March 09, 2008

ಜೀಕೆ ಮಾಸ್ತರರ ಪ್ರಣಯ ಪ್ರಸಂಗ

ಪುಟ್ಟದಾದ ಡಬ್ಬದೊಳಗೆ ರಬ್ಬರ್ ಹಾವಿದೆ ಅಂತ ಗೊತ್ತಿದ್ದಾಗಲೂ ಮುಚ್ಚಳ ತೆಗೆದಾಗ ಹೌಹಾರುವುದಿದೆಯಲ್ಲ...ಅದು ನಾಟಕ ! ಅಂದರೆ ಭಯಗೊಳ್ಳುವ ನಟನೆ ಮಾಡಿದರೂ , ನಿಜವಾಗಿ ಭಯ ಪಟ್ಟರೂ ಅದು ನಾಟಕವೇ. ಭಯವಾದ ನಟನೆ ಮಾಡಿದರೆ ಮುಚ್ಚಳ ತೆಗೆವವನದ್ದು ನಾಟಕ, ನಿಜವಾಗಿ ಭಯಪಟ್ಟರೆ ಡಬ್ಬ ಕೊಟ್ಟವನದ್ದು ಒಳ್ಳೆಯ ನಾಟಕ ಅಂತಲೂ ಅನ್ನಬಹುದು !

ಇವೆಲ್ಲ ಸಾಧ್ಯವಾದದ್ದು ಕಳೆದ ಶುಕ್ರವಾರ (ಮಾರ್ಚ್ ) ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆದ ನೀನಾಸಂ ನಾಟಕದಲ್ಲಿ, ’ಜೀಕೆ ಮಾಸ್ತರರ ಪ್ರಣಯ ಪ್ರಸಂಗದಲ್ಲಿ. ಮರು ತಿರುಗಾಟದ ಆಪ್ತ ರಂಗಭೂಮಿ ಪ್ರದರ್ಶನದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಒಳ್ಳೆಯ ಬೆಳೆ ತೆಗೆಯುತ್ತಿರುವ ನೀನಾಸಂ, ಬಾರಿ ಬಂಪರ್ ಬೆಳೆ ಹೊಡೆದಿದೆ. ಬಯಲು ರಂಗದಲ್ಲಿ ಭಾರೀ ಜನಸ್ತೋಮದ ಎದುರೂ ಮಾಡಬಹುದಾದ ಕತೆಯುಳ್ಳ ನಾಟಕವನ್ನು , ಆಪ್ತ ರಂಗಭೂಮಿಯ ಸಕಲ ಸಾಧ್ಯತೆಗಳೂ ಮೇಳೈಸುವ ಹಾಗೆ ಪ್ರದರ್ಶಿಸಿದ್ದೇ ಅನನ್ಯ ಸಾಧನೆ. ಕಳೆದೆರಡು ವರ್ಷಗಳ ಪ್ರದರ್ಶನಗಳಲ್ಲಿ ಏಕಮುಖವಾಗಿದ್ದ ವೇದಿಕೆಯನ್ನು ತೊರೆದು ಸಿದ್ಧಪಡಿಸಿದ ಆಯತಾಕಾರದ ವೇದಿಕೆ; ಕಡಿಮೆ ಉದ್ದದ ಎರಡು ಬದಿಗಳಲ್ಲಿ ತೆರೆ ಇಳಿಬಿಟ್ಟು, ಇನ್ನೆರಡು ಬದಿಗಳಲ್ಲಿ ಪ್ರೇಕ್ಷಕರನ್ನು ಕುಳ್ಳಿರಿಸಿಕೊಂಡು ಮಾಡಿದ ಪ್ರಯೋಗ ಇದು. ಆದರೆ ಎರಡೂ ಬದಿಗಳಲ್ಲಿ ಇದ್ದ ಪ್ರೇಕ್ಷಕರು ಮೈಮರೆತು ನಾಟಕ ನೋಡಿದರು, ಪರಸ್ಪರ ಮುಖ ನೋಡಲಿಲ್ಲ !


ಪರಿಚಯ ಪತ್ರದಲ್ಲಿ ನಿರ್ದೇಶಕ ಕೆ.ವಿ.ಅಕ್ಷರ ಹೀಗೆ ಹೇಳಿದ್ದಾರೆ- 'ಸಾಂಪ್ರದಾಯಿಕ ಯೋಚನಾ ಕ್ರಮದ ಪ್ರಕಾರ ಸಂಭಾಷಣಾ ಕೇಂದ್ರಿತವಾದದ್ದು ನಾಟಕವೆಂದೂ, ನಿರೂಪಣಾ ಪ್ರಧಾನವಾದದ್ದು ಕಾದಂಬರಿಯೆಂದೂ ನಾವು ಭಾವಿಸುತ್ತೇವೆ. ಆದರೆ ಅಂಥ ವರ್ಗೀಕರಣ ಮುರಿದು ನಿರೂಪಣಾತ್ಮಕವಾದ, ಆದರೆ ನಾಟಕೀಯ ಗುಣಗಳಲ್ಲಿ ಶ್ರೀಮಂತವೂ ಆಗಿರುವ ಹೊಸ ಪ್ರಸ್ತುತಿ ಮಾರ್ಗವೊಂದನ್ನು ಹುಡುಕಲಿಕ್ಕೆ ಸಾಧ್ಯವೆ ಎಂಬ ದಿಕ್ಕಿನಲ್ಲಿ ಈ ಪ್ರಯೋಗ ಕೈಚಾಚಿದೆ...ವಾಸ್ತವ ಮತ್ತು ವಾಸ್ತವೇತರದ ನಡುವಿನ ಹಾಗೂ ನಿರೂಪಣೆ ಮತ್ತು ಪ್ರದರ್ಶನದ ನಡುವಿನ ಮಿಶ್ರ ಮಾರ್ಗವೊಂದನ್ನು ಇಲ್ಲಿ ಕಟ್ಟಲು ಹವಣಿಸಲಾಗಿದೆ. ಕಾದಂಬರಿಯೊಂದನ್ನು ನಾಟಕವಾಗಿ ರೂಪಾಂತರಿಸದೆ, ನಾಟಕೀಯ ಅಂಗಾಂಶಗಳೊಂದಿಗೆ ಪ್ರಸ್ತುತಿ ಮಾಡುವ ಹೊಸ ಮಾದರಿಯೊಂzನ್ನು ಇಲ್ಲಿ ಪ್ರಯತ್ನಿಸಲಾಗಿದೆ.’ ನಿರ್ದೇಶಕರ ಉದ್ದೇಶ ಅಷ್ಟೇ ಸ್ಪಷ್ಟವಾಗಿ ಪ್ರದರ್ಶನದಲ್ಲೂ ಈಡೇರಿರುವುದು ಸಂತಸದ ಸಂಗತಿ.

ಈ ನಿರೂಪಣಾ ವಿಧಾನ ಎಷ್ಟು ಶಿಸ್ತುಬದ್ಧವೂ ಸ್ವಚ್ಚವೂ ಆಗಿದೆಯೆಂದರೆ , ಜೀಕೆ ಮಾಸ್ತರರ ಪಾತ್ರವನ್ನು, ನಾಲ್ವರು ಒಬ್ಬರಾದ ಮೇಲೆ ಒಬ್ಬರಂತೆ ಬದಲಿಸುತ್ತಿರುವಾಗಲೂ, ಅಭಿನಯದಲ್ಲಿ ಜೀಕೆಯೇ ಆಗಿದ್ದು , ಮಾತಿನಲ್ಲಿ ಮಾತ್ರ ಒಮ್ಮೆ ಪಾತ್ರವಾಗಿ, ಮರುಕ್ಷಣ ನಿರೂಪಕನಾಗಿ ಬದಲಾದಾಗಲೂ ರಸಭಂಗವಾಗುವುದಿಲ್ಲ. ದೈಹಿಕ ಕಸರತ್ತುಗಳನ್ನು ಅತಿಯಾಗಿಸದೆ ಬಳಸಿದ ಕ್ರಮವೂ ಮೆಚ್ಚುವಂತಿದೆ. ಜೀಕೆ ಮಾಸ್ತರರ ಮಗ ಹೊಟ್ಟೆ ನೋವಿನಿಂದ ಸತ್ತ ಎನ್ನುವಲ್ಲಿ ಬಳಸುವ ಕ್ಲಿಷ್ಟವಾದ ದೈಹಿಕ ಕಸರತ್ತು (ಪ್ರೇಕ್ಷಕರೇ ಒಮ್ಮೆ ಹೊಟ್ಟೆ ಮುಟ್ಟಿಕೊಳ್ಳುವಂತೆ ಮಾಡುವ !) ಇದಕ್ಕೆ ಒಳ್ಳೆಯ ಉದಾಹರಣೆಯಾದೀತು. ಸಾಯಂಕಾಲ ಜೀಕೆ ಮಾಸ್ತರರು ರೋಜಾಗೆ ಕಾಯುತ್ತಿರುವಾಗ ಕೇಳಿಬರುವ " ಸಂಜೆ ಯಾಕಾಗಿದೆ ನೀನಿಲ್ಲದೇ...’ ಹಾಡು -ಟಿವಿಯ ಸರ್ಕಾರ್ ಪ್ರಯೋಗ ನೆನಪಿಸಿದರೂ, ಸಿನಿಮಾ ಹಾಡುಗಳನ್ನು ನಾಟಕದಲ್ಲಿ ಬಳಸಿರುವ ಕ್ರಮ ರುಚಿ ಹೆಚ್ಚಿಸುವಂತೆಯೇ ಇದೆ.


ಅತ್ಯಂತ ಕಡಿಮೆ ರಂಗಸಜ್ಜಿಕೆಗಳಿದ್ದಾಗ ರಂಗವನ್ನು ತುಂಬಿಸುವುದು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆದರೆ ಇಲ್ಲಿ ರಂಗದ ಮಧ್ಯೆ ಇಳಿಬಿಟ್ಟಿದ್ದ ಸುರುಳಿ ಸುತ್ತಿದ ಬಟ್ಟೆ, ಅದ್ಭುತ ರಂಗ ಪರಿಕರವಾಗಿ ಕೆಲಸ ಮಾಡಿದೆ. 'ನಟರು ಬಹುಮುಖಿ’ಗಳಾಗಲೂ ಇದು ಸುಲಭ ಸಾಧನವಾಗಿದೆ. ಮುಖ್ಯವಾದ ಜೀಕೆ ಮಾಸ್ತರು ಮತ್ತು ರೋಜಾಳ ಪಾತ್ರಗಳನ್ನು ಏಳೆಂಟು ಜನ ಸೇರಿ ನಿರ್ವಹಿಸಿರುವುದರಿಂದ ನಾಟಕಕ್ಕೊಂದು ಒಳ್ಳೆಯ ಹರಿವು ಲಭಿಸಿದೆ.

ಭಾರೀ ರಂಗಸಜ್ಜಿಕೆ , ಪರಿಕರ, ಬೆಳಕಿನ ಗೌಜಿ ಗದ್ದಲದೊಂದಿಗೆ ಮಾಡುವ ನಾಟಕಗಳು ಅಭಿನಯ ಮತ್ತು ಕತೆಯ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ತಟ್ಟುವುದು ಬಹಳ ಕಷ್ಟದ ಕೆಲಸ. 'ವಿಶ್ವವಿಖ್ಯಾತವಾಗಿರುವ ಡ್ಯಾಷ್ ಆರ್ಟ್ಸ್’ ನಿರ್ಮಿಸಿದ ಇಂಗ್ಲೆಂಡಿನ ಟಿಮ್ ಸಪಲ್ ನಿರ್ದೇಶಿಸಿದ "ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್’ ನಾಟಕವನ್ನು ಕೆಲವು ತಿಂಗಳುಗಳ ಹಿಂದೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನೋಡಿದ್ದೆ, ಇಂಡಿಯಾ ಮತ್ತು ಶ್ರೀಲಂಕಾದ ಕಲಾವಿದರುಳ್ಳ,ಇಂಗ್ಲಿಷ್-ತಮಿಳು-ಮಲೆಯಾಳಂ-ಸಂಸ್ಕೃತ-ಹಿಂದಿ-ಬಂಗಾಳಿ... ಹೀಗೆ ಹಲವು ಭಾಷೆಗಳನ್ನಿಟ್ಟುಕೊಂಡು ನಡೆದ ನಾಟಕ ಅದು. ಕೆಲವು ಲಕ್ಷ ರೂಪಾಯಿಗಳ ಖರ್ಚಿನಲ್ಲಿ ಸಿದ್ಧವಾದ ಅದರಲ್ಲಿ ರಂಗಸಜ್ಜಿಕೆ-ಬೆಳಕು-ದೈಹಿಕ ಕಸರತ್ತುಗಳ ಭಾರೀ ವೈಭವವಿತ್ತು. ಆದರೆ ಕೊನೆಗೂ ಅವಷ್ಟೇ ಮುನ್ನೆಲೆಗೆ ಬಂದು ಅಭಿನಯವೂ ಕತೆಯೂ ಹಿನ್ನೆಲೆಗೆ ಸರಿದಂತಾಯಿತು. ಆ ಕ್ಷಣಕ್ಕೇನೋ ಚಕಿತಗೊಳಿಸುವ ಆ ವೈಭವ ಬಹಳ ಬೇಗ ಕಾವು ಕಳೆದುಕೊಂಡಿತು. ನಾಟಕವನ್ನು ಸಿನಿಮಾ ಥರಾ ಮಾಡಬೇಕಾ ಎಂಬ ಪ್ರಶ್ನೆ ನನ್ನಲ್ಲಿ ಮತ್ತೆ ಮತ್ತೆ ಹುಟ್ಟಿಕೊಂಡಿತು. ನೀನಾಸಂನ ಈ ಸರಳ ಪ್ರಭಾವಿ ನಾಟಕ ಆ ಪ್ರಶ್ನೆಗೆ ಉತ್ತರದಂತಿದೆ. ಯಕ್ಷಗಾನ ವೇಷಧಾರಿಗೆ ಆಸ್ಥಾನ ಮಂಟಪ, ಅಂತಃಪುರ, ಯುದ್ಧರಂಗದಲ್ಲೂ ಒಂದೇ ವೇಷಭೂಷಣ, ಅದೇ ರಂಗಸಜ್ಜಿಕೆ. ಸಂದರ್ಭವನ್ನು ಆತ ಚೆನ್ನಾಗಿ ಅಭಿನಯಿಸಿದರೆ ನಾವು ಸುಲಭವಾಗಿ ಅದಕ್ಕೆ ಹೊಂದಿಕೊಳ್ಳುತ್ತೇವೆ. ಅದೇ ನಾಟಕದಲ್ಲೂ ನಡೆದಿದೆ. ಕಾಲೇಜಿನ ಕ್ಲಾಸ್ ರೂಂ, ಪ್ರಿನ್ಸಿಪಾಲ್ ಛೇಂಬರು, ಜೀಕೆ ಮಾಸ್ತರರ ಮನೆ, ಪಿಕ್ನಿಕ್ಗೆ ಹೋದ ತಾಣ, ಹುಬ್ಬಳ್ಳಿಯ ಲಾಡ್ಜು ಹೀಗೆ ಹತ್ತಾರು ತಾಣಗಳ ಪ್ರಸ್ತಾಪವಿದ್ದರೂ ಅವು ಯಾವುದೇ ರಂಗಸಜ್ಜಿಕೆಯಿಲ್ಲದೆ ತುಂಬಿಕೊಂಡು ಬಂದಿವೆ. ಒಳ್ಳೆಯ ಕತೆ ಮತ್ತು ಅಭಿನಯ ಇದ್ದಾಗ, ಬೇರೇನೂ ಇಲ್ಲದೆಯೂ ನಾಟಕವೊಂದು ಹೇಗೆ ಸಫಲವಾಗುತ್ತದೆ ಎನ್ನುವುದರ ಪ್ರತೀಕ ಇದು.

ಹುಡುಗರ ವಿಭಾಗದಲ್ಲಿ ನೀನಾಸಂ ತಂಡ ಕಳೆದ ಬಾರಿಗಿಂತಲೂ ಹೆಚ್ಚು ಶಕ್ತಿಯುತ ಅನ್ನಿಸುತ್ತದೆ. ಜೀಕೆ ಮಾಸ್ತರರ ಪಾತ್ರ ನಿರ್ವಹಿಸುವ ನಾಲ್ವರೂ (ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕುಮಾರ್ ಸುಳ್ಯ,----,----) ಮತ್ತು ಗಿರಪ್ಪ ಹಾಗೂ ಎಮ್ಟಿ ಪಾತ್ರಧಾರಿಗಳು ಅಭಿನಯದಲ್ಲಿ ಹಬ್ಬಿಕೊಂಡಿದ್ದಾರೆ. ಹಳೆಯ ಕೃತಿಯೊಂದನ್ನು ನಾಟಕ ಮಾಡಿದಾಗ ಅದು ನಾನಾ ಥರದ ಕೊಸರುಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಆದರೆ ನಾಟಕ ಮುಗಿದಾಗಲೂ ಕಾದಂಬರಿಯ ಕರ್ತೃ ಕಂಬಾರರು ಉಲ್ಲಸಿತರಾಗಿದ್ದದ್ದು ನೋಡಿದರೆ ನಾಟಕ ಎಲ್ಲ ಥರದಲ್ಲೂ ಯಶಸ್ವಿ ಅನಿಸುತ್ತದೆ .
ಅಮರಾ ಮಧುರಾ ಪ್ರೇಮ...ಬಾ ಬೇಗ ಚಂದಮಾಮಾ...

(ಫೋಟೊ ಕೃಪೆ :ಕೆ.ಎಸ್.ರಾಜಾರಾಂ)
(ಕಳೆದ ವರ್ಷದ ನಾಟಕದ ಚರ್ಚೆಗೆ ಇಲ್ಲಿ ಹೋಗಬಹುದು)

2 comments:

ಶ್ರೀನಿಧಿ.ಡಿ.ಎಸ್ March 9, 2008 at 12:15 PM  

ತಾವೆಲ್ಲಿದ್ದಿರಿ! ಕಾಣಲೇ ಇಲ್ಲ!!! ನಾನೂ ಬಂದಿದ್ದೆ ನಾಟಕಕ್ಕೆ. ಖುಷಿ ಆಯ್ತು. ಚೆನ್ನಾಗಿ ಮಾಡಿದ್ದಾರೆ. ಮೊದಮೊದಲು ಸ್ವಲ್ಪ ಕಿರಿಕಿರಿ ಅನ್ನಿಸಿತು.. ಮತ್ತೆ ಹೊಂದಿಕೊಂಡೆ!

ರಮೇಶ್ ಹಿರೇಜಂಬೂರು March 31, 2008 at 9:03 AM  

Naanu ee kadambari odiddene. neevu bared vimarshe odi kushi ayitu. ondu kadmbariyannu hege nataka roopakkilisalagide embudu nimma vimarshe odidre bimbitavaguttade.
-Ramesh Hirejambur

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP