April 03, 2009

ಕಲಾಕ್ಷೇತ್ರದಲ್ಲಿ ಪುಕ್ಕಟೆ ಹಿಂಸೆ

ಡಾಕ್ಟರೇಟ್‌ಗಳು-ಪ್ರಶಸ್ತಿಗಳು ನಾಚಿಕೆಗೇಡಿನ ವಸ್ತುಗಳಾಗಿರುವುದು ಈಗ ಮಾಮೂಲಿ ಸಂಗತಿ. ಅವುಗಳ ಜತೆಗೆ ಸಭಾ ಕಾರ್ಯಕ್ರಮಗಳೂ ಸೇರಿಕೊಳ್ಳುತ್ತಿರುವುದು ಮತ್ತೊಂದು ಬೇಸರದ ವಿಷಯ. ಕೇವಲ ಕಾಟಾಚಾರಕ್ಕಾಗಿ (ಕ್ಲೀಷೆಯಾದರೂ ಎಷ್ಟೊಳ್ಳೆಯ ಪದ-ಆಚಾರದ ಕಾಟ !) ನಡೆಯುವ ಈ ಸಭಾ ಕಾರ್ಯಕ್ರಮಗಳು ಪ್ರಚಾರದ ಮಾಧ್ಯಮ ವರದಿಗಾಗಿ, ಪ್ರಾಯೋಜಕರ ಸಂತೃಪ್ತಿಗಾಗಿ, ಅತಿಥಿಗಳ ಸಂತೋಷಕ್ಕಾಗಿ ಅತ್ಯಗತ್ಯ ಎನಿಸಿವೆ. ಆದರೆ ಅಂತಹ ಕಾರ್ಯದಲ್ಲೂ ಕನಿಷ್ಠ ಪ್ರಾಮಾಣಿಕತೆ ಕಾಣಿಸಬೇಕಲ್ಲ.

ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆಯ ಅಧ್ಯಕ್ಷರು, ವೇದಿಕೆಯಲ್ಲಿರುವ ಗಣ್ಯರ ಜತೆ ಕೊನೆಯ ಕುರ್ಚಿಯಲ್ಲಿ ಕೂರುವುದನ್ನಷ್ಟೇ ನಮ್ಮೂರಿನಲ್ಲಿ ನೋಡಿದ್ದವನು ನಾನು. ಕಳೆದ ಶುಕ್ರವಾರ (ಏ.೩) ಕಲಾಕ್ಷೇತ್ರದಲ್ಲಿ, ಸಂಸ್ಥೆಯ ಅಧ್ಯಕ್ಷರು ಅತಿಥಿಗಳ ಮಧ್ಯೆ ಕುಳಿತಿದ್ದರು. ಕಾರಣ ಇಷ್ಟೆ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ಎದುರಿರುವ ನೂರಾರು ಜನರ ಕಣ್ಣು ತಪ್ಪಿಸಿದವರಂತೆ ಕಾರ್ಯದರ್ಶಿಗಳೂ, ಮತ್ತೊಬ್ಬ ಪದಾಧಿಕಾರಿಯೂ ಬಂದು ಕೊನೆಯ ಆಸನಗಳಲ್ಲಿ ವಿರಾಜಮಾನರಾದರು ! ಪ್ರಾಸ್ತಾವಿಕ ಭಾಷಣ ಆರಂಭ. ಅದ್ಭುತ, ಮಹತ್ವದ, ಅತ್ಯುತ್ತಮ, ಅಪ್ರತಿಮ ಎಂಬ ಪದಗಳೆಲ್ಲ ಟೊಳ್ಳು ಎನ್ನುವುದನ್ನು ಸಾಬೀತುಪಡಿಸುವಂತೆ, ಅವನ್ನೆಲ್ಲ ಲೀಲಾಜಾಲವಾಗಿ ಎತ್ತಿ ಒಗೆಯುತ್ತಿದ್ದ ಪರಿ ನೋಡಿದರೆ ಕನ್ನಡಿಗರು ದಂಗಾಗಬೇಕು. ಆಗ ರಂಗಭೂಮಿಯ ಹಿರಿಯ ಕಲಾವಿದೆ ಪ್ರಮೀಳಾ ಗುಡೂರರಿಗೆ ಸನ್ಮಾನ. (ಅವರೀಗ 'ಮುತ್ತಿನ ತೋರಣ’ ಟಿವಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ) 'ಈ ಅಪ್ರತಿಮ ಕಲಾವಿದೆಗೆ ನಾವು ಕೇವಲ ಬೊಕ್ಕೆ , ಹಣ್ಣು ಕೊಟ್ಟು ಕಳುಹಿಸುತ್ತಿಲ್ಲ. ನಮ್ಮ ಉದ್ಯಮಿಗಳೂ ಸಮಾಜಸೇವಕರೂ ಆದ ರೆಡ್ಡಿಯವರು ಹತ್ತು ಸಹಸ್ರ (ಸಹಸ್ರ- ಸಾವಿರಗಳ ಮಧ್ಯೆ ಕನ್‌ಫ್ಯೂಸಾಗಿ, ತಡವರಿಸಿ!), ಹತ್ತು ಸಾವಿರ ರೂ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ’ ಅಂತ ಘೋಷಣೆಯಾಯಿತು. ಆ ಕಲಾವಿದೆಯ ಮೊಮ್ಮಗನಂತಿರುವ ಸಮಾಜಸೇವಕರೂ ವೇದಿಕೆಯಲ್ಲೇ ಕುಳಿತಿದ್ದರಲ್ಲ, ಅವರೆದ್ದು ಬಂದು ಆಕೆಯನ್ನು ಸನ್ಮಾನಿಸಿದ್ದೂ ಆಯಿತು.

ನಂತರ ಭಾಷಣಗಳು ಶುರುವಾದವು. ಮಧ್ಯೆ ಕುಳಿತ ಕರಿಬಸವಯ್ಯನವರಂತೂ ತೆರೆಯ ಹಿಂದಿದ್ದವರಿಗೆ-ದೂರದಲ್ಲಿ ಲೈಟಿಂಗ್ ಮಾಡುತ್ತಿದ್ದವರಿಗೆ-ಸಭೆಯ ಮಧ್ಯದಲ್ಲಿದ್ದ ಯಾರೋ ಪರಿಚಿತರಿಗೆ-ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದವರಿಗೆ, ಹೀಗೆ ಎಲ್ಲೆಂದರಲ್ಲಿ ಕೈಸನ್ನೆ ಮಾಡುವುದೂ, ಪಿಸುಗುಟ್ಟುವುದೂ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಜತೆಗೆ ಭಾಷಣ ಮಾಡುತ್ತಿರುವವರ ಕಡೆ ನೋಡಿ ಸಮಯಪ್ರಜ್ಞೆಯಿಂದ ಅಹುದಹುದೆಂದು ತಲೆಯಾಡಿಸುತ್ತಲೂ ಇದ್ದರು! ಇನ್ನು, ಭಾಷಣಕಾರರ ಒಂದು ವಾಕ್ಯ ಬಿಟ್ಟು ಇನ್ನೊಂದು ವಾಕ್ಯಕ್ಕೆ ಎಲ್ಲಿ, ಹೇಗೆ ಸಭಿಕರು ಚಪ್ಪಾಳೆ ಹೊಡೆಯಬೇಕೆಂದು, ತಾವೇ ಮುಂದಾಗಿ ಹೊಡೆದು ತೋರಿಸುತ್ತಿದ್ದವರು ಕರಿಬಸವಯ್ಯ ಮತ್ತು ಅತಿಥಿಯಾಗಿದ್ದ ನಟ ನಾಗರಾಜಮೂರ್ತಿಗಳು. (ಅಶ್ವತ್ಥರ ಗಾಯನ ಕಾರ್ಯಕ್ರಮದಲ್ಲಿ ತಾಳ ಹೊಂದಿಸಲು ಇಬ್ಬರು ಸಭಿಕರಿಗೆ ಬೆನ್ನು ಹಾಕಿ ಕೈಯಾಡಿಸುತ್ತಾ ನಿಂತಿರುವುದನ್ನು ನೋಡಿರುತ್ತೀರಲ್ಲ ಹಾಗೆ !) ತಾನು ಬೆಂಗಳೂರನ್ನು ಮೊದಲು ನೋಡಿದ್ದೇ ಬಹಳ ಇತ್ತೀಚೆಗೆ ಎಂಬ ಗುಡೂರರ ಮುಗ್ಧ ಮಾತಿಗೂ ಇವರು ಮೊದಲಾಗಿ ಕೈ ತಟ್ಟಿ, ಎಲ್ಲರೂ ಚಪ್ಪಾಳೆ ಹೊಡೆಯಲು ಸೂಚಿಸಿದರು! ಇನ್ನು ಅತಿಥಿಗಳಿಗೆ ಹಾರ ಹಾಕಿ ಸ್ಮರಣಿಕೆ ಕೊಟ್ಟಾಗಲಂತೂ ಕರಿಬಸವಯ್ಯರು ಕಣ್ಣಗಲಿಸಿಕೊಂಡು ಫೋಸು ನೀಡುತ್ತಿದ್ದರಾದರೂ, ಅಲ್ಲಿ ಯಾವ ಫೋಟೊಗ್ರಾಫರೂ ಇಲ್ಲದ್ದು ಒಂದೆರಡು ಕ್ಷಣಗಳಲ್ಲಿ ಅರಿವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರು ! ಸಭಾ ಕಾರ್ಯಕ್ರಮದ ಕೊನೆಗೆ, ಹೆಸರು ಘೋಷಿಸಲು ಇಚ್ಛಿಸದ ವ್ಯಕ್ತಿಯೊಬ್ಬರು, ಕಲಾವಿದೆ ಗುಡೂರರಿಗೆ ಹತ್ತು ಸಾವಿರ ರೂ. ಕೊಡಲಿದ್ದಾರೆಂದು ಪ್ರಕಟಿಸಲಾಯಿತು. ವೇದಿಕೆಯಲ್ಲಿದ್ದ ಸಮಾಜಸೇವಕರಿಗೆ ಇದಕ್ಕಿಂತ ದೊಡ್ಡ ಮಂಗಳಾರತಿ ಬೇರೆ ಬೇಕಾ?!

ಅಂತೂ ಏಳೂ ಮುಕ್ಕಾಲರ ಹೊತ್ತಿಗೆ, ಶಿವರಾಮ ಕಾರಂತರ 'ಮೈಮನಗಳ ಸುಳಿಯಲ್ಲಿ’ ಕಾದಂಬರಿ ನಾಟಕವಾಗಿ ರಂಗಕ್ಕೆ ಬಂತು. ೨೦ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯ ನಾಟಕಕ್ಕೆ, ನಿರ್ದೇಶಕರಾದ ಕೆ.ಎಸ್.ಡಿ.ಎಲ್.ಚಂದ್ರುರವರು ರೆಕಾರ್ಡೆಡ್ ಸಂಗೀತ ಬಳಸಿದ್ದರು ಅಂದರೆ ನೀವು ನಂಬಬೇಕು. ಅದೂ ದೃಶ್ಯದ ಕೊನೆಗೆ ಒಂಚೂರು. ಎರಡು ಪಾತ್ರಗಳ ಸಂಭಾಷಣೆ. ಅದು ನಿಂತಾಗಲಂತೂ ಅಸಹನೀಯ ಮೌನ. ನಾನಂತೂ ಆ ಕಾದಂಬರಿ ಓದದವನು. ಅದನ್ನು ಓದಿ ನಾಟಕ ನೋಡಹೋದವರನ್ನಂತೂ ಆ ಕಾರಂತರೇ ಕಾಪಾಡಬೇಕು. ಮಧ್ಯೆ ಎಲ್ಲೋ ಕ್ಯಾಸೆಟ್ ಜಂಗ್‌ಜಂಗ್ ಎಂದು ಸದ್ದು ಮಾಡಿ ನಿಲ್ಲುವುದು, ಕತ್ತಲಾಗಿ ಬೆಳಕು ಚೆಲ್ಲಿದ ಮೇಲೂ ನಟರಿಗೆ ಗ್ರೀನ್‌ರೂಂ ದಾರಿ ತಿಳಿಯದಿರುವುದು, ದಡಬಡ ಸದ್ದಾಗುವುದು...ಹೀಗೆ ನಿರಂತರ ಆಭಾಸ. ಈ ಎಲ್ಲದರ ಮಧ್ಯೆ ಕಲಾಕ್ಷೇತ್ರದಲ್ಲಿ ತುಂಬಿದ್ದ ಜನರನ್ನು ಕೊಂಚವಾದರೂ ಮುದಗೊಳಿಸಿದ್ದು, ಕಾರಂತರ ಕಾದಂಬರಿಯ ಸಾಲುಗಳು ಮಾತ್ರ.

ಪುಕ್ಕಟೆ ನಾಟಕಕ್ಕೆ ಹೋಗಿ, ಈ ಪರಿ ರೂಪಾಂತರದ ಅವಾಂತರಗಳನ್ನು ನೋಡಿದ್ದು ಇದೇ ಮೊದಲು. ಹಿಂದಿನ ದಿನ ನಡೆದ 'ಬಡೇಸಾಬು ಪುರಾಣ’ ನಾಟಕ ಪರವಾಗಿಲ್ಲ, ಚೆನ್ನಾಗಿತ್ತು- ಎಂಬ ಸ್ನೇಹಿತರ ಮಾತು ಕೇಳಿ ನನ್ನಂಥವರು ಹೋದರೆ ಹೀಗೂ ಆಗೋದಾ? ಅಂತೂ ಸಭಾ ಕಾರ್ಯಕ್ರಮ-ನಾಟಕದ ಎಲ್ಲ ಅಪಸವ್ಯಗಳ ನಡುವೆ, ಕರಿಬಸವಯ್ಯರ ಹೃದಯದಿಂದ ಬಂದ ಒಂದೇಒಂದು ಸತ್ಯವಾದ ಮಾತು- 'ನೀವು ಬೇಗ ಬೇಗ ಚಪ್ಪಾಳೆ ತಟ್ಟಿದ್ರೆ ಸಭಾ ಕಾರ್ಯಕ್ರಮ ಬೇಗ ಮುಗೀತದೆ!’

Read more...

March 27, 2009

ರಾಕ್ಷಸ ಟ್ರಕ್ ಹಸಿದಿದೆ

ದ್ದುದ್ದ ಚಾಚಿಕೊಂಡಿರುವ ನುಣ್ಣನೆ ರಸ್ತೆ. ಮನುಷ್ಯರ ವಸತಿ-ವಾಹನಗಳ ಸುಳಿವೇ ಅಪರೂಪ. ಫಿಯೆಟ್‌ನಂತಿರುವ ಕೆಂಪು ಕಾರಿನಲ್ಲಿ, ವ್ಯಾಪಾರದ ಕೆಲಸ ನಿಮಿತ್ತ ಹೊರಟಿದ್ದಾನೆ ಡೇವಿಡ್ ಮೇನ್. ರೇಡಿಯೊದಲ್ಲಿ ಯಾರದ್ದೋ ಸಂಭಾಷಣೆಗೆ ನಗುತ್ತಾ ಅವನದ್ದು ನಿರಾಯಾಸ ಚಾಲನೆ. ಅದ್ಯಾವುದೋ ಒಂದು ಲಡಕಾಸು ಲಾರಿ, ೪೦ ಟನ್ ಭಾರದ್ದು, ೧೮ ಚಕ್ರಗಳದ್ದು ! ಮಾರ್ಗ ಮಧ್ಯೆ ಸಿಕ್ಕಿದೆ. ತುಕ್ಕು ಹಿಡಿದ ದೊಡ್ಡ ಟ್ಯಾಂಕರ್ ಹೊಂದಿರುವ ಅದರಲ್ಲಿ Highly Inflammable ಎಂಬ ಬರೆಹವೂ, ಮೂರು ನಂಬರ್ ಪ್ಲೇಟ್‌ಗಳೂ ! ಫ್ರಂಟ್ ಎಂಜಿನ್ ಹೊಂದಿರುವ ಅದು, ಎದುರಿರುವ ಕೊಳವೆಯಲ್ಲಿ ರೈಲಿನಂತೆ ಬುಸುಬುಸು ಹೊಗೆ ಬಿಡುತ್ತಿದೆ. ಕಾರಿಗೆ ಸರಿಯಾಗಿ ದಾರಿಯೂ ಬಿಡಲೊಲ್ಲದು. ‘ಥೂ, ಇವನಿಗೆ ಗಾಡಿ ಓಡಿಸಲೂ ಬರುವುದಿಲ್ಲ’ ಎಂಬ ಗೊಣಗಾಟದಿಂದ ಆರಂಭವಾದ ಡೇವಿಡ್‌ನ ಅಸಹನೆ, ನಿಧಾನ ಸ್ಪರ್ಧೆಯಾಗಿ ಮಾರ್ಪಡುತ್ತಿದೆ. ಈತ ಕಾರು ನಿಲ್ಲಿಸಿದರೆ ನಿಲ್ಲುವ, ಹೊರಟರೆ ದಾರಿಗಡ್ಡ ಬರುವ ಲಾರಿ ಅದು. ಏನೋ ಆ ಡ್ರೈವರು ಆಟ ಆಡುತ್ತಿದ್ದಾನೆಂದು ತಿಳಿದು ಥ್ರಿಲ್ಲಾಗುತ್ತಿದ್ದರೆ ನಿಧಾನವಾಗಿ ಅದು ಆತಂಕಕ್ಕೆಡೆ ಮಾಡಿದೆ. ಸಮತಟ್ಟು ರಸ್ತೆಯಲ್ಲಂತೂ ಕಾರು ೮೦ಕಿಮೀ ವೇಗದಲ್ಲಿ ಸಾಗಿದರೂ, ಘ್ರಾ.....ಅನ್ನುತ್ತಾ ಬಿಡದೆ ಬೆಂಬತ್ತುತ್ತಿದೆ ಆ ದೈತ್ಯ ಟ್ರಕ್. ಪೊಲೀಸರಿಗೆ ಕರೆ ಮಾಡಲು, ರಸ್ತೆ ಪಕ್ಕದ ಟೆಲಿಫೋನ್ ಬೂತ್ ಹೊಕ್ಕರೆ, ಅದನ್ನೇ ಧ್ವಂಸ ಮಾಡುತ್ತಿದೆ. ಮುಂದೆ ಹೋಗೆಂದು ಆಗೀಗ ಲಾರಿ ಡ್ರೈವರ್ ಕೈ ಬೀಸುತ್ತಾನೆ. ಓವರ್‌ಟೇಕ್ ಮಾಡಹೊರಟರೆ...ಅಬ್ಬಾ ಜುಂಮ್....! ಆ ಟ್ರಕ್ ಚಾಲಕ, ಡೇವಿಡ್‌ನನ್ನು ಕೊಲ್ಲಲೆಂದೇ ಹುಟ್ಟಿದವನಂತಿದ್ದಾನೆ. ಈ ಪಯಣ ಎಲ್ಲಿವರೆಗೆ? ಸ್ಟೀವನ್ ಸ್ಪಿಲ್‌ಬರ್ಗ್ ಎಂದರೆ ಎಲ್ಲರಿಗೂ ನೆನಪಾಗದಿರಬಹುದು, ಆದರೆ ಆತನ ನಿರ್ದೇಶನದಲ್ಲಿ ೧೯೯೩ರಲ್ಲಿ ಬಿಡುಗಡೆಯಾದ ‘ಜುರಾಸಿಕ್ ಪಾರ್ಕ್’ ಗೊತ್ತಿರಲೇಬೇಕು. ಅಂತಹ ನಿರ್ದೇಶಕ ಸ್ಪಿಲ್‌ಬರ್ಗ್ ತನ್ನ ೨೪ನೇ ವಯಸ್ಸಿನಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ‘ಡ್ಯುಯಲ್’(DUEL). ೧೯೭೧ರಲ್ಲಿ ಬಿಡುಗಡೆಯಾದ ಇದೊಂದು ಕಾರು-ಲಾರಿಯ ದ್ವಂದ್ವಯುದ್ಧ. ಆಗಲೇ ಕಿರು ಚಿತ್ರಗಳಿಗೆ ನಿರ್ದೇಶನ-ಸಹ ನಿರ್ದೇಶನ ಮಾಡಿದ್ದ. ಟಿವಿ ಸೀರಿಯಲ್‌ಗಳಿಗೆ ಕೆಲಸ ಮಾಡಿದ್ದ ಸ್ಪಿಲ್‌ಬರ್ಗ್, ಡ್ಯುಯೆಲ್ ಚಿತ್ರದ ಬಳಿಕ, ಹಾಲಿವುಡ್‌ನ ಮಹೋನ್ನತ ನಿರ್ದೇಶಕ-ನಿರ್ಮಾಪಕನಾಗಿ ರೂಪುಗೊಳ್ಳುತ್ತ ಹೋದ. ರಾಶಿ ಸಂಪತ್ತಿನ ಒಡೆಯನಾಗಿ ಮೆರೆಯತೊಡಗಿದ. ಮೂರು ಆಸ್ಕರ್ ಪ್ರಶಸ್ತಿಗಳನ್ನೂ ಗೆದ್ದುಕೊಂಡ. ಡ್ಯುಯೆಲ್ ಅನ್ನು ಟಿವಿಗಾಗಿ ನಿರ್ಮಿಸಿದ್ದರೂ ಅದು ಕೆಲವೆಡೆ ಥಿಯೇಟರ್‌ಗಳಲ್ಲೂ ಬಿಡುಗಡೆಯಾಗಿ ಸಿನಿಮಾಸಕ್ತರ ಗಮನ ಸೆಳೆಯಿತು.

Fear is the driving force ಎನ್ನುವ ಅಡಿ ಶೀರ್ಷಿಕೆಯ, ಈ ಸಿನಿಮಾ ರಿಚರ್ಡ್ ಮ್ಯಾತ್‌ಸನ್‌ನ ಸಣ್ಣ ಕತೆ ಆಧರಿಸಿದ್ದು. ಚಿತ್ರಕತೆಯನ್ನು ಬರೆದವನೂ ಅವನೇ. ಅಷ್ಟಕ್ಕೂ ಇದರಲ್ಲಿ ಅಂಥಾ ಕತೆಯೇನೂ ಇಲ್ಲ. ಮಾತೂ ತೀರ ಕಡಿಮೆ. ಅಷ್ಟಲ್ಲದೆ ಹಾಡು, ಹೀರೋಯಿನ್ ಇಲ್ಲದೆಯೂ ಒಂದೂವರೆ ಗಂಟೆ ಕಾಲ, ನೋಡುಗ ಅತ್ತಿತ್ತ ಮಿಸುಕದಂತೆ ಮಾಡಬಲ್ಲ ಶಕ್ತಿ ಈ ಸಿನಿಮಾಕ್ಕಿದೆ. ಇದರಲ್ಲಿ ಕಾರಿನ ಡ್ರೈವರ್‌ಗೆ ಪ್ರತಿ ಪಾತ್ರವಾಗಿ ಕಾಣಿಸಿಕೊಳ್ಳುವ ಟ್ರಕ್‌ನ್ನು ಈಗಲೂ ಸುರಕ್ಷಿತವಾಗಿ ಕಾಪಿಡಲಾಗಿದೆ. ಆ ಬಗ್ಗೆ ವಿವರ ತಿಳಿಯಬೇಕಾದರೆ, ಫೋಟೊ ನೋಡಬೇಕಾದರೆ www.stlouisdumptrucks.com/Duel/index.html ಇಲ್ಲಿಗೆ ಹೋಗಬಹುದು.

ಕಾರು-ಟ್ರಕ್‌ಗಳ ರೇಸ್‌ನ ಈ ಸಿನಿಮಾಕ್ಕೆ ಅತ್ಯಂತ ನಿಖರವಾಗಿ ಕ್ಯಾಮೆರಾ ಹಿಡಿದವನು ಜ್ಯಾಕ್ ಎ. ಮಾರ್ತಾ . ೨೪ ವರ್ಷದ ನಿರ್ದೇಶಕನಿಗೆ ೬೭ ವರ್ಷದ ಕ್ಯಾಮೆರಾಮ್ಯಾನ್. ಒಂದೇಒಂದು ಶಾಟ್ ಕೂಡಾ ವ್ಯರ್ಥ ಅನ್ನಿಸದಂತೆ, ಸಿನಿಮಾದ ಬಿಗಿಯನ್ನು ಕಾಪಾಡಿಕೊಂಡದ್ದರಲ್ಲಿ ಜ್ಯಾಕ್ ಪಾಲು ದೊಡ್ಡದಿರಬಹುದು. ತೆರೆಯಲ್ಲಿ ಕಾರಿನ ಓಟ ನೋಡುತ್ತಾ ಕೊಂಚ ತಲೆತಿರುಗಿದಂತಾದರೆ ಈತನನ್ನು ನೆನೆಯಬೇಕು ! ಚಿತ್ರದ ಬಹುಭಾಗ ವೇಗದ ಚಲನೆಯೇ ಇರುವುದರಿಂದ, ಚಲಿಸುವ ಬಿಂಬಗಳನ್ನು ನಿಖರವಾಗಿ ಹಿಡಿಯುವುದು ಸುಲಭವೇನಲ್ಲ. ದಾರಿ ಮಧ್ಯೆಯ ಹೋಟೆಲ್‌ನಲ್ಲಿ ಡೇವಿಡ್ ಕುಳಿತು, ಟ್ರಕ್ ಚಾಲಕನನ್ನು ಹುಡುಕುವ ದೃಶ್ಯಗಳಲ್ಲಿ, ಮಾರ್ತಾ ಕ್ಯಾಮೆರಾ ನಮ್ಮ ಎದೆ ಬಡಿತವನ್ನು ಹಿಡಿಯುತ್ತದೆ. ಎಷ್ಟು ಬೇಕೋ ಅಷ್ಟೇ, ಎಲ್ಲಿ ಬೇಕೋ ಅಲ್ಲೇ, ಕ್ಯಾಮೆರಾ ಒಡ್ಡಿದ್ದಾನೆ ಆತ. ಕೊನೆಯ ದೃಶ್ಯವನ್ನಂತೂ ಟೈಟಾನಿಕ್ ತೋರಿಸಿದ ಹಾಗೆ, ಒಂದು ದೈತ್ಯಾಕಾರವನ್ನು ಚಿತ್ರಿಸಿರುವ ರೀತಿ ಆತನ ಸಾಮರ್ಥ್ಯದ ಸಿದ್ಧಿಯಂತಿದೆ.

ಡೇವಿಡ್ ಪ್ರಯಾಣ ಹೊರಟಿರುವ ಕಾರಿನ ರೇಡಿಯೊದಲ್ಲಿ ಯಾವುದೋ ಕುಟುಂಬದ ಸಮಸ್ಯೆಯ ಬಗ್ಗೆ ಪ್ರಶ್ನೋತ್ತರ ನಡೆಯುತ್ತಿದೆ. ಗಂಡಸೊಬ್ಬ ಫೋನ್ ಮಾಡಿ, ತಾನು ಹೊರಗಿನ ಕೆಲಸವನ್ನೆಲ್ಲ ಹೆಂಡತಿಗೆ ಬಿಟ್ಟು ಮನೆವಾರ್ತೆಯನ್ನಷ್ಟೇ ನೋಡಿಕೊಳ್ಳುತ್ತಿದ್ದೇನೆ. ಈಗ ನೆರೆಹೊರೆಯವರೆಲ್ಲ ಆಡಿಕೊಳ್ಳುತ್ತಿದ್ದಾರೆ ಏನು ಮಾಡಲಿ ಅನ್ನುತ್ತಿದ್ದಾನೆ. ಆದರೆ ಡೇವಿಡ್ ದಾರಿ ಮಧ್ಯೆ ಪೆಟ್ರೋಲ್ ಬಂಕ್ ಬೂತ್‌ನಿಂದ ಮನೆಗೆ ಫೋನ್ ಮಾಡಿದರೆ, ಹೆಂಡತಿಗೆ ಈತನ ಮೇಲೆ ಸಿಟ್ಟು. ನೀನು ಪಾರ್ಟಿಯೊಂದರಲ್ಲಿ ಅವಮಾನವಾದಾಗ ಗಂಡುಗಲಿಯಾಗಿ ನಡೆದುಕೊಳ್ಳಲಿಲ್ಲ, ರೇಪ್ ಮಾಡೋದಕ್ಕೆ ಮಾತ್ರ ಮನೆಗೆ ಬರ್‍ತೀಯ- ಅಂತ ಸಿಡಿಮಿಡಿಗೊಳ್ಳುತ್ತಾಳೆ. ಇಲ್ಲ ಸಮಯಕ್ಕೆ ಸರಿಯಾಗಿ ಖಂಡಿತಾ ಬರ್‍ತೀನಿ ಅಂತ ಆಶ್ವಾಸನೆ ಕೊಟ್ಟು ಮತ್ತೆ ಡ್ರೈವಿಂಗ್ ಶುರು ಮಾಡಿದ್ದಾನೆ. ರಾಕ್ಷಸ ಟ್ರಕ್ ಹಸಿದಿದೆ.

Read more...

March 08, 2009

ಕತ್ತಲಲ್ಲಿ ಸಿಕ್ಕಿದಂತೆ

ಮೊನ್ನೆಮೊನ್ನೆ ಒಂದು ರಾತ್ರಿ. ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು. ಆಗ ಸಿಕ್ಕವು ಇಲ್ಲಿವೆ. ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ, ಹೋಗಿಬಿಡಿ !

Read more...

February 20, 2009

ದೇವರೂ ದೇವದೂತರೂ

ಲಾಹೋರ್‌ನಲ್ಲಿ ಒಂದು ಮುಸ್ಲಿಂ ಸಂಸಾರವಿದೆ. ಅದರ ಇಬ್ಬರು ಹುಡುಗರೂ ಒಳ್ಳೆಯ ಹಾಡುಗಾರರು. ಅವರಲ್ಲಿ ಎರಡನೆಯವನು ಇಸ್ಲಾಂ ಧರ್ಮಾಂಧರ ತೆಕ್ಕೆಗೆ ಬೀಳುತ್ತಿದ್ದಾನೆ. ಮುಸ್ಲಿಂ ಪತ್ನಿಯಿಂದ ವಿಚ್ಛೇದಿತನಾಗಿ, ಬ್ರಿಟಿಷ್ ಹೆಣ್ಣಿನೊಂದಿಗಿರುವ ಪಾಕಿಸ್ತಾನಿಯ ಸಂಸಾರವೊಂದು ಲಂಡನ್‌ನಲ್ಲಿದೆ. ಆ ವ್ಯಕ್ತಿಯ ಮಗಳು ಬ್ರಿಟಿಷ್ ಹುಡುಗನೊಬ್ಬನೊಂದಿಗೆ ಪ್ರೇಮದಲ್ಲಿ ಸಿಲುಕಿದ್ದಾಳೆ. ಅಪ್ಪ ಹೇಳುತ್ತಾನೆ -‘ಮಗಳೇ, ಇಸ್ಲಾಂನಲ್ಲಿ ಹುಡುಗ ಅನ್ಯ ಮತೀಯ ಹುಡುಗಿಯನ್ನು ಮದುವೆಯಾಗಬಹುದು. ಆದರೆ ಮುಸ್ಲಿಂ ಹುಡುಗಿ ಅನ್ಯಮತೀಯನನ್ನು ವರಿಸುವಂತಿಲ್ಲ. ಆದರೂ ನಿನ್ನ ಹಠದಿಂದಾಗಿ ಮದುವೆಗೆ ನಾನು ಒಪ್ಪಿದ್ದೇನೆ. ನಾವಿಬ್ಬರು ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರೋಣ,ಆಮೇಲೆ ಮದುವೆ ಆಗುವೆಯಂತೆ ’. ಆದರೆ ಆಮೇಲೆ ? ಧರ್ಮಾಂಧತೆಯು ಎಲ್ಲೆಲ್ಲೋ ಯಾರಲ್ಲೋ ಹೇಗೇಗೋ ಜಾಗೃತವಾಗುತ್ತಿದೆ.

ಇತ್ತ ಲಾಹೋರ್‌ನಲ್ಲಿದ್ದ ಹಿರಿಯ ಮಗ ಸಂಗೀತ ಕಲಿಕೆಗಾಗಿ ಅಮೆರಿಕಕ್ಕೆ ಹೋಗಿದ್ದಾನೆ. ಆಗ ಅಮೆರಿಕದ ಮೇಲೆ ‘೯/೧೧’ರ ದಿನ ಭಯೋತ್ಪಾದಕರ ಧಾಳಿಯಾಗಿದೆ. ಈ ತರುಣನ ಕುತ್ತಿಗೆಯ ತಾಯಿತದೊಳಗಿರುವ ಸಣ್ಣ ಪ್ಲಾಸ್ಟಿಕ್ ಹಾಳೆಯಲ್ಲಿ ಯಾವುದೋ ಸಂಕೇತಾಕ್ಷರಗಳಂತೆ ಕಾಣುವ ಅಂಕೆ ಅಕ್ಷರಗಳ ಮಂಡಲವಿದೆಯಲ್ಲ....ಅದರಲ್ಲಿನ ೯ ಮತ್ತು ೧೧ ನಂಬರ್‌ಗಳಿಗೆ ಅಮೆರಿಕದ ಪೊಲೀಸರು ಕೆಂಪು ಶಾಯಿಯಲ್ಲಿ ರೌಂಡ್ ಮಾರ್ಕ್ ಮಾಡುತ್ತಿದ್ದಾರೆ ! ನೀವು ನೋಡಿದ್ದೀರೋ ಇಲ್ಲವೋ ತಿಳಿಯದು. ‘ಖುದಾ ಕೇಲಿಯೆ’ ಎಂಬ ಪಾಕಿಸ್ತಾನಿ ಉರ್ದು ಭಾಷೆಯ ಆ ಸಿನಿಮಾ ದೇವರಿಗಾಗಿ ಮಾಡಿದ್ದಂತೂ ಅಲ್ಲ. ೨೦೦೭ರಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ, ೨೦೦೮ ಏಪ್ರಿಲ್‌ನಲ್ಲಿ ಭಾರತದಲ್ಲೂ ಆ ಸಿನಿಮಾ ಬಂತು. ಸುಮಾರು ಎರಡೂಮುಕ್ಕಾಲು ಗಂಟೆ, ಲಾಹೋರ್-ಲಂಡನ್-ಚಿಕಾಗೊ ಹಾಗೂ ಪಾಕ್ ಅಫ್ಘನ್ ಗಡಿಯಲ್ಲಿ ನಡೆಯುವ ಚಿತ್ರ ಅದು. ಸಿನಿಮಾದ ಸುಮಾರು ೯ ಪುಟ್ಟ ಪುಟ್ಟ ಹಾಡುಗಳನ್ನು ಹಾಡಿದವರು ಹಲವರು. ಆದರೆ ಪ್ರತಿಯೊಂದು ಹಾಡು ಕೂಡಾ ಝರಿಝರಿಯಾಗಿ ಬಂದಿದೆ. ಸಿನಿಮಾದ ಸಂಗೀತ ನಿರ್ದೇಶಕ ರೊಹೈಲ್ ಹೇತ್ ಸೃಷ್ಟಿಸಿದ ಸುಕೋಮಲ ಧ್ವನಿ ಝೇಂಕಾರ ನಿಮ್ಮ ಎದೆಬಡಿತದೊಂದಿಗೆ ಸೇರಿಕೊಂಡೀತು ಹುಷಾರು !
ನಿರ್ಮಾಪಕ- ಟಿವಿ ಕಾರ್‍ಯಕ್ರಮ ನಿರ್ದೇಶಕ -ಬರಹಗಾರ-ಸಂಗೀತ ನಿರ್ದೇಶಕ...ಹೀಗೆ ಎಲ್ಲ ಪದವಿಗಳನ್ನು ಹೊತ್ತಿರುವ ಶೋಯಿಬ್ ಮನ್ಸೂರ್‌ಗೆ ಸಿನಿಮಾ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಟಿವಿಯಲ್ಲಿ ಗೆದ್ದವರು ಥಿಯೇಟರ್‌ನಲ್ಲಿಯೂ ಗೆಲ್ಲುವುದು ಸುಲಭ ಅಲ್ಲ ಅಂತ ನಮಗೆ ಗೊತ್ತಿದೆಯಲ್ಲ. ಆದರೆ ಈ ಚಿತ್ರ ವಿಮರ್ಶಕರ ಗಮನವನ್ನೂ ಸೆಳೆಯಿತು, ಪಾಕ್‌ನ ಬಾಕ್ಸಾಫೀಸಿನಲ್ಲೂ ಹಿಟ್ ಆಯಿತಂತೆ. ಅತಿಥಿ ಕಲಾವಿದರಾಗಿರುವ ನಾಸಿರುದ್ದೀನ್ ಶಾ ಹೊರತುಪಡಿಸಿದರೆ, ಇದರ ನಟರೆಲ್ಲ ನಮಗೆ ಅಪರಿಚಿತರೇ. ಈ ಸಿನಿಮಾದ ಜೀವ ಶಕ್ತಿ ಇರುವುದು ಚಿತ್ರಕತೆ ಮತ್ತು ಸಂಗೀತದಲ್ಲಿ. ಬರಿಯ ಒಣ ಚರ್ಚೆಯೂ ಆಗಬಲ್ಲ ಕತೆಯನ್ನು ಮಾತಿನಲ್ಲೂ ದೃಶ್ಯದಲ್ಲೂ ಕರಗಿಸಿ, ಒಂದು ಹದ ಪಾಕದಲ್ಲಿ ಕೊಟ್ಟಿದ್ದಾರೆ ಶೋಯಬ್. ಉತ್ತರಾರ್ಧದಲ್ಲಿ , ಅಮೆರಿಕ-ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳನ್ನು ಬಹಳ ಮಜಬೂತಾಗಿ ಒಂದರನಂತರ ಒಂದು ತುಂಡುತುಂಡು ದೃಶ್ಯಗಳನ್ನಿಟ್ಟು ತೋರಿಸುತ್ತಾರೆ. ಅಲ್ಲಿನ ಹೊಡೆತದ ನೋವು ಇಲ್ಲಿ ಕಾಣಿಸುತ್ತದೆ. ಇಲ್ಲಿನ ಹೂವು ಅಫ್ಗನ್ ಗಡಿಯಲ್ಲಿ ಅರಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ಓದಿಸಿಕೊಂಡು ಹೋಗುವಂತೆ, ನೋಡಿಸಿಕೊಂಡು ಹೋಗುವ ಗುಣವೂ ಇದಕ್ಕಿದೆ.

ಪಾಕಿಸ್ತಾನದ ಕೋರ್ಟ್‌ನಲ್ಲಿ ನಾಸಿರುದ್ದೀನ್ ಶಾ ‘ನಿಜ ಧರ್ಮ’ದ ಬಗ್ಗೆ ಹೇಳುತ್ತಾ ಪ್ರಶ್ನಿಸುತ್ತಾರೆ- ‘ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿಧ್ಯ ಸೃಷ್ಟಿಸಿದ ದೇವರು, ಮುಸ್ಲಿಂ ಮಹಿಳೆಯರಿಗೆ ಮಾತ್ರ ಯೂನಿಫಾರ್ಮ್ ಕಡ್ಡಾಯ ಮಾಡಿಯಾನೇ?’ ಇದು ನಾವೆಲ್ಲ ಮೈಮರೆತು ನೋಡಬೇಕಾದ ಸಿನಿಮಾ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP