October 30, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೭

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ

ದೇವರನ್ನು ನಂಬದವರು
ಮ್ಮಲ್ಲೇ ಇದ್ದ ಬಾಬು ಎಂಬ ತೋಟದ ಕೆಲಸಗಾರನಿಗೆ ನಾವು ಕಿತ್ತಲೆ ಫಸಲಿನಲ್ಲಿ ಬಂದ ಹಣದಲ್ಲಿ ಚೌಡಿಪೂಜೆಯನ್ನು 'ಜೋರಾಗಿ' ಮಾಡದೆ ನಾಟಕದ ಸಾಮಾನು ತಂದದ್ದು ಹಿಡಿಸಿರಲಿಲ್ಲ. ಒಂದು ಸಾರಿ ರಿಹರ್ಸಲ್ ನಡೆಯುತ್ತಿದ್ದಾಗ ನನಗೆ ಕೇಳುವಂತೆ ದೊಡ್ಡ ದನಿಯಲ್ಲಿ-

'ಇವರು ನಾಟಕ ಕುಣಿದರೆ ಯಾವ ದೇವರು ಮೆಚ್ಚುತ್ತಾನೆ?' ಎಂದ.
'ದೇವರು ಮೆಚ್ಚುವುದು ಬೇಡ, ನೋಡಿದವರು ಮೆಚ್ಚಿದರೆ ಸಾಕು' ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದ. ಆ ವರ್ಷ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಯಾರೋ ಮಳೆಯ ಸುದ್ದಿ ತೆಗೆದರು. ಕೂಡಲೇ ಬಾಬು ಅದಕ್ಕಾಗಿಯೇ ಕಾದು ಕುಳಿತವನಂತೆ,
'ಚೌಡಿಪೂಜೆ ಸರಿಯಾಗಿಲ್ಲ, ಅದಕ್ಕೆ ಮಳೆ ಬಂದಿಲ್ಲ' ಎಂದು ಮತ್ತೆ ಕಾಲು ಕೆರೆದ.
'ಪೂಜೆ ಮಾಡಿದ್ದೇವೆ, ಯಾರಿಲ್ಲ ಅಂದವರು?' ಇನ್ನಾರೋ ಹೇಳಿದರು.
'ಅದು ಸರಿಯಾಗಿಲ್ಲ, ಕುರಿ ಕಡಿಬೇಕಿತ್ತು- ನಾನು ಹೇಳಿಕೊಂಡಿದ್ದೆ.
'ನೀನು ಹೇಳಿಕೊಂಡಿದ್ದರೆ, ನೀನು ಕುರಿ ಕಡ್ದು ಪೂಜೆಮಾಡು. ಒಟ್ಟು ನಮ್ಮೆಲ್ಲರ ಸಂಘಕ್ಕೂ ಅದಕ್ಕೂ ಏನು ಸಂಬಂಧ?' ನಾನು ತಿರುಗಿ ಅವನನ್ನೇ ಪ್ರಶ್ನಿಸಿದೆ.
'ದೇವರ ಕಾರ್ಯಕ್ಕೆ ನೀವು ಹೀಗಂತೀರಲ್ಲ!?'
ಈಗ ನನಗೂ ರೇಗತೊಡಗಿತ್ತು.
'ಯಾವ ದೇವರು ನಿನ್ನತ್ರ ಬಂದು ಕುರಿ ಕೊಡು ಅಂತ ಕೇಳಿತ್ತು? ನಾವು ಕುರಿ ಕಡೀದೆ ಇದ್ರೆ ಇಡೀ ಊರಿಗೇ ಮಳೆ ಹೋಗುತ್ತಾ? ಅದ್ಯಾವುದು ಅಂಥ ದೇವ್ರೂ?' ದಬಾಯಿಸಿದೆ.
'ನೀವು ದೇವರನ್ನು ನಂಬೋದಿಲ್ವೋ?'
'ಇ......ಲ್ಲ.'
ಸರಿ ನಿಮ್ಮಿಷ್ಟ' ಏನೋ ಗೊಣಗುತ್ತಾ ಅಲ್ಲಿಂದೆದ್ದು ಹೋದ.
ಇದಾಗಿ ಒಂದೆರಡು ತಿಂಗಳು ಕಳೆದಿರಬೇಕು. ಯಾವುದೋ ಸಮಯದಲ್ಲಿ ಬಾಬು ತೋಟದ ಹೊರಗಿನ ಬೇರೊಬ್ಬ ಕೆಲಸಗಾರನಿಗೆ ಕೊಟ್ಟ ಸಾಲಕ್ಕೆ ನಾನು ಜಾಮೀನಾಗಿದ್ದೆ. ಸಾಲ ಪಡೆದವನು ಅವನಿಗೆ ಹಣ ವಾಪಸ್ ಕೊಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಬಾಬು ಒಂದು ದಿನ ನನ್ನ ಮುಂದೆ ಪ್ರತ್ಯಕ್ಷನಾದ. ಈತ ಎಂತಹ ತರಲೆ ಗಿರಾಕಿಯೆಂದರೆ ಯಾವುದೇ ಸಂದರ್ಭದಲ್ಲೂ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂದು ಹಠ ಹಿಡಿಯುತ್ತಿದ್ದ. ಆದ್ದರಿಂದ ಇವನನ್ನು ಕಂಡರೆ ನಮ್ಮ ಗುಂಪಿನಲ್ಲಿ ಯಾರಿಗೂ ಆಗುತ್ತಿರಲಿಲ್ಲ. ನನಗೂ ಅನೇಕ ಸಾರಿ ಕಿರಿಕಿರಿ ಮಾಡಿದ್ದ. ಬಾಬು ಬಂದವನೇ ನನ್ನನ್ನು ಆಪಾದಿಸುವ ಧ್ವನಿಯಲ್ಲಿ
'ನಿಮ್ಮ ಜನ ದುಡ್ಡು ಕೊಟ್ಟಿಲ್ಲ' ಎಂದ.
'ಕೊಡ್ತಾನೆ ಮಾರಾಯಾ, ಅವನೀಗ ಕಷ್ಟದಲ್ಲಿರಬೇಕು.'
'ಅವನ ಪರವಾಗಿ ನೀವು ಜಾಮೀನು.'
'ಅವನು ಕೊಡೋದಿಲ್ಲ ಅಂದ್ರೆ ನಾನು ಕೊಡ್ತೀನಿ ಆಯ್ತಲ್ಲ' ಅವನನ್ನು ಸಾಗಹಾಕಲು ಪ್ರಯತ್ನಿಸಿದೆ.
'........................' ಬಾಬು ಅಲ್ಲೇ ನಿಂತಿದ್ದ.
'ಯಾಕೆ ನಿನಗೆ ನಂಬಿಕೆ ಇಲ್ವೆ?'
'...........................'
'ನಂಬಿಕೆ ಇಲ್ಲದಿದ್ರೆ ಇಲ್ಲ ಅಂತ ಹೇಳು- ಏನೀಗ?' ಗದರಿಸುವ ಧ್ವನಿಯಲ್ಲಿ ಹೇಳಿದೆ.
'ಅಲ್ಲ, ನೀವು ದೇವರನ್ನೇ ನಂಬಲ್ಲ ಅಂತೀರಿ: ನಾನು ನಿಮ್ಮನ್ನು ನಂಬಬೇಕು ಅಂತೀರಿ...!!' ಬಾಬು ನನ್ನ ಬುಡವನ್ನೇ ಅಲ್ಲಾಡಿಸಿಬಿಟ್ಟಿದ್ದ. ಕೂಡಲೇ ಆ ಜಾಮೀನಿನ ಹಣವನ್ನು ನಾನೇ ಬಾಬುವಿಗೆ ಕೊಟ್ಟು, ನಂತರ ಸಾಲಗಾರನಿಂದ ವಸೂಲು ಮಾಡಿಕೊಂಡೆ.

ನಮ್ಮ ನಂಬಿಕೆ, ವಿಚಾರಗಳೇನೇ ಇರಲಿ ಅದರ ಬೆಂಬಲಕ್ಕೆ ಅನುಭವದ ಗಟ್ಟಿತನವಿಲ್ಲದಿದ್ದರೆ ನಮ್ಮ ನಿಲುವುಗಳೆಲ್ಲ ಪೊಳ್ಳಾಗಿಬಿಡಬಹುದೆಂಬ ಭಯವಾಯಿತು. ಆಮೇಲೆ ಯಾರಾದರೂ ದೇವರಿದ್ದಾನೋ ಇಲ್ಲವೋ ಎಂದರೆ 'ಗೊತ್ತಿಲ್ಲ'ಎನ್ನತೊಡಗಿದೆ!

Read more...

October 23, 2008

ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !

ಯಾವುದು ಪಟಾಕಿ ಸದ್ದು, ಯಾವುದು ಬಾಂಬಿನ ಸದ್ದು  ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ?! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ. ನಮಗೆ ಗೊತ್ತಿರುವುದು, ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ. ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು. ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ- ಕೆದರಿದ ಕೂದಲು- ಅಂದಗೆಟ್ಟ ಮುಖಗಳ ದೃಶ್ಯ...ಇಷ್ಟೇ. ಪಟಾಕಿಯ ಬತ್ತಿಗೆ ಊದಿನ ಕಡ್ಡಿಯಿಂದ ಬೆಂಕಿ ತಗುಲಿಸಿ, ಅಷ್ಟು ದೂರ ಓಡಿ, ಎರಡೂ ಕಿವಿಗಳನ್ನು ಎರಡೂ ತೋರುಬೆರಳುಗಳಿಂದ ಮುಚ್ಚಿಕೊಂಡು ನಿಂತಿದ್ದಾರೆ ಹುಡುಗರು ; ಅದು ಸಿಡಿಯಿತೋ..ಹುರ್ರೇ....ಎಂಥಾ ನಗೆ ಬಾಂಬು. ಹ್ಹಹ್ಹಹ್ಹ...ಹ್ಹೊಹ್ಹೊಹ್ಹೊ...ಹೇಹೇಹೇ...ಅಂತಹುದೊಂದು ದೃಶ್ಯವನ್ನು ಬಾಂಬ್ ಸ್ಫೋಟದ ಮೊದಲೋ, ನಂತರವೋ ಕಲ್ಪಿಸುವುದಕ್ಕಾದರೂ ಸಾಧ್ಯವೆ? 'ಸದ್ದು ಮಾಡದ ದೀಪಾವಳಿ' ಎನ್ನುವ ಶೀರ್ಷಿಕೆಯೊಂದು ಪತ್ರಿಕೆಗಳಲ್ಲಿ ಎಂದಾದರೂ ಬರುವುದುಂಟೆ?! ಈ ಬಾರಿಯ ದೀಪಾವಳಿಯಲ್ಲಿ ಪಟಾಕಿಗಳಷ್ಟೇ ಸಿಡಿಯಲಿ. ಆ ಸದ್ದು-ಬೆಳಕಿನಲ್ಲಿ ಕೆಟ್ಟದ್ದು ಕೇಳದಿರಲಿ, ಕಾಣದಿರಲಿ ಅಂತ ಆಸೆ ಪಡುತ್ತಿದ್ದೇನೆ.
***
'ವಿಜಯ ಕರ್ನಾಟಕ'ದ ಈ ಬಾರಿಯ ದೀಪಾವಳಿ ಸಂಚಿಕೆಯಲ್ಲಿ ಹಲವಾರು ಎಲೆಮರೆಯ ಪ್ರತಿಭೆಗಳು ಹೊರಬಂದಿವೆ ! ಮೇಕಿಂಗ್ ಆಫ್ ಸಂಚಿಕೆಯ ಸಂದರ್ಭದ ಕೆಲ ದೃಶ್ಯಗಳನ್ನು 'ಚಂಪಕಾವತಿ' ರಹಸ್ಯವಾಗಿ ಸೆರೆಹಿಡಿದಿದೆ. ಕೆಳಗಿನ ಫೋಟೊಗಳನ್ನು ನೋಡಿ. ಕುತೂಹಲವಾಯಿತೆ? ದೀಪಾವಳಿ ವಿಶೇಷ ಸಂಚಿಕೆ ಕೊಂಡು ಓದಿ, ನೋಡಿ, ಆನಂದಿಸಿ. ಥ್ಯಾಂಕ್ಸ್ ಟು ವಿಕ.

Read more...

October 21, 2008

ಮಾತಿನಲ್ಲಿ ಹೇಳಲಾರೆನು !

  • ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ೧.೫೦ಲಕ್ಷ ರೂಗಳ ಖರ್ಚುವೆಚ್ಚದ ತಾಳಮದ್ದಳೆ ಸಪ್ತಾಹ
  • ಏಳು ದಿನಗಳಲ್ಲಿ ಸುಮಾರು ೨ ಸಾವಿರ ಜನರ ಪಾಲ್ಗೊಳ್ಳುವಿಕೆ (ತಾಳಮದ್ದಳೆಗೆ ಇದೊಂದು ದೊಡ್ಡ ಸಂಖ್ಯಾಬಲ !)
  • ಮಹಾನಗರದ ಆಫೀಸು ಕೆಲಸ, ಟ್ರಾಫಿಕ್ ಜಾಮ್, ಮಳೆ ಮುಂತಾದ ಪ್ರತಿಕೂಲಗಳ ಮಧ್ಯೆಯೂ ನಾನಾ ಕ್ಷೇತ್ರ, ಭಾಗಗಳ ಜನರ ಪಾಲ್ಗೊಳ್ಳುವಿಕೆ
  • ತೆಂಕು-ಬಡಗು ಎರಡೂ ತಿಟ್ಟುಗಳ ಸಮ್ಮಿಲನ, ಬೆಂಗಳೂರಿನ ಬಹುತೇಕ ಯಕ್ಷ ಸಂಘಟನೆಗಳ ಸಹಕಾರ
  • ಎಲ್ಲ ತಾಳಮದ್ದಳೆಗಳ ವ್ಯವಸ್ಥಿತ ಧ್ವನಿ ಮುದ್ರಣ, ಪ್ರತಿದಿನ ೩ ಗಂಟೆ ೩೦ ನಿಮಿಷಗಳ ನಿಗದಿತ ಅವಧಿ. 

ವತ್ತು ಸಂಜೆಯಾಗುತ್ತಿದ್ದಂತೆ ಬಸವನಗುಡಿಯ ಪುತ್ತಿಗೆ ಮಠದ ಸಭಾಂಗಣದಲ್ಲಿ ಒಟ್ಟಾಗುತ್ತಿದ್ದ ಜನರೆಲ್ಲ , ಪುರಾಣಗಳಿಂದ ಹೊರಬಂದ ಯಾವ್ಯಾವುದೋ ಪಾತ್ರಗಳಂತೆ ಮಾತಾಡಿಕೊಳ್ಳುತ್ತಿದ್ದರು. ಅವರವರ ಪಾಡಿಗೆ ಪ್ರಸಂಗ ಪದ್ಯಗಳನ್ನು ಗುನುಗುತ್ತಿದ್ದರು. ಮಹಾನಗರದ ಗದ್ದಲದಲ್ಲೂ ಎಲ್ಲಿಂದಲೋ ಹಾರ್ಮೋನಿಯಂ ಬಾರಿಸುವ, ಚೆಂಡೆ-ಮದ್ದಳೆಯ ಶ್ರುತಿ ಮಾಡುವ ಸದ್ದು ಕೇಳುತ್ತಿತ್ತು. ಆ ಪರಿಸರವೇ ಯಾವುದೋ ಅಜ್ಞಾತ ಸೆಳೆತಕ್ಕೆ ಸಿಕ್ಕಂತೆ ಒಂದು ಲಯದಲ್ಲಿ ತೂಗುತ್ತಿತ್ತು.    

ಮೊದಲನೇ ದಿನದ ಪ್ರಸಂಗ 'ಕರ್ಣಪರ್ವ'. ಪ್ರಭಾಕರ ಜೋಶಿಯವರ ಎಂದಿನ ಅರ್ಜುನ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಕರ್ಣ, ಶಂಭು ಶರ್ಮರ ಶಲ್ಯ, ಸುಧನ್ವಾ ದೇರಾಜೆ ಕೃಷ್ಣ, ಶಶಾಂಕ ಅರ್ನಾಡಿ ಅಶ್ವಸೇನನಾಗಿ ಕಾಣಿಸಿಕೊಂಡರು. ಕಿಂಚಿತ್ತೂ ವಾದದ ಕಿಚ್ಚು ಹತ್ತಿಕೊಳ್ಳದೆ ಅತ್ಯಂತ ಸುಗಮ ಮಾರ್ಗದಲ್ಲಿ ಈ ಪ್ರಸಂಗ ನಡೆದದ್ದು ಒಂದು ಅಚ್ಚರಿ ಮತ್ತು ನಿರಾಸೆಯ ಸಂಗತಿ ! ಹವ್ಯಾಸಿ ಭಾಗವತ ಸುಬ್ರಾಯ ಸಂಪಾಜೆ ಹಿಮ್ಮೇಳವನ್ನು ಮುನ್ನಡೆಸಿದರು. ಸಪ್ತಾಹದಲ್ಲಿ ಚೊಕ್ಕವಾಗಿ ನಡೆದ ಪ್ರಸಂಗ, ಎರಡನೇ ದಿನದ 'ವಾಲಿ ವಧೆ '. ಶಂಭುಶರ್ಮರ ಸುಗ್ರೀವ, ಜೋಶಿಯವರ ವಾಲಿ, ಸಿದ್ದಕಟ್ಟೆಯವರ ರಾಮ ಹಾಗೂ ಶಶಾಂಕ ಅರ್ನಾಡಿ ತಾರೆಯಾಗಿ ಭಾಗವಹಿಸಿದ ಪ್ರಸಂಗ ಲವಲವಿಕೆಯಿಂದ ನಡೆಯಿತು. ಆದರೆ ಮುಖ್ಯಮೂರೂ ಪಾತ್ರಗಳು ಒಂದೇ ತೆರನಾಗಿ ಮಾತಾಡಿ, ಪಾತ್ರದ ವೈಶಿಷ್ಟ್ಯಅನನ್ಯತೆ ಬಿಂಬಿತವಾಗುವುದು ತಪ್ಪಿಹೋಯಿತು. ಹೇರಂಜಾಲು ಗೋಪಾಲ ಗಾಣಿಗರ ಭಾಗವತಿಕೆಯ ಬಡಗುತಿಟ್ಟಿನ ಹಿಮ್ಮೇಳದ, 'ಭೀಷ್ಮ ವಿಜಯ' ಪ್ರಸಂಗದಲ್ಲಿ ಸಿದ್ಧಕಟ್ಟೆಯವರ ಭೀಷ್ಮ , ಶಂಭು ಶರ್ಮರ ಪರಶುರಾಮ ಹಾಗೂ ಹವ್ಯಾಸಿ ಅರ್ಥಧಾರಿಗಳಾದ ಮೂಜೂರು ನಾರಾಯಣ ಭಟ್ ಅಂಬೆ ಹಾಗೂ ಶಶಾಂಕ ಅರ್ನಾಡಿ ಸಾಲ್ವನಾಗಿ ಕಾಣಿಸಿಕೊಂಡರು. ಪ್ರಸಿದ್ಧ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟರು ಬ್ರಾಹ್ಮಣನ ಪಾತ್ರ ನಿರ್ವಹಿಸಿದ್ದು ಅಂದಿನ ವಿಶೇಷ ಆಕರ್ಷಣೆ. ಅಂಬೆ-ಭೀಷ್ಮನ ಮೊದಲ ಸಂವಾದ ತುಸು ಚರ್ಚೆಯ ವಾತಾವರಣ ಸೃಷ್ಟಿಸಿದರೂ, ಬಳಿಕ ಅಂತಹದ್ದೇನೂ ಆಗಲಿಲ್ಲ. ಸಾಲ್ವ-ಅಂಬೆ ಸಂವಾದ ತುಸು ಲಂಬಿಸಿದರೆ, ಪರಶುರಾಮ-ಭೀಷ್ಮ ಸಂವಾದ ಪದ್ಯಗಳ ವ್ಯಾಪ್ತಿಯಲ್ಲೇ ಚುಟುಕಾಗಿ ಮುಗಿಯಿತು.

ಘೋರ-ಮಾಯಾ ಶೂರ್ಪನಖಿಯಾಗಿ ಸಪ್ತಾಹದ ನಾಲ್ಕನೇ ದಿನ ಕಾಣಿಸಿಕೊಂಡರು ಪ್ರಭಾಕರ ಜೋಶಿ. ಸಿದ್ದಕಟ್ಟೆಯವರದ್ದು ಎಂದಿನ ರಾಮ. ಶಂಭು ಶರ್ಮರು ಬಹಳ ಚುಟುಕಾಗಿ ಲಕ್ಷ್ಮಣನ ಪಾತ್ರ ನಿರ್ವಹಿಸಿದರು. ಹೇರಂಜಾಲು ಗೋಪಾಲ ಗಾಣಿಗ ಹಾ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿಗಳ  ದ್ವಂದ್ವ ಹಾಡುಗಾರಿಕೆ, ಬಡಗು-ತೆಂಕಿನ ಎರಡೆರಡು ಚೆಂಡೆ ಮದ್ದಳೆಗಳ ಬಳಕೆ ಈ ಪ್ರಸಂಗವನ್ನು ರಂಜನೀಯವಾಗಿಸಿತು. 
ಕಡಿಮೆ ಪಾತ್ರಗಳ, ಗಂಭೀರ ಗತಿಯ ಪ್ರಸಂಗ 'ರಾವಣ ವಧೆ 'ಯಲ್ಲಿ ಜೋಶಿಯವರ ರಾವಣ-ಶಂಭು ಶರ್ಮರ ಮಂಡೋದರಿ. ತೀರಾ ಭಾವಪರವಶತೆಯ ಮಂಡೋದರಿಗೂ, ಜೋಶಿಯವರ ಉಢಾಪೆಯ ಶೈಲಿಗೂ ಅಷ್ಟೊಂದು ಹೊಂದಾಣಿಕೆ ಬರಲಿಲ್ಲ. ಪ್ರಸಂಗದ ನಡೆಗೆ ಅನುಕೂಲವಾಗಿ ಸಿದ್ದಕಟ್ಟೆಯವರ ರಾಮ. 

ಸಪ್ತಾಹಕ್ಕೊಂದು ಹೊಸ ಸ್ವಾದ-ರುಚಿ ಸಿಕ್ಕಿದ್ದು ಆರನೇ ದಿನದ 'ಶ್ರೀಕೃಷ್ಣ ಸಂಧಾನ 'ದಿಂದ.  ಅಂದು ಜಬ್ಬಾರ್ ಸಮೊರವರ ಅಪರೂಪದ ಕೃಷ್ಣ. ಯಾವಾಗಲೂ ಕೌರವನ ಅರ್ಥವನ್ನೇ ಹೇಳುವ ಅವರ ಇದಿರು ಕೌರವನಾಗಿ ಉಮಾಕಾಂತ ಭಟ್ಟರಿದ್ದರು. ಜೋಶಿಯವರು ವಿದುರನ ಪಾತ್ರದಲ್ಲಿ ಬಂದರು.ಕೊಂಚ ಹೊಸ ತರಹದ ಪಾತ್ರ ಹಂಚಿಕೆಯಾಗಿ, ಪುರುಷೋತ್ತಮ ಭಟ್ ಬಿ.ಸಿ. ರೋಡು ಅವರ ಭಾಗವತಿಕೆಯಲ್ಲಿ, ಸಪ್ತಾಹದ ಯಶಸ್ವಿ ತಾಳಮದ್ದಳೆಗಳಲ್ಲಿ ಈ ಪ್ರಸಂಗದ ಹೆಸರು ಸೇರಿಕೊಂಡಿತು.
ಸಮಾರೋಪದ ದಿನ  ಅ.೧೯ರಂದು, ತುಂಬಿ ತುಳುಕಿದ ಸಭೆ ನೀಡುತ್ತಿದ್ದ ಚಪ್ಪಾಳೆಯ ಅಲೆಯಲ್ಲಿ ನಡೆದದ್ದು 'ಸುದರ್ಶನ ಗ್ರಹಣ' ಪ್ರಸಂಗ.' ಮೊದಲನೇ ಭೀಷ್ಮನಾಗಿ ಕುಂಬ್ಳೆ ಸುಂದರ ರಾವ್ ಹಾಗೂ ಜಬ್ಬಾರ್ ಅವರ ಕೌರವನ ಮಾತುಕತೆ, ಕುಶಲ ಮಾತುಕತೆಯಲ್ಲಿ ರಸಮಯವಾಯಿತು. ಎರಡನೇ ಭೀಷ್ಮನಾಗಿ ಜೋಶಿ ಮತ್ತು ಕೃಷ್ಣನಾಗಿ ಉಮಾಕಾಂತ ಭಟ್ಟರ ಸಂವಾದ ಸಪ್ತಾಹದ ಉತ್ತಮ ಮಾತುಕತೆಗಳಲ್ಲೊಂದು ಎನಿಸಿತು.

ಒಂದು ವರ್ಷದಲ್ಲಿ ಹಿರಿಯ ಅರ್ಥಧಾರಿಗಳ ಭಾಗವಹಿಸುವಿಕೆಯ ಮೂರ್‍ನಾಲ್ಕು ಕೂಟಗಳೂ  ಬೆಂಗಳೂರಿನಲ್ಲಿ ನಡೆಯದಿರುವ ಸನ್ನಿವೇಶದಲ್ಲಿ, ಸತತ ಏಳು ತಾಳಮದ್ದಳೆಗಳನ್ನು ಆಯೋಜಿಸಿದ 'ದುರ್ಗಾಂಬಾ ಕಲಾ ಸಂಗಮ'ಕ್ಕೆ ಸಿಕ್ಕಿದ್ದು  ವ್ಯಾಪಕ ಮೆಚ್ಚುಗೆ , ಫೋನ್ ಕಾಲ್‌ಗಳ ಸುರಿಮಳೆ, ತಾಳಮದ್ದಳೆಯ ಬಗ್ಗೆ  ಗೊತ್ತಿಲ್ಲದ ಜನರಿಂದಲೂ ಕಾರ್ಯಕ್ರಮದ ಬಗ್ಗೆ ವಿಚಾರಣೆ ! ಕೊನೆಯ ದಿನ 'ಶ್ರೀ ಮನೋಹರ ಸ್ವಾಮಿ ಪರಾಕು' ಪದ್ಯ ಬಂದು, ಕಾರ್ಯಕ್ರಮ ಕೊನೆಯ ಘಟ್ಟಕ್ಕೆ ತಲುಪಿದಾಗ ಎಲ್ಲರಿಗೂ ಗಂಟಲು ಕಟ್ಟಿತ್ತು, ಹೃದಯ ತುಂಬಿತ್ತು. 
  
ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನಿದಿರು ಬಂದ ಭೀಷ್ಮ ಹೇಳಿದರು : 'ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ ಅಂತ ಹೇಳುವ ನೀನು, ಸಣ್ಣ ಪ್ರಾಯದಲ್ಲೇ ಅಷ್ಟೆಲ್ಲಾ ದುಷ್ಟರನ್ನು ಕೊಂದರೂ ಇನ್ನೂ ಅದೆಷ್ಟು ಜನ ಉಳಿದುಕೊಂಡಿದ್ದಾರೆ ದೇವರೇ?!' 
ಕೃಷ್ಣನ ನಾಲಗೆ ತಡವರಿಸಿತು. 

(ಫೋಟೊ: ದುಷ್ಯಂತ ದೇರಾಜೆ, ಕ್ಯಾಮೆರಾ: ಶಶಾಂಕ ಅರ್ನಾಡಿ!)

Read more...

October 11, 2008

ಮಾತಿನರಮನೆಯಲ್ಲಿ ಏಳು ದಿನಗಳು


ಲ್ಲರನ್ನೂ ಸಶರೀರಿಗಳಾಗಿಯೇ ಹದಿನಾಲ್ಕು ಲೋಕ ಸುತ್ತಿಸುವ ಸಾಮರ್ಥ್ಯವುಳ್ಳ ಯಕ್ಷಗಾನದ ಒಂದು ಪ್ರಮುಖ ಅಂಗ 'ಯಕ್ಷಗಾನ ತಾಳಮದ್ದಳೆ '. ಕರಾವಳಿ ಕರ್ನಾಟಕದುದ್ದಗಲಕ್ಕೂ ಮಳೆಗಾಲದಲ್ಲಿ ನೂರಾರು ತಾಳಮದ್ದಳೆ ಕೂಟಗಳು ನಡೆಯುತ್ತವೆ. ಯಾವುದೇ ವೇಷಭೂಷಣ, ವಿಶೇಷ ರಂಗಸಜ್ಜಿಕೆಯಿಲ್ಲದೆ, ಆಶು ಮಾತುಗಾರಿಕೆಯನ್ನೇ ಮಾಧ್ಯಮವಾಗಿಟ್ಟುಕೊಂಡಿರುವ ಪ್ರಕಾರ ಇದು. ಕೋಪ , ಹಾಸ್ಯ, ದುಃಖ ಎಲ್ಲವೂ ಇಲ್ಲಿ ಮಾತಿನಲ್ಲೇ ವ್ಯಕ್ತವಾಗಬೇಕು !

ಉತ್ತರ ಕನ್ನಡ ಭಾಗದಲ್ಲಿ ಪ್ರಸಂಗ ಅಥವಾ ಬೈಠಕ್ ಎಂದು, ಶಿವಮೊಗ್ಗ ಭಾಗದಲ್ಲಿ ಜಾಗರ ಎಂದು, ದಕ್ಷಿಣಕನ್ನಡ ಭಾಗದಲ್ಲಿ ಕೂಟ ಎಂದೂ ಕರೆಯಲ್ಪಡುವ `ಯಕ್ಷಗಾನ ತಾಳಮದ್ದಳೆ ' ಯಕ್ಷಲೋಕದ ಅವಿಭಾಜ್ಯ ಅಂಗ. ಪುರಾಣಗಳ ಒಂದು ಚಿಕ್ಕ ಪ್ರಸಂಗ ಆಯ್ದುಕೊಂಡು, ಅರ್ಥಧಾರಿಗಳು ಒಂದೊಂದು ಪಾತ್ರ ವಹಿಸಿಕೊಂಡು ಮಾತಿನಲ್ಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅದೂ ಕಂಠಪಾಠವಲ್ಲದ ಆಶುಶೈಲಿ. ಇದಿರು ಅರ್ಥಧಾರಿಯ ಮನೋಧರ್ಮ, ಆಯಾ ಸಂದರ್ಭಗಳಿಗೆ ಅನುಗುಣವಾಗಿ, ಇಂದು ಕರ್ಣನ ಪಾತ್ರ ವಹಿಸಿದವನು ನಾಳೆ ಅದೇ ಪಾತ್ರವನ್ನು ಸಂಪೂರ್ಣ ಬೇರೆ ಥರ ನಿರ್ವಹಿಸಬಹುದು. ಕೌರವನೊಡನೆ ವಾದದಲ್ಲಿ ಕೃಷ್ಣ ಸೋಲಬಹುದು ! ಹೀಗೆ ಇದು ಅನಿರೀಕ್ಷಿತಗಳ ಸಂಗಮ. ವಿದ್ವತ್ತು, ಮಾತಿನ ಜಾಣ್ಮೆ, ತರ್ಕ, ಉದಾಹರಿಸುವ ಕೌಶಲ, ಹಾಸ್ಯ ಪ್ರಜ್ಞೆ, ಲೌಕಿಕ-ಸಮಕಾಲೀನ ವಿಷಯಗಳನ್ನು ಪ್ರಸಂಗಕ್ಕೆ ಹೊಂದಿಸುವ ಶಕ್ತಿ ಎಲ್ಲವೂ ಇಲ್ಲಿರಬೇಕು.

'ತಾಳಮದ್ದಳೆ ಪ್ರಸಂಗ ' ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಹೀಗೆ ಹೇಳಿದ್ದಾರೆ : 'ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲ ಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಕೇಳಿದರೆ, ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ ...ಮಹಾಭಾರತ ಕತೆಯಲ್ಲಿ ವಾದಗ್ರಸ್ತ ಅಂಶಗಳು ಎಷ್ಟಿವೆಯೆಂದರೆ, ನಮ್ಮ ಮನಸ್ಸು ಇವುಗಳ ಬಗ್ಗೆ ಎಷ್ಟು ಗೊಂದಲಕ್ಕೀಡಾಗಿದೆಯೆಂದರೆ, ಪಾಂಡವರೇ ಕೆಟ್ಟವರು, ಕೌರವರು ಒಳ್ಳೆಯವರು ಎಂಬ ನಿರ್ಣಯಕ್ಕೆ ಕೆಲವರಾದರೂ ಬಂದರೆ ಆಶ್ಚರ್ಯವೇನಿಲ್ಲ. ಒಳಿತು ಮತ್ತು ಕೆಡುಕುಗಳನ್ನು ಗುರುತಿಸಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುವುದನ್ನು ಬಿಟ್ಟರೆ ಬೇರೇನೂ ಮಾಡುವಂತಿಲ್ಲ.

ತಾಳಮದ್ದಳೆಯಲ್ಲಿ ಇಂಥ ಚರ್ಚೆಗೆ ಅವಕಾಶವಿದೆ. ಕೌರವನ ಪಾತ್ರಧಾರಿ ಮಾತಾಡುತ್ತ ಚರ್ಚೆಯಲ್ಲಿ ಕೃಷ್ಣನನ್ನು ಸೋಲಿಸಿಬಿಡಬಹುದು. ಅಂತಹ ಒಂದು ಪ್ರಸಂಗವನ್ನೇ ನಾನು ತಾಳಗುಪ್ಪೆಯಲ್ಲಿ ಕಂಡದ್ದು. ಅರ್ಥಧಾರಿ ಗೆದ್ದು ಪಾತ್ರ ಸೋಲುವಂತಾಯಿತು ! ಆದರೆ ಕೌರವನ ಅರ್ಥಧಾರಿ, ಅಂದು ಕತೆಯಲ್ಲಿ ಹುಟ್ಟಿಕೊಂಡ ಬಿಕ್ಕಟ್ಟನ್ನು ತಿಳಿದುಕೊಂಡು `ಕೃಷ್ಣಾ, ನನ್ನ ಅಹಂಕಾರದ ತೃಪ್ತಿಗಾಗಿ ನನ್ನನ್ನು ಗೆಲ್ಲಿಸಿದವನೂ ನೀನೇ, ಕೊನೆಗೆ ಸೋಲಿಸುವವನೂ ನೀನೇ. ನೀನು ಕರುಣಾಶಾಲಿಯಾಗಿದ್ದರೆ ನನ್ನನ್ನು ಸೋಲಿಸಿ ಕಾಯಬೇಕು, ಪಾಂಡವರನ್ನು ನೀನು ಕಾಯುವಂತೆ '. ಪ್ರತಿಭಾಶಾಲಿಯಾದ ಅರ್ಥಧಾರಿ ಮಹಾಭಾರತಕ್ಕೆ ತನ್ನೆರಡು ಮಾತುಗಳನ್ನು ಸೇರಿಸಿ ಅದನ್ನು ಅರ್ಥಪೂರ್ಣವನ್ನಾಗಿ ಹೇಗೆ ಮಾಡಬಹುದೆಂಬುದನ್ನು ಅಂದು ತೋರಿಸಿದರು .'

ಬೆಂಗಳೂರಿನಲ್ಲೀಗ ಯಕ್ಷಗಾನ ಬಯಲಾಟಗಳಿಗೆ ಕೊರತೆಯಿಲ್ಲ. ಮಾತಿನ ರುಚಿ ತೋರಬಲ್ಲ ತಾಳಮದ್ದಳೆಗಳು ಮಾತ್ರ ತೀರಾ ಕಡಿಮೆ. ಕಳೆದೊಂದು ವರ್ಷದಿಂದ ಸದಭಿರುಚಿಯ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ `ಶ್ರೀ ದುರ್ಗಾಂಬಾ ಕಲಾ ಸಂಗಮ' ಎಂಬ ಗಿರಿನಗರದ ಸಂಸ್ಥೆ ಏಳು ದಿನಗಳ ತಾಳಮದ್ದಳೆ ಹಮ್ಮಿಕೊಂಡಿದೆ. ಕರ್ನಾಟಕ-ಕೇರಳ ರಾಜ್ಯಗಳ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್, ಪಡೆದ ಮಾತಿನ ಮಹಾಕವಿ ಡಾ.ಶೇಣಿ ಗೋಪಾಲಕೃಷ್ಣ ಭಟ್ (೧೯೧೮-೨೦೦೬), ತಾಳಮದ್ದಳೆಯಲ್ಲಂತೂ ಉತ್ತುಂಗ ಶಿಖರ.ಹೀಗಾಗಿ ಡಾ. ಶೇಣಿ ಸಂಸ್ಮರಣೆ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಅಭಿನಂದನೆಯೊಂದಿಗೆ ಏಳು ದಿನಗಳ ತೆಂಕು-ಬಡಗು ತಿಟ್ಟುಗಳ ಸಮ್ಮಿಲನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಅ.೧೩ರಿಂದ ೧೯ರವರೆಗೆ ನಡೆಯಲಿದೆ.

ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳಾಗಿರುವ ಡಾ.ಎಂ. ಪ್ರಭಾಕರ ಜೋಶಿ, ಶಂಭು ಶರ್ಮ ವಿಟ್ಲ, ಉಮಾಕಾಂತ ಭಟ್ ಮೇಲುಕೋಟೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಬ್ಬಾರ್ ಸಮೊ ಸಂಪಾಜೆ ಮೊದಲಾದವರು ಆಗಮಿಸುತ್ತಾರೆ. ೧೩ರಂದು ಕರ್ಣಪರ್ವ ೧೪-ವಾಲಿ ಮೋಕ್ಷ, ೧೫-ಭೀಷ್ಮ ವಿಜಯ, ೧೬-ಶೂರ್ಪನಖಾ ಮಾನಭಂಗ,೧೭-ರಾವಣ ವಧೆ, ೧೮-ಶ್ರೀಕೃಷ್ಣ ಸಂಧಾನ, ೧೯-ಸುದರ್ಶನ ಗ್ರಹಣ- ಪ್ರಸಂಗಗಳು 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಯ ಸಹಯೋಗದಲ್ಲಿ ನಡೆಯಲಿವೆ.

೧೩ರಂದು ಸಂಜೆ ೪.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು , ಯಕ್ಷಗಾನ ಯೋಗಕ್ಷೇಮ ಅಭಿಯಾನದ ವಿ.ಆರ್.ಹೆಗಡೆ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಸಮಾಜಸೇವಕ ಬಿ.ಕೃಷ್ಣ ಭಟ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಆನಂದರಾಮ ಉಪಾಧ್ಯಾಯ, ಸಂಗೀತ ನಿರ್ದೇಶಕ ವಿ.ಮನೋಹರ್, ಎ.ಶಿವರಾವ್ ಅತಿಥಿಗಳಾಗಿ ಭಾಗವಹಿಸುತ್ತಾರೆ. ೧೯ರಂದು ಸಂಜೆ ೪ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಕೆ.ಐ.ಎ.ಡಿ.ಬಿ. ಆಯುಕ್ತ ಟಿ.ಶ್ಯಾಮ ಭಟ್, ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಗಾಯಕ ವಿದ್ಯಾಭೂಷಣ, ಕೆ.ಇ.ರಾಧಾಕೃಷ್ಣ ಮೊದಲಾದವರು ಭಾಗವಹಿಸುತ್ತಾರೆ. ಪ್ರತಿದಿನ ಸಂಜೆ ೫.30 ರಿಂದ ೯ರವರೆಗೆ ತಾಳಮದ್ದಳೆ.

ಸ್ಥಳ : ಶ್ರೀ ಪುತ್ತಿಗೆ ಮಠದ ಸಭಾಂಗಣ, ಬಸವನಗುಡಿ. ( ಬ್ಯೂಗಲ್ ರಾಕ್ ಬಳಿ) ಪ್ರವೇಶ ಉಚಿತ.

Read more...

October 05, 2008

ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ

ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ!  ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು.

ಎಂತಹ ಸಾಮಾನ್ಯ ಮನುಷ್ಯನಿಗೂ ಆಸೆ ಹುಟ್ಟಿಸುವಂತಿತ್ತು ಆ ಸಂಜೆ. ನಡೆದಾಡುವ ದೇವರು, ಅಭಿಮಾನಿಗಳ ಆರಾಧ್ಯ ದೇವತೆ, ಬಡವರ ಬಂಧು, ಅಸಾಮಾನ್ಯ ವಾಕ್ಪಟು, ಪ್ರಸಿದ್ಧ ಬರಹಗಾರ, ಸಮಾಜಸೇವಕ....ಹೀಗೆ ಏನೆಲ್ಲ ವಿಶೇಷಣಗಳಿವೆಯೋ ಅವೆಲ್ಲ ರವಿ ಬೆಳಗೆರೆಗೆ ಸಂದಾಯವಾಗುವಂತಿತ್ತು. ಅವರು ಕಾಲಿಟ್ಟಲ್ಲಿ ಜನ ಅರಳುತ್ತಿದ್ದರು, ಮರುಳಾಗುತ್ತಿದ್ದರು. ಆ ಕಾಲವೇ ಯಾವುದೋ ಮಾಯೆಯಲ್ಲಿ ಸಿಲುಕಿಕೊಂಡಿತ್ತು.   

ರವಿ ಬೆಳಗೆರೆಯವರಿಗೆ ಐವತ್ತಾಗಿದ್ದಕ್ಕೆ, 'ಹಾಯ್ ಬೆಂಗಳೂರ್' ಪತ್ರಿಕೆಗೆ ೧೩ ವರ್ಷಗಳು ತುಂಬಿದ್ದಕ್ಕೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ ೫ರ ಭಾನುವಾರದ ಸಂಜೆ ೫ಕ್ಕೆ ಕಾರ್ಯಕ್ರಮವೇನೋ ನಿಗದಿಯಾಗಿತ್ತು. ಅದು ಸರಿಯಾಗಿ ಶುರುವಾದದ್ದು ೬ಕ್ಕೆ. ಆದರೆ ಸುಮಾರು ೧೨೦೦ ಸೀಟುಗಳ ಕಲಾಕ್ಷೇತ್ರದಲ್ಲಿ ಮೂರೂವರೆ ಗಂಟೆಗೇ ಜನ ಒಬ್ಬರಿಗೊಬ್ಬರು ಅಂಟಿಕೊಂಡು ಕುಳಿತಿದ್ದರು, ನಿಂತಿದ್ದರು, ತಳ್ಳಾಡುತ್ತಿದ್ದರು. ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ! ಒಳಗೆ ಬಿ.ಆರ್.ಛಾಯಾ ಹಾಡುತ್ತಿದ್ದರು. ಹೊರಗೆ ಭಾವನಾ ಪ್ರಕಾಶನದ ನಾಲ್ಕೈದು ಪುಸ್ತಕ ಮಳಿಗೆಗಳಲ್ಲಿ ಜನಜಂಗುಳಿ. ಮೂರ್‍ನಾಲ್ಕು ಪರದೆಗಳಲ್ಲಿ ಒಳಗೆ ನಡೆಯುತ್ತಿರುವ ಕಾರ್ಯಕ್ರಮದ ಪ್ರಸಾರ. ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು. ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಪೊಲೀಸರು ಬಂದರು.

(ಕಲಾಕ್ಷೇತ್ರದ ಬಾಗಿಲೆದುರು ಕುಳಿತವರ 'ರವಿ ಭಜನೆ' !)
(ಟಿವಿ೯ ಚಾನೆಲ್‌ನ ಮುಖ್ಯ ನಿರೂಪಕ ಹಮೀದ್ ಕೂಡಾ, ಒಳಹೋಗಲು ದಾರಿ ಸಿಗದೆ ಕಲಾಕ್ಷೇತ್ರದ ಮೆಟ್ಟಿಲಲ್ಲಿ ಎಲ್ಲರೊಡನೆ ನಿಂತು ಕಣ್ಣರಳಿಸಿ, ಪರದೆಯಲ್ಲಿ ಬೆಳಗೆರೆ ಗೌಜಿ ನೋಡ್ತಾ ಇದ್ದಾಗ ಸಿಕ್ಕಿದ್ದು ಹೀಗೆ.)
ಸುಮಾರು ೬.೩೦ಕ್ಕೆ ಪ್ರಾರ್ಥನಾ ಶಾಲೆಯ 'ಗಂಡು ಹುಡುಗಿ'ಯರಿಂದ (ಬೆಳಗೆರೆ ಹೇಳಿದಂತೆ) ಡೊಳ್ಳು ಕುಣಿತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ. ಅಷ್ಟೊತ್ತಿಗೆ ಪರದೆ ಮೇಲೆ ಕಾರ್ಯಕ್ರಮ ನೋಡಲು ಸಂಸ ಬಯಲು ರಂಗ ಮಂದಿರದಲ್ಲೂ ಜಾಗ ಇರಲಿಲ್ಲ ! ಪ್ರಾರ್ಥನಾ ಶಾಲೆಯ ಹೆಡ್‌ಮಿಸ್ಸು ಶೀಲಕ್ಕರವರ ಕಾರ್ಯಕ್ರಮ ನಿರ್ವಹಣೆಯಾದರೆ, ಈಗಷ್ಟೆ ಒಗೆದು ನೇತು ಹಾಕಿರುವ ಬಟ್ಟೆಯಂತೆ ಬೆವರು ಸುರಿಸುತ್ತಿದ್ದ ಬೆಳಗೆರೆ ಸ್ವಾಗತ ಭಾಷಣಕ್ಕೆ ಮೈಕು ಕೈಗೆತ್ತಿಕೊಂಡರೆ ಮಾತು, ಚಪ್ಪಾಳೆ ಧಾರಾಕಾರ.

( ಪಾರ್ಕಿಂಗ್ ಸ್ಥಳದ ಬಳಿ ಜನರ ಹಿಂಡು)
 (ಸಂಸ ಬಯಲು ರಂಗಮಂದಿರದಲ್ಲಿ ಜನಸ್ತೋಮ)
*ನನಗೀಗ ಕೇಳುಗರಿದ್ದಾರೆ, ನೋಡುವ ಪ್ರೇಕ್ಷಕರಿದ್ದಾರೆ. ಆದರೆ ನನಗೆ ಮೊದಲು ಸಿಕ್ಕಿದ್ದು ಓದುಗರು. ಆ ಓದುಗ ದೊರೆಗಳಿಗೆ ಮೊದಲ ನಮಸ್ಕಾರ. 
*ಎಲ್ಲೇ ಬೆಳೆದರೂ ಎಷ್ಟೇ ಬೆಳೆದರೂ ಅದನ್ನ ನಮ್ಮವರು ನೋಡಬೇಕು ಅನ್ನೋ ಆಸೆ ಇರತ್ತೆ.ನಮ್ಮವರು ಅದನ್ನ ಗುರುತಿಸಬೇಕು ಅಂತ. ವೇದಿಕೆ ಮೇಲಿರೊವಂಥ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಮಂತ್ರಿಗಳಾಗಿ ಇಲ್ಲಿ ಬಂದಿಲ್ಲ, ಮಿತ್ರರಾಗಿ ಬಂದಿದ್ದಾರೆ, ಬಳ್ಳಾರಿಯವರಾಗಿ ಬಂದಿದ್ದಾರೆ. ನಮ್ಮೂರಿನವರಿಗೆ ನಾನು ಏನು ಅಂತ ತೋರಿಸಬೇಕು ಅಂತ ಅವರನ್ನಿಲ್ಲಿಗೆ ಕರಕೊಂಡು ಬಂದಿದ್ದೇನೆ. (ಸಿಳ್ಳು...ಚಪ್ಪಾಳೆ!) 
*ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅತ್ಯಂತ ಆತ್ಮೀಯ ಸ್ನೇಹಿತರು. ಒಂದು ಗಾಳಿ, ಇನ್ನೊಂದು ಬೆಂಕಿ. ಇವರ ಏಟಿಗೆ ದೇವೇಗೌಡರು ಪಾಪ ಪಟಪಟ ಅಂತಿದ್ದಾರೆ. 
*ಮೊನ್ನೆ ಒಂದು ಜೋಕ್ ಚೆನ್ನಾಗಿತ್ತು. ಕುಮಾರಸ್ವಾಮಿ ಯಡಿಯೂರಪ್ಪನೋರ ಕೇಳಿದರಂತೆ, ಟ್ವೆಂಟಿ ಟ್ವೆಂಟಿ ಆಡಕ್ಕೆ ಬರ್‍ತೀಯಾ ಅಂತ. ಅದಕ್ಕೆ ಕುಮಾರಸ್ವಾಮಿ ಹೇಳಿದರಂತೆ, ಬರ್‍ತೀನಿ, ಆದರೆ ಒಂದೇ ಒಂದು ಷರತ್ತು ಅಂದ್ರೆ, ನಮ್ಮಪ್ಪ ಅಂಪೈರ್ ಆಗಬೇಕು !
*ನನ್ನ ಚಿಕ್ಕ ವಯಸ್ಸಿನ ಮಿತ್ರ ಶ್ರೀರಾಮುಲು, ಒಳ್ಳೇ ತೆಲುಗು ಆಕ್ಟರ್ ಚಿರಂಜೀವಿ ಇದ್ದಂಗೆ ಇದ್ದಾನೆ. ಅವನ ಅಕ್ಕನ ಗಂಡನನ್ನ ಬಳ್ಳಾರಿಯ ನಟ್ಟನಡು ರಸ್ತೆಯಲ್ಲಿ ಭಯಂಕರವಾಗಿ ಕೊಲೆ ಮಾಡಲಾಯಿತು. ಈಗ ಪರಿಸ್ಥಿತಿ ಹೇಗಾಗಿದೆ ಅಂದರೆ, ಕೊಲೆಯಾದ ಆ ಬಾಬುವಿನ ಹೆಂಡತಿಯ ತಮ್ಮ ಶ್ರೀರಾಮುಲು ಮಂತ್ರಿಯಾದ. ಬಾಬುವಿನ ಮಗ ಎಂಎಲ್‌ಎ ಆದ. ಶ್ರೀರಾಮುಲು ಬಡವರಿಗಿರುವ ಎಲ್ಲ ನೋವು ನಲಿವುಗಳನ್ನು ಅನುಭವಿಸಿದವನು. 
*ಗಣಿ ಧಣಿಗಳು, ಗಣಿ ದೊರೆಗಳು ಅಂತ ನಿತ್ಯ ಪತ್ರಿಕೆಗಳಲ್ಲಿ ಓದ್ತೀವಿ. ಆದರೆ ಜನಾರ್ದನ ರೆಡ್ಡಿಯವರ ತಂದೆ ಬಳ್ಳಾರಿಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡ್ತಾ ಇದ್ದವರು. ಅವರು ಸೈಕಲ್ಲಿಗೆ ಲಾಠಿ ಕಟ್ಟಿಕೊಂಡು ಡ್ಯೂಟಿಗೆ ಹೋಗ್ತಾ ಇದ್ದವರು. ಅವರು ನಾನು ಓದಿದ ಶಾಲೆಯಲ್ಲೇ ಓದಿದವರು. ಯಾವ್ಯಾವ ಮೇಷ್ಟ್ರುಗಳ ಕೈಯಿಂದ ನಾನು ಒದೆ ತಿಂದಿದೇನೋ, ಅದೇ ಮೇಷ್ಟ್ರುಗಳ ಬಾಯಿಯಿಂದ ಹೊಗಳಿಸಿಕೊಂಡವರು! ಇವರು ರಾಜಕೀಯಕ್ಕೆ ಯಾಕೆ ಬಂದ್ರು ಅಂದ್ರೆ- ಒಂದು ಮೀಟಿಂಗ್‌ನಲ್ಲಿ ಆಗಿನ ಕುರಗೋಡು ಶಾಸಕ ಸೂರ್ಯನಾರಾಯಣ ರೆಡ್ಡಿ ಯಾವುದೋ ವಿಷಯಕ್ಕೆ, "ನೀನೇನು ಅಂತ ಮಾತಾಡ್ತೀಯ, ನಿನಗೆ ಮಾತಾಡುವ ಅಧಿಕಾರ ಏನಿದೆ?', ಹೂ ಆರ್ ಯು ಅನ್ನೋ ಶೈಲಿಯಲ್ಲಿ ಮಾತಾಡಿದರು. ಅಲ್ಲಿಂದ ಸೀದಾ ಬೆಂಗಳೂರಿಗೆ ಬಂದು ರಾಜಕೀಯಕ್ಕೆ ಇಳಿದವರು ಜನಾರ್ದನ ರೆಡ್ಡಿ.
*'ವಿಶ್ವ ಬೆಂಗಳೂರಿಗೆ ಬಾ. ನಿನಗೆ ನೌಕರಿ ಕೊಡಿಸ್ತೇನೆ' ಅಂತ ವಿಶ್ವೇಶ್ವರ ಭಟ್ರಿಗೆ ನಾನೊಂದು ಪತ್ರ ಬರೆದಿದ್ದೆ. ಇವರು ಹೌದೇನೊ ಅಂತ ನಂಬ್ಕೊಂಡು, ಸಾಲಗೀಲ ಮಾಡ್ಕಂಡು, ಧಾರವಾಡದಿಂದ ಬೆಂಗಳೂರಿಗೆ ಬಂದ್ರೆ ನಾನೇ ಇಲ್ಲಿ ನೌಕರಿ ಕಳಕೊಂಡಿದ್ದೆ! ಅವನ ಬಗ್ಗೆ ನನಗೆ ಒಂದೇಒಂದು ಸಣ್ಣ ಹೊಟ್ಟೆಕಿಚ್ಚು ಅಂದ್ರೆ, ಆತ ಬಹಳ ಚೆಲುವ ಅಂತ. 
*ನಾನು, ವಿಶ್ವೇಶ್ವರ ಭಟ್ಟ, ಸೀತಾರಾಂ, ಜೋಗಿ ಎಲ್ಲ ಒಂದೇ ಗ್ಯಾಂಗ್ ಅಂತ ಕೆಲವರ ಆರೋಪ ಇದೆ. ಬಟ್ ಐ ಪ್ರೌಡ್‌ಲಿ ಎಕ್ಸೆಪ್ಟ್ ಇಟಿ'. ಹೌದು, ನಾವೆಲ್ಲ ಒಂದು ಗ್ಯಾಂಗೇ.
*ನಾನು ಸ್ವಲ್ಪ ಭಾವುಕನಾದ್ರೆ ಕ್ಷಮಿಸಿ. ಇವತ್ತು ವೇದಿಕೆ ಮೇಲೆ ನನ್ನ ಅಮ್ಮ ಇರಬೇಕಾದ ಜಾಗದಲ್ಲಿ ಮಾಲತಿ ಪಟ್ಟಣಶೆಟ್ಟಿ ಇದ್ದಾರೆ.... ಇವು ಬೆಳಗೆರೆ ಸ್ವಾಗತ ಭಾಷಣದ ಕೆಲವು ಮಿಂಚುಗಳಷ್ಟೆ. 

*ಬೆಳಗೆರೆಯವರ ೬೦ ವರ್ಷದ ಸಂಭ್ರಮಾಚರಣೆ ಬಳ್ಳಾರಿಯಲ್ಲಾಗಲಿ. ನಾನೇ ನಿಂತು ಮಾಡಿಸುತ್ತೇನೆ -ಜನಾರ್ದನ ರೆಡ್ಡಿ
*ನಾನೂ ಸಾವಿರಾರು ಸಭೆ ಸಮಾರಂಭಗಳಲ್ಲಿಭಾಗವಹಿಸದ್ದೇನೆ. ಆದರೆ ಈ ತರಹದ ಜನ-ಪ್ರತಿಕ್ರಿಯೆಯನ್ನು ನಾನೆಲ್ಲೂ ನೋಡಿಲ್ಲ. ಐ ಲವ್ ಹಿಮ್. ಐ ಲವ್ ಯು ರವಿ. - ಸುನಿಲ್ ಶಾಸ್ತ್ರಿ
*ರವಿ ದ್ರವಾಹಾರ ತಗೊಳೋದು ಕಡಿಮೆ ಮಾಡಬೇಕು! -ವಿಶ್ವೇಶ್ವರ ಭಟ್
ಬೆಳಗೆರೆ ಕೃಷ್ಣಶಾಸ್ತ್ರಿಗಳು ವೇದಿಕೆಯಲ್ಲಿದ್ದರು. ರವಿ ಬಗ್ಗೆ ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಒಂದು ಕವನವನ್ನೂ ಓದಿದರು. ಆಸಿಡ್ ದಾಳಿಗೆ ಒಳಗಾಗಿ ವಿಕಾರ ಸ್ವರೂಪಿಯಾಗಿ, ಬೆಳಗೆರೆಯವರ ಆರೈಕೆ ಪಡೆದುಕೊಂಡಿರುವ ಹಸೀನಾ ಪ್ರೇಕ್ಷಕರ ಜತೆ ಇದ್ದರು. ರವಿ-ಲಲಿತಾ ಬೆಳಗೆರೆಯವರಿಗೆ ಭಾರೀ ಗಾತ್ರದ ಹಾರಾರ್ಪಣೆಯಾಗಿ ಸನ್ಮಾನವಾಯಿತು. 
ಆದರೆ, ಕುಖ್ಯಾತ ದಾವೂದ್ ಇಬ್ರಾಹಿಂನ ಫೋಟೊವನ್ನೇ ಮುಖಪುಟದಲ್ಲಿ ದೊಡ್ಡದಾಗಿ ಹಾಕಿರುವ 'ಡಿ ಕಂಪನಿ' ಎಂಬ ಪುಸ್ತಕ ಬಿಡುಗಡೆ ಮಾಡಿ, ಎಲ್ಲರೂ ದಾವೂದ್‌ನ ಮುಖವನ್ನು ಕ್ಯಾಮರಾಗಳಿಗೊಡ್ಡಿ ನಗುತ್ತಾ ನಿಂತರಲ್ಲ, ಆಗ ಮಾತ್ರ ನನಗಂತೂ ವಿಪರೀತ ಚಡಪಡಿಕೆಯಾಯ್ತು, ಕಸಿವಿಸಿಯಾಯ್ತು, ಕೈಹಿಸುಕಿಕೊಳ್ಳುವಂತಾಯ್ತು. 

ಹಾಗಂತ ಅಲ್ಲಿ ಎಲ್ಲ ನಮೂನೆಯವರೂ ಇದ್ದರು. ಅತಿರೇಕದ ಅಭಿಮಾನಿಗಳು, ಏನೆಲ್ಲ ನಡೆಯುತ್ತೆ ನೋಡೋಣ ಅಂತ ಸುಮ್ಮನೆ ಬಂದವರು, ಹೊಟ್ಟೆಕಿಚ್ಚಿನಿಂದ ಬಂದವರು, ಹೆಂಡತಿ ಒತ್ತಾಯಕ್ಕೆ ಬಂದ ಗಂಡಂದಿರು, ಅಭಿನಂದನಾ ಗ್ರಂಥಕ್ಕೆ ೫೦೦ರೂಪಾಯಿ ಅಂತ ಕೇಳಿದಾಕ್ಷಣ, 'ಹಾ..ಚೆನ್ನಾಗಿ ದುಡ್ಡು ಮಾಡ್ಕೊತಾನೆ ಬಿಡು' ಅನ್ನುವವರು-ಹೀಗೆಲ್ಲ. ಎಷ್ಟೋ ಜನ "ದೊಡ್ಡವರು' ಒಳ ಸೇರಲಾಗದೆ ಹೊರಗೆ ಅಡ್ಡಾಡುತ್ತಿದ್ದರು. ಹೊಗಳಿಕೆ, ಗೇಲಿ, ತಮಾಷೆ ನಡೆಯುತ್ತಲೇ ಇತ್ತು. 

ರವಿ ಬೆಳಗೆರೆಯೆಂಬ ತೂಫಾನು ಬೀಸುತ್ತಲೇ ಇತ್ತು. 

Read more...

October 04, 2008

ಇದರಲ್ಲಿ ಇದು, ಅದರಲ್ಲಿ ಅದು

'ಬದುಕುವುದಕ್ಕಾಗಿ ಒಂದು ಕೆಲಸ ಮಾಡುತ್ತಾ ಖುಶಿಗಾಗಿ ಇನ್ನೊಂದನ್ನು ಮಾಡುವುದರಲ್ಲೇ ಮಜಾ ಇದೆ' ಅಂತ ಜಯಂತ ಕಾಯ್ಕಿಣಿ ಆಗಾಗ ಹೇಳುತ್ತಿದ್ದರು. ಆಗ ಆಗ ಅವರು ಭಾವನಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ, ಮೊದಲು ಮುಂಬಯಿಯ ಯಾವುದೋ ಕಂಪನಿಯ ಕೆಲಸ ಮಾಡುತ್ತಾ ಕನ್ನಡ ಕತೆ-ಕವನಗಳ ಸಂಗದಲ್ಲಿದ್ದರು. ಬದುಕಿಗಾಗಿ ಏನೋ ವೃತ್ತಿ ನಡೆಸುತ್ತಾ ಖುಶಿಗಾಗಿ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿದ್ದವರು ಬಹಳ ಹಿಂದೆಯೂ ಇದ್ದರು. ಆದರೆ ಸ್ವರ್ಗದ ಕೆಲಸವೆಂದೇ ಪರಿಗಣಿಸಲ್ಪಟ್ಟ ಐಟಿ ಮಂದಿ ಕನ್ನಡದ ತೆಕ್ಕೆಗೆ ಬಿದ್ದಾಗ ಅವರೆಡೆಗೆ ವಿಶೇಷ ದೃಷ್ಟಿ ಹರಿಯಿತು. ಅದೃಷ್ಟವಶಾತ್ ಅವರೆಲ್ಲ ವೃತ್ತಿ- ಪ್ರವೃತ್ತಿಗಳ ಬದುಕನ್ನು ಚೆನ್ನಾಗಿ ಸಂಭಾಳಿಸುವವರೇ.   

ದೊಡ್ಡ ಕಂಪನಿಯ, ದೊಡ್ಡ ಹುದ್ದೆಯಲ್ಲಿ ಆದಿತ್ಯನಿರುವುದು ಹೌದು, ಮನೆಗೆ ಬಂದರೆ ಮಾತ್ರ ಸಿಡುಕ, ಗಂಟು ಮೋರೆಯವ. ಆತ ಗೆಳೆಯರ ಜತೆ ಸೇರಿ ರಾಕ್ ಬ್ಯಾಂಡ್ ಕಟ್ಟಿಕೊಂಡಿರುವುದು ಪತ್ನಿಗೂ ಗೊತ್ತಿಲ್ಲ, ಹೇಳುವ ಸಂದರ್ಭ ಅವನಿಗೆ ಬಂದಿಲ್ಲ. ಚೆನ್ನಾಗಿ ಗಿಟಾರ್ ಮೀಟುವ ಜೋ, ಗೆಳೆಯರ ರಾಕ್‌ಬ್ಯಾಂಡ್ ಬಿಟ್ಟು  ವಿದೇಶವೆಲ್ಲಾ ಸುತ್ತಿ ಕೈತುಂಬಾ ಸಂಪಾದಿಸಬೇಕೆಂದು ಆತನ ಹೆಂಡತಿಯ ಇಚ್ಚೆ. ಪಾಪ, ಅವಳು ಮೀನು ವ್ಯಾಪಾರ ಎಷ್ಟು ದಿನಾ ಅಂತ ಮಾಡಿಯಾಳು? ಅಂತೂಇಂತೂ ಈ ಹವ್ಯಾಸಿ ಕಲಾವಿದರ 'ಮ್ಯಾಜಿಕ್' ಎಂಬ ರಾಕ್‌ಬ್ಯಾಂಡ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತದೆ. ಆಗ ತಂಡದ ಒಬ್ಬ ಸಾವಿಗೀಡಾಗಿ ಒಂದಿಷ್ಟು ಸೆಂಟಿಮೆಂಟ್. ಕೊನೆಗೆ  ಎಲ್ಲರೂ ತಮ್ಮ  ವೃತ್ತಿ-ಪ್ರವೃತ್ತಿ-ಮನೆ ಬದುಕು ಎಲ್ಲದರಲ್ಲೂ ಯಶಸ್ಸು ಕಂಡು ನೂರ್ಕಾಲ ಬದುಕುತ್ತಾರೆ ಎಂಬ ಶೈಲಿಯಲ್ಲಿ ಸಿನಿಮಾ ಮುಗಿಸಿದ್ದಾರೆ ನಿರ್ದೇಶಕ ಅಭಿಷೇಕ್ ಕಪೂರ್. ಇದು ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿರುವ  'ರಾಕ್ ಆನ್' ಚಿತ್ರದ ಒಂದು ಧಾರೆ.
ಅರ್ಜುನ್ ರಾಂಪಾಲ್‌ನಂತಹ ನಟ, ಫರಾನ್ ಅಕ್ತರ್, ಪೂರಬ್ ಕೊಹ್ಲಿ, ಪ್ರಾಚಿ ದೇಸಾಯಿಯಂತಹ ಹೊಸ ನಟನಟಿಯರು ಚೆನ್ನಾಗಿಯೇ ನಟಿಸಿದ್ದಾರಾದರೂ ಒಟ್ಟು ಪರಿಣಾಮದಲ್ಲಿ ಅದು ಮೋಡಿ ಮಾಡುವಂತಿಲ್ಲ. ಕೆಲವು ವರ್ಷಗಳ ಹಿಂದೆ ತಮಿಳಿನಲ್ಲಿ ಸೂಪರ್‌ಹಿಟ್ ಆದ `ಬಾಯ್ಸ್' ಎಂಬ ಅಸಲಿ ಮಸಾಲೆ ಸಿನಿಮಾ ನೋಡಿದವರಿಗಂತೂ, ಈ ಸಿನಿಮಾದಲ್ಲಿ ಮ್ಯೂಸಿಕ್ ತಂಡ ಯಶಸ್ಸಿನ ದಾರಿ ಹಿಡಿಯುವ ಚಿತ್ರಣ ಬೋರು ಹೊಡೆಸೀತು. ಎಲ್ಲಿ ,ಹೇಗೆ,ಯಾಕೆ ಹಾಳಾಯಿತು ಅಂತ ಹೇಳಲು ಬಹಳ ಕಷ್ಟವಾಗುವ ಹಾಗೆ ಸಿನಿಮಾ ಒಡೆದುಹೋಗಿದೆ . ಮಾಸ್ ಮತ್ತು ಕ್ಲಾಸ್ ಸಿನಿಮಾಗಳ ಮಧ್ಯೆ ದಾರಿ ಮಾಡಿಕೊಳ್ಳಲು ಹೋಗಿ ಅದೆಲ್ಲ ದಾರಿ ತಪ್ಪಿತೋ... ಸುಲಭದಲ್ಲಿ ಹೇಳಲೂ ಸಾಧ್ಯವಾಗದು ! ಹಾಗೆ ಒಟ್ಟಂದದಲ್ಲಿ ಖುಶಿ ಕೊಡದಿದ್ದರೂ, ಕೆಲವು ದೃಶ್ಯಗಳನ್ನು ನಿರ್ವಹಿಸಿರುವ ಬಗೆ ಚೆನ್ನಾಗಿಯೇ ಇದೆ. (ಪಿವಿಆರ್ ಎಲ್ಲಾ ಬೇಡ, ಡಿವಿಡಿ ಸಿಕ್ಕಿದರೆ ನೋಡಿ ಎಂಬುದು ತಾತ್ಪರ್ಯ!)   

ಇನ್‌ಫೋಸಿಸ್‌ನ ನಾರಾಯಣಮೂರ್ತಿಯವರು ತಮ್ಮ ಉದ್ಯೋಗಿಗಳಿಗೆ ಬರೆದದ್ದೆನ್ನಲಾದ ಇ-ಮೇಲ್ ಒಂದು ಕೆಲಕಾಲದ ಹಿಂದೆ ಅಂತರ್ಜಾಲದಲ್ಲಿ ಸುತ್ತಾಡುತ್ತಿತ್ತು. ಆಫೀಸಿನಲ್ಲಿ ಪುಕ್ಕಟೆಯಾಗಿ ಇಂಟರ್‌ನೆಟ್, ಕಾಫಿ, ಎ.ಸಿ., ಇರುತ್ತದೆಂದು, ಐಟಿ ಲೋಕದ ಬಹುಪಾಲು ಬ್ಯಾಚುಲರ್‍ಸ್ , ತಮ್ಮ ಕೆಲಸದ ಅವಧಿ ಮೀರಿಯೂ ಕಚೇರಿಯಲ್ಲೇ ಕಾಲ ಕಳೆಯುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಬಂದು, ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ ಹೋಗುವ ಅಭ್ಯಾಸ ಮಾಡಿಕೊಳ್ಳದಿದ್ದರೆ, ವಿವಾಹದ ಬಳಿಕ ಕಷ್ಟಪಡಬೇಕಾಗುತ್ತದೆ ಅಂತ ಅದರಲ್ಲಿ ಎಚ್ಚರಿಸಲಾಗಿತ್ತು ! ಮನೆಯಲ್ಲಿ  ನೆಮ್ಮದಿ ಇಲ್ಲ ಅಂತ ಇತರ ಚಟ-ಹವ್ಯಾಸವನ್ನೋ ಬೆಳೆಸಿಕೊಳ್ಳುವುದು ಅಥವಾ ಹೊರಗಿನ ಅಭ್ಯಾಸಗಳಿಂದಲೇ ಮನೆಯ ಬದುಕು ಕೆಡಿಸಿಕೊಳ್ಳುವುದು ನಡೆಯುತ್ತಿರುವಾಗಲೂ, ವೃತ್ತಿ-ಪ್ರವೃತ್ತಿ-ಮನೆ ಬದುಕನ್ನು ಸುಲಲಿತವಾಗಿ ತೂಗಿಸಿಕೊಂಡು ಹೋಗುತ್ತಿದ್ದ ಜನ ನಮ್ಮಲ್ಲಿ ಇದ್ದರು, ಇದ್ದಾರೆ. 

'ಊರಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು , ತನ್ನದೇ ಆಯ್ಕೆ ಎಂಬಂತೆ ಮುಂದೆ ಬದುಕಿದವರು ಅವರು. ತಾನು ಇದ್ದಲ್ಲೇ ಬೆಳೆಯುವುದು, ತನ್ನ ಸುತ್ತಲಿನ ಜನರ ನಡುವೆ ಅರ್ಥಪೂರ್ಣವಾಗುವುದು ಅವರಿಗೆ ಮುಖ್ಯವಾಯಿತು' ಅಂತ ಅಪ್ಪನ ಸಂಸ್ಮರಣಾ ಪುಸ್ತಕದಲ್ಲಿ ಒಬ್ಬರು ಬರೆದಿದ್ದರು. ಹೌದು, ಕೊನೆಯವರೆಗೂ ನಗರ ಜೀವನಕ್ಕಾಗಿ, ದೊಡ್ಡ ಕೆಲಸಕ್ಕಾಗಿ ಅವರು ಹಪಹಪಿಸಿರಲಿಲ್ಲ. ಹಾಗಂತ ಆ ನಿರುದ್ವಿಗ್ನತೆ, ಮನಸ್ಥಿತಿ ಎಲ್ಲರಿಗೆ ಸಾಧ್ಯವೂ ಇಲ್ಲ. ವೃತ್ತಿ-ಪ್ರವೃತ್ತಿ-ಮನೆ ಬದುಕು ನೂಲಿನ ಉಂಡೆಯಂತೆ. ಸರಿಯಾಗಿ ಸುತ್ತಿಕೊಂಡಿದ್ದರೆ ಬಿಡಿಸಿಕೊಳ್ಳುವುದು ಬಹಳ ಸುಲಭ, ಸಿಕ್ಕು ಶುರುವಾಯಿತೋ...ಅದು ವೈರಿಗಳಿಗೂ ಬೇಡ. 

ಆಫೀಸಿನಲ್ಲೇ ಇಷ್ಟು ಬರೆದುಕೊಂಡು ಖುಶಿಯಾಗಿದ್ದೇನೆ. ಹಬ್ಬದ ರಜೆ ಎಲ್ಲರಿಗೂ ಸನ್ಮಂಗಲ ಉಂಟುಮಾಡಲಿ.          

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP