August 11, 2009

ಪ್ರಸನ್ನ ವದನಂ ಧ್ಯಾಯೇತ್...

'ಕಾಯಕ ಸಂಸ್ಕೃತಿಯ ಉಳಿವು ಈ ಪುಸ್ತಕದ ಪ್ರಧಾನ ಆಶಯವಾಗಿದೆ. ಆದರೆ ದುಡಿಯುವ ವರ್ಗಗಳಿಗೆ ಅನುಮಾನಗಳಿವೆ; ಜಾತಿ ಪದ್ಧತಿ, ಪಾಳೆಯಗಾರಿ ಪದ್ಧತಿ ಹಾಗೂ ಒಟ್ಟಾರೆಯಾಗಿ ಗ್ರಾಮ ಜೀವನದ ಬಗ್ಗೆಯೇ ಬಡವರಿಗೆ ಅನುಮಾನಗಳಿವೆ. ಯಂತ್ರ ನಾಗರಿಕತೆ ಹಾಗೂ ನಗರ ಸಂಸ್ಕೃತಿಯು ನಮ್ಮೆಲ್ಲ ಪರಂಪರೆಗಳಿಗಿಂತಲೂ ಹೆಚ್ಚು ಪ್ರಜಾಸತ್ತಾತ್ಮಕವಾದುದೆಂದು ಬಡವರು ನಂಬುತ್ತಾರೆ. ಈ ಪುಸ್ತಕವು ಬಡವರ ಆತಂಕವನ್ನು ಒಪ್ಪುತ್ತದೆ. ಯಂತ್ರ ನಾಗರಿಕತೆಯು ಒಳತಂದ ವೈಚಾರಿಕ ಕ್ರಾಂತಿಯನ್ನು ತಿರಸ್ಕರಿಸದೆ, ತಂತ್ರಜ್ಞಾನದ ಕಸ ಹಾಗೂ ಅನೈತಿಕತೆಗಳನ್ನು ತಿರಸ್ಕರಿಸಬಯಸುತ್ತದೆ...ಯಂತ್ರ ನಾಗರಿಕತೆಯನ್ನು ಸರಕು ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿ, ಆಧುನಿಕ ಸಂಸ್ಕೃತಿ, ಪಾಶ್ಚಿಮಾತ್ಯ ಸಂಸ್ಕೃತಿ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತೇವೆ. ನಾನು ಈ ಪುಸ್ತಕದಲ್ಲಿ ಯಂತ್ರ ನಾಗರಿಕತೆ ಎಂಬ ಹೆಸರನ್ನೇ ಪ್ರಧಾನವಾಗಿ ಬಳಸಲು ಇಷ್ಟಪಡುತ್ತೇನೆ. ಕಾರಣವಿಷ್ಟೆ: ಮೇಲೆ ಪಟ್ಟಿ ಮಾಡಿದ ಇತರ ಹೆಸರುಗಳು, ಯಂತ್ರ ನಾಗರಿಕತೆಯ ಯಾವುದೋ ಒಂದು ಆಯಾಮದತ್ತ ಬೊಟ್ಟು ಮಾಡಿ ತೋರಿಸುತ್ತವೆ. ಉದಾಹರಣೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಎಂಬುದು ಯಂತ್ರ ನಾಗರಿಕತೆ ಪಶ್ಚಿಮದ ದೇಶಗಳಲ್ಲಿ ಹುಟ್ಟಿತು ಎಂಬ ಸಂಗತಿಯತ್ತ ಮಾತ್ರ ಬೊಟ್ಟು ಮಾಡುತ್ತದೆ. ಆದರೆ ಯಂತ್ರ ನಾಗರಿಕತೆ ಎಂಬ ಹೆಸರು ಸಮಗ್ರವಾದ ಪರಿಕಲ್ಪನೆಯನ್ನು ನೀಡುತ್ತದೆ ಎಂದು ನನ್ನ ನಂಬಿಕೆ.'

'ದೇಸಿ ಜೀವನ ಪದ್ಧತಿ' ಪುಸ್ತಕದ ಮೂಲಕ ಬರವಣಿಗೆಯ ಜಾಡಿಗೆ ಬಂದ ರಂಗಕರ್ಮಿ ಪ್ರಸನ್ನ, 'ನಟನೆಯ ಪಾಠಗಳು' ಮೂಲಕವೂ ಗಮನ ಸೆಳೆದರು. ಆದರೆ ನಂತರದ ಕಾದಂಬರಿ 'ಬಾಲಗೋಪಾಲ' ಯಾಕೋ ಓದುಗರನ್ನು ಆಕರ್ಷಿಸಲೇ ಇಲ್ಲ. 'ಚರಕ-ದೇಸಿ'ಗಳ ರೂವಾರಿಯಾದ ಇವರ ಹೊಸ ಪುಸ್ತಕ 'ಯಂತ್ರಗಳನ್ನು ಕಳಚೋಣ ಬನ್ನಿ'. ಕಳೆದೆರಡು ದಶಕಗಳ ಯಂತ್ರ ನಾಗರಿಕತೆಯ ಸಾಂಸ್ಕೃತಿಕ ಆಯಾಮವನ್ನು ವಿಶ್ಲೇಷಿಸುವುದು ಇದರಲ್ಲಿನ ಮುಖ್ಯ ಉದ್ದೇಶವಂತೆ. ಯಂತ್ರ-ಗ್ರಾಮ ಸ್ವರಾಜ್ಯ-ಧರ್ಮ ಸಂಕಟ ಎಂಬ ಮೂರು ಭಾಗಗಳಲ್ಲಿರುವ ೨೩೫ ಪುಟಗಳ ಪುಸ್ತಕವಿದು. ಬೆಲೆ ರೂ.೧೪೦. ತಮ್ಮ ಪುಸ್ತಕಗಳ ಮುಖಪುಟವನ್ನು ತಾವೇ ವಿನ್ಯಾಸ ಮಾಡಬಲ್ಲ ಕೆ.ವಿ.ಅಕ್ಷರ, ನಾಗರಾಜ ವಸ್ತಾರೆಯವರಂತೆ, ಪ್ರಸನ್ನ ಕೂಡಾ ಆ ಕೆಲಸ ಮಾಡುತ್ತಿದ್ದಾರೆ. ಎಲ್ಲೆಲ್ಲೂ ಯಂತ್ರಗಳ ಬಳಕೆಯಿರುವ ಈ ದಿನಗಳಲ್ಲಿ ಅವುಗಳನ್ನು ಕಳಚುವುದೊ, ಅವುಗಳಿಂದ ಕಳಚಿಕೊಳ್ಳುವುದೋ ಸುಲಭವಲ್ಲ. ಆದರೆ 'ಹೊಡಿಬಡಿ'ಗಿಂತ ಭಿನ್ನವಾಗಿ, ಸರಳ-ಉದ್ವೇಗರಹಿತ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಇವರ ದಾರಿಗೆ, ಯಂತ್ರಗಳನ್ನು ಕಳಚುವ ಶಕ್ತಿ ಬಂದರೆ ಆಚ್ಚರಿಯಿಲ್ಲ. 'ಈಗ ವಿಜ್ಞಾನವನ್ನು ಯಂತ್ರಗಳ ಕಪಿಮುಷ್ಠಿಯಿಂದ ಬಿಡಿಸಬೇಕಾಗಿದೆ', 'ಊನವಿಲ್ಲದಿರುವುದೇ ಯಂತ್ರಗಳ ಊನ' ಎನ್ನುವ ಲೇಖಕರ ಈ ಪುಸ್ತಕ, ಕನ್ನಡದ ಎಲ್ಲ ಗದ್ಯ ರೂಪಕ್ಕಿಂತ ಅನನ್ಯವಾಗಿದೆ. `ಹಣ ಮಾಡುವುದು ಹೇಗೆ?, ಉದ್ಯಮ ಕಟ್ಟುವುದು ಹೇಗೆ?' ಇತ್ಯಾದಿ ಪುಸ್ತಕಗಳೇ ಬರುತ್ತಿರುವ ಕಾಲ ಇದು. ಮಾನವನನ್ನೇ ಯಂತ್ರ ಮುಖೇನ ಸೃಷ್ಟಿಸಲು ಹೊರಟಿರುವ ಆಧುನಿಕೋತ್ತರ ಸಮಯ ಇದು. ಇಂತಹ ಇಕ್ಕಟ್ಟಿನಲ್ಲಿ, ಕತೆ-ಕಾವ್ಯ-ಕಾದಂಬರಿ-ವಿಮರ್ಶೆ-ವೈಚಾರಿಕ ಲೇಖನ ಮೊದಲಾದ ಪ್ರಕಾರಗಳ ಶೈಲಿ ತೊರೆದು ರೂಪಿತವಾಗಿರುವ ಈ ಪುಸ್ತಕ, ಕನ್ನಡಿಗರೆಲ್ಲ ಓದಬಹುದಾದಂಥದ್ದು. ಸಂಪರ್ಕಕ್ಕೆ desiprasanna@gmail.com. ಪುಸ್ತಕ ಓದಿ, ಚಾರ್ಲಿ ಚಾಪ್ಲಿನ್‌ನ 'ಮಾಡರ್ನ್ ಟೈಮ್ಸ್' ಸಿನಿಮಾ ಇನ್ನೊಮ್ಮೆ ನೋಡಿ !

1 comments:

ಸಾಗರದಾಚೆಯ ಇಂಚರ August 14, 2009 at 5:16 AM  

ಉಪಯುಕ್ತ ಮಾಹಿತಿಗೆ ತುಂಬಾ ಧನ್ಯವಾದಗಳು

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP