August 22, 2011

ಮಾತಿನ ಮಲ್ಲರ ಜತೆ ಒಂದು ಕಲಾರಾತ್ರಿ

ಕಳೆದ ಶನಿವಾರದ ರಾತ್ರಿ. ಸುಳ್ಯ ತಾಲೂಕಿನ ಚೊಕ್ಕಾಡಿಯ ‘ದೇಸೀ ಭವನ’ದ ಹೊರಗೆ ಆಕಾಶ ತುಂಬಿ ಮಳೆಯಾಗುತ್ತಿದ್ದರೆ, ಒಳಗೆ ಮನಸ್ಸು ತುಂಬಿ ಮಾತಿನ ಮಳೆಯಾಗುತ್ತಿತ್ತು. ಅದು ಯಕ್ಷಗಾನದಲ್ಲಿ ’ಕೊಡಕ್ಕಲ್ಲು ಹಾಸ್ಯಗಾರರು’ ಅಂತಲೇ ಪ್ರಸಿದ್ಧರಾದ ಕೆ.ಗೋಪಾಲಕೃಷ್ಣ ಭಟ್ಟರಿಗೆ ಅಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನ. ಆ ಸಂಭ್ರಮಕ್ಕೆ ಸೂರಿಕುಮೇರಿ, ಜಗದಾಭಿ, ಶೆಟ್ಟಿಗಾರ್, ದೀಪಕ್ ಮೊದಲಾದ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ. ಆ ಬಳಿಕ ರಾತ್ರಿಯಿಂದ ಬೆಳಗಿನವರೆಗೆ ತಾಳಮದ್ದಳೆ ! ಭಾಗವತರಾಗಿ ಬಲಿಪ, ಪದ್ಯಾಣ, ಪುತ್ತಿಗೆ. ಅರ್ಥಧಾರಿಗಳಾಗಿ ಕುಂಬ್ಳೆ, ಮೂಡಂಬೈಲು, ಮೇಲುಕೋಟೆ, ಸುಣ್ಣಂಬಳ, ಬರೆ, ಸೂರಿಕುಮೇರಿ, ಹಿರಣ್ಯ, ಶಂಭು, ಉಜಿರೆ..ಹೀಗೆ ಮಾತಿನ ಮಲ್ಲರು ಅಲ್ಲಿ ಸೇರಿದ್ದರು. ಪಾತ್ರಗಳ ಬೆಳಕಿನಲ್ಲೇ ಆ ಕಲಾರಾತ್ರಿಯಲ್ಲಿ ಬೆಳಗಾಯಿತು. ತಾಳಮದ್ದಳೆ ಮುಗಿದಾಗ ಬೆಳಗ್ಗೆ ಏಳೂವರೆ. ತಾಳಮದ್ದಳೆಯಲ್ಲಿ ಮಾತೇ ಸರ್ವಸ್ವ. ಹಾಗಾಗಿ ಇದಕ್ಕಿಂತ ಹೆಚ್ಚು 'ಬರಹದಲ್ಲಿ ಹೇಳಲಾರೆನೂ..'! ಇಂತಹ ಕಾರ್ಯಕ್ರಮಕ್ಕೆ ಸಾದಂರ್ಭಿಕವಾಗಿ ಉದಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನವೊಂದು ಇಲ್ಲಿದೆ. ಆ ಕಾರ್ಯಕ್ರಮವನ್ನು ಕಲ್ಪಿಸಿಕೊಂಡು ಆನಂದಿಸಿ !

ಹಾಸ್ಯ ಶ್ರೇಣಿಗೆ ಶೇಣಿ ಪ್ರಶಸ್ತಿ

ಮರಣವನ್ನೇ ತನ್ನಿಚ್ಚೆಗೆ ಒಳಪಡಿಸಿಕೊಂಡ ಭೀಷ್ಮನ ಹಾಗೆ, ಪುರಾಣ ಪಾತ್ರಗಳನ್ನು ತನ್ನಿಚ್ಚೆಗೆ ಒಳಪಡಿಸಿಕೊಂಡವರು ಶೇಣಿ ಗೋಪಾಲಕೃಷ್ಣ ಭಟ್. ವೇದಿಕೆಗೆ ಬಂದರೆಂದರೆ ಅವರದೇ ಆದ ರೀತಿ ನೀತಿ. ಆದರೆ ಶೇಣಿಯವರಿಗೆ ತೀರಾ ವ್ಯತಿರಿಕ್ತವಾಗಿ, ಇನ್ನೊಬ್ಬರ ಇಚ್ಚೆಗಳಿಗೆಲ್ಲ ತನ್ನನ್ನು ಒಪ್ಪಿಸಿಕೊಂಡ ಭಾರತದ ಭೀಷ್ಮನ ಹಾಗೆ ವೇದಿಕೆಯಲ್ಲಿ ಕಾಣುತ್ತಿದ್ದವರು ದೇರಾಜೆ ಸೀತಾರಾಮಯ್ಯ ! ದೇರಾಜೆ ರಸವಾದರೆ, ಶೇಣಿ ತಿರುಳು. ದೇರಾಜೆ ಭಾವವಾದರೆ, ಶೇಣಿ ಬುದ್ಧಿ. ಇಬ್ಬರೂ ಸೇರಿದರೆ ಪಾತ್ರಗಳ ಅಂತರಂಗ ಶುದ್ಧಿ. ಸೀತಾರಾಮಯ್ಯ ಕಡಿಮೆ ಮಾತಾಡಿದರು, ಹೆಚ್ಚು ಬರೆದರು. ಶೇಣಿ ಹೆಚ್ಚೆಚ್ಚು ಮಾತನಾಡಿದರು. ಬಹುಶಃ ಇವರಿಬ್ಬರನ್ನು ಒಂದುಗೂಡಿಸಿದ್ದು ಸೀತಾರಾಮಯ್ಯರ ಹಾಸ್ಯಪ್ರವೃತ್ತಿಯೇ. ಶೇಣಿಯವರ ಘನಗಾಂಭೀರ್ಯವನ್ನು ಸೂಜಿಮೊನೆಯಲ್ಲಿ ಮುರಿಯಬಲ್ಲ ಸಾಮರ್ಥ್ಯ ಇದ್ದದ್ದು ಸೀತಾರಾಮಯ್ಯರಿಗೆ. ಶೇಣಿಯವರು ಕೌರವನಾಗಿ, ಶಲ್ಯಭೂಪತಿ ದೇರಾಜೆಯವರ ಬಳಿ ಹೋದಾಗ ನಡೆಯುವ ಮಾತುಕತೆಯಲ್ಲಿ ಈ ವಿರುದ್ಧ ಆಕರ್ಷಣೆಯನ್ನು ಪ್ರೇಕ್ಷಕರು ಆನಂದಿಸುತ್ತಿದ್ದರು.

ದೇರಾಜೆ ಸೀತಾರಾಮಯ್ಯರ ಕರ್ಮಭೂಮಿ ಸುಳ್ಯ ತಾಲೂಕಿನ ಚೊಕ್ಕಾಡಿ. ಅವರ ಮುಂದಾಳತ್ವದಲ್ಲಿ ಅಲ್ಲಿ ನಿರ್ಮಾಣವಾದದ್ದು ಶ್ರೀರಾಮ ದೇವಾಲಯ. ಅವರ ಯಕ್ಷಗಾನ, ನಾಟಕದ ಹುಚ್ಚಿಗೆ ಆ ಪರಿಸರ ಸಾಕ್ಷಿಯಾಗಿತ್ತು. ಈಗ ಶೇಣಿ ಅಜ್ಜನೂ ಅಲ್ಲಿಗೆ ಮತ್ತೆ ಬರುತ್ತಿದ್ದಾರೆ. ’ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ’ ಯ ನೇತೃತ್ವದಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನವೆಂಬ ಅದ್ದೂರಿ ಕಾರ್ಯಕ್ರಮ ಚೊಕ್ಕಾಡಿಯಲ್ಲಿ ನಡೆಯುತ್ತಿದೆ. ಅಲ್ಲಿ ’ಶೇಣಿ ಪ್ರಶಸ್ತಿ’ಗೆ ಭಾಜನರಾಗುತ್ತಿರುವುದು ಒಬ್ಬರು ಹಾಸ್ಯಗಾರರು ಅನ್ನುವುದು ಶೇಣಿ-ದೇರಾಜೆ ಇಬ್ಬರಿಗೂ ಅದೆಷ್ಟು ಖುಶಿ ತರುತ್ತದೋ !

ಅವರಿಗೀಗ ವಯಸ್ಸು ೮೩. ಶೇಣಿ, ದೇರಾಜೆ, ಪೊಳಲಿ ಶಾಸ್ತ್ರಿಗಳು ಅವರ ನೆಚ್ಚಿನ ಅರ್ಥಧಾರಿಗಳಂತೆ. ಕುರಿಯ ವಿಠಲ ಶಾಸ್ತ್ರಿ, ನಾರಾಯಣ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್ ಮೆಚ್ಚಿನ ವೇಷಧಾರಿಗಳಂತೆ. ಆದರೆ ಇವರು ಬೆಳೆದದ್ದು ಮಾತ್ರ ಯಕ್ಷಗಾನದ ಪಾರಂಪರಿಕ ಹಾಸ್ಯದ ವಾರಸುದಾರರಾಗಿ. ಇವರು ಬಂಟ್ವಾಳ ತಾಲೂಕು ಕೊಡಕ್ಕಲ್ಲಿನ ಕೆ. ಗೋಪಾಲಕೃಷ್ಣ ಭಟ್. ೧೬ನೇ ವಯಸ್ಸಿನಲ್ಲಿ ಮೃದಂಗ ಅಭ್ಯಾಸದ ಮೂಲಕ ಕಲಾ ಜೀವನಕ್ಕೆ ಪದಾರ್ಪಣೆ. ತಂದೆ ಶಾಂಭಟ್ಟರು ಹಾಗೂ ಮಾವ ನೆಡ್ಲೆ ನರಸಿಂಹ ಭಟ್ಟರೇ ಮೊದಲ ಗುರುಗಳು. ಕೂಡ್ಲು ಮೇಳ ಸೇರಿದ್ದು ಭಾಗವತನಾಗಿ ! ಆದರೆ ೨೪ರ ವಯಸ್ಸಿನ ಹೊತ್ತಿಗೆ, ಕಟೀಲು ಮೇಳದಲ್ಲಿ ಹೊಗಳಿಕೆ ಹಾಸ್ಯಗಾರನಾಗಿ ಭಾಗವಹಿಸಿದ ಬಳಿಕ ನಗಿಸುವುದೇ ಅವರ ಪರಮಧರ್ಮ. ಧರ್ಮಸ್ಥಳ, ಕಟೀಲು, ಕುಂಡಾವು, ಕರ್ನಾಟಕ, ಪೊಳಲಿ, ಸುಂಕದಕಟ್ಟೆ ಮೇಳಗಳಲ್ಲಿ ಹಾಗೂ ಹವ್ಯಾಸಿ ತಂಡಗಳಲ್ಲೂ ಹಾಸ್ಯಗಾರನಾಗಿದ್ದ ಅವರಿಗೆ ನಕ್ಕರದೇ ಸ್ವರ್ಗ. ಕೃಷ್ಣನ ಜತೆಗಾರರಾಗಿರುವ ವಿಜಯ ಹಾಗೂ ದಾರುಕ - ಈ ಎರಡೂ ಪಾತ್ರಗಳಲ್ಲಿ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ ಪ್ರದರ್ಶನ ಲೀಲಾಜಾಲ. ಯಕ್ಷಗಾನದ ಹಾಸ್ಯಕ್ಕೆ ಒಂದು ಶಿಷ್ಟ ಸ್ವರೂಪ ಕೊಟ್ಟ ವಿಟ್ಲ ಜೋಶಿಯವರು ಮತ್ತು ಕೊಡಕ್ಕಲ್ಲು, ಧರ್ಮಸ್ಥಳ ಮೇಳದಲ್ಲಿ ಶಂಖ ಲಿಖಿತರಾಗಿ ಬಂದರೆ ಪ್ರೇಕ್ಷಕರಿಗೆ ನಗೆಗಡಲು. ವಿರಾಟ ನಗರಕ್ಕೆ ಪಾಂಡವರು ಹೊರಟಾಗ ತಾನೂ ಬರುತ್ತೇನೆನ್ನುವ ಪಾತ್ರದಲ್ಲೂ ಕೊಡಕ್ಕಲ್ಲು ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲಿ, ತಾನು ಹೇಗೆ ವಿರಾಟ ನಗರಿಯಲ್ಲಿ ಗುರುತು ಮರೆಸಿ ಇರಬಲ್ಲೆ ಅನ್ನುವುದಕ್ಕೆ ವೇದಿಕೆ ಮಧ್ಯದಲ್ಲೇ ಮೂರ‍್ನಾಲ್ಕು ವೇಷಗಳನ್ನು ಕ್ಷಣಮಾತ್ರದಲ್ಲೇ ಮಾಡಿ ತೋರಿಸುತ್ತಿದ್ದರಂತೆ ! ಸಿದ್ಧ ಹಾಸ್ಯಕ್ಕಿಂತ ಹೆಚ್ಚಾಗಿ ಇದಿರು ಅರ್ಥಧಾರಿಯ ಮಾತುಗಳನ್ನೇ ಹೆಕ್ಕಿಕೊಂಡು ವಿನೋದ ಸೃಷ್ಟಿಸುವುದು ಇವರ ಹೆಚ್ಚುಗಾರಿಕೆ.

ಕೊಡಕ್ಕಲ್ಲು ಭಟ್ಟರದ್ದು ’ಯಕ್ಷಗಾನದ ಹಾಸ್ಯ’. ಸುಮಾರು ೫೦ ವರ್ಷಗಳ ಕಾಲ ಇವರ ವಿನೋದಾವಳಿ ! ನೆನಪಿಸಿಕೊಂಡರೆ, ಇವರು ಮೊದಲು ಸನ್ಮಾನಕ್ಕೆ ಪಾತ್ರರಾಗಿದ್ದು ೧೯೯೧ರಲ್ಲಂತೆ, ಅಂದರೆ ೬೩ನೇ ವಯಸ್ಸಿನಲ್ಲಿ ! ಆ ಬಳಿಕ ಬಹಳಷ್ಟು ಸಂಘಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಕಳೆದ ಫೆಬ್ರವರಿಯಲ್ಲಿ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ. ಇವರು ಓದಿದ್ದು ೩ನೇ ತರಗತಿ. ಏಳು ಜನ ಮಕ್ಕಳ ತಂದೆ. ಈಗ ಅವರ ಮಗಳು ಕೆ.ಟಿ. ಶೈಲಜಾ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದು ಬದುಕಿನ ತಿರುವು ಜೀವಂತಿಕೆಗೊಂದು ಸಾಕ್ಷಿಯಾಗಿದೆ. ಅವರ ಇನ್ನೊಬ್ಬರು ಮಗಳು ಸುಕನ್ಯಾ ಅವರ ಮನೆಯೂ ಚೊಕ್ಕಾಡಿಗೆ ಕೂಗಳತೆ ದೂರದ ನೇಣಾರಿನಲ್ಲಿದೆ. ಹೀಗೆ ’ಶೇಣಿ ಪ್ರಶಸ್ತಿ’ಯನ್ನು ಚೊಕ್ಕಾಡಿಯಲ್ಲಿ ಪಡೆಯುವಲ್ಲಿ ಅವರ ನಗುವಿಗೆ ಕಾರಣ ಹೆಚ್ಚಾಗಿದೆ !

ಎಂಟು ವರ್ಷಗಳ ಹಿಂದೆ. ಯಕ್ಷಗಾನದ ಮಹಾಪುರುಷ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ’ಸಹಸ್ರಚಂದ್ರ ದರ್ಶನ’ದ ಸಂಭ್ರಮ. ಆ ಶುಭಾವಸರದಲ್ಲಿ ಅಭಿಮಾನಿಗಳು ಅವರಿಗೆ ನೀಡಿದ ನಿಧಿಯನ್ನು ಒಂದು ದತ್ತಿನಿಧಿ ಸ್ಥಾಪಿಸಲೆಂದು ನೀಡಿದ್ದರು ಶೇಣಿ ಅಜ್ಜ. ಅವರ ಸಂಕಲ್ಪದ ಈಡೇರಿಕೆಗಾಗಿ ಜನ್ಮ ತಳೆದದ್ದು ’ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ’. ತಡಂಬೈಲು ರಮಾನಾಥ ರಾವ್ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಆ ಸಂಸ್ಥೆ, ಅವರ ನಿಧನಾನಂತರವೂ ಕ್ರಿಯಾಶೀಲವಾಗಿದೆ. ಯಕ್ಷರಂಗಕ್ಕಾಗಿ ಸೇವೆ ಸಲ್ಲಿಸಿ ಬಾಳ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ’ಶೇಣಿ ಪ್ರಶಸ್ತಿ’ಯನ್ನು ಗೌರವದ ಸಂಮಾನ-ನಿಧಿಯೊಂದಿಗೆ ನೀಡುವ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಜತೆಗೆ ಶೇಣಿಯವರ ಸುವರ್ಣಯುಗದ ಧ್ವನಿಸುರುಳಿಗಳನ್ನು ಅವರ ಅಭಿಮಾನಿಗಳಿಂದ ಅರಸಿ ಸಂಗ್ರಹಿಸಿ ಸಂಸ್ಕರಿಸಿ ಶೇಖರಿಸುವ ಕೆಲಸವನ್ನೂ ಮಾಡುತ್ತಿದೆ. ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಗೌರವಾಧ್ಯಕ್ಷರಾಗಿರುವ, ಹರಿಕೃಷ್ಣ ಪುನರೂರು ಅಧ್ಯಕ್ಷತೆಯ ವಿಶ್ವಸ್ತ ಮಂಡಳಿಯು, ಈ ಬಾರಿ ಚೊಕ್ಕಾಡಿಯ ಶ್ರೀರಾಮ ಸೇವಾ ಸಮಿತಿ ಸಹಯೋಗದಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಶೇಣಿ ’ಗೋಪಾಲಕೃಷ್ಣ ಭಟ್’ ಹೆಸರಿನ ಪ್ರಶಸ್ತಿಯು ಹಾಸ್ಯಗಾರ ಕೊಡಕ್ಕಲ್ಲು ’ಗೋಪಾಲಕೃಷ್ಣ ಭಟ್ಟ’ರಿಗೆ ಸಲ್ಲುತ್ತಿದೆ.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP