October 30, 2007

ಇವರು ಹೀಗಂತಾರೆ.....

(ವಿವರಕ್ಕೆ 'ನಟನಾ ವಿಶಾರದರಿಗೆ ಪೊಡಮಟ್ಟು ಬಣ್ಣಿಪೆನೀ ಕತೆಯ...’ ಬರೆಹ-ಪ್ರತಿಕ್ರಿಯೆ ಗಮನಿಸಿ)
ನನಗೂ ಈ ಬಾರಿಯ ತಿರುಗಾಟದ ನಾಟಕಗಳ ಬಗ್ಗೆ ಅನೇಕ ಸಮಸ್ಯೆಗಳಿವೆ. ನನ್ನ ತಕರಾರನ್ನು ಚನ್ನಕೇಶವ, ರಘುನಂದನರೊಡನೆ ಎತ್ತಿದ್ದೇನೆ, ಚರ್ಚಿಸಿದ್ದೇನೆ. ಅವರ ಪ್ರಾಮಾಣಿಕ ಉತ್ತರಗಳನ್ನು (ಸಮಜಾಯಿಷಿಗಳಲ್ಲ) ಆಲಿಸಿದ್ದೇನೆ ಮತ್ತು ಹೆಗ್ಗೋಡಿನಲ್ಲಿ ನಡೆದ ಪ್ರಥಮ ಪ್ರದರ್ಶನಕ್ಕೂ ಎಚ್.ಎನ್. ಕಲಾಕ್ಷೇತ್ರದಲ್ಲಿ ನಡೆದ ಎರಡನೇ ಪ್ರದರ್ಶನಕ್ಕೂ ನಡುವೆ ಸಾಕಷ್ಟು ಬದಲಾವಣೆ ಕಂಡಿದ್ದೇನೆ. ಜನವರಿಯಲ್ಲಿ ರಂಗಶಂಕರದಲ್ಲಿ ನಡೆವ ಪ್ರದರ್ಶನಕ್ಕೂ ಹೋಗಲಿದ್ದೇನೆ. ಒಂದು ತಂಡದ ಬಗ್ಗೆ ಅವರ ಪ್ರಯೋಗಗಳ ಬಗ್ಗೆ ಸಮರ್ಥವಾಗಿ ಚರ್ಚಿಸಲು ಇವೆಲ್ಲ ಸಿದ್ಧತೆಗಳು ಹಾಗು ಗಂಭೀರವಾಗಿ ವಿಮರ್ಶಿಸಲು ಒಂದು ನಿರ್ದಿಷ್ಟ ಚೌಕಟ್ಟು ಅಗತ್ಯ ಎಂದು ಭಾವಿಸಿದ್ದೇನೆ. ಸಾಹಿತ್ಯ ವಿಮರ್ಶೆಯ ಮಾನದಂಡಗಳನ್ನು ಪ್ರದರ್ಶನಕಲೆಗಳ ವಿಮರ್ಶೆಗೆ ಬಳಸಲಾಗದು - ಇಲ್ಲಿಯ ಸಮಸ್ಯೆಗಳೇ ಬೇರೆ ರೀತಿಯದ್ದು, ಅಲ್ಲವೇ?

ನೀವು ಗಂಗಾಧರ ಚಿತ್ತಾಲರ ಉದಾಹರಣೆಯನ್ನು ಕೊಟ್ಟಿದ್ದೀರಿ. ನಾನು ಎಚ್.ಎಸ್. ಬಿಳಿಗಿರಿಯವರ ಪದ್ಯಗಳನ್ನು ಉದಾಹರಿಸುವೆ. ಬಹಳಷ್ಟು ಮಂದಿ ಅಶ್ಲೀಲವೆಂದು ಮೂಗು ಮುರಿಯುವಂಥ ಪದ್ಯಗಳನ್ನವರು ಬರೆದಿದ್ದಾರೆ. ಕಾಮವನ್ನೇ ಕೇಂದ್ರವಸ್ತುವನ್ನಾಗಿಟ್ಟುಕೊಂಡ ಕೃತಿಗಳೆಲ್ಲವೂ ಈ ಅಪಾಯವನ್ನು ಎದುರಿಸಬೇಕು. ಅದರಲ್ಲೂ ಪ್ರದರ್ಶನಕಲೆಯಾದ ನಾಟಕದಲ್ಲಿ ಅಶ್ಲೀಲವಾಗಬಹುದೆಂಬ ಕಾರಣಕ್ಕೆ ಆಂಗಿಕವನ್ನು ಬಿಟ್ಟು ಸಂಭಾಷಣೆಗಳ ಮೊರೆಹೋದರೆ ಅದು ನಾಟಕವಾಗದೆ ತಾಳಮದ್ದಳೆಯಾದೀತು / ಭಾಷಣವಾದೀತು. (ಒಂದೊಮ್ಮೆ ಚಿತ್ತಾಲರ ಕಾಮಸೂತ್ರವನ್ನೇ ಅಭಿನಯಿಸುವುದಾದರೆ ಆ ಪ್ರಯೋಗ ಹೇಗಾಗಬಹುದು ಎಂಬ ಕುತೂಹಲವಾಗುತ್ತಿದೆ. ಏಕೆಂದರೆ ಅದು ಕಾಮವನ್ನು ಕುರಿತ ಗಂಭೀರ ಕಾವ್ಯ. ಲೋಕೋತ್ತಮೆಯಂಥ ತಮಾಷೆ ಅಲ್ಲಿಲ್ಲ). ಈ ನೆಲೆಯಲ್ಲಿ ನೋಡಿದಾಗ ನನಗೆ ನಾಟಕದ ಪ್ರಾರಂಭದಲ್ಲಿ ನಟರು (ಅದರಲ್ಲೂ ಮಹಿಳಾ ಪಾತ್ರಗಳು) ಹೇಳುವ ಮಾತುಗಳು ಬಹಳ ಮುಖ್ಯ ಎನ್ನಿಸುತ್ತೆ – “ಇದೊಂದು ಭಂಡ ನಾಟಕ. ಇಷ್ಟು ಚಿಕ್ಕವರು ಏನೆಲ್ಲ ಮಾತಾಡುತ್ತಾರೆ ಎಂದು ಬೇಸರಿಸದಿರಿ. ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ ಎಂದು ನಂಬಿದ್ದೇವೆ. ಆದರೂ ಇದು ಅತಿ ಎನ್ನಿಸಿದರೆ ಕ್ಷಮಿಸಿ' – ನಾನು ಇಡೀ ನಾಟಕವನ್ನು ನೋಡುವಾಗ ಆಗಾಗ ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದೆ.

ನೀವು ಮೂಲ ಗ್ರೀಕ್ ನಾಟಕ ಲೈಸಿಸ್ಟ್ರಾಟದ ಬಗ್ಗೆ ಓದಿಲ್ಲವೆಂಬ ಅನುಮಾನ ನನ್ನದು. ನಾಟಕದ ಇಂಗ್ಲೀಷ್ ಅನುವಾದ ಮತ್ತು ಅದನ್ನು ಇಂದಿಗೂ ಪ್ರದರ್ಶಿಸುವ ವಿದೇಶೀ ತಂಡಗಳ ಪ್ರಯೋಗಗಳನ್ನು ಗಮನಿಸಿದರೆ, ಅವರು ಬಳಸುವ ಭಾಷೆ, ಅವರ ಹಾವಭಾವ, ರಂಗದ ಮೇಲೆ ನಗ್ನರಾಗಿ ಬರುವುದು ಇತ್ಯಾದಿಗಳನ್ನು ನೋಡಿದರೆ ಲೋಕೋತ್ತಮೆ ನಿಜಕ್ಕೂ ನಮ್ಮ ನೆಲಕ್ಕೆ ಹತ್ತಿರವಾದ ತೀರಾ ಮುಜುಗರವುಂಟುಮಾಡದ ಪ್ರಯೋಗವಾಗಿದೆ ಎಂದೇ ನನ್ನ ಅನಿಸಿಕೆ. ಒಂದು ಮೂಲದ ಪ್ರಕಾರ 1976ರಲ್ಲಿ ಮೊಜಾರ್ಟನ ಒಪೇರಾ ಮಾದರಿಯಲ್ಲಿ ಈ ನಾಟಕವನ್ನು ಆಡಲಾಯ್ತು. ಹಾಡು ನೃತ್ಯಗಳಿಂದ ಕೂಡಿದ ಲೋಕೋತ್ತಮೆ ಬಹುಶಃ ಈ ಪ್ರಯೋಗಕ್ಕೆ ಹತ್ತಿರವಾದುದ್ದಾಗಿದೆ. ಚನ್ನಕೇಶವರೊಂದಿಗೆ ಚರ್ಚಿಸಬಹುದು.
ನಾಟಕವೊಂದನ್ನು ವಿಮರ್ಶಿಸುವಾಗ ಹಿಂದಿನ ಬೇರೆ ಯಾವುದೋ ಪ್ರಯೋಗದ ಜೊತೆಗಿನ ಹೋಲಿಕೆ / ಅಥವಾ ಅ ಕಾಲದ ನಟರ ಹೋಲಿಕೆ ಸರಿಯಲ್ಲ ಎಂಬುದು ನನ್ನ ಸ್ಪಷ್ಟ ನಿಲುವು. ನಿಮ್ಮ ಬರಹದಲ್ಲಿ ಇಂತಹ ಹೋಲಿಕೆಗಳ ಹೊರತು ಯಾವುದೇ ವಿಮರ್ಶೆಯ ಚೌಕಟ್ಟು ಅಥವಾ ಮಾನದಂಡ ಇರುವುದು ಕಾಣಲಿಲ್ಲ. ಕೇವಲ ಒಂದು ಪ್ಯಾರಾದಲ್ಲಿ ನಾಟಕದ ಮತ್ತು ತಂಡದ ಭವಿಷ್ಯದ ಬಗ್ಗೆ ಬರೆದದ್ದು ಓದಿ ಆಶ್ಚರ್ಯವಾಯ್ತು. ನಾನು ಅವರ ಪರ ವಕಾಲತ್ತು ಮಾಡುತ್ತಿಲ್ಲ. ಈ ನಾಟಕದ ಬಗೆಗಿನ ನನ್ನ ಸಮಸ್ಯೆಗಳು ಹೀಗಿವೆ:

  • ನಾಟಕದ ವೇಗ – ಘಟನೆಗಳು ಚಕಚಕನೆ ನಡೆಯುತ್ತ ಹೋಗುತ್ತವೆ. ದೃಶ್ಯದಿಂದ ದೃಶ್ಯಕ್ಕೆ, ಹಾಡಿನಿಂದ ಜಗಳಕ್ಕೆ, ಹೀಗೆ. ಎಲ್ಲಿಯೂ ಒಂದರೆಕ್ಷಣ ನಿಂತು ಯೋಚಿಸಲು ಅನುವುಮಾಡಿಕೊಡುವುದಿಲ್ಲ. ಇದರಿಂದ ಒಟ್ಟಾರೆ ಆಶಯದ ಗಾಂಭೀರ್ಯಕ್ಕೆ ಹೊಡೆತ ಬಿದ್ದಿದೆ.
  • ಯುದ್ಧದ ಪರಿಣಾಮಗಳನ್ನು ಕುರಿತು ನಡೆಯುವ ಸಂಭಾಷಣೆಗಳು ಅದಕ್ಕೂ ಮೊದಲು ನಡೆದ ಘಟನೆಗಳ ಭರದಲ್ಲಿ ಕೊಂಚ ಮಂಕಾಗಿ ಕಾಣುತ್ತವೆ.
ಆದರೆ ಇದೊಂದು ವೈನೋದಿಕ ನಾಟಕ (ಹಾಗು ಮೂಲಕ್ಕೆ ನಿಷ್ಠವಾಗಿದೆ) ಎಂಬುದನ್ನು ನೆನಪಿನಲ್ಲಿಟ್ಟು ನೋಡಿದಾಗ ಹೆಚ್ಚಿನ ಆಭಾಸವಾಗುವುದಿಲ್ಲ ಎಂದು ನನ್ನ ಅನಿಸಿಕೆ. ಚಾಪ್ಲಿನ್ ಮಾದರಿಯ ಸಿನೆಮಾದ ಬಗ್ಗೆ ಚರ್ಚಿಸುವಾಗ ಬರ್ಗಮನ್ನನ ಸಿನೆಮಾಕ್ಕೆ ಬಳಸುವ ಮಾನದಂಡಗಳನ್ನು ಯಥಾವತ್ತಾಗಿ ಬಳಸಲಾಗದು ಅಲ್ಲವೇ? ಚಾಪ್ಲಿನ್ ಮಾಡುವ ಅಂಗ ಚೇಷ್ಟೆಗಳು ಅಥವಾ ಜಾಕ್ವೆಸ್ ತಾತಿಯ ಅಸಂಬದ್ಧವೆನಿಸುವ ಕ್ರಿಯೆಗಳು ನಗೆಯುಕ್ಕಿಸುವುದಷ್ಟೇ ಅಲ್ಲ ನಂತರ ಗಂಭೀರ ಚಿಂತನೆಗೂ ದಾರಿಮಾಡಿಕೊಡುತ್ತವೆ. ಲೋಕೋತ್ತಮೆಯಲ್ಲಿರುವ ವಿಷಯವೇ ಸೊಂಟದ ಕೆಳಗಿನದು. ಈ ವಿಷಯದ ಪೋಲಿತನ ಮತ್ತು ಅದು ಎಲ್ಲರೂ ಅನುಭವಿಸಬಹುದಾದ ತೀವ್ರತೆಯನ್ನು ಕಟ್ಟಿಕೊಡಬಹುದಾದ ಸಾಧ್ಯತೆಯೇ ಅರಿಸ್ಟೋಫೆನಸ್ ಹೀಗೆ ಬರೆಯಲು ಕಾರಣವಾಗಿರಬಹುದು. ನಾಟಕದಲ್ಲಿ ಅದನ್ನು ಅಭಿನಯಿಸುವಾಗ ಆ ತೀವ್ರತೆಯೇ ಪ್ರೇಕ್ಷಕರಾದ ನಮಗೆ ದಾಟಬೇಕು. ದಾಟಿದೆ ಕೂಡ. ಆದರೆ ನಾಟಕ (ನಾನು ಈ ಮೇಲೆ ಹೇಳಿದ ಕಾರಣಗಳಿಗಾಗಿ) ಯುದ್ಧದ ಪರಿಣಾಮಗಳನ್ನು ಅದೇ ತೀವ್ರತೆಯಿಂದ ದಾಟಿಸುವಲ್ಲಿ ಸಂಪೂರ್ಣ ಯಶಸ್ಸು ಕಾಣುವುದಿಲ್ಲ. ಆ ಸಾಧ್ಯತೆ ಇನ್ನೂ ಜೀವಂತವಾಗಿರುವ ಪ್ರಯೋಗ ಇದಾದ್ದರಿಂದ ನಾನಿದನ್ನು ಸಂಪೂರ್ಣವಾಗಿ ತಳ್ಳಿಹಾಕುವುದಿಲ್ಲ.

ಉಂಡಾಡಿಗುಂಡ ಕೂಡ ಸಂಪೂರ್ಣ ಯಶಸ್ವೀ ಪ್ರಯೋಗವಲ್ಲದಿದ್ದರೂ ನಿರಾಸೆಗೊಳಿಸುವಂಥದ್ದೇನೂ ಅಲ್ಲ ಎಂಬುದು ನನ್ನ ಭಾವನೆ. ಬೆಂಗಳೂರಿನಲ್ಲಿ ಸಾಧ್ಯವಾದಾಗಲೆಲ್ಲ ನಾಟಕ ನೋಡುವ, ಗೆಳೆಯರೊಂದಿಗೆ ಚರ್ಚಿಸುವ ನನಗೆ ‘ತಿರುಗಾಟ' ಇಂದಿಗೂ ಒಂದು ಸಮರ್ಥ ರೆಪರ್ಟರಿ ಎಂಬುದರಲ್ಲಿ ಯಾವ ಸಂದೇಹವಿಲ್ಲ. ನಾನಾ ಬಗೆಯ ಒತ್ತಡಗಳಲ್ಲಿ ಕಾರ್ಯನಿರ್ವಹಿಸುವ ಇಂಥ ತಂಡಗಳು ಜೀವಂತವಾಗಿರುವುದೇ ಸಂತೋಷ ಹಾಗು ಹೆಮ್ಮೆಯ ವಿಷಯ ಎಂದುಕೊಂಡಿದ್ದೇನೆ. ಅದೂ ನಾನಾ ಬಗೆಯಲ್ಲಿ ಬೇರೆ ಬೇರೆ ತಂಡದ ನಾಟಕಗಳು ನಿರಾಸೆಗೊಳಿಸಿದ ಮೇಲೆ. ಉದಾಹರಣೆಗಳೊಂದಿಗೆ ವಿವರಿಸಬಲ್ಲೆ – ಸದ್ಯಕ್ಕೆ ಅದು ಈ ಚರ್ಚೆಯ ವ್ಯಾಪ್ತಿಯಲ್ಲಿಲ್ಲ!
- ಪ್ರಶಾಂತ್ ಪಂಡಿತ್
en.wikipedia.org/wiki/Lysistrata
en.wikisource.org/wiki/Lysistrata
-------------------------------------------------------------
ಚಂಪಕಾವತಿಯಿಂದ
1- 'ಪ್ರದರ್ಶನ ಕಲೆಯಾದ ನಾಟಕದಲ್ಲಿ ಆಂಗಿಕವನ್ನು ಬಿಟ್ಟು ಸಂಭಾಷಣೆಗಳ ಮೊರೆ ಹೋದರೆ ಅದು ನಾಟಕವಾಗದೆ ತಾಳಮದ್ದಳೆ/ಭಾಷಣವಾದೀತು’ ಎಂದಿದ್ದೀರಿ.
ಒಪ್ಪಿಗೆ. ಆದರೆ ಆಂಗಿಕಗಳು ಇನ್ನಷ್ಟು ಒಳ್ಳೆಯ ರೂಪಕಗಳಾಗಬೇಕಿತ್ತೆಂಬುದು ನನ್ನ ಅಭಿಪ್ರಾಯ. ಅದು ವೈನೋದಿಕ ನಾಟಕ ಹೌದು. ಆದರೆ ನಾಟಕದ ಒಳಗಿರುವ ಜೀವನ ಸತ್ಯವನ್ನು ಆಂಗಿಕಗಳು ಪ್ರತಿಬಿಂಬಿಸದೆ ಹಾಸ್ಯಕ್ಕಷ್ಟೆ ಸೀಮಿತವಾದವು ಎಂಬುದು ಮೊದಲ ದೂರು.
2- ನಾನು ಮೂಲವನ್ನು ಓದಿಲ್ಲ ಮತ್ತು ನಾಟಕಕ್ಕೆ ಬರುವಾಗ ಅದರ ಹೆಸರು "ತಿಲೋತ್ತಮೆ’ ಅಂತಲೇ ತಿಳಕೊಂಡಿದ್ದೆ. ಯಾವುದೋ ನಮ್ಮ ಪುರಾಣದ ನಾಟಕ ಇರಬೇಕು ಅಂದುಕೊಂಡಿದ್ದೆ! ಹಾಗೆಯೇ ನಾಟಕಕ್ಕೆ ಬರುವ ಮುಕ್ಕಾಲುಪಾಲು ಜನರೂ ನಾಟಕದ ಪಠ್ಯವನ್ನೇನೂ ಓದಿರುವುದಿಲ್ಲ. ನಾಟಕ ಇಷ್ಟವಾಗುವುದು-ಆಗದಿರುವುದು ಅಂದಿನ ಪ್ರದರ್ಶನದಿಂದ ಮಾತ್ರ. ಬಳಿಕ ಅದು ಯಾಕೆ ಇಷ್ಟವಾಯಿತು ಅಥವಾ ಆಗಲಿಲ್ಲ ಎಂಬುದಕ್ಕೆ ಕಾರಣಗಳನ್ನು ಹುಡುಕುತ್ತೇವೆ ಅಷ್ಟೆ. (ನಾಟಕ ನೋಡುತ್ತಿರುವಾಗಲೇ ವಿಮರ್ಶೆ ಆರಂಭಿಸಿದರೆ ಅದು ಶಿಕ್ಷಾರ್ಹ ಅಪರಾಧ! ಧಾರ್ಮಿಕ ಕ್ರಿಯೆಗಲ್ಲಿ ತಪ್ಪು ಕಂಡರೂ ನಡೆಯುತ್ತಿರುವಾಗ ಹೇಳಬಾರದೆಂದು ಹಿರಿಯರು ಹೇಳುತ್ತಾರೆ.) ನಮ್ಮಲ್ಲಿ ನಾಟಕ ಪಠ್ಯದ ವಿಮರ್ಶೆಯಾಗುತ್ತಿದೆಯೇ ಹೊರತು ಪ್ರದರ್ಶನದ ವಿಮರ್ಶೆಯಾಗುವುದು ಬಹಳ ಕಡಿಮೆ. ನನಗೆ ಪಠ್ಯಕ್ಕಿಂತ ಪ್ರದರ್ಶನ ಇಷ್ಟ. ಅದನ್ನು ವಿಮರ್ಶಿಸುವಾಗ ಹಳೆಯ ನಾಟಕ/ಕಲಾವಿದರ ನೆನಪು ಬೇಡ ಅಂದರೆ ಹೇಗೆ? ಸಾಹಿತ್ಯದಲ್ಲಾದರೂ ಹಳಬರನ್ನೆಲ್ಲ ಮರೆತು ಹೊಸಬರ ಬಗ್ಗೆ ವಿಮರ್ಶೆ ಮಾಡಲು ಸಾಧ್ಯವೆ?
3- 'ವಿದೇಶಿ ತಂಡಗಳು ಈ ನಾಟಕದಲ್ಲಿ ನಗ್ನರಾಗಿ ರಂಗಕ್ಕೆ ಬರುವುದು ಇತ್ಯಾದಿ ನೋಡಿದರೆ ಲೋಕೋತ್ತಮೆ ನಮ್ಮ ನೆಲಕ್ಕೆ ಹತ್ತಿರವಾದ ತೀರಾ ಮುಜುಗರ ಉಂಟುಮಾಡದ ಪ್ರಯೋಗ’ ಎಂದಿದ್ದೀರಿ. ಮುಜುಗರವಾಗುತ್ತದೆ, ಪೋಲಿತನ ಜಾಸ್ತಿ ಎಂಬುದೆಲ್ಲ ನನ್ನ ಆಕ್ಷೇಪವೇ ಇಲ್ಲ. ಮನರಂಜನೆಯಷ್ಟೇ ಸಾಕೆಂದಾದರೆ "ಲಾಫ್ಟರ್ ಚಾಲೆಂಜ್’ ಕಾರ್ಯಕ್ರಮ ನೋಡಿದಂತೆ ಇದನ್ನೂ ಧಾರಾಳ ನೋಡಬಹುದು. ಮೂಲಕ್ಕೆ ನಿಷ್ಠವಾಗಿದೆ ಎಂಬ ಮಾತ್ರಕ್ಕೆ ಏನಾದರೂ ಉಪಯೋಗವಾದೀತೆಂದು ಅನ್ನಿಸುವುದಿಲ್ಲ. ಅಲ್ಲಿಯ ಹೂವನ್ನೇ ಇಲ್ಲಿ ತಂದು ತೋರಿಸುವುದಕ್ಕಿಂತ ಅದರ ಚಿತ್ರವನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆ ಎಂಬುದೇ ಕಲೆಯ ಹೆಚ್ಚುಗಾರಿಕೆ. ಸಾಮಾನ್ಯ ಮಟ್ಟದಿಂದ ಅಸಾಮಾನ್ಯಕ್ಕೆ ಏರಿಸುವ ಎಲ್ಲ ಅವಕಾಶಗಳೂ ಈ ನಾಟಕದ ವಸ್ತುವಿನಲ್ಲಿ ಇದೆ ಅಂದುಕೊಂಡಿದ್ದೇನೆ. "ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ’ ಎಂಬ ವಿಶಿಷ್ಟ ಮಾತನ್ನು ಅರ್ಥ ಮಾಡಿಸುವ, ಸ್ಪಷ್ಟಪಡಿಸುವ, ಪುಷ್ಟೀಕರಿಸುವ ಸಂಗತಿಗಳು ಪ್ರದರ್ಶನದಲ್ಲಿ ಇವೆಯೆ?
4- ಈ ಪ್ರದರ್ಶವನ್ನು ನೋಡಿದಾಗ ಹೃದಯಕ್ಕೆ ತಟ್ಟುವ, ಆಹ್ ಎನ್ನಿಸುವ ಕ್ಷಣಗಳು (ನಾನು ಈ ಹಿಂದೆ ಹೇಳಿರುವ ಎರಡು ಸಂದರ್ಭ ಬಿಟ್ಟರೆ) ಬೇರೆ ಬರಲೇ ಇಲ್ಲ. ಕಣ್ಣು-ಮೂಗು ಅರಳಿಸಿ, ಹುಬ್ಬೇರಿಸುವುದೇ ಒಳ್ಳೆಯ ಅಭಿನಯ ಅಂತ ನನಗನಿಸುವುದಿಲ್ಲ. ಇಷ್ಟವಾದರೆ ಅದಕ್ಕೆ ಕಾರಣಗಳನ್ನು ಹುಡುಕುವ ಸಂದರ್ಭ ಬಹಳ ಕಡಿಮೆ. ಇಷ್ಟವಾಗದಿದ್ದಾಗ (ಅದೂ ಪ್ರತಿಷ್ಠಿತ ತಂಡದ್ದು) ಬಗೆದು ನೋಡುವುದು ಅಗತ್ಯ-ಸಹಜ ಅಲ್ವೆ?
5- 'ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ’ ನನ್ನಲ್ಲಿ ಸ್ವಲ್ಪ ಇರುವುದು ಹೌದು. ಅದು ಬ್ಲಾಗ್ ನೀಡುವ ಸ್ವಾತಂತ್ರ್ಯ ಹಾಗೂ ಪ್ರಾಯ ದೋಷ ಮಾರಾಯ್ರೆ.
ನೀನಾಸಂನ ಕಲಾವಿದರು-ನೇತಾರರ ಬಗ್ಗೆ ಸಕಲ ಗೌರವ ಪ್ರೀತಿ ಇಟ್ಟುಕೊಂಡೇ ಈ ಎಲ್ಲ ಅಕ್ಷರಗಳ ದುಂದುವೆಚ್ಚ !



Read more...

October 26, 2007

ಅಡಪರ ಸೆಟ್ಟಿಂಗ್‌ನಲ್ಲಿ ಒಂದು ಸಿಟ್ಟಿಂಗ್

ರೆಹಗಾರ, ಸಂಗೀತಗಾರ, ಚಿತ್ರ ಕಲಾವಿದ ಹೀಗೆ ಯಾರೇ ಆಗಿರಲಿ, ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ವಿವರವಾಗಿ ಮತ್ತು ಸ್ಪಷ್ಟವಾಗಿ ಹೇಳುವವರು ಕಡಿಮೆ. ಒಂದೆರಡು ಮಾಮೂಲಿ ಉದಾಹರಣೆಗಳಲ್ಲೇ ಅವರು ತಡಬಡಾಯಿಸುತ್ತಾರೆ. ಆದರೆ....ಆರಡಿ ಮೀರಿದ ಆಜಾನುಬಾಹು, ಗಂಭೀರ ನಡೆನುಡಿಯ, ಕರ್ನಾಟಕದ ಅಪ್ರತಿಮ ಸೆಟ್ ಡಿಸೈನರ್ ಶಶಿಧರ ಅಡಪ ಮೊದಲ ಭೇಟಿಯಲ್ಲೇ ನನ್ನ "ಬಲಿ’ ತೆಗೆದುಕೊಂಡರು. (ಔಟ್ ಮಾಡಿದರು ಅನ್ನೋದಕ್ಕೆ ಕನ್ನಡ ಕ್ರಿಕೆಟ್ ಭಾಷೆ !) ’ಪ್ರತಿರೂಪಿ’ ಸಂಸ್ಥೆಯ ಮಾಲೀಕನಾಗಿ ಜಾಹೀರಾತು ದೃಶ್ಯಾವಳಿಗೆ ಸೆಟ್ ವಿನ್ಯಾಸ ಮಾಡುವುದು ಅವರ ಮುಖ್ಯ ವೃತ್ತಿ . ಜತೆಗೆ ನಾಟಕ, ಸಭಾಕಾರ್‍ಯಕ್ರಮಗಳಿಗೆ, ಮಧ್ಯೆಮಧ್ಯೆ ಸಿನಿಮಾ ಕಲಾ ನಿರ್ದೇಶನ. ಎಲ್ಲದರಲ್ಲೂ ಅಚ್ಚಳಿಯದ ಛಾಪು. ಅವರ ಸ್ಪಷ್ಟ ಮಾತುಗಳನ್ನು ಇಲ್ಲಿ ಹೊಡೆದುಕೊಂಡಿದ್ದೇನೆ (ಟೈಪ್ ಮಾಡಿದ್ದೇನೆ !).

ಭಾಗ-೧
ಪಾತಕಿಗಳ ಬದುಕಿನಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಜೀವನದಲ್ಲೂ ’ಆ ದಿನಗಳು’ ಇದ್ದೇಇವೆ ! ಆ ಬಗ್ಗೆ ಹೇಳಿ. ಸುಮಾರು ೧೯೭೮ರಲ್ಲಿ ನಾನು ದಕ್ಷಿಣಕನ್ನಡದಿಂದ ಬೆಂಗಳೂರಿಗೆ ಬಂದಾಗ ಹೇಳೋದಕ್ಕೆ ಏನೂ ಇರಲಿಲ್ಲ ! ವಿಶೇಷ ಅಕಾಡೆಮಿಕ್ ಶಿಕ್ಷಣ, ಹಣದ ಬೆಂಬಲ, ಏನಾಗಬೇಕೆಂಬ ನಿರ್ಧಾರ ಯಾವುವೂ ಇರಲಿಲ್ಲ. ಮಧ್ಯಮ ವರ್ಗದಿಂದ ಬಂದಿದ್ದರಿಂದ ಕೊಟ್ಟ ಕೆಲಸ ಮಾಡುವ, ಹೊಂದಾಣಿಕೆಯ ಮನೋಭಾವವೊಂದು ಇತ್ತು. ಹೀಗಾಗಿ ಎನ್‌ಜಿಒಗಳಿಗೆ ಸೇರಿಕೊಂಡು ಕೆಲ್ಸ ಮಾಡ್ತಾ ದೇಶ-ವಿದೇಶ ಸುತ್ತಿದ್ದರಿಂದಾಗಿ ನನಗೊಂದು ವರ್ಲ್ಡ್ ವಿಷನ್ ಸಿಕ್ಕಿತು. ಅಮೆರಿಕ ಅಧ್ಯಕ್ಷರ ಚಯರ್ ಹೇಗಿರತ್ತೆ, ವ್ಯಾನ್‌ಗೋನ ಪೇಂಟಿಂಗ್ ಹೇಗಿರತ್ತೆ ಎಂಬ ತರಹದ ವಿವರಗಳು ತಿಳಿದವು. ಸಿನಿಮಾ ಕಲಾ ನಿರ್ದೇಶಕನಿಗಂತೂ ಅದು ಅನಿವಾರ್ಯ. ನಾನಾ ಕಾಲಗಳಲ್ಲಿ ದೇಶಗಳಲ್ಲಿ ಆದ ಬದಲಾವಣೆಗಳ ಅರಿವು ಇದ್ದಾಗ ಸಿನಿಮಾದಲ್ಲೂ ಕಾಲ-ದೇಶ ದೋಷವಿಲ್ಲದೆ ಪ್ರತಿಕೃತಿ ನಿರ್ಮಿಸೋಕೆ ಸಾಧ್ಯ ಅಂತ ಈಗ ಅನ್ಸತ್ತೆ.
ನಾಗಾಭರಣ, ಸಿಜಿಕೆ ಮೊದಲಾದವರ ಜತೆಸೇರಿ ನಾಟಕಗಳ ಮೂಲಕವೇ ವೇದಿಕೆ ಹಿಂದೆ ಬಂದವರಲ್ವೆ ನೀವು? ಹೌದು. ನಾಗಾಭರಣರ "ಗೀತ ಮಾಧುರಿ’ ನೃತ್ಯ ರೂಪಕ, ಸಿಜಿಕೆ ನಿದೇಶನದ ಮಹಾಚೈತ್ರ ನಾಟಕ ಇವುಗಳಲ್ಲೆಲ್ಲ ಸಿಕ್ಕಿಸಿಕ್ಕಿದ ಕೆಲಸ ಮಾಡೋದು. ಆಗ ದೊರೆತ ಬರೆಹಗಾರ-ಕಲಾವಿದರ ಸಖ್ಯ ಸಿನಿಮಾಕ್ಕೂ ಎಳೆದು ತಂದಿತು. ನಾವೆಲ್ಲ ನಾನ್‌ಫಾರ್ಮಲ್ ಆಗಿ ಕಲಿತದ್ದೇ ಜಾಸ್ತಿ. ಕಲರ್,ಡಿಸ್ಟೆಂಪರ್, ಪಿಗ್ಮೆಂಟು, ಡ್ರೈ ಬ್ರೆಷ್ ಅನ್ನೋದನ್ನೆಲ್ಲಾ ಬಿಟ್ಟು ಮಣ್ಣನ್ನೇ ಜಾಳಿಸಿ, ಫೆವಿಕಾಲ್ ಸೇರಿಸಿ, ಗಟಾರ್ ಪಂಪ್ ತಂದು ಹುಣ್ಣಿಯಾಲದಲ್ಲಿ ಮನೆ ಗೋಡೆಗೆ ಬಳಿದದ್ದು, ನಾಗಮಂಡಲದಲ್ಲಿ ಬಹಳ ಮೆಚ್ಚುಗೆ ಪಡೆದ ಮದುವೆ ದೃಶ್ಯಕ್ಕೆ ಮಾಡಿದ ಬಾಳೆಮಂಟಪ ಕೂಡಾ ನಮ್ಮ ಕಾಮನ್‌ಸೆನ್ಸ್ ಹಾಗೂ ಹಳ್ಳಿಯವರಿಂದ ಎರವಲು ಪಡೆದ ಜ್ಞಾನದ್ದು. ಹಾಗಂತ ಆರ್ಟ್ ಫಿಲಂಗಳಿಗೇ ನಾನು ಕೆಲಸ ಮಾಡಿದರೂ, ಅವುಗಳಲ್ಲಿ ಮೂರು ಜನಪ್ರಿಯವೂ ಆದವು. ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ ಮತ್ತು ನಾಗಮಂಡಲ. ಇದರಿಂದ ಜನ ಗುರುತಿಸೋದಕ್ಕೆ ಸಾಧ್ಯ ಆಯ್ತು. ನಾಗಮಂಡಲ, ಕಾನೂರು ಹೆಗ್ಗಡಿತಿ, ಸಿಂಗಾರೆವ್ವಗಳಿಗೆ ಪ್ರಶಸ್ತಿ ಬಂದಾಗ, ಅದು ಕೆಲಸದಲ್ಲೊಂದು ಪ್ರಮೋಶನ್ ಅಂತ ತಿಳ್ಕೊಂಡವನು ನಾನು. ಕೆಲವರು ಅವಾರ್ಡ್‌ನ್ನ ಸಾಮಾಜಿಕ ಗೌರವ ಅಂತ ತಿಳ್ಕೊಂಡು ಸುಮ್ಮನಾಗ್ತಾರೆ. ಆದರೆ ನಮ್ಮ ಫೀಲ್ಡಲ್ಲಿ ಅದನ್ನ ಕ್ಯಾಶ್ ಆಗಿ ಬದಲಾಯಿಸೋದು ಹೇಗೆ ಅಂತಲೇ ನಾನು ಯೋಚಿಸೋದು.
ಕಲಾಕ್ಷೇತ್ರದಲ್ಲಿ ರಾತ್ರಿ ಹನ್ನೊಂದೂವರೆ ತನಕ ನಾಟಕ ಪ್ರಾಕ್ಟೀಸ್ ಮಾಡಿ ಪ್ರಕಾಶ್ ರೈ, ನೀವೆಲ್ಲಾ ಚಿತ್ರಾನ್ನ ತಿಂದು, ಟಿವಿಎಸ್ ಹತ್ಕೊಂಡು ಹೋಗ್ತಾ ಇದ್ದಿರಿ. ಈ ಫೋರ್ಡ್ ಕಾರು-ಡ್ರೈವರು ಎಲ್ಲಿಂದ?! ನಾನೂ ಬೆಂಗಳೂರು ಬಿಟ್ಟು ಬಾಂಬೆಗೆ ಹೋಗಿದ್ರೆ ಇದಕ್ಕಿಂತ ನಾಲ್ಕು ಪಟ್ಟು ಸಂಪಾದನೆ ಮಾಡಬಹುದಿತ್ತು. ಅದು ಬೇಡ. ನನಗೆ ಕನ್ನಡ-ಕನ್ನಡಿಗರು-ಕರ್ನಾಟಕ ಬೇಕು ಅಂತ ಇಲ್ಲಿ ಉಳಿದುಕೊಂಡದ್ದು. "ಅಗ್ನಿವರ್ಷ್’ ಅಂತಹ ದೊಡ್ಡ ಹಿಂದಿ ಸಿನಿಮಾಕ್ಕೆ ಕೆಲಸ ಮಾಡಿದಾಗಲೂ ಕನ್ನಡದ ಕಾರ್ಪೆಂಟರ್, ಪೈಂಟರ್‌ಗಳನ್ನೇ ಕರ್‍ಕೊಂಡು ಹೋಗಿದೀನಿ. ಆದರೆ ೨೫-೩೦ ಜನಕ್ಕೆ ಪ್ರತಿದಿನ ಕೆಲಸ ಕೊಡೋವಷ್ಟಾಗ್ತೀನಿ ಅಂತ ಕನಸಿನಲ್ಲೂ ಆವತ್ತು ಅಂದುಕೊಂಡಿರಲಿಲ್ಲ. ಈಗ ಜಾಹೀರಾತು ಫಿಲ್ಮ್ ತಯಾರಿಯಲ್ಲಿ ನಮ್ಮ "ಪ್ರತಿರೂಪಿ’ ಸೌತ್‌ಇಂಡಿಯಾದಲ್ಲಿ ಲೀಡಿಂಗ್ ಕಂಪನಿ ! ಮೊನ್ನೆ ಮೊನ್ನೆ ವೊಡಾಫೋನ್ ಆದ ಹಚ್ ನಾಯಿಗೆ ಮಾಡಿದ ಮನೆಯ ಸೆಟಿಂಗ್ ನಮ್ಮದೇ. ಸ್ವಿಫ್ಟ್ ಕಾರು, ವಾಟಿಕಾ ಹೀಗೆ ದೊಡ್ಡ ದೊಡ್ಡ ಪ್ರಾಡಕ್ಟ್‌ಗಳ ಜಾಹೀರಾತು ನಿರ್ಮಾಣದಲ್ಲಿ ಕೆಲಸ ಮಾಡಿದ ಹೆಮ್ಮೆ ನಮ್ಮ ತಂಡಕ್ಕೆ.ಅತ್ಯಂತ ಸೊಫಿಸ್ಟಿಕೇಟೆಡ್ ವರ್ಕ್ ನಮ್ಮದು. ಆರ್ಟಿಸ್ಟ್, ಗ್ರಾಫಿಕ್ ಡಿಸೈನರ್, ಇಂಟರ್‌ನೆಟ್ ಎಲ್ಲಾ ಇವೆ. ಇವನ್ನೆಲ್ಲ ನಾನು ಬಾಂಬೆನಲ್ಲಿ ಅಂತಾರಾಷ್ಟ್ರೀಯ ನಿರ್ದೇಶಕರಿಂದ ಕಲಿತದ್ದು. ನನ್ನ ಬಳಿ ಒಳ್ಳೇ ಬುಕ್ ಕಲೆಕ್ಷನ್ ಇದೆ, ಬಿಟ್ರೆ ಅರುಣ್ ಸಾಗರ್ ಹತ್ರ ಇದೆ.
ನಾಟಕದ ರಂಗಸಜ್ಜಿಕೆಗೂ ಸಿನಿಮಾದ್ದಕ್ಕೂ ಏನು ಮುಖ್ಯ ವ್ಯತ್ಯಾಸ? ನಾಟಕದಲ್ಲಿ ಒಂದು ಡೈರೆಕ್ಷನ್‌ನಲ್ಲಿ ಕಾಣೋ ಸೆಟ್ಟಿಂಗ್ ಇದ್ರೆ ಸಾಕು. ಸಿನಿಮಾದಲ್ಲಿ ಕ್ಯಾಮರಾ ಎಲ್ಲ ಕಡೆಗೂ ತಿರುಗುತ್ತೆ. ನಾಟಕದಲ್ಲಿ ನೋಡೋದು ಮನಸ್ಸು. ಸಿನಿಮಾದಲ್ಲಿ ಕ್ಯಾಮರಾ. ಮನಸ್ಸು ಅಪೂರ್ಣವನ್ನ ಪೂರ್ಣ ಮಾಡಿಕೊಳ್ಳುತ್ತೆ ! ಕ್ಯಾಮರಾ ಯೋಚನೆ ಮಾಡಲ್ಲ, ಕಂಪ್ಲೀಟ್ ಮಾಡಲ್ಲ. ಎಸ್. ರಾಮಚಂದ್ರ ಹೇಳೋರು, "ಕ್ಯಾಮರಾ ಫ್ರೇಮ್‌ನ ಹೊರಗೆ ಅರಮನೆ ಇದ್ರೂ ಲೆಕ್ಕಕ್ಕಿಲ್ಲ’ ಅಂತ.
ಒಡನಾಟಕ್ಕೆ ಸಿಕ್ಕ ಹಿರಿಯರ ಕತೆ ಹೇಳ್ತೀರಾ? ಸಾಮಾನ್ಯದಿಂದ ಅದ್ಭುತ ಸೃಷ್ಟಿ ಮಾಡಬಲ್ಲ ಕನ್ನಡದ ಅತ್ಯುತ್ತಮ ಕ್ಯಾಮರಾಮ್ಯಾನ್ ಎಸ್. ರಾಮಚಂದ್ರ ಅವರು. ಕಾನೂರು ಹೆಗ್ಗಡತಿಯ ಎತ್ತಿನಗಾಡಿ ದೃಶ್ಯದಲ್ಲಿ ನಿಜವಾಗಿ ಗಾಡಿ ಓಡಿಯೇ ಇಲ್ಲ ! ಬರೀ ಚಕ್ರ ತಿರುಗುತ್ತೆ, ಮರಗಳು ಓಡುತ್ವೆ. ಎಲ್ಲೀವರೆಗೆ ಅಂದರೆ ಡಮ್ಮಿ ಕೊಂಬುಗಳನ್ನು ಶೂಟ್ ಮಾಡಿ ಗಾಡಿ ಓಡೋ ಥರದ ಎಫೆಕ್ಟ್ ಕೊಟ್ಟಿದ್ದಾರೆ ! ಎಲ್ಲೂ ದುಂದುವೆಚ್ಚ ಮಾಡದ ಕಾಸರವಳ್ಳಿಯವರ ಎಕನಾಮಿಕ್ಸ್ ಕೂಡಾ ಬಹಳ ಇಷ್ಟ. ಒಂದು ಡಲ್‌ಗ್ರೀನ್ ಡಬ್ಬ ಇಡಿ, ಅದರ ಎದುರು ಸಿಲ್ವರ್ ಚೆಂಬು ಇಡಿ ಅಂತ, ಬರೀ ಎರಡು ವಸ್ತುಗಳಿಂದ ಒಂದು ಫ್ರೇಮ್‌ಗೆ ಡೆಪ್ತ್ ಕ್ರಿಯೇಟ್ ಮಾಡ್ತಾರೆ.
ನನಗೆ ಅತ್ಯಂತ ಖುಶಿ ಕೊಟ್ಟ ಆರ್ಟ್ ಡೈರೆಕ್ಷನ್, "ದ್ವೀಪ’ ಸಿನಿಮಾದ್ದು. ಇನ್ನೊಂದು ಕವಿತಾ ಲಂಕೇಶ್‌ರ "ದೇವೀರಿ’. ಅಲ್ಲಿ ೩೫ ಪರ್ಸೆಂಟ್ ಸಿನಿಮಾ ಸ್ಲಮ್‌ನಲ್ಲಿ ನಡಿಯತ್ತೆ. ಆದರೆ ಅಷ್ಟೂ ಬರೀ ಸೆಟ್ಟಿಂಗ್ಸ್.
ಕೆಲವರು ಏನೇ ಕಮೆಂಟ್ ಮಾಡಿದ್ರೂ ಕಾರ್ನಾಡ್ ಅವರ ಮನುಷ್ಯತ್ವ ವಿಶೇಷವಾದ್ದು. ತೀರ್ಥಹಳ್ಳಿಯಲ್ಲಿ ಶೂಟಿಂಗ್ ಮಾಡ್ತಾ ಇದ್ದಾಗ ಉದ್ದ ಬಾಲದ ಹಕ್ಕಿಯೊಂದು ಕಾಣಿಸ್ತ್ತು. ಅದನ್ನ ನಮ್ಮೂರಲ್ಲಿ ಪಿಂಗಾರ ಹಕ್ಕಿ ಅಂತಾರೆ ಅಂತ ಜತೆಯಲ್ಲಿದ್ದವನಿಗೆ ಹೇಳಿದೆ. ಆಗ ಕಾರ್ನಾಡ್‌ರು, ಅದನ್ನ ಬರ್ಡ್ ಆಫ್ ಪ್ಯಾರಡೈಸ್ ಅಂತಾರೆ, ನಿಮಗೂ ಹಕ್ಕಿ ನೋಡೋ ಹುಚ್ಚು ಇದಿಯಾ ಅಂದ್ರು. ರಾತ್ರಿ ರೂಮಿಗೆ ಕರೆದು ಸಲೀಂ ಅಲಿ ಪುಸ್ತಕ ಕೈಗೆ ಕೊಟ್ಟು ಇದರಲ್ಲಿ ಯಾವುದಾದ್ರೂ ಹಕ್ಕಿ ಕಂಡರೆ ಗುರುತಿಸಿ, ಹೊಸತು ಕಂಡ್ರೆ ನನ್ನ ಕರೀರಿ ಅಂದ್ರು !
ಈಗ ಶಿರಸಿಯಲ್ಲಿರುವ ಹಿರಿಯರಾದ ನಜೀರ್ ಅವರನ್ನಂತೂ ಕನ್ನಡದ ಕಲಾ ನಿರ್ದೇಶಕರು ನೆನಪಿಸಿಕೊಳ್ಳಲೇಬೇಕು. ೭೦ರ ಆರಂಭದ ಹೊತ್ತಿಗೆ ಮೆಡ್ರಾಸ್‌ನಲ್ಲಿ ನಡೀತಿದ್ದ ಕೆಲಸಗಳೆಲ್ಲಾ ಬೆಂಗಳೂರಲ್ಲೇ ಆಗತೊಡಗಿದಾಗ ಕನ್ನಡದ ಕಾರ್ಪೆಂಟರ್, ಪೈಂಟರ್‌ಗಳನ್ನು ಬೆಳೆಸಿದವರೇ ಅವರು. ಕನ್ನಡದವರಿಗೆ ಕೆಲಸ ಸಿಗಬೇಕು ಅಂತ ಅವರಿಗೆ ಹೃದಯದಲ್ಲಿತ್ತು .
ನಿಮ್ಮ ಸೆಟ್ಟಿಂಗ್ಸ್ ಬಹಳ ಬಹಳ ಕಲಾತ್ಮಕ. ಎಲ್ರಿಗೂ ಒಪ್ಪಿಗೆಯಾಗೋದು ಕಷ್ಟ ಅನ್ನೋ ಅಭಿಪ್ರಾಯವೂ ಇದೆಯಲ್ಲ? ನನಗೂ ರೊಮ್ಯಾಂಟಿಕ್ ಇಮೇಜಸ್, ಕಮರ್ಷಿಯಲ್ ಇಮೋಷನ್ ಬಯಸೋದ್ರ ಬಗ್ಗೆ ಏನೇನೂ ತಕರಾರಿಲ್ಲ. ಪ್ರಾಡಕ್ಟ್ ಮಾರುವ ಗುರಿಯೇ ಮುಖ್ಯವಾಗಿರುವ ಜಾಹೀರಾತು ಸಿನಿಮಾಗೆ ನಾನು ಕೆಲಸ ಮಾಡೋನೇ. ಜಗಜಗ ಅನ್ನೋ ಸಾಂಗ್ ಸೆಟ್‌ಗಳ ಬಗ್ಗೆ ದ್ವೇಷ ಇಲ್ಲ. ಈಗಲೂ ನಾನು ಒಳ್ಳೆ ಕಮರ್ಷಿಯಲ್ ಸೆಟ್ ಹೊಡೀಬಲ್ಲೆ. ಆದರೆ ನನ್ನ ತಕರಾರಿರುವುದು ತೀರಾ ಬಾಲಿಶ ಹುಚ್ಚುಗಳ ಬಗ್ಗೆ ಮಾತ್ರ. ಇರೋಟಿಕ್ ಫೀಲಿಂಗ್ ಬಗ್ಗೆ ನಮ್ಮಲ್ಲಿ ಹಳೆ ಮನೋಭಾವವೇ ಇದೆ. ಹೊಕ್ಕಳಿಗೆ ಮುತ್ತು ಕೊಡೋದು, ತೊಡೆ ತೋರಿಸೋದು ಇಷ್ಟೇ ಅಂತ ತಿಳ್ಕೊಂಡಿದ್ದಾರೆ. ಆಧುನಿಕ ಮನುಷ್ಯನ ಫೀಲಿಂಗ್‌ಗಳು ಬೇರೆಬೇರೆ ಥರ ಇವೆ. ಸೂರಿಗೆ ಆ ಪ್ರಜ್ಞೆ ಇದೆ. ತನ್ನ ಸಿನಿಮಾಗಳಲ್ಲಿ ಕಲರ್, ಟೆಕ್ಸ್‌ಚರ್, ಸರ್ಫೇಸ್ ಎಲ್ಲ ಚೆನ್ನಾಗಿ ಬಳಸ್ತಾನೆ. ಅವನ ಹೊಸ ಚಿತ್ರ "ಇಂತಿ ನಿನ್ನ ಪ್ರೀತಿಯ’ ದಲ್ಲಿ ಬಾತ್‌ಟಬ್ ದೃಶ್ಯವನ್ನೂ ಅಗ್ಲಿ ಆಗದೆ ತೀರಾ ಡಿಫರೆಂಟ್ ಆಗಿ ತೋರಿಸೋದಕ್ಕೆ ಟ್ರೈ ಮಾಡಿದ್ದೇವೆ. ಸಿಕ್ಕಿದ್ದನ್ನು ಪಕ್ಕನೆ ಗ್ರಹಿಸುವ ಸೂರಿಯಂತಹ ಹೊಸ ಯುವಕರಿಗೆ, ನನಗೆ ಗೊತ್ತಿದ್ದನ್ನು ಹೇಳೋಕೂ ಬಹಳ ಖುಶಿ. "ನೀವು ಕೊಟ್ಟಿದ್ದನ್ನೆಲ್ಲಾ ರೇಪ್ ಮಾಡ್ಬಿಟ್ಟೆ ಸಾರ್’ ಅಂತಾನೆ !

Read more...

October 17, 2007

ನಟನಾ ವಿಶಾರದರಿಗೆ ಪೊಡಮಟ್ಟು ಬಣ್ಣಿಪೆನೀ ಕತೆಯ...

ಈ ಬಾರಿಯ ನೀನಾಸಂ ತಿರುಗಾಟದ ತಂಡದಲ್ಲಿ ಆರು ಜನ ಹುಡುಗಿಯರು. ಇಷ್ಟೊಂದು ಹುಡುಗಿಯರು ತಂಡದಲ್ಲಿರುವುದು ಪ್ರಥಮವೇನೋ. ಅವರಲ್ಲಿ ಒಬ್ಬಳು ಮಾತ್ರ ಕಳೆದ ವರ್ಷವೂ ಇದ್ದವಳು. ಸುಮಾರು ಎಂಟು ಜನ ಹುಡುಗರಲ್ಲಿ ಬಹುಶಃ ಮೂವರು ಮಾತ್ರ ಹಳಬರು. ಆದರೆ ಕೆಲವರ್ಷಗಳ ಹಿಂದೆ ಬಹುತೇಕ ಕಲಾವಿದರು ಎರಡುಮೂರು ತಿರುಗಾಟ ಮಾಡುವುದು ಸಾಮಾನ್ಯವಾಗಿತ್ತು ಅಂತ ನೆನಪು.

ನನ್ನ ಒಲವಿನ ನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದ ಆಲ್‌ಟೈಮ್ ಫೇವರಿಟ್ ನಾಟಕಗಳಾದ "ಕೆಂಪು ಕಣಗಿಲೆ’ ಮತ್ತು "ಚಿರೇಬಂದೀವಾಡೆ’ಗಳನ್ನು ನೆನಪಿಸಿಕೊಂಡರೆ ಈಗ ದುಃಖವಾಗುತ್ತದೆ ! ನಾನು ಆಗ ಸಣ್ಣವನಿದ್ದುದರಿಂದ ಇಷ್ಟವಾಯಿತೋ, ಈಗ "ನಾನು’ ಬೆಳೆದು ಬುದ್ಧಿ ಬೆಳೆಯದೆ ಇರುವುದರಿಂದ ಈಗಿನದ್ದು ಇಷ್ಟವಾಗುವುದಿಲ್ಲವೋ, ಸರಿಯಾಗಿ ಗೊತ್ತಿಲ್ಲ. ವರ್ಷದ ಹಿಂದೆ ಮರುತಿರುಗಾಟದಲ್ಲಿ ಪ್ರದರ್ಶಿಸಿದ 'ಕೇಶಪಾಶ ಪ್ರಪಂಚ’ (ನಿ:ಐತಾಳ) ಹೊರತುಪಡಿಸಿದರೆ ಮೂರ್‍ನಾಲ್ಕು ವರ್ಷಗಳ ನೀನಾಸಂ ನಾಟಕ --ಡ್ಯಾಶ್ ಡ್ಯಾಶ್--!

ಕಳೆದ ವರ್ಷದ ನಾಟಕಗಳ ಬಗ್ಗೆ ( ಮುಖ್ಯವಾಗಿ ಇಕ್ಬಾಲ್‌ರು ನಿರ್ದೇಶಿಸಿದ್ದರ ಬಗ್ಗೆ) ವಿ.ಕ.ದಲ್ಲಿ ಕಟುವಾಗಿ ಬರೆದು, ಕೆಲವರಿಂದ ಹೀಯಾಳಿಸಿಕೊಂಡೆ. ಹಾಗಾಗಿ ಈ ಸಾರಿಯೂ ಬೊಂಡ ಕೆತ್ತುವ ಆಸೆಯಿಲ್ಲ ! ಧರ್ಮೇಂದ್ರಕುಮಾರ್ ಅರಸ್, ಅಚ್ಯುತ, ಅರಸ್ ಪತ್ನಿ ಶೈಲಜಾ(ಈಗ ಎಲ್ಲರೂ ಸೀರಿಯಲ್ ನಟನಾ ವಿಶಾರದರು)ಮೊದಲಾದವರಿದ್ದ ೨೦೦೦-೦೧ರ ತಂಡಕ್ಕೇ ನೀನಾಸಂ ಕತೆ ----- ಅಂತ ಈಗ ಅನ್ನಿಸಲಾರಂಭಿಸಿದೆ !
ಈಗಿನ ತಿರುಗಾಟದ ಮೊದಲ ನಾಟಕ "ಇ ನರಕ ಇ ಪುಲಕ’ಕ್ಕೆ ಹೋಗದೆ (ಕೆಲವರ ಹಿತವಚನದ ಮೇರೆಗೆ ) ಚೆನ್ನಕೇಶವ ನಿರ್ದೇಶನದ "ಲೋಕೋತ್ತಮೆ’ ನೋಡಹೋದೆ. ಸಕತ್ ಮನರಂಜನೆ ಅಂತಂದರು ಕೆಲವರು. ಕೊನೆಯ ಸಾಲಿನಲ್ಲಿ ಕುಳಿತಿದ್ದ ಕಾಲೇಜು ಹುಡುಗಹುಡುಗೀರು ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆಯುತ್ತಿದ್ದರು. ಎರಡು ರಾಜ್ಯಗಳ ನಡುವೆ ನಡೆಯುವ ಯುದ್ಧ ತಪ್ಪಿಸಿ ಶಾಂತಿ ಏರ್ಪಡಿಸಲು, ಎರಡೂ ಕಡೆಯ ಹೆಂಗಸರು ಒಟ್ಟಾಗಿ ಗಂಡಸರನ್ನು ಬಹಿಷ್ಕರಿಸುವ ನಾಟಕವದು. ಹೆಂಗಸರೆಲ್ಲ ಮನೆ ಬಿಟ್ಟು ಕೋಟೆ ಸೇರಿ ಗಂಡಸರ ಕಾಮವಾಂಛೆಗೆ ಸಹಕರಿಸುವುದಿಲ್ಲವೆಂದೂ, ತಮ್ಮ ಆಸೆಗಳನ್ನೂ ತಡೆದುಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆ. ರತಿಸುಖದ ಆಸೆ ಅದುಮಿಡಲಾಗದ ಗಂಡ-ಹೆಂಡಂದಿರ ವರ್ತನೆಗಳೇ ನಾಟಕದ ಘಟನಾವಳಿ. ಯುದ್ಧ-ಶಾಂತಿಗಿಂತ ಹೆಚ್ಚಾಗಿ , ಲೈಂಗಿಕತೆಯ ಬಲ-ದೌರ್ಬಲ್ಯಗಳನ್ನು ಹೇಳುತ್ತ, ಗಂಡು-ಹೆಣ್ಣು ಎಲ್ಲ ವಿಷಯಗಳಲ್ಲೂ ಸಮಾನರು ಅಂತ ನೀತಿ ಹೇಳಲಾಗುತ್ತದೆ. ನಾಟಕದ ಪೂರ್ತಿ ಎಲ್ಲರ ಬುದ್ಧಿಯೂ ಸೊಂಟದ ಕೆಳಗೇ ! ಮದಿರೆ-ಮಾನಿನಿ-ಮಾಂಸ ವರ್ಜಿಸಿದ, ಸಭ್ಯ ಮರ್ಯಾದಸ್ಥ ಮಡಿವಂತರು ಬಹುತೇಕರಲ್ಲ ! ಹಾಗಿದ್ದೂ , ೨೦೦೧ರಲ್ಲಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗದ, ಆನಗಳ್ಳಿ ನಿರ್ದೇಶನದ "ಜುಜುಬಿ ದೇವರ ಜುಗಾರಿಯಾಟ’ ಇದಕ್ಕಿಂತ ಎಷ್ಟೋ ಹೆಚ್ಚು ಪಾಲು ರಂಜನೆ ಕೊಡುವ ನಾಟಕ ಎನ್ನುತ್ತೇನೆ. ಅದರಲ್ಲಿನ ನೆರಳು-ಬೆಳಕು, ಅಭಿನಯ, ರಂಗಪರಿಕರ, ದೈಹಿಕ ಕಸರತ್ತು , ರಂಗತಂತ್ರ ಭೋ ಚೆನ್ನಾಗಿತ್ತು . (ನಾಟಕದ ವಸ್ತು ನಿರ್ವಹಣೆಯ ಸಮರ್ಪಕತೆ ಬಗ್ಗೆ ಬೇರೆ ಮಾತು.)

*****

ಬಹುಶಃ ೨೦೦೦ನೇ ಇಸವಿ ಇರಬೇಕು. ದ್ವಿತೀಯ ಪಿಯುಸಿಯಲ್ಲಿ ಲಾಗ (ಎಲ್ಲ ಅರ್ಥಗಳಲ್ಲಿ !) ಹೊಡೀತಿದ್ದ ಹುಡುಗ. ಕಾಲೇಜಿಗೆ ಒಂದು ವಾರ ಚಕ್ಕರ್ ಒಗೆದು ನೀನಾಸಂ ತಲುಪಿದಾಗ ರಾತ್ರಿ ಹತ್ತೂವರೆ. ಸಂಸ್ಕೃತಿ ಶಿಬಿರದ ಮೊದಲನೇ ದಿನದ "ಸಕ್ಕರೆ ಗೊಂಬೆ’(ನಿ:ಅಕ್ಷರ) ನಾಟಕ ಮುಗಿಸಿಕೊಂಡು ಎಲ್ಲರೂ ಊಟಕ್ಕೆ ಹೋಗ್ತಾ ಇದ್ರು. ಹುಡುಗ ಏಕಾಂಗಿ, ಅಪರಿಚಿತ ಸ್ಥಳ, ಸಂಕೋಚ ಸ್ವಭಾವ. ಹೊಸನಗರದಲ್ಲಿ ಒಂದೂವರೆ ಗಂಟೆ ಕಾದುಕಾದು ಆದ ಮಂಡೆಬಿಸಿ ಬೇರೆ. ಎದುರು ಕಂಡ ಕೋಣೆಯ ಒಳನುಗ್ಗಿದ. ವೀಳ್ಯದಸಂಚಿಯೊಳಗೆ ಕೈಯಿಟ್ಟುಕೊಂಡೇ ನಿದ್ದೆ ಹೋದಂತಿತ್ತು ಒಂದು ಮುದಿ ಜೀವ. ಫೋಟೊದಲ್ಲಷ್ಟೇ ಸುಬ್ಬಣ್ಣರನ್ನು ನೋಡಿದ್ದ ಅವನಿಗೆ ಅವರೇ ಆಗಿರಬಹುದೇ ಎಂಬ ಅನುಮಾನ. ಹೊರಗೆ ನಡೆಯುತ್ತಿರುವ ಅವಸರ-ಗಲಾಟೆ ನೋಡಿದರೆ, ಸಂಸ್ಥೆಯ ಮುಖ್ಯಸ್ಥನೊಬ್ಬ ಹೀಗೆ ಕುಳಿತಿರಲು ಸಾಧ್ಯವೆ ಎಂಬ ಪ್ರಶ್ನೆ.. ಕೊನೆಗೂ ಅಳುಕಿನಿಂದಲೇ ಮಾತಾಡಿದ. ಯಾರನ್ನೋ ಕರೆದು ವ್ಯವಸ್ಥೆ ಮಾಡಿದರು. ಆ ರಾತ್ರಿ ಸುಖ ನಿದ್ದೆ. ಅವರೇ ಕೆ.ವಿ. ಸುಬ್ಬಣ್ಣ ಅಂತ ಮರುದಿನ ಖಚಿತವಾಯಿತು !

*****

ಹೈಸ್ಕೂಲಿನಲ್ಲಿದ್ದ ೯೪-೯೫ರ ದಿನಗಳಲ್ಲಿ ನೋಡಿದ "ಹೂಹುಡುಗಿ’, ನಂತರದ ವರ್ಷದ "ಚಿರೇಬಂದಿವಾಡೆ’ ಹೀಗೆ ವರ್ಷದ ಮೂರು ನಾಟಕಗಳಲ್ಲಿ ಒಂದಾದರೂ ನೀನಾಸಂ ನಾಟಕ ನೋಡದೆ ಇರುತ್ತಿರಲಿಲ್ಲ. ಕಾರಂತರ ನಿರ್ದೇಶನದ "ಕಿಂದರಿಜೋಗಿ’ಯಿಂದ ಶುರುವಾಗಿ ಕಳೆದ ಹತ್ತು ವರ್ಷಗಳಲ್ಲಿ ರಂಗಾಯಣದ ಇಪ್ಪತ್ತೈದು ನಾಟಕಗಳನ್ನಾದರೂ ನೋಡಿರಬಹುದು. ಅಲ್ಲಿಯ ಸರಕಾರಿ ನಟರ ಕತೆಯೂ ಈಗ ಶೋಚನೀಯವೇ.


ಪ್ರತಿಷ್ಠಿತ ನೀನಾಸಂ-ರಂಗಾಯಣ ನಾಟಕಗಳಿಗಿಂತ ಹೊರತಾದ- ವಿನಾಯಕ ಜೋಶಿ ನಿರ್ದೇಶನದ ಶ್ರೀನಿವಾಸ ವೈದ್ಯರ ನಾಟಕ "ಶ್ರಾದ್ಧ’, ಪೂರ್ಣಚಂದ್ರ ತೇಜಸ್ವಿ (ಸೀರಿಯಲ್ ಆಕ್ಟರ್)ನಿರ್ದೇಶನದ "ಭ್ರಮೆ’, ಸುರೇಂದ್ರನಾಥ್ ನಿರ್ದೇಶನದ "ನಾನೀನಾದರೆನೀನಾನೇನಾ’, ಟಾಪ್‌ಕಾಸ್ಟ್ ತಂಡದ ಹೆಸರು ನೆನಪಾಗದ ಒಂದು ನಾಟಕ, ಅಂತರಂಗ ತಂಡದ "ಹುತ್ತದಲ್ಲಿ ಹುತ್ತ’ ಬಹಳ ಸತ್ವಯುತ ಪ್ರದರ್ಶನಗಳು. ಆದರೆ ೨೪ ಗಂಟೆ ನಾಟಕ ಕ್ಷೇತ್ರದೊಳಗಿರುವ ನಟರಿದ್ದೂ ಹವ್ಯಾಸಿ ಕಲಾವಿದರು , ಕಾಲೇಜು ಹುಡುಗರ ನಾಟಕಕ್ಕಿಂತ ಮೇಲೇರಲಾಗದಿದ್ದರೆ ಏನು ಫಲ? ಮುಂದಿನ ೨೦ನೇ ತಾರೀಖಿನಿಂದ ವಾರ ಪೂರ್ತಿ ರಂಗಶಂಕರದಲ್ಲಿ ಹೊಸ ನಾಟಕಗಳೇ ಇವೆ. ಪುರುಸೊತ್ತು ಮಾಡ್ಕೊಳ್ಳಿ.

-ಕಲಾಮಾತೆಯ ಪಾದದೂಳಿಯಲ್ಲಿ ಬಿದ್ದುಕೊಂಡಿರುವ

'ಪಾಪಿ ಮುಂಡೆ ಬಿಕನಾಸಿ ರಂಡೆ ಮಾಯಾವಿ ರಂಬೆ ಹಲ್ಕಾ ಪೋಲಿಗಳು’

Read more...

October 14, 2007

ಇದು ಬ್ರೇಕಿಂಗ್ ನ್ಯೂಸ್ ಅಲ್ಲ !

ಳೆದ ಬಾರಿ ಊರಿಗೆ ಹೋಗಿದ್ದಾಗ ಒಂದು ವಿಶೇಷ ಸುದ್ದಿ ಸಿಕ್ಕಿತು.ಅಷ್ಟೊಂದು ಅಪರೂಪದ ಆ ಘಟನೆ, ಲೋಕಲ್ ಪತ್ರಿಕೆಗಳಲ್ಲಾದರೂ ಬರಬೇಕಿತ್ತು . ಜನರ ನಡುವೆಯಾದರೂ ಗಹನ ಚರ್ಚೆಯಾಗಬೇಕಿತ್ತು . ಊರಿನ ಸಾಹಿತಿಗಳಾದರೂ ಆ ಬಗ್ಗೆ ಒಂದು ಪದ್ಯವೋ ಲೇಖನವೋ ಬರೆಯಬಹುದಾಗಿತ್ತು. ಆದರೆ ಆ ಸುದ್ದಿ ಏನೂ ಆಗದೆ, ಕೆಲವರ ನಾಲಗೆಯಲ್ಲಷ್ಟೇ ಹೊರಳಿ ಸತ್ತುಹೋಯಿತು.

ದ.ಕ.ದ ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡು ಮೂವರು ಅಣ್ಣತಮ್ಮಂದಿರ ಮಧ್ಯಮವರ್ಗದ ಕುಟುಂಬವೊಂದು ಬದುಕುತ್ತಿತ್ತು. ಮದುವೆ ಆಗಿ ಮಕ್ಕಳನ್ನೂ ಪಡೆದಿದ್ದ ಆ ಮೂವರು, ನಾಲ್ಕೈದು ತಿಂಗಳ ಹಿಂದೆ ಆಸ್ತಿ ಪಾಲು ಮಾಡಿಕೊಂಡು, ಹೊಸ ಮನೆ ಕಟ್ಟಿ ಪ್ರತ್ಯೇಕವಾಗಿ ಬದುಕುತ್ತಿದ್ದರು. ಹೀಗೆ ವಿಭಕ್ತವಾಗಿದ್ದ ಅಣ್ಣತಮ್ಮಂದಿರು, ಈಗ ಹೊಸ ಮನೆಗೆ ಬೀಗ ಹಾಕಿ ಮತ್ತೆ ಹಳೆ ಮನೆಯಲ್ಲೇ ಎಲ್ಲರೊಂದಾಗಿ ಬದುಕುತ್ತಿದ್ದಾರೆ ! ಇದು "ಬ್ರೇಕಿಂಗ್’ ನ್ಯೂಸ್ ಹೇಗಾದೀತು?


ನಾನಾ ಪ್ರಶ್ನೆಗಳು ನಾಲಗೆ ತುದಿಯಲ್ಲೇ ಇವೆ. ಇದು ಜಾಗತೀಕರಣಕ್ಕೆ ಪುಟ್ಟ ಕುಟುಂಬವೊಂದು ಸಡ್ಡು ಹೊಡೆದ ರೀತಿಯೆ? ಅಥವಾ ಕೃಷಿಯೊಂದನ್ನೇ ನಂಬಿಕೊಂಡ ವಿಭಕ್ತ ಕುಟುಂಬವೊಂದು ಬದುಕುವುದೇ ಕಷ್ಟ ಎಂಬ ಆರ್ಥಿಕ ಕಾರಣವೆ? ಅವಿಭಕ್ತ ಕುಟುಂಬದ ಲಾಭಗಳ ಅರಿವೆ? ಆರೋಗ್ಯ ಸಂಬಂಧಿ ಸಮಸ್ಯೆಗಳೆ? ಅಥವಾ ಯಾರಾದರೂ ಜ್ಯೋತಿಷಿಗಳು ಏನಾದರೂ ಹೇಳಿದರೆ?!


ಸುಮಾರು ಏಳು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಒಂಭತ್ತು ಜನರಿದ್ದರು. ಈಗ ಮೂವರು ! ಕಳೆದ ಆರೇಳು ವರ್ಷಗಳಲ್ಲಿ ದ.ಕ.ದಲ್ಲಂತೂ ನೂರಾರು ಕುಟುಂಬಗಳು ಛೇದನಗೊಂಡವು. ಮೌಲ್ಯಗಳು ಹೊಸದಾಗಿ ಬಂದಂತೆ ಬದುಕುವ ಶೈಲಿಯಲ್ಲೂ ಬದಲಾವಣೆ ಅಗತ್ಯವಾಯಿತೇನೋ. ದೊಡ್ಡಮನೆ, ಆಳುಕಾಳು, ತೋಟಗದ್ದೆಗಳೆಲ್ಲ ನಿಷ್ಪ್ರಯೋಜಕ-ಹೊರೆ ಅಂತ ಜನ ಭಾವಿಸತೊಡಗಿದಂತೆ ಈ ಪಾಲು ಪಂಚಾತಿಕೆ ಆರಂಭವಾಗಿರಬೇಕು.


ಹಳ್ಳಿ-ನಗರ ಸಂಪರ್ಕ ಜಾಸ್ತಿಯಾದಂತೆ ಹಳ್ಳಿಗರನ್ನು ಸೆಳೆಯತೊಡಗಿದ್ದು ನಗರಗಳ ಸುಖ ಲೋಲುಪತೆ. ಪ್ರತಿಮನೆಯ ಒಬ್ಬರಾದರೂ ಬೆಂಗಳೂರು ಸೇರಿ, ರಾಜಧಾನಿಯ ರಂಪಾಟಗಳು ಊರುಗಳನ್ನೂ ತಲುಪತೊಡಗಿದವು. ಕಾಂಚಾಣದ ಆಸೆ ಕೈಹಿಡಿದೆಳೆಯಿತು. ದುಡ್ಡೊಂದಿದ್ದರೆ ಎಲ್ಲವೂ ಸಾಧ್ಯ ಎಂಬ ಯೋಚನೆಗೆ ನಗರಗಳು ಇಂಬು ನೀಡಿದವು. ಮಹಾನಗರಗಳಲ್ಲಿ ಹೆಚ್ಚಾದ ಉದ್ಯೋಗವಕಾಶದಿಂದಾಗಿ ಹಳ್ಳಿಯಿಂದ ನಗರಕ್ಕೆ "ಸಾಂಸ್ಕೃತಿಕ ವಲಸೆ’ಯೂ ಆರಂಭವಾಯಿತು. ಚಿತ್ರ ಕಲಾವಿದರು, ನಟರು, ಒಳ್ಳೆಯ ಮಾತುಗಾರರು ನಗರಗಳ ಟಿವಿ-ಪತ್ರಿಕೆ-ರೇಡಿಯೊಗಳೊಳಗೆ ನುಗ್ಗಿಕೊಂಡರು. ಹುಡುಗಿಯರೂ ಉನ್ನತ ವಿದ್ಯಾಭ್ಯಾಸ ಮಾಡತೊಡಗಿ, ಹಳ್ಳಿಯಲ್ಲಿರುವ ಹುಡುಗರನ್ನು ಅವರು ಒಪ್ಪುವುದಿಲ್ಲ ಎಂಬಂತಾಯಿತು. ಎಂಜಿನಿಯರಿಂಗ್-ಮೆಡಿಕಲ್ ಆಸೆಯು ಹುಚ್ಚು ಕುದುರಿಯೇರಿ ಸಾಗಿತು. ತೋಟಕ್ಕೆ ಹೋಗೋದು, ಹಾಲು ಕರೆಯೋದು, ಸೆಗಣಿ ತೆಗೆಯೋದು ಪರಮಕಷ್ಟವೆಂಬ ಭಾವ ಮಹಿಳೆಯರಲ್ಲಂತೂ ಹೆಚ್ಚಾಗಿ ಬೇರೂರತೊಡಗಿತು. ಪೇಟೆಯಲ್ಲಿರುವ ಹುಡುಗರಾದರೆ, ಅವರೊಂದಿಗೆ ಅಪ್ಪ ಅಮ್ಮ ಇರುವುದಿಲ್ಲ ಎಂಬುದು, ವಿವಾಹ ಬಂಧನದ ಮುಖ್ಯ ಸಂಗತಿಯಾಯಿತು. ಹಳ್ಳಿಯಲ್ಲಿರುವ ಹುಡುಗನಿಗೆ ವಧು ನೋಡುವುದಕ್ಕೆ ಹೊರಡುವ ಮೊದಲು ಅಪ್ಪ ಮಗನಿಗೆ ಹೇಳಿದರು -"ಅಪ್ಪ ಅಮ್ಮ ಇರುವ ಹುಡುಗ ಆದೀತು ಅನ್ನುವ ಹುಡುಗಿಯಾದರೆ ನೀನು ನೋಡು, ಅಪ್ಪ ಅಮ್ಮ ಇಲ್ಲದ ಹುಡುಗನೇ ಆಗಬೇಕು ಅಂತಾದರೆ ನಾನು ನೋಡುತ್ತೇನೆ !’

ಬರ-ಪ್ರವಾಹ-ಅತಿವೃಷ್ಟಿಗಳ ಜತೆಗೆ ಬೆಳೆಗಳ ಬೆಲೆ ಕುಸಿದು, ಕೃಷಿಯೊಂದನ್ನೇ ನಂಬಿದರೆ ಕಂಗಾಲು ಎಂಬ ಭಾವ ದೃಢವಾಯಿತು. ಮನೆಯಲ್ಲಿ ಜನ ಜಾಸ್ತಿ ಇದ್ದಷ್ಟೂ ಖರ್ಚು ಜಾಸ್ತಿ , ಉತ್ಪಾದನೆ ನಾಸ್ತಿ ಎಂಬ ವಾದ ಶುರುವಾಯಿತು. ತನ್ನ ಮಗುವಿನ ಭವಿಷ್ಯದ ಬಗ್ಗೆ ಸಂಪೂರ್ಣ ಲಕ್ಷ್ಯ ಕೊಡಲು ತನಗೆ ಕಷ್ಟವಾಗುತ್ತಿದೆ ಎಂಬುದು ಕೂಡು ಕುಟುಂಬದ ಎಲ್ಲ ತಂದೆತಾಯಂದಿರ ಯೋಚನೆಯಾಯಿತು. "ಬೆಂಗಳೂರಲ್ಲೇ ಇರೋದು ನಮಗೆ ಬೇಡ. ಎಲ್ಲ ವ್ಯವಸ್ಥೆಗಳಿರುವ ಹಳ್ಳಿಮನೆ ನಮಗೆ ಬೇಕು. ಬೇಕಾದಾಗ ಸಿಟಿಗೆ ಹೋಗಿ ಬರುವಂತಿರಬೇಕು’ ಈ ಮಾತನ್ನು ಹಳ್ಳಿಯ ಅಮ್ಮಂದಿರು ಆಗಾಗ ಹೇಳಲಾರಂಭಿಸಿದರು. ಈಗಲೂ ಯಂತ್ರದಂತೆ ಏನಾದರೊಂದು ಕೆಲಸ ಮಾಡುತ್ತಿರುವ ಅಜ್ಜಿಯಂದಿರಿಗೆ ಇಂತಹ ಬಯಕೆಗಳು ಇರಲಿಲ್ಲ. ಸಮೂಹಪ್ರಜ್ಞೆ ಕಡಿಮೆಯಾಗುತ್ತಾ ಸ್ವಾರ್ಥ ಜಾಗೃತವಾಗತೊಡಗಿತು.


ಹೀಗೆ ನಾವು ಹೇಳುತ್ತಲೇ ಹೋಗಬಹುದು ! ಆದರೆ ಪ್ರತಿಯೊಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಮನೆ ವಿಭಜನೆಗೆ ತನ್ನದೇ ಕಾರಣವನ್ನು ಹೇಳುವುದೇ ಸಂಸಾರದ ವಿಸ್ಮಯ. ವಿಭಕ್ತ-ಅವಿಭಕ್ತ ಕುಟುಂಬಗಳಲ್ಲಿ ಯಾವುದು ಉತ್ತಮ ಯಾವುದು ಕನಿಷ್ಠ ಎಂಬುದು ಪ್ರಶ್ನೆಯಲ್ಲ. ಬೇರೆಬೇರೆ ಮನೆಗಳಲ್ಲಿದ್ದೂ ಒಂದೇ ಮನೆಯಲ್ಲಿದ್ದಂತೆ ಕೊಡುಕೊಳ್ಳುವಿಕೆಯಲ್ಲಿ ವ್ಯವಹರಿಸುತ್ತ, ಸರಸವಾಡುತ್ತ ಬದುಕುವ ಜನ ಕೂಡಾ ಇದ್ದಾರೆ. ತಮ್ಮತಮ್ಮ ಪಾಲಿಗಾಗಿ ಮಹಾಯುದ್ಧವನ್ನೇ ನಡೆಸಿದ ಕೌರವಪಾಂಡವರೂ ನಮ್ಮೊಳಗಿದ್ದಾರೆ. "ಇಹ ಸಂಸಾರೇ ಬಹು ದುಸ್ತಾರೇ...ಕೃಪಯಾ ಪಾರೇ ಪಾಹಿ ಮುರಾರೆ...!


ಆ ಸಮ್ಮಿಶ್ರ ಸರಕಾರ ಶಾಶ್ವತವಾಗಿರಲಿ ಅಂತ ಹಾರೈಸೋಣ. ಆದರೆ....
ಒಡೆದಿದ್ದ ಮನೆ ಒಂದಾಗುವುದಕ್ಕೆ- ಆರ್ಥಿಕ ಸಮಸ್ಯೆಯೇ ಮುಖ್ಯ ಕಾರಣ ಅಂತಾದರೆ ನಿಮಗೆ ದುಃಖವಾಗುತ್ತದೆಯೆ?

Read more...

October 04, 2007

೩೦೭, ೩೦೬ ಮತ್ತು ?

ನಾವು ಕೊಚ್ಚಿಕೊಂಡದ್ದೇ (ಹೊಗಳಿಕೊಂಡದ್ದೇ)ಬಂತು. ಕೊಚ್ಚಿಯಲ್ಲಿ ಕೊನೆಗೂ ಕೊಚ್ಚಿ ಹೋದದ್ದು ಇಂಡಿಯಾ. ಸೈಮಂಡ್ಸ್ ಮತ್ತು ಹ್ಯಾಡಿನ್‌ರಂತೂ ನಮ್ಮ ಬೌಲರುಗಳನ್ನು ಕೊಚ್ಚಿ ಹಾಕಿದರು.

ಟಾಸ್ ಹಾಕುವುದಕ್ಕೆ ಬಂದ ಆಸ್ಟ್ರೇಲಿಯಾ ತಂಡದ ನಾಯಕ ಗಿಲ್‌ಕ್ರಿಸ್ಟ್ ಐದು ನಿಮಿಷ ಕಾಯುವಂತೆ ಮಾಡಿದ ಧೋನಿ ೨೨೨ ರನ್‌ಗಳ ತನಕ ಗೂಟ ಕಾದದ್ದೇ ಬಂತು. ಗಂಗೂಲಿ ನಾಯಕರಾಗಿದ್ದಾಗ, ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಟಾಸ್‌ಗಾಗಿ ಕಾಯುವಂತೆ ಮಾಡುತ್ತಿದ್ದರಂತೆ.

ಟಿವಿ ಚಾನೆಲ್ ಒಂದರ ಖಾಸಗಿ ಕಾರ್‍ಯಕ್ರಮಕ್ಕಾಗಿ ನಗರದಿಂದ ಸುಮಾರು ೩೪ಕಿಮೀ ದೂರ ಹೋದ ಧೋನಿಗೆ, ಪಂದ್ಯದ ಆರಂಭಕ್ಕೆ ಮೊದಲು ಪತ್ರಕರ್ತರ ಜತೆ ಮಾತಾಡುವುದಕ್ಕೂ ಸಮಯ ಸಿಗಲಿಲ್ಲ. ಪತ್ರಿಕಾಗೋಷ್ಠಿಗಾಗಿ ಕಾದಿದ್ದ ಪತ್ರಕರ್ತರೆಲ್ಲ ಮ್ಯಾನೇಜರ್ ಹೇಳಿದ್ದನ್ನೇ ಬರಕೊಳ್ಳಬೇಕಾಯಿತು. ಗಿಲ್‌ಕ್ರಿಸ್ಟ್ ಮಾತ್ರ ಉದಾಸೀನ ಮಾಡಲಿಲ್ಲ.

ಹಲವು ದಿನಗಳಿಂದ ಮಳೆ ಸುರಿದು ತೊಪ್ಪೆಯಾಗಿದ್ದ ಅಂಗಣವನ್ನು ಶ್ರಮಪಟ್ಟು ಸಿದ್ಧಗೊಳಿಸಿದವರು ಮುಖ್ಯ ಕ್ಯುರೇಟರ್ ಪಿ.ವಿ. ರಾಮಚಂದ್ರನ್. ಅಲ್ಲಿ ನೀರು ಹಿಂಡುವ ಕೂಲಿಯಾಳುಗಳ ಸಂಬಳ ದಿನಕ್ಕೆ ರೂ.೩೦೦. ಮುಖ್ಯ ಕ್ಯುರೇಟರ್‌ಗೂ ಸಿಕ್ಕಿದ್ದು ಅವರಿಗಿಂತ ಬರೀ ೧೦೦ರೂ. ಹೆಚ್ಚು ! ರಾಮಚಂದ್ರನ್ ಈಗ ಮುಖ ಹಿಂಡುತ್ತಿದ್ದಾರೆ.

ಟಾಸ್ ಗೆದ್ದ ಬಹಳಷ್ಟು ಪಂದ್ಯಗಳಲ್ಲಿ ಭಾರತ ಸೋಲುತ್ತಿದೆಯೇ ಎಂಬ ಪ್ರಶ್ನೆ ನನ್ನದು. ನೆಟ್‌ನಲ್ಲಿ ನಡೆಸಿದ ಅವಸರದ ಜಾಲಾಟದಲ್ಲಿ ಉತ್ತರ ಸಿಗಲಿಲ್ಲ. ಈ ಬಗ್ಗೆ ಯಾರಾದರೂ ಅಂಕಿಅಂಶಗಳನ್ನು ನೀಡುವಿರಾ?
೫ರಂದು ಸುಲ್ತಾನರ ನಗರಿ ಹೈದರಾಬಾದ್‌ನಲ್ಲಾದರೂ ನಾವು "ಏಕ್ ದಿನ್ ಕಾ ಸುಲ್ತಾನ್’ ಆಗಲೆಂದು ಹಾರೈಸೋಣ.

ಇಂಡ್ಯಾ ಇಂಡ್ಯಾ ಇಂಡ್ಯಾ...

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP