September 02, 2009

ನಿಮ್ಮೊಂದಿಗೆ ಎರಡು ವಿಷಯಗಳು


ಬೆಂಗಳೂರು ಕ್ಲಿಕ್... ಕ್ಲಿಕ್
ಡಿಜಿಟಲ್ ಕ್ಯಾಮೆರಾಗಳು ಎಲ್ಲರ ಕೈಗೆ ಬಂದರೂ 'ಬಣ್ಣ-ಬೆಳಕು-ಕೋನ’ಗಳನ್ನು ಸರಿದೂಗಿಸಿಕೊಳ್ಳುವುದು ಬಹಳ ಸುಲಭವೇನೂ ಆಗಿಲ್ಲ. ಆದರೆ ಛಾಯಾಗ್ರಹಣ ರಂಗಕ್ಕೆ ಹೊಸ ಹರಿವು-ವ್ಯಾಪ್ತಿಯು ತಂತ್ರಜ್ಞಾನದ ಮೂಲಕ ಲಭ್ಯವಾಗಿದೆ. ಛಾಯಾಗ್ರಹಣ ಆಸಕ್ತರ ಸಂಖ್ಯೆ ವೇಗದಲ್ಲಿ ವೃದ್ಧಿಯಾಗುತ್ತಿದೆ. ಹೊಸ ಅಲೆಯ ಚಿತ್ರಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಆ.೨೮ರಿಂದ ೩೦ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ 'ಬೆಂಗಳೂರು ಫೋಟೊಗ್ರಫಿ ಕ್ಲಬ್', ಹಮ್ಮಿಕೊಂಡಿದ್ದ ನಾಲ್ಕನೇ ವಾರ್ಷಿಕ ‘ಛಾಯಾಚಿತ್ರ ಪ್ರದರ್ಶನ’ ಅದಕ್ಕೊಂದು ಸಾಕ್ಷಿ. ಸುಮಾರು ಐವತ್ತು ಜನ ಹವ್ಯಾಸಿ-ವೃತ್ತಿಪರ ಛಾಯಾಚಿತ್ರಗಾರರ ಫೋಟೊಗಳು 'ಮನಸ್ಸಿನ ಚೌಕಟ್ಟುಗಳು-೨೦೦೯' ಶೀರ್ಷಿಕೆಯಲ್ಲಿ ಅಲ್ಲಿ ಪ್ರದರ್ಶಿತವಾದವು. 'ಹವಾಮಾನ ಬದಲಾವಣೆ’ ಎಂಬ ವಿಷಯ ಕೇಂದ್ರವಾಗಿಟ್ಟು ಛಾಯಾಚಿತ್ರಗಳ ಪ್ರದರ್ಶನ, ವನ್ಯಜೀವಿ ಛಾಯಾಚಿತ್ರಗ್ರಾಹಕ ಜಯಂತ್ ಶರ್ಮಾ ಹಾಗೂ ಪ್ರಸಿದ್ಧರಾದ ಮಹೇಶ್ ಶಾಂತಾರಾಮ್ ಜತೆ ಸಂವಾದ, ಮತ್ತಷ್ಟು ವಿಶೇಷ.
೨೦೦೪ರಲ್ಲಿ ಇಂಟರ್‌ನೆಟ್‌ನಲ್ಲಿ ಸಿಕ್ಕ ನಾಲ್ಕು ಜನರ ಮಧ್ಯೆ ಆರಂಭವಾದ ಒಡನಾಟ, ಮುಂದಿನ ವರ್ಷಗಳಲ್ಲಿ ವಿಶೇಷವಾಗಿ ಬೆಳೆಯಿತು. ೨೦೦೬ರ ಕ್ಯಾಲೆಂಡರ್ ರೂಪಿಸಿ ೧೦೦ ಪ್ರತಿಗಳನ್ನು ಮಾರಿದ್ದು ಅವರಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ಛಾಯಾಚಿತ್ರ ಬೇಟೆಗಾಗಿ ಒಟ್ಟಾಗಿ ಹೋಗತೊಡಗಿದ ಗೆಳೆಯರ ಗುಂಪು ೨೦೦೬ ಫೆಬ್ರವರಿಯಲ್ಲಿ www.bangalorephotographyclub.com ಹುಟ್ಟು ಹಾಕಿತು. ವಾರ್ಷಿಕ ಛಾಯಾಚಿತ್ರ ಪ್ರದರ್ಶನವೂ ಆರಂಭವಾಯಿತು. ಈಗ ‘ಬಿಪಿಸಿ’ ಸಂಸ್ಥೆ ರಿಜಿಸ್ಟರ್ಡ್ ಆಗಿದೆ. ೮೦೦ಕ್ಕೂ ಹೆಚ್ಚು ನಾನಾ ರಾಜ್ಯ- ದೇಶಗಳ ಜನರ ಸದಸ್ಯತ್ವ ಹೊಂದಿದೆ. ಛಾಯಾಗ್ರಹಣ ಸಂಬಂಧಿತ ವಿಷಯಗಳ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತದೆ. ಕ್ಯಾಮೆರಾ-ಲೆನ್ಸ್‌ಗಳ ದರ, ಮಾರಾಟದ ಮಾತುಕತೆಗೆ ಅವಕಾಶವಿದೆ. ಛಾಯಾಗ್ರಹಣ ಕ್ಷೇತ್ರಕ್ಕೆ ಬಂದ ಹೊಸಬರಿಗಾಗಿ ಆಗಾಗ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಕನ್ನಡದ ಹೊಕ್ಕುಬಳಕೆ ತುಂಬ ಕಡಿಮೆಯಿದ್ದರೂ, ಅನುಭವಿ ಪೋಟೊಗ್ರಾಫರ್‌ಗಳ ಒಂದು ದೊಡ್ಡ ಸಮೂಹ ಅಲ್ಲಿದೆ. ಕ್ಯಾಮೆರಾ ಭಾಷೆ ಕಲಿಯಲು ಈ ಗುಂಪಿನಲ್ಲಿ ಸಾಧ್ಯವಿದೆ.


ಗುಹಾ ಪ್ರವೇಶದ ಬಳಿಕ...

'ಗುಹಾಗೆ ಕ್ರಿಕೆಟ್ ಬಿಟ್ಟು ಬೇರೇನು ಗೊತ್ತು?’ ಅಂತ ಕೆಲ ಪ್ರಸಿದ್ಧ ಬರಹಗಾರರರೇ ಹಾಸ್ಯ ಮಾಡುತ್ತಿದ್ದರೂ, ಭಾರತೀಯ ಇಂಗ್ಲಿಷ್ ಬರವಣಿಗೆಯಲ್ಲಿ ರಾಮಚಂದ್ರ ಗುಹಾ ಮುಂಚೂಣಿಗೆ ಬಂದಾಗಿದೆ. ಖ್ಯಾತ ಇತಿಹಾಸತಜ್ಞರಾದ ಅವರ ಮುಂದಿನ ಏಳು ಪುಸ್ತಕಗಳನ್ನು ಪ್ರಕಟಿಸುವುದಾಗಿ ‘ಪೆಂಗ್ವಿನ್ ಇಂಡಿಯಾ’ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ಸಂಸ್ಥೆ ನೀಡಿರುವ ಮುಂಗಡ ಹಣ ಸುಮಾರು ರೂ. ೯೭ ಲಕ್ಷ . ಇನ್ನೆರಡು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಾದ ‘ಹಾರ್ಪರ್ ಕಾಲಿನ್ಸ್’ ಮತ್ತು ‘ರ್‍ಯಾಂಡಮ್ ಹೌಸ್ ಇಂಡಿಯಾ’ಗಳೂ ಆ ಸ್ಪರ್ಧೆಯಲ್ಲಿದ್ದುವಂತೆ. ಅವೆರಡೂ ಸಂಸ್ಥೆಗಳು ಕೊಂಚ ಹೆಚ್ಚಿನ ಮೊತ್ತವನ್ನೊಡ್ಡಿದರೂ, ಗುಹಾ ಮಾತ್ರ ಪೆಂಗ್ವಿನ್‌ಗೆ ಒಲಿದಿದ್ದಾರೆ. ಬೂಕರ್ ಪ್ರಶಸ್ತಿ ಸನಿಹ ತಲುಪಿದ್ದ ಅಮಿತ್ವಘೋಷ್‌ಗೆ ಪೆಂಗ್ವಿನ್‌ನವರು ಕೊಟ್ಟಿದ್ದು ೫೫ ಲಕ್ಷರೂ.. ನಂದನ್ ನೀಲೇಕಣಿಯವರ 'ಇಮ್ಯಾಜಿನಿಂಗ್ ಇಂಡಿಯಾ’ಗೆ ರೂ.೨೫ ಲಕ್ಷ, ಅರವಿಂದ ಅಡಿಗರ ‘ವೈಟ್ ಟೈಗರ್’ಗೆ ೧೩ ಲಕ್ಷ . ಹಾಗಿರುವಾಗ ಸೃಜನೇತರ ವಿಭಾಗಕ್ಕೆ ಸೇರುವ ಗುಹಾ ಅವರಿಗೆ ಒಲಿದ ಈ ಲಕ್ಷ್ಮೀ ಕಟಾಕ್ಷ ಭಾರತೀಯ ಬರಹಗಾರರಿಗೆ ಹೊಸ ಭರವಸೆ. ಏಳು ಪುಸ್ತಕಗಳಲ್ಲಿ ಮೊದಲನೆಯದ್ದಾದ 'ದ ಮೇಕರ್‍ಸ್ ಆಫ್ ಮಾಡರ್ನ್ ಇಂಡಿಯಾ’ ೨೦೧೦ರಲ್ಲಿ ಹೊರಬರಲಿದೆ ಅಂತ ‘ಪೆಂಗ್ವಿನ್ ಇಂಡಿಯಾ’ ತಿಳಿಸಿದೆ. ೧೯ನೇ ಶತಮಾನದಿಂದ ಆಧುನಿಕ ಭಾರತ ಬೆಳೆದು ಬಂದ ಬಗೆಯನ್ನು ಪ್ರಭಾವಿ ರಾಜಕೀಯ ವ್ಯಕ್ತಿಗಳ ಮೂಲಕ ಅದರಲ್ಲಿ ಚಿತ್ರಿಸಲಾಗುವುದಂತೆ. ಅಲ್ಲದೆ ಅವರು ಮಹಾತ್ಮಾ ಗಾಂಧಿ ಜೀವನ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆಯಲಿರುವುದು ವಿಶೇಷ ಕುತೂಹಲ ಕಾರಣ.
ಡೆಹ್ರಾಡೂನ್‌ನಲ್ಲಿ ಹುಟ್ಟಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ರಾಮಚಂದ್ರ ಗುಹಾ, ಈ ೪೧ರ ವಯಸ್ಸಿನಲ್ಲೇ ಎತ್ತರಕ್ಕೇರಿದವರು. ಅವರೀಗ ವೃತ್ತಿಪರ ಬರಹಗಾರ ಮತ್ತು ಮಾತುಗಾರ. ಮೊನ್ನೆ ಮೊನ್ನೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಕೆ.ವಿ. ಸುಬ್ಬಣ್ಣರ ಇಂಗ್ಲಿಷ್‌ಗೆ ಅನುವಾದಿತ ಲೇಖನಗಳ ಸಂಕಲನ ಬಿಡುಗಡೆಯಾದಾಗ, ಗುಹಾ ಮಾತನಾಡಿದ ಶೈಲಿಯಲ್ಲಿ ಆ ವೃತ್ತಿಪರತೆ ಪ್ರತಿಬಿಂಬಿಸುತ್ತಿತ್ತು. ಪರಿಸರ-ಸಮಾಜ-ರಾಜಕೀಯ-ಕ್ರಿಕೆಟ್-ಇತಿಹಾಸ ಹೀಗೆ ನಾನಾ ಕ್ಷೇತ್ರಗಳ ಪರಿಣತರಾದ ಇವರು ವೃತ್ತಿಪರ ಚಿಂತಕರೂ ಹೌದಾ?! ಎಂಟು ಜನ ಹೊಸ ಕಾದಂಬರಿಗಳನ್ನು ಬರೆಯುತ್ತಿರುವಾಗಲೇ ವರನ್ನು ಪರೀಕ್ಷಿಸಿದ ಸಂದರ್ಶನ ಇತ್ತೀಚೆಗೆ ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿತ್ತು. ಕನ್ನಡದಲ್ಲಿ ಇಂತಹ ಬೆಳವಣಿಗೆಯೇ ಅಪರೂಪ. ಇನ್ನೂ ಲೈಬ್ರರಿಗಳನ್ನೋ , ಪ್ರಶಸ್ತಿಯಲ್ಲಿ ಸಿಕ್ಕ ಮೊತ್ತವನ್ನೋ ನಂಬಿಕೊಂಡಿರುವ ಕನ್ನಡ ಪ್ರಕಾಶನ ಉದ್ಯಮ, ಓದುಗರನ್ನು ನಂಬಿಕೊಳ್ಳುವಂತಾಗುವುದು ಎಂದು? ಬರಹಗಾರ ಕುಂ.ವೀ. ತಮ್ಮದೇ ಪ್ರಕಾಶನ ಸಂಸ್ಥೆ ಆರಂಭಿಸುತ್ತಿರುವುದು ಎಂತಹ ಬೆಳವಣಿಗೆ? ಬರವಣಿಗೆ-ಪುಸ್ತಕ ಪ್ರಕಾಶನ ಉದ್ಯಮವಾಗದಿದ್ದರೇ ಒಳ್ಳೆಯದಾ? ಹುಬ್ಬೇರುತ್ತದೆ ಅನೇಕ ಸಲ.
ಪೋಟೊ ಕೃಪೆ:www.geocities.com/nrutyas/d1.htm

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP