March 30, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೨

ಪ್ರಸಾದ್ ರಕ್ಷಿದಿಯವರ ಹಳ್ಳಿ ಥೇಟರ್ ಮುಂದುವರಿಯುತ್ತಿದೆ.
'ಕ್ಷ್ಮಯ್ಯ ಚಕ್ಕೋತ್ನಣ್ಣು' ಎಂದೆ. 'ಮಧ್ಯಾಹ್ನ ಬೇಗ ಬರ್‍ತೀನಿ ಹೋಗಾಣ' ಯಾಕೋ ಲಕ್ಷ್ಮಯ್ಯ ಹೆಚ್ಚು ಮಾತಾಡಲಿಲ್ಲ- 'ನೀನು ಹೋಗು ಮನೆಗೆ ' ಅಂದುಬಿಟ್ಟ. ಇವನಿಗಿನ್ನೂ ಅಪ್ಪನ ಮೇಲಿನ ಸಿಟ್ಟು ಇಳಿದಿಲ್ಲವೆಂದೂ, ಇವನು ಮಧ್ಯಾಹ್ನ ಬಂದು ನನ್ನನ್ನು ಚಕ್ಕೋತದ ಹಣ್ಣಿಗಾಗಿ ಕರೆದೊಯ್ಯುವುದಿಲ್ಲವೆಂದೂ ಅಂದುಕೊಂಡೆ- ಬೇಸರವಾಯ್ತು. ಮಧ್ಯಾಹ್ನವಾದಂತೆ ಸಂತೆಗೆ ಹೋದ ಲಕ್ಷ್ಮಯ್ಯನ ದಾರಿ ಕಾಯುತ್ತ ಕುಳಿತೆ. ಗಂಟೆ ಮೂರಾದರೂ ಲಕ್ಷ್ಮಯ್ಯನ ಸುಳಿವೇ ಇಲ್ಲ. ಅಮ್ಮನಲ್ಲಿ ದೂರಿಕೊಂಡೆ. 'ಅಪ್ಪ ಬೈದದಕ್ಕೆ ಲಕ್ಷ್ಮಯ್ಯ ಬಂದಿಲ್ಲ, ನಂಗೆ ಚಕ್ಕೋತನ ಹಣ್ಣು ಕೊಯ್ದುಕೊಡ್ತೇನೆ ಅಂತ ಹೇಳಿದ್ದ.' 'ನಾನು ಅಪ್ಪನತ್ರ, ಬೇರೆ ಯಾರಿಗಾದ್ರೂ ಹೇಳಿ ತರ್‍ಸಿ ಕೊಡಲು ಹೇಳ್ತೇನೆ. ಯಾಕೋ ಇತ್ತೀಚೆಗೆ ಲಕ್ಷ್ಮಯ್ಯನಿಗೂ ಸ್ವಲ್ಪ ಹಾಂಕಾರ ಬಂದ್ಹಾಗೆ ಕಾಣ್ತೆ.' ಅಮ್ಮ- ಅಪ್ಪನ ಪರ ವಹಿಸಿದಳು. ನನಗೆ ಸಮಾಧಾನವಾಗಲಿಲ್ಲ. ನಾಲ್ಕು ಗಂಟೆಯ ಹೊತ್ತಿಗೆ ಲಕ್ಷ್ಮಯ್ಯ ಸಂತೆಯಿಂದ ಮೂಟೆ ಹೊತ್ತುಕೊಂಡು ಬಂದ.

ಅಪ್ಪ ಪೇಟೆಯಿಂದ ತರಲು ಹೇಳಿದ್ದ ಸಾಮಾನುಗಳನ್ನೆಲ್ಲ ತಂದಿದ್ದ. ಅವನು ಸಾಮಾನಿನ ಹೊರೆ ಹೊತ್ತುಕೊಂಡು ತನ್ನ ಮನೆಯತ್ತ ಹೊರಟಾಗ- ನಾನೂ ಅವನನ್ನು ಹಿಂಬಾಲಿಸಿ ಹೋದೆ. ಲಕ್ಷ್ಮಯ್ಯ ಮೂಟೆಯನ್ನು ತಲೆಯಿಂದ ಕೆಳಗಿಳಿಸಿ ಕಟ್ಟು ಬಿಚ್ಚುತ್ತಿರುವಾಗ 'ನೀನು ಬೇಗ ಬಂದಿಲ್ಲ, ಇನ್ನೀಗ ಸಾಯಂಕಾಲ ಆಯ್ತು, ನಾಳೆ ನೀನು ಕೆಲಸಕ್ಕೆ ಹೋಗ್ತೀಯ ಮತ್ತೆಲ್ಲಿಂದ ಚಕ್ಕೋತ್ನಣ್ಣು' ನಾನು ರಾಗ ತೆಗೆದೆ. 'ನೋಡಿಲ್ಲಿ' ಲಕ್ಷ್ಮಯ್ಯ ಮೂಟೆಯೊಳಗಿಂದ ಮೂರು ನಾಲ್ಕು ಚಕ್ಕೋತ ಹಣ್ಣುಗಳನ್ನು ಹೊರತೆಗೆದ. 'ಬರುವಾಗ ತಡವಾಯ್ತಲ್ಲ ಅಂತ ದಾರಿಲೇ ಇಳ್ದು ಹೋಗಿ ಕುಯ್ಕೊಂಡು ಬಂದೆ.' ಸಕಲೇಶಪುರದಿಂದ ನಮ್ಮಲ್ಲಿಗೆ ಬರುವವರು ಸಾಮಾನ್ಯವಾಗಿ ರಕ್ಷಿದಿಯಲ್ಲೇ ಬಸ್ಸಿನಿಂದಿಳಿದು ಬರುತ್ತಿದ್ದರು. ಆದರೆ ಅದಕ್ಕೂ ಹಿಂದಿನ ನಿಲ್ದಾಣವಾದ ಗಾಣದಹೊಳೆಯಲ್ಲೇ ಬಸ್ಸಿನಿಂದ ಇಳಿದರೆ, ಮಾವಿನ ಕೂಲಿನ ಮೂಲಕ ನಮ್ಮಲ್ಲಿಗೆ ಬರಲೊಂದು ಒಳದಾರಿಯಿತ್ತು. ಗಾಣದಹೊಳೆಯಿಂದ ಎಸ್ಟೇಟಿಗೆ ಬರುವ ಕೆಲಸಗಾರರು ಈ ದಾರಿಯಲ್ಲಿ ನಡೆದು ಬರುತ್ತಿದ್ದರು. ಇದು ರಕ್ಷಿದಿಯಿಂದ ಬರುವ ದಾರಿಗಿಂತ ಸ್ವಲ್ಪ ಹೆಚ್ಚು ದೂರವಾಗುತ್ತಿತ್ತು. ಈ ದಾರಿಯ ಪಕ್ಕದಲ್ಲೆಲ್ಲೋ ಚಕ್ಕೋತದ ಮರಗಳಿದ್ದವು. ಲಕ್ಷ್ಮಯ್ಯ ಗಾಣದಹೊಳೆಯಲ್ಲೇ ಬಸ್ಸಿನಿಂದಿಳಿದು ಸಾಮಾನಿನ ಮೂಟೆಯನ್ನೂ ಹೊತ್ತುಕೊಂಡು- ಒಳದಾರಿಯಲ್ಲೇ ಬಂದು ನನಗಾಗಿ ಚಕ್ಕೋತದ ಹಣ್ಣುಗಳನ್ನು ಕೊಯ್ದು ತಂದಿದ್ದ. ನನಗೆ ಹಣ್ಣುಗಳನ್ನು ಕಂಡು ಖುಷಿಯಾದರೂ ನಾನೇ ಚಕ್ಕೋತದ ಮರಗಳಿರುವ ಜಾಗಕ್ಕೆ ಹೋಗಬೇಕೆಂದಿದ್ದುದರಿಂದ 'ನೀನು ತಂದಿದ್ದಲ್ಲ, ನಾನೇ ಮರಹತ್ತಿ ಕುಯ್ಬೇಕಿತ್ತು' ಎಂದೆ. 'ಮುಂದಿನ ವಾರ ಹೋಗೋಣ, ಇಲ್ಲ ನಾಳೆ ಬೇಗ ಕೆಲ್ಸ ಆದ್ರೆ ನಾಳೆನೇ ಹೋಗೋಣ' ಎಂದು ತಂದಿದ್ದ ಚಕ್ಕೋತಗಳನ್ನು ಎರಡೆರಡನ್ನು ಸೇರಿಸಿ ಕಡ್ಡಿ ಚುಚ್ಚಿ- ಹಿಡಿದುಕೊಂಡು ಹೋಗಲು ಅನುಕೂಲವಾಗುವಂತೆ ಮಾಡಿಕೊಟ್ಟ- ನಾನು ಅವುಗಳನ್ನು ಡಂಬೆಲ್ಸ್‌ನಂತೆ ಕೈಗಳಲ್ಲಿ ಹಿಡಿದು ತಿರುಗಿಸುತ್ತಾ ಮನೆಯತ್ತ ಹೊರಟೆ. ಅಷ್ಟರಲ್ಲಿ ಲಕ್ಷ್ಮಯ್ಯ 'ಪ್ರಸಾದು ನಿಲ್ಲು ನಿಂಗೇಂತ ತಿಂಡಿ ತಂದಿದೀನಿ' ಎಂದು ಚೀಲದಿಂದ ಒಂದು ಕಾಗದದ ಪೊಟ್ಟಣ ತೆಗೆದ. ಅವನು ಸಂತೆಯಿಂದ ಪಕೋಡ ತಂದಿದ್ದ. ಮನೆಯಲ್ಲಿ ಗೊತ್ತಾದರೆ ಅಮ್ಮ ನನಗೆ ಸಂತೆ ತಿಂಡಿ ತಿನ್ನಲು ಬಿಡುತ್ತಿರಲಿಲ್ಲ. ಆದ್ದರಿಂದ ಪಕೋಡದ ಆಸೆಗೆ ಅಲ್ಲೇ ಕುಳಿತೆ.ನಾನು ಪಕೋಡ ತಿನ್ನುತ್ತಿರುವಾಗ ಲಕ್ಷ್ಮಯ್ಯ ಚೀಲದಿಂದ ಇನ್ನೊಂದು ಕಟ್ಟು ತೆಗೆದು ಮೆಲ್ಲನೆ ಬಿಚ್ಚಿದ.

ಅದರಲ್ಲಿ ಒಂದು ಸ್ಲೇಟು ಮತ್ತು ಬಳಪದ ಕಟ್ಟು ಇದ್ದವು. 'ಯಾರಿಗಪ್ಪ ಸ್ಲೇಟು ಬಳಪ ?!' 'ನಂಗೇಯ' 'ನೀನು ಬರಿತೀಯ?' 'ನೋಡು ಪ್ರಸಾದು, ನೀನು ನಂಗೆ ಬರಿಯೋದು ಹೇಳ್ಕೊಡು-ಆದರೆ ಯಾರಿಗೂ ಹೇಳ್ಬಾರ್ದು, ಗುಟ್ಟಾಗಿರ್‍ಬೇಕು. ನಾನು ಯಾವಾಗ್ಲೂ ನಿಂಗೆ ತಿಂಡಿ ತಂದ್ಕೊಡ್ತೀನಿ'. ನನಗೂ ಒಂದು ರೀತಿಯ ವಿಚಿತ್ರ ಖುಷಿ ಆಯ್ತು. 'ಸರಿ, ಏನೇನು ಕಲೀತೀಯ?' 'ಮೊದ್ಲು ರುಜು ಹಾಕದು ಕಲೀತೀನಿ' 'ನಂಸ್ಕೂಲಲ್ಲಿ ಮೇಷ್ಟ್ರು ಹೇಳ್ತಿರ್‍ತಾರೆ-ಊರಿನ ಹೆಸರು-ಬಸ್ಸಿನ ಬೋರ್ಡು ಓದೋವಷ್ಟಾದ್ರೂ ಕಲಿಬೇಕಂತೆ, ಇಲ್ದಿದ್ರೆ ಏನೂ ಪ್ರಯೋಜನ ಇಲ್ವಂತೆ.' 'ಸರಿ ಮತ್ತೆ ಅಷ್ಟೂ ಹೇಳ್ಕೊಡು-ಇವತ್ತಿಂದ್ಲೇ'-ಲಕ್ಷ್ಮಯ್ಯ ಅವಸರದಲ್ಲಿದ್ದ. ನಾನು ಮನೆಗೆ ಹೋಗಿ ಚಕ್ಕೋತಗಳನ್ನು ಇಟ್ಟು ಬರುವಾಗ, ಲಕ್ಷ್ಮಯ್ಯ ಒಂದು ಸೀಮೆಸೀಗೆ (ಲಂಟಾನ) ಕೋಲನ್ನು ಮುರಿದು ತಂದಿಟ್ಟಿದ್ದ. ನಮ್ಮ ಶಾಲೆಯಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಮೇಷ್ಟ್ರುಗಳು ಸೀಮೇಸೀಗೆ ಕೋಲಿನಲ್ಲಿ ಹೊಡೆಯುತ್ತಿದ್ದರು. 'ಸರಿಯಾಗಿ ಹೇಳ್ಕೊಡದಿದ್ರೆ ಹೊಡಿತೀಯೇನೋ !?' ಗಾಬರಿಯಲ್ಲಿ ಕೇಳಿದೆ. 'ಇಲ್ಲ-ನೀನೀಗ ನನಗೆ ಮೇಷ್ಟ್ರು ನಾನು ಸರಿಯಾಗಿ ಕಲೀದಿದ್ರೆ ಹೊಡಿ' ಎಂದು ಕೋಲನ್ನು ನನ್ನ ಮುಂದೆ ಇಟ್ಟು ಶಿಷ್ಯನಾಗಿಬಿಟ್ಟ. ಒಂದು ಕ್ಷಣ ನಾನು ಮೇಷ್ಟ್ರಾದಂತೆ ಕೋಲನ್ನು ಝಳಪಿಸುತ್ತ ಕ್ಲಾಸಿನಲ್ಲಿ ಅಡ್ಡಾಡಿದಂತೆ ಅನ್ನಿಸಿ ಸಂತೋಷವಾಯಿತು.ಲಕ್ಷ್ಮಯ್ಯನ ಅಕ್ಷರಾಭ್ಯಾಸ ಗುಟ್ಟಾಗಿ ಪ್ರಾರಂಭವಾಯಿತು. ಅವನು ಪ್ರತಿದಿನ ಬಿಡುವಿನ ವೇಳೆಯಲ್ಲಿ ಸ್ಲೇಟಿನಲ್ಲಿ ಅಕ್ಷರ ತಿದ್ದತೊಡಗಿದ.

ಬೇಸಗೆಯಾದ್ದರಿಂದ ಕೆಲಸ ಮುಗಿದ ಮೇಲೆ ಸಂಜೆಯ ಹೊತ್ತಿಗೆ ಗಂಡಾಳುಗಳೆಲ್ಲ ಎತ್ತಿನ ಹಳ್ಳಕ್ಕೆ ಸ್ನಾನಕ್ಕೆ ಹೋಗುತ್ತಿದ್ದರು. ಅವರೊಂದಿಗೆ ನಾನೂ ಹೋಗುತ್ತಿದ್ದೆ. ಲಕ್ಷ್ಮಯ್ಯನೂ ನಾನೂ ಹೊಳೆಯಲ್ಲಿ ಇತರರಿಂದ ದೂರದಲ್ಲಿ ಬೇರೆ ಕಡೆ ಸ್ನಾನಕ್ಕೆ ಹೋಗುತ್ತಿದ್ದೆವು. ಅಲ್ಲಿ ಅವನಿಗೆ ಕಾಗುಣಿತ ಬಾಯಿಪಾಠ ಮಾಡಿಸತೊಡಗಿದೆ. ಕಾಗುಣಿತವನ್ನೆಲ್ಲ ಅವನು ಹಾಡಿನಂತೆ ರಾಗವಾಗಿ ಹೇಳುತ್ತ ಬಾಯಿಪಾಠ ಮಾಡುತ್ತಿದ್ದ. ನಮ್ಮೆಲ್ಲರ ವಾಸದ ಮನೆಗಳಿಂದ ಮೂರು ಫರ್ಲಾಂಗು ದೂರದಲ್ಲಿ, ನಾವೆಲ್ಲ ಇದ್ದ ಕಾಫೀ ಎಸ್ಟೇಟಿನ ಅಂಚಿನಲ್ಲೇ-ತೋಟವನ್ನು ಬಳಸಿ ಉದ್ದಕ್ಕೂ ಕಾಡಿನ ಮಧ್ಯದಲ್ಲೇ ಹರಿಯುವ ಎತ್ತಿನಹಳ್ಳ ತನ್ನ ಹರಿವಿನುದ್ದಕ್ಕೂ ಕಲ್ಲು ಬಂಡೆಗಳಿಂದ ಕೂಡಿದೆ. ಅದರಲ್ಲಿ ಬೇಸಗೆಯಲ್ಲೂ ಕೂಡಾ ಸಾಕಷ್ಟು ನೀರಿನ ಹರಿವಿರುತ್ತದೆ. ಬಂಡೆಗಳ ಮಧ್ಯೆ ರಭಸದಿಂದ ಹರಿಯುವ ನೀರಿನ ಶಬ್ದದಿಂದಾಗಿ ಲಕ್ಷ್ಮಯ್ಯನ ಕಾಗುಣಿತದ ರಾಗ ದೂರದಲ್ಲಿರುವವರಿಗೆ ಏನೋ ಹಾಡುತ್ತಿದ್ದಂತೆ ಕೇಳುತ್ತಿತ್ತೇ ವಿನಹ ಏನೆಂದು ತಿಳಿಯುತ್ತಿರಲಿಲ್ಲ. ಹೀಗೇ ಸ್ವಲ್ಪ ದಿನಗಳು ಕಳೆದವು. ಬೇಸಗೆ ರಜೆಯ ಸಮಯವಾದ್ದರಿಂದ ನಾನು ನನ್ನ ಅಕ್ಕನೊಡನೆ ನೆಂಟರ ಮನೆಗೆ ಹೋದೆ. ಅಲ್ಲಿಂದ ವಾಪಸ್ ಬರುವಾಗ ತಿಂಗಳೇ ಕಳೆಯಿತು. ಆ ವೇಳೆಗೆ ಲಕ್ಷ್ಮಯ್ಯನ ಓದು ನಿಂತು ಹೋಗಿರಬಹುದು ಅಂದುಕೊಂಡಿದ್ದೆ. ಕಾಫಿತೋಟಗಳಲ್ಲಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಕೆಲಸಗಾರರ ವರ್ಷದ ಲೆಕ್ಕ ಮಾಡುತ್ತಾರೆ. ಆ ನಂತರ ಹತ್ತು ಹದಿನೈದು ದಿನಗಳ ಕಾಲ ಕೆಲಸಕ್ಕೆ ರಜೆ ಇರುತ್ತದೆ. ನಾವು ಬರುವ ಸಮಯಕ್ಕೆ ತೋಟದ ವರ್ಷದ ಲೆಕ್ಕ ಆಗಿ ಜನರಿಗೆಲ್ಲಾ ರಜೆ ಮುಗಿದು ಮತ್ತೆ ಕೆಲಸ ಪ್ರಾರಂಭವಾಗಿತ್ತು. ಮನೆಗೆ ಬಂದವನೇ ಆ ದಿನವೇ ಸಂಜೆ ಲಕ್ಷ್ಮಯ್ಯನ ಮನೆಗೆ ಓಡಿದೆ. ಅವನು ತನ್ನ ಮನೆಯ ಗೋಡೆಯ ಮೇಲೆಲ್ಲಾ ಇದ್ದಿಲಿನಿಂದ ದೇವರುಂದ-ಮೂಡಿಗೆರೆ, ಸಕಲೇಶಪುರ-ಹಾಸನ ಎಂದೆಲ್ಲಾ ಬರೆದಿದ್ದ! 'ಇದೇನೋ' ಎಂದೆ. 'ಈ ಬಸ್ಸಿನ ಬೋರ್ಡೆಲ್ಲಾ ಓದ್ತೀನಿ'. ಕನ್ನಡ ಒಂದನೆಯ ಪುಸ್ತಕವನ್ನು ತಂದಿಟ್ಟುಕೊಂಡಿದ್ದ-ತಪ್ಪು ತಪ್ಪಾಗಿ ಓದುವುದನ್ನೂ ಕಲಿತಿದ್ದ. 'ಸರಿ ಇವಾಗ ರುಜು ಹಾಕದು ಹೇಳ್ಕೊಡು' ಎಂದ-ಅವನಿನ್ನೂ ರುಜು ಹಾಕಲು ಕಲಿತಿರಲಿಲ್ಲ! 'ನಾನ್ಯಾಕೆ ಹೇಳ್ಕೊಡ್ಲಿ, ನೀನೇ ಕಾಗುಣಿತ ಹೇಳ್ಕೊಂಡು ಬರಿ, ನಾನು ಹೇಳ್ತೀನಿ' ಎಂದು ಕಾಗುಣಿತ ಹೇಳತೊಡಗಿದೆ.
'ಲಕ್ ತಲ್ ಕಟ್ಟು ಲ...... ಕಕ್‌ತಲ್‌ಕಟ್ಟು ಕ...ಕಾಕ್ ಷವತ್ತು ಮತ್ ಮಾವತ್ತು-ಯಕ್ ತಲ್‌ಕಟ್ಟು ಯ...ಯಾಕ್ ಯಾವತ್ತು - ಲಕ್ಷ್ಮಯ್ಯ".....ಬರೆದೇಬಿಟ್ಟ..... ಮುಂದಿನ ವಾರ ನನ್ನ ಶಾಲೆ ಪ್ರಾರಂಭವಾಗುವುದರಲ್ಲಿತ್ತು.

ಬುಧವಾರ ಸಂಜೆ ಯಥಾ ಪ್ರಕಾರ ಅಪ್ಪ ಆಳುಗಳಿಗೆ ಬಟವಾಡೆ ಮಾಡುತ್ತಿದ್ದರು. ಯಾವಾಗಲೂ ಮೊದಲಿಗೇ ಬರುತ್ತಿದ್ದ ಲಕ್ಷ್ಮಯ್ಯ
ಅಂದು ಬಟವಾಡೆ ಮುಗಿಯುತ್ತ ಬಂದಿದ್ದರೂ ಹೊರಗೇ ನಿಂತಿದ್ದ। ಅಪ್ಪ ಈಗಾಗಲೇ ಎರಡು ಸಾರಿ ಅವನ ಹೆಸರನ್ನು ಕರೆದಾಗಿತ್ತು। 'ಲಕ್ಷ್ಮಯ್ಯ ನಿನಗೇನು ಪ್ರತ್ಯೇಕ ಹೇಳಿಕೆ?' ಅಪ್ಪ ಗುಡುಗಿದರು। ಲಕ್ಷ್ಮಯ್ಯ ಮೆಲ್ಲನೆ ಒಳಗೆ ಬಂದ. ಅಮ್ಮ ಮೇಜಿಗೆ ಶಾಯಿ ಉಜ್ಜುವವರ ನಿಯಂತ್ರಣಕ್ಕೆ ಕೂತಿದ್ದಳು.ಲಕ್ಷ್ಮಯ್ಯ ಆಚೀಚೆ ನೋಡಿ, 'ಅಯ್ಯೋರೆ ಪೆನ್ನು ಕೊಡಿ' ಅಂದವನೇ ಅವರ ಅನುಮತಿಗೂ ಕಾಯದೆ ಪೆನ್ನು ತೆಗೆದುಕೊಂಡ- ಸ್ವಲ್ಪ ಗಾಬರಿ ಆದಂತಿದ್ದ-ಕೈ ನಡುಗುತ್ತಿತ್ತು. ಅಪ್ಪ ಅವನ ಮುಖವನ್ನೇ ಆಶ್ಚರ್ಯ ಮತ್ತು ಗಾಬರಿಗಳಿಂದ ನೋಡಿದರು. 'ಹೂಂ ಇಲ್ಲಿ' ಎಂದು ಅವನು ರುಜು ಮಾಡಬೇಕಾದ ಜಾಗ ತೋರಿಸಿದರು. ಲಕ್ಷ್ಮಯ್ಯ ನಡುಗುವ ಕೈಗಳಿಂದ ನಿಧಾನವಾಗಿ ಪ್ರಾರಂಭಿಸಿದ. 'ಲಕ್ ತಲ್ ಕಟ್ಟು ಲ.......... ಯಕ್ ತಲ್ ಕಟ್ಟು ಯ ಯಾ ಕ್ ಯಾವತ್ತು ಲಕ್ಷ್ಮಯ್ಯ' ಎಂದು ರಾಗವಾಗಿ ಕಾಗುಣಿತ ಹೇಳುತ್ತಲೇ ರುಜು ಮಾಡಿದ. ಪೆನ್ನು ಕೆಳಗಿಟ್ಟು ತಲೆಯೆತ್ತಿ ಅಪ್ಪನನ್ನೇ ನೋಡುತ್ತ ನಿಂತ. ಈಗ ಅಪ್ಪ-ಅಮ್ಮ ಮೆಚ್ಚುಗೆಯಿಂದ ನಗುತ್ತಿದ್ದರು. ನಾನು ಲಕ್ಷ್ಮಯ್ಯನ ಪಕ್ಕದಲ್ಲೇ ನಿಂತಿದ್ದೆ.

5 comments:

Anonymous,  April 1, 2008 at 12:37 AM  

ಎಂಚ ಉಲ್ಲಾರ್ ಸರ್?! -shashikiran

ಸಿಂಧು sindhu April 1, 2008 at 2:27 AM  

ಸುಧನ್ವಾ
ಕಾದಿದ್ದು ಸಾರ್ಥಕ. ಮುಂದಿನ ಎಲ್ಲಾ ಶೋಗಳಿಗೂ ಸೀಸನ್ ಸೀಟು ಕಾದಿರಿಸಿದ್ದೀನಿ. ಓದಿದ ಕೂಡಲೆ ಕಮೆಂಟ್ ಮಾಡಲಾಗಲಿಲ್ಲ. ಎತ್ತಿನ ಹಳ್ಳದ ಹರಿವಿಗೆ ಸಿಕ್ಕು ಮನಸ್ಸು ತಂಪಾಗಿದೆ.

ಪ್ರೀತಿಯಿಂದ
ಸಿಂಧು

Sharath Akirekadu April 2, 2008 at 12:02 AM  

ಸುಧನ್ವ,
ಬೆಳ್ಳೇಕೆರೆಯ ಹಳ್ಳಿ ಥಿಯೇಟರಿಗೆ ಲಗ್ಗೆ ಹಾಕಿ ಆಗಿದೆ...
ಶೋ ಮಾತ್ರ ಸ್ವಲ್ಪ ನಿದಾನ..
ಕಾಯುತ್ತಿದ್ದೇವೆ.. ಮುಂದುವರೆಸಿ..

ಶರತ್ ಎ

Anonymous,  April 2, 2008 at 12:41 AM  

ಪ್ರಿಯ ಸಿಂಧು,
ಹೊಗಳಿಕೆಯಲ್ಲಿ ತೇಲಿಸುತ್ತಿದ್ದೀರಿ. ಲೇಖಕರಿಗೆ ದಾಟಿಸುತ್ತೇನೆ.
- ಚಂಪಕಾವತಿಯಿಂದ

Anonymous,  April 17, 2008 at 1:42 AM  

ಸುಧನ್ವ,
ಒಂದೆ ಉಸಿರಿನಲ್ಲಿ ಓದಿ ಮುಗಿಸ್ದೆ. ಸಖತ್ ಥ್ರಿಲ್ಲಿಂಗ್ ಅನ್ನಿಸ್ತು. ಅದ್ರಲ್ಲು ಲಕ್ಷ್ಮಯ್ಯನವರು ಲಾಂಟಾನದ ಕೋಲು ತಂದಿಟ್ಟು ಪ್ರಸಾದರನ್ನು ಗುರುವಾಗಿ ಒಪ್ಪಿಕೊಳ್ಳುವುದಿದೆಯಲ್ಲ, ಆ ಹಂಬಲ್ ಆಟಿಟ್ಯೂಡು ಯಾರಿಗಿದೆ ಈಗಿನ ಕಾಲದಲ್ಲಿ?
ತುಂಬ ಛಂದ ಬರಿತಾರೆ ಪ್ರಸಾದ್. ಎದುರುನೋಡ್ತಿರ್ತೀವಿ.
ಥ್ಯಾಂಕ್ಯೂ ಸುಧನ್ವಾ!!
-ಟೀನಾ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP