February 03, 2009

ಗುಣಯುತನಿಗೆ ಮಂಗಲ ಪದ್ಯ

ಯಾವುದೇ ಕ್ಷೇತ್ರವನ್ನು ಜೀವನ್ಮರಣದ ಪ್ರಶ್ನೆಯಾಗಿ ಆರಿಸಿಕೊಂಡಿರುವವರಿಗೆ ಇದೊಂದು ತರಹದ ಇಚ್ಛಾಮರಣ. ಆದರೆ ಇಷ್ಟದೇವತೆಗಳು ಹೀಗೆ ಅಚಾನಕ್ಕಾಗಿ ಎದ್ದು ನಡೆದರೆ ಅದನ್ನು ಸಹಿಸಿಕೊಳ್ಳುವುದು ಪ್ರಿಯರಾದವರಿಗೆ ತೀರ ಕಷ್ಟ. ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೊನ್ನೆಮೊನ್ನೆ ಹೇಳಿದ್ದರು- 'ಹಾಡು ಹಾಡುತ್ತಲೇ ಜೀವ ತೊರೆಯುವುದು ನನ್ನ ಆಸೆ'. ಫೆ.೩ರ ಮುಂಜಾನೆ ಹೀಗೆ ರಂಗದಿಂದಲೇ ನಿರ್ಗಮಿಸಿರುವ ಶಂಭು ಹೆಗಡೆ, ಯಕ್ಷಗಾನದ ದಿಗ್ದರ್ಶಕರಲ್ಲಿ ಒಬ್ಬರು. ಯಕ್ಷಗಾನ ತಾಳಮದ್ದಲೆಗೆ ಎಲ್ಲೆಡೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟವರು ಶೇಣಿ ಗೋಪಾಲಕೃಷ್ಣ ಭಟ್ಟರಾದರೆ, ಯಕ್ಷಗಾನ ಬಯಲಾಟಗಳಿಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟವರು ಶಂಭು ಹೆಗಡೆ.
(೧೯೭೦ರ ದಶಕದಲ್ಲಿ ಬಭ್ರುವಾಹನನಾಗಿ ಶಂಭು ಹೆಗಡೆ )
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ, ಯಕ್ಷಗಾನದ ಒಂದು 'ಘರಾನಾ'. ತಂದೆ ಶಿವರಾಮ ಹೆಗಡೆ, ಅಣ್ಣ ಮಹಾಬಲ ಹೆಗಡೆ ಶ್ರೇಷ್ಠ ಕಲಾವಿದರಾಗಿದ್ದರೂ, ಶಂಭು ಹೆಗಡೆಯವರೂ ಸೇರಿದಂತೆ ಮೂವರೂ ತಮ್ಮ ತಮ್ಮ ಅನನ್ಯತೆಯನ್ನು ಸಾಧಿಸಿಕೊಂಡವರೇ. ಹಿರಿಯ ನೃತ್ಯ ಕಲಾವಿದೆ ಮಾಯಾ ರಾವ್ ಶಿಷ್ಯರಾಗಿ, ಭರತನಾಟ್ಯ-ಕಥಕ್ ನೃತ್ಯ ಶೈಲಿಗಳನ್ನೂ ಅರಿತುಕೊಂಡು, ಯಕ್ಷಗಾನದ ರುಚಿ ಕೆಡದಂತೆ ಅದನ್ನು ಬಳಸಿಕೊಂಡವರು. ತಮ್ಮ ಮೇಳವನ್ನು ಅಮೆರಿಕ, ಸಿಂಗಾಪುರ, ಮಲೇಷಿಯಾ, ಮಯನ್ಮಾರ್, ಪಿಲಿಪೈನ್ಸ್ ಇತ್ಯಾದಿ ದೇಶಗಳಿಗೆ ಒಯ್ದವರು. 'ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದವರು. ೧೯೮೬ರಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನೂ ಆರಂಭಿಸಿದರು. ಶಿವರಾಮ ಹೆಗಡೆ-ಶಂಭು ಹೆಗಡೆ, ಈಗ ಮಗ ಶಿವಾನಂದ ಹೆಗಡೆ ಹೀಗೆ ಮೂರು ತಲೆಮಾರುಗಳನ್ನು ದಾಟಿ ಹರಿಯುತ್ತಿರುವ ಕಲಾ ಪ್ರವಾಹ ಇದು.

ಅಣ್ಣ ಮಹಾಬಲ ಹೆಗಡೆಯವರ ಮೂಲಕ ರಂಗಕ್ಕೆ ಬಂದವರು ಶಂಭು ಹೆಗಡೆ. ೧೯೩೪ರಲ್ಲಿ ತಂದೆ ಶಿವರಾಮ ಹೆಗಡೆಯವರು ಆರಂಭಿಸಿದ 'ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ೧೯೭೩ರಲ್ಲಿ ಶಂಭು ಹೆಗಡೆ ಪುನರ್ ರಚಿಸಿದರು. ಸುಮಾರು ೧೯೮೫ರಿಂದ ಸೀಮಿತ ಕಾಲಾವಧಿಯ (ಮೂರ್‍ನಾಲ್ಕು ಗಂಟೆ) ಯಕ್ಷಗಾನ ಪ್ರದರ್ಶನಗಳನ್ನು ಮೊತ್ತಮೊದಲು ಪ್ರಯೋಗ ಮಾಡಿದವರೂ ಇವರೇ. ಯಕ್ಷಗಾನಕ್ಕೆ ಅರ್ಧ ಚಂದ್ರಾಕೃತಿಯ ವೇದಿಕೆಯೂ ಇವರ ಕೊಡುಗೆಯೇ. ದಕ್ಷಿಣಕನ್ನಡಕ್ಕೂ ಬಡಗುತಿಟ್ಟಿನ ಆಟದ ಹುಚ್ಚು ಹಿಡಿದದ್ದು ಇವರ ಕಾಲದಲ್ಲೇ. ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡದ ಯಾವುದೇ ಸ್ಥಳಕ್ಕೆ ಇಡಗುಂಜಿ ಮೇಳ ಬರಲಿ, ಜನ ಹುಚ್ಚುಗಟ್ಟಿ ಹೋಗುತ್ತಿದ್ದರು. ಶಂಭು ಹೆಗಡೆಯವರು ಮೊದಲು ಬಣ್ಣ ಹಚ್ಚಿದ್ದು ಶಾಲೆಯ ವಾರ್ಷಿಕೋತ್ಸವದಲ್ಲಿ 'ಸ್ಮಶಾನ ಕುರುಕ್ಷೇತ್ರ'ವೆಂಬ ನಾಟಕದಲ್ಲಂತೆ. ಗುರುಗಳಾದ ಕರ್ಕಿ ವರದ ಹಾಸ್ಯಗಾರರು ಅದನ್ನು ನಿರ್ದೇಶಿಸಿದ್ದರು. ಅದರಲ್ಲಿ ಅವರ ದುರ್ಯೋಧನನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತಂತೆ. ಆದರೆ ನಾಯಕ-ಖಳನಾಯಕ ಎರಡು ಪಾತ್ರಗಳಲ್ಲೂ ಅವರು ಜನಾನುರಾಗಿಯಾದರು.

'ಶಂಭು ಹೆಗಡೆ ಪ್ರತ್ಯೇಕ ಪ್ರಭೆ ಇರುವ ವ್ಯಕ್ತಿ. ಅವರು ಬೇರೆ ಯಾರಂತೆಯೂ ಅಲ್ಲ. ಯೋಗ-ಯೋಗ್ಯತೆ ಎರಡೂ ಇತ್ತು. ಪರಂಪರೆಯನ್ನು ಮೈಗೂಡಿಸಿಕೊಂಡು, ಈ ಕಾಲವನ್ನು ಅರ್ಥವಿಸಿಕೊಂಡು ಮಾದರಿಯಾಗಬಲ್ಲ ಸಾಮರ್ಥ್ಯವಿತ್ತು. ಸಂಘಟಕ-ಚಿಂತಕ-ಕೊರಿಯೋಗ್ರಾಫರ್-ವೇಷಧಾರಿ ಹೀಗೆ ಎಲ್ಲವೂ ಆಗಿದ್ದುದರಿಂದ ಅವರು ಕೇವಲ ಯಕ್ಷಗಾನ ಕಲಾವಿದರಲ್ಲ. ಭಾರತದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ರಂಗಭೂಮಿಯ ನಾನಾ ನರ್ತನ ಪ್ರಕಾರಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಂಡು, ಭಾರತದ ರಂಗಭೂಮಿಯ ಮೂಲಕ ಯಕ್ಷಗಾನವನ್ನು ನೋಡಬಲ್ಲವರಾಗಿದ್ದರು. ಚಿಂತನೆ ಮತ್ತು ರಂಗಸಾಧನೆ ಎರಡಲ್ಲೂ ಎತ್ತರಕ್ಕೆ ಏರಿದವರು. ಅವರು ಯಕ್ಷಗಾನದ ಎಚ್ಚರ ಮತ್ತು ಸೃಜನಶೀಲತೆಯ ಸಂಕೇತ. ಊರಿನ ಪಂಚಾತಿಕೆದಾರನಾಗಿ, ಮೇಷ್ಟ್ರಾಗಿ, ಸಾಮಾನ್ಯರ ಜತೆ ಬೆರೆಯಬಲ್ಲವರಾಗಿದ್ದರು. ಬಹಳ ಚೆನ್ನಾಗಿ ಡ್ರಾಯಿಂಗ್ ಮಾಡುತ್ತಿದ್ದರು. ಯಕ್ಷಗಾನ ಡೋಲಾಯಮಾನ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಸಾಧನೆಯ ಉತ್ತುಂಗಕ್ಕೇರಿ ಗೈಡೆನ್ಸ್ ಕೊಡುವ ಸ್ಥಾನದಲ್ಲಿದ್ದ ಅವರನ್ನು ಕಳೆದುಕೊಂಡದ್ದು ಬಹಳ ಬೇಸರದ ಸಂಗತಿ.' ಎನ್ನುತ್ತಾರೆ ಮೂವತ್ತು ವರ್ಷಗಳ ಒಡನಾಟವಿರುವ ಹಿರಿಯ ಅರ್ಥಧಾರಿ- ಲೇಖಕ ಡಾ.ಎಂ. ಪ್ರಭಾಕರ ಜೋಶಿ.
***
ಎಳವೆಯಲ್ಲೇ ತೀರಿಹೋದ ಇನ್ನೊಬ್ಬ ಸಹೋದರ ಗಜಾನನ ಹೆಗಡೆಯವರ ಸೈರಂಧ್ರಿ, ಶಂಭು ಹೆಗಡೆಯವರ ಕೀಚಕ - ಎಷ್ಟೇ ವರ್ಷಗಳುರುಳಿದರೂ ಮರೆತುಹೋಗದ್ದು. ಬಲರಾಮ, ಜರಾಸಂಧ, ದುರ್ಯೋಧನ, ಕೃಷ್ಣ , ಹರಿಶ್ಚಂದ್ರ, ಚಂದ್ರಹಾಸ, ಕಾರ್ತವೀರ್ಯ ಹೀಗೆ ಬಹಳಷ್ಟು ಪಾತ್ರಗಳಲ್ಲಿ ಶಂಭು ಹೆಗಡೆ ಇತಿಹಾಸ ನಿರ್ಮಿಸಿದವರು. ೭೦-೭೫ರ ವಯಸ್ಸೆಂದು ಅಭಿನಂದನ ಲೇಖನಗಳು ಬರಬೇಕಾದ ಸಮಯದಲ್ಲಿ ಸಂಸ್ಮರಣ ಲೇಖನಗಳನ್ನು ಬರೆಯಬೇಕಾದ ಪಾಡು ಈಗ ಪ್ರಿಯರದ್ದು. 'ಶೋಕರಸ'ವನ್ನೂ ನೃತ್ಯದ ಮೂಲಕ ಅಭಿವ್ಯಕ್ತಿಸಲು ಸಾಧ್ಯವೆಂದು ತೋರಿಸಿಕೊಟ್ಟವರು ಶಂಭು ಹೆಗಡೆ. ಆ ಶೋಕವೀಗ ಈ ಅಕ್ಷರಗಳಲ್ಲಿ ಮಡುಗಟ್ಟಿದೆ.
***
(ಕಳೆದ ಡಿಸೆಂಬರ್ ೨೬ರ ಸಂಜೆ. ಬೆಂಗಳೂರಿನ 'ಸುಮುಖ ಪ್ರಕಾಶನ'ದ ಪುಟ್ಟ ಗೂಡಿನಲ್ಲಿ `ಶ್ರೀರಾಮ ನಿರ್ಯಾಣ' ತಾಳಮದ್ದಳೆ. ಹಿರಿಯರಾದ ನೆಬ್ಬೂರು ನಾರಾಯಣರ ಭಾಗವತಿಕೆ. ಶಂಭು ಹೆಗಡೆಯವರ ಶ್ರೀರಾಮ. `ನಿನ್ನ ಅವತಾರದ ಕಾಲ ಮುಗಿಯಿತು, ಮತ್ತೆ ವೈಕುಂಠ ಸೇರಿಕೊ' ಅಂತ ರಾಮನನ್ನು ಎಚ್ಚರಿಸುವ `ಕಾಲಪುರುಷ'ನ ಪಾತ್ರ ಸಿಕ್ಕಿದ್ದು ನನಗೆ. ಆ ಬಗ್ಗೆ ಇನ್ನೊಮ್ಮೆ ಬರೆಯುವೆ.)

7 comments:

Anonymous,  February 3, 2009 at 8:11 PM  

ಶಂಭು ಹೆಗಡೆ ಅವರ ಜೀವನ- ಸಾಧನೆಗಳೆರಡೂ ಅನನ್ಯ.
ನೆನ್ನೆಯಿಂದ ನೂರೆಂಟು ಸಾರ್ತಿ ಅವರನ್ನ ನೆನೆಸಿಕೊಳ್ತಿದ್ದ ನನಗೆ ಈ ಲೇಖನ ತುಂಬಾ ಹಿಡಿಸಿತು.
ಧನ್ಯವಾದ

- ಚೇತನಾ ತೀರ್ಥಹಳ್ಳಿ

Unknown February 3, 2009 at 9:18 PM  

ಧನ್ಯ ಹೊ ಭಗವಾನ್..ಧನ್ಯ ಹೊ...ಅಂಥ ಅತಿರತನ ಮುಂದೆ ಸವಾಲು ಎಸೆಯುವ ಅವಕಾಶ ದೊರೆತ ನೀವು ನಿಜಕ್ಕೂ ಧನ್ಯರು. ಶಂಭು ಹೆಗಡೆ ಇಚ್ಚಾಮರಾಣಿಯೆ ಸರಿ. ಆದರೆ ಅವರ ಆಗಲುವಿಕೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಭಾವನೆಗಳಿಗೆ ಯಾಕೆ ವೇದಿಕೆ...ಇರಲಿ ಅವುಗಳು ಮನದ ಮೂಲೆಯಲ್ಲಿ...ಕಾಲಾಯ ತಸ್ಮೈ ನಮ:
-- ಸಂತೋಷ್ ಅನಂತಪುರ

Anonymous,  February 4, 2009 at 4:22 AM  

ಕೆಲವೊಂದು ವ್ಯಕ್ತಿತ್ವಗಳನ್ನು ಬರಹ ರೂಪಕ್ಕೆ ಇಳಿಸುವುದು ತುಂಬಾ ಕಷ್ಟ .... ಅಂಥ ಅಪೂರ್ವರಲ್ಲಿ ಹೆಗಡೆಯವರೂ ಒಬ್ಬರು.. ಭಾವ ಪೂರ್ಣ ಶ್ರಧ್ಧಾಂಜಲಿ .......
- ಶಮ, ನಂದಿಬೆಟ್ಟ

ಶ್ರೀನಿಧಿ.ಡಿ.ಎಸ್ February 4, 2009 at 7:15 AM  

ಚಂದ ಬರಹ..

ನಾನು ಆ ತಾಳಮದ್ದಲೆ ತಪ್ಪಿಸಿಕೊಂಡಿದ್ದಕ್ಕೆ ನಿನ್ನೆಯಿಂದ ಅದೆಷ್ಟು ಬಾರಿ ಬೇಜಾರುಪಟ್ಟುಕೊಂಡೆನೋ ಏನೋ..:(

ನಾನು -ಅಪ್ಪ ಹಲ ಬಾರಿ ಫೋನಿನಲ್ಲಿ ಶಂಭು ಹೆಗಡೆಯವರ ಬಗ್ಗೆಯೇ ಮಾತಾಡಿಕೊಂಡೆವು..

ತಮ್ಮ ಅನುಭವ ಹೇಗಿತ್ತು ಹೆಗಡೆಯವರ ಜೊತೆ ಅನ್ನುವುದನ್ನ ಬೇಗ ಬರೀರಿ..:)

ಮಲ್ಲಿಕಾರ್ಜುನ.ಡಿ.ಜಿ. February 9, 2009 at 9:13 AM  

ಮೇರು ವ್ಯಕ್ತಿತ್ವದ ಶಂಭು ಹೆಗಡೆಯವರಿಗೆ ನಮನಗಳು.

Anonymous,  February 9, 2009 at 10:29 PM  

Please read and participate

http://thepinkchaddicampaign.blogspot.com/

ಚಿನ್ಮಯ February 28, 2009 at 1:31 PM  

Very nice article..
-Chinmay Bhat

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP