August 30, 2007

ಲೆಕ್ಕದ ಮಾಷ್ಟ್ರು ನಮಗ್ಯಾವ ಲೆಕ್ಕ ?!

ಣಿತ ಅಂದರೆ ಅಮ್ಮನಿಗೆ ಬೈಗುಳ, ಅಪ್ಪನಿಗೂ ಅರ್ಥವಾಗದ್ದಕ್ಕೆ ಅಸಹನೆ, ಎದುರುರಿನ ಬೆಂಚಲ್ಲಿ ಕೂತಿದ್ದವನ ಪುಸಲಾಯಿಸಲು ಬೆಣ್ಣೆ , ಹುಬ್ಬು ಗಂಟಿಕ್ಕಿಕೊಂಡು ಬೆತ್ತ ಬೀಸುತ್ತಿರುವ ಅಧ್ಯಾಪಕರು, ಪ್ರೊಗ್ರೆಸ್ ರಿಪೋರ್ಟ್‌ನಲ್ಲಿ ಆಗಾಗ ಕೆಂಪು ಗೆರೆ -ಇವಿಷ್ಟು ವಂಶ ಪಾರಂಪರ್ಯವಾಗಿ ಬಂದಂತಹ ಸಂಗತಿಗಳು ! ಗಣಿತ ಅಧ್ಯಾಪಕರೆಂದರೆ ಮಕ್ಕಳು ಮುಖ ಹುಳ್ಳಗೆ ಮಾಡಿಕೊಳ್ಳುವುದು ಸಾಮಾನ್ಯ . ಆದರೆ ನಿಮ್ಮ ಲೆಕ್ಕಾಚಾರವನ್ನೇ ತಿರುಗಾಮುರಗಾ ಮಾಡುವಂತೆ, 'ಲೆಕ್ಕದ ಮಾಷ್ಟ್ರು ನಮಗ್ಯಾವ ಲೆಕ್ಕ ?' ಅಂತ ಕೆಲವು ಗಣಿತ ಗುರುಗಳ ಬಗ್ಗೆ ಶಿಷ್ಯಗಡಣ ಹೇಳುವ ಈ ಕತೆಯನ್ನು ತಾವು ಲಾಲಿಸಬೇಕು. ಪೆಟ್ಟುಗಳನ್ನೂ ಶಹಭಾಸ್‌ಗಿರಿಯಂತೆ ಪಡೆದ ಈ ಕತೆ ಕಳೆದು ಕೂಡಿಸಿ ಬರೆದದ್ದಲ್ಲ ಎಂಬುದನ್ನು ನಂಬಬೇಕು !

ನಮ್ಮ ಮನೆಯಲ್ಲೇ ಸುರುಸುರು ಹೀರಿ ಮಧ್ಯಾಹ್ನದೂಟ ಮಾಡಿ, ಅದು ಕರಗುವ ಮೊದಲೇ ನನ್ನ ಬೆನ್ನಿಗೇ ಡುಬುಡುಬು ಗುದ್ದು ಹಾಕಲು ಬರುವ ಈಶ್ವರ ಮಾಷ್ಟ್ರು ಇನ್ನೇನು...ಈ ಮೂರನೇ ತರಗತಿಗೆ ಕಾಲಿಡುತ್ತಾರೆ. ಗಣಿತ ಪಾಠ ಶುರುವಾಗುವ ಮೊದಲು ಅವರನ್ನು ಕೊಂಚ ನಿಮಗೆ ವರ್ಣಿಸುತ್ತೇನೆ...

ಬಾರೀ ಶಬ್ದ ಹೊರಡಿಸುವ, ಆದರೆ ಅಷ್ಟೇನೂ ನೋಯದ ಅವರ ಕೈಯಿಂದ ಬೆನ್ನಿನ ಮೇಲೊಂದು ಪೆಟ್ಟು ತಿನ್ನೋದೆಂದರೆ ಎಲ್ಲ ಹುಡುಗರಿಗೂ ವಿಚಿತ್ರ ಖುಶಿ ! (ಹುಡುಗಿಯರಿಗೆ ಈ ಭಾಗ್ಯವಿಲ್ಲ ! ) 'ಇವತ್ತು ಎಷ್ಟು ಡೋಲು ಬಾರಿಸಿದರು' ಅಂತ ನಾವು ಮಾತಾಡಿಕೊಳ್ಳದ ದಿನವಿಲ್ಲ. ಬಿಳಿ ಪಂಚೆ ಉಟ್ಟುಕೊಂಡು, ಮೂರು ಕಿಲೋಮೀಟರ್ ನಡಕೊಂಡು ಬರುತ್ತಿದ್ದ ಈ ಮಾಷ್ಟ್ರ ಹಣೆಯಲ್ಲಿ ಯಾವತ್ತೂ ತೆಳು ಗಂಧ ನಾಮ, ಕಿವಿಯಲ್ಲಿ ದೇವರ ಪ್ರಸಾದವಾಗಿ ದಾಸವಾಳದೆಸಳು. ಶಾಲೆಗಿಂತ ಕೊಂಚ ಹಿಂದಿರುವ ಅಶ್ವತ್ಥಕಟ್ಟೆಗೆ ಮೂರು ಸುತ್ತು ಹಾಕಿ, ಹತ್ತು ಪೈಸೆ ನಾಣ್ಯ ಕಾಣಿಕೆ ಇಡದೆ, ಅವರು ಶಾಲೆಯ ಮೆಟ್ಟಿಲು ತುಳಿಯುವವರೇ ಅಲ್ಲ. ಪ್ರತಿ ಶನಿವಾರ ಅವರಿದ್ದರೇ ಭಜನಾ ಕಾರ್‍ಯಕ್ರಮ ಗೌಜಿ. 'ಗುರುವಾರ ಬಂತಮ್ಮ ಗುರುವಾರ ಬಂತಮ್ಮ...'ಹಾಡನ್ನು ಅವರು ಹೇಳಿದರೇ ಕಾರ್‍ಯಕ್ರಮ ಸಂಪನ್ನವಾಗುವುದು. ಸ್ವಾತಂತ್ರ್ಯೋತ್ಸವದ ದಿನವಂತೂ ಹುಚ್ಚು ಆವೇಶ. ಈಶ್ವರ ಮಾಷ್ಟ್ರು 'ಝಂಡಾ ಊಂಚಾ ರಹೇ ಹಮಾರಾ...' ಹಾಡಿದರೆ ಮಕ್ಕಳು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಕತ್ತಿ ದೊಣ್ಣೆ ಹಿಡಿದರೂ ಆಶ್ಚರ್‍ಯವಿಲ್ಲ. ಅಂತಹ ಗಡುಸು ಏರು ಧ್ವನಿಯಲ್ಲಿ ಅವರು ವೀರಾವೇಶದಿಂದ "ಭಾರತ್ ಮಾತಾ ಕೀ ಜೈ' ಅಂತ ಕೂಗಿದಾಗ ಮಕ್ಕಳೆಲ್ಲ ಸೆಟೆದುಕೊಳ್ಳುತ್ತಾರೆ.

ಇವೆಲ್ಲವುಗಳಿಂದಾಗಿ ಅವರ ಬಗ್ಗೆ ಭಯಕ್ಕಿಂತ ಭಕ್ತಿಯೇ ಹೆಚ್ಚು . ಹಾಜರಿ ಕರೆವಾಗ 'ಪ್ರಸೆಂಟ್ ಸಾರ್', 'ಯಸ್ ಸಾರ್' ಅನ್ನೋದನ್ನೆಲ್ಲಾ ತೆಗೆದು ಹಾಕಿ 'ಇದ್ದೇನೆ ಸಾರ್' ಅನ್ನೋದನ್ನೇ ರೂಢಿಸಿದ ವ್ಯಕ್ತಿ ಅವರು. ಅವರ ಗಣಿತ ಪಾಠಕ್ಕೆ ಅಡಿಕೆ, ತೆಂಗುಗಳೇ ನಿತ್ಯ ಉದಾಹರಣೆಗಳು. ಶಾಲೆ ಬಳಿಯ ನಮ್ಮ ಮನೆಗೇ ಅವರು ಮಧ್ಯಾಹ್ನದೂಟಕ್ಕೆ ಬರುತ್ತಿದ್ದುದರಿಂದ, ನಮ್ಮಲ್ಲಿಂದ ಅವರಿಗೆ ಬಸಳೆ ಸೊಪ್ಪು , ಹೂವಿನ ಗಿಡ, ಮಾವಿನಹಣ್ಣು , ಹಿತ್ತಲಲ್ಲಿ ಎಳೆದ ತರಕಾರಿ ಹೀಗೆ ಏನಾದರೊಂದು ಸಂದಾಯವಾಗುತ್ತಲೂ ಇದ್ದುದರಿಂದ, ಅವರಿಗೂ ಅಪ್ಪ ಅತಿಪ್ರಿಯರಾಗಿದ್ದುದರಿಂದ ಮಾಷ್ಟ್ರು ಕೊಡುವ ಪೆಟ್ಟುಗಳು, ಅಪ್ಪ ಕೊಡುವ ಪೆಟ್ಟುಗಳಷ್ಟೇ ನನಗೆ ಸಹನಾಯೋಗ್ಯ ! 'ಅವರು ಲೆಕ್ಕಕ್ಕೆ ಮಾಷ್ಟ್ರು, ನೆಂಟ್ರ ಹಾಗೇ' ಅಂತ ಅಜ್ಜಿ ಕೂಡಾ ಹೇಳುತ್ತಿದ್ದುದುಂಟು.

ಇನ್ನು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡಿನೊಳಗೆ ನಾವೆಲ್ಲ ಕಾಣಿಸಿಕೊಂಡಾಗ ಸಿಕ್ಕ ಗಣಿತದ ಅಧ್ಯಾಪಕರಲ್ಲಿ ಒಬ್ಬರು-ಶಿವಮ್ಮ ಟೀಚರ್. ಅವರ ಗಂಡ ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ನನ್ನಪ್ಪನಿಗೂ ಮಾಷ್ಟ್ರರಾಗಿದ್ದವರು. ಇಂತಹ ಮುಖ್ಯೋಪಾಧ್ಯಾಯರು ಒಂದು ಕಾಲದಲ್ಲಿ ತಮ್ಮ ವಿದ್ಯಾರ್ಥಿನಿಯೂ ಆಗಿದ್ದ ಶಿವಮ್ಮರನ್ನೇ ಪ್ರೀತಿಸಿ ಮದುವೆಯಾಗಿದ್ದರು. ಇಂತಹ ಶಿವಮ್ಮ ಟೀಚರ್ ಬಲಗೈ ಬೆನ್ನ ಹಿಂದಕ್ಕೆ ಕಟ್ಟಿ ಎಡಗೈಯಲ್ಲಿ ಪಾಠ ಪುಸ್ತಕ ಹಿಡಿದು ಮಾತು ಶುರು ಮಾಡಿದರೆಂದರೆ ಮಕ್ಕಳ ಹತ್ತೂ ಬೆರಳುಗಳು ಕೆಲಸ ಮಾಡುತ್ತಿದ್ದವು ! ಅವರು ಹೊಡೆಯುವುದು, ಬಯ್ಯುವುದು, ಸಿಕ್ಕಾಪಟ್ಟೆ ಹೋಮ್‌ವರ್ಕ್ ಕೊಡುವುದು ಎಲ್ಲದರಿಂದಲೂ ಬಹಳ ದೂರ. ಗಣಿತದ ಅಗಣಿತ ಸಮಸ್ಯೆಗಳಿಗೆಲ್ಲ ಅವರದ್ದು ಯಾವತ್ತೂ ತಾಯಿ ಗುಣ. 'ಈ ಲೆಕ್ಕ ಬಿಡಿಸಲು ಸುಲಭ ಮಾರ್ಗಗಳಿರುವ ಒಂದು ಹಳೆಯ ಪುಸ್ತಕ ಕೊಡ್ತೇನೆ, ಅಮ್ಮ ಈ ಸಲ ಬೆಂಡೇಕಾಯಿ ಬೆಳೆಸಿದ್ದಾರಾ?, ನಿನ್ನ ಷರ್ಟ್ ತುಂಬಾ ಚೆನ್ನಾಗಿದೆ, ಬಹಳ ಕಷ್ಟ ಎನಿಸಿದರೆ ಲೆಕ್ಕ ಬಿಡಿಸುವ ಆ ಉದ್ದದ ಮಾದರಿಯನ್ನೇ ಬಿಟ್ಟುಬಿಡಿ-ಅದು ಬಹಳ ಹಳೆಯ ಕ್ರಮ-ಪರೀಕ್ಷೆಯಲ್ಲೂ ನಾನದನ್ನು ಕೇಳುವುದಿಲ್ಲ ...' ಅವರ ಮಾತಿನ ಸ್ಯಾಂಪಲ್‌ಗಳಷ್ಟೆ ಇವು.

ಉಜಿರೆ ಕಾಲೇಜಿನಲ್ಲಿ ಮ್ಯಾತ್‌ಮೆಟಿಕ್ಸ್ ಲೆಕ್ಚರ್ ಹೊಡೆದು ಹೊಡೆದು ನಿವೃತ್ತರಾಗಿರುವ ಜಯಲಕ್ಷ್ಮಿ ಮೇಡಂ ಅಂದರೆ ಲೋಕಪ್ರಸಿದ್ಧಿ. ವರ್ಷದ ಮುನ್ನೂರೈವತ್ತೈದು ದಿನ ಮುನ್ನೂರೈವತ್ತೈದು ಸೀರೆ ಉಡುವ ದಪ್ಪ ದೇಹದ ಜಯಲಕ್ಷ್ಮಿ ಮೇಡಂ, ಇತರೆಲ್ಲ ಮ್ಯಾತ್ಸ್ ಲೆಕ್ಚರರ್‌ಗಳನ್ನು 'ಲೆಕ್ಕಕ್ಕಷ್ಟೆ ' ಅಂತ ಮಾಡಿಬಿಟ್ಟಿದ್ದರು. ಪಿಯುಸಿಯ ಹಲವು ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ತಿದ್ದಿ ಕೊಡದೆ ಮೂಲೆಗೆ ಸೇರಿಸಿ- "ಎಲ್ಲರೂ ಇನ್ನಷ್ಟು ಚೆನ್ನಾಗಿ ಅಭ್ಯಾಸ ಮಾಡಬೇಕು' ಎಂದಷ್ಟೇ ಹೇಳುತ್ತ ನಮ್ಮಂತಹ ಹಲವರ ಮಾನವುಳಿಸಿದವರೇ ಅವರು. ಉಜಿರೆ ಕಾಲೇಜಿನಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳಿಗೆ ಜಯಲಕ್ಷ್ಮಿ ಮೇಡಂ ಅಂದ್ರೆ ಗಣಿತಕ್ಕಿಂತ ಅಚ್ಚುಮೆಚ್ಚು ಎನ್ನುವುದು ವ್ಯಂಗ್ಯವಲ್ಲ ! ಅವರು ಹೆಸರಾದದ್ದು ಸ್ಪಷ್ಟ ಸರಳ ಪಾಠದ ಶೈಲಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜತೆಗಿನ ಬಾಂಧವ್ಯಕ್ಕೆ . ಪ್ರೈಮರಿ ಮಕ್ಕಳಿಗೆ ಪಾಠ ಹೇಳಿದಂತೆಯೇ ಕಾಲೇಜಿನವರಿಗೂ ಹೇಳುವ ಶೈಲಿ ಅವರದ್ದು . ಗಣಿತದ ಒಂದು ಸಮಸ್ಯೆ ಬಿಡಿಸಿ 'ಕೆಳಗೆರಡು ಗೆರೆ ಎಳೆಯಿರಿ' ಅಂತ ಹೇಳಲೂ ಅವರು ಮರೆಯಲಾರರು.

ಹೈಸ್ಕೂಲಿನ ಗಣಿತ ಮಾಷ್ಟ್ರು ಸಶರೀರವಾಗಿ ನಮ್ಮೂರಿನ ಮನೆ ಸುತ್ತಮುತ್ತಲಲ್ಲೇ ಅಡ್ಡಾಡುತ್ತಿರುವುದರಿಂದ ಅವರನ್ನು ಬಯ್ಯುವಂತೆಯೂ ಇಲ್ಲ, ಹೊಗಳದಿರುವುದೂ ಸಾಧ್ಯವಿಲ್ಲ ! ಆದರೆ ಅವರೂ 'ಲೆಕ್ಕಕ್ಕೆ ಸಿಗುವ ಮಾಷ್ಟ್ರು 'ಎಂಬುದು ವಿದ್ಯಾರ್ಥಿಗಳಿಗೆ ಹೆಮ್ಮೆ . ತರಗತಿಯ ಒಬ್ಬರು ತಪ್ಪು ಮಾಡಿದರೆ ಎಲ್ಲರಿಗೂ ಮರದ ಸ್ಕೇಲಿನಲ್ಲಿ ಒಂದೊಂದು ಪೆಟ್ಟು ಈ ಚಂದ್ರಶೇಖರ ಮಾಷ್ಟ್ರಿಂದ ಗ್ಯಾರಂಟಿ ! ಏನೋ ಸ್ವೀಟ್ ಪ್ಯಾಕೆಟ್ ಪಡಕೊಳ್ಳುವವರಂತೆ ಮಕ್ಕಳೆಲ್ಲ ಎದ್ದು ನಿಂತಿದ್ದರೆ ಅವರು ಪ್ರತಿಯೊಬ್ಬರ ಅಂಗೈಗೂ ಚಿಟಿಲ್ ಚಿಟಿಲ್ ಎಂದು ಬಾರಿಸುತ್ತಾ ಬರುತ್ತಾರೆ. ಎದ್ದು ನಿಂತು ಆ ಮಹಾಪ್ರಸಾದವನ್ನು ಸ್ವೀಕರಿಸುವ ಗಳಿಗೆಗೆ ನಾವೆಲ್ಲ ಕಾಯುತ್ತಿರುತ್ತಿದ್ದೆವು. ತರಗತಿಗೆ ಬಂದರೆ ಒಂಚೂರೂ ಔದಾಸೀನ್ಯ ತೋರದೆ ಪಾಠ ಮಾಡುವ ಅವರಿಗೆ ಗಣಿತದ ಸಮಸ್ಯೆ-ಉತ್ತರಗಳೆಲ್ಲಾ ಮನೋಗತ. ಗಣಿತದ ಕಷ್ಟಗಳು ಗಣನೆಗೇ ಬಾರದ ಹಾಗೆ 'ತಪ್ಪುಕಷ್ಟಗಳನೆಲ್ಲ ನೂಕಾಚೆ ದೂರ' ಅನ್ನುತ್ತಲೇ ಪಾಠ ಮಾಡುತ್ತಿದ್ದವರು ಅವರು. 'ನಾಳೆ ನಾನು ಶಾಲೆಗೆ ಬರುವುದಿಲ್ಲ. ನನ್ನ ಪೀರಿಯಡ್‌ನಲ್ಲಿ ಆಟಕ್ಕೆ ಹೋಗಿ' ಅಂತನ್ನುವ ಕರುಣಾಮಯಿ ಲೆಕ್ಕದ ಮಾಷ್ಟ್ರು ಇನ್ನೆಲ್ಲಿ ಸಿಗಬೇಕು ?!

ಇವರೆಲ್ಲ 'ಕ್ಯಾಲ್ಯುಕುಲೇಟರ್ ಕಂಪ್ಯೂಟರುಗಳ ಪಿಡಿಯದೊಂದಗ್ಗಳಿಕೆ...'ಗೆ ಪಾತ್ರರಾದವರು. ರಾಮಾಯಣದಲ್ಲಿ ಸಮುದ್ರಕ್ಕೆ ಸೇತುವನ್ನು ಬಲಿಯುವಾಗ ಕಪಿಗಳಿಟ್ಟ ಕಲ್ಲುಗಳೆಲ್ಲ ಮುಳುಗಿ ಹೋಗುತ್ತಿದ್ದವಂತೆ. ಆದರೆ ರಾಮ ನಾಮವನ್ನು ಹೇಳಿ ಬಂಡೆಗಳನ್ನು ಇಳಿಸಿದಾಗ ಅವೆಲ್ಲ ತೇಲಲಾರಂಭಿಸಿ ಹಾದಿ ಸುಗಮವಾಯಿತಂತೆ. ಹಾಗೆ ಈ ಗುರುಗಳ ಹೆಸರು ಹೇಳಿ ಯಾವುದನ್ನು ಲೆಕ್ಕ ಹಾಕಿದರೂ ಕಡಿಮೆ ಬಿದ್ದದ್ದೆಲ್ಲಾ ಸರಿಯಾಗಿ , ಹೆಚ್ಚೆಂದು ಕಂಡದ್ದೆಲ್ಲಾ ನಿಶ್ಯೇಷವಾಗಿ ತೇಲುತ್ತಲೇ ಇರಬಹುದೆಂಬಷ್ಟು ವಿಶ್ವಾಸ ನಮ್ಮದು !

ಮ್ಯಾತ್ಸ್ ತುಝೆ ಸಲಾಮ್.

Read more...

August 20, 2007

ನಗ್ ನಗ್ತಾ ಇರಿ

ಬಿರುಗಾಳಿ ಮಳೆಯ ರಾತ್ರಿ . ಕಾರಿನಲ್ಲಿ ಪ್ರಯಾಣಿಸುತ್ತಿರುವ ನಿಮಗೆ, ನಿಲ್ದಾಣವೊಂದರಲ್ಲಿ ಮೂವರು ಕಾಣುತ್ತಾರೆ.
ಒಬ್ಬಳು - ಸಾಯುವ ಸ್ಥಿತಿಯಲ್ಲಿರುವ ಮುದುಕಿ
ಒಬ್ಬ - ಹಿಂದೆ ನಿಮ್ಮ ಜೀವವುಳಿಸಿದ್ದ ಸ್ನೇಹಿತ
ಇನ್ನೊಬ್ಬಳು - ನೀವು ಪತ್ನಿಯಾಗಿಸಿಕೊಳ್ಳಲು ಕನಸು ಕಾಣುತ್ತಿದ್ದ ಹುಡುಗಿ !
ನಿಮ್ಮ ಕಾರಿನಲ್ಲಿ ಇನ್ನೊಬ್ಬರು ಕೂರಲಷ್ಟೇ ಜಾಗವಿದೆ. ಆಗ ಯಾರನ್ನು ಕರೆದೊಯ್ದು ಬದುಕಿಸುತ್ತೀರಿ?
ಯೋಚ್ನೆ ಮಾಡ್ರೀ....

ನೀವು ಯಾರಾದರೊಬ್ಬರ ಹೆಸರು ಹೇಳಬಹುದು. ಆದರೆ....
ಕಂಪನಿಯೊಂದು ಅಭ್ಯರ್ಥಿಗಳ ಸಂದರ್ಶನದಲ್ಲಿ ಈ ಪ್ರಶ್ನೆಯನ್ನು ಕೇಳಿದಾಗ ಗೆದ್ದವನು ಕೊಟ್ಟ ಉತ್ತರ ಹೀಗಿತ್ತು -
"ನಾನು ಗೆಳೆಯನಿಗೆ ಕಾರಿನ ಕೀ ಕೊಟ್ಟು ಮುದುಕಿಯನ್ನು ಆಸ್ಪತ್ರೆಗೆ ಸೇರಿಸಲು ಹೇಳುತ್ತೇನೆ. ಪ್ರಿಯತಮೆಯ ಜತೆ ಇನ್ನೊಂದು ವಾಹನಕ್ಕಾಗಿ ಕಾಯುತ್ತೇನೆ !

Read more...

August 19, 2007

'ಹುಟ್ಟು' ಹಾಕಿದವನ ದೋಣಿಯಲ್ಲಿ ಬರಿಗೈ ಬೀಸುತ್ತ...


ಳ್ಳಿಯಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು ಆಯ್ಕೆ ಎಂಬಂತೆ ಪರಿವರ್ತಿಸಿಕೊಂಡವರು ಸತ್ಯಮೂರ್ತಿ ದೇರಾಜೆ. ತಾನು ಇರುವಲ್ಲೆ ಇದ್ದು ಅರಳುವುದು, ಸುತ್ತಲಿನ ಜನರ ನಡುವೆ ಅರ್ಥಪೂರ್ಣವಾಗುವುದು ಅವರಿಗೆ ಮುಖ್ಯವಾಯಿತು. ಐವರ್ನಾಡು-ಚೊಕ್ಕಾಡಿಗಳಂತಹ ಹಳ್ಳಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಕಾರ್ಯ ದೊಡ್ಡದು. ಸತ್ಯಮೂರ್ತಿ ಊರಿನ ಮ್ಯಾನೇಜರ್! ಅವರ ಸಾರ್ವಜನಿಕ ಬದುಕಿನ ಮುಖ್ಯ ಕ್ಷೇತ್ರಗಳಾದ- ರಾಜಕೀಯ, ದೇವಸ್ಥಾನ, ಸಾಹಿತ್ಯ, ಯಕ್ಷಗಾನಗಳು ಎಲ್ಲಿಯೂ ಒಂದರೊಳಗೊಂದು ಸೇರಿ ಅವರಿಗಾಗಲಿ ಇತರರಿಗಾಲಿ ಸಮಸ್ಯೆ ಸೃಷ್ಟಿಸಲಿಲ್ಲ.


ಅವರು 'ಮಾತಿನೊಳಗೆ ಜಾಣ'. ಯಕ್ಷಗಾನ ತಾಳಮದ್ದಳೆಯ ಅರ್ಥ ನಿರ್ಮಾಣ ಕ್ರಮದಲ್ಲಿ ಅವರು 'ಕರುಣಾಳು ಅರ್ಥಧಾರಿ'. ಬದುಕಾಗಲಿ, ಅರ್ಥಗಾರಿಕೆಯಾಗಲಿ ಖಂಡನೆಯ ದಾರಿ ಅವರದಲ್ಲ. ಇದಿರು ಅರ್ಥಧಾರಿಯ ಮಾತಿಗೆ ಮೌನವಾಗಿದ್ದೂ ಕೇಳುಗರಲ್ಲೇ ಸ್ಪಂದನ ಹುಟ್ಟುವಂತೆ ಮಾಡಬಲ್ಲವರಾಗಿದ್ದರು ಅವರು. ಆಗ ಸತ್ಯಮೂರ್ತಿಯವರ ಮೌನವೂ ಕೇಳುಗರಲ್ಲಿ ಮೆಚ್ಚುಗೆಯ ಮಾತಾಗುತ್ತಿತ್ತು. ಅದು ಈಗಲೂ ಮುಂದುವರಿದಿದೆ.

('ನೆನಪಿನುಂಗುರ-ಹಳ್ಳಿ ಹಾದಿಯಲಿ ನೆನೆವ ಪದಗಳು' ಪುಸ್ತಕದಿಂದ)

Read more...

August 18, 2007

ಕುಮಾರ ಪರ್ವತದ ಕೌಮಾರ್ಯ ಹಾಗೆಯೇ ಇರಲಿ!




ಕೆಂಪು ಸೂರ್ಯ, ಹಸಿರು ಕಾಡು,ಬಿಳಿ ಮೋಡ ಎಲ್ಲವೂ ಕತ್ತಲಲ್ಲಿ ಮುಳುಗಿವೆ. ಕುಮಾರಪರ್ವತವೇ ಭಯದಿಂದ ಕುಳಿತಂತಿದೆ. ಬೆಂಕಿ ಹದವಾಗಿ ಉರಿಯುತ್ತಿದೆ. ಆಕಾಶ ಮೆಲ್ಲನೆ ಚಲಿಸುತ್ತಿದೆ. ಎಲೆಎಲೆಗಳ ನಡುವೆ ಗಾಳಿ ಸುಳಿದಾಡುತ್ತಿದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಹರಿಯುತ್ತಿರುವ ನೀರು ವಿಚಿತ್ರ ಸದ್ದುಗಳನ್ನು ಹೊರಡಿಸುತ್ತಿದೆ. ಸದ್ಯಕ್ಕೆ ಕುಳಿತ ಜಾಗವಷ್ಟೇ ಭದ್ರಪೀಠ.

ಗರಿಬಿಚ್ಚಿದ್ದ ಹಗಲು. ಕುಕ್ಕೆ ಸುಬ್ರಹ್ಮಣ್ಯದ ಪೇಟೆ ತುಂಬ ಸುವಾಸನೆ ಬೀರುವ ಊದುಕಡ್ಡಿ, ಭಕ್ತಿಗೀತೆ. ಅಲ್ಲಿಂದ ಮಣ್ಣುಮಾರ್ಗದಲ್ಲಿ ಒಂಚೂರು ಸಾಗಿದರೆ ಕಾಡುಹಾದಿ ಆರಂಭ. ಆರಂಭದಲ್ಲೇ ಏರುಹಾದಿ. ಬಲಬದಿಗೆ 'ಭೀಮನ ಹೊಳೆ'. ಅರ್ಧ ಗಂಟೆಯ ದಾರಿ ಹತ್ತಿದ್ದೇ ತಡ ಒಬ್ಬ ಬೆವರೊರೆಸಿಕೊಂಡು ಉದ್ಗರಿಸಿದ 'ಆಹಾ, ಇಲ್ಲಿ ಇಳಿಯುತ್ತ ಸಾಗುವುದು ಎಷ್ಟು ಸುಲಭ!' ಎಲ್ಲರ ಕೈಯಲ್ಲೂ ಒಂದೊಂದು ಊರುಗೋಲು. ಕೋಲನ್ನೂರುತ್ತ ಹತ್ತಿದಂತೆಲ್ಲ, ಪರ್ವತ ಕೆಳಕ್ಕೆ ನಾವು ಮೇಲಕ್ಕೆ.ತನ್ನೆಲ್ಲ ಬೆಡಗು ಬಿನ್ನಾಣ ತೆರೆದಿಟ್ಟ ಹಳದಿ ಹೂವು, ಕೆಂಪಗೆ ಚಿಗುರಿ ನಿಂತ ಮರ, ಅಡ್ಡಾಡುವ ಗಾಳಿ, ಪರ್ವತವೇರುತ್ತ ಹೋದಂತೆ ಸುಬ್ರಹ್ಮಣ್ಯ ಪೇಟೆ, ಮನೆ, ನಾವು ಎಲ್ಲವೂ ಸಣ್ಣದಾಗುತ್ತಾ ಕುಮಾರ ಪರ್ವತವೊಂದೇ ಬೃಹದಾಕಾರವಾಗಿ ಬೆಳೆಯುತ್ತಿತ್ತು. ಬಿಸಿಲು ತಾಳಲಾರದೆ ಪ್ರತಿಯೊಬ್ಬರೂ ತಲೆಗೆ ಕಟ್ಟಿಕೊಂಡ ಬಿಳಿ ಟವೆಲು. ಒಬ್ಬೊಬ್ಬನದ್ದು ಒಂದೊಂದು ವೇಷ. ನಿಂತಾಗ ನಗು,ಕೇಕೆ,ಜೋಕು. ನಡೆವಾಗ ಗಂಭೀರ ಮೌನ. ಜಿರಿಜಿರಿ ಇಳಿವ ಬೆವರು. ಪರ್ವತ ಮಾತ್ರ ಸುಮ್ಮನೆ ಧ್ಯಾನಸ್ಥ. ತಲೆ ಮೇಲೆಯೇ ಉರಿವ ಸೂರ್ಯ, ರಾತ್ರಿ ಉಳಿದಾನೆಯೇ ನಮ್ಮ ಜೊತೆ ಬೆಟ್ಟದಲ್ಲಿ?!

ಸುಮಾರು ಐದು ಕಿಲೋಮೀಟರ್ ನಡೆದ ಬಳಿಕ ಗಿರಿಗದ್ದೆ ಜೋಯಿಸರ ಆತಿಥ್ಯ. ತಣ್ಣನೆ ನೀರು, ಬಿಸಿಬಿಸಿ ಉಪ್ಪಿಟ್ಟು. ನಂತರ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್. ಮುಂದೆ ಬಿರುಬಿಸಿಲ ಹಾದಿ. ಜನವಾಸ ಇಲ್ಲ. ತುತ್ತತುದಿಗೆ ಸುಮಾರು ಐದು ಗಂಟೆಗಳ ಆರೋಹಣ. ತಾನೇ ಆಯಾಸಗೊಂಡಂತೆ ತೆಪ್ಪಗೆ ಬಿದ್ದಿರುವ ಸವಕಲು ದಾರಿ. ಬ್ರಿಟಿಷರ ಕಾಲದಲ್ಲಿ ಕಟ್ಟಲ್ಪಟ್ಟದ್ದೆಂದು ಹೇಳುವ "ಕಲ್ಲ ಮಂಟಪ'ವೇ ಮೊದಲ ನಿಲ್ದಾಣ. ಚಾರಣಿಗರ ಮೋಜಿಗೆ ಮೊದಲ ಸಾಕ್ಷ್ಯ. ಇರುವ ಒಂಚೂರು ನೀರಿನಲ್ಲೇ ಪ್ಲಾಸ್ಟಿಕ್ಕು, ಅನ್ನದಗುಳು, ಸಿಗರೇಟು ಇನ್ನೂ ಏನೇನೋ. ಮತ್ತೆ ಏದುಸಿರ ಹಾದಿ ಶುರು. ಸುತ್ತಿಬಳಸಿ ಹತ್ತಿ ಇಳಿದು ಬೆಟ್ಟದಿಂದ ಬೆಟ್ಟಕ್ಕೆ ಸಾಗಿದಂತೆಲ್ಲ ಎಂದೆಂದೂ ಮುಗಿಯದಂತಿರುವ ಹಾದಿ. ಕೊನೆಗೊಂಡಂತೆ ಕಂಡಲ್ಲೇ ಆರಂಭ. ನಡೆದಷ್ಟೂ ದಾರಿ. ನಿಂತರೆ ಬಯಲು!

ನಾವೈದು ಜನರನ್ನು ಹೊರತುಪಡಿಸಿ ಬೇರೆ ಚಾರಣಿಗರು ಇರಲಿಲ್ಲ. ಪರ್ವತ ಏರುತ್ತಿದ್ದಂತೆ ಅಪ್ಪ,ಅಮ್ಮ,ಮನೆ,ಗೆಳೆಯರು ಎಲ್ಲ ಮರೆತು, ನಾವೇ ಐದು ಜನ ಈ ಜಗದಲ್ಲಿ! ಲಾಲ್‌ಬಾಗ್‌ನಲ್ಲಿ ಕತ್ತರಿಸಿ ಜೋಡಿಸಿ ಇಟ್ಟದ್ದಕ್ಕಿಂತ ಹೆಚ್ಚು ಚೆಂದವಾಗಿ ದಟ್ಟವಾಗಿ ಪುಷ್ಟವಾಗಿ ಬೆಳೆದ ಕಾಡು. ಅದರಲ್ಲಿ ನಾಚಿದ ಹೂಗಿಡ. ಇನ್ನೊಂದು ಬದಿ ಬೆತ್ತಲೆ ಬೆಟ್ಟ. ಭತ್ತದ ರಾಶಿಯೆಂದೇ ಹೆಸರಾದ ಚೂಪು ಬೆಟ್ಟ ದಾಟಿ, ಶೇಷ ಪರ್ವತದ ತುದಿಯೇರಿ ಮೇಲೆ ನೋಡಿದರೆ, ತಲೆಗೆ ತಗಲುವಂತೆ ಆಕಾಶ, ಕೆಳಗೆ ನೋಡಿದರೆ ಅಬ್ಬಬ್ಬಾ ಮಾರಿಗುಂಡಿ. ಕಣ್ಣೆಟುಕದಷ್ಟು ಆಳ. ಸುಬ್ರಹ್ಮಣ್ಯದಲ್ಲಿದ್ದಾಗ "ಹೋ, ಕುಮಾರಪರ್ವತ ಎಷ್ಟೊಂದು ಎತ್ತರ' ಅಂತನ್ನಿಸಿದ್ದರೆ, ತುದಿ ತಲುಪುತ್ತಿದ್ದಂತೆ "ಹೋ, ಸುಬ್ರಹ್ಮಣ್ಯ ಎಷ್ಟೊಂದು ಆಳ!' ಆಳವೂ ಎತ್ತರವೂ ಒಂದೇ ಆದಾಗ ನಿರಾಳ. ಅಂಗೈಯಲ್ಲಿ ಆಕಾಶ.
ಕುಮಾರಪರ್ವತದ ತುತ್ತತುದಿಗಿಂತ ಕೊಂಚ ಕೆಳಗೆ ಕುಮಾರಾಧಾರಾ ನದಿಯ ಉಗಮಸ್ಥಾನ. ಅಲ್ಲಿಂದ ಸ್ವಲ್ಪ ಮೇಲೇರಿದರೆ ಅಗಲವಾದ ಇಳಿಜಾರಾದ ಬಂಡೆ. ಇದಿರು ಸಿದ್ಧಪರ್ವತದ ದಟ್ಟ ಕಾನನ. ಬಲಬದಿ ದೂರದಲ್ಲಿ ದಾಟಿ ಬಂದಿರುವ ಭತ್ತದರಾಶಿ,ಶೇಷ ಪರ್ವತ. ಎತ್ತರದಿಂದ ಬಂದು ಮೈಮೇಲೆಯೇ ಹಾದು, ತಗ್ಗು ಕಣಿವೆಗಳಲ್ಲಿ ತುಂಬಿಕೊಳ್ಳುವ ಮೋಡಗಳು. "ಪರ್ವತ ಏರುವುದೇ ನಿಜವಾದ ಸುಖ ಹೊರತು ಶೀಖರದಲ್ಲಿ ಕುಳಿತುಕೊಳ್ಳುವುದಲ್ಲ' ಎಂಬ ಮಾತು ಎಷ್ಟೊಂದು ಅಪ್ರಬುದ್ಧವಾದದ್ದು ! ಪರ್ವತವೇರುವುದರಲ್ಲಿ ಔದಾಸೀನ್ಯ ತೋರುವವನಿಗೆ ಶಿಖರದ ಸುಖ ದೊರಕುವುದಿಲ್ಲ. ಶಿಖರದಲ್ಲಿ ತನ್ಮಯಗೊಳ್ಳುವ ಮನಸ್ಸಿಲ್ಲದವನಿಗೆ ಏರುವ ಸುಖದ ಅರಿವಾಗುವುದಿಲ್ಲ. ಏರುವ ಸುಖ ಶಿಖರದಲ್ಲಿದೆ. ಶಿಖರದ ಸುಖ ಏರುವಿಕೆಯಲ್ಲಿ ಅಡಗಿದೆ. ಆದುದರಿಂದಲೇ ಬಿಡಿಬಿಡಿಯಾಗಿ ನೋಡದೆ ನಿಜವಾದ ಸಮಗ್ರ ನೋಟ ಸಿಕ್ಕುವುದಿಲ್ಲ. ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿರುವುದು ತಿಳಿಯುವುದಿಲ್ಲ!

ಸಂಜೆಯ ಸಮಯ. ಪುಷ್ಪಗಿರಿಯೆಂದೂ ಹೆಸರಾದ ಕುಮಾರಪರ್ವತದ ತುತ್ತತುದಿಯಲ್ಲಿ ಬೀಸುವ ಗಾಳಿಗೆ ಎಂಥವನಿಗೂ ಥ್ರಿಲ್ಲಾಗಲೇಬೇಕು. ಅರೆ, ಇಲ್ಲೇ ತಂಗುವೆನೆಂದಿದ್ದ ಸೂರ್ಯ, ದೂರದ ಇನ್ನ್ಯಾವುದೋ ಬೆಟ್ಟದಲ್ಲಿ ಇಳಿಯುತ್ತಿದ್ದ. ತುತ್ತತುದಿಯಲ್ಲಿ ಭೂತಕಾಲದ ನೆನಪಿಲ್ಲ, ಭವಿಷ್ಯತ್ತಿನ ಕನಸುಗಳಿಲ್ಲ, ವರ್ತಮಾನದ ಇರುವಿಕೆ ಮಾತ್ರ ಇದೆ. ಆ ಕ್ಷಣಗಳಲ್ಲಿ ಅದೂ ಮರೆತುಹೋಗಿದೆ. ಆಗ ಇರುವುದೇ "ಮಿಥ್ಯ', ಇಲ್ಲದ್ದು 'ಸತ್ಯ' ! ಊರು,ಪೇಟೆ ಮಾತ್ರವಲ್ಲದೆ ಸುತ್ತಲಿನ ಪರಿಸರ, ನಾವೈದು ಜನ ಎಲ್ಲ ಮಾಯವಾಗಿ ಕೆಲವು ಕ್ಷಣ ಖಾಲಿಯಾಗಿದೆ. ಅಷ್ಟರಲ್ಲಿ ಕರ್ಮದೋಷ(!), ಫಕ್ಕನೆ ಅಡಿಗರು ಬರೆದದ್ದು ನೆನಪಾಗಿದೆ ! "ಬತ್ತಲಾಗದೆ ಬಯಲು ಸಿಕ್ಕದಿಲ್ಲಿ'.

ಆತಂಕ ಕವಿದಂತಿರುವ ಕತ್ತಲು. ಬೆಂಕಿ ಹದವಾಗಿ ಉರಿಯುತ್ತಿದೆ. ಎಲ್ಲರ ಮುಖಗಳೂ ಕಪ್ಪಿಟ್ಟಿವೆ. ನಿಗೂಢ ಸದ್ದುಗಳು ಕೇಳುತ್ತಿವೆ. "ಗಿರಿಗದ್ದೆ ಜೋಯಿಸರ ಒಂದು ದನವನ್ನು ಇತ್ತೀಚೆಗೆ ಹುಲಿ ಹಿಡಿದಿತ್ತು' ಎಂದು ಫಾರೆಸ್ಟ್ ಡಿಪಾರ್ಟ್‌ಮೆಂಟಿನವರು ಹೇಳಿದ್ದು ನೆನಪಾಗಿದೆ. "ಸಂಪಾಜೆಯಿಂದ ಶಿರಾಡಿಯವರೆಗೆ ಹರಡಿಕೊಂಡಿರುವ ಈ ಕಾಡಿನಲ್ಲಿ ಎಪ್ಪತ್ತು ಆನೆಗಳಿವೆ. ಅವುಗಳಲ್ಲಿ ಆರೇಳು ಒಂಟಿ ಆನೆಗಳು. ಅವುಗಳಲ್ಲೂ ಒಂದು ಕಲ್ಲಾನೆಯಂತೂ (ಮರಿ ಆನೆ) ಬಹಳ ಜೋರು'-ಗಿರಿಗದ್ದೆ ಜೋಯಿಸರು ಹೇಳಿದ್ದು ನೆನಪಾಗಿದೆ. ಒಳಹೋದ ಉಸಿರು ಹೊರಬರುವುದಕ್ಕೂ ಅಂಜಿದಂತಾಗಿ ನಾಲ್ಕಾರು ಬಾರಿ ಕೆಮ್ಮಿದೆ. ರಾತ್ರಿ ಹನ್ನೊಂದು ಗಂಟೆ. ನಾಲ್ಕೂ ಜನ ಮಲಗಿದ್ದಾರೆ. ನಿದ್ದೆ ಬಂದಂತಿಲ್ಲ. ಆರಿಹೋಗುತ್ತಿದ್ದ ಬೆಂಕಿಯನ್ನು ಹೆಚ್ಚಿಸಿದೆ, ಸುತ್ತಲೂ ದಟ್ಟವಾದ ಅರಣ್ಯ. ಮರಗಪ್ಪೆಗಳು ವಿಚಿತ್ರವಾಗಿ ವಟಗುಟ್ಟುತ್ತಿವೆ. ಟಾರ್ಚು ಬೆಳಕನ್ನು ಸುತ್ತಲೂ ಹಾಯಿಸಿದೆ. ಹಗಲು ಪರ್ವತ ಏರುತ್ತಿದ್ದಾಗ ನಾವೈದೇ ಜನರೆಂದು ಖುಶಿಯಾಗಿತ್ತು. ಆದರೀಗ ಅದೇ ಸಂಗತಿ ವಿಪರೀತ ಭಯ ಹುಟ್ಟಿಸಿದೆ. ಈ ಹಬ್ಬಿದಾ ಮಲೆ ಮಧ್ಯದೊಳಗೆ ನಾವೈದೇ ಜನ. ಅತ್ತರೂ ಬೊಬ್ಬಿಟ್ಟರೂ ಯಾರಿಗೂ ಕೇಳುವುದಿಲ್ಲವಲ್ಲ.

ಅಯ್ಯೋ, ಈಗ ಅಮೆರಿಕದಲ್ಲೆಲ್ಲೋ ಸೂರ್ಯ ಉದಯಿಸಿರಬಹುದಲ್ಲ. ಹೌದು, ನಮ್ಮಲ್ಲಿ ಕತ್ತಲಿದೆ. ಸೂರ್ಯನಲ್ಲಿ ಬೆಳಕು ಮಾತ್ರ ಇದೆ. ಆದರೆ ಸೂರ್ಯ ನಮ್ಮವನೇ ಎಂದು ತಿಳಿಯುವುದರಲ್ಲೇ ಶ್ರೇಯಸ್ಸಿದೆ. ಸುಮ್ಮನೆ ಉರಿಯುತ್ತಿರುವ ಬೆಂಕಿ ನಂದಿಹೋಗುವ ಹಾಗೆ ಹನಿಹನಿ ಮಳೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದು ನೆನಪಾಗಿದೆ. "ನಾನೇ ಸೂರ್ಯನ ರೂಪದಿಂದ ಬೆಳಗುತ್ತಿದ್ದೇನೆ, ಮಳೆಯನ್ನು ಆಕರ್ಷಿಸಿ ಸುರಿಸುತ್ತೇನೆ'. ಹಗಲು ನಮ್ಮ ಬೆವರಿಳಿಸಿದ್ದ ಅದೇ ಸೂರ್ಯ, ಈಗ ಮಳೆ ಸುರಿಸುತ್ತಿದ್ದಾನೆ. ಹೀಗೆ ಕತ್ತಲು-ಬೆಳಕು, ಆಳ-ಎತ್ತರ, ಅಮೃತ-ಮೃತ್ಯು, ಬಿಸಿಲು-ಮಳೆ ಎಲ್ಲವೂ ಒಂದೇ ಆದಾಗ? ಸಾಕಾರದಿಂದ ನಿರಾಕಾರಕ್ಕೆ. ನಿರಾಕಾರದಿಂದ ನಿರ್ವಿಕಾರಕ್ಕೆ. ದೇವರೇ, ಮಗುವಿನಂತಿರುವ ಕುಮಾರಪರ್ವತಕ್ಕೆ ಎಚ್ಚರಾಗಲಿ, ನಮ್ಮ ವಿಕಾರಗಳು ನಾಶವಾಗಲಿ.
"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ' ಎಂದು ಒಬ್ಬ ಗುನುಗುತ್ತಿದ್ದಾನೆ. ಸೂರ್ಯ ಚೆಲ್ಲಿದ ಬಣ್ಣಗಳು ಕರಗತೊಡಗಿವೆ. ಗಿಡಮರಗಳು ಲಕಲಕಿಸಿವೆ. ಛೇ, ಈ ಪರ್ವತ ಒಂಚೂರು ಎತ್ತರವಿದ್ದರೆ, ಆ ಸೂರ್ಯನನ್ನು ಮುಟ್ಟಿ ರೋಮಾಂಚನಗೊಳ್ಳಬಹುದಿತ್ತು! ದೇವರೇ, ನಮ್ಮ ಊರು, ಮನೆ, ಕಲಿತ ನಾಲ್ಕು ಮಹಡಿಯ ಕಾಲೇಜು, ಊರ ದೇವಸ್ಥಾನದ ಗೋಪುರ, ಮನೆಯಂಗಳದಲ್ಲಿ ಬಾನೆತ್ತರ ಬೆಳೆದ ಗುಲಗಮೊಹರ್ ಎಲ್ಲವೂ ಸಣ್ಣದಾದರೂ ಚಿಂತಿಲ್ಲ. ಈ ಕುಮಾರಪರ್ವತ ಮಾತ್ರ ಬೆಳೆಯುತ್ತಿರಲಿ. ಇದರ ಕೌಮಾರ್ಯ ಮಾತ್ರ ಹೀಗೆಯೇ ಇರಲಿ !

ಮಧ್ಯಾಹ್ನದ ಮೊದಲೇ ನಮ್ಮ ಅವರೋಹಣ ಆರಂಭವಾಗಿತ್ತು. ಊರು ತಲುಪಿದಾಗ, ನಾವೇ ಸ್ಥಾವರದಂತಾಗಿ ಕುಮಾರಪರ್ವತ ಜಂಗಮನಂತೆ ಕಾಣತೊಡಗಿತ್ತು. ಮನ್ಸು ಮತ್ತೆಮತ್ತೆ ಬೆಟ್ಟ ಏರುತ್ತಲೇ ಇತ್ತು.


(೨೦೦೩ರ ಉದಯವಾಣಿ "ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿತ)

Read more...

August 09, 2007

ಜಿದ್ದಿಗೆ ಬಿದ್ದ ಮೋಡಿಗಾರ - ಹಿಮೇಶ್ 'ಹ್ಯಾಟ್ಸಾಫ್' !


ಛಲದಂಕಮಲ್ಲ ಹಿಮೇಶ್ ರೇಷ್ಮಿಯಾ ಮುಟ್ಟಿದರೆ ಮುನಿದಾನು ! 'ನಾಸಿಕ ಗಾಯಕ'ನೆಂಬ ಆರೋಪವನ್ನೂ ಬಿರುದಿನಂತೆ ಧರಿಸಿದವನು. ಜಿದ್ದಿಗೆ ಬಿದ್ದವನಂತೆ "ಆಪ್‌ಕಾ ಸುರೂರ್' ಎನ್ನುತ್ತಾ ಮೊದಲ ಬಾರಿ ನಟನಾಗಿ ಕಾಣಿಸಿಕೊಂಡು ವಿಮರ್ಶಕರಿಂದ ಉಗಿಸಿಕೊಂಡವನು. ಆದರೆ ಹಿಮೇಶ್ 'ಫ್ಯಾನ್'ಗಳು ಆತನ ಸುತ್ತ ಒಂಚೂರು ಗಾಳಿಯಾಡುವಂತೆ ಮಾಡಿದ್ದಾರೆ ! ಏನಿವನ ಝಲಕ್ ?

ಈತ ಮೂಗು ಕೆಂಪಾಗಿಸಿಕೊಂಡು ಹಾಡಿದರೆ ಹಲವರ ಕಣ್ಣು ಕೆಂಪಗಾಗುತ್ತಿತ್ತು . ಮೂಗಿನಲ್ಲಿ ಹಾಡುತ್ತಾನೆಂದು ಹಲವರಿಂದ ಉಗಿಸಿಕೊಳ್ಳುತ್ತಲೇ, ತನ್ನ ವಿಶಿಷ್ಟ ಸ್ವರದಿಂದಲೇ ಜನರ ಮನಸ್ಸನ್ನು ಸೂರೆಗೊಳ್ಳುತ್ತ ಬಂದವನು ಬಾಲಿವುಡ್‌ನ ಹಿಮೇಶ್ ರೇಷ್ಮಿಯಾ. ಬೇಸ್‌ಬಾಲ್ ಹ್ಯಾಟು, ಬಿಗಿಯಾದ ನೀಲಿ ಜೀನ್ಸ್ ಪ್ಯಾಂಟು, ಆಳವಾದ ಜೇಬು-ಭುಜ ಪಟ್ಟಿಯ-ಉದ್ದನೆ ಕೋಟು ತೊಟ್ಟು, ಮೈಕ್ರೋಫೋನ್‌ನನ್ನು ಮೇಲ್ಮುಖವಾಗಿ ಹಿಡಿದು ಹಾಡುವ ಈ ಸ್ವಾಭಿಮಾನಿ ರೇಷ್ಮಿಯಾ, ಛಲದಂಕಮಲ್ಲ , ಮುಟ್ಟಿದರೆ ಮುನಿದಾನು ! ಆದರೆ ಆ ಗುಣಗಳಿಂದಲೇ ಯುವ ಪೀಳಿಗೆಯ, ಜನಸಾಮಾನ್ಯರ ಹೀರೊ ಆಗಿ ಬೆಳೆದವನು. ಹಿಂದಿ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ಹೊಸ "ಝಲಕ್' ತೋರಿದವನು.

ಗುಜರಾತ್‌ನಲ್ಲಿ ಹುಟ್ಟಿದ ಈತನಿಗೀಗ ಮೂವತ್ತೈದು ವರ್ಷ. ತಂದೆ ವಿಪಿನ್ ರೇಷ್ಮಿಯಾ ಕೂಡಾ ಸಂಗೀತ ನಿರ್ದೇಶಕ. ಬಣ್ಣದ ಲೋಕಕ್ಕೆ ಹಿಮೇಶ್ ಎಂಟ್ರಿ ಕೊಟ್ಟಿದ್ದು ದೂರದರ್ಶನ ಅಹಮದಾಬಾದ್ ಮತ್ತು "ಝೀ ಟಿವಿ' ಛಾನೆಲ್‌ಗಳಿಗೆ ಧಾರಾವಾಹಿಗಳ ನಿರ್ಮಾಪಕನಾಗಿ-ಸಂಗೀತ ನಿರ್ದೇಶಕನಾಗಿ. ಅವನ್ನೆಲ್ಲ ಆತ ಮಾಡಿದ್ದು ಹದಿನಾರನೇ ವಯಸ್ಸಿನಲ್ಲೇ ! ಸೀರಿಯಲ್‌ಗಳಿಗೆ ಗೀತೆ ಬರೆಯುತ್ತಿದ್ದ ಹಿಮೇಶ್ ಬಾಲಿವುಡ್‌ಗೆ ಹೋಗಿ ಹಾಡುವುದಕ್ಕೆ ಶುರು ಮಾಡಿದ. ಆನಂದ್ ರಾಜ್ ಆನಂದ್ ಜತೆ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದು ೧೯೯೮ರಲ್ಲಿ ,"ಬಂಧನ್' ಎಂಬ ಸಿನಿಮಾದಲ್ಲಿ . ಅದೇ ವರ್ಷ ಬಿಡುಗಡೆಯಾದ, ಸಲ್ಮಾನ್ ಖಾನ್ ನಟಿಸಿದ "ಪ್ಯಾರ್ ಕಿಯಾ ತೊ ಡರ್‌ನಾ ಕ್ಯಾ' ಚಿತ್ರಕ್ಕೆ ನೀಡಿದ ಸಂಗೀತದ ಮೂಲಕ ಗಮನ ಸೆಳೆದ. ಮೈನೆ ಪ್ಯಾರ್ ಕಿಯಾ, ಕ್ಯೋಂ ಕಿ, ತೇರೆ ನಾಮ್- ಹೀಗೆ ಸಲ್ಮಾನ್‌ಖಾನ್ ನಟಿಸಿದ ಚಿತ್ರಗಳಿಗೆಲ್ಲ ತಾಳ ಹಾಕಿ ಸೈ ಎನಿಸಿಕೊಂಡ. ತೇರೆ ನಾಮ್, ಆಶಿಕ್ ಬನಾಯಾ ಆಪ್‌ನೆ, ನಮಸ್ತೆ ಲಂಡನ್, ಅಕ್ಸರ್ ಹೀಗೆ ಆತ ಸಂಗೀತ ನೀಡಿದ ಚಿತ್ರಗಳ ಹಾಡುಗಳೆಲ್ಲವೂ ಹಿಟ್ ಆಗತೊಡಗಿದವು. "ಆಶಿಕ್ ಬನಾಯಾ ಆಪ್‌ನೆ' ಟೈಟಲ್ ಹಾಡಿಗಾಗಿ ೨೦೦೫ರ ಫಿಲ್ಮ್‌ಫೇರ್ ಪ್ರಶಸ್ತಿ ಪಡಕೊಂಡ. ಅಕ್ಸರ್ ಸಿನಿಮಾದ ಝಲಕ್ ದಿಖ್‌ಲಾಜಾ...ಮತ್ತು ಸೋನಿಯೇ...ಹಾಡುಗಳಂತೂ ರೇಷ್ಮಿಯಾನನ್ನು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಕುಳ್ಳಿರಿಸಿದವು. ೨೦೦೬ನೇ ಇಸವಿ ಅವನ ವೃತ್ತಿಯ ಅತ್ಯಂತ ಯಶಸ್ವಿ ವರ್ಷ. "ಆಪ್ ಕಾ ಸುರೂರ್' ಹೆಸರಿನಲ್ಲಿ ಜನವರಿಯಲ್ಲಿ ವೀಡಿಯೊ ಮ್ಯೂsಸಿಕ್ ಆಲ್ಬಮ್ ಬಿಡುಗಡೆ ಮಾಡಿದ. ಅಕ್ಟೋಬರ್‌ನಲ್ಲಿ ಲಂಡನ್‌ನ ಪ್ರತಿಷ್ಠಿತ ವಿಂಬ್ಲೆ ಸ್ಟೇಡಿಯಮ್‌ನಲ್ಲಿ ಹಾಡಿದ ಭಾರತದ ಮೊದಲ ರಾಕ್ ಸ್ಟಾರ್ ಎನಿಸಿಕೊಂಡ. "ಜರಾ ಝೂಮ್ ಝೂಮ್...' ಎನ್ನುತ್ತಾ ಜಾಸ್ತಿಯೇ ಹಬ್ಬಿಕೊಂಡ .

ಜೂನ್ ೨೯ರಂದು ಬಿಡುಗಡೆಯಾದ "ಆಪ್ ಕಾ ಸುರೂರ್-ದ ರಿಯಲ್ ಲವ್ ಸ್ಟೋರಿ' ಚಿತ್ರದಲ್ಲಿ , ಶಾಲಾ ದಿನಗಳ ದೋಸ್ತ್ ಪ್ರಶಾಂತ ಛಡ್ಡಾ ನಿರ್ದೇಶನದಲ್ಲಿ ಹಿಮೇಶ್, ಮೊದಲ ಬಾರಿ ನಟನಾಗಿ ಕಾಣಿಸಿಕೊಂಡಿದ್ದಾನೆ. ಚಿತ್ರವು ವಿಮರ್ಶಕರಿಂದ ಉಗಿಸಿಕೊಂಡರೂ, ಹಿಮೇಶ್ "ಫ್ಯಾನ್'ಗಳು ಆತನ ಸುತ್ತ ಒಂಚೂರು ಗಾಳಿಯಾಡುವಂತೆ ಮಾಡಿದ್ದಾರೆ ! ಅದಕ್ಕೆ ಸಾಕ್ಷಿಯಂಬಂತೆ ವಿಮರ್ಶಕರೆಲ್ಲ -"ನೀವು ಹಿಮೇಶ್ ಅಭಿಮಾನಿಗಳಾಗಿದ್ದರೆ ನೋಡಲೇಬೇಕಾದ ಸಿನಿಮಾ'ಅಂತ ಒಂದು ಸಾಲು ಸೇರಿಸಿದ್ದಾರೆ ! "ಸಿನಿಮಾದ ಓಪನಿಂಗ್ ಚೆನ್ನಾಗಿತ್ತು. ಆದರೆ ದಿಲ್ಲಿಯ ಮಲ್ಟಿಪ್ಲೆಕ್ಸ್‌ಗಳಿಗಿಂತ ಉತ್ತರಪ್ರದೇಶ ಮತ್ತು ಪಂಜಾಬ್‌ನ ಒಳಭಾಗಗಳಲ್ಲಿ ನೆಲೆ ಕಂಡುಕೊಂಡಿತು. "ಭೇಜಾ ಫ್ರೈ' ದಿಲ್ಲಿ-ಮುಂಬಯಿ ಸಿನಿಮಾವಾದರೆ "ಆಪ್ ಕಾ ಸುರೂರ್' ಸಿ ಕ್ಲಾಸ್ ಜನರಿಗೆ ಇಷ್ಟವಾಗಿದೆ' ಎನ್ನುತ್ತಾರೆ ಹೊಸದಿಲ್ಲಿಯ ಸಿನಿಮಾ ಹಂಚಿಕೆದಾರ ಸಂಜಯ್ ಮೆಹ್ತಾ .

ಈ "ನಾಸಿಕ ಗಾಯಕ'ನಿಗೆ ಪ್ರಚಾರವನ್ನು ತಂದುಕೊಡುವಲ್ಲಿ ವಿವಾದಗಳ ಪಾತ್ರವೂ ಹಿರಿದು. ಮುಖೇಶ್, ನಸ್ರತ್ ಫತೆ ಅಲಿ ಖಾನ್ ಹಾಗೂ ಆರ್.ಡಿ.ಬರ್ಮನ್ ಕೂಡಾ ಮೂಗಿನಲ್ಲಿ ಹಾಡುತ್ತಿದ್ದರೆಂದು ಹೇಳಿ ಹಿಮೇಶ್ ಮೊದಲ ಬಾರಿ ವಿವಾದಕ್ಕೆ ಒಳಗಾಗಿದ್ದ. ಅದಕ್ಕೆ ಆಶಾ ಭೋಂಸ್ಲೆ ಖಾರವಾಗಿ ಪ್ರತಿಕ್ರಿಯಿಸಿದ್ದೂ ಆಯಿತು. ಕಳೆದ ಜೂ. ೨೭ರಂದು ಅಭಿಮಾನಿಗಳ ಕಣ್ಣು ತಪ್ಪಿಸಲು, ಅಜ್ಮೀರ್‌ನಲ್ಲಿನ ಪ್ರಸಿದ್ಧ ಸೂಫಿ ಸಂತ ಮೊಯ್ನುದ್ದೀನ್ ಚಿಸ್ತಿಯ ದರ್ಗಾ ಶರೀಫ್‌ಗೆ ಬುರ್ಖಾ ಧರಿಸಿ ಹೋಗಿ ಚರ್ಚೆಗೆ ಗ್ರಾಸವಾದ. ಬೋನಿ ಕಪೂರ್‌ನ "ಮಿಲೆಂಗೆ ಮಿಲೆಂಗೆ' ಸಿನಿಮಾಕ್ಕಾಗಿ ಹಿಮೇಶ್ ಸಂಯೋಜಿಸಿದ್ದ "'ತನ್‌ಹಾಯಿಯಾ...'ಎಂಬ ಹಾಡನ್ನು ಸುರೂರ್ ಸಿನಿಮಾದಲ್ಲೇ ಉಪಯೋಗಿಸಿಕೊಂಡಿದ್ದಾನೆ ಎಂಬುದು ವಿವಾದವಾಗಿ ಹಿಮೇಶ್ ಕ್ಷಮೆ ಕೇಳುವುದರೊಂದಿಗೆ ಮುಕ್ತಾಯವಾಯಿತು. "ಕಪೂರ್‌ಗೆ ಆ ಹಾಡನ್ನು ನಾನು ಕೇಳಿಸಿದ್ದೆನಷ್ಟೆ. ಬಳಿಕ ಏಳು ತಿಂಗಳುಗಳಿಂದ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೆ. ಆದರೆ ಆ ಸಿನಿಮಾದ ಕೆಲಸದಲ್ಲಿ ಏನೂ ಪ್ರಗತಿ ಕಂಡುಬರಲಿಲ್ಲ. ಹಾಗಾಗಿ ನನ್ನ ಸಿನಿಮಾಗೆ ಉಪಯೋಗಿಸಿಕೊಂಡೆ' ಎಂಬುದು ಹಿಮೇಶ್ ಸಮರ್ಥನೆಯಾಗಿತ್ತು. ಜು.೨೯ರಂದು ಪ್ರಸಾರವಾದ "ಕಾಫಿ ವಿತ್ ಕರಣ್' ಸಂದರ್ಶನದಲ್ಲಿ ಹೇಳಿದ- "ನಾನು ಮಾಡಲಾಗದ ಯಾವುದಾದರೊಂದು ಪಾತ್ರವಿದೆಯೆಂದೇ ನನಗೆ ಅನಿಸುವುದಿಲ್ಲ. ಅದು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿದೆ ಅಷ್ಟೆ.' ಇಂತಹ ಮಾತುಗಳನ್ನು ಎಗ್ಗಿಲ್ಲದೆ ಚೆಲ್ಲಬಲ್ಲವನೇ ಹಿಮೇಶ್.

ಕೆಲವರಿರುತ್ತಾರೆ ಹೀಗೆ. ಅವರನ್ನು ನೀವು ಉಪೇಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ. ಒಂದೋ ಪ್ರೀತಿಸಬೇಕು ಅಥವಾ ದೂಷಿಸಬೇಕು ! ಹಿಮೇಶ್ ರೇಷ್ಮಿಯಾ ಹಾಗೆ ಬೆಳೆದವನು. "ಝೀ ಟಿವಿ'ಯ "ಸ..ರಿ..ಗ..ಮ...ಪ' ಗಾಯನ ಸ್ಪರ್ಧೆಯಲ್ಲಿ ಬಾಲಿವುಡ್‌ನ ಘಟಾನುಘಟಿ ಸಂಗೀತಗಾರರೊಂದಿಗೆ ತೀರ್ಪುಗಾರನಾಗಿ ಕುಳಿತು ಜಿದ್ದಿಗೆ ಬಿದ್ದವನು. ಕೊಂಚ ಸಿಡುಕ, ಸ್ವಲ್ಪ ಒರಟ, ನೇರ ಮಾತುಗಾರ. ದಾಕ್ಷಿಣ್ಯಕ್ಕೆ ಕಟ್ಟುಬೀಳಲಾರ, ಯಾವುದಕ್ಕೂ ಮುಜುಗರ ಪಡಲಾರ. ಇನ್ನು ಆತ ನಗುವುದೋ...ಕಂಡರೆ ತಿಳಿಸಿ ! ೧೩ ವರ್ಷದವನಿದ್ದಾಗ ೨೨ ವರ್ಷದ ಅಣ್ಣ ತೀರಿಕೊಂಡದ್ದನ್ನು ಕಂಡವನು. ತಂದೆ-ತಾಯಿ ಬಗ್ಗೆ ಅತೀವ ಪ್ರೀತಿ. ದೇವರಲ್ಲಿ ಅಪಾರ ನಂಬಿಕೆ. "ನಾನು ಇಷ್ಟೊಂದು ಯಶಸ್ವಿ ಹಾಡುಗಳನ್ನು ನೀಡುವುದು ಸಾಧ್ಯವಾಗಿದ್ದರೆ, ಐದು ಬೇರೆ ಬೇರೆ ಕೆಲಸಗಳನ್ನು ಬದಲಾಯಿಸಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ, ಮೇಲಿರುವ ಯಾವನೋ ಒಬ್ಬ ನನ್ನನ್ನು ಪ್ರೀತಿಸುತ್ತಿರುವುದು' ಅಂತನ್ನಬಲ್ಲ "ಎಚ್.ಆರ್.', ಅವನೇ ಅಂದುಕೊಳ್ಳುವಂತೆ ಒಬ್ಬ ಸೆಂಟಿಮೆಂಟಲ್ ಮನುಷ್ಯ . ಅಲ್ತಾಫ್ ರಾಜಾರ ಗಾಯನದಿಂದ ಪ್ರಭಾವಿತನಾದ ಈತನಿಗೆ ಭಾರತದ ನಾಲ್ಕು ಮೆಟ್ರೋಗಳಲ್ಲಿ 'ಹಿಮೇಶ್ ರೇಷ್ಮಿಯಾ ಸ್ಕೂಲ್ ಆಫ್ ಮ್ಯೂಸಿಕ್' ಸಂಗೀತಶಾಲೆಗಳನ್ನು ಸ್ಥಾಪಿಸುವ ಹೆಬ್ಬಯಕೆ.

ತನ್ನ ಬಗೆಗಿನ ಸತತ ಟೀಕೆಗಳಿಂದ ರೋಸಿ ಹೋದವನಂತೆ, ಕಳೆದ ಜೂ. ೨೭ರಂದು "ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯೊಂದಿಗಿನ ಸಂದರ್ಶನದಲ್ಲಿ ಎಚ್.ಆರ್ ಹೇಳಿದ- "ಸತತ ಹಿಟ್ ಹಾಡುಗಳನ್ನು ಕೊಟ್ಟರೂ ನಾನು ಮೂಗಿನಲ್ಲಿ ಹಾಡುವವನು ಎಂದೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದೆ. ಇದು ಮೂಗಿನಲ್ಲಿ ಹಾಡುವುದಲ್ಲ, ಹೈ ಪಿಚ್‌ನಲ್ಲಿ ಹಾಡುವುದು ಎಂದು ವರ್ಷಗಳ ಕಾಲ ವಾದಿಸುತ್ತಿದ್ದೆ. ಆದರೆ ಅದನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಾದಂತಿಲ್ಲ. ಹಾಗಾಗಿ ಆ ವಾದವನ್ನೀಗ ಬಿಟ್ಟಿದ್ದೇನೆ. ನಾನು ಮೂಗಿನಲ್ಲಿ ಹಾಡುವ ಗಾಯಕನೆಂದೇ ಈಗ ಒಪ್ಪಿಕೊಳ್ಳುತ್ತೇನೆ !' ಹೊಗಳಿಕೆಗೋ ತೆಗಳಿಕೆಗೋ, ಅಂತೂ ಕೆಲವರೆನ್ನುವಂತೆ ಬಾಲಿವುಡ್‌ನಲ್ಲೀಗ ಎರಡೇ ವಿಭಾಗ. ಸಂಗೀತ ಮತ್ತು ರೇಷ್ಮಿಯಾ ಸಂಗೀತ !

ಸಲಾಮ್ ಆಲೆಕುಮ್ ಹಿಮೇಶ್ .

Read more...

ಹಿಮಾಲಯದಲ್ಲೊಂದು ಮನೆ


ಮರದಿಂದ ಮಾಡಿದ ಬಾಲ್ಕನಿ ಹಾಗೂ ಅಟ್ಟವುಳ್ಳ ಎರಡು ಹಂತಗಳ ಮಣ್ಣಿನ ಮನೆ ನನ್ನದು ; ಒಪ್ಪವಾಗಿ ಸೆಗಣಿ ಸಾರಿಸಲ್ಪಟ್ಟದ್ದು. ಆಪಲ್ ತೋಟದ ಕಡೆಗೆ ಮುಖ ಮಾಡಿರುವ ಈ ಬಾಲ್ಕನಿಯ ಮೇಲೆ ಬೀಳುವ ಮಂಜುಗಡ್ಡೆಗಳು ನಿರಂತರವಾಗಿ ಹಿತವಾದ ಹರಟೆ ಮಾಡುತ್ತಿರುತ್ತವೆ ! ಬಾಗಿಕೊಂಡಿರುವ ಬಾಲ್ಕನಿ, ಗಾಳಿಯಲ್ಲಿರುವ ದ್ವೀಪದಂತೆ ಭಾಸವಾಗುತ್ತದೆ. ಇಲ್ಲಿ ನಾನು ಗಂಟೆಗಟ್ಟಲೆ ಕುಳಿತುಕೊಂಡು ದಕ್ಷಿಣದ ಕಣಿವೆಯಲ್ಲಿರುವ ಹಿಮಖಂಡಗಳನ್ನು ಸವಿಯುತ್ತಿರುತ್ತೇನೆ. ಸೆಗಣಿಯಷ್ಟೇ ಬಡವನಾದರೂ ಪ್ರತಿದಿನ ಬೆಳಗ್ಗೆ ಬೆಟ್ಟಗಳನ್ನು ತಿಂಡಿಗಾಗಿ ಎಬ್ಬಿಸುತ್ತೇನೆ. ನೀವು ಅದಕ್ಕೆ ಯಾವ ಬೆಲೆಯನ್ನೂ ಕಟ್ಟಲಾರಿರಿ. ಲಂಡನ್-ನ್ಯೂಯಾರ್ಕ್‌ಗಳಲ್ಲಿನ ಜನ ಪ್ರತಿದಿನ ಗಡಿಯಾರದ ಅಲರಾರ್‍ಮ್ ಅಥವಾ ನಗರದ ಸೈರನ್ ಕೇಳಿ ಏಳುವುದು ಬರೀ ಮೂರ್ಖತನ ಅಂತ ನನಗನಿಸುತ್ತದೆ.

ಆದರೆ ೬೫ ವರ್ಷದ, ಸುಕ್ಕುಗಟ್ಟಿದ ಚರ್ಮದ, ನನ್ನ ಭೂಮಿಯ ಒಡತಿ, ನಾನು ಮೂರು ಸಲ ಒತ್ತಾಯ ಮಾಡಿದರೆ ಮಾತ್ರ ಒಂದು ಗ್ಲಾಸ್ ಟೀ ಸ್ವೀಕರಿಸುತ್ತಾಳೆ. ಬಳಿಕ ಬರೀ ಪೆಟಿಕೋಟ್‌ನಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಕಳ್ಳರು ಮತ್ತು ದನಗಳ ಅಪಾಯದ ಬಗ್ಗೆ ನನ್ನನ್ನು ಎಚ್ಚರಿಸುತ್ತಾಳೆ. ಆಗಲೇ ದನವೊಂದು ಅವಳು ಬೆಳೆಸಿದ ಹೂವುಗಳನ್ನು ತಿನ್ನುತ್ತದೆ ! "ದನ ದನ...' ಅಂತ ಕೂಗುತ್ತಾ , ದೊಣ್ಣೆ ಹುಡುಕುತ್ತಾ ಹೇಳುತ್ತಾಳೆ - 'ದರಿದ್ರ ದನವೇ, ಪಾಕಿಸ್ತಾನಕ್ಕೆ ಹೋಗು !' (ಭಾರತದಲ್ಲೊಂದು ಕ್ಷಮಿಸಲಾಗದ ಅವಮಾನ ! )

ಅವಳ ಮುಖ ನೆರಿಗೆಗಳಿಂದಲೇ ಮುಚ್ಚಿ ಹೋಗಿದೆ, ಮೈ ಹಳೆಯ ಚರ್ಮದಂತಾಗಿದೆ. ಕಣ್ಣುಗಳು ಸಣ್ಣವಾಗಿದ್ದರೂ ಹೊಳೆಯುತ್ತವೆ. ಒಡೆದ ಕಾಲಿಗೆ ಉಣ್ಣೆಯ ಬೂಟುಗಳನ್ನು ತೊಡುತ್ತಾಳೆ. ಆದರೆ ಪ್ರತಿಯೊಂದು ಬೇಸಿಗೆಯಲ್ಲೂ ನನ್ನನ್ನು ಗೊಂದಲಕ್ಕೀಡುಮಾಡುವುದೆಂದರೆ, ಕೆಲವು ಬಾರಿ ಈಕೆ ಬಹಳ ಪರಿಚಿತಳಂತೆ ಕಂಡರೆ ಇನ್ನು ಕೆಲವೊಮ್ಮೆ ಕಲ್ಲುಗಳ ಮೇಲೆ ಹರಿದಾಡುತ್ತಾ ದಿನ ಕಳೆವ ಹಲ್ಲಿಗಳಂತೆ ಕಾಣುತ್ತಾಳೆ. ನನ್ನ ನೀರಿನ ಪೈಪ್ ಬ್ಲಾಕ್ ಆದಾಗಲೆಲ್ಲಾ, ಹಳ್ಳಿಯಲ್ಲಿರುವ ಅವಳ ಮನೆಯವರೆಗೆ ಹೋಗಿ ಸಹಾಯ ಕೇಳಬೇಕಾಗುತ್ತದೆ. ಪೈಪನ್ನು ಹೇಗೆ ತೆರೆಯಬೇಕೆಂದು ಆಕೆ ತೋರಿಸುವ ಪ್ರಯತ್ನ ಮಾಡಿದರೂ, ನನಗೆ ಆ ಇಳಿಜಾರಿನಲ್ಲಿ ಅವಳೊಂದಿಗೆ ನಿಲ್ಲುವುದಕ್ಕಾಗುವುದಿಲ್ಲ. ನಾನು ಜಾರಿ ಉರುಳುತ್ತಾ ಗಿಡಗಳ ಮೇಲೆ ಬಿದ್ದರೂ, ೬೫ ವರ್ಷದ ಆ ಗಟ್ಟಿ ಮುದುಕಿಯ ಒಂದು ಹೆಜ್ಜೆಯೂ ತಪ್ಪುವುದಿಲ್ಲ. ಅವಳು ಹೊರಟಾಗ ಜೇಬುಗಳಲ್ಲಿ ಕಾಡು ತರಕಾರಿಯೂ ತುಂಬಿಕೊಂಡಿರುತ್ತದೆ.

******

ಒಂದು ದಿನವೂ ತಿಳಿಯದ ಹಾಗೆ ನಾನು ೯ ತಿಂಗಳುಗಳನ್ನು ಕಳೆದ ಬಳಿಕ ತಲೆಯನ್ನು ಎಲ್ಲಿಡಲಿ?! ಪರ್ವತದ ಮೇಲಿರುವ ಮಣ್ಣಿನ ಗುಡಿಸಲಿನಲ್ಲಿ ನಾನಂತೂ ಪರಮಸುಖದಲ್ಲೇ ಇದ್ದೆ. ಹಳ್ಳಿಗೆ ಹೋಗುವ ಯಾವ ಉದ್ದೇಶವೂ ಇಲ್ಲದೆ ಹಲವಾರು ದಿನಗಳನ್ನು ಅಲ್ಲೇ ಕಳೆದೆ. ಒಂದು ಸಣ್ಣ ರೇಡಿಯೊ, ಒಂದಷ್ಟು ಪುಸ್ತಕಗಳು ಹಾಗೂ ಒಂದು ಕುಡಿಕೆ ಹಸಿರು ಟೀ- ಏಕಾಂತದ ಸಂತಸವನ್ನು ಅನುಭವಿಸುವುದಕ್ಕೆ ನನಗೆ ಅಷ್ಟೇ ಬೇಕಾಗಿದ್ದುದು. ಆದರೆ ಒಬ್ಬನೇ ಸುಮ್ಮನಿರಲಿಲ್ಲ. ಯಾಕೆಂದರೆ ನಿಸರ್ಗದಲ್ಲಿ ನೀವು ಸಂಪೂರ್ಣವಾಗಿ ನಿಮ್ಮೊಳಗೇ ಇರಲು ಸಾಧ್ಯವಿಲ್ಲ. ನನ್ನ ಹಿಮಾಲಯ ವಲಯ ಬಹಳ ಬೇಗನೆ ಹಲ್ಲಿಗಳು, ಜೇಡಗಳು ಹಾಗೂ ಕಾಗೆಗಳಿಂದ ತುಂಬಿಕೊಂಡಿತು. ಅವುಗಳಲ್ಲಿ ಹಲ್ಲಿಗಳು ಅತ್ಯಂತ ಮುಗ್ಧವಾದವು. ಅವು ನನ್ನ ಹೃದಯ ಬಡಿತ ನಿಲ್ಲಿಸಿ, ಬಾಲ್ಕನಿಯಿಂದ ಜಾರಿ ಸೂಪಿನ ಬೌಲ್‌ನಲ್ಲಿ ಲ್ಯಾಂಡ್ ಆಗುತ್ತಿದ್ದವು !

ಆದರೆ ಜೇಡಕ್ಕೆ ಮಾತ್ರ ಒಂಚೂರೂ ಬುದ್ಧಿಯಿಲ್ಲ. ನಾನು ಅದನ್ನು ಮೊದಲ ಬಾರಿ ಕಿಟಕಿ ಮೂಲೆಯಲ್ಲಿ ಕಂಡಾಗ, ಅದು ಒಳ ಹೋಗಲು ಪ್ಲ್ಯಾನ್ ಮಾಡುತ್ತಿರುವಂತೆ ಕಾಣಿಸುತ್ತಿತ್ತು. ಒಬ್ಬ ಸ್ನೇಹಿತ ಮಾತುಕತೆ ಆರಂಭಿಸುವಂತೆ ಸಲಹೆ ಮಾಡಿದ. ಒಂದು ಅಪರಾಹ್ನ ಹೇಳಿದೆ "ಈಗ ನೋಡು....ನಮಗಿಬ್ಬರಿಗೂ ಸಾಕಾಗುವಷ್ಟು ಈ ಮನೆ ದೊಡ್ಡದಾಗಿದೆ. ಎಲ್ಲ ಕೀಟಗಳನ್ನು ಹಿಡಿಯಬಲ್ಲ ನಿನಗೆ ಸ್ವಾಗತ. ಆದರೆ ಏನೂ ಅತಿ ಕೀಟಲೆ ಮಾಡಬೇಡ. ಇದು ನಿನಗೆ ನನ್ನ ಎಚ್ಚರಿಕೆ'. ಮುಂದಿನ ಆ ರಾತ್ರಿ ೮ ಕಾಲುಗಳು ಮುಖದ ಮೇಲೆ ಹರಿದಾಡುತ್ತಿದ್ದಾಗ ಎಚ್ಚರವಾಯಿತು. ಥತ್ ವ್ಯಭಿಚಾರಿ! ಸಕ್ಕರೆ ಚೀಲಗಳನ್ನು ತೂತು ಮಾಡಿದ್ದ ಇಲಿಗಳು ಬಿಲ ಸೇರುವುದಕ್ಕಾಗಿ ಗೋಡೆ ಇಳಿಯುತ್ತಿದ್ದವು.

ವಿಜ್ಞಾನದ ಪ್ರಕಾರ, ಯಾವುದೇ ಸಮಸ್ಯೆಯನ್ನು ತಿಳಿದು ಟ್ರಯಲ್-ಎರರ್ ವಿಧಾನ ಬಳಸದೆ ಅದನ್ನು ಪರಿಹರಿಸಬಲ್ಲ ಕೆಲವೇ ಜೀವಿಗಳಲ್ಲಿ ಕಾಗೆಯೂ ಒಂದು. ಕಾಗೆಗಳ ಭಾಷೆಯ ಬಗ್ಗೆ ಅಧ್ಯಯನ ಮಾಡಿದ ಸಂಸ್ಕೃತ ಪುಸ್ತಕವೊಂದೂ ಇದೆಯಂತೆ . ಅವುಗಳ ಕೆಲಸ ಬಹಳ ನಾಜೂಕು, ತಪ್ಪುಗಳಿಗೆ ಅವಕಾಶ ಇಲ್ಲ. ಆದರೆ ಸಮಸ್ಯೆ ಆರಂಭವಾದದ್ದು ನಾನು ಸ್ನಾನಕ್ಕೆ ಹೋದಾಗ. ಊರಿನ ದೇವಸ್ಥಾನದ ಬಳಿಗೆ ಹೋಗುವುದನ್ನು ಬಿಟ್ಟು , ಇಳಿಜಾರಿನಲ್ಲೇ ಒಂದು ಬಕೆಟ್ ತಣ್ಣಗಿನ ನೀರು ತುಂಬಿಕೊಂಡು ಮೈಮೇಲೆ ಸುರಿದುಕೊಂಡೆ. ಬೀಸುತ್ತಿರುವ ಗಾಳಿ ದೇಹದ ಸಹಜ ಉಷ್ಣತೆಯನ್ನು ಕಡಿಮೆ ಮಾಡುವುದಕ್ಕೆ ಯತ್ನಿಸುತ್ತಿತ್ತು. ಆದರೆ ಪ್ರತಿಸಾರಿ ನಾನು ಬಾಲ್ಕನಿಯಿಂದ ಹೊರಟಾಗಲೂ ಒಂದು ಕಾಗೆ ಕಾ...ಕಾ ಅಂತ ಎಚ್ಚರಿಕೆ ಕೊಡುವುದು, ಇನ್ನೊಂದು ಕಾಗೆ ಅಡುಗೆಮನೆಯಲ್ಲಿ ಎಲ್ಲವನ್ನೂ ಬುಡಮೇಲು ಮಾಡುವುದಕ್ಕೆ ವೇಗವಾಗಿ ನುಗ್ಗುವುದನ್ನು ಸ್ವಲ್ಪ ಸಮಯದ ನಂತರ ಗಮನಿಸಿದೆ. ಹಾಗಾಗಿ ಆ ಬಳಿಕ ಸ್ನಾನಕ್ಕೆ ಹೊರಟಾಗ ಒಂದಷ್ಟು ಕಲ್ಲುಗಳನ್ನು ಜೊತೆಗಿಟ್ಟುಕೊಂಡೆ. ಆಕ್ರಮಣಕಾರರಿಗೆ ಶಾಕ್!
ಆ ನಂತರವಂತೂ ಯುದ್ಧವೇ ಘೋಷಣೆಯಾಯಿತು. ಕಾಗೆಗಳು ಆಗಾಗ ಅತ್ತಿತ್ತ ಹಾರಾಡತೊಡಗಿದವು. ಮನೆಯ ಕಡೆ ಮುಖ ಮಾಡಿ ಬಂಡೆಗಳ ಮೇಲೆ ಕುಳಿತು ಅಂಗಚೇಷ್ಟೆ ಮಾಡತೊಡಗಿದವು. ರೆಕ್ಕೆಗಳನ್ನು ಬಡಿಯುತ್ತಾ "ಬಯಲಿನಲ್ಲಿ ಚಿಕನ್ ಇದೆ ಬಾರೋ' ಅಂತ ಕರೆಯುವ ಮಕ್ಕಳ ಹಾಗೆ ಮಾಡತೊಡಗಿದವು. ನಾನು ಕಲ್ಲುಗಳನ್ನು ರಾಶಿ ಹಾಕಲು ಶುರು ಮಾಡಿದೆ ಮತ್ತು ಚಪಾತಿಯನ್ನು ಇನ್ನಷ್ಟು ಗಟ್ಟಿ ಮಾಡಿದೆ !

ಒಂದು ವಾರದ ಬಳಿಕ ಬಟ್ಟೆ ಒಗೆಯುವುದಕ್ಕಾಗಿ ಬಳಿಯಲ್ಲಿದ್ದ ಬಂಡೆ ಹತ್ತಿದೆ. ಟೀ ಷರ್ಟುಗಳನ್ನು ಸಾಬೂನಿನಿಂದ ಉಜ್ಜುತ್ತಾ , ಒದ್ದೆಯಾಗಿದ್ದಾಗ ಇದ್ದದ್ದಕ್ಕಿಂತ ಈಗ ಹೆಚ್ಚು ಸ್ವಚ್ಛವಾಗುತ್ತಿವೆ ಅಂದುಕೊಂಡೆ. ನಾನು ಹೇಳುತ್ತಿರುವುದು ಸತ್ಯವೆಂದು ನನ್ನಷ್ಟಕ್ಕೇ ಪ್ರಮಾಣ ಮಾಡಿಕೊಂಡೆ. ಆಗ ಮೂರು ಕಾಗೆಗಳು ಸದ್ದಿಲ್ಲದೆ ನನ್ನ ಹಿಂದೆ ಬಂದು ಒಂದು-ಎರಡು-ಮೂರು ಎಂದು ಕುಕ್ಕಲು ಶುರು ಮಾಡಿದವು. ನನ್ನ ಹೃದಯಬಡಿತ ಬಹುಪಾಲು ನಿಂತಿತ್ತು. ಪರ್ವತದ ಇಳಿಜಾರಿನಲ್ಲಿ ಉರುಳಿಹೋದೆ. ಅವುಗಳು ದಿನಗಟ್ಟಲೆ ನಕ್ಕವು. ಥತ್ ಸೂಳೇಮಕ್ಕಳು.

ಹಿಮಾಲಯವಿರುವುದು ಹೇಡಿಗಳಿಗಲ್ಲ. ಇದು ಎಂತಹ ಪ್ರದೇಶವೆಂದರೆ, ನೀವು ನಿಮ್ಮೆಲ್ಲಾ ಕೊಳಕುಗಳನ್ನು ಇಟ್ಟುಕೊಂಡೇ ಯಾವ ತಪ್ಪನ್ನೂ ಮಾಡದೇ ಇಲ್ಲಿ ಇರಬೇಕಾಗುತ್ತದೆ ! ಪ್ರತಿಬಾರಿ ನೀವೆಲ್ಲಿಗೇ ಹೋದರೂ ಆಕರ್ಷಣೆ ಇಟ್ಟುಕೊಂಡೇ ಹೋರಾಟದಲ್ಲಿ ಬಂಧಿಯಾಗಿರುತ್ತೀರಿ. ನೀವು ಪರ್ವತದಿಂದ ಕೆಳಗುರುಳಬಹುದು ಮತ್ತು ಮೇಲಕ್ಕೇರುತ್ತಾ ಖಾಲಿಯಾಗಲೂಬಹುದು. ಧೂಮಪಾನ ವ್ಯಸನಿಗಳಿಗಂತೂ ಇದು ಅತ್ಯಂತ ಕಷ್ಟದ ಜಾಗ. ಬಹುಪಾಲು ಜನ ಕೆಮ್ಮುತ್ತಾ , ಕೆಲ ನಿಮಿಷಗಳ ಕಾಲ ಮಾತನಾಡಲಾಗದ ಸ್ಥಿತಿಯಲ್ಲೇ ನನ್ನ ಮನೆಗೆ ಬರುತ್ತಾರೆ. ಆದರೆ ಇನ್ನು ಹಲವರು ಹಳ್ಳಿಯಲ್ಲಿರುವ ಗೆಸ್ಟ್‌ಹೌಸ್‌ಗಳಲ್ಲಿ ಉಳಿದುಕೊಂಡು ರೆಸ್ಟೋರೆಂಟ್‌ಗಳಲ್ಲಿ ತಿನ್ನುತ್ತಾರೆ. ಆದರೆ ಸ್ವಂತ ಮನೆ ಹೊಂದಿರುವ ನಮ್ಮಂಥವರು ಇಳಿಜಾರುಗಳಿಂದಲೇ ನಮಗೆ ಬೇಕಾದ್ದನ್ನೆಲ್ಲಾ ತರಬೇಕು, ತುಂಬಿಸಿದ ಗ್ಯಾಸ್ ಸಿಲಿಂಡರ್‌ಗಳನ್ನು ತರಲು ಕೂಲಿಗಳಿಗೆ ಹೇಳಬೇಕು, ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಪ್ರಕೃತಿಯಲ್ಲಿ ಬದುಕಲು ಕಲಿಯಬೇಕು.

ಹೊರಗಿರುವ ಟಾಯ್ಲೆಟ್‌ಗೆ ಛಾವಣಿ ಹಾಕುವುದರಲ್ಲೇ ನಾನು ಬೆಳಗಿನ ಸಮಯವನ್ನೆಲ್ಲಾ ಕಳೆದೆ. ಒಂದಿಷ್ಟು ಅಗಲದ ದಪ್ಪದ ಪ್ಲ್ಯಾಸ್ಟಿಕ್, ಹಗ್ಗ ಹಾಗೂ ಚೂರಿಯೊಂದಿಗೆ ಮರದ ರೆಂಬೆಗಳಿಗೆ ಹಗ್ಗ ಕಟ್ಟಿ ಬಂಡೆಗಳಿಗೆ ಗಂಟು ಹಾಕಲು ಯತ್ನಿಸಿದೆ. ಬಹಳ ಸಮಯ ಬೆವರು ಹರಿಸಿ ಕೆಲಸ ಮಾಡಿ ಕೊನೆಗೂ ಮಳೆ ನೀರೆಲ್ಲ ಮರದ ತೋಳುಗಳ ಮೇಲಿನಿಂದ ಹರಿಯುವಂತೆ ಮಾಡಿದೆ. ಆದರೆ ನಾನು ಪಾಯಿಖಾನೆಗೆ ಹೋಗುವಾಗೆಲ್ಲಾ ಕೊಡೆ ಹಿಡಿದುಕೊಂಡೇ ಹೋಗಬೇಕಾಗುತ್ತಿತ್ತು !


-ಇಂಗ್ಲಿಶ್ ಮೂಲ:ಅನಾಮಿಕ

-ಕನ್ನಡಕ್ಕೆ: ದೇರಾಜೆ

Read more...

August 08, 2007

ಇದು ಗಗನಮುಖಿ - ರಾಜ ರಾಣಿ 'ರೋಜರ್' ರಾಕೆಟ್' !




೨೦೦೩ರಲ್ಲಿ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿ ಗೆದ್ದಾಗ ರೋಜರ್ ಫೆಡರರ್ ಹೇಳಿದ್ದ- "ಕೆಲವು ಆಟಗಾರರು ಗೆದ್ದ ನಂತರವೂ ನಗುವುದಿಲ್ಲ. ಇನ್ನು ಕೆಲವರು ಗೆದ್ದು ವಾರವಾದರೂ ನಗುತ್ತಲೇ ಇರುತ್ತಾರೆ ! ಆದರೆ ನಾನು ಎಂಥವನೆಂದರೆ, ಗೆದ್ದ ಬಳಿಕ ಕಣ್ಣೀರುಗರೆಯುತ್ತೇನೆ'. ಈ ವರ್ಷ ವಿಂಬಲ್ಡನ್ ಗೆದ್ದಾಗಲೂ ಆತ ಅಕ್ಷರಶಃ ಕಣ್ಣೀರುಗರೆಯುತ್ತಾ ಆಟದಂಗಳದಲ್ಲೇ ಬಿದ್ದಿದ್ದ.


ಸ್ವಿಸ್ ನ್ಯಾಷನಲ್ ಟೆನಿಸ್ ಸೆಂಟರ್‌ನಲ್ಲಿ ಹದಿಹರೆಯದ ಹುಡುಗರು ತರಬೇತಿ ಪಡೆಯುತ್ತಿದ್ದರು. ತರಬೇತುದಾರರೊಬ್ಬರು ಒಂದು ದಿನ, "ನಿಮ್ಮ ಗುರಿಗಳೇನು, ಹೇಳಿ' ಅಂದರು. ವೃತ್ತಿಪರ ಆಟಗಾರನಾಗುವುದು, ವಿಶ್ವದ ಮೊದಲ ನೂರು ಆಟಗಾರರಲ್ಲಿ ಒಬ್ಬನಾಗುವುದು ಎಂದೆಲ್ಲಾ ಅಂದವರೇ ಹಲವರು. ಆದರೆ ಹದಿನೈದರ ಪೋರನೊಬ್ಬ ಹೀಗೆ ಬರೆದಿದ್ದ - ನನ್ನ ಗುರಿ, ವಿಶ್ವದ ಟಾಪ್ ಟೆನ್ ಟೆನಿಸ್ ಆಟಗಾರರನ್ನು ಚಿಂದಿ ಉಡಾಯಿಸಿ ನಂ ೧ ಪಟ್ಟ ಪಡೆಯುವುದು !


ಆ ಹುಟ್ಟು ಹೋರಾಟಗಾರನೇ ಈಗ ಇಪ್ಪತ್ತಾರರ ಹರೆಯದ ರೋಜರ್ ಫೆಡರರ್. ಕಳೆದ ಜುಲೈ ೮ರಂದು "ಸೆಂಟರ್ ಕೋರ್ಟ್'ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸತತ ಐದು ಬಾರಿ ವಿಂಬಲ್ಡನ್ ಕಿರೀಟ ಧರಿಸಿದವನು. ಆ ಮೂಲಕ ಹನ್ನೊಂದು ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದು ಮಾಜಿ ತಾರೆ ಪೀಟ್ ಸಾಂಪ್ರಾಸ್‌ಗೆ (ಆತ ೧೪ ಗ್ರ್ಯಾಂಡ್‌ಸ್ಲಾಮ್ ಗೆದ್ದವನು) ಸಡ್ಡು ಹೊಡೆದವನು. ಆರಡಿ ಒಂದು ಇಂಚು ಎತ್ತರದ, ಬರೋಬ್ಬರಿ ಎಂಬತ್ತನಾಲ್ಕು ಕೆಜಿ ತೂಗುವ ಸ್ವಿಟ್ಜರ್‌ಲ್ಯಾಂಡ್‌ನ ರೋಜರ್, ರಾಕ್ ಮ್ಯೂಸಿಕ್‌ನ್ನು ಖುಶಿಯಿಂದ ಕೇಳುತ್ತಾನೆ. ಬೆಳ್ಳಿ ಬಟ್ಟಲಿನಂಥ ಮುಖದ, ಮಟ್ಟಸ ಎದೆಯ ಈ ತರುಣ ಮಾನಸಿಕ ದೃಢತೆ, ದೈಹಿಕ ಸಾಮರ್ಥ್ಯ ಎರಡೂ ಹೊಂದಿದವನು. ಗಾಲ್ಫ್, ಫುಟ್‌ಬಾಲ್, ಸ್ಕೀಯಿಂಗ್, ಕಾರ್ಡ್ಸ್ ಆಡೋದು, ಮಾಜಿ ಟೆನಿಸ್ ಆಟಗಾರ್ತಿ-ಗರ್ಲ್‌ಫ್ರೆಂಡ್ ಮಿರ್ಕಾಳೊಂದಿಗೆ ಸುತ್ತಾಡೋದು ಇವನ ಇತರೇ ಹವ್ಯಾಸ.

೨೦೦೬ರ ಯು.ಎಸ್.ಓಪನ್ ಹಾಗೂ ೨೦೦೭ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ , ತನ್ನ ಸಾಂಪ್ರದಾಯಿಕ ಎದುರಾಳಿಯಂತಾಗಿರುವ ಸ್ಪೈನ್ ದೇಶದ ಗೂಳಿ ನಡಾಲ್‌ಗೆ ಈತ ಶಿರಬಾಗಿದ್ದ. ಅದಕ್ಕೆ ಸಾಕ್ಷಿಯೆಂಬಂತೆ ಹಿಂದಿನ ಯಾವ ಗ್ರ್ಯಾಂಡ್‌ಸ್ಲಾಮ್ ಫೈನಲ್‌ನಲ್ಲೂ ಐದು ಸೆಟ್ ಆಡಬೇಕಾದ ಅಗತ್ಯ ಕಾಣದ ಫೆಡರರ್ ಈ ಬಾರಿಯ ವಿಂಬಲ್ಡನ್‌ನಲ್ಲಿ ಮಾತ್ರ ರಾಫೆಲ್ ನಡಾಲ್ ಜೊತೆ ಐದು ಸೆಟ್‌ಗಳಲ್ಲಿ (೭-೬, ೪-೬, ೭-೬, ೨-೬, ೬-೨) ಸೆಣಸಬೇಕಾಯಿತು. ಬೋರ್ಗ್, ಜಿಮ್ಮಿ ಕಾನರ್‍ಸ್, ಜಾನ್ ಮೆಕ್‌ನೋರ್, ಬೋರಿಸ್ ಬೆಕರ್ ಎಂಬ ಟೆನಿಸ್ ಲೋಕದ ಮಹಾನ್ ತಾರೆಗಳು ಅಂದು ರಾಯಲ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದರು. ಆದರೆ ರೋಜರ್ ರಾಕೆಟ್ ಮತ್ತೆ ಗಗನಮುಖಿಯಾಯಿತು. ಪಂದ್ಯ ಮುಗಿದ ಬಳಿಕ ಬೋರ್ಗ್ ವರ್ಣಿಸಿದ: "ಇವನದ್ದೊಂದು ಆರ್ಕೆಸ್ಟ್ರಾ !' "ದ ಏಜ್' ಎಂಬ ಪತ್ರಿಕೆ ಬರೆಯಿತು "ಫೆಡರರ್ ಈಸ್ ಎ ಕೋರ್ಟ್ ಆರ್ಟಿಸ್ಟ್' !

ಇಂತಹ ರೋಜರ್ ಫೆಡರರ್ ಸೀನಿಯರ್ ಆಗಿ ವೃತ್ತಿಪರ ಟೆನಿಸ್ ರಂಗಕ್ಕೆ ಕಾಲಿಟ್ಟದ್ದು ೧೯೯೮ರಲ್ಲಿ. ಮೊದಲ ಎಟಿಪಿ ಟೂರ್ನಮೆಂಟ್‌ನಲ್ಲಿ ಜಯ ಗಳಿಸಿದ್ದು ೨೦೦೧ರ ಫೆಬ್ರವರಿಯಲ್ಲಿ. ಆದರೆ ಅದೇ ವರ್ಷ, ಏಳು ಬಾರಿ ವಿಂಬಲ್ಡನ್ ಗೆದ್ದಿದ್ದ ಪೀಟ್ ಸಾಂಪ್ರಾಸ್‌ನನ್ನು ವಿಂಬಲ್ಡನ್‌ನ ನಾಲ್ಕನೇ ಸುತ್ತಿನಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಹದಿಮೂರನೇ ಸ್ಥಾನ ಪಡೆದ. ೨೦೦೫ರ ಯುಎಸ್ ಓಪನ್ ಫೈನಲ್‌ನಲ್ಲಿ ಅಮೆರಿಕದ ಅಗಾಸಿಯನ್ನು ಆತನ ನೆಲದಲ್ಲೇ ಸೋಲಿಸಿದ ರೋಜರ್ ಪ್ರತಿಭೆಗೆ ಟೆನಿಸ್ ಲೋಕ ದಂಗಾಯಿತು. ೨೦೦೪ ಮತ್ತು ೨೦೦೬ರಲ್ಲಿ ಆಯಾ ವರ್ಷಗಳಲ್ಲಿ ಆಡಿದ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಮೂರನ್ನು ಗೆದ್ದುಕೊಂಡ. ೧೯೮೮ರಿಂದ ಆ ರೀತಿ ಯಾರೂ ಗೆದ್ದಿರಲಿಲ್ಲ ! ೨೦೦೬ರ ವಿಂಬಲ್ಡನ್‌ನಲ್ಲಿ ಒಂದು ಸೆಟ್ ಕೂಡಾ ಸೋಲದೆ ಫೈನಲ್‌ಗೆ ಹೋಗಿ ನಡಾಲ್‌ನನ್ನು ಸೋಲಿಸಿದ. ೨೦೦೭ರಲ್ಲಿ ಈವರೆಗೆ ಈತ ಗೆದ್ದಿರುವ ಸಿಂಗಲ್ಸ್ ಪಂದ್ಯಗಳು ಮೂವತ್ತೇಳು, ಸೋತದ್ದು ಕೇವಲ ಐದು. ಇಂತಹ ಟೆನಿಸ್ ಜಾದೂಗಾರ ೨ ಫೆಬ್ರವರಿ ೨೦೦೪ರಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲನೇ ಸ್ಥಾನದಲ್ಲೇ ಝಂಡಾ ಊರಿದ್ದಾನೆ. ಈತನಿಗೀಗ ಮನೆಯಲ್ಲಿರಲು ಸಮಯ ಸಿಗುವುದು ವರ್ಷದಲ್ಲಿ ಸುಮಾರು ಅರುವತ್ತು ದಿನಗಳಷ್ಟೆ !

'ಪ್ರೇಕ್ಷಕರ ಹಷೋದ್ಗಾರ ಕೇಕೆಗಳನ್ನು ನಾನು ಪ್ರೀತಿಸುತ್ತೇನೆ. ಇನ್ನಷ್ಟು ಚೆನ್ನಾಗಿ ಆಡಲು ಅವು ಪ್ರೇರೇಪಿಸುತ್ತವೆ. ಕೆಲವೊಮ್ಮೆ ಅವು ನಮಗೆ ಗಲಿಬಿಲಿ-ಮುಜುಗರ ಮಾಡಲೂಬಹುದು. ಆದರೆ ಅದೇ ಅದರ ವೈಶಿಷ್ಟ್ಯ. ಹಾಗಾಗಿ ಅವು ಯಾವತ್ತೂ ನನ್ನನ್ನು ನೋಯಿಸುವುದಿಲ್ಲ' ಎನ್ನುತ್ತಾನೆ ರೋಜರ್ ಫೆಡರರ್. "ಅಭಿಮಾನಿಗಳು ಯಾವಾಗಲೂ ನಿನಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಒಂದುವೇಳೆ ಅವರಿಗೆ ನೀನು ಕೇಳಬಹುದಾದ ಪ್ರಶ್ನೆ ಯಾವುದು?' ಅಂದದ್ದಕ್ಕೆ - "ನೀವು ಯಾಕೆ ನನ್ನನ್ನು ಬೆಂಬಲಿಸುತ್ತೀರಿ ? ಮತ್ತು ಯಾಕೆ ನನ್ನ ಅಭಿಮಾನಿಯಾಗಿದ್ದೀರಿ? ಹೇಳಿ' ಅಂತ ಮುದ್ದುಮುದ್ದಾಗಿ ಕೇಳುವವನು ಈತ.

ದಕ್ಷಿಣ ಆಫ್ರಿಕಾದ ವಿಕಲಚೇತನ ಮಕ್ಕಳಿಗೆ ನೆರವಾಗಲು ೨೦೦೩ರಲ್ಲಿ ರೋಜರ್ ಫೆಡರರ್ ಫೌಂಡೇಶನ್ ಸ್ಥಾಪನೆಯಾಯಿತು. (ಫೆಡರರ್ ತಾಯಿ ದಕ್ಷಿಣ ಆಫ್ರಿಕದವಳು.) ಅದರೊಂದಿಗೇ "ಆರ್‌ಎಫ್ ಕಾಸ್ಮೆಟಿಕ್ಸ್' ಎಂದು ಈತನ ಹೆಸರಿನಲ್ಲೇ ಸೌಂದರ್ಯ ವರ್ಧಕಗಳ ಉತ್ಪಾದನೆಯೂ ಆರಂಭವಾಯಿತು. "ರೋಜರ್‌ಫೆಡರರ್ ಡಾಟ್ ಕಾಮ್" ಎಂಬ ಆತನ ಬಗೆಗಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗ ನೋಂದಣಿ ಮಾಡಿಕೊಂಡ ಜನರ ಸಂಖ್ಯೆಯೇ ೧,೨೯,೩೨೨ ! ರೋಲೆಕ್ಸ್, ಜಿಲೆಟ್, ನೈಕ್, ವಿಲ್ಸನ್‌ನಂತಹ ಪ್ರಸಿದ್ಧ ಕಂಪನಿಗಳು ಈತನಿಗೆ ಪ್ರಾಯೋಜಕರು. ಏಪ್ರಿಲ್ ೨೦೦೭ರಲ್ಲಿ ಸ್ವಿಟ್ಜರ್‌ಲ್ಯಾಂಡ್ ಸರಕಾರ ಆತನ ಹೆಸರಿನ ಅಂಚೆಚೀಟಿಯನ್ನು ವಿಂಬಲ್ಡನ್ ಟ್ರೋಫಿ ಹಿಡಿದಿರುವ ಚಿತ್ರದೊಂದಿಗೆ ಬಿಡುಗಡೆ ಮಾಡಿತು. ಬದುಕಿರುವಾಗಲೇ ಇಂತಹ ಗೌರವ ಪಡೆದ ಮೊದಲ ಸ್ವಿಸ್ ಪ್ರಜೆಯಾಗಿ ಫೆಡರರ್ ಹೆಸರು ದಾಖಲಾಯಿತು.

೨೦೦೩ರಲ್ಲಿ ಮೊದಲ ವಿಂಬಲ್ಡನ್ ಫ್ರಶಸ್ತಿ ಗೆದ್ದಾಗ ರೋಜರ್ ಹೇಳಿದ್ದ - "ಕೆಲವು ಆಟಗಾರರು ಗೆದ್ದ ನಂತರವೂ ನಗುವುದಿಲ್ಲ. ಇನ್ನು ಕೆಲವರು ಗೆದ್ದು ವಾರವಾದರೂ ನಗುತ್ತಲೇ ಇರುತ್ತಾರೆ ! ಆದರೆ ನಾನು ಎಂಥವನೆಂದರೆ, ಗೆದ್ದ ಬಳಿಕ ಕಣ್ಣೀರುಗರೆಯುತ್ತೇನೆ'. ಈ ವರ್ಷ ವಿಂಬಲ್ಡನ್ ಗೆದ್ದಾಗಲೂ ಆತ ಅಕ್ಷರಶಃ ಕಣ್ಣೀರುಗರೆಯುತ್ತಾ ನೆಲದ ಮೇಲೆ ಬಿದ್ದಿದ್ದ. ಬಳಿಕ ಹೇಳಿದ- "ನಡಾಲ್ ನಿಜವಾಗಿಯೂ ಈ ಬಾರಿಯ ಟ್ರೋಫಿಗೆ ಅರ್ಹನಾಗಿದ್ದ. ಆದರೆ ನಾನು ಅದೃಷ್ಟಶಾಲಿಯಾದೆ '. ಇದು ನಿಜವಾದ ಚಾಂಪಿಯನ್ ಹೇಳುವ ಮಾತು.


Read more...

ಒಂದು ಅ'ಮರ' ಲೋಕ

ರಾತ್ರಿಯ ಸೊಲ್ಲಿಗೆ ಕೆಲಕ್ಷಣ ಹೊಸ ಆವೇಶ. ಏನು ಏನು ಏನದು ಸದ್ದು ಅನ್ನುವಷ್ಟರಲ್ಲಿ ಕತ್ತಲನ್ನು ಕದಡುತ್ತಾ ಆ ಮರ ಧರಾಶಾಹಿಯಾಗಿದೆ. ಚಂದ್ರ ಕೊಂಚ ಮುಂದಕ್ಕೋಡಿ ಮುಗಿಲೆತ್ತರದ ಕೊಂಬೆಗಳಿಂದ ತಪ್ಪಿಸಿಕೊಂಡಿದ್ದಾನೆ ! ಎಲೆಗಳ ಮಧ್ಯೆ ನಕ್ಷತ್ರಗಳು ತೊಪತೊಪ ಉದುರಿದವೆ? ಮತ್ತೆ ಎಲ್ಲೆಲ್ಲೂ ಗಾಢ ಮೌನ. ಎಲ್ಲ ಒಂದರೊಳಗೊಂದು ಬೆರೆತಂತೆ ಸುತ್ತಲೂ ವ್ಯಾಪಿಸುತ್ತಿದೆ ಹೊಸ ಗಂಧ. ಬೆಳದಿಂಗಳು ಕೊಂಚ ಕಲಕಿ ಹೋಗಿದೆ. ಗಾಳಿಯೀಗ ಪಶ್ಚಾತ್ತಾಪದಿಂದ, ಸುಸ್ತಾದವರಂತೆ ಹದವಾಗಿ ನಯವಾಗಿ ಬೀಸುತ್ತಿದೆ. ಮಳೆಯು ಕಣ್ಣೀರಿಡುತ್ತಿದೆ.

ಹಗಲು ಅದೆಷ್ಟೋ ಜೀವಿಗಳನ್ನು ಸೆಳೆದುಕೊಂಡಿದ್ದ ಮರವೀಗ ಒಬ್ಬಂಟಿ. ಕಡು ಹಸಿರು ಬಣ್ಣ ಸುರಿಸುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ , ಘಟೋತ್ಕಚ ಆಗಸದಿಂದ ಕೆಡೆದು ಬಿದ್ದಂತಿದೆ. ಕತ್ತಲಲ್ಲಿ ಏದುಸಿರು ಬಿಡುತ್ತಾ ಏನನ್ನೋ ತಡಕಾಡುವಂತಿದೆ ಅದರ ರೀತಿ. ಕರಿ ಕತ್ತಲೆಯಲ್ಲಿ ಕರಗಿಹೋಗುತ್ತಿದೆ. ಮರದ ಕೆಲವು ಎಲೆಗಳಷ್ಟೇ ಅಲ್ಲಾಡುತ್ತಿವೆ-ಹಸುಗಳ ಕಿವಿಯಂತೆ. ಒದ್ದೆಯಾದ ಆ ಎಲೆಗಳ ಅಂಚುಗಳು ಮಾತ್ರ ಬೆಳದಿಂಗಳಲ್ಲಿ ಹೊಳೆಯುತ್ತಾ ಜೀವ ಹಿಡಿದಿಟ್ಟುಕೊಂಡಿವೆ. ಏನೋ ಅನಾಹುತವಾಯಿತೆಂದು ಆಗಿಂದ ಬೊಗಳುತ್ತಲೇ ಇದೆ ನಾಯಿ. ಉದ್ದುದ್ದ ವಕ್ರವಕ್ರ ಬೇರುಗಳು ಅತ್ಯಂತ ವಿಕಾರವಾಗಿ ಕಾಣುತ್ತಿವೆ. ಮಳೆಯ ಸದ್ದಿಗೆ ಈಗ ಹೊಸ ನಾದ-ಲಯ ಪ್ರಾಪ್ತವಾಗಿದೆ.

ಛೆ, ಬೆಳಗಾದರೆ ಪಾಪ ಹಕ್ಕಿಗಳೇನು ಮಾಡಬೇಕು ? ಇಬ್ಬನಿ ಎಷ್ಟು ಬೇಗ ಜೀವ ಕಳೆದುಕೊಂಡು ಮಣ್ಣು ಸೇರಬೇಕು? ಬೆಳಕು ಬರೀ ಅಂಗಳಕ್ಕೆ ಜಗಮಗ ಸುರಿದು ವ್ಯರ್ಥವಾಗಬೇಕು ! ದುಂಬಿ, ಜೇನ್ನೊಣ, ಅಳಿಲು, ಮಂಗ, ಇರುವೆಗಳಿಗೆ ಈಗ ಏನನ್ನಿಸೀತು? ನಮ್ಮ ಹಟ್ಟಿಯ ಮಾಡಿನಂಚಿನಿಂದ ಮೂಡುವ ಸೂರ್‍ಯ ನಾಳೆ ಕೊಂಚ ಅನುಮಾನಿಸಿಯಾನು. ಅಮ್ಮ ಮಾಡಿಟ್ಟಿರುವ ಮಾವಿನ ಹಣ್ಣಿನ ಮಾಂಬಳ ಎಷ್ಟು ಸಮಯ ತಿನ್ನಲುಳಿದೀತು ? ಬೇಲಿ ಹಾರಿ ತೋಟ ಸೇರಿ ಈ ಮರದ ಕೆಳಗೇ ಪಟಪಟ ಹನಿಗಳಿಗೆ ನಡುಗುತ್ತ ರಾತ್ರಿ ಕಳೆಯುವ ತುಡುಗು ದನಗಳಿಗೆ ಇನ್ನೆಲ್ಲಿ ಜಾಗ? ಮರಕ್ಕೆ ಕೊಂಚ ಹಬ್ಬಿದ್ದ ಕಾಳುಮೆಣಸಿನ ಬಳ್ಳಿ ಏನಾಯಿತೋ. ಅಬ್ಬಾ..ದಕ್ಷಿಣಕ್ಕಿದ್ದ ಜೇನುಪೆಟ್ಟಿಗೆ ಮಾತ್ರ ಉಳಿದುಕೊಂಡಿದೆ. ಇಲ್ಲಿ ನೆರಳಿದೆಯೆಂದು ಗೂಟ ಹಾಕಿ ಅಮ್ಮ ಜತನದಿಂದ ಬೆಳೆಸಿದ್ದ ನಾಲ್ಕೇನಾಲ್ಕು ವೆನಿಲ್ಲಾ ಬಳ್ಳಿಗಳೂ ಖಲಾಸ್. ಒಂಚೂರೂ ಹುಳ ಹಿಡಿಯದ ಮಾವಿನ ಸೊಪ್ಪು , ನಾಡಿದ್ದು ಪೂಜೆಯ ದಿನ ಒಂದು ಬಾಗಿಲಿಗಾದರೂ ತೋರಣ ಕಟ್ಟುವುದಕ್ಕೆ ಉಳಿದೀತೇ? ತಮ್ಮನ ಜೋಕಾಲಿ ಎಲ್ಲಿದೆಯೋ...

ಬೆಳ್ಳಂ ಬೆಳಗ್ಗೆ ಹೂ ಕೊಯ್ಯಲು ಅಂಗಳಕ್ಕಿಳಿಯುವ ಅಜ್ಜಿ , ಒಮ್ಮೆ ಗಲಿಬಿಲಿಗೊಂಡಾರು. ಅಂಗಳ ಪೂರ್ತಿ ಹಾಳಾಯ್ತು ಅಂದಾರು. ಸ್ವಲ್ಪ ಹೊತ್ತು ಛೆ ಛೆ ಎನ್ನುವ ಅಪ್ಪ ಮರುಕ್ಷಣ, ಮರದಿಂದ ಬರುವ ಲಾಭಗಳ ಬಗ್ಗೆ ಯೋಚಿಸಿಯಾರು. ಅಮ್ಮ ಬೆಳಗ್ಗೆದ್ದು "ಹಿಂದಿನವರಿಗೆ ಬುದ್ಧಿ ಇಲ್ಲ. ಮನೆ ಮೇಲೆ ಬಿದ್ದಿದ್ರೆ ಏನು ಗತಿ ಆಗ್ತಾ ಇತ್ತು? ಇಷ್ಟು ಹತ್ರ ಯಾರಾದ್ರೂ ಮಾವಿನ ಗಿಡ ನೆಡ್ತಾರಾ? ಮಾವಿನ ಹಣ್ಣು ಆಗೋದಕ್ಕೆ ಶುರು ಆಯ್ತು ಅಂದ್ರೆ ನುಸಿಯೋ ನುಸಿ. ತೋಟದ ಆ ತೆಂಕ ಊಲೆಯಲ್ಲಿ ನಾನು ಹೊಸ ಗಿಡ ನೆಡ್ತೇನೆ' ಅಂತ ಹೇಳಿಯೇ ಹೇಳುತ್ತಾಳೆ. ತಮ್ಮನಂತೂ ಮರದ ಮೇಲೆಲ್ಲಾ ಹತ್ತಿ. "ನೋಡಿ ನೋಡಿ ನಾನು ಇಷ್ಟು ಸಣ್ಣವನು ಮರದ ತುದಿಗೇ ಹತ್ತುತ್ತೇನೆ' ಅಂತ ಪರಾಕ್ರಮ ಕೊಚ್ಚಿ ನಗುವುದು ಖಂಡಿತ. ಬೆಳಗ್ಗೆ ಒಂಭತ್ತಕ್ಕೆ ಬರುವ ಕೆಲಸದ ಚನಿಯ, ಮರ ಯಾವ್ಯಾವ ದಿಕ್ಕಿಗೆ ಬಿದ್ದಿದ್ದರೆ ಎಷ್ಟೆಷ್ಟು ಹಾನಿಯಾಗುತ್ತಿತ್ತು, ಈಗ ಮರ ಕೊಯ್ಯಲು ಎಷ್ಟು ಜನ ಬೇಕಾಗಬಹುದು, ನಾನೆಷ್ಟು ಬಾರಿ ಈ ಮರ ಹತ್ತಿ ಮಾವಿನಹಣ್ಣು ಕೊಯ್ದಿದ್ದೆ , ಉಪ್ಪಿನಕಾಯಿ ಹಾಕಲು ಬಹಳ ಸೊಗಸಾಗಿರುವ ಇದರ ಮಾವಿನ ಮಿಡಿ ಹಾಗೂ ಉಳಿದ ಮರಗಳ ಮಿಡಿಗಳಿಗೂ ಇರುವ ವ್ಯತ್ಯಾಸವೇನು, ತನ್ನ ಅಪ್ಪನೂ ಹಿರಿಯ ಧನಿಗಳೂ ಇದನ್ನು ತಂದು ನೆಟ್ಟದ್ದು ಯಾವಾಗ ಅಂತೆಲ್ಲಾ ಹೇಳಬಹುದು. ಕೊನೆಗೆ, "ಮನೆ ಬಾಗಿಲಿಗೆ ಬಂದ ಕೊಂಬೆ ಸವರೋದಕ್ಕೇ ಮೂರು ಜನ ಬೇಕು. ನಾನಿವತ್ತು ರಜೆ ಅಂತ ಹೇಳಿ ಹೋಗಲು ಬಂದೆ' ಅಂತನ್ನಲೂಬಹುದು ! ಮುಂದಿನ ವಾರ ಬರುವ ಮಾವ, "ಛೆ ಈ ಮರಕ್ಕೊಂದು ಕಸಿ ಕಟ್ಟಿ ಗಿಡವನ್ನಾದರೂ ಮಾಡಿಕೊಳ್ಳಬೇಕಾಗಿತ್ತು' ಎನ್ನುವುದು ಗ್ಯಾರಂಟಿ.



ಪ್ರತಿ ವರ್ಷ ಮಾವಿನಮಿಡಿ ಕೊಂಡೊಯ್ಯುತ್ತಿದ್ದ ಆಚೀಚೆಯ ಮನೆಯವರು , "ಛೇ, ಒಂದು ಒಳ್ಳೇ ಮರ ಹೋಯ್ತು, ಯಾರ ದೃಷ್ಟಿ ಆಯ್ತೋ, ಈ ಮಳೆ ಗಾಳಿಗೆಲ್ಲಾ ಬೀಳೋವಷ್ಟು ವಯಸ್ಸಾಗಿರಲಿಲ್ಲ ಮರಕ್ಕೆ' ಅನ್ನದೇ ಇದ್ದಾರೆಯೇ? ವರುಷಕ್ಕೊಮ್ಮೆ ಬರುವ ಬೆಂಗಳೂರು ದೊಡ್ಡಮ್ಮ ,"ಹೇ, ಏನೋ ಒಂದು ವ್ಯತ್ಯಾಸ ಕಾಣುತ್ತಲ್ಲಾ ಇಲ್ಲಿ, ಏನೀ ವಿಚಿತ್ರ ಅನ್ಸುತ್ತೆ ' ಅಂತ ಹೇಳಬಹುದು.ಈ ಮರದ ಕೆಳಗೇ ನಾಲ್ಕು ಕಂಬ ಹಾಕು ಗೋಣಿ ಹೊದಿಸಿ ಮನೆಯಾಟ ಆಡಿದ್ದ, ನಾಟಕವಾಡಿ ಕುದುರೆಗಳನ್ನು ಈ ಮರಕ್ಕೇ ಕಟ್ಟಿದ್ದ, ಕಾಂಡಕ್ಕೆ ವಿಕೆಟ್ ಗುರುತು ಹಾಕಿ ಕ್ರಿಕೆಟ್ ಆಡಿದ್ದ ಮಾವಂದಿರ ಮಕ್ಕಳೆಲ್ಲ ಇನ್ನೊಮ್ಮೆ ಬಂದಾಗ ಅವರಿಗೂ ಬಾಲ್ಯದ ನೆನಪು ಬಂದೀತು.

ಒಂದುವೇಳೆ ಈ ಮರ ಬೀಳದೇ ಇದ್ದಿದ್ದರೆ ?!

-ಸುಧನ್ವಾ ದೇರಾಜೆ

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP