May 30, 2009

ನಾಗೇಶ ಹೆಗಡೆಯವರ ಕಾಲುದಾರಿ

ನಮ್ಮ ಮನೆಗೆ ದಿನಪತ್ರಿಕೆ ಬರುತ್ತಿದ್ದುದು ರಾತ್ರಿ ೮ಕ್ಕೆ. ಮರುದಿನ ಸಂಜೆಯ ಮೊದಲು ಅಪ್ಪ ಕೇಳಿಯೇ ಕೇಳುತ್ತಿದ್ದ ಪ್ರಶ್ನೆ- 'ನಾಗೇಶ ಹೆಗಡೆಯವರ ಕಾಲಂ ಓದಿದ್ಯಾ?' ಇಂಟರ್‌ನೆಟ್ ಗೊತ್ತಿಲ್ಲದ, ಟಿವಿ ಇಲ್ಲದ ನಮ್ಮಲ್ಲಿಗೆ ಹೆಗಡೆಯವರ ಅಂಕಣ, ವಿಜ್ಞಾನದ ಒಂದು ಪ್ರವಾಹವನ್ನೇ ಹರಿಸುತ್ತಿತ್ತು. (ಇಂಟರ್‌ನೆಟ್-ಟಿವಿ ಇಟ್ಟುಕೊಂಡವರಿಗೂ ಹೆಗಡೆಯವರು ಹೇಳುವುದು ಹೊಸ ವಿಷಯವೇ ಆಗಿರುತ್ತದೆಂಬುದು ನಂತರ ತಿಳಿಯಿತು!) ಅಂಕಣದಲ್ಲಿ ಅವರು ಹೊಸ ವಿಜ್ಞಾನ ವಿಷಯದ ಬಗೆಗಷ್ಟೇ ಹೇಳುತ್ತಿರಲಿಲ್ಲ, ಅದರ ಜತೆಗೆ ಒಂದು ವಿಚಾರ ಸರಣಿ ಹೊಸೆದುಕೊಂಡಿರುತ್ತಿತ್ತು. ಅತಿ ಗಂಭೀರವಾಗಿರದೆ ಕೊಂಚ ತಮಾಷೆಯೂ ಆಗುತ್ತಿತ್ತು. ಸ್ಪಷ್ಟವಾಗಿ ಸರಳವಾಗಿ ಇರುತ್ತಿತ್ತು. ಹೀಗಾಗಿ, ಏನನ್ನೂ ಓದದ ನನ್ನ ತಮ್ಮನೂ, ಸುಧಾ ವಾರಪತ್ರಿಕೆಯ ಕೊನೆಯ ಪುಟದ 'ಸುದ್ದಿಸ್ವಾರಸ್ಯ'ವನ್ನು ಓದಿದಷ್ಟೇ ಆಸಕ್ತಿಯಿಂದ ಹೆಗಡೆಯವರ ಕಾಲಂನ್ನೂ ಓದತೊಡಗಿದ.

ಇತ್ತೀಚೆಗೆ ಬಂದ ಒಂದು ಎಸ್ಸೆಮ್ಮೆಸ್ಸು ಇದು- 'ನೀನೀಗ ಬೈಕು ಕೊಳ್ಳಬೇಡ. ೨೦೨೫ರಲ್ಲಿ ನೀನು ೫ ಲೀಟರ್ ಪೆಟ್ರೋಲ್ ಕೊಂಡರೆ ಪಲ್ಸರ್ ಬೈಕ್ ಫ್ರೀಯಾಗಿ ಸಿಗತ್ತೆ !' ಶನಿವಾರ ಸಂಜೆ ಮೇ ಫ್ಲವರ್ ಮೀಡಿಯಾ ಹೌಸ್‌ನ 'ಫಿಶ್ ಮಾರ್ಕೆಟ್'ನಲ್ಲಿ ಕಾಣಿಸಿಕೊಂಡ ವಾಮನ ಮೂರ್ತಿ ನಾಗೇಶ ಹೆಗಡೆಯವರ ಮಾತಲ್ಲೂ ಅದೇ 'ಮೆಸೇಜು' ಬಂತು. ತುಟಿ ಕೆಂಪು ಮಾಡಿಕೊಂಡಿರುವ ಕುಳ್ಳಗಿನ ಬಡಕಲು ದೇಹ. ಫಕ್ಕನೆ ಹೆಗ್ಗೋಡು ಸುಬ್ಬಣ್ಣರ ನೆನಪು ತರುವಂಥ ಮುಖ. ವಿಜ್ಞಾನ ತಂತ್ರಜ್ಞಾನವು ಸಬಲರಿಂದ ಸಬಲರಿಗಾಗಿಯೇ ಬಳಕೆಯಾಗುತಿದೆ ಎಂಬುದು ಅವರ ಮಾತಿನ ಒಟ್ಟು ಆರೋಪ. ಸರಿಯಾಗಿ ಉರಿಯುವ ಒಲೆ ಕಂಡುಹಿಡಿಯದೆ ಚಂದ್ರಲೋಕಕ್ಕೆ ಹೊರಟಿದ್ದಾರೆ. ಮರ ಕತ್ತರಿಸುವ ಆಧುನಿಕ ಗರಗಸಗಳು ತಯಾರಾದಾಗ ಕಾಡುಗಳೇ ಇಲ್ಲವಾಗಿವೆ. ಕಡಿಮೆ ಬೆಲೆಯ-ವಾಯು ಮಾಲಿನ್ಯ ಇಲ್ಲದ ನ್ಯಾನೊದಂಥ ಕಾರಿನ ಬದಲು ಬಸ್ಸು ತಯಾರಿಸಿದ್ದರೆ ಅದು ಶ್ಲಾಘಿಸುವ ವಿಷಯ. ಇಂದು ಎಲ್ಲವೂ ಖಾಸಗೀಕರಣಕ್ಕೆ ಒಳಗಾಗಿ ಪ್ರಜಾಪ್ರಭುತ್ವ ನಲುಗಿದೆ. ಅಮೆರಿಕದಂಥ ಒಂದು ದೇಶ ತನ್ನ ಕಂಪನಿಗಳ ಮೂಲಕ ಇನ್ನೊಂದು ದೇಶದಲ್ಲಿ ಭಾರೀ ಪ್ರಮಾಣದ ಭೂಮಿಯನ್ನು ಕೊಂಡುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಅನನ್ಯತೆ-ಸ್ವಾವಲಂಬನೆಗಳ ನಾಶ ಆಗುತ್ತಿದೆ ಎಂಬುದು ಅವರ ನೋವು. ಬೆಂಗಳೂರಿನ ಸುತ್ತಲಿನ ಹಳ್ಳಿಗಳ ಸಂಪನ್ಮೂಲಗಳು ಮಹಾನಗರಕ್ಕೆ ಬರುತ್ತಿವೆ. ಬೆಂಗಳೂರಿನ ತ್ಯಾಜ್ಯಗಳು ಆ ಹಳ್ಳಿಗಳಿಗೆ ಹೋಗ್ತಿವೆ. ಬೆಂಗಳೂರಿನಿಂದ ಮೈಸೂರಿಗೆ ಚತುಷ್ಪಥ ರಸ್ತೆಯಲ್ಲಿ ಹೋಗಲು ಈಗ ಅರ್ಧ ಗಂಟೆ ಕಡಿಮೆ ಸಾಕು. ಆದರೆ ಆ ದಾರಿಯಲ್ಲಿರುವ ರೈತ ತನ್ನ ಉಳಿದ ಜಮೀನಿಗೆ ಹೋಗಲು, ಚತುಷ್ಪಥ ದಾಟಲು ಅರ್ಧ ಗಂಟೆ ಕಾಯಬೇಕಾಗಿದೆ ಎಂಬ ವೈರುಧ್ಯದ ಬಗ್ಗೆ ಅವರಿಗೆ ದುಃಖ.

ನಮ್ಮ ವಿದ್ಯುತ್ತಿನ ಶೇ.೪೦ ಭಾಗ ರೈತರ ಪಂಪ್‌ಸೆಟ್‌ಗಳಿಗೆ ವ್ಯಯವಾಗುತ್ತಿದೆ. ಆದರೆ ಅವರಿಗೆ ಸೋಲಾರ್ ಶಕ್ತಿಯನ್ನೋ ಗಾಳಿಯಂತ್ರವನ್ನೋ ಕೊಡದ ಸರಕಾರ ಟ್ರ್ಯಾಕ್ಟರ್‌ನ್ನು-ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿದೆ. ಭಾರತದಲ್ಲಿ ದಿಢೀರನೆ ಬೆಳೆದ ತಂತ್ರಜ್ಞಾನ, ದುರ್ಬಳಕೆಯ ಎಲ್ಲ ಮಾರ್ಗಗಳಲ್ಲೂ ನಡೆದಿದೆ. ನಮಗೆ ಸರಿದಾರಿ ತೋರಬೇಕಾದ ಮಾಧ್ಯಮಗಳು ಹಾಗೂ ಸರಕಾರಗಳೇ ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿವೆ ಎಂಬ ಬೇಸರ. ಹೀಗೆಲ್ಲ ನಗುನಗುತ್ತಲೇ ಪನ್ ಮಾಡುತ್ತಲೇ ಮಾತಾಡಿದ ನಾಗೇಶ ಹೆಗಡೆ, ಎಲ್ಲರಿಂದ ಎತ್ತರದಲ್ಲಿ ನಿಂತು ಮುಂದಿನ ಪ್ರಪಾತವನ್ನು ವಿವರಿಸಿದವರಂತೆ ಕಂಡರು. ಪ್ರಪಾತದಲ್ಲಿ ನೇತಾಡುತ್ತಾ ಈ ಹಣ್ಣು ಅದೆಷ್ಟು ರುಚಿ ಎನ್ನುವ ಝೆನ್ ಒಡಪಿನ ಅರ್ಥವೂ ಅವರಿಗೆ ತಿಳಿದಂತಿತ್ತು. ಅಷ್ಟಕ್ಕೂ ಅವರು ತೀರ ಹೊಸದಾದ ಸಂಗತಿಯೇನೂ ಹೇಳಲಿಲ್ಲ. ಕ್ರಾಂತಿಗಿಂತ ಮುಖ್ಯವಾಗಿ ಸರ್ವಾಂಗೀಣ ಪ್ರಗತಿ ಆಗಬೇಕು ಎಂಬ ಹಲವರ ಆಸೆಯೇ ಅವರ ಆಸಕ್ತಿಯಾಗಿತ್ತು. ಬಹಳ ಕನ್ವಿನ್ಸಿಂಗ್ ಆಗಿ ಮಾತಾಡಲು ಅವರಿಗೆ ಸಾಧ್ಯವಾಗದಿದ್ದರೂ, ತನ್ನ ನಿಲುವಿನಲ್ಲಿ ಅವರಿಗಿರುವ ಬದ್ಧತೆ-ನಂಬಿಕೆ ಸ್ಪಷ್ಟವಾಗಿ ತಿಳಿಯುವಂತಿತ್ತು. ಬೆಂಗಳೂರಿನಿಂದ ೨೦ಕಿಮೀ ಆಚೆಗಿನ ಹಳ್ಳಿಯಲ್ಲಿ, ಫೋನು-ಕರೆಂಟು-ಟಿವಿ ಇತ್ಯಾದಿ ಸರಿಯಾದ ಸೌಲಭ್ಯಗಳಿಲ್ಲದಲ್ಲಿ ಅವರು ಬದುಕುತ್ತಿರುವುದು ಸಾಹಸದಂತೆ ಮಹಾ ಪಟ್ಟಣಿಗರಿಗೆ ಕಂಡರೆ, ಈ ಮಹಾನಗರಗಳಲ್ಲಿ ಬದುಕುವುದೇ ಸಾಹಸ ಅಂತ ಹೆಗಡೆ ಅಂದುಕೊಂಡಿದ್ದರು. ಯಾವುದು ಅತ್ಯಂತ ಸರಳವೋ ಅದನ್ನೇ ಭಾರೀ ಸಾಹಸವೆಂಬಂತೆ ಕಾಣಿಸಿರುವ ತಂತ್ರಜ್ಞಾನದ ಶಕ್ತಿಯ ಅನಾವರಣ ಅದರಿಂದಾಯಿತು.

ನಾಗೇಶ ಹೆಗಡೆಯವರು ಹೇಳಿದ ಥರಾ ಇನ್ನು ಐವತ್ತು ವರ್ಷಗಳಲ್ಲಿ ಏನೂ ಮುಳುಗಿ ಹೋಗೊಲ್ಲಾರೀ. ಒಂದು ಮೇರೆಮೀರಿದರೆ ಅದಕ್ಕೆ ಪ್ರತಿಯಾದ್ದನ್ನ ವಿಜ್ಞಾನ ಕಂಡುಹಿಡಿಯತ್ತೆ. ಪೆಟ್ರೋಲ್ ಮುಗಿದ್ರೆ, ನೀರಿನ ಕೊರತೆಯಾದ್ರೆ ಮತ್ತೊಂದು ದಾರಿ ತೆರೆದುಕೊಂಡಿರತ್ತೆ. ಈಗ ಹಳ್ಳಿಯೋರೆಲ್ಲ ಪೇಟೆಗೆ ಬಂದಿದ್ದಾರೆ. ಇಲ್ಲಿ ಅವಕಾಶಗಳೆಲ್ಲ ಕಡಿಮೆಯಾದಾಗ ಮತ್ತೆ ಜನ ಹಳ್ಳಿಗೆ ಹೋಗ್ತಾರೆ. ಪರಿಸರ ಮಾಲಿನ್ಯ ಸ್ವಲ್ಪ ಹೆಚ್ಚಾಗಿದೆ ಹೌದು. ಅದಕ್ಕೆಲ್ಲ ತಲೆ ಕೆಡಿಸ್ಕೋಬಾರ್ದು, ಎಡ್ಜೆಸ್ಟ್ ಮಾಡ್ಕೊಂಡು ಹೋಗ್‌ಬೇಕ್ರೀ. ಸ್ವಲ್ಪ ಕಡಿಮೆ ದಿನ ಬದುಕಿದ್ರೂ ಪರವಾಗಿಲ್ಲ, ಇಷ್ಟೆಲ್ಲಾ ಇರೋವಾಗ ಎಂಜಾಯ್ ಮಾಡಿ ಸಾಯ್ಬೇಕು !-ಎಂಬ ಮಾತುಗಳೂ ಹಲವರ ನಾಲಗೆಯ ಕೆಳಗೆ ಸುಳಿಯುತ್ತಿದ್ದವೇನೋ. ನಾಗೇಶ ಹೆಗಡೆ ಮಾತ್ರ ನಗುನಗುತ್ತಲೇ ಇದ್ದರು.

ನಾವು ಆನಂದವಾಗಿ ಬದುಕುವುದು ಎಂದರೆ ನಮ್ಮ ಸುತ್ತಲಿನ ಚೇತನ-ಅಚೇತನ ಪರಿಸರವನ್ನು ಆನಂದವಾಗಿ, ಸೌಖ್ಯವಾಗಿ ಇಡುವುದು ಎಂಬ ಸರಳ ಸತ್ಯವನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು.

Read more...

May 06, 2009

ಒಂದು ಲೀವ್ ನೋಟ್

ಪ್ರಿಲ್ ೧೦ರಂದು ಶಾಲೆಯ ನೋಟಿಸ್ ಬೋರ್ಡಿನಲ್ಲಿ ‘ಪಾಸಾ ಫೇಲಾ’ ನೋಡಿದರೆ ಮುಗಿಯಿತು. ಮಾರ್ಕುಗಳನ್ನೂ ಹೇಳುವ ಕ್ರಮ ಇಲ್ಲ ! ಫೇಲಾಗುವ ಭಯ ಇರುವವರ್‍ಯಾರೂ ಬೆಳಗ್ಗೆ ಬರುತ್ತಿರಲಿಲ್ಲ. ಅವರು ಮಧ್ಯಾಹ್ನ ನಂತರ ಬಂದು ಇಣುಕಿ ನೋಡಿಕೊಂಡು ಹೋಗುವುದು. ಅಮ್ಮ ಇವತ್ತು ಮಾತ್ರ, ಮಗನ ಒತ್ತಾಯದಂತೆ ತಣ್ಣೀರಿನಲ್ಲೇ ಮಾವಿನ ಹಣ್ಣಿನ ಜ್ಯೂಸ್ ಮಾಡಿಟ್ಟು ಕಾಯುತ್ತಿದ್ದಾಳೆ ! ಮಗ ಎಲ್ಲೇ ಹೋದರೂ, ಏನೇ ಮಾಡಿದರೂ ಕಣ್ಣಿಟ್ಟಿರುತ್ತಿದ್ದ ಅಪ್ಪನಿಗೆ ಇವತ್ತು ಕ್ಯಾರೇ ಇಲ್ಲ ! ಆ ಬಿಸಿಲೇರಿರುವ ಮಧ್ಯಾಹ್ನ, ಮಕ್ಕಳು ಶಾಲೆಯಿಂದ ಹೊರಟರೆ ಲಂಗುಲಗಾಮೇ ಇಲ್ಲ. ಅವರು ಹೋದದ್ದೇ ದಾರಿ. ಒಂದುವಾರ ಬಿಟ್ಟು ಅಜ್ಜನಮನೆಗೆ ಹೋಗುವುದಿದೆ. ಮೈಸೂರಿನಲ್ಲಿರುವ ದೊಡ್ಡಮ್ಮನ ಮನೆಗೆ ಈ ಸಲ ಹೋಗುವುದೇ ಅಂತ ಅಮ್ಮ ಹೇಳಿದ್ದಾಳೆ. ಮಗಳಿಗೆ ಚೆಸ್ ಕಲಿಸಿಕೊಡುತ್ತೇನೆಂದು ಅಪ್ಪನೂ, ಈಜು ಕಲಿಸುತ್ತೇನೆಂದು ಮೇಲಿನ ಮನೆಯ ಚಿಕ್ಕಪ್ಪನೂ, ಸೈಕಲ್ ಕಲಿಸುತ್ತೇನೆಂದು ಕ್ಲಾಸ್‌ಮೇಟ್ ಹನೀಫನೂ ಮಾತುಕೊಟ್ಟಿದ್ದಾರೆ. ಬಿರು ಬೇಸಿಗೆಯ ಈ ರಜೆಯಲ್ಲಿ ಮಕ್ಕಳೂ ಹಣ್ಣಾಗುತ್ತಾರೆ .

ಆದರೀಗ ಬಿಸಿಲುಮಳೆಚಳಿಗಳೊಂದಿಗೆ ಕಾಲವೂ ಬದಲಾಗಿದೆ. ಬೇಸಿಗೆ ರಜೆ ಅಂದರೆ ಸಮ್ಮರ್ ಹಾಲಿಡೇಸ್. ಕಂಪ್ಯೂಟರ್ ಕ್ಲಾಸು, ಡ್ಯಾನ್ಸ್ ಕ್ಲಾಸು, ಎಕ್ಸ್‌ಪರ್ಟ್ ಕೋಚಿಂಗು ಕಡ್ಡಾಯ. ರಜೆಯನ್ನು ಮಕ್ಕಳು ಸದುಪಯೋಗಪಡಿಸುವುದು ಹೇಗೆ ಎಂಬ ಬಗ್ಗೆ ಹಲವು ಅಪ್ಪಅಮ್ಮಂದಿರ ಮಧ್ಯೆ ಗಂಭೀರ ಚರ್ಚೆಗಳು ನಡೆಯುತ್ತವೆ. ಶಾಲೆಯ ದಿನಗಳಲ್ಲಿ ಖರ್ಚಾದಷ್ಟೇ ದುಡ್ಡು ರಜೆಯಲ್ಲೂ ಖರ್ಚಾಗುತ್ತದೆ. ಅಪ್ಪ-ಅಮ್ಮ ಇಬ್ಬರೂ ದುಡಿಯಲು ಹೊರಟಿರುವಾಗ ಮಕ್ಕಳನ್ನು ಏನು ಮಾಡುವುದು, ತಮಗೊಂದು ತುಂಡು ಭೂಮಿಯೂ ಇಲ್ಲದಿರುವಾಗ ಮಗ ಚೆನ್ನಾಗಿ ಕಲಿತು ಸಂಪಾದಿಸಿ ಒಂದೆರಡು ಸೈಟು ಮಾಡುವಂತಾಗಲಿ, ರಜೆ ಅಂತ ಬೇಕಾಬಿಟ್ಟಿ ಉಂಡಾಡಿ ವ್ಯರ್ಥ ಮಾಡುವುದರಲ್ಲಿ ಏನರ್ಥ?...ಹೀಗೆ ನಾನಾ ಯೋಚನೆಗಳು. ಜತೆಗೆ ಹೈಸ್ಕೂಲಿಗೆಲ್ಲಿಗೆ ಕಳುಹಿಸುವುದು, ಯಾವ ಕಾಲೇಜಿಗೆ ಸೇರಿಸುವುದೆಂಬುದಂತೂ ದೊಡ್ಡ ಕಗ್ಗಂಟು. ಆಟದ ಸಮಯ ಈಗಲೂ ಇದೆಯಾದರೂ ಅಜ್ಜನಮನೆಯ ಕಲಿಕೆಯಲ್ಲಿರುವಷ್ಟು ವಿರಾಮ ಇಲ್ಲ. ದುಡ್ಡು ಕೊಟ್ಟ ಮೇಲೆ ಕಲಿಯದೆಯೂ ಇರುವಂತಿಲ್ಲ! ಹೊತ್ತುಹೊತ್ತಿಗೆ ಮಜ್ಜಿಗೆ- ಶರಬತ್ತು ಕುಡಿಯುವ, ಮಾವಿನಕಾಯಿಗೆ ಕಲ್ಲು ಬೀಸುವ, ಅಜ್ಜಿ ಕತೆ ಕೇಳುವ, ತೋಟದಲ್ಲಿ ಓಡಾಡುವ ಗಮ್ಮತ್ತು ಇಲ್ಲ.

ಛೆ ಅಷ್ಟರಲ್ಲಿ ರಜವೇ ಮುಗೀತಲ್ಲ ! ಈ ಮಕ್ಕಳು ಬೆಳಿಯೋದೂ ರಜೆ ಮುಗಿಯೋದೂ ಗೊತ್ತೇ ಆಗಲ್ಲ . ನಮ್ಮ ಆಫೀಸಲ್ಲಂತೂ ಈಗ ಒಂದು ರಜೆ ಹಾಕೋದೂ ಭಾರೀ ಕಷ್ಟ . ಹತ್ತು ದಿನ ರಜಾ ಹಾಕಿ ಉತ್ತರ ಭಾರತ ಪುಣ್ಯ ಕ್ಷೇತ್ರ ದರ್ಶನ ಮಾಡಬೇಕೂಂತ ವರ್ಷಗಳಿಂದ ಆಸೆ. ಈ ಜನ್ಮದಲ್ಲಿ ಆಗಲ್ವೇನೋ. ಇ ಮೇಲ್ ಮಾಡಿ, ನೋಡೋಣ ಅಂತಾರೆ. ಏನ್ ನೋಡೋದು, ನನ್ ಸೆಕ್ಷನ್ ದೀಪಾಗೆ ಕೇಳಿದಾಗೆಲ್ಲ ರಜಾ ಸಿಗತ್ತೆ. ನನಗೆ ಒಂದು ದಿನ ರಜಾ ಸಿಕ್ಕಿದ್ರೆ ಹೆಂಡ್ತಿ ಜತೆ ಸಿಟ್ಟು ಮಾಡ್ಕೊಂಡು ಕೂತಿರ್‍ತೀನಿ !...ಹೂಂ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP