December 26, 2008
December 12, 2008
ಮಿಲಿಯಾಧೀಶನ ಸಂತೋಷ ಯಾವುದರಲ್ಲಿದೆ ಗೊತ್ತಾ?
ಸಿಂಗಾಪುರದ ಆಡಮ್ ಖೂ ೨೬ ವರ್ಷಕ್ಕೇ ಮಿಲಿಯಾಧೀಶನಾದವ . ಬೆಸ್ಟ್ ಸೆಲ್ಲರ್ ಎನಿಸಿದ ಏಳು ಪುಸ್ತಕಗಳ ಲೇಖಕ. ಶಿಕ್ಷಣ-ತರಬೇತಿ-ಕಾರ್ಯಕ್ರಮ ಆಯೋಜನೆ-ಜಾಹೀರಾತು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಈತ, ವರ್ಷಕ್ಕೆ ೩೦ ಮಿಲಿಯನ್ ಡಾಲರ್ ವಹಿವಾಟಿನ 'ಆಡಮ್ ಖೂ ಲರ್ನಿಂಗ್ ಟೆಕ್ನಾಲಜೀಸ್ ಗ್ರೂಪ್ ಪ್ರೈವೇಟ್ ಲಿಮಿಟೆಡ್'ನ ಅಧ್ಯಕ್ಷ . ಹಣದ ಮೌಲ್ಯದ ಬಗೆಗಿನ ಆತನ ಬರೆಹವನ್ನು, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಖುಶಿಯಿಂದ ಅಂಟಿಸಿಕೊಂಡಿದ್ದರು. ಅದು ಈಗ ಕನ್ನಡದಲ್ಲಿ ಇಲ್ಲಿದೆ.
ಇತ್ತೀಚೆಗೆ ನಾನು, ಕೌಲಾಲಂಪುರಕ್ಕೆ ಹೋಗುವ ವಿಮಾನದಲ್ಲಿದ್ದಾಗ ಹತ್ತಿರ ಬಂದ ಒಬ್ಬ ಕಣ್ಕಣ್ ಬಿಟ್ಟು ಕೇಳಿದ - 'ನಿನ್ನಂಥ ಮಿಲಿಯಾಧೀಶ ಎಕಾನಮಿ ಕ್ಲಾಸ್*ನಲ್ಲಿ ಹೋಗೋದಾ?'(*ವಿಮಾನದಲ್ಲಿ ಕಡಿಮೆ ದರದ ವಿಭಾಗ) ತಕ್ಷಣ ಉತ್ತರಿಸಿದೆ- 'ಹಾಗಾಗಿಯೇ ನಾನೊಬ್ಬ ಮಿಲಿಯಾಧೀಶ !' ತುಂಬಾ ಜನ ಹೇಗೆ ಬ್ರೈನ್ವಾಶ್ ಮಾಡಿಸಿಕೊಂಡಿದ್ದಾರೆಂದರೆ, ಮಿಲಿಯಾಧೀಶರು ಬ್ರಾಂಡೆಡ್ ವಸ್ತುಗಳನ್ನೇ ಉಪಯೋಗಿಸಬೇಕು, ವಿಮಾನದಲ್ಲಿ ಪ್ರಥಮ ದರ್ಜೆಯಲ್ಲೇ ಪ್ರಯಾಣಿಸಬೇಕು ಅಂತೆಲ್ಲ. ಆದರೆ ಬಹಳಷ್ಟು ಜನ ಮಿಲಿಯಾಧೀಶರಾಗುವುದಿಲ್ಲ ಯಾಕೆಂದರೆ, ಹೆಚ್ಚು ಸಂಪಾದನೆಯಿದ್ದಾಗ ಹೆಚ್ಚು ಖರ್ಚು ಮಾಡುವುದೂ ಸಹಜ ಅಂತ ಅವರು ಭಾವಿಸುತ್ತಾರೆ ! ಅದು ಅವರನ್ನು ಮತ್ತೆ ಮೂಲೆಗೆ ತಳ್ಳುತ್ತದೆ.
ನಾನು ವೈಇಒ ಸಂಘಟನೆಗೆ ಸೇರಿಕೊಂಡಾಗ ( ೪೦ ವರ್ಷದ ಒಳಗಿದ್ದು , ಸ್ವಂತ ಉದ್ಯಮದಲ್ಲಿ ವರ್ಷಕ್ಕೆ ೧ ಮಿಲಿಯನ್ ಡಾಲರ್ ಸಂಪಾದಿಸುವವರ ಸಂಘಟನೆ), ಸ್ವಂತ ಬಲದಿಂದ ಬೆಳೆದವರೆಲ್ಲ ನನ್ನಂತೆಯೇ ಯೋಚಿಸುತ್ತಾರೆಂದು ಗೊತ್ತಾಯಿತು. ಅವರಲ್ಲಿ ವರ್ಷಕ್ಕೆ ನಿವ್ವಳ ೫ ಮಿಲಿಯನ್ ಡಾಲರ್ ಸಂಪಾದಿಸುವ ಹಲವರೂ, ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು, ಮರ್ಸಿಡಸ್, ಬಿಎಂಡಬ್ಲ್ಯು ಕಾರುಗಲ ಬದಲು ಟೊಯೊಟಾದಂತಹ ಸಾಮಾನ್ಯ ಕಾರುಗಳನ್ನು ಬಳಸುತ್ತಿದ್ದರು. ನಾನು ಗಮನಿಸಿದ್ದೇನೆಂದರೆ, ತಮ್ಮ ಸಂಪತ್ತಿಗಾಗಿ ತಾವೇ ಕೆಲಸ ಮಾಡದ ಜನ ಮಾತ್ರ ನಾಳೆಯೇ ಇಲ್ಲವೆಂಬಂತೆ ವೆಚ್ಚ ಮಾಡುತ್ತಿದ್ದರು. ಸ್ವಲ್ಪಮಟ್ಟಿಗೆ, ಸೊನ್ನೆಯಿಂದಲೇ ನೀವು ಎಲ್ಲವನ್ನೂ ಕಟ್ಟುವ ಅಗತ್ಯವಿಲ್ಲದಿದ್ದಾಗ, ಹಣದ ಮೌಲ್ಯ ನಿಮಗೆ ಅರ್ಥವಾಗುವುದಿಲ್ಲ. ಕುಟುಂಬದ ಸಂಪತ್ತು ಮೂರನೇ ತಲೆಮಾರಿಜವರೆಗೆ ಯಾಕೆ ಉಳಿಯುತ್ತಿಲ್ಲವೆಂಬುದಕ್ಕೆ ಇದೂ ಒಂದು ಕಾರಣ. ಥ್ಯಾಂಕ್ಯು ದೇವರೇ...ನನ್ನ ಶ್ರೀಮಂತ ಅಪ್ಪ, ಈ ಅಪಾಯಕಾರಿ ಸಾಧ್ಯತೆಯನ್ನು ಮುಂದಾಲೋಚಿಸಿಯೇ, ನನ್ನ ವ್ಯಾಪಾರಕ್ಕೆ ಒಂದು ಸೆಂಟ್ ಕೊಡುವುದಕ್ಕೂ ನಿರಾಕರಿಸಿದ.
ಸತ್ಯವಾದ್ದೆಂದರೆ, ಸ್ವಶಕ್ತಿಯಿಂದ ಬೆಳೆದ ಬಹುಪಾಲು ಮಿಲಿಯಾಧೀಶರು ಮಿತವ್ಯಯಿಗಳು. ಹಾಗಾಗಿ ಸಂಪತ್ತು ಸಂಗ್ರಹಿಸುವುದಕ್ಕೆ , ವೇಗವಾಗಿ ಅದನ್ನು ದ್ವಿಗುಣಗೊಳಿಸುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ. ಕಳೆದ ೭ ವರ್ಷಗಳಲ್ಲಿ, ಸಂಪಾದನೆಯ ಶೇ.೮೦ನ್ನು ನಾನು ಉಳಿಸಿದ್ದೇನೆ ! ಈಗ ಶೇ.೬೦ರಷ್ಟು. ಅಂದರೆ ಈಗ ಮನೆಯಲ್ಲಿ ಹೆಂಡತಿ, ಮಕ್ಕಳು, ನೆಂಟರು ಇದ್ದಾರೆ. ಆದರೆ ತಮ್ಮ ಸಂಪಾದನೆಯ ಶೇ.೧೦ಕ್ಕಿಂತ ಹೆಚ್ಚನ್ನು ಉಳಿಸುವವರೇ ಬಹಳ ಕಡಿಮೆ ಜನ. ನಾನು ಫಸ್ಟ್ಕ್ಲಾಸ್ ಟಿಕೆಟ್ನ್ನು , ೩೦೦ ಡಾಲರ್ಗಳ ಅಂಗಿಯನ್ನು ತಿರಸ್ಕರಿಸುವುದು ಯಾಕೆಂದರೆ , ಅದು ಹಣ ವ್ಯರ್ಥಗೊಳಿಸುವ ದಾರಿಯೆಂದು ತಿಳಿದಿರುವುದರಿಂದ. ಆದರೆ ಜೂಲಿಯಾ ಗೇಬ್ರಿಯಲ್ನಲ್ಲಿನ (ಶಿಕ್ಷಣ ಮತ್ತು ಸಂವಹನದ ಅಂಶಗಳನ್ನು ಕಲಿಸುವ ಪ್ರಸಿದ್ಧ ಸಂಸ್ಥೆ) ಭಾಷಣಕ್ಕಾಗಿ ಮತ್ತು ನಾಟಕಕ್ಕಾಗಿ ಎರಡು ವರ್ಷದ ಮಗಳನ್ನು ಕಳಿಸಲು ೧,೩೦೦ ಡಾಲರ್ ವ್ಯಯಿಸಲು ನಾನು ಎರಡು ಬಾರಿ ಯೋಚಿಸುವುದೇ ಇಲ್ಲ. ಕೆಲವರು ಕೇಳುತ್ತಾರೆ - 'ನೀನು ಎಂಜಾಯ್ ಮಾಡುವುದಿಲ್ಲ ಅಂತಾದರೆ ಅಷ್ಟೊಂದು ಹಣ ಮಾಡಿ ಏನು ಪ್ರಯೋಜನ?' ನಿಜ ಸಂಗತಿಯೆಂದರೆ, ಆಭರಣ-ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳೋದರಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವುದರಲ್ಲಿ ನನಗೆ ಸಂತೋಷ ಸಿಗುವುದಿಲ್ಲ. ಏನನ್ನಾದರೂ ಖರೀದಿಸಿದರೆ ಆ ಸಂತೋಷ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಮರುಕ್ಷಣ ಬೇಜಾರಾಗುತ್ತದೆ ಮತ್ತು ಸಂತೋಷಗೊಳಿಸುವ ಇನ್ನೊಂದನ್ನು ಖರೀದಿಸೋಣ ಅನ್ನಿಸುತ್ತದೆ !
ಇದರ ಹೊರತಾಗಿ, ನನ್ನನ್ನು ನಿಜವಾಗಿ ಸಂತೋಷಗೊಳಿಸುವುದೆಂದರೆ, ಮಕ್ಕಳು ನಗುವುದು ಮತ್ತು ಬೇಗನೆ ಕಲಿಯುವುದು ; ನನ್ನ ತರಬೇತಿದಾರರು ಪ್ರತಿವರ್ಷ ಹೆಚ್ಚೆಚ್ಚು ದೇಶಗಳಲ್ಲಿ ಹೆಚ್ಚೆಚ್ಚು ಜನರನ್ನು ತಲುಪುವುದು ; ನನ್ನ ಪುಸ್ತಕಗಳು ಹೇಗಿವೆ, ನನ್ನ ಸೆಮಿನಾರ್ಗಳು ಹೇಗೆ ಪರಿಣಾಮಕಾರಿಯಾಗಿ ಜನರ ಬದುಕಿಗೆ ಹೇಗೆ ಸ್ಫೂರ್ತಿ ಕೊಟ್ಟಿವೆ ಎಂದು ಬರುವ ಎಲ್ಲ ಇ-ಮೇಲ್ಗಳನ್ನು ಓದುವುದು -ನನಗೆ ಪರಮಾನಂದ. ಇಂಥಹವು, ಯಾವುದೋ ರೋಲೆಕ್ಸ್ ವಾಚ್ ನೀಡುವ ಸಂತೋಷಕ್ಕಿಂತ ಎಷ್ಟೋ ಹೆಚ್ಚು ಸಮಯ ಇವು ನನ್ನನ್ನು ಸಂತೋಷವಾಗಿಡುತ್ತವೆ . ಒಟ್ಟಾರೆ ನಾನು ಹೇಳುವುದು, ನಮಗೆ ಸಂತೋಷವಾಗಬೇಕಾದ್ದು ನಮ್ಮ ಬದುಕಿನ ಕೆಲಸಗಳನ್ನೇ ಮಾಡುವುದರಿಂದ. (ಪಾಠ ಮಾಡುವುದು, ಮನೆ ಕಟ್ಟುವುದು, ವ್ಯಾಪಾರ, ವಿನ್ಯಾಸ, ಸ್ಪರ್ಧೆಗಳಲ್ಲಿ ಗೆಲ್ಲುವುದು...) ಹಣ ಕೇವಲ ಉಪ ಉತ್ಪನ್ನ ಅಷ್ಟೆ. ನೀವು ಮಾಡುತ್ತಿರುವ ಕೆಲಸವನ್ನೇ ಇಷ್ಟಪಡದೆ, ಅದರಿಂದ ಬರುವ ಹಣದಿಂದ ಕೊಳ್ಳುವ ವಸ್ತುಗಳು ನೀಡುವ ಸಂತೋಷಕ್ಕೆ ಆಸೆಪಟ್ಟಿದ್ದರೆ .... ನೀವು ಅರ್ಥವಿಲ್ಲದ ಜೀವನ ಸಾಗಿಸುತ್ತಿದ್ದೀರೆಂದೇ ನಾನು ಭಾವಿಸುತ್ತೇನೆ.'
Read more...December 07, 2008
ಬಟವಾಡೆಯಾಗದ ಪದ್ಯಗಳು
ಕಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ, ತಿಪ್ಪೇರುದ್ರಸ್ವಾಮಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿರುವ ಲಕ್ಕೂರು ಆನಂದರ ಮೂರನೇ ಕವನ ಸಂಕಲನ 'ಬಟವಾಡೆಯಾಗದ ರಸೀತಿ' ಮೊನ್ನೆ ಮೊನ್ನೆ ಬಿಡುಗಡೆಯಾಯಿತು. ಓದಬೇಕೆಂದು ಕೈಗೆತ್ತಿಕೊಂಡರೆ ಗಂಟಿಕ್ಕಿಕೊಂಡಿದೆ. ಒಂದೊಂದೆ ಎಳೆ ಹಿಡಿದು ಎಳೆಯುತ್ತಿದ್ದೇನೆ. ನಿಮಗೂ ಬೇಜಾರಾದರೆ ಕ್ಷಮೆಯಿರಲಿ.
ಉದಾಹರಣೆಗೆ 'ಉರಿವ ಸೆಳಕಿನ ದೀಪದುರಿತದ ಬೆಳಕ ಕಾವೆ 'ಎಂಬ ಸಾಲನ್ನು ಎತ್ತಿಕೊಂಡು ನೋಡಿ. ಉರಿ, ಸೆಳಕು, ದೀಪದ ಉರಿ, ಬೆಳಕು ಇಷ್ಟೂ ಒಟ್ಟಾಗಿ ಏನನ್ನು ಹೇಳುತ್ತಿವೆ? ದುರಿತ ಅನ್ನುವುದಕ್ಕೆ ಕಷ್ಟಕೋಟಲೆ ಅನ್ನುವ ಅರ್ಥ ಮಾಡಿಕೊಂಡರೂ, ಊಹೂಂ. ಇನ್ನು -ಮೌನ, ಏಕಾಂತ, ಬಯಲು, ಜೀವ, ಬೆರಗು, ಉಸಿರು- ಈ ಪದಗಳನ್ನು ಯಾವ ಪರಿ ಬಳಸಲಾಗಿದೆ ಅನ್ನುವುದಕ್ಕೆ 'ಏಕಾಂತ-ಮೌನ'ಗಳ ಹಲವು ಸಾಲುಗಳನ್ನು ಕತ್ತರಿಸಿ ಕೊಡುತ್ತಿದ್ದೇನೆ. ಇನ್ನೂ ಕೆಲವು ಉಳಿದುಕೊಂಡಿವೆ, ಪತ್ತೆಮಾಡಿ !
ಏಕಾಂತ - ತಾವ ತಡಿಕೆಯ ಏಕಾಂತದ ದಾರಿ ಕೊನೆಯಲ್ಲೊಂದಷ್ಟು / ತೆವಳಲೆತ್ನಿಸಿ ಉರುಳಿದ ಏಕಾಂತ ಶಬ್ದವೆ / ಏಕಾಂತ ಲೋಕಾಂತದ ಬಂಡೆ ಸಿಡಿದಂತೆ / ಕ್ಷಣಿಕವೆಂದರಿತರು ಏಕಾಂತದ ಸೆಳೆಮಿಂಚು / ನನ್ನ ನಿನ್ನ ನಡುವಿನ ಏಕಾಂತದ ಒಳಗುರಿಯುವ ದೀಪದ / ತಾವ ತಡಿಕೆಯ ಏಕಾಂತದ ಉಸಿರೆ /ಏಕಾಂತದ ಮೊಲೆ ಕೊನೆಯ ಹಸಿ ಹಾಲ ಕುಡಿದು /ದೀಪ ಸಾಲಿನ ನಡುವೆ ಏಕಾಂತ ಮರೆತವನು/ ಏಕಾಂಗಿತನ ಬೋರಲಾಗಿ ಬಿದ್ದಿದ್ದರೆ.ಇಲ್ಲಿರುವ ೩೯ ಕವನಗಳಲ್ಲಿ ಮೌನ-ಏಕಾಂತಗಳು ಇಷ್ಟು ಬಾರಿ ಕಾಡುತ್ತವೆಂದರೆ ಇದು 'ಚಿಂತಿಸಬೇಕಾದ ವಿಷಯ'. ಆದರೆ ಮುನ್ನುಡಿಕಾರರು ನಂತರ ಸ್ವಲ್ಪ ಎಚ್ಚರಗೊಂಡಿದ್ದನ್ನೂ ಹೇಳಬೇಕು- 'ಕಾವ್ಯದ ಭಾಷೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ರೂಪಕಗಳ ನಿರ್ಮಾಣದಲ್ಲಿ ಅವು ಸಂಕೀರ್ಣಗೊಳ್ಳುತ್ತ ಹೋಗುತ್ತವೆ. ಆದರೆ ಅವುಗಳು ಸ್ಪಷ್ಟತೆಯನ್ನು ಪಡೆದುಕೊಳ್ಳದಿದ್ದರೆ ಭಾಷೆಯೂ ಸೋಲುತ್ತದೆ, ಕವಿಯೂ ಸೋಲುತ್ತಾನೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕವಿ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ' ಎನ್ನುತ್ತಾರೆ. ಕವಿ ಗೆದ್ದು ಓದುಗ ಸೋಲುವುದು ಅಂದರೆ ಹೀಗೆಯೇ ಇರಬಹುದೆ?! ಅವರು ಮುಂದುವರಿಸಿ- 'ಭಾವಗಂಧದ ತೇರ ಮುಡಿಗೆ ಭಗದ ಸಾಲಿನ ಬೆರಗು/ಹೊಳೆಸಾಲ ಮೇಲಿನ ಚಿತ್ತಾರ ಸಾಲಿನ ನೆರಳಿನೆದೆ ಬಗೆದು/ಉಸಿರ ಮಾಲೆಯ ಬಿಗಿದು ಕಟ್ಟುತ್ತ ' ಎಂಬಂಥ ಸಾಲುಗಳು ಇನ್ನಷ್ಟು ಸ್ಪಷ್ಟತೆ ಬಯಸುತ್ತವೆ ' ಅಂದಿದ್ದಾರೆ. ಥ್ಯಾಂಕ್ಯು . ಹಾಗಂತ ಎಲ್ಲಾ ಪದ್ಯಗಳೂ ಕೆಟ್ಟು ಹೋಗಿವೆ ಅಂತಲ್ಲ. ಆದರೆ ಇರುವ ಕೆಲವು ಒಳ್ಳೆಯ ಪದ್ಯಗಳ ಪ್ರವೇಶಕ್ಕೂ ಅವಕಾಶವೇ ಆಗದಂತೆ ಪದಪುಂಜಗಳು ಕೋಟೆ ಕಟ್ಟಿ ಕುಳಿತಿವೆ. ತಿರುತಿರುಗಿಸಿದರೂ ತೆಗೆಯಲಾಗದ ತುಕ್ಕು ಹಿಡಿದ ಬೀಗದಂತೆ, ಕಗ್ಗಂಟಾಗಿರುವ ನೂಲಿನಂತಿರುವ ಕವಿತೆಗಳಿವು. ಓದುಗರಿಗೆ ಅರ್ಥವಾಗುವಂತೆಯೋ, ಅರ್ಥವಾಗದಿದ್ದರೂ ಅನುಭವಿಸಿ ಸುಖಿಸುವಂತೆಯೋ ಪದ್ಯಗಳಿದ್ದರೆ, ನನ್ನಂಥವರಿಗೆ ತುಂಬ ಉಪಕಾರವಾಗುತ್ತದೆ.
ಬೆನ್ನುಡಿಯಲ್ಲಿ ಜೋಗಿಯವರು ಛಲೋ ಬರೆದಿದ್ದನ್ನೂ ನೀವು ಪೂರ್ತಿಯಾಗಿ ಓದಬೇಕು -'ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು' ಎಂದು ನಂಬಿರುವ ಲಕ್ಕೂರು ಆನಂದ ಬಯಲ ಕವಿ. ತನ್ನಿರವಿನ ಕಟ್ಟೆಚ್ಚರ ಮತ್ತು ಭವಿಷ್ಯದ ಕುರಿತು ತುಂಬು ಭರವಸೆ ಇಟ್ಟುಕೊಂಡು ಕಾವ್ಯ ಕಟ್ಟುವ ಆನಂದ ನಿರಾಶಾವಾದಿಯಲ್ಲ. ಪ್ರತಿ ಕವಿತೆಯನ್ನು ಅದೇ ಮೊದಲ ಕವಿತೆ ಎಂಬ ಹುರುಪು ಹಾಗೂ ಅದೇ ಕೊನೆಯ ಕವಿತೆ ಎಂಬ ಶ್ರದ್ಧೆಯಿಂದ ನೇಯಬಲ್ಲವರು. ಎಲ್ಲೂ ವಾಚ್ಯಕ್ಕೆ ಜಾರಿಕೊಳ್ಳದೇ ನಿಬಿಡ ಅನುಭವಗಳನ್ನು ಸರಾಗವಾಗಿ ರೂಪಕವಾಗಿಸುವ ಕಾವ್ಯ ಮನೋಧರ್ಮ ಅವರಿಗೆ ದಕ್ಕಿದೆ. ನಿಗೂಢವನ್ನು ಬಗೆಯುವ, ಬೆರಗನ್ನು ಉಳಿಸಿಕೊಂಡೇ ವಾಸ್ತವಕ್ಕೆ ಎದುರಾಗುವ, ಕಂಡ ಕನಸಿಗೆಲ್ಲ ಬಣ್ಣ ಇರುವುದಿಲ್ಲ ಎನ್ನುವ ಪ್ರಜ್ಞಾಪೂರ್ವಕ ನಿಲುವಿನಿಂದ ಹುಟ್ಟಿದ ಲಕ್ಕೂರು ಆನಂದರ ಕವಿತೆಗಳಿಗೆ ತೋರುಗಾಣಿಕೆಯಿಲ್ಲ. ಅವು ಆಗಷ್ಟೇ ಅರಳಿದ ಕಣಗಿಲೆ ಹೂವಿನ ಹಾಗೆ ನಳನಳಿಸುತ್ತಾ, ಬದುಕಿನ ನಿರರ್ಥಕತೆಯನ್ನೂ ಒಂದೇ ಏಟಿಗೆ ಕಟ್ಟಿಕೊಡುತ್ತವೆ. 'ಕಣ್ಣ ಹರಿಸಿದಂತೆಲ್ಲ ಬೆರಗ ಬಯಲು, ಮೇಲೆ ನಭದಲ್ಲಿ ನಗುವ ನವಿಲು' ಎಂಬ ಅವರದೇ ಸಾಲು ಅವರ ಕಾವ್ಯದ ಸ್ವರೂಪಕ್ಕೆ ಹಿಡಿದ ಹೊಳೆಯುವ ಶ್ರೀಶೂಲವೂ ಹೌದು. -ಜೋಗಿ
ಇದು ಅಸಾಮಾನ್ಯ ಸಂಕಲನ ಅನ್ನುವುದರಲ್ಲಿ ಸಂದೇಹವೇನೂ ಇಲ್ಲ. ಯಾಕೆಂದರೆ ಇಲ್ಲಿ ಸಾಮಾನ್ಯವಾದದ್ದು ಯಾವುದೂ ಇಲ್ಲ. 'ಸಾವ ಹೇರುವ ದಿವ್ಯಮಾನವ ಬ್ರಹ್ಮಕಮಲಗಳು', 'ಯಾನ ಮರೆತು ನೊಗವರಿದ ಬಂಡಿಯ ಚಕ್ರಪಾಡು', ಋಣದ ಪಲ್ಲಂಗ, ಕುಂಡಲಿಯ ಕೊನರು, ನೆಲದ ಬಯಲು, ಮುಖದ ಮೈಮೇಲೆ ಕುಣಿಯುತ್ತಿರುವ ಕಡು ಕತ್ತಲು, ಜೀವಗರುವಿನ ಹಾಡು, ಕಳವಳದ ಬೊಗಸೆ, ಕಾಲದೊಗಲಿನ ತುಂಬ ಬರೀ ಬಿಕ್ಕಳಿಕೆಗಳ ಗುರುತು, ತುಂಬಿದಲೆಗಳು, ಉಸಿರ ಕಣ್ಣು, ಕಾವಿನ ಸೆಳಕು, ಮುಳ್ಳಿನುಂಗುರದ ಕಣ್ಣು, ...ಹೀಗೆ ಅರ್ಥವಿಲ್ಲದ ವಿಚಿತ್ರಪದ ಜೋಡಣೆಯೇ ಕವಿತೆಯೆ? ಇಂತಹ ಪದಪುಂಜಗಳ ಸಾಲುಗಳೇ ಅರ್ಥವಾಗದೆ, ಮನಸ್ಸು ಮುಟ್ಟದೆ ಪದ್ಯ ಏನು ಮಾಡೀತು? ಸಾಕು, ನಮಸ್ಕಾರ .
December 03, 2008
ಕೃಷ್ಣನ ಸೈಕಲ್ ಸವಾರಿ
ಇದೇ ಸಮಯದಲ್ಲಿ ಹಾರ್ಲೆ ಗುಂಪಿನ ಇನ್ನೊಂದು ತೋಟಕ್ಕೆ ಕೇರಳದಿಂದ ಬಂದ ಹುಡುಗರ ಗುಂಪೊಂದು ಕೆಲಸಕ್ಕೆ ಬಂತು. ಅವರಲ್ಲಿ ಕೆಲವರು ವಿದ್ಯಾವಂತರೂ ಇದ್ದರು. ನಾವು ನಾಟಕಗಳನ್ನು ಮಾಡುವುದನ್ನು ನೋಡಿ, 'ನಾವೂ ನಮ್ಮ ಊರಿನಲ್ಲಿ ನಾಟಕ ಆಡುತ್ತಿದ್ದೆವು. ಈಗ ನಿಮ್ಮ ಜೊತೆಯಲ್ಲಿ ನಾವೂ ಆಡುತ್ತೇವೆ." ಎಂದು ನಮ್ಮೊಂದಿಗೆ ಬಂದರು. ಅವರು ಇಲ್ಲಿ ಒಂದೆರಡು ಮಲೆಯಾಳಿ ನಾಟಕಗಳನ್ನು ಆಡಿದರು. ನಾವು ಒಂದೆರಡು ಕಡೆ ಜೊತೆಯಾಗಿ ಎರಡೂ ತಂಡಗಳ ನಾಟಕಗಳನ್ನು ಮಾಡಿದೆವು. ಅವರಲ್ಲಿ ಕೆಲವರು ಒಳ್ಳೆಯ ನಟರಿದ್ದರಲ್ಲದೆ ಪರಿಕರ- ರಂಗಸಜ್ಜಿಕೆ, ವೇಷಭೂಷಣಗಳನ್ನು ಅವರೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಿದ್ದರು. ಅರಶಿನ, ಕುಂಕುಮ, ಸುಣ್ಣ, ಬ್ಯಾಗಡೆ, ಮೈದಾಹಿಟ್ಟು, ಹಳೆಯ ತಗಡಿನ ಚೂರುಗಳು, ಹಳೆಯ ಬಟ್ಟೆ, ಸೀರೆಗಳು, ಬಾಳೆಪಟ್ಟೆ, ಅಡಿಕೆ ಹಾಳೆ, ಬಿದಿರು, ವಾಟೆ, ಹಳೆಟೈರು, ಟ್ಯೂಬು, ಕೊನೆಗೆ ಏನು ಸಿಕ್ಕಿತೋ ಅದು. ಹೀಗೆ ಎಲ್ಲವನ್ನೂ ಉಪಯೋಗಿಸಿ ಅದರಲ್ಲೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದ್ದರು. ಅವರಿಂದ ನಾವು ಅನೇಕ ವಿಷಯಗಳನ್ನು ಕಲಿತೆವು. ಅವರು ನಮ್ಮಿಂದ ಲೈಟಿಂಗ್-ಉಪ್ಪುನೀರಿನ ಡಿಮ್ಮರ್ಗಳು, ಪರದೆಗಳ ಉಪಯೋಗ ಇತ್ಯಾದಿಗಳನ್ನು ಕಲಿತುಕೊಂಡರು. ನಾವೆರಡೂ ತಂಡಗಳು ಸೇರಿ ಸಕಲೇಶಪುರದ ಟೌನ್ ಹಾಲ್ನಲ್ಲಿ ನಾಟಕ ಮಾಡಿದೆವು. ನಾವು ಆಡಿದ " ನಮ್ಮ ಎಲುಬುಗಳ ಮೇಲೆ' ನಾಟಕ, - ತೋಟ ಕಾರ್ಮಿಕರ ತಂಡವೊಂದು ತಾಲ್ಲೂಕು ಮಟ್ಟದಲ್ಲಿ ಮಾಡಿದ ಪ್ರಥಮ ಪ್ರಯೋಗವಾಗಿತ್ತು.
ನಾವು ಆಡುತ್ತಿದ್ದ 'ನಮ್ಮ ಎಲುಬುಗಳ ಮೇಲೆ ' ನಾಟಕಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ಸಿಕ್ಕಿತು. ಜೊತೆಯಲ್ಲಿ ರೈತ ಚಳುವಳಿಯೂ ಹಳ್ಳಿಹಳ್ಳಿಗಳಿಗೆ ಹಬ್ಬುತ್ತಿದ್ದ ಸಮಯ. ಹಾಗಾಗಿ ಚಳುವಳಿಗೆ ಪೂರಕವಾಗಿ ಅಲ್ಲಲ್ಲಿ ಕೆಲವು ಕಡೆ ಈ ನಾಟಕವನ್ನು ಆಡುತ್ತಿದ್ದೆವು. ಗಾಣದ ಹೊಳೆ, ಹಾನುಬಾಳು- ಹೀಗೇ ಕೆಲವು ಕಡೆ ಇದರ ಪ್ರದರ್ಶನವಾಯಿತು. ಇದರಿಂದ ಅನಿವಾರ್ಯವಾಗಿ ಆಗಾಗ ಪಾತ್ರಧಾರಿಗಳು ಬದಲಾಗುತ್ತಿದ್ದರು.ಒಮ್ಮೆ ನಾಟಕದ ರಿಹರ್ಸಲ್ ನಡೆಯುತ್ತಿದ್ದಾಗ ನನ್ನ ಹತ್ತಿರದ ಸಂಬಂಧಿ ಹುಡುಗನೊಬ್ಬ ರಜೆಯಲ್ಲಿ ನಮ್ಮಲ್ಲಿಗೆ ಬಂದಿದ್ದ. ಅವನಾಗ ೬-೭ನೇ ಕ್ಲಾಸಿನಲ್ಲಿ ಓದುತ್ತಿದ್ದಿರಬೇಕು. ಬೇಗ ನಮ್ಮ ಹುಡುಗರ ಜೊತೆ ಬೆರೆತು ಬಿಟ್ಟ. ಅವನು ಓದುತ್ತಿದ್ದುದು ಸುಳ್ಯ ತಾಲ್ಲೂಕಿನ ಹಳ್ಳಿ ಶಾಲೆಯೊಂದರಲ್ಲಿ. ನಮ್ಮ ಡೈರಿ ಫಾರಂನಲ್ಲಿದ್ದ ಸೈಕಲ್ ನೋಡಿ ಅವನಿಗೆ ಕಲಿಯುವ ಆಸೆಯಾಯ್ತು. ಆದರೆ ನಾವು ಫಾರಂನ ಸೈಕಲ್ಲನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಸಕಲೇಶಪುರಕ್ಕೆ ಹಾಲು ಸಾಗಿಸಲು ನಮಗಿದ್ದಂತಹ ಏಕೈಕ ವಾಹನ ಅದು. ಅದೇನಾದರೂ ಕೆಟ್ಟು ಹೋದರೆ ಆ ಹೊತ್ತಿನ ೪೦-೫೦ ಲೀಟರ್ ಹಾಲು ಸಾಗಿಸಲಾಗದೆ ತೊಂದರೆಯಾಗುತ್ತಿತ್ತು. ಆದ್ದರಿಂದ ಆ ವಿಚಾರದಲ್ಲಿ ನಾನು ಕಟ್ಟುನಿಟ್ಟಾಗಿದ್ದೆ. ಡೈರಿ ಕೆಲಸಗಾರರಲ್ಲದೆ ಬೇರೆ ಯಾರಿಗೂ ಸೈಕಲ್ ಮುಟ್ಟಲು ಬಿಡುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾವೆಲ್ಲ ಮನೆಯಲ್ಲಿ ಊಟಕ್ಕೆ ತಯಾರಾಗುತ್ತಿದ್ದೆವು. ಊಟದ ಸಮಯದಲ್ಲಿ ಈ ಹುಡುಗನ ಪತ್ತೆಯೇ ಇಲ್ಲ. ಸುತ್ತೆಲ್ಲ ವಿಚಾರಿಸಿದೆ. ಕೊನೆಗೆ ತೋಟದ ಕೆಲಸಗಾರನೊಬ್ಬ ಹೇಳಿದ " ನಿಮ್ಮ ನೆಂಟರ ಹುಡುಗ ಸೈಕಲ್ ತೆಗೆದುಕೊಂಡು ಡೈರಿ ಫಾರಂ ಅಂಗಳದಲ್ಲಿ ಸುತ್ತುತ್ತಿದ್ದ." ನನಗೆ ಅಸಾಧ್ಯ ಸಿಟ್ಟು ಬಂತು. ನಾನು ಅವನಿಗೆ " ಸೈಕಲ್ ಹತ್ತುವ ಪ್ರಯತ್ನ ಮಾಡಬೇಡ " ಎಂದು ಎರಡೆರಡು ಸಾರಿ ಹೇಳಿದ್ದೆ. ಆದ್ದರಿಂದ 'ಬರಲಿ ಇವನು ಮನೆಗೆ 'ಎಂದು ಕಾದು ಕುಳಿತೆ. ಒಂದು ಗಂಟೆ ಸಮಯ ಕಳೆದಿರಬಹುದು - ಹುಡುಗ ಮೆಲ್ಲನೆ ಮನೆಗೆ ಬಂದ"ಸೈಕಲ್ ಮುಟ್ಟಿದ್ದೀಯ?' ಜೋರಾಗಿ ಕೇಳಿದೆ. 'ಅದು ....ಅದು' ಎಂದ ಚೆನ್ನಾಗಿ ಬೈದುಬಿಟ್ಟೆ. ಅಮ್ಮ, 'ಹೋಗಲಿ ಬಿಡು- ಏನೋ ಅವನಿಗೆ ಗೊತ್ತಾಗಲಿಲ್ಲ.' ಎಂದಳು. 'ಹೌದು, ಸೈಕಲ್ ಹಾಳಾದರೆ ಇವತ್ತಿನ ಹಾಲಿನ ಗತಿಯೇನು?" ಅಂದೆ. ಹುಡುಗ ಪೆಚ್ಚು ಮೋರೆ ಹಾಕಿಕೊಂಡಿದ್ದ.ಈ ಹುಡುಗ ಪ್ರತಿ ದಿನ ನಮ್ಮ ರಿಹರ್ಸಲ್ ಸಮಯದಲ್ಲಿ ಅಲ್ಲೇ ಬಂದಿರುತ್ತಿದ್ದ. ನಾಟಕ ಪ್ರದರ್ಶನಕ್ಕೆ ಎರಡು ದಿನ ಇರುವಾಗ- ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಒಬ್ಬ ಹುಡುಗಿಗೆ ಆರೋಗ್ಯ ಕೆಟ್ಟಿತು. ಅವಳು ಪಾತ್ರ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಪ್ರತಿ ದಿನ ರಿಹರ್ಸಲ್ ನೋಡುತ್ತಿದ್ದ ಈ ಹುಡುಗನ ಮೇಲೆ ಉಗ್ಗಪ್ಪನ ದೃಷ್ಠಿ ಬಿತ್ತು. ' ಇವನಿಗೆ ಹೇಗೂ ಆ ಪಾತ್ರದ ಮಾತುಗಳು ಬರ್ತವೆ. ಆ ಪಾತ್ರ ಇವನೇ ಮಾಡಿದ್ರೇನು" ಎಂದ.ಹುಡುಗ ನಾಟಕದಲ್ಲಿ 'ಹುಡುಗಿ' ಪಾತ್ರ ಮಾಡುವುದೆಂದಾಯಿತು. ಇವನಿಗೆ ಮೂರೋ ನಾಲ್ಕೋ ಡೈಲಾಗುಗಳಿದ್ದವು. ನಂತರ ಚೂರಿಯಿಂದ ತನ್ನನ್ನೇ ಇರಿದುಕೊಂಡು ಸಾಯುವುದು. ಇಷ್ಟೇ. ಇವನು ರಿಹರ್ಸಲ್ನಲ್ಲಿ ಆ ಹುಡುಗಿಗಿಂತಲೂ ಚೆನ್ನಾಗಿ ಮಾಡಿದ. ಪ್ರದರ್ಶನದ ದಿನ ಮೇಕಪ್ ಮಾಡುವಾಗ ನಮ್ಮಲ್ಲಿ ಟೋಫನ್ ಇಲ್ಲವೆಂದು ನನ್ನ ತಲೆಗೆ ಹೊಳೆಯಿತು. ಇವನು ತಲೆ ಕೂದಲನ್ನು ನುಣ್ಣಗೆ ಅರ್ಧ ಇಂಚು ಬಿಟ್ಟು ಕತ್ತರಿಸಿಕೊಂಡಿದ್ದ!.ಇವನಿಗೆ ತಲೆಗೆ ಎರಡೆರಡು ಚೌರಿಯನ್ನಿಟ್ಟು ಟೇಪ್ ಅಂಟಿಸಿದೆವು. ಅದು ಜಾರದಂತೆ ಮೇಲೊಂದು ಸ್ಕಾರ್ಪನ್ನು ಸುತ್ತಿದೆವು. ಹಾಗೂ ಹೀಗೂ ಸ್ತ್ರಿವೇಷ ಸಿದ್ಧವಾಯ್ತು. ಅವನ ಪಾತ್ರ ಬಂದಾಗ ಉತ್ಸಾಹದಿಂದಲೇ ಸ್ಟೇಜಿಗೆ ಬಂದ. ಮೊದಲನೇ ಡೈಲಾಗೇ ಒಂದು ಸಿಟ್ಟಿನ ಉದ್ರೇಕಕಾರಿ ವಾಕ್ಯ-ಅದನ್ನು ರಭಸದಿಂದ ಹೇಳಿ ಜೋರಾಗಿ ಕೈಗಳನ್ನು ಬೀಸಿ ತಲೆಯನ್ನು ತಿರುಗಿಸಿದ. ತಲೆಗೆ ಸಿಕ್ಕಿಸಿದ ಚೌರಿ ಟೋಫನ್ ಸರ್ಪಾಸ್ತ್ರದಂತೆ ಸ್ಟೇಜಿನಿಂದ ಹಾರಿ ಹೋಯಿತು. ನಮ್ಮ ದಿಢೀರ್ ನಟ ಬೋಳು ತಲೆಯಲ್ಲಿ ನಿಂತಿದ್ದ! ಜನರೆಲ್ಲ " ಹೋ " ಎಂದು ಕೂಗಿದರು. ಅದೇನು ಹೊಳೆಯಿತೋ ಕೊನೆಯ ಡೈಲಾಗ್ ಹೇಳಿ ಚೂರಿಯಿಂದ ತಿವಿದುಕೊಂಡು ಕೆಳಗೆ ಬಿದ್ದು ತನ್ನ ಪಾತ್ರವನ್ನು ಪರಿಸಮಾಪ್ತಿಗೊಳಿಸಿದ. ಜನ ತುಂಬ ಹೊತ್ತಿನವರೆಗೆ ನಗುತ್ತಲೇ ಇದ್ದರು. ಹೀಗೆ ನಮ್ಮಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಹುಡುಗ ಕೃಷ್ಣಕುಮಾರ್ ನಾರ್ಣಕಜೆ, ಈಗ ರಂಗಾಯಣದಲ್ಲಿ ನಟರಾಗಿದ್ದಾರೆ!.
ರಂಗಾಯಣ ಪ್ರಾರಂಭವಾದ ಶುರುವಿನಲ್ಲಿ ಬಿ.ವಿ. ಕಾರಂತರು ರಂಗಾಯಣದ ನಟರಿಗೆಲ್ಲ ಒಂದೊಂದು ಸೈಕಲ್ ಹೊಂದುವುದನ್ನು ಕಡ್ಡಾಯ ಮಾಡಿದ್ದರು. ನಾನು ಒಮ್ಮೆ ರಂಗಾಯಣಕ್ಕೆ ಹೋದಾಗ ಸೈಕಲ್ ಹಿಡಿದು ಹೊರಟ ಕೃಷ್ಣಕುಮಾರ್ನನ್ನು ನೋಡಿ ಇವನು ಹಿಂದೆ ನಮ್ಮ ಡೈರಿಫಾರಂನಲ್ಲಿ ಸೈಕಲ್ ಸವಾರಿಗೆ ಹೊರಟದ್ದು ನೆನಪಾಯಿತು."ಸೈಕಲ್ ಸವಾರಿ ಮಾಡಲು ಹೊರಟು ನೀನು ನನ್ನಿಂದ ಬೈಸಿಕೊಂಡಿದ್ದೆ ಅಲ್ಲವೇ?" ಎಂದು ಕೇಳಿದೆ."ನಾನು ಸೈಕಲ್ ಸವಾರಿ ಮಾಡದೆ ಬೈಸಿಕೊಂಡದ್ದು. ನಾನು ಆವಾಗ ಸೈಕಲ್ ಹತ್ತಲೇ ಇಲ್ಲ. ಆಸೆ ತಡೆಯದ್ರಿಂದ ಸೈಕಲ್ಲನ್ನು ಹಾಗೇ ಅಂಗಳದಲ್ಲಿ ನೂಕಿಕೊಂಡು ಸುತ್ತು ಬರುತ್ತಿದ್ದೆ. ಕೆಳಗೆ ಬಿದ್ದು ಹಾಳಾದೀತೆಂದು ಸೈಕಲ್ ಹತ್ತಲೇ ಇಲ್ಲ." ಬಂತು ವಿವರಣೆ!ಒಂದು ಕ್ಷಣ ಮಾತಿಲ್ಲದವನಾದೆ.ಕೃಷ್ಣ ನಮ್ಮಲ್ಲಿ ಆಟವಾಡುತ್ತಾ, ಬೈಸಿಕೊಳ್ಳುತ್ತಾ ರಂಗಕ್ಕೆ ಬಂದದ್ದು. ಮುಂದೆ ತನ್ನ ಶಾಲೆಯಲ್ಲೂ ತಾನೇ ನಾಟಕ ಬರೆದು ಆಡಿದ್ದು. ಸುಳ್ಯದ ನಾರ್ಣಕಜೆಯಲ್ಲಿ ರಂಗಶಿಬಿರದಲ್ಲಿ ಭಾಗವಹಿಸಿದ್ದು, ನಾಟಕ ಮಾಡಿದ್ದು. ಅದೇ ಶಾಲೆಯಲ್ಲಿ ಉಪಾಧ್ಯಾಯನಾಗಿ ಕೆಲಸಮಾಡಿದ್ದು. ನಂತರ ನೀನಾಸಂನಲ್ಲಿ ಕಲಿತು ನಟ ತಂತ್ರಜ್ಞನಾದದ್ದು, ತಿರುಗಾಟ ಮಾಡಿದ್ದು. ಹೀಗೇ ರಂಗಾಯಣ ತಲುಪಿದ್ದು, ಎಲ್ಲ ಕಣ್ಣ ಮುಂದೆ ಹಾದು ಹೋದವು.
ನಮ್ಮ ನಾಟಕದ ರಿಹರ್ಸಲ್ ಪ್ರಾರಂಭವಾಗುವಾಗ ಸಾಮಾನ್ಯವಾಗಿ ಸಂಜೆ ಏಳು ಗಂಟೆಯಾಗುತ್ತಿತ್ತು. ಆ ಕಾಲದಲ್ಲಿ ಕೆಲಸಗಾರರು ಬೆಳಗ್ಗೆ ಊಟಮಾಡಿ ಕೆಲಸಕ್ಕೆ ಹೋದರೆ ಮಧ್ಯಾಹ್ನ ಊಟ ಮಾಡುತ್ತಿದ್ದುದೇ ಕಡಿಮೆ. ಹಲಸಿನಕಾಯಿ ಬಿಡುವ ಸಮಯವಾದರೆ ತೋಟದಲ್ಲೇ ಹಲಸಿನಕಾಯಿ ತಿಂದಿರುತ್ತಿದ್ದರು. ವರ್ಷದ ಉಳಿದ ಕಾಲವೆಲ್ಲ ಮಧ್ಯಾಹ್ನದ ಊಟ ಇದ್ದರೆ ಇತ್ತು- ಇಲ್ಲದಿದ್ದರೆ ಇಲ್ಲ. ಸಂಜೆ ಕೆಲಸ ಮುಗಿಸಿ ಬಂದು ಬೇಗ ಊಟ ಮಾಡುತ್ತಿದ್ದರು. ರಾತ್ರಿ ಬೇಗ ಮಲಗುತ್ತಿದ್ದರು. ಕೆಲಸಗಾರರ ಮನೆಗಳಲ್ಲಿ ರಾತ್ರಿ ಹತ್ತು ಗಂಟೆಯೆಂದರೆ ನಡುರಾತ್ರಿ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ.ಹಾಗಾಗಿ ನಮ್ಮ ಹುಡುಗರೆಲ್ಲ ಸಂಜೆ ಆರೂವರೆಗೆಲ್ಲ ಊಟ ಮಾಡಿ ಏಳುಗಂಟೆಗೇ ಶಾಲೆಯಲ್ಲಿ ಸೇರುತ್ತಿದ್ದರು. ನಾನು ಡೈರಿ ಫಾರಂ ಉಸ್ತುವಾರಿ ಮಾಡುತ್ತಿದ್ದುರಿಂದ ಮತ್ತು ಅಲ್ಲಿನ ಕೆಲಸಗಾರರಲ್ಲಿ ಹೆಚ್ಚಿನವರು ನಮ್ಮ ತಂಡದಲ್ಲಿದ್ದುದರಿಂದ ಡೈರಿಯಲ್ಲಿ ಹಸುಗಳಿಗೇನಾದರೂ ತೊಂದರೆಯಾದರೆ ನಾವು ಅಲ್ಲಿಗೆ ಹೋಗುತ್ತಿದ್ದೆವು. ನಮ್ಮ ಶಾಲೆಯಿಂದ ಡೈರಿ ಫಾರಂಗೆ ಎರಡು ಫರ್ಲಾಂಗ್ ದೂರವಿತ್ತು. ಅಲ್ಲಿಗೆ ಹೋಗಬೇಕಾದಾಗ ಅಥವಾ ಇನ್ನಾವುದೇ ಅನಿವಾರ್ಯ ಕೆಲಸಗಳಿದ್ದಾಗಲೆಲ್ಲ ನಮ್ಮ ರಿಹರ್ಸಲ್ ರದ್ದಾಗುತ್ತಿತ್ತು. ಅದಲ್ಲದೆ ಸಕಲೇಶಪುರಕ್ಕೆ ಹತ್ತು ಕಿಲೊಮೀಟರ್ ದೂರ ಸೈಕಲ್ನಲ್ಲಿ ಹಾಲು ಸಾಗಿಸುತ್ತಿದ್ದ ಚೆನ್ನವೀರ, ಸುಂದರ ಇವರುಗಳು ಕೆಲವು ಬಾರಿ ಹೋಗಿಬರಲು ಮಲೆನಾಡಿನ ಕಡಿದಾದ ಏರುತಗ್ಗಿನ ದಾರಿಯಲ್ಲಿ ಇಪ್ಪತ್ತು ಕಿ.ಮೀ.ಸೈಕಲ್ ತುಳಿದು ಹಾಲು ಕೊಟ್ಟು ಬಂದು ನಾಟಕದಲ್ಲಿ ಪಾತ್ರ ಮಾಡಿದ್ದೂ ಇತ್ತು!ಇವೆಲ್ಲ ಕಾರಣಗಳಿಂದ ನಮ್ಮ ನಾಟಕ ಸಿದ್ಧಗೊಳ್ಳಲು ಕೆಲವೊಮ್ಮೆ ಎರಡು ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಬೇಕಾಗುತ್ತಿತ್ತು. ಆದ್ದರಿಂದ ನಾವು ಮಳೆಗಾಲ ಮುಗಿಯುತ್ತಾ ಬಂದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಕದ ಸಿದ್ಧತೆಯಲ್ಲಿ ತೊಡಗಿದರೆ ಡಿಸೆಂಬರ್- ಜನವರಿಯಲ್ಲಿ ಪ್ರದರ್ಶನ ಸಾಧ್ಯವಾಗುತ್ತಿತ್ತು. ನಂತರ ಎಪ್ರಿಲ್ ವರೆಗೆ ಅಲ್ಲಿ ಇಲ್ಲಿ ಸಾಧ್ಯವಾದಷ್ಟು ಪ್ರದರ್ಶನಗಳನ್ನು ಮಾಡಿಕೊಳ್ಳಬೇಕು. ಮತ್ತೆ ಅಡ್ಡ ಮಳೆಗಳು ಪ್ರಾರಂಭವಾಗುವುದರಿಂದ ಬಯಲಿನಲ್ಲಿ ನಾಟಕ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದು ಕಷ್ಟ. ಇವೆಲ್ಲದರಿಂದ ಆ ವರ್ಷದ ಮಟ್ಟಿಗೆ ಬೇರೆ ನಾಟಕವನ್ನು ತೆಗೆದುಕೊಳ್ಳುವುದಂತೂ ಅಸಾಧ್ಯದ ಮಾತು. ವರ್ಷದಲ್ಲಿ ಆರೇಳು ತಿಂಗಳುಗಳ ಕಾಲ ಮಳೆ ದಿನಗಳಿರುವ ವರ್ಷಕ್ಕೆ ನೂರಿಪ್ಪತ್ತು ಇಂಚುಗಳಷ್ಟು ಮಳೆ ಬೀಳುವ, ಮಲೆನಾಡಿನ ಯಾವುದೇ ಊರಿನಲ್ಲಿ ಕೃಷಿಕೂಲಿಗಾರರನ್ನು, ರೈತರನ್ನು ಕಟ್ಟಿಕೊಂಡು ನಾಟಕ ಮಾಡಬೇಕಾದರೆ ವರ್ಷವಿಡೀ ನಿರಂತರ ರಂಗಚಟುವಟಿಕೆ ಬೇಕು.
ಒಮ್ಮೆ ಹಾನುಬಾಳಿನಲ್ಲಿ ನಾಟಕ ಪ್ರದರ್ಶನ ಇತ್ತು. ರಾತ್ರಿ ಎಂಟು ಗಂಟೆಗೆ ನಾಟಕ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಾಟಕ ಪ್ರಾರಂಭಕ್ಕೆ ರಾತ್ರಿ ಎಂಟು ಗಂಟೆಯ ನಂತರವೇ ಸರಿಯಾದ ಸಮಯ. ಕೆಲಸಕ್ಕೆ ಹೋದವರು ಮನೆಗೆ ಬಂದು ಅಡಿಗೆ ಮಾಡಿ ಊಟ ತೀರಿಸಿ ಕಾರ್ಯಕ್ರಮಗಳಿಗೆ ಬರಬೇಕಾಗಿರುವುದರಿಂದ ನಗರಗಳಲ್ಲಿ ಮಾಡಿದಂತೆ ಸಂಜೆ ಆರೂವರೆ ಅಥವಾ ಏಳು ಗಂಟೆಗೆ ನಾಟಕ ಪ್ರಾರಂಭಿಸುವುದು ಅನುಕೂಲಕರವಲ್ಲ. ಅಂದು ನಮ್ಮ ಡೈರಿ ಸುಂದರನೂ ಪಾತ್ರಧಾರಿ. ಅವನು ಸಂಜೆ ಸೈಕಲ್ಲಿನಲ್ಲಿ ಸಕಲೇಶಪುರಕ್ಕೆ ಹಾಲು ಸಾಗಿಸಿ ನಂತರ ಅಲ್ಲಿಂದ ಹದಿನೇಳು ಕಿ.ಮೀ. ದೂರದ ಹಾನುಬಾಳಿಗೆ ಬಸ್ಸಿನಲ್ಲಿ ಬರಬೇಕಿತ್ತು. ನಾಟಕದ ಹೊತ್ತಿಗೆ ನಾವೆಲ್ಲ ಗಡಿಬಿಡಿಯಲ್ಲಿ ಸುಂದರನನ್ನು ಮರೆತೇಬಿಟ್ಟಿದ್ದೆವು. ನಾಟಕ ಪ್ರಾರಂಭವಾಯಿತು. ನಾನೂ ಪಾತ್ರಧಾರಿಯಾಗಿ ಸ್ಟೇಜಿನಲ್ಲಿದ್ದೆ. ಸುಂದರನ ಪಾತ್ರ ರಂಗಕ್ಕೆ ಬರಲು ಇನ್ನೊಂದೈದು ನಿಮಿಷ ಇದ್ದಿರಬಹುದು. ಅಷ್ಟರಲ್ಲಿ ನಾಟಕ ನೋಡುತ್ತಾ ಕುಳಿತ ಜನಗಳ ಮಧ್ಯದಲ್ಲಿ ದಾರಿಮಾಡಿಕೊಂಡು ಅವಸರದಲ್ಲಿ ಸುಂದರ ಬರುವುದು ಕಾಣಿಸಿತು. ನನಗೆ ಗಾಬರಿಯಾಯಿತು. ಅವನದ್ದು ಮಂತ್ರಿಯ ಪಿ.ಎ.ಒಬ್ಬನ ಪಾತ್ರ. ಈಗ ಮೇಕಪ್ ಇತ್ಯಾದಿಗಳಿಗೆ ಸಮಯವೇ ಇಲ್ಲ. ನೋಡಿದರೆ ಇವನು ಚಡ್ಡಿ ಶರ್ಟ್ನಲ್ಲಿದ್ದ. ಗ್ರೀನ್ ರೂಂನಲ್ಲಿದ್ದವರು ಇವನನ್ನು ಹಾಗೆಯೇ ಸ್ಟೇಜಿಗೆ ತಳ್ಳಿದ್ದರು. ಅದೇ ವೇಶದಲ್ಲಿ ಸುಂದರ ಸ್ಟೇಜಿಗೆ ಬಂದು ಪಾತ್ರ ಮಾಡಿದ! ಜನ ಇವನ ವಿಚಿತ್ರ ವೇಷ ನೋಡಿ ಸ್ವಲ್ಪ ಕೂಗಾಡಿದರು. ನಾಟಕ ಮುಗಿದ ಮೇಲೆ ಜನರಿಗೆ ಪ್ರಸಂಗ ವಿವರಿಸಿದೆ. ಎಷ್ಟೇ ಕಷ್ಟವಾದರೂ ಸರಿ ತನ್ನ ಪಾತ್ರ ನಿರ್ವಹಣೆಯ ಬಗ್ಗೆ ಇರುವ ಇಂತಹ ರಂಗನಿಷ್ಠೆಯಿಂದಾಗಿ ಮಾತ್ರ ರಂಗ ತಂಡಗಳು ಮತ್ತು ರಂಗ ಚಟುವಟಿಕೆಗಳು ಉಳಿದುಕೊಳ್ಳುತ್ತವೆ ಎಂದೆನಿಸುತ್ತದೆ.
Read more...November 28, 2008
ಎದೆ ಗುಂಡಿಗೆ ಕೊಟ್ಟು ಕೇಳಿಸಿಕೊಳ್ಳುವಿರಾ ಬಡಿತ....
ಪದಗಳು ಮುಗಿದಿವೆ. ಗಂಟಲಲ್ಲಿ ಬೆಂಕಿಯಿದೆ. ತುಟಿಯಲ್ಲಿ ನೆತ್ತರಿದೆ. ರಾಕ್ ಸಾಂಗ್ ಹೊಮ್ಮುತ್ತಿರುವಂತೆ, ವಾಲ್ಯೂಮ್ ಏರಿಸಿದ ಕೂಡಲೇ ಟಿವಿ ಹೊಡೆದುಕೊಂಡಿದೆ. ತಾಜ್ ಹೋಟೆಲ್ನ ಆರನೇ ಮಹಡಿಯಲ್ಲಿದ್ದವರಿಗೆ ಆಗಲೂ ಗೊತ್ತಿಲ್ಲ, ಅದು ಮೆಷಿನ್ಗನ್ನ ಎದೆಬಡಿತವೆಂದು. ಅವರೂ ಗುಂಡಿನ ಸದ್ದನ್ನು ಕೇಳಿದ್ದು ಟಿವಿ, ಥಿಯೇಟರ್ಗಳಲ್ಲಿ ಮಾತ್ರ. ಇಂಗ್ಲೆಂಡ್ನ ವಿರುದ್ಧ ಐದನೇ ಪಂದ್ಯವನ್ನು ಗೆದ್ದು ಕೊಟ್ಟ ವೀರೂನ ವೀರಾವೇಶದ ಸಂಭ್ರಮದಲ್ಲಿ ನಾವೆಲ್ಲ ಸುಖ ನಿದ್ದೆಗೆ ಜಾರುವಷ್ಟರಲ್ಲಿ ಸುದ್ದಿ ವಾಹಿನಿಗಳು ಬಾಯಿಬಾಯಿ ಹೊಡೆದುಕೊಳ್ಳಲಾರಂಭಿಸಿದವು. ಬೆಂಗಳೂರಿನ ತುಂತುರು ಮಳೆಯಲ್ಲಿ ಕುಟುಕುಟು ಚಳಿಯಲ್ಲಿ ಮುದ್ದೆಯಾಗಿರುವ ನಮಗೆ, ಮುಂಬಯಿಯಲ್ಲಿ ಹೊತ್ತಿರುವ ಬೆಂಕಿ ಚುರುಕು ಮುಟ್ಟಿಸಿದೆಯೆ? ಅಥವಾ ಐದನೇ ಪಂದ್ಯವನ್ನೂ ಇಂಗ್ಲೆಂಡ್ ಸೋತಾಗ ‘ಮತ್ತದೇ ಹಳೇ ಕತೆ -ಇಂಗ್ಲೆಂಡ್ಗೆ ಸೋಲು !’ ಎನ್ನುವಂತೆ ಇದು ಮಾಮೂಲು ಅನ್ನುತ್ತೇವೆಯೆ?!
ಬ್ರಿಟನ್ನ ಮಿಲಿಯಾಧೀಶ, ೭೩ರ ಪ್ರಾಯದ ಆಂಡ್ರಿಯಾಸ್ ಲಿವ್ರಾಸ್ ನಾನಾ ತರಹದ ವಾಹನಗಳನ್ನು ಬಾಡಿಗೆ ಕೊಡುವ ದೊಡ್ಡ ಕಂಪನಿಯ ದೊರೆ. ಮುಂಬಯಿಯಲ್ಲಿ ಅತ್ಯುತ್ತಮ ಊಟ-ತಿಂಡಿ ತಾಜ್ನಲ್ಲಿ ಸಿಗುತ್ತದೆ ಅಂತ ಬುಧವಾರ ಸಂಜೆ ಹೋಗಿದ್ದರು. ‘ಟೇಬಲ್ ಎದುರು ಕುಳಿತಿದ್ದೆನಷ್ಟೆ. ಕಾರಿಡಾರ್ನಿಂದ ಮೆಷಿನ್ಗನ್ ಸದ್ದು. ತಕ್ಷಣ ಟೇಬಲ್ ಕೆಳಗೆ ತೂರಿಕೊಂಡೆವು. ಬಂದವರು ಲೈಟ್ ಆರಿಸಿದರೂ, ಮೆಷಿನ್ಗನ್ಗಳು ಮೊಳಗುತ್ತಲೇ ಇದ್ದವು. ಅಲ್ಲಿಂದ ನಮ್ಮನ್ನು ಅಡುಗೆಕೋಣೆಗೆ, ನೆಲಮಹಡಿಗೆ, ಅಲ್ಲಿಂದ ಅತಿಥಿಗಳನ್ನು ಸ್ವಾಗತಿಸುವ ಈ ಕೋಣೆಗೆ. ಸುಮಾರು ೧೦೦೦ ಜನ ಇಲ್ಲಿರಬಹುದು. ಯಾರೂ ಏನನ್ನೂ ಹೇಳುವುದಿಲ್ಲ, ಬಾಗಿಲುಗಳಿಗೆ ಹೊರಗಿನಿಂದ ಬೀಗ ಜಡಿಯಲಾಗಿದೆ. ಹೋಟೆಲ್ ಉದ್ಯೋಗಿಗಳು ನೀರು-ಸ್ಯಾಂಡ್ವಿಚ್ಗಳನ್ನು ಕೊಡುತ್ತಾ ಸಹಾಯ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಯಾರೂ ಏನನ್ನೂ ತಿನ್ನುತ್ತಿಲ್ಲ. ಈಗ ಎಲ್ಲ ತಣ್ಣಗಿದೆ, ೪೫ ನಿಮಿಷಗಳ ಹಿಂದೆ ಬಾಂಬ್ ಸ್ಫೋಟಿಸಿತ್ತು’ ಹೀಗೆಂದು ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಬಿಬಿಸಿಗೆ ಫೋನ್ ಮಾಡಿದ್ದ ; ಸುರಕ್ಷಿತವಾಗಿದ್ದೇನೆಂದು ಮಗನಿಗೆ ಫೋನ್ ಮೂಲಕ ತಿಳಿಸಿದ್ದ ಆಂಡ್ರಿಯಾಸ್. ಶುಕ್ರವಾರ ಬೆಳಗ್ಗೆ ಆತ ಸತ್ತ ಸುದ್ದಿ ಖಾತ್ರಿಯಾಗಿತ್ತು.
ಮಾಧ್ಯಮ ಪ್ರತಿನಿಧಿ ಬ್ರಿಟಿಷ್ ಪ್ರಜೆ ಅಲಾನ್ ಜೋನ್ಸ್ ಟ್ರೈಡೆಂಟ್ ಒಬೆರಾಯ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದ. ಸಹೋದ್ಯೋಗಿಯೊಂದಿಗೆ ಲಿಫ್ಟ್ನಲ್ಲಿ ಸ್ವಾಗತ ಕೋಣೆಗೆ ಇಳಿದು, ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಭಾರೀ ಶಬ್ದ. ಲಿಫ್ಟ್ನಲ್ಲಿದ್ದ ನಾಲ್ವರಲ್ಲಿ ಜಪಾನೀಯನೊಬ್ಬನಿಗೆ ಗುಂಡು ಬಿದ್ದಿತ್ತು. ‘ನಾನು ತಕ್ಷಣ ಲಿಫ್ಟ್ನ ಬಾಗಿಲು ಮುಚ್ಚಿಕೊಳ್ಳುವ ಗುಂಡಿ ಅದುಮಿದೆ. ಗುಂಡು ತಿಂದವನ ಕಾಲು ಬಾಗಿಲಿಗೆ ಅಡ್ಡವಾಗಿತ್ತು. ಅಯ್ಯೋ ಏನು ಮಾಡಲಿ? ತಳ್ಳಿದೆ. ಮೇಲಿನ ಮಹಡಿಯಲ್ಲಿರುವ ರೂಮಿಗೆ ನಾವು ಹಿಂದಿರುಗಿದಾಗ, ನೆಲ ಮಹಡಿಯಲ್ಲಿರುವ ಸುರಕ್ಷಿತ ಜಾಗಕ್ಕೆ ಹೋಗುವ ಸೂಚನೆ ನಮಗೆ ಬಂತು. ಅಲ್ಲಿ ನಾವು ತುಂಬ ಜನ ಸೇರಿದ್ದೆವು. ಸುಮಾರು ಒಂದು ಗಂಟೆಯ ಬಳಿಕ ಪೊಲೀಸರು ಹೊರಗೆ ಕರೆದೊಯ್ದರು’ ಎಂದು ವಿವರಿಸುತ್ತಾನೆ ಆತ.
ಆಸ್ಟ್ರೇಲಿಯಾದ ‘ಮೊಬಿ ಎಕ್ಸ್ಪ್ರೆಸ್ ’ಕಂಪನಿಯ ಮಾಲೀಕನ ೨೨ ವರ್ಷದ ಮಗ ಯುನ್ ಚೈನ್ ಲಾಯ್ಗೆ ಎಚ್ಚರಾದದ್ದು ಗುಂಡಿನ ಮಳೆಯ ಸದ್ದು ಕೇಳತೊಡಗಿದಾಗ. ಸಿಡ್ನಿಯಲ್ಲಿರುವ ಅಮ್ಮನ ಜತೆ ಮಾತಾಡಿ ತಾನು ಒಬೆರಾಯ್ ಹೋಟೆಲ್ನಿಂದ ಹೊರಗೆ ಬಂದಿರುವುದಾಗಿ ಹೇಳಿದ್ದಾನೆ. ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಅಯ್ಯೊ ಅವನದ್ದು ಮೊದಲ ವಿದೇಶ ಪ್ರಯಾಣ. ಭಾವೋದ್ವೇಗಕ್ಕೆ ಒಳಗಾಗಬೇಡ ಅಂದಿದ್ದೀವಿ. ಅವನು ಬಹಳ ಸೆನ್ಸಿಬಲ್. ಸಂದರ್ಭಗಳನ್ನು ನಿಭಾಯಿಸುತ್ತಾನೆ ’ಅಂತ ಹೇಳುತ್ತಲೇ ಉಮ್ಮಳಿಸುತ್ತಿದ್ದಾಳೆ ಅಮ್ಮ.
ಸ್ವಾಗತ ಕೋಣೆಯಲ್ಲಿ ಬುಲೆಟ್ಗಳು ಹಾರಾಡುತ್ತಿದ್ದರೆ, ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್ರೂಂನಲ್ಲಿ ಸಿಲುಕಿಕೊಂಡಿದ್ದಳು. ಸಿಗರೇಟ್ಗೆಂದು ಹೋಟೆಲ್ನ ಮುಖ್ಯ ದ್ವಾರದ ಬಳಿ ಹೋದ ಆಕೆ, ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು, ನೆಲ ಮಹಡಿಯಲ್ಲಿರುವ ಬಾತ್ರೂಂ ಬಳಿಯಾಗಿ ಬರುತ್ತಿದ್ದಳು. ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ. ಆಕೆ ಇತರ ಆರು ಜನರೊಂದಿಗೆ ಬಾತ್ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು. ಆ ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು, ಕಾರಿಡಾರ್ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ. ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು. ಬಚಾವಾಗುವಾಗ ಕಾರಿಡಾರ್ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ. ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು. ಐನೂರು ರೂಪಾಯಿಗಳಿದ್ದ್ದ ಪರ್ಸ್ನ್ನೋ ಮೊಬೈಲ್ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ, ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ. ಆಗ, ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ,ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು.
‘ಮಾಧ್ಯಮಗಳಿಂದ ಉಗ್ರವಾದಕ್ಕೆ ವಿಶೇಷ ಪ್ರಚಾರ ಸಿಗುತ್ತಿದೆ ’ ಎಂಬ ಮಾತಿಗೆ ಪ್ರತಿಯಾಗಿ ‘ಉಗ್ರರ ಫೋಟೊಗಳನ್ನು ತೆಗೆದದ್ದು ಮಾಧ್ಯಮಗಳೇ’ ಎಂಬ ಹೆಗ್ಗಳಿಕೆಯೊಂದಿಗೆ ಚರ್ಚೆ ನಡೆದಿದೆ. ಆದರೆ ಎರಡು ದಿನಗಳು ಕಳೆಯುವಷ್ಟರಲ್ಲಿ, ಎಲ್ಲಿ ಚುನಾವಣೆಗಳಿವೆಯೋ ಅಲ್ಲಿ ಭಯೋತ್ಪಾದನೆಯ ಲಾಭ ಪಡೆಯುವ ಕಾರ್ಯಾಚರಣೆ ಆರಂಭವಾಗುತ್ತದೆ . ನೆತ್ತರಲ್ಲಿ ಅದ್ದಿರುವ ಸ್ಥಳಗಳಿಗೆ ಚೆಂದ ಇಸ್ತ್ರಿ ಮಾಡಿದ ಅಚ್ಚ ಬಿಳಿ ಅಂಗಿಯಲ್ಲಿ ನಿಧಾನವಾಗಿ ನಡೆದು ಬರುವ ರಾಜಕಾರಣಿಗಳನ್ನು ನೋಡಿದರೆ, ಎಂಥವನಿಗಾದರೂ ವಾಕರಿಕೆ ಬರಬೇಕು. ಆದರೆ ಮಹಾನ್ ಮುಂಬಯಿ ಪ್ರೇಮಿ, ಅನ್ಯ ರಾಜ್ಯದವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ರಾಜ್ ಠಾಕ್ರೆ ಯಾವ ಟಿವಿಯಲ್ಲೂ ಕಣ್ಣಿಗೆ ಬೀಳಲಿಲ್ಲ !
ಮೊನ್ನೆಮೊನ್ನೆ ಬಿಡುಗಡೆಯಾದ ‘ಮುಂಬೈ ಮೇರಿ ಜಾನ್’-‘ವೆಡ್ನೆಸ್ಡೇ’ ಸಿನಿಮಾಗಳು ನೆನಪಿನಿಂದ ಮಾಸುವ ಮೊದಲೇ ಉಗ್ರರ ಸಿನಿಮಾ ಬಿಡುಗಡೆಯಾಗಿದೆ. ಆದರೆ ನಮ್ಮ ದುರದೃಷ್ಟ, ಅದರ ನಕಲಿ ಸಿಡಿಗಳು ಎಲ್ಲೂ ಸಿಗುವುದಿಲ್ಲ! ಹಾಗಂತ ಅವರ ಸಿನಿಮಾ ಯಾವುದರ ನಕಲಿಯೂ ಆಲ್ಲ. ಅದು ಒರಿಜಿನಲ್, ಅವರಷ್ಟೇ ಮಾಡಬಹುದಾದ್ದು ಅನ್ನುವಂಥದ್ದು. ‘ವೆಡ್ನೆಸ್ಡೇ’ ಚಿತ್ರದಲ್ಲಿ ಆಮ್ ಆದ್ಮೀ ನಾಸಿರುದ್ದೀನ್ಶಾ, ಸೆರೆಯಲ್ಲಿದ್ದ ನಾಲ್ವರು ಉಗ್ರರನ್ನು ಶಿಕ್ಷಿಸಲು ಎಷ್ಟು ಕಷ್ಟ ಪಟ್ಟ?! ತಾನು ಉಗ್ರಗಾಮಿಯೆಂದು ಬಿಂಬಿಸಿಕೊಂಡು, ಸೆರೆಯಲ್ಲಿದ್ದವರನ್ನು ಪೊಲೀಸರ ಮೂಲಕವೇ ಕರೆಸಿಕೊಂಡು ಬಾಂಬ್ ಸ್ಫೋಟಿಸಿ ಉಗ್ರರನ್ನು ಮುಗಿಸಲು ಯತ್ನಿಸುತ್ತಾನೆ. ಕಣ್ಣೆದುರೇ ಮನೆ ಹೊಕ್ಕ ಉಗ್ರರನ್ನು ಸದೆಬಡಿಯಲು ನಾವು ಪಡುತ್ತಿರುವ ಪರದಾಟ ನೋಡಿದರೆ, ಸಾಮಾನ್ಯ ಪ್ರಜೆಯೊಬ್ಬ ಹೀಗೂ ಮಾಡಬಹುದು ಅಂತ ತೋರಿಸಿದ ವೆಡ್ನೆಸ್ಡೇ ಸಿನಿಮಾ ಬಾಲಿಶವಾಗಿ ಕಾಣುತ್ತಿದೆ. ನಾವು ಹಿಂದಿದ್ದೇವೆ. ಎಷ್ಟೆಂದರೆ ನಮ್ಮ ಹಿಂದಿನಿಂದ ಯಾವ ಉಗ್ರರು ಬರಲಾರರು ! ತೆರೆದ ಎದೆಯಲ್ಲಿ ಹೋಗಿ ಪ್ರಾಣ ಕಳೆದುಕೊಂಡ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಗಳ ಹೆಂಡತಿಮಕ್ಕಳು ಎದೆಎದೆ ಬಡಿದುಕೊಂಡು ಕಣ್ಣೀರುಗರೆಯುತ್ತಿದ್ದಾರೆ. ನಮ್ಮ ನೇತಾರರು ನಿಜಕ್ಕೂ ಮುಖ ಮುಚ್ಚಿಕೊಂಡು ಓಡಾಡಬೇಕು.
ದಾವೂದ್ ಇಬ್ರಾಹಿಂ ಕೈವಾಡದಲ್ಲಿ ೧೯೯೭ರಲ್ಲಿ ೨೫೦ಕ್ಕೂ ಹೆಚ್ಚು ಜನರ ಜೀವ ಹಿಸುಕುವಲ್ಲಿಂದ ಶುರು; ಮುಂಬಯಿಯಲ್ಲಿ ಸರಾಸರಿ ವರ್ಷಕ್ಕೊಂದು ಸಾವಿನ ಹಬ್ಬ. ಯಾವ ಸರಕಾರಗಳೂ ತಡೆಯಲಾರದ್ದನ್ನು ಉಗ್ರರು ಮಾಡುತ್ತಿದ್ದಾರೆ. ಅವರಿಗೆ ತಡೆಯೂ ಇಲ್ಲ, ಯಾವ ಭಿಡೆಯೂ ಇಲ್ಲ. ರಾತ್ರಿ ಒಂದು ಗಂಟೆ ಕರೆಂಟು ಕೈಕೊಟ್ಟರೆ ನಡೆಯುವ ಸರಗಳ್ಳತನಗಳನ್ನು, ಮನೆಯಲ್ಲಿದ್ದ ಒಂಟಿ ಮಹಿಳೆ ಮಟಮಟ ಮಧ್ಯಾಹ್ನವೇ ಕೊಲೆಗೀಡಾಗುವುದನ್ನು ತಡೆಯಲಾಗದ ನಮ್ಮ ಸರಕಾರಗಳು, ರಕ್ಕಸ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದರೆ ನೀವು ನಂಬುತ್ತೀರಾ?
Read more...November 19, 2008
ಬೊಂಬೆ ಹುಡುಗಿ

ಇದು ಡಿಂಕು ಪ್ರಪಂಚ. ಬಂದವರನ್ನು ಹೋದವರನ್ನು ಅದು ಕಣ್ಣು ಕೆಕ್ಕರಿಸಿ ನೋಡುತ್ತಿದೆ. ಸರಕ್ಕನೆ ಕುತ್ತಿಗೆ ಹೊರಳಿಸುತ್ತದೆ. ಅದೊಂಥರಾ ಛದ್ಮವೇಷಧಾರಿಯೂ. ಡಾಕ್ಟರು, ಕುಡುಕ, ರೌಡಿ, ಸ್ವಾಮೀಜಿ ಹೀಗೆ ನಾನಾ ವೇಷಗಳಲ್ಲಿ ಕಂಗೊಳಿಸಿ, ನಾನಾ ಸ್ವರ ಹೊರಡಿಸಿದರೂ ಡಿಂಕು ಡಿಂಕೂನೇ. ಡಿಂಕು ಹುಡುಗಿಯೋ, ಹುಡುಗನೋ? ನೆನೆದವರ ಮನದಲ್ಲಿ ಡಿಂಕು ಎಲ್ಲವೂ. ಯಾರೇ ಆಗಲಿ, ಮಾತಾಡಿಸಿದಾಗಲೇ ಅದಕ್ಕೆ ತೃಪ್ತಿ. ಅಂತಹ ಡಿಂಕು ಎಂದರೆ ಒಂದು ಮರದ ಗೊಂಬೆ. ಅದು ಮಾತಾಡುವಂತೆ ಮಾಡಿದವರು ಇಂದುಶ್ರೀ. ಇವರ ಕೈಗೆ ಸಿಕ್ಕರೆ - 'ಮೂಕಂ ಕರೋತಿ ವಾಚಾಲಂ' !
ಇಂಗ್ಲಿಷ್ನಲ್ಲಿ ಇಂಥವರಿಗೆ ventriloquist ಅನ್ನುತ್ತಾರೆ. ಅಂದರೆ ಮರದ ವಸ್ತುವಿನಿಂದ ಸ್ವರ ಬರುವಂತೆ ಪ್ರದರ್ಶನ ನೀಡುವವರು ಎಂದರ್ಥ. ಜಾದೂಗಾರರೇ ಹೆಚ್ಚಾಗಿ ಮಾಡುವ, `ಮಾತನಾಡುವ ಗೊಂಬೆ' ಅಂತ ಕರೆಸಿಕೊಳ್ಳುವ ಈ ಪ್ರದರ್ಶನ ನೀಡುವವರು ಬಹಳ ಕಡಿಮೆ ಜನ. ಕರ್ನಾಟಕದಲ್ಲಿ ಉದಯ್ ಜಾದೂಗಾರ್, ಪ್ರಹ್ಲಾದ್ ಆಚಾರ್ಯ (ಕೋತಿ)ರಮೇಶ್, ರಂಗಶಾಹಿ ಹೀಗೆ ಕೆಲವರಷ್ಟೇ ನಡೆಸಿಕೊಡುತ್ತಾರೆ. ಮಾತು-ಕೃತಿ ಎರಡರಲ್ಲೂ ಇದಕ್ಕೆ ವಿಶೇಷ ಅಭ್ಯಾಸ ಬೇಕು. ಆದರೆ ಹೆಣ್ಣೊಬ್ಬಳು ಈ ಪ್ರದರ್ಶನವನ್ನು ಆರಿಸಿಕೊಂಡದ್ದು, ಅದರಲ್ಲಿ ಪಳಗಿದ್ದು , ಲಿಮ್ಕಾ ದಾಖಲೆ ಮಾಡಿದ್ದು ಒಂದು ವಿಶೇಷ ಕತೆ .ತನ್ನ ಗೊಂಬೆ ಡಿಂಕುವನ್ನು ಮಾತಾಡಿಸುತ್ತಾ ಟಿವಿ ವಾಹಿನಿಗಳ ಮೂಲಕ ರಾಜ್ಯಾದ್ಯಂತ ಈಗ ಕಾಣಿಸಿಕೊಳ್ಳುತ್ತಿರುವವರು ಇಂದುಶ್ರೀ.
ಎಸ್ಎಸ್ಎಲ್ಸಿ ಮುಗಿಸಿ, ಪಿಯುಸಿ ಸೈನ್ಸ್ ಬೇಜಾರಾಗಿ, ಚಿತ್ರಕಲಾ ಪರಿಷತ್ನಲ್ಲಿ ಐದು ವರ್ಷಗಳ `ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್' ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಯ, ಬೆಂಗಳೂರಿನ ಪುಟ್ಟ ಮನೆ ಹೊಕ್ಕರೆ ಗೋಡೆ ತುಂಬೆಲ್ಲ ಪ್ರಶಸ್ತಿ ಫಲಕಗಳು. ಆಕೆ ರಚಿಸಿದ ಪೇಂಟಿಂಗ್ಸ್ಗಳು, ದೊಡ್ಡ ದೊಡ್ಡ ಆಲ್ಬಮ್ಗಳಲ್ಲಿ ಪ್ರಶಸ್ತಿ ಪತ್ರಗಳು, ಪತ್ರಿಕಾ ವರದಿಗಳ ಕಟ್ಟಿಂಗ್ಸ್ಗಳು. ಹಾಸಿಗೆ ಮೇಲೆ ಡಿಂಕು, ಅದರ ತಮ್ಮ , ಮತ್ತೊಂದು ಕೋತಿ ! `ಫೆಬ್ರವರಿನಲ್ಲಿ `ಜೀ ಕನ್ನಡ' ಚಾನೆಲ್ನಲ್ಲಿ `ನೆನೆದವರ ಮನದಲ್ಲಿ ಡಿಂಕು ದುನಿಯಾ' ಅಂತ ಆರಂಭವಾದಾಗ ಒಂದೂವರೆ ಗಂಟೆ ಶೋ ಕೊಡ್ತಿದ್ದೆ. ಅಷ್ಟು ದೀರ್ಘ ಅವಧಿಯ ಕಾರ್ಯಕ್ರಮ, ಟೆಲಿವಿಷನ್ ಹಿಸ್ಟರೀನಲ್ಲೇ ಫಸ್ಟ್ ಟೈಮ್ ಆಗಿತ್ತು. ಈಗ ಪ್ರತಿ ಶನಿವಾರ ೯ರಿಂದ ೧೦ ರವರೆಗೆ ಬರತ್ತೆ. ಇದಕ್ಕಿಂತ ಮೊದಲು ಸಿಟಿ ಕೇಬಲ್ನಲ್ಲಿ ಎರಡೂವರೆ ವರ್ಷ ಪ್ರತಿ ಶುಕ್ರವಾರ ಒಂದು ಗಂಟೆ ಕಾರ್ಯಕ್ರಮ ಕೊಡ್ತಾ ಇದ್ದೆ. ಅದು ಸುಮಾರು ೧೬೦ ಶೋಗಳಾಗಿತ್ತು. ಹಾಗೇ ಹೆಚ್ಚಿನ ಎಲ್ಲ ಸಿಟಿ ಚಾನಲ್ಗಳಲ್ಲಿ ಮತ್ತು ಉದಯ, ಯು-೨, ಈ-ಟಿವಿ, ಟಿವಿ ೯ಗಳಲ್ಲಿ ಕಾರ್ಯಕ್ರಮ ಕೊಟ್ಟಿದೀನಿ' ಅಂತ ವಿವರ ಕೊಟ್ಟರು ಇಂದುಶ್ರೀ. ತನ್ನ ಪ್ರತಿಭೆಯನ್ನು ಆಕೆ ಮೊದಲು ತೋರಿದ್ದು ಮೆಜಿಷಿಯನ್ ಆಗಿಯಂತೆ. ಆಕೆಯ ತಂದೆ ಆರ್.ಎಂ.ರವೀಂದ್ರ ನಾಟಕ ಕಲಾವಿದರು, ತಾಯಿ ಮಂಜುಳಾ ರವೀಂದ್ರ ಹಾಡುಗಾರ್ತಿ. ಹೀಗಾಗಿ ಸಣ್ಣವಳಾಗಿದ್ದಾಗಲೇ ಎಲ್ಲದರಲ್ಲೂ ಆಸಕ್ತಿ ಇತ್ತು. ಆದರೆ ಮ್ಯಾಜಿಕ್ ಬಗ್ಗೆ ಏನೂ ಗೊತ್ತಿರಲಿಲ್ಲ. ಯಾರಪ್ಪಾ ಓದೋದು, ಮ್ಯಾಜಿಕ್ ಕಲಿತ್ರೆ ಏನಾದ್ರೂ ಆಗಬಹುದು ಅನ್ನೋ ಮೆಂಟಾಲಿಟಿನಲ್ಲಿ ಎಲ್ಲ ಶುರು ಆಗಿದ್ದು. ಹೀಗೆ ಎರಡನೇ ಕ್ಲಾಸ್ನಲ್ಲಿದ್ದಾಗಲೇ ಮ್ಯಾಜಿಕ್ ಅಭ್ಯಾಸ ಶುರು. ಬಳಿಕ ಕೆ.ಎಸ್.ರಮೇಶ್ ಬೆಂಗಳೂರಲ್ಲಿ `ಇಂಟರ್ನ್ಯಾಷನಲ್ ಮ್ಯಾಜಿಕ್ ಫೆಸ್ಟಿವಲ್ ಮಾಡಿದ್ದಾಗ ಅಲ್ಲದೆ, ಹೈದರಾಬಾದ್, ದಿಲ್ಲಿ, ಗೋವಾ, ಕೇರಳ ಮೊದಲಾದೆಡೆ ಕಾರ್ಯಕ್ರಮ ನೀಡಿದೆ ಅನ್ನುತ್ತಾರೆ.ಇಂದುಶ್ರೀ ಮ್ಯಾಜಿಕ್ನ್ನು ಗುರು-ಶಿಷ್ಯ ಪರಂಪರೆಯಲ್ಲಿ ಯಾರಿಂದಲೂ ಕಲಿತವರಲ್ಲ. ಅವರ ಫ್ಯಾಮಿಲಿ ಫ್ರೆಂಡ್ ಕೇಶವ್ ಜಾದೂಗಾರ್ ಮೊದಲು ಸಣ್ಣ ಸಣ್ಣ ಟ್ರಿಕ್ಸ್ ಕಲಿಸಿದರಂತೆ. ಅದರಿಂದ ಆಸಕ್ತಿ ಹೆಚ್ಚಾಗಿ ಸಿ.ಡಿ, ಪುಸ್ತಕಗಳನ್ನು ನೋಡಿ ಅಭ್ಯಾಸ ಮಾಡಿದರು. ಜಾದೂಗಾರರಾದ ಎ.ಕೆ.ದತ್, ಉದಯ್ ಜಾದೂಗಾರ್, ಕುದ್ರೋಳಿ ಗಣೇಶ್ರೆಲ್ಲಾ ಪ್ರೋ ನೀಡಿದರು. ಈ ವೆಂಟಿಲಾಟಿಸ್ಮ್ ಕೂಡಾ ಹಾಗೆಯೇ. ಯಾರೋ ಮಾಡಿದ್ದನ್ನು ನೋಡಿ ಆಸಕ್ತಿ ಬಂದು ತನ್ನ ಪಾಡಿಗೆ ತಾನು ಕಲಿತದ್ದು. ಗಂಟೆಗಟ್ಟಲೆ ಅಭ್ಯಾಸ ಮಾಡಿದ್ದು. ಪಾಲ್ವಿಂಚಿನ್ ಅಂಥವರ ಸಿ.ಡಿ ನೋಡಿ ಕರಗತ ಮಾಡಿಕೊಂಡದ್ದು. ಹಾಗೆ ಒಮ್ಮೆ ಮ್ಯಾಜಿಕ್ ಷೋನಲ್ಲಿ ಕೋತಿ ತಗೊಂಡು ಹೋಗಿ ಮಾತಾಡಿಸಿದ್ದು. ಬಳಿಕ ದತ್ತಾ ಅಂಕಲ್ ಅವರು, ರಾಮಸ್ವಾಮಿ ಅವರಿಂದ ಈ ಡಿಂಕು ಗೊಂಬೆ ಕೊಡಿಸಿದರಂತೆ.
'ಈ ಮಾತಾಡೋ ಗೊಂಬೆ ಡಿಂಕು ಜನಪ್ರಿಯನಾದ ನಂತ್ರ, ಮ್ಯಾಜಿಕ್ ಷೋ ಹೊರಗಡೆ ಮಾಡ್ತಾ, ಟಿವಿನಲ್ಲಿ ಡಿಂಕು ಮಾತ್ರ ಬರ್ತಾನೆ. ಅದನ್ನೊಂದು ಗೊಂಬೆ ಅನ್ನೋದಕ್ಕಿಂತ ಕ್ಯಾರೆಕ್ಟರ್ ಆಗಿ ಜನ ಸ್ವೀಕರಿಸಿದ್ದಾರೆ. ಅವನು ಹಿಂದು-ಮುಸ್ಲಿಂ-ಕ್ರಿಶ್ಚನ್ ಆಗಿದ್ದಾನೆ. ಸಮಾಜಕ್ಕೆ ಒಳ್ಳೇ ಸಂದೇಶ ಕೊಡೋ ಕೆಲಸ ಮಾಡ್ತಿದ್ದಾನೆ. ಬಾಂಬ್ ಬ್ಲಾಸ್ಟ್ ಬಗ್ಗೆ , ಚಿಕುನ್ಗುನ್ಯಾ ಬಗ್ಗೆ ಹೀಗೆ ಸಮಕಾಲೀನ ವಿಷಯಗಳನ್ನೇ ನಾವು ಚರ್ಚಿಸ್ತೀವಿ. ಈ ಕಾನ್ಸೆಪ್ಟ್ಗಳಿಗೆ ರಾಮನಾಥ್ ಅಂತ ಒಬ್ಬರು ನನಗೆ ಹೆಲ್ಪ್ ಮಾಡ್ತಾರೆ. ತತ್ಕ್ಷಣದ ಪ್ರತಿಕ್ರಿಯೆ-ಸ್ಪಂದನೆ ಇದಕ್ಕೆ ಮುಖ್ಯ. ಲೈವ್ ಶೋನಲ್ಲಿ ಅಂತೂ ಯಾರ್ಯಾರೋ ಏನೇನೋ ಪ್ರಶ್ನೆ ಕೇಳ್ತಾರೆ. ಅವುಗಳನ್ನು ನಿಭಾಯಿಸುವ ಸ್ಕಿಲ್ ಬೇಕು' ಅಂತಾಳೆ ಈಕೆ. ಮೂರು ಗೊಂಬೆಗಳ ಜತೆ ಏಕಕಾಲದಲ್ಲಿ ನೀಡಿದ ಪ್ರದರ್ಶನದಿಂದ ಲಿಮ್ಕಾ ರೆಕಾರ್ಡ್ ದಾಖಲಿಸಿದ್ದು ಇಂದುಶ್ರೀ ಹೆಗ್ಗಳಿಕೆ. ಪ್ರತಿ ಶನಿವಾರ `ಸ್ಟಾರ್ ನ್ಯೂಸ್' ಚಾನೆಲ್ನಲ್ಲಿ ಲಿಮ್ಕಾ ರೆಕಾರ್ಡ್ಗಳ ಬಗ್ಗೆಯೇ `ವಾಹ್ ಇಂಡಿಯಾ' ಎಂಬ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದರಲ್ಲಿ ಕಳೆದ ಆಗಸ್ಟ್ನಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಯಿತು. ಅದರಲ್ಲಿ ಎರಡು ಗೊಂಬೆಗಳನ್ನು ಎರಡು ಕೈಗಳಲ್ಲಿ, ಇನ್ನೊಂದನ್ನು ಕಾಲಲ್ಲಿ ಕುಣಿಸಿದರು, ಮಾತಾಡಿಸಿದರು. ಪ್ರತಿಯೊಂದು ಗೊಂಬೆಗೂ ತನ್ನದೇ ದನಿ, ಹಾವಭಾವಗಳು ! ಹೀಗೆ ಮೂರು ಗೊಂಬೆಗಳೂ ಏಕಕಾಲದಲ್ಲಿ ಅಭಿನಯಿಸುತ್ತಾ, ಇಂದುಶ್ರೀಯೂ ಅವುಗಳೊಂದಿಗೆ ಬೆರೆತು ಮಾತಾಡುವುದಕ್ಕೆ ಅಸಾಧಾರಣ ಅಭ್ಯಾಸವೇ ಬೇಕಲ್ಲ. `ಕೆಲವರು ಗೊಂಬೆಗಳನ್ನ ತುಂಬಾ ವಲ್ಗರ್ ಆಗಿ ಯೂಸ್ ಮಾಡ್ತಾರೆ. ನಾನು ಯಾವತ್ತೂ ಹಾಗೆ ಮಾಡಿಲ್ಲ, ಮಾಡೋಲ್ಲ. ಆದರೆ ಎಲ್ಲ ವರ್ಗದ ಜನರಿಗೂ ಇಷ್ಟ ಆಗಬೇಕು ಅನೋದು ನನ್ನಾಸೆ. ಕಾಮಿಡಿ ಇದ್ದಾಗ ಚಿಕ್ಕವರಿಂದ ದೊಡ್ಡವರವರೆಗೆ ಅಟ್ರ್ಯಾಕ್ಟ್ ಆಗ್ತಾರೆ. ಒಮ್ಮೆ ಲೈವ್ ಪ್ರೊಗ್ರಾಮ್ನಲ್ಲಿ ಕಾಲ್ ಮಾಡಿದೋರು- ಡಿಂಕು ರಾಜ್ಕುಮಾರ್ ಥರಾ. ಯಾವ ಪಾತ್ರ ಹಾಕಿದ್ರೂ ಸೂಟ್ ಆಗತ್ತೆ ಅಂದಿದ್ರು' ಅಂತಾರೆ ಇಂದುಶ್ರೀ. ಕೆಂಪೇಗೌಡ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ, ಸೌಂದರ್ಯ ಪ್ರಶಸ್ತಿ ಹೀಗೆ ಹತ್ತಾರು ಸನ್ಮಾನಗಳು ಇವರಿಗೆ ಸಂದಿವೆ. ಕಳೆದ ವರ್ಷ ಮೈಸೂರು ದಸರಾದ ಹಾಸ್ಯೋತ್ಸವದಲ್ಲಿ `ಮಾತಾಡುವ ಗೊಂಬೆ' ಕಾರ್ಯಕ್ರಮಕ್ಕೆ ದೊರೆತ ಅಮೋಘ ಪ್ರತಿಕ್ರಿಯೆ ಇವರಿಗೆ ಸದಾ ನೆನಪು.
ಶಾಲೆಗೆ ಹೋಗ್ತಿದ್ದಾಗ ಸೈಂಟಿಸ್ಟ್ ಆಗಬೇಕು ಅಂತ ಕನಸು ಕಾಣುತ್ತಿದ್ದ ಇಂದುಶ್ರೀ, ಈಗ ಅಪ್ಪ ,ಅಮ್ಮ ಹಾಗೂ ತಮ್ಮನೊಡಗೂಡಿ ಮೂರ್ನಾಲ್ಕು ಗಂಟೆಗಳ ಮ್ಯಾಜಿಕ್ ಕಾರ್ಯಕ್ರಮ ಕೊಡುತ್ತಾರೆ. ಹೀಗೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ೨,೮೦೦ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಮಲಹಾಸನ್ ಸ್ಫೂರ್ತಿಯಿಂದ `ಡಿಂಕೂಸ್ ದಶಾವತಾರಂ' ನಡೆಸಿರುವ ಈಕೆ, ಸ್ವಲ್ಪ ಮಟ್ಟಿಗೆ ಹಾಡುತ್ತಾ, ಸಂಗೀತ ಸಾಧನಗಳನ್ನು ನುಡಿಸುತ್ತಾ, ಪೇಂಟಿಂಗ್ ಚೆನ್ನಾಗಿ ಮಾಡುವ ದಶಾವತಾರಿಯೇ. ಡಿಂಕು ಗೊಂಬೆಯು ಕೃಷ್ಣನಾಗಿ, ಡಿಂಕಾನಂದ ತೀರ್ಥಾನಂದ ಸ್ವಾಮೀಜಿಯಾಗಿ ಬಂದಾಗಲೆಲ್ಲ ಬಹಳ ಜಾಗ್ರತೆ ಬೇಕು. ತಮಾಷೆ ನೆಪದಲ್ಲಿ ಸ್ವಲ್ಪ ತುಟಿ ಮೀರಿದರೂ ಅದು ಸಮಸ್ಯೆ ಸೃಷ್ಟಿಸಬಹುದೆಂಬ ಎಚ್ಚರ ಇವರಿಗಿದೆ. ಇವರ ಪ್ರದರ್ಶನದ ಯಶಸ್ಸಿರುವುದು ಧ್ವನಿಯ ಮಾಂತ್ರಿಕತೆಯಲ್ಲಿ ಮತ್ತು ಸಂದರ್ಭಗಳನ್ನು ನಿರೂಪಿಸುವ ಜಾಣ್ಮೆಯಲ್ಲಿ. ಯಾವುದೋ ಸಿನಿಮಾ, ನಾಟಕದ ದೃಶ್ಯಗಳನ್ನು ಅನುಕರಿಸದೆ, ಹೊಸ ಹೊಸ ಹಾಸ್ಯ ದೃಶ್ಯಗಳನ್ನು ಹೆಣೆಯುವುದು ಇವರ ವೈಶಿಷ್ಟ್ಯ. ಅವುಗಳನ್ನು ಧ್ವನಿ ಚಮತ್ಕಾರದೊಂದಿಗೆ ಬೆಳೆಸುತ್ತಾ ಹಾಸ್ಯದ ಪಂಚಿಂಗ್ ಮತ್ತು ತೀವ್ರ ಪ್ರತ್ಯುತ್ಪನ್ನ ಮತಿತ್ವ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ. ಯಾವುದೇ ಕಾರ್ಯಕ್ರಮವಾಗಿರಲಿ, ಯಾವುದೇ ವಿಷಯವಾಗಿರಲಿ, ಡಿಂಕು ಜತೆ ಇಂದುಶ್ರೀ ಬಂದರೆಂದರೆ ನಗೆ ಹೊನಲು ಗ್ಯಾರಂಟಿ. ಐದು ಗೊಂಬೆಗಳನ್ನು ಏಕಕಾಲದಲ್ಲಿ ಮಾತನಾಡಿಸಿ ಗಿನ್ನಿಸ್ ದಾಖಲೆ ಮಾಡಬೇಕೆಂಬ ಆಸೆ ಇಂದುಶ್ರೀಗೆ, ಗುಡ್ಲಕ್ ಅನ್ನಿ. Read more...
November 12, 2008
ಮಹಾಬಲ ಹೆಗಡೆ ಮಹೋತ್ಸವ
ಹೊನ್ನಾವರ ತಾಲೂಕಿನ ಅಣಿಲಗೋಡ ಎಂಬ ಊರಿನಲ್ಲಿ ಅಂದು ಆಟ. ಸಂಜೆ ಜೋರಾಗಿ ಮಳೆ ಬಿದ್ದುದರಿಂದ ಜನ ಸೇರಿರಲಿಲ್ಲ. ಮೇಳದ ಯಜಮಾನರಾದ ಕೆರೆಮನೆ ಶಿವರಾಮ ಹೆಗಡೆಯವರು ಏನೋ ತೊಂದರೆಯಿಂದ ಬಂದಿರಲಿಲ್ಲ. ಆಗ ಭಾಗವತರೂ, ಮಹಾಬಲ ಹೆಗಡೆಯವರೂ ಸೇರಿ ಮಾತನಾಡಿ ಆ ದಿನ ಆಟವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು. ಆದರೆ ಕೆಲ ಮುಖಂಡರು ‘ನೀವು ಆಟ ಆಡಲೇಬೇಕು. ಇಲ್ಲದಿದ್ದರೆ ನಿಮ್ಮ ಸಾಮಾನುಗಳನ್ನು ಇಲ್ಲಿಂದ ಒಯ್ಯಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಕಲಾವಿದರ ಮೇಲೆ ಸತ್ತೆ ನಡೆಸುವ ಇವರ ರೀತಿಯಿಂದ ರೋಸಿಹೋದ ಮಹಾಬಲ ಹೆಗಡೆಯವರು ಮುಖಕ್ಕಿಷ್ಟು ಬಣ್ಣ ಮೆತ್ತಿಕೊಂಡು ಇದ್ದ ಕ್ರಾಪನ್ನೇ ಬಾಚಿ, ಒಂದು ಹ್ಯಾಂಡ್ಬ್ಯಾಗ್, ಕೊಡೆ ಹಿಡಿದು ‘ನಾನು ವಿಶ್ವಾಮಿತ್ರ, ತಪಸ್ಸಿಗೆ ಹೊರಟಿದ್ದೇನೆ’ ಎಂದು ‘ಹುಚ್ಚುಹೋಳಿ’ ಎಬ್ಬಿಸಿಬಿಟ್ಟರು. ಹಟ ಹಿಡಿದವರು ಎಂದೂ ಮರೆಯದಂತೆ ಮಾಡಿದರು.ಆಗಲೇ ಅವರಿಗೆ ಅಂದಿನ ಹಿರಿಯ-ಶ್ರೇಷ್ಠ ಕಲಾವಿದ ಮೂಡ್ಕಣಿ ನಾರಾಯಣ ಹೆಗಡೆಯವರ ಪರಿಚಯವಾಗಿತ್ತು. ಯಕ್ಷಗಾನ ಕುಟುಂಬದವನೇ ಆದ ಮಹಾಬಲರನ್ನು ಅವರೂ ಬಲ್ಲರು. ಅವರ ಬಗ್ಗೆ ಪ್ರೀತಿಯೂ ಇತ್ತು. ಯಾವಾಗಾದರೊಮ್ಮೆ ಮೂಡ್ಕಣಿ ಹೆಗಡೆಯವರ ಮನೆಗೆ ಹೋಗುತ್ತಿದ್ದ ಮಹಾಬಲರು ಒಮ್ಮೆ ಮೂಡ್ಕಣಿಗೆ ಹೋದಾಗ ಅವರಿಂದ ಮೂರು ಪ್ರಸಂಗ ಪಟ್ಟಿಗಳನ್ನು ತಂದುಕೊಂಡಿದ್ದರು. ಅವುಗಳನ್ನು ಓದಿದ್ದೂ ಆಯಿತು. ತಿರುಗಿ ಕೊಡುವಾಗ ಈ ಕಿಡಿಗೇಡಿ ಹುಡುಗ ಆ ಪ್ರಸಂಗಗಳಲ್ಲಿ ತಾನು ಮಾಡಬಹುದಾದ (ಮಾಡಬೇಕೆನಿಸಿದ) ಮೂರು ಪಾತ್ರಗಳಿಗೆ ಸಂಬಂಧಿಸಿದ ಪುಟಗಳನ್ನಷ್ಟೇ ಹರಿದು ವಾಪಸ್ಸು ತೆಗೆದುಕೊಂಡು ಹೋಗಿ ಕೊಟ್ಟ. (ಎಲ್.ಎಸ್.ಶಾಸ್ತ್ರಿ ಅವರು ಬರೆದಿರುವ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯಿಂದ ಆಯ್ದ ಭಾಗಗಳು)
November 09, 2008
ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?
October 30, 2008
ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೭

October 23, 2008
ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !


October 21, 2008
ಮಾತಿನಲ್ಲಿ ಹೇಳಲಾರೆನು !
- ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ೧.೫೦ಲಕ್ಷ ರೂಗಳ ಖರ್ಚುವೆಚ್ಚದ ತಾಳಮದ್ದಳೆ ಸಪ್ತಾಹ
- ಏಳು ದಿನಗಳಲ್ಲಿ ಸುಮಾರು ೨ ಸಾವಿರ ಜನರ ಪಾಲ್ಗೊಳ್ಳುವಿಕೆ (ತಾಳಮದ್ದಳೆಗೆ ಇದೊಂದು ದೊಡ್ಡ ಸಂಖ್ಯಾಬಲ !)
- ಮಹಾನಗರದ ಆಫೀಸು ಕೆಲಸ, ಟ್ರಾಫಿಕ್ ಜಾಮ್, ಮಳೆ ಮುಂತಾದ ಪ್ರತಿಕೂಲಗಳ ಮಧ್ಯೆಯೂ ನಾನಾ ಕ್ಷೇತ್ರ, ಭಾಗಗಳ ಜನರ ಪಾಲ್ಗೊಳ್ಳುವಿಕೆ
- ತೆಂಕು-ಬಡಗು ಎರಡೂ ತಿಟ್ಟುಗಳ ಸಮ್ಮಿಲನ, ಬೆಂಗಳೂರಿನ ಬಹುತೇಕ ಯಕ್ಷ ಸಂಘಟನೆಗಳ ಸಹಕಾರ
- ಎಲ್ಲ ತಾಳಮದ್ದಳೆಗಳ ವ್ಯವಸ್ಥಿತ ಧ್ವನಿ ಮುದ್ರಣ, ಪ್ರತಿದಿನ ೩ ಗಂಟೆ ೩೦ ನಿಮಿಷಗಳ ನಿಗದಿತ ಅವಧಿ.



October 11, 2008
ಮಾತಿನರಮನೆಯಲ್ಲಿ ಏಳು ದಿನಗಳು
October 05, 2008
ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ





October 04, 2008
ಇದರಲ್ಲಿ ಇದು, ಅದರಲ್ಲಿ ಅದು

September 26, 2008
ನಮ್ ಆಫೀಸಲ್ಲಿ ಹಂಗೇನಿಲ್ಲ ..!

September 22, 2008
ಹಳ್ಳಿ ಥೇಟರ್ನಲ್ಲಿ ಸಿಹಿ ಸುದ್ದಿ
