ ಮೌನ’ ಅಧ್ಯಾಯ ನನಗೆ ಹೆಚ್ಚು ಇಷ್ಟವಾಯಿತು ಅಂದೇನು.

ಇದೊಂದು ಸಾತ್ವಿಕ ಬಂಡಾಯದ ಪುಸ್ತಕ. ಗಾಂಧಿಯ ಮಾದರಿ ಇದಕ್ಕಿದೆ. ತುಂಬಾ ವಿವರಗಳು (ಡಿಟೈಲ್ಸ್) ಇರುವುದರಿಂದ ಓದಿಸಿಕೊಂಡೂ ಹೋಗುತ್ತದೆ. ತುಂಬ ಪ್ರಖರವಾದ ಕಟು ಸತ್ಯಗಳನ್ನು ಜೋಡಿಸಿದ್ದೀರಿ. ನಿಮ್ಮ ಜೀವನ ದಾರಿಯ ಸ್ಪಷ್ಟತೆ ಬೆರಗು ಹುಟ್ಟಿಸುತ್ತದೆ. ಸುಮ್ಮನೆ ಹೊಗಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಬಹುದಿತ್ತು, ಹೌದು. ಆದರೆ ಅನುಭವಕ್ಕೆ-ಸತ್ಯಕ್ಕೆ ನಿಷ್ಠನಾಗಿರುವುದೇ ಇಲ್ಲಿ ನಿಮಗೆ ಮುಖ್ಯ, ಪರಿಣಾಮದ ಬಗ್ಗೆ ಆಸಕ್ತಿಯಿಲ್ಲ ಅಂತ ನನಗೆ ಗೊತ್ತು. ಸಾವಿರಾರು ಪ್ರತಿ ಮಾರಾಟವೊ, ಪ್ರಶಸ್ತಿಗಳ ಆಕಾಂಕ್ಷೆಯೊ ಇದರ ಹಿಂದಿಲ್ಲ. ಒಬ್ಬ ಬರಹಗಾರ ಮಗನಾಗಿ ಇಷ್ಟು ಕರ್ತವ್ಯ ಅನ್ನುವ ದೃಷ್ಟಿ ನಿಮ್ಮಲ್ಲಿದ್ದಂತೆ ಅನಿಸುತ್ತದೆ. ಅಪ್ಪ ಹುಷಾರಿಲ್ಲದಿದ್ದಾಗ ಉಪಚರಿಸುವುದು ಹೇಗೆ ಮಗನ ಕರ್ತವ್ಯವೋ, ಅವರಿಲ್ಲದಾದಾಗ ಅವರ ಬಗ್ಗೆ ಒಂದಷ್ಟು ಬರೆಯುವುದು ಬರಹಗಾರ ಮಗನಾಗಿ, ನೀವು ಅಪ್ಪನಿಗೆ, ಈ ಅಕ್ಷರಗಳಿಗೆ ಮಾಡುವ ಋಣ ಸಂದಾಯದಂತೆ ಕಾಣುತ್ತಿದೆ, ಖುಶಿಯಾಗಿದೆ. ಪಾಕ ಸರಿಯಾಗಿದ್ದಾಗ ಆಹಾರವನ್ನು ಯಾವ ಆಕಾರದಲ್ಲಿಟ್ಟರೂ, ಯಾವ ಬಣ್ಣದಲ್ಲಿದ್ದರೂ ರುಚಿಯಾಗುವ ಹಾಗೆ, ಗಟ್ಟಿ ವಸ್ತುವಿನ ಈ ಪುಸ್ತಕ ಯಾವ ರೂಪದಲ್ಲಿದ್ದರೂ ರುಚಿಕರವೇ. ಈ ರೂಪದಲ್ಲೂ ಸ್ವಾದಿಷ್ಟವೇ.

ನೀವೇ ಬರೆದುಕೊಂಡ ಹಾಗೆ- ಅಪ್ಪ, ಅಮ್ಮನ ಸಾಮಾಜಿಕ ಋಣಗಳು ಹಾಗೆಯೇ ಇವೆ. ಈ ಕೃತಿಯಲ್ಲಿ ಉಪಕರಣಗಳಾಗಿ ಬರುವ ಮೂಲಕ ಓದುಗರಲ್ಲಿ ಒಂದು ಹೊಸ ಅರಿವನ್ನು ಹುಟ್ಟುಹಾಕಲು ಸಾಧ್ಯವಾದರೆ ಅವರು ಸಮಾಜಕ್ಕೆ ಸಲ್ಲಿಸಬೇಕಾದ ಋಣವನ್ನು ಸಲ್ಲಿಸಿದಂತಾಗುತ್ತದೆ ಎಂದು ನಾನು ಭಾವಿಸಿದ್ದೇನೆ.' ಎಂಬುದು ಅರ್ಥಪೂರ್ಣವಾಗಿದೆ. ‘ಅಪ್ಪ-ಅಮ್ಮನಿಗಿಂತ ಯಾವುದೂ ದೊಡ್ಡದಲ್ಲ. ಆದರೆ ಸತ್ಯ ಎಲ್ಲದಕ್ಕಿಂತ ದೊಡ್ಡದು' ಎಂದು ನೀವು ನಂಬುವ ಮಾತು ಈ ಕೃತಿಯುದ್ದಕ್ಕೂ ಉಳಿದುಕೊಂಡಿದೆ ಎಂದು ಅನ್ನಿಸಿದೆ.
- ಸ್ನೇಹದಿಂದ ಸುಧನ್ವಾ

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP