November 28, 2008

ಎದೆ ಗುಂಡಿಗೆ ಕೊಟ್ಟು ಕೇಳಿಸಿಕೊಳ್ಳುವಿರಾ ಬಡಿತ....

ದಗಳು ಮುಗಿದಿವೆ. ಗಂಟಲಲ್ಲಿ ಬೆಂಕಿಯಿದೆ. ತುಟಿಯಲ್ಲಿ ನೆತ್ತರಿದೆ. ರಾಕ್ ಸಾಂಗ್ ಹೊಮ್ಮುತ್ತಿರುವಂತೆ, ವಾಲ್ಯೂಮ್ ಏರಿಸಿದ ಕೂಡಲೇ ಟಿವಿ ಹೊಡೆದುಕೊಂಡಿದೆ. ತಾಜ್ ಹೋಟೆಲ್‌ನ ಆರನೇ ಮಹಡಿಯಲ್ಲಿದ್ದವರಿಗೆ ಆಗಲೂ ಗೊತ್ತಿಲ್ಲ, ಅದು ಮೆಷಿನ್‌ಗನ್‌ನ ಎದೆಬಡಿತವೆಂದು. ಅವರೂ ಗುಂಡಿನ ಸದ್ದನ್ನು ಕೇಳಿದ್ದು ಟಿವಿ, ಥಿಯೇಟರ್‌ಗಳಲ್ಲಿ ಮಾತ್ರ. ಇಂಗ್ಲೆಂಡ್‌ನ ವಿರುದ್ಧ ಐದನೇ ಪಂದ್ಯವನ್ನು ಗೆದ್ದು ಕೊಟ್ಟ ವೀರೂನ ವೀರಾವೇಶದ ಸಂಭ್ರಮದಲ್ಲಿ ನಾವೆಲ್ಲ ಸುಖ ನಿದ್ದೆಗೆ ಜಾರುವಷ್ಟರಲ್ಲಿ ಸುದ್ದಿ ವಾಹಿನಿಗಳು ಬಾಯಿಬಾಯಿ ಹೊಡೆದುಕೊಳ್ಳಲಾರಂಭಿಸಿದವು. ಬೆಂಗಳೂರಿನ ತುಂತುರು ಮಳೆಯಲ್ಲಿ ಕುಟುಕುಟು ಚಳಿಯಲ್ಲಿ ಮುದ್ದೆಯಾಗಿರುವ ನಮಗೆ, ಮುಂಬಯಿಯಲ್ಲಿ ಹೊತ್ತಿರುವ ಬೆಂಕಿ ಚುರುಕು ಮುಟ್ಟಿಸಿದೆಯೆ? ಅಥವಾ ಐದನೇ ಪಂದ್ಯವನ್ನೂ ಇಂಗ್ಲೆಂಡ್ ಸೋತಾಗ ‘ಮತ್ತದೇ ಹಳೇ ಕತೆ -ಇಂಗ್ಲೆಂಡ್‌ಗೆ ಸೋಲು !’ ಎನ್ನುವಂತೆ ಇದು ಮಾಮೂಲು ಅನ್ನುತ್ತೇವೆಯೆ?!

ಬ್ರಿಟನ್‌ನ ಮಿಲಿಯಾಧೀಶ, ೭೩ರ ಪ್ರಾಯದ ಆಂಡ್ರಿಯಾಸ್ ಲಿವ್ರಾಸ್ ನಾನಾ ತರಹದ ವಾಹನಗಳನ್ನು ಬಾಡಿಗೆ ಕೊಡುವ ದೊಡ್ಡ ಕಂಪನಿಯ ದೊರೆ. ಮುಂಬಯಿಯಲ್ಲಿ ಅತ್ಯುತ್ತಮ ಊಟ-ತಿಂಡಿ ತಾಜ್‌ನಲ್ಲಿ ಸಿಗುತ್ತದೆ ಅಂತ ಬುಧವಾರ ಸಂಜೆ ಹೋಗಿದ್ದರು. ‘ಟೇಬಲ್ ಎದುರು ಕುಳಿತಿದ್ದೆನಷ್ಟೆ. ಕಾರಿಡಾರ್‌ನಿಂದ ಮೆಷಿನ್‌ಗನ್ ಸದ್ದು. ತಕ್ಷಣ ಟೇಬಲ್ ಕೆಳಗೆ ತೂರಿಕೊಂಡೆವು. ಬಂದವರು ಲೈಟ್ ಆರಿಸಿದರೂ, ಮೆಷಿನ್‌ಗನ್‌ಗಳು ಮೊಳಗುತ್ತಲೇ ಇದ್ದವು. ಅಲ್ಲಿಂದ ನಮ್ಮನ್ನು ಅಡುಗೆಕೋಣೆಗೆ, ನೆಲಮಹಡಿಗೆ, ಅಲ್ಲಿಂದ ಅತಿಥಿಗಳನ್ನು ಸ್ವಾಗತಿಸುವ ಈ ಕೋಣೆಗೆ. ಸುಮಾರು ೧೦೦೦ ಜನ ಇಲ್ಲಿರಬಹುದು. ಯಾರೂ ಏನನ್ನೂ ಹೇಳುವುದಿಲ್ಲ, ಬಾಗಿಲುಗಳಿಗೆ ಹೊರಗಿನಿಂದ ಬೀಗ ಜಡಿಯಲಾಗಿದೆ. ಹೋಟೆಲ್ ಉದ್ಯೋಗಿಗಳು ನೀರು-ಸ್ಯಾಂಡ್‌ವಿಚ್‌ಗಳನ್ನು ಕೊಡುತ್ತಾ ಸಹಾಯ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಯಾರೂ ಏನನ್ನೂ ತಿನ್ನುತ್ತಿಲ್ಲ. ಈಗ ಎಲ್ಲ ತಣ್ಣಗಿದೆ, ೪೫ ನಿಮಿಷಗಳ ಹಿಂದೆ ಬಾಂಬ್ ಸ್ಫೋಟಿಸಿತ್ತು’ ಹೀಗೆಂದು ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಬಿಬಿಸಿಗೆ ಫೋನ್ ಮಾಡಿದ್ದ ; ಸುರಕ್ಷಿತವಾಗಿದ್ದೇನೆಂದು ಮಗನಿಗೆ ಫೋನ್ ಮೂಲಕ ತಿಳಿಸಿದ್ದ ಆಂಡ್ರಿಯಾಸ್. ಶುಕ್ರವಾರ ಬೆಳಗ್ಗೆ ಆತ ಸತ್ತ ಸುದ್ದಿ ಖಾತ್ರಿಯಾಗಿತ್ತು.

ಮಾಧ್ಯಮ ಪ್ರತಿನಿಧಿ ಬ್ರಿಟಿಷ್ ಪ್ರಜೆ ಅಲಾನ್ ಜೋನ್ಸ್ ಟ್ರೈಡೆಂಟ್ ಒಬೆರಾಯ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಸಹೋದ್ಯೋಗಿಯೊಂದಿಗೆ ಲಿಫ್ಟ್‌ನಲ್ಲಿ ಸ್ವಾಗತ ಕೋಣೆಗೆ ಇಳಿದು, ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಭಾರೀ ಶಬ್ದ. ಲಿಫ್ಟ್‌ನಲ್ಲಿದ್ದ ನಾಲ್ವರಲ್ಲಿ ಜಪಾನೀಯನೊಬ್ಬನಿಗೆ ಗುಂಡು ಬಿದ್ದಿತ್ತು. ‘ನಾನು ತಕ್ಷಣ ಲಿಫ್ಟ್‌ನ ಬಾಗಿಲು ಮುಚ್ಚಿಕೊಳ್ಳುವ ಗುಂಡಿ ಅದುಮಿದೆ. ಗುಂಡು ತಿಂದವನ ಕಾಲು ಬಾಗಿಲಿಗೆ ಅಡ್ಡವಾಗಿತ್ತು. ಅಯ್ಯೋ ಏನು ಮಾಡಲಿ? ತಳ್ಳಿದೆ. ಮೇಲಿನ ಮಹಡಿಯಲ್ಲಿರುವ ರೂಮಿಗೆ ನಾವು ಹಿಂದಿರುಗಿದಾಗ, ನೆಲ ಮಹಡಿಯಲ್ಲಿರುವ ಸುರಕ್ಷಿತ ಜಾಗಕ್ಕೆ ಹೋಗುವ ಸೂಚನೆ ನಮಗೆ ಬಂತು. ಅಲ್ಲಿ ನಾವು ತುಂಬ ಜನ ಸೇರಿದ್ದೆವು. ಸುಮಾರು ಒಂದು ಗಂಟೆಯ ಬಳಿಕ ಪೊಲೀಸರು ಹೊರಗೆ ಕರೆದೊಯ್ದರು’ ಎಂದು ವಿವರಿಸುತ್ತಾನೆ ಆತ.

ಆಸ್ಟ್ರೇಲಿಯಾದ ‘ಮೊಬಿ ಎಕ್ಸ್‌ಪ್ರೆಸ್ ’ಕಂಪನಿಯ ಮಾಲೀಕನ ೨೨ ವರ್ಷದ ಮಗ ಯುನ್ ಚೈನ್ ಲಾಯ್‌ಗೆ ಎಚ್ಚರಾದದ್ದು ಗುಂಡಿನ ಮಳೆಯ ಸದ್ದು ಕೇಳತೊಡಗಿದಾಗ. ಸಿಡ್ನಿಯಲ್ಲಿರುವ ಅಮ್ಮನ ಜತೆ ಮಾತಾಡಿ ತಾನು ಒಬೆರಾಯ್ ಹೋಟೆಲ್‌ನಿಂದ ಹೊರಗೆ ಬಂದಿರುವುದಾಗಿ ಹೇಳಿದ್ದಾನೆ. ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಅಯ್ಯೊ ಅವನದ್ದು ಮೊದಲ ವಿದೇಶ ಪ್ರಯಾಣ. ಭಾವೋದ್ವೇಗಕ್ಕೆ ಒಳಗಾಗಬೇಡ ಅಂದಿದ್ದೀವಿ. ಅವನು ಬಹಳ ಸೆನ್ಸಿಬಲ್. ಸಂದರ್ಭಗಳನ್ನು ನಿಭಾಯಿಸುತ್ತಾನೆ ’ಅಂತ ಹೇಳುತ್ತಲೇ ಉಮ್ಮಳಿಸುತ್ತಿದ್ದಾಳೆ ಅಮ್ಮ.

ಸ್ವಾಗತ ಕೋಣೆಯಲ್ಲಿ ಬುಲೆಟ್‌ಗಳು ಹಾರಾಡುತ್ತಿದ್ದರೆ, ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್‌ರೂಂನಲ್ಲಿ ಸಿಲುಕಿಕೊಂಡಿದ್ದಳು. ಸಿಗರೇಟ್‌ಗೆಂದು ಹೋಟೆಲ್‌ನ ಮುಖ್ಯ ದ್ವಾರದ ಬಳಿ ಹೋದ ಆಕೆ, ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು, ನೆಲ ಮಹಡಿಯಲ್ಲಿರುವ ಬಾತ್‌ರೂಂ ಬಳಿಯಾಗಿ ಬರುತ್ತಿದ್ದಳು. ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ. ಆಕೆ ಇತರ ಆರು ಜನರೊಂದಿಗೆ ಬಾತ್‌ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು. ಆ ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು, ಕಾರಿಡಾರ್‌ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ. ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು. ಬಚಾವಾಗುವಾಗ ಕಾರಿಡಾರ್‌ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ. ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು. ಐನೂರು ರೂಪಾಯಿಗಳಿದ್ದ್ದ ಪರ್ಸ್‌ನ್ನೋ ಮೊಬೈಲ್‌ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ, ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ. ಆಗ, ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ,ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು.

‘ಮಾಧ್ಯಮಗಳಿಂದ ಉಗ್ರವಾದಕ್ಕೆ ವಿಶೇಷ ಪ್ರಚಾರ ಸಿಗುತ್ತಿದೆ ’ ಎಂಬ ಮಾತಿಗೆ ಪ್ರತಿಯಾಗಿ ‘ಉಗ್ರರ ಫೋಟೊಗಳನ್ನು ತೆಗೆದದ್ದು ಮಾಧ್ಯಮಗಳೇ’ ಎಂಬ ಹೆಗ್ಗಳಿಕೆಯೊಂದಿಗೆ ಚರ್ಚೆ ನಡೆದಿದೆ. ಆದರೆ ಎರಡು ದಿನಗಳು ಕಳೆಯುವಷ್ಟರಲ್ಲಿ, ಎಲ್ಲಿ ಚುನಾವಣೆಗಳಿವೆಯೋ ಅಲ್ಲಿ ಭಯೋತ್ಪಾದನೆಯ ಲಾಭ ಪಡೆಯುವ ಕಾರ್‍ಯಾಚರಣೆ ಆರಂಭವಾಗುತ್ತದೆ . ನೆತ್ತರಲ್ಲಿ ಅದ್ದಿರುವ ಸ್ಥಳಗಳಿಗೆ ಚೆಂದ ಇಸ್ತ್ರಿ ಮಾಡಿದ ಅಚ್ಚ ಬಿಳಿ ಅಂಗಿಯಲ್ಲಿ ನಿಧಾನವಾಗಿ ನಡೆದು ಬರುವ ರಾಜಕಾರಣಿಗಳನ್ನು ನೋಡಿದರೆ, ಎಂಥವನಿಗಾದರೂ ವಾಕರಿಕೆ ಬರಬೇಕು. ಆದರೆ ಮಹಾನ್ ಮುಂಬಯಿ ಪ್ರೇಮಿ, ಅನ್ಯ ರಾಜ್ಯದವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ರಾಜ್ ಠಾಕ್ರೆ ಯಾವ ಟಿವಿಯಲ್ಲೂ ಕಣ್ಣಿಗೆ ಬೀಳಲಿಲ್ಲ !

ಮೊನ್ನೆಮೊನ್ನೆ ಬಿಡುಗಡೆಯಾದ ‘ಮುಂಬೈ ಮೇರಿ ಜಾನ್’-‘ವೆಡ್‌ನೆಸ್‌ಡೇ’ ಸಿನಿಮಾಗಳು ನೆನಪಿನಿಂದ ಮಾಸುವ ಮೊದಲೇ ಉಗ್ರರ ಸಿನಿಮಾ ಬಿಡುಗಡೆಯಾಗಿದೆ. ಆದರೆ ನಮ್ಮ ದುರದೃಷ್ಟ, ಅದರ ನಕಲಿ ಸಿಡಿಗಳು ಎಲ್ಲೂ ಸಿಗುವುದಿಲ್ಲ! ಹಾಗಂತ ಅವರ ಸಿನಿಮಾ ಯಾವುದರ ನಕಲಿಯೂ ಆಲ್ಲ. ಅದು ಒರಿಜಿನಲ್, ಅವರಷ್ಟೇ ಮಾಡಬಹುದಾದ್ದು ಅನ್ನುವಂಥದ್ದು. ‘ವೆಡ್‌ನೆಸ್‌ಡೇ’ ಚಿತ್ರದಲ್ಲಿ ಆಮ್ ಆದ್ಮೀ ನಾಸಿರುದ್ದೀನ್‌ಶಾ, ಸೆರೆಯಲ್ಲಿದ್ದ ನಾಲ್ವರು ಉಗ್ರರನ್ನು ಶಿಕ್ಷಿಸಲು ಎಷ್ಟು ಕಷ್ಟ ಪಟ್ಟ?! ತಾನು ಉಗ್ರಗಾಮಿಯೆಂದು ಬಿಂಬಿಸಿಕೊಂಡು, ಸೆರೆಯಲ್ಲಿದ್ದವರನ್ನು ಪೊಲೀಸರ ಮೂಲಕವೇ ಕರೆಸಿಕೊಂಡು ಬಾಂಬ್ ಸ್ಫೋಟಿಸಿ ಉಗ್ರರನ್ನು ಮುಗಿಸಲು ಯತ್ನಿಸುತ್ತಾನೆ. ಕಣ್ಣೆದುರೇ ಮನೆ ಹೊಕ್ಕ ಉಗ್ರರನ್ನು ಸದೆಬಡಿಯಲು ನಾವು ಪಡುತ್ತಿರುವ ಪರದಾಟ ನೋಡಿದರೆ, ಸಾಮಾನ್ಯ ಪ್ರಜೆಯೊಬ್ಬ ಹೀಗೂ ಮಾಡಬಹುದು ಅಂತ ತೋರಿಸಿದ ವೆಡ್‌ನೆಸ್‌ಡೇ ಸಿನಿಮಾ ಬಾಲಿಶವಾಗಿ ಕಾಣುತ್ತಿದೆ. ನಾವು ಹಿಂದಿದ್ದೇವೆ. ಎಷ್ಟೆಂದರೆ ನಮ್ಮ ಹಿಂದಿನಿಂದ ಯಾವ ಉಗ್ರರು ಬರಲಾರರು ! ತೆರೆದ ಎದೆಯಲ್ಲಿ ಹೋಗಿ ಪ್ರಾಣ ಕಳೆದುಕೊಂಡ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಗಳ ಹೆಂಡತಿಮಕ್ಕಳು ಎದೆಎದೆ ಬಡಿದುಕೊಂಡು ಕಣ್ಣೀರುಗರೆಯುತ್ತಿದ್ದಾರೆ. ನಮ್ಮ ನೇತಾರರು ನಿಜಕ್ಕೂ ಮುಖ ಮುಚ್ಚಿಕೊಂಡು ಓಡಾಡಬೇಕು.

ದಾವೂದ್ ಇಬ್ರಾಹಿಂ ಕೈವಾಡದಲ್ಲಿ ೧೯೯೭ರಲ್ಲಿ ೨೫೦ಕ್ಕೂ ಹೆಚ್ಚು ಜನರ ಜೀವ ಹಿಸುಕುವಲ್ಲಿಂದ ಶುರು; ಮುಂಬಯಿಯಲ್ಲಿ ಸರಾಸರಿ ವರ್ಷಕ್ಕೊಂದು ಸಾವಿನ ಹಬ್ಬ. ಯಾವ ಸರಕಾರಗಳೂ ತಡೆಯಲಾರದ್ದನ್ನು ಉಗ್ರರು ಮಾಡುತ್ತಿದ್ದಾರೆ. ಅವರಿಗೆ ತಡೆಯೂ ಇಲ್ಲ, ಯಾವ ಭಿಡೆಯೂ ಇಲ್ಲ. ರಾತ್ರಿ ಒಂದು ಗಂಟೆ ಕರೆಂಟು ಕೈಕೊಟ್ಟರೆ ನಡೆಯುವ ಸರಗಳ್ಳತನಗಳನ್ನು, ಮನೆಯಲ್ಲಿದ್ದ ಒಂಟಿ ಮಹಿಳೆ ಮಟಮಟ ಮಧ್ಯಾಹ್ನವೇ ಕೊಲೆಗೀಡಾಗುವುದನ್ನು ತಡೆಯಲಾಗದ ನಮ್ಮ ಸರಕಾರಗಳು, ರಕ್ಕಸ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದರೆ ನೀವು ನಂಬುತ್ತೀರಾ?

Read more...

November 19, 2008

ಬೊಂಬೆ ಹುಡುಗಿ

ನ್ನಡದ ಟಿವಿ ಚಾನೆಲ್‌ಗಳಲ್ಲಿ ಇತ್ತೀಚೆಗೆ 'ಕಾಮಿಡಿ ಟೈಂ' ಜಾಸ್ತಿಯಾಗಿದೆ ! ಕಿರು-ಹಿರಿತೆರೆಯ ನಟರು, ಹಾಸ್ಯ ಬರಹಗಾರರು ಭಾಗವಹಿಸುವ, ಸಿಹಿಕಹಿ ಚಂದ್ರು ಹಾಗೂ ಮಿಮಿಕ್ರಿ ದಯಾನಂದ್ ತೀರ್ಪುಗಾರರಾಗಿರುವ, ಕಸ್ತೂರಿ ಚಾನೆಲ್‌ನಲ್ಲಿ ಪ್ರಸಾರವಾಗುವ, 'ಹಾಸ್ಯದರಸ ' ಎಂಬ ಕಾರ್ಯಕ್ರಮ, ಅಂತಹ ಅತ್ಯಂತ ಬೋರಿಂಗ್ ಟೈಂ ಸ್ಲಾಟ್ ! ಇನ್ನು `ಜೀ ಕನ್ನಡ 'ದ 'ಕಾಮಿಡಿ ಕಿಲಾಡಿ'ಗಳಲ್ಲಿ ನಿರೂಪಕಿ ಅನುಶ್ರೀಯ ಥಕಥೈಯೇ ಹೆಚ್ಚಾಗಿರುತ್ತದಷ್ಟೇ ಹೊರತು, ಬಹುಪಾಲು ಹಾಸ್ಯ ಕಲಾವಿದರು ಫ್ಲಾಪ್‌ಫ್ಲಾಪ್. ಆದರೂ ಅಪರೂಪಕ್ಕೆ ಒಬ್ಬಿಬ್ಬರು, ನೋಡುವವರ ಹಲ್ಲು ಸೆಟ್‌ಗಳೂ ಜಾರುವಂತೆ ನಗಿಸುತ್ತಾರೆ. ಸ್ವಾದಿಷ್ಟ ಹಾಸ್ಯ ಬಡಿಸುತ್ತಾರೆ. ಅಂಥವರಲ್ಲಿ ಒಬ್ಬರು ಇಂದುಶ್ರೀ. 'ಸ್ಟಾರ್ ಒನ್' ಚಾನೆಲ್‌ನಲ್ಲಿ ಪ್ರಸಾರವಾಗುತ್ತ ಅತ್ಯುತ್ತಮ ಎನಿಸಿದ್ದ 'ಲಾಫ್ಟರ್ ಛಾಲೆಂಜ್'ನ ಕಲಾವಿದರನ್ನೂ ಸರಿಗಟ್ಟುವಂತೆ ಬೊಂಬೆಯನ್ನು ಮಾತಾಡಿಸಬಲ್ಲ ಹುಡುಗಿ ಈಕೆ. ಅವಳ ಕತೆ ಇಲ್ಲಿದೆ. ಸೀರಿಯಸ್ಸಾಗಿ ಓದಿ.


ಇದು ಡಿಂಕು ಪ್ರಪಂಚ. ಬಂದವರನ್ನು ಹೋದವರನ್ನು ಅದು ಕಣ್ಣು ಕೆಕ್ಕರಿಸಿ ನೋಡುತ್ತಿದೆ. ಸರಕ್ಕನೆ ಕುತ್ತಿಗೆ ಹೊರಳಿಸುತ್ತದೆ. ಅದೊಂಥರಾ ಛದ್ಮವೇಷಧಾರಿಯೂ. ಡಾಕ್ಟರು, ಕುಡುಕ, ರೌಡಿ, ಸ್ವಾಮೀಜಿ ಹೀಗೆ ನಾನಾ ವೇಷಗಳಲ್ಲಿ ಕಂಗೊಳಿಸಿ, ನಾನಾ ಸ್ವರ ಹೊರಡಿಸಿದರೂ ಡಿಂಕು ಡಿಂಕೂನೇ. ಡಿಂಕು ಹುಡುಗಿಯೋ, ಹುಡುಗನೋ? ನೆನೆದವರ ಮನದಲ್ಲಿ ಡಿಂಕು ಎಲ್ಲವೂ. ಯಾರೇ ಆಗಲಿ, ಮಾತಾಡಿಸಿದಾಗಲೇ ಅದಕ್ಕೆ ತೃಪ್ತಿ. ಅಂತಹ ಡಿಂಕು ಎಂದರೆ ಒಂದು ಮರದ ಗೊಂಬೆ. ಅದು ಮಾತಾಡುವಂತೆ ಮಾಡಿದವರು ಇಂದುಶ್ರೀ. ಇವರ ಕೈಗೆ ಸಿಕ್ಕರೆ - 'ಮೂಕಂ ಕರೋತಿ ವಾಚಾಲಂ' !

ಇಂಗ್ಲಿಷ್‌ನಲ್ಲಿ ಇಂಥವರಿಗೆ ventriloquist ಅನ್ನುತ್ತಾರೆ. ಅಂದರೆ ಮರದ ವಸ್ತುವಿನಿಂದ ಸ್ವರ ಬರುವಂತೆ ಪ್ರದರ್ಶನ ನೀಡುವವರು ಎಂದರ್ಥ. ಜಾದೂಗಾರರೇ ಹೆಚ್ಚಾಗಿ ಮಾಡುವ, `ಮಾತನಾಡುವ ಗೊಂಬೆ' ಅಂತ ಕರೆಸಿಕೊಳ್ಳುವ ಈ ಪ್ರದರ್ಶನ ನೀಡುವವರು ಬಹಳ ಕಡಿಮೆ ಜನ. ಕರ್ನಾಟಕದಲ್ಲಿ ಉದಯ್ ಜಾದೂಗಾರ್, ಪ್ರಹ್ಲಾದ್ ಆಚಾರ್ಯ (ಕೋತಿ)ರಮೇಶ್, ರಂಗಶಾಹಿ ಹೀಗೆ ಕೆಲವರಷ್ಟೇ ನಡೆಸಿಕೊಡುತ್ತಾರೆ. ಮಾತು-ಕೃತಿ ಎರಡರಲ್ಲೂ ಇದಕ್ಕೆ ವಿಶೇಷ ಅಭ್ಯಾಸ ಬೇಕು. ಆದರೆ ಹೆಣ್ಣೊಬ್ಬಳು ಈ ಪ್ರದರ್ಶನವನ್ನು ಆರಿಸಿಕೊಂಡದ್ದು, ಅದರಲ್ಲಿ ಪಳಗಿದ್ದು , ಲಿಮ್ಕಾ ದಾಖಲೆ ಮಾಡಿದ್ದು ಒಂದು ವಿಶೇಷ ಕತೆ .ತನ್ನ ಗೊಂಬೆ ಡಿಂಕುವನ್ನು ಮಾತಾಡಿಸುತ್ತಾ ಟಿವಿ ವಾಹಿನಿಗಳ ಮೂಲಕ ರಾಜ್ಯಾದ್ಯಂತ ಈಗ ಕಾಣಿಸಿಕೊಳ್ಳುತ್ತಿರುವವರು ಇಂದುಶ್ರೀ.

ಎಸ್‌ಎಸ್‌ಎಲ್‌ಸಿ ಮುಗಿಸಿ, ಪಿಯುಸಿ ಸೈನ್ಸ್ ಬೇಜಾರಾಗಿ, ಚಿತ್ರಕಲಾ ಪರಿಷತ್‌ನಲ್ಲಿ ಐದು ವರ್ಷಗಳ `ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್' ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಯ, ಬೆಂಗಳೂರಿನ ಪುಟ್ಟ ಮನೆ ಹೊಕ್ಕರೆ ಗೋಡೆ ತುಂಬೆಲ್ಲ ಪ್ರಶಸ್ತಿ ಫಲಕಗಳು. ಆಕೆ ರಚಿಸಿದ ಪೇಂಟಿಂಗ್ಸ್‌ಗಳು, ದೊಡ್ಡ ದೊಡ್ಡ ಆಲ್ಬಮ್‌ಗಳಲ್ಲಿ ಪ್ರಶಸ್ತಿ ಪತ್ರಗಳು, ಪತ್ರಿಕಾ ವರದಿಗಳ ಕಟ್ಟಿಂಗ್ಸ್‌ಗಳು. ಹಾಸಿಗೆ ಮೇಲೆ ಡಿಂಕು, ಅದರ ತಮ್ಮ , ಮತ್ತೊಂದು ಕೋತಿ ! `ಫೆಬ್ರವರಿನಲ್ಲಿ `ಜೀ ಕನ್ನಡ' ಚಾನೆಲ್‌ನಲ್ಲಿ `ನೆನೆದವರ ಮನದಲ್ಲಿ ಡಿಂಕು ದುನಿಯಾ' ಅಂತ ಆರಂಭವಾದಾಗ ಒಂದೂವರೆ ಗಂಟೆ ಶೋ ಕೊಡ್ತಿದ್ದೆ. ಅಷ್ಟು ದೀರ್ಘ ಅವಧಿಯ ಕಾರ್ಯಕ್ರಮ, ಟೆಲಿವಿಷನ್ ಹಿಸ್ಟರೀನಲ್ಲೇ ಫಸ್ಟ್ ಟೈಮ್ ಆಗಿತ್ತು. ಈಗ ಪ್ರತಿ ಶನಿವಾರ ೯ರಿಂದ ೧೦ ರವರೆಗೆ ಬರತ್ತೆ. ಇದಕ್ಕಿಂತ ಮೊದಲು ಸಿಟಿ ಕೇಬಲ್‌ನಲ್ಲಿ ಎರಡೂವರೆ ವರ್ಷ ಪ್ರತಿ ಶುಕ್ರವಾರ ಒಂದು ಗಂಟೆ ಕಾರ್ಯಕ್ರಮ ಕೊಡ್ತಾ ಇದ್ದೆ. ಅದು ಸುಮಾರು ೧೬೦ ಶೋಗಳಾಗಿತ್ತು. ಹಾಗೇ ಹೆಚ್ಚಿನ ಎಲ್ಲ ಸಿಟಿ ಚಾನಲ್‌ಗಳಲ್ಲಿ ಮತ್ತು ಉದಯ, ಯು-೨, ಈ-ಟಿವಿ, ಟಿವಿ ೯ಗಳಲ್ಲಿ ಕಾರ್ಯಕ್ರಮ ಕೊಟ್ಟಿದೀನಿ' ಅಂತ ವಿವರ ಕೊಟ್ಟರು ಇಂದುಶ್ರೀ. ತನ್ನ ಪ್ರತಿಭೆಯನ್ನು ಆಕೆ ಮೊದಲು ತೋರಿದ್ದು ಮೆಜಿಷಿಯನ್ ಆಗಿಯಂತೆ. ಆಕೆಯ ತಂದೆ ಆರ್.ಎಂ.ರವೀಂದ್ರ ನಾಟಕ ಕಲಾವಿದರು, ತಾಯಿ ಮಂಜುಳಾ ರವೀಂದ್ರ ಹಾಡುಗಾರ್ತಿ. ಹೀಗಾಗಿ ಸಣ್ಣವಳಾಗಿದ್ದಾಗಲೇ ಎಲ್ಲದರಲ್ಲೂ ಆಸಕ್ತಿ ಇತ್ತು. ಆದರೆ ಮ್ಯಾಜಿಕ್ ಬಗ್ಗೆ ಏನೂ ಗೊತ್ತಿರಲಿಲ್ಲ. ಯಾರಪ್ಪಾ ಓದೋದು, ಮ್ಯಾಜಿಕ್ ಕಲಿತ್ರೆ ಏನಾದ್ರೂ ಆಗಬಹುದು ಅನ್ನೋ ಮೆಂಟಾಲಿಟಿನಲ್ಲಿ ಎಲ್ಲ ಶುರು ಆಗಿದ್ದು. ಹೀಗೆ ಎರಡನೇ ಕ್ಲಾಸ್‌ನಲ್ಲಿದ್ದಾಗಲೇ ಮ್ಯಾಜಿಕ್ ಅಭ್ಯಾಸ ಶುರು. ಬಳಿಕ ಕೆ.ಎಸ್.ರಮೇಶ್ ಬೆಂಗಳೂರಲ್ಲಿ `ಇಂಟರ್‌ನ್ಯಾಷನಲ್ ಮ್ಯಾಜಿಕ್ ಫೆಸ್ಟಿವಲ್ ಮಾಡಿದ್ದಾಗ ಅಲ್ಲದೆ, ಹೈದರಾಬಾದ್, ದಿಲ್ಲಿ, ಗೋವಾ, ಕೇರಳ ಮೊದಲಾದೆಡೆ ಕಾರ್ಯಕ್ರಮ ನೀಡಿದೆ ಅನ್ನುತ್ತಾರೆ.ಇಂದುಶ್ರೀ ಮ್ಯಾಜಿಕ್‌ನ್ನು ಗುರು-ಶಿಷ್ಯ ಪರಂಪರೆಯಲ್ಲಿ ಯಾರಿಂದಲೂ ಕಲಿತವರಲ್ಲ. ಅವರ ಫ್ಯಾಮಿಲಿ ಫ್ರೆಂಡ್ ಕೇಶವ್ ಜಾದೂಗಾರ್ ಮೊದಲು ಸಣ್ಣ ಸಣ್ಣ ಟ್ರಿಕ್ಸ್ ಕಲಿಸಿದರಂತೆ. ಅದರಿಂದ ಆಸಕ್ತಿ ಹೆಚ್ಚಾಗಿ ಸಿ.ಡಿ, ಪುಸ್ತಕಗಳನ್ನು ನೋಡಿ ಅಭ್ಯಾಸ ಮಾಡಿದರು. ಜಾದೂಗಾರರಾದ ಎ.ಕೆ.ದತ್, ಉದಯ್ ಜಾದೂಗಾರ್, ಕುದ್ರೋಳಿ ಗಣೇಶ್‌ರೆಲ್ಲಾ ಪ್ರೋ ನೀಡಿದರು. ಈ ವೆಂಟಿಲಾಟಿಸ್‌ಮ್ ಕೂಡಾ ಹಾಗೆಯೇ. ಯಾರೋ ಮಾಡಿದ್ದನ್ನು ನೋಡಿ ಆಸಕ್ತಿ ಬಂದು ತನ್ನ ಪಾಡಿಗೆ ತಾನು ಕಲಿತದ್ದು. ಗಂಟೆಗಟ್ಟಲೆ ಅಭ್ಯಾಸ ಮಾಡಿದ್ದು. ಪಾಲ್‌ವಿಂಚಿನ್ ಅಂಥವರ ಸಿ.ಡಿ ನೋಡಿ ಕರಗತ ಮಾಡಿಕೊಂಡದ್ದು. ಹಾಗೆ ಒಮ್ಮೆ ಮ್ಯಾಜಿಕ್ ಷೋನಲ್ಲಿ ಕೋತಿ ತಗೊಂಡು ಹೋಗಿ ಮಾತಾಡಿಸಿದ್ದು. ಬಳಿಕ ದತ್ತಾ ಅಂಕಲ್ ಅವರು, ರಾಮಸ್ವಾಮಿ ಅವರಿಂದ ಈ ಡಿಂಕು ಗೊಂಬೆ ಕೊಡಿಸಿದರಂತೆ.

'ಈ ಮಾತಾಡೋ ಗೊಂಬೆ ಡಿಂಕು ಜನಪ್ರಿಯನಾದ ನಂತ್ರ, ಮ್ಯಾಜಿಕ್ ಷೋ ಹೊರಗಡೆ ಮಾಡ್ತಾ, ಟಿವಿನಲ್ಲಿ ಡಿಂಕು ಮಾತ್ರ ಬರ್‍ತಾನೆ. ಅದನ್ನೊಂದು ಗೊಂಬೆ ಅನ್ನೋದಕ್ಕಿಂತ ಕ್ಯಾರೆಕ್ಟರ್ ಆಗಿ ಜನ ಸ್ವೀಕರಿಸಿದ್ದಾರೆ. ಅವನು ಹಿಂದು-ಮುಸ್ಲಿಂ-ಕ್ರಿಶ್ಚನ್ ಆಗಿದ್ದಾನೆ. ಸಮಾಜಕ್ಕೆ ಒಳ್ಳೇ ಸಂದೇಶ ಕೊಡೋ ಕೆಲಸ ಮಾಡ್ತಿದ್ದಾನೆ. ಬಾಂಬ್ ಬ್ಲಾಸ್ಟ್ ಬಗ್ಗೆ , ಚಿಕುನ್‌ಗುನ್ಯಾ ಬಗ್ಗೆ ಹೀಗೆ ಸಮಕಾಲೀನ ವಿಷಯಗಳನ್ನೇ ನಾವು ಚರ್ಚಿಸ್ತೀವಿ. ಈ ಕಾನ್ಸೆಪ್ಟ್‌ಗಳಿಗೆ ರಾಮನಾಥ್ ಅಂತ ಒಬ್ಬರು ನನಗೆ ಹೆಲ್ಪ್ ಮಾಡ್ತಾರೆ. ತತ್‌ಕ್ಷಣದ ಪ್ರತಿಕ್ರಿಯೆ-ಸ್ಪಂದನೆ ಇದಕ್ಕೆ ಮುಖ್ಯ. ಲೈವ್ ಶೋನಲ್ಲಿ ಅಂತೂ ಯಾರ್‍ಯಾರೋ ಏನೇನೋ ಪ್ರಶ್ನೆ ಕೇಳ್ತಾರೆ. ಅವುಗಳನ್ನು ನಿಭಾಯಿಸುವ ಸ್ಕಿಲ್ ಬೇಕು' ಅಂತಾಳೆ ಈಕೆ. ಮೂರು ಗೊಂಬೆಗಳ ಜತೆ ಏಕಕಾಲದಲ್ಲಿ ನೀಡಿದ ಪ್ರದರ್ಶನದಿಂದ ಲಿಮ್ಕಾ ರೆಕಾರ್ಡ್ ದಾಖಲಿಸಿದ್ದು ಇಂದುಶ್ರೀ ಹೆಗ್ಗಳಿಕೆ. ಪ್ರತಿ ಶನಿವಾರ `ಸ್ಟಾರ್ ನ್ಯೂಸ್' ಚಾನೆಲ್‌ನಲ್ಲಿ ಲಿಮ್ಕಾ ರೆಕಾರ್ಡ್‌ಗಳ ಬಗ್ಗೆಯೇ `ವಾಹ್ ಇಂಡಿಯಾ' ಎಂಬ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದರಲ್ಲಿ ಕಳೆದ ಆಗಸ್ಟ್‌ನಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಯಿತು. ಅದರಲ್ಲಿ ಎರಡು ಗೊಂಬೆಗಳನ್ನು ಎರಡು ಕೈಗಳಲ್ಲಿ, ಇನ್ನೊಂದನ್ನು ಕಾಲಲ್ಲಿ ಕುಣಿಸಿದರು, ಮಾತಾಡಿಸಿದರು. ಪ್ರತಿಯೊಂದು ಗೊಂಬೆಗೂ ತನ್ನದೇ ದನಿ, ಹಾವಭಾವಗಳು ! ಹೀಗೆ ಮೂರು ಗೊಂಬೆಗಳೂ ಏಕಕಾಲದಲ್ಲಿ ಅಭಿನಯಿಸುತ್ತಾ, ಇಂದುಶ್ರೀಯೂ ಅವುಗಳೊಂದಿಗೆ ಬೆರೆತು ಮಾತಾಡುವುದಕ್ಕೆ ಅಸಾಧಾರಣ ಅಭ್ಯಾಸವೇ ಬೇಕಲ್ಲ. `ಕೆಲವರು ಗೊಂಬೆಗಳನ್ನ ತುಂಬಾ ವಲ್ಗರ್ ಆಗಿ ಯೂಸ್ ಮಾಡ್ತಾರೆ. ನಾನು ಯಾವತ್ತೂ ಹಾಗೆ ಮಾಡಿಲ್ಲ, ಮಾಡೋಲ್ಲ. ಆದರೆ ಎಲ್ಲ ವರ್ಗದ ಜನರಿಗೂ ಇಷ್ಟ ಆಗಬೇಕು ಅನೋದು ನನ್ನಾಸೆ. ಕಾಮಿಡಿ ಇದ್ದಾಗ ಚಿಕ್ಕವರಿಂದ ದೊಡ್ಡವರವರೆಗೆ ಅಟ್ರ್ಯಾಕ್ಟ್ ಆಗ್ತಾರೆ. ಒಮ್ಮೆ ಲೈವ್ ಪ್ರೊಗ್ರಾಮ್‌ನಲ್ಲಿ ಕಾಲ್ ಮಾಡಿದೋರು- ಡಿಂಕು ರಾಜ್‌ಕುಮಾರ್ ಥರಾ. ಯಾವ ಪಾತ್ರ ಹಾಕಿದ್ರೂ ಸೂಟ್ ಆಗತ್ತೆ ಅಂದಿದ್ರು' ಅಂತಾರೆ ಇಂದುಶ್ರೀ. ಕೆಂಪೇಗೌಡ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ, ಸೌಂದರ್ಯ ಪ್ರಶಸ್ತಿ ಹೀಗೆ ಹತ್ತಾರು ಸನ್ಮಾನಗಳು ಇವರಿಗೆ ಸಂದಿವೆ. ಕಳೆದ ವರ್ಷ ಮೈಸೂರು ದಸರಾದ ಹಾಸ್ಯೋತ್ಸವದಲ್ಲಿ `ಮಾತಾಡುವ ಗೊಂಬೆ' ಕಾರ್ಯಕ್ರಮಕ್ಕೆ ದೊರೆತ ಅಮೋಘ ಪ್ರತಿಕ್ರಿಯೆ ಇವರಿಗೆ ಸದಾ ನೆನಪು.

ಶಾಲೆಗೆ ಹೋಗ್ತಿದ್ದಾಗ ಸೈಂಟಿಸ್ಟ್ ಆಗಬೇಕು ಅಂತ ಕನಸು ಕಾಣುತ್ತಿದ್ದ ಇಂದುಶ್ರೀ, ಈಗ ಅಪ್ಪ ,ಅಮ್ಮ ಹಾಗೂ ತಮ್ಮನೊಡಗೂಡಿ ಮೂರ್‍ನಾಲ್ಕು ಗಂಟೆಗಳ ಮ್ಯಾಜಿಕ್ ಕಾರ್ಯಕ್ರಮ ಕೊಡುತ್ತಾರೆ. ಹೀಗೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ೨,೮೦೦ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಮಲಹಾಸನ್ ಸ್ಫೂರ್ತಿಯಿಂದ `ಡಿಂಕೂಸ್ ದಶಾವತಾರಂ' ನಡೆಸಿರುವ ಈಕೆ, ಸ್ವಲ್ಪ ಮಟ್ಟಿಗೆ ಹಾಡುತ್ತಾ, ಸಂಗೀತ ಸಾಧನಗಳನ್ನು ನುಡಿಸುತ್ತಾ, ಪೇಂಟಿಂಗ್ ಚೆನ್ನಾಗಿ ಮಾಡುವ ದಶಾವತಾರಿಯೇ. ಡಿಂಕು ಗೊಂಬೆಯು ಕೃಷ್ಣನಾಗಿ, ಡಿಂಕಾನಂದ ತೀರ್ಥಾನಂದ ಸ್ವಾಮೀಜಿಯಾಗಿ ಬಂದಾಗಲೆಲ್ಲ ಬಹಳ ಜಾಗ್ರತೆ ಬೇಕು. ತಮಾಷೆ ನೆಪದಲ್ಲಿ ಸ್ವಲ್ಪ ತುಟಿ ಮೀರಿದರೂ ಅದು ಸಮಸ್ಯೆ ಸೃಷ್ಟಿಸಬಹುದೆಂಬ ಎಚ್ಚರ ಇವರಿಗಿದೆ. ಇವರ ಪ್ರದರ್ಶನದ ಯಶಸ್ಸಿರುವುದು ಧ್ವನಿಯ ಮಾಂತ್ರಿಕತೆಯಲ್ಲಿ ಮತ್ತು ಸಂದರ್ಭಗಳನ್ನು ನಿರೂಪಿಸುವ ಜಾಣ್ಮೆಯಲ್ಲಿ. ಯಾವುದೋ ಸಿನಿಮಾ, ನಾಟಕದ ದೃಶ್ಯಗಳನ್ನು ಅನುಕರಿಸದೆ, ಹೊಸ ಹೊಸ ಹಾಸ್ಯ ದೃಶ್ಯಗಳನ್ನು ಹೆಣೆಯುವುದು ಇವರ ವೈಶಿಷ್ಟ್ಯ. ಅವುಗಳನ್ನು ಧ್ವನಿ ಚಮತ್ಕಾರದೊಂದಿಗೆ ಬೆಳೆಸುತ್ತಾ ಹಾಸ್ಯದ ಪಂಚಿಂಗ್ ಮತ್ತು ತೀವ್ರ ಪ್ರತ್ಯುತ್ಪನ್ನ ಮತಿತ್ವ ಕಾರ್‍ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ. ಯಾವುದೇ ಕಾರ್ಯಕ್ರಮವಾಗಿರಲಿ, ಯಾವುದೇ ವಿಷಯವಾಗಿರಲಿ, ಡಿಂಕು ಜತೆ ಇಂದುಶ್ರೀ ಬಂದರೆಂದರೆ ನಗೆ ಹೊನಲು ಗ್ಯಾರಂಟಿ. ಐದು ಗೊಂಬೆಗಳನ್ನು ಏಕಕಾಲದಲ್ಲಿ ಮಾತನಾಡಿಸಿ ಗಿನ್ನಿಸ್ ದಾಖಲೆ ಮಾಡಬೇಕೆಂಬ ಆಸೆ ಇಂದುಶ್ರೀಗೆ, ಗುಡ್‌ಲಕ್ ಅನ್ನಿ.

Read more...

November 12, 2008

ಮಹಾಬಲ ಹೆಗಡೆ ಮಹೋತ್ಸವ

ಹೊನ್ನಾವರ ತಾಲೂಕಿನ ಅಣಿಲಗೋಡ ಎಂಬ ಊರಿನಲ್ಲಿ ಅಂದು ಆಟ. ಸಂಜೆ ಜೋರಾಗಿ ಮಳೆ ಬಿದ್ದುದರಿಂದ ಜನ ಸೇರಿರಲಿಲ್ಲ. ಮೇಳದ ಯಜಮಾನರಾದ ಕೆರೆಮನೆ ಶಿವರಾಮ ಹೆಗಡೆಯವರು ಏನೋ ತೊಂದರೆಯಿಂದ ಬಂದಿರಲಿಲ್ಲ. ಆಗ ಭಾಗವತರೂ, ಮಹಾಬಲ ಹೆಗಡೆಯವರೂ ಸೇರಿ ಮಾತನಾಡಿ ಆ ದಿನ ಆಟವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು. ಆದರೆ ಕೆಲ ಮುಖಂಡರು ‘ನೀವು ಆಟ ಆಡಲೇಬೇಕು. ಇಲ್ಲದಿದ್ದರೆ ನಿಮ್ಮ ಸಾಮಾನುಗಳನ್ನು ಇಲ್ಲಿಂದ ಒಯ್ಯಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಕಲಾವಿದರ ಮೇಲೆ ಸತ್ತೆ ನಡೆಸುವ ಇವರ ರೀತಿಯಿಂದ ರೋಸಿಹೋದ ಮಹಾಬಲ ಹೆಗಡೆಯವರು ಮುಖಕ್ಕಿಷ್ಟು ಬಣ್ಣ ಮೆತ್ತಿಕೊಂಡು ಇದ್ದ ಕ್ರಾಪನ್ನೇ ಬಾಚಿ, ಒಂದು ಹ್ಯಾಂಡ್‌ಬ್ಯಾಗ್, ಕೊಡೆ ಹಿಡಿದು ‘ನಾನು ವಿಶ್ವಾಮಿತ್ರ, ತಪಸ್ಸಿಗೆ ಹೊರಟಿದ್ದೇನೆ’ ಎಂದು ‘ಹುಚ್ಚುಹೋಳಿ’ ಎಬ್ಬಿಸಿಬಿಟ್ಟರು. ಹಟ ಹಿಡಿದವರು ಎಂದೂ ಮರೆಯದಂತೆ ಮಾಡಿದರು.ಆಗಲೇ ಅವರಿಗೆ ಅಂದಿನ ಹಿರಿಯ-ಶ್ರೇಷ್ಠ ಕಲಾವಿದ ಮೂಡ್ಕಣಿ ನಾರಾಯಣ ಹೆಗಡೆಯವರ ಪರಿಚಯವಾಗಿತ್ತು. ಯಕ್ಷಗಾನ ಕುಟುಂಬದವನೇ ಆದ ಮಹಾಬಲರನ್ನು ಅವರೂ ಬಲ್ಲರು. ಅವರ ಬಗ್ಗೆ ಪ್ರೀತಿಯೂ ಇತ್ತು. ಯಾವಾಗಾದರೊಮ್ಮೆ ಮೂಡ್ಕಣಿ ಹೆಗಡೆಯವರ ಮನೆಗೆ ಹೋಗುತ್ತಿದ್ದ ಮಹಾಬಲರು ಒಮ್ಮೆ ಮೂಡ್ಕಣಿಗೆ ಹೋದಾಗ ಅವರಿಂದ ಮೂರು ಪ್ರಸಂಗ ಪಟ್ಟಿಗಳನ್ನು ತಂದುಕೊಂಡಿದ್ದರು. ಅವುಗಳನ್ನು ಓದಿದ್ದೂ ಆಯಿತು. ತಿರುಗಿ ಕೊಡುವಾಗ ಈ ಕಿಡಿಗೇಡಿ ಹುಡುಗ ಆ ಪ್ರಸಂಗಗಳಲ್ಲಿ ತಾನು ಮಾಡಬಹುದಾದ (ಮಾಡಬೇಕೆನಿಸಿದ) ಮೂರು ಪಾತ್ರಗಳಿಗೆ ಸಂಬಂಧಿಸಿದ ಪುಟಗಳನ್ನಷ್ಟೇ ಹರಿದು ವಾಪಸ್ಸು ತೆಗೆದುಕೊಂಡು ಹೋಗಿ ಕೊಟ್ಟ. (ಎಲ್.ಎಸ್.ಶಾಸ್ತ್ರಿ ಅವರು ಬರೆದಿರುವ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯಿಂದ ಆಯ್ದ ಭಾಗಗಳು)

***
ನವಂಬರ್ ೧೬ರ ಭಾನುವಾರದ ಬೆಳಗ್ಗೆ ೧೦ ಕ್ಕೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಮಹಾಬಲ ಹೆಗಡೆ ಮಹೋತ್ಸವ. ಅವರ ಜೀವನಕಥನದ ಪುಸ್ತಕ-ವೆಬ್‌ಸೈಟ್ ಬಿಡುಗಡೆ, ಸಾಕ್ಷ್ಯಚಿತ್ರ-ಛಾಯಾಚಿತ್ರ ಪ್ರದರ್ಶನ. ಮಾಯಾರಾವ್, ಶಂಭು ಹೆಗಡೆ, ಪ್ರಭಾಕರ ಜೋಶಿ ಮೊದಲಾದವರು ಭಾಗವಹಿಸುತ್ತಾರೆ.

Read more...

November 09, 2008

ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?

೨೧-೪-೧೯೮೩
ಪ್ರೀತಿಯ ಪ್ರೇಮ,
ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ,  ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು.

ರಾತ್ರಿ ಹತ್ತು ಗಂಟೆ ಕಳೆದಿರಬೇಕೀಗ. ನಿನ್ನೆ ನಾಲ್ಕು ಹನಿ ಮಳೆ (೮ ಸೆಂಟ್ಸ್ ನಮ್ಮ ಭಾಷೆಯಲ್ಲಿ ಹೇಳುವುದಾದರೆ) ಬಿತ್ತು. ನಾಳೆ ಹಲಸಿನ ಹಣ್ಣು ಪಾಯಸ ಮಾಡ್ತೇವೆ, ಬರ್‍ತೀರಾ? ನಮ್ಮಲ್ಲಿ ಮಳೆ ಬೀಳದೆ ತೋಟದಲ್ಲಿ ಕೆಲಸವಿಲ್ಲ. sprinkler ಹಾಕಿಸ್ತಾ ಇದ್ದಾರೆ. ನನಗೆ ಮನೆಯಲ್ಲೀಗ ನಿಮಿಷ ಪುರುಸೊತ್ತು ಇಲ್ಲ. ಉಮ ಇಲ್ಲದೇ ದಿನ ಆ ಗದ್ದೆ ಹತ್ತಿರ ಹೋಗಬೇಕಾಗುತ್ತದೆ. ನಿತ್ಯ ಬೆಳಗ್ಗೆ ಕಾಫಿ-ತಿಂಡಿ ಕಾರ್ಯಕ್ರಮ ಮುಗಿಸಿ, ಒಲೆಯಲ್ಲಿ ಏನಾದರೂ ಬೇಯುವುದಕ್ಕಿಟ್ಟು ಸರೀ ೮ ಗಂಟೆಗೆ ಹೊರಟೆನಾದರೆ, ಮನೆಗೆ ಬರುವಾಗ ೯ ಗಂಟೆ. ಬಟ್ಟೆ ಹೊಲಿಯುವುದೂ ತುಂಬ ಉಂಟು, ಮದುವೆ ಸೀಸನ್ ನೋಡು.

ನಿನಗೇನು, ದೊಡ್ಡ ಕುಂಬಳಕಾಯಿ ಸೋದರತ್ತೇಂತ ಬಡಾಯಿ ಕೊಚ್ಚು . ನಾನೂ ಸಾ ಅತ್ತೆ ಆಗ್ತೇನೆ ಒಂದಲ್ಲ ಒಂದು ದಿನ ನೋಡ್ತಾ ಇರು !ನೀನಲ್ಲೇ ಬಿದ್ದಿರು. ಇಲ್ಲಿಗೆ ಬರ್‍ಬೇಡ. ಇಲ್ಲಿ ರಾಶಿ ರಾಶಿ ಮಲ್ಲಿಗೆ ರಾಶಿ. ಅದರ ಜತೆಗೆ ರಂಜದ ಹೂವಿನ ಮಾಲೆಯೂ ಮುಡಿಪ್ಪೆತ್ತುವುದೀಗ. ಕೆಲಸದವರ ಮಕ್ಕಳು ನನ್ನ ಜತೆಗೆ ಗದ್ದೆಗೆ ಬರ್‍ತಾರೆ. ತೋಟದಲ್ಲಿ ಮರದ ಹತ್ತಿರ ಹೂವು ಹೆರ್‍ಕಲು ಅವರನ್ನು ಬಿಟ್ಟು ನಾನು ಓಟ. ಮನೆಗೆ ಹೂವು ತಂದರೆ ಅಮ್ಮ ಸುರಿದು ಕೊಡ್ತಾಳೆ. ನಿನ್ನ ಅತ್ತಿಗಮ್ಮ ನಿನಗೆ ಕೈಕೊಟ್ಟದ್ದಕ್ಕೆ-ನೀನೇ ಅವಳ ಅತ್ತಿಗಮ್ಮ ಆದರೆ ಆದೀತಂತೆ. ಟಾರ್ಚ್ ಇಲ್ಲದೇ ಹುಡುಕಿ ಹುಡುಕಿ ಅವಳಣ್ಣನಿಗೀಗ- ಈ ವರ್ಷ ಜೀವನ್ ಸಾಥೀ ಸಿಕ್ಕಲೇ ಇಲ್ಲ.

೧.೫.೮೩. ಪ್ರೇಮ, ತಿಂಗಳು ನಾಲ್ಕು ಕಳೆದು ಐದೂ ಆಯ್ತು, ನನಗಲ್ಲಿ ೮೩ನೇ ಇಸವಿಗೆ. ನಿನ್ನ ಅಕ್ಕ, ಭಾವ ನಿನ್ನೆ ಬಂದು ವಕ್ಕರಿಸಿದ್ದಾವೆ. ನಾನು ಮನೆ ಎಲ್ಲ ಚಂದ ಮಾಡಿ ನೀಟ್ ಆಗಿ ಇಟ್ಟುಕೊಂಡಿದ್ದೆ. ಈ ದಿನಗಳಲ್ಲಿ ಇವು ಬಂದು, ಆಟದವರ ಡೇರೆ ಮಾಡಿ ಹಾಕಿದ್ದಾವೆ. ಇಡೀ ಮನೆ ತಂತಿ-ಹಗ್ಗ. ಅಲ್ಲಿಇಲ್ಲಿ ಬಟ್ಟೆ ರಾಶಿ-ನೇತ್ಹಾಕಿದ್ದಾವೆ. ನೀನ್ಯಾಕೆ ಕತ್ತೆ ನನಿಗೆ ಬಯ್ತಾ ಕೂತದ್ದು? ಇಕೊ ಇನ್ನೂ ಇನ್ನೂ ಬಯ್ದರೆ, ನಿನಗೆ ಡಾರ್ಜಿಲಿಂಗ್ ಇರಲಿ, ಡೆಹ್ರಾಡೂನ್‌ಗೂ ಕೈಕೊಡ್ತೇನೆ. ನನ್ನ influence ನಿಂದ ಆಗುವಂತದ್ದು-ಬೇಕಿದ್ದರೆ ನನಗೆ ಸಲಾಂ ಹಾಕ್ತಾ ಇರು ! (ನಿನ್ನ ಪುಟ್ಟಕ್ಕನನ್ನು ವಿಚಾರಿಸಿಕೋ ಡೆಹ್ರಾಡಬ್ ಸೆಟ್ಟು ಯಾವುದೂಂತ. ಅದು ನೋಡಿ ಮಾತಾಡಿ ಬಂದದೆ.) ನಾನು ಅಲ್ಲಿಂದ ಬಂದ್ಮೇಲೆ ಬರ್‍ದ ಕಾಗದಕ್ಕೆ ನೀನೇ ಉತ್ತರ ಕೊಡ್ಲಿಲ್ವಾಂತ? ಅತ್ತೆಮ್ಮನಿಗೆ ೮೦ ಪೈಸೆ ಚಿಲ್ರೆ ಲೆಖ್ಖ ಕೊನೆಗೂ ಸಿಕ್ಕಿತಾ?

ನಮ್ಮ ಪೂ...ಪೂರ್ಣಿಮಾ ಎಂತ ಮಾಡ್ತೆ? ಅದರ ಅಮ್ಮನಿಗೆ ರವಿಕೆಗಳನ್ನು ಹೊಲಿದ ಬಗ್ಗೆ ಕೊಚ್ತಾ ಇತ್ತು ರಾಧೆ ಇಲ್ಲಿ. ನಿನ್ನಕ್ಕನೀಗೀಗ ಭಾರೀ ಬಡಾಯಿ. ಯಾಕೆಂದರೆ...ತಾನೊಂದು ದೊಡ್ಡ ಜನ...ಎಲ್ಲವೂ ತನ್ನತ್ರವೇ ವಿಷಯ ಕೇಳ್ತಾವೇಂತ. ಸರಸ್ವತಿ ಮನೆ ಬಿಸಿನೀರು ಕಡುಬು, ದೂರ್ ಸೆಂಟರ್ ಪಾಯಸ ಎಲ್ಲಾ ಸಿಕ್ಕೀತಾ ನನಗೆ ಮತ್ತೆ ಬಂದರೆ? ಏ ಪ್ರೇಮ, ನೀನು ಆವತ್ತು ಕಳಿಸಿದ್ದ ನೆಕ್ಕರೆ ಮಾವಿನಕಾಯಿ ನಿನ್ನ ಅತ್ತಿಗಮ್ಮನಿಗೂ ತಿನ್ನಲು ಕೊಟ್ಟಿದ್ದೇನೆ. ರಾಧೆ ಕಂತ್ರಿ ತರ್‍ಲೇ ಇಲ್ಲ. ಬಂದದ್ದು ನೋಡಿದ್ರೆ ಬೆಂಗ್ಳೂರಿಂದ. ತಂದದ್ದು ಬದ್ನೆಕಾಯಿ ಎಂತದ್ದೂ ಇಲ್ಲ. ಉಮ ೩ ಬುಕ್ಸ್ ತಂದಿದ್ದಾನೆ.  ತಾಯಿ, ಮೃತ್ಯುಂಜಯ, ಇನ್ನೊಂದು. ಹೆಸ್ರೂ ಮರ್‍ತೋಯ್ತ.

ದೇರಜ್ಜಮ್ಮ ಹೇಗುಂಟು? ಮರಿ ಮಗನನ್ನೂ ನೋಡಿ ಆಯ್ತಾ? ನನಗೀಗ ತುಂಬ ಹೊಟ್ಟೆಕಿಚ್ಚು ನಿಮ್ಮ ಮೂವರಲ್ಲಿ. ನೀವೆಲ್ಲ ಸೋದರತ್ತೆ ಆಗಿಬಿಟ್ಟಿರಿ. ನಾನು ಇನ್ನೂ ಆಗಲಿಲ್ಲ ಅಂತ. ಗಾಯತ್ರಿ ಅಕ್ಕನ ಮದುವೆಲಿ ಉಷಾ ಹೇಳಿದಳು, ಹೋದ ವರ್ಷ ಈ ತಿಂಗ್ಳಲ್ಲಿ ಗೌರಿಪೂಜೆ ಮಾಡ್ದವ್ರೆಲ್ಲ ಈ ವರ್ಷ ಗಣಪತಿ ಕೂರ್‍ಸಿದ್ದೇವೆ. ರಾಧ ಒಬ್ರೆ ಬಾಕಿ. ಗಾಣದಹಳ್ಳಿ ಪಟಾಲಾಂ ಬಂದಿತ್ತು ಮದುವೆಗೆ. ನಮ್ಮದೇ ಗಲಾಟೆ. ಇನ್ನೀಗ ೬ಕ್ಕೆ ಸುನಂದನ ಮದುವೆಯಲ್ಲಿ ಒಂದು ಸಂಭ್ರಮ. ಬರ್‍ತೀಯಾ ಅಕ್ಕನ ಜೊತೆ? ಪ್ರೇಮ, ನಾಳೆ ವಾಟೆಗಂಡಿಗೆ ( ಮಧ್ಯಾಹ್ನದ ಮನರಂಜನೆ ಮನೆ ಅಲ್ಲ) ಪೂಜೆಗೆ ಹೋಗ್ತಾರೆ ಉಮ, ರಾಧೆ. (ನಾನು ಚಕ್ಕರ್). ಗಂಟೆ ೧೦ ಕಳೆದಿದೆ. ಈ ರಾಧೆ ಇದ್ರೆ ನಮ್ಮ ಮನೆಗೆಲಸ ಮುಗಿಯುವುದೆಂದಿಲ್ಲ. ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ? ಹುಡುಗಿಯರನ್ನು ಕಂಡರೆ ಕರುಬುವವ? (ಅಲ್ಲ ಕರಗುವವ).
ಇಂತು ನಿನ್ನ
ಪ್ರಮೋದತ್ತಿಗೆ.
(ಜಯನಿಗೆ ತಿಳಿಸು. ಮೊನ್ನೆ ಅದರ ಹಾರ್ಲೆ ಗಣೇಶನಿಗೆ ಕಾರಾಟ ತೂರಾಟ ಸಖತ್!)

***
ನಮ್ಮೆಲ್ಲರ ಎದೆಯ ತಂಬೂರಿ ಶೃತಿಗೊಳಿಸುವ ಸಾಮರ್ಥ್ಯ ಈ ಪತ್ರಗಳಿಗಿದೆ. ಮದುವೆಯಾಗದ, ವಯಸ್ಸಿಗೆ ಬಂದ ಹೆಣ್ಣೊಬ್ಬಳು ತನ್ನ ಬಂಧು-ಸಮಾನಮನಸ್ಕೆಗೆ ಬರೆದ ಈ ಕಲರ್‌ಫುಲ್ ಪತ್ರ ನನಗಂತೂ ತುಂಬಾ ತುಂಬಾ ಖುಶಿ ಕೊಟ್ಟಿತು. ನಿಮಗೇನನಿಸಿತು? ಕಾಗ್ದ ಬರೀತೀರಾ?! (ಫೋಟೊ : ವಿನ್ಯಾಸ ಉಬರಡ್ಕ)  

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP