December 26, 2008

ಹೆಂಗಿದ್ದ ಹೆಂಗಾದ ಗೊತ್ತಾ....?

ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ, ನೀಲಿಮಳೆಯಲ್ಲೂ ನೆನೆಯಬಲ್ಲ. ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ. ರಂಗದೊಂದಿಷ್ಟು ದೂರವಿದ್ದರೂ ಎಲ್ಲರ ನೆನಪಿನಲ್ಲಿ ಉಳಿಯಬಲ್ಲ. ಅಂತಹ ಇಂದ್ರ ಸುಕುಮಾರನಿಗೆ ಈ ಭಾನುವಾರದ ಬೆಳಗ್ಗೆ (ಡಿ.೨೮) ಬೆಂಗಳೂರಿನಲ್ಲೊಂದು ಪುಸ್ತಕ ಮಜ್ಜನ. ಕಾರ್ಯಕ್ರಮದ ಸ್ವೀಟು 'ಒಂದು ಜಿಲೇಬಿ' ! ನಮ್ಮೆಲ್ಲರ ಕೈಯಳತೆಯ ದೂರದಲ್ಲಿಯೇ ಸಿಗುವ ಆತನಿಗೆ ಈ ಫೋಟೊ; 'ಚಂಪಕಾವತಿ' ಪ್ರೀತಿಯಿಂದ ಕಾದಿಟ್ಟ ಕಾಣಿಕೆ.  ಕೃಪೆ: ಪ್ರಜಾವಾಣಿ ದೀಪಾವಳಿ ವಿಶೇಷಾಂಕ -೧೯೮೨

Read more...

December 12, 2008

ಮಿಲಿಯಾಧೀಶನ ಸಂತೋಷ ಯಾವುದರಲ್ಲಿದೆ ಗೊತ್ತಾ?

ಸಿಂಗಾಪುರದ ಆಡಮ್ ಖೂ ೨೬ ವರ್ಷಕ್ಕೇ ಮಿಲಿಯಾಧೀಶನಾದವ . ಬೆಸ್ಟ್ ಸೆಲ್ಲರ್ ಎನಿಸಿದ ಏಳು ಪುಸ್ತಕಗಳ ಲೇಖಕ. ಶಿಕ್ಷಣ-ತರಬೇತಿ-ಕಾರ್ಯಕ್ರಮ ಆಯೋಜನೆ-ಜಾಹೀರಾತು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಈತ, ವರ್ಷಕ್ಕೆ ೩೦ ಮಿಲಿಯನ್ ಡಾಲರ್ ವಹಿವಾಟಿನ 'ಆಡಮ್ ಖೂ ಲರ್ನಿಂಗ್ ಟೆಕ್ನಾಲಜೀಸ್ ಗ್ರೂಪ್ ಪ್ರೈವೇಟ್ ಲಿಮಿಟೆಡ್'ನ ಅಧ್ಯಕ್ಷ . ಹಣದ ಮೌಲ್ಯದ ಬಗೆಗಿನ ಆತನ ಬರೆಹವನ್ನು, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಖುಶಿಯಿಂದ ಅಂಟಿಸಿಕೊಂಡಿದ್ದರು. ಅದು ಈಗ ಕನ್ನಡದಲ್ಲಿ ಇಲ್ಲಿದೆ.

ಇತ್ತೀಚೆಗೆ ನಾನು, ಕೌಲಾಲಂಪುರಕ್ಕೆ ಹೋಗುವ ವಿಮಾನದಲ್ಲಿದ್ದಾಗ ಹತ್ತಿರ ಬಂದ ಒಬ್ಬ ಕಣ್‌ಕಣ್ ಬಿಟ್ಟು ಕೇಳಿದ - 'ನಿನ್ನಂಥ ಮಿಲಿಯಾಧೀಶ ಎಕಾನಮಿ ಕ್ಲಾಸ್*ನಲ್ಲಿ ಹೋಗೋದಾ?'(*ವಿಮಾನದಲ್ಲಿ ಕಡಿಮೆ ದರದ ವಿಭಾಗ) ತಕ್ಷಣ ಉತ್ತರಿಸಿದೆ- 'ಹಾಗಾಗಿಯೇ ನಾನೊಬ್ಬ ಮಿಲಿಯಾಧೀಶ !' ತುಂಬಾ ಜನ ಹೇಗೆ ಬ್ರೈನ್‌ವಾಶ್ ಮಾಡಿಸಿಕೊಂಡಿದ್ದಾರೆಂದರೆ, ಮಿಲಿಯಾಧೀಶರು ಬ್ರಾಂಡೆಡ್ ವಸ್ತುಗಳನ್ನೇ ಉಪಯೋಗಿಸಬೇಕು, ವಿಮಾನದಲ್ಲಿ ಪ್ರಥಮ ದರ್ಜೆಯಲ್ಲೇ ಪ್ರಯಾಣಿಸಬೇಕು ಅಂತೆಲ್ಲ. ಆದರೆ ಬಹಳಷ್ಟು ಜನ ಮಿಲಿಯಾಧೀಶರಾಗುವುದಿಲ್ಲ ಯಾಕೆಂದರೆ, ಹೆಚ್ಚು ಸಂಪಾದನೆಯಿದ್ದಾಗ ಹೆಚ್ಚು ಖರ್ಚು ಮಾಡುವುದೂ ಸಹಜ ಅಂತ ಅವರು ಭಾವಿಸುತ್ತಾರೆ ! ಅದು ಅವರನ್ನು ಮತ್ತೆ ಮೂಲೆಗೆ ತಳ್ಳುತ್ತದೆ.

ನಾನು ವೈಇಒ ಸಂಘಟನೆಗೆ ಸೇರಿಕೊಂಡಾಗ ( ೪೦ ವರ್ಷದ ಒಳಗಿದ್ದು , ಸ್ವಂತ ಉದ್ಯಮದಲ್ಲಿ ವರ್ಷಕ್ಕೆ ೧ ಮಿಲಿಯನ್ ಡಾಲರ್ ಸಂಪಾದಿಸುವವರ ಸಂಘಟನೆ), ಸ್ವಂತ ಬಲದಿಂದ ಬೆಳೆದವರೆಲ್ಲ ನನ್ನಂತೆಯೇ ಯೋಚಿಸುತ್ತಾರೆಂದು ಗೊತ್ತಾಯಿತು. ಅವರಲ್ಲಿ ವರ್ಷಕ್ಕೆ ನಿವ್ವಳ ೫ ಮಿಲಿಯನ್ ಡಾಲರ್ ಸಂಪಾದಿಸುವ ಹಲವರೂ, ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು, ಮರ್ಸಿಡಸ್, ಬಿಎಂಡಬ್ಲ್ಯು ಕಾರುಗಲ ಬದಲು ಟೊಯೊಟಾದಂತಹ ಸಾಮಾನ್ಯ ಕಾರುಗಳನ್ನು ಬಳಸುತ್ತಿದ್ದರು. ನಾನು ಗಮನಿಸಿದ್ದೇನೆಂದರೆ, ತಮ್ಮ ಸಂಪತ್ತಿಗಾಗಿ ತಾವೇ ಕೆಲಸ ಮಾಡದ ಜನ ಮಾತ್ರ ನಾಳೆಯೇ ಇಲ್ಲವೆಂಬಂತೆ ವೆಚ್ಚ ಮಾಡುತ್ತಿದ್ದರು. ಸ್ವಲ್ಪಮಟ್ಟಿಗೆ, ಸೊನ್ನೆಯಿಂದಲೇ ನೀವು ಎಲ್ಲವನ್ನೂ ಕಟ್ಟುವ ಅಗತ್ಯವಿಲ್ಲದಿದ್ದಾಗ, ಹಣದ ಮೌಲ್ಯ ನಿಮಗೆ ಅರ್ಥವಾಗುವುದಿಲ್ಲ. ಕುಟುಂಬದ ಸಂಪತ್ತು ಮೂರನೇ ತಲೆಮಾರಿಜವರೆಗೆ ಯಾಕೆ ಉಳಿಯುತ್ತಿಲ್ಲವೆಂಬುದಕ್ಕೆ ಇದೂ ಒಂದು ಕಾರಣ. ಥ್ಯಾಂಕ್ಯು ದೇವರೇ...ನನ್ನ ಶ್ರೀಮಂತ ಅಪ್ಪ, ಈ ಅಪಾಯಕಾರಿ ಸಾಧ್ಯತೆಯನ್ನು ಮುಂದಾಲೋಚಿಸಿಯೇ, ನನ್ನ ವ್ಯಾಪಾರಕ್ಕೆ ಒಂದು ಸೆಂಟ್ ಕೊಡುವುದಕ್ಕೂ ನಿರಾಕರಿಸಿದ.

ಸತ್ಯವಾದ್ದೆಂದರೆ, ಸ್ವಶಕ್ತಿಯಿಂದ ಬೆಳೆದ ಬಹುಪಾಲು ಮಿಲಿಯಾಧೀಶರು ಮಿತವ್ಯಯಿಗಳು. ಹಾಗಾಗಿ ಸಂಪತ್ತು ಸಂಗ್ರಹಿಸುವುದಕ್ಕೆ , ವೇಗವಾಗಿ ಅದನ್ನು ದ್ವಿಗುಣಗೊಳಿಸುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ. ಕಳೆದ ೭ ವರ್ಷಗಳಲ್ಲಿ, ಸಂಪಾದನೆಯ ಶೇ.೮೦ನ್ನು ನಾನು ಉಳಿಸಿದ್ದೇನೆ ! ಈಗ ಶೇ.೬೦ರಷ್ಟು. ಅಂದರೆ ಈಗ ಮನೆಯಲ್ಲಿ ಹೆಂಡತಿ, ಮಕ್ಕಳು, ನೆಂಟರು ಇದ್ದಾರೆ. ಆದರೆ ತಮ್ಮ ಸಂಪಾದನೆಯ ಶೇ.೧೦ಕ್ಕಿಂತ ಹೆಚ್ಚನ್ನು ಉಳಿಸುವವರೇ ಬಹಳ ಕಡಿಮೆ ಜನ. ನಾನು ಫಸ್ಟ್‌ಕ್ಲಾಸ್ ಟಿಕೆಟ್‌ನ್ನು , ೩೦೦ ಡಾಲರ್‌ಗಳ ಅಂಗಿಯನ್ನು ತಿರಸ್ಕರಿಸುವುದು ಯಾಕೆಂದರೆ , ಅದು ಹಣ ವ್ಯರ್ಥಗೊಳಿಸುವ ದಾರಿಯೆಂದು ತಿಳಿದಿರುವುದರಿಂದ. ಆದರೆ ಜೂಲಿಯಾ ಗೇಬ್ರಿಯಲ್‌ನಲ್ಲಿನ (ಶಿಕ್ಷಣ ಮತ್ತು ಸಂವಹನದ ಅಂಶಗಳನ್ನು ಕಲಿಸುವ ಪ್ರಸಿದ್ಧ ಸಂಸ್ಥೆ) ಭಾಷಣಕ್ಕಾಗಿ ಮತ್ತು ನಾಟಕಕ್ಕಾಗಿ ಎರಡು ವರ್ಷದ ಮಗಳನ್ನು ಕಳಿಸಲು ೧,೩೦೦ ಡಾಲರ್ ವ್ಯಯಿಸಲು ನಾನು ಎರಡು ಬಾರಿ ಯೋಚಿಸುವುದೇ ಇಲ್ಲ. ಕೆಲವರು ಕೇಳುತ್ತಾರೆ - 'ನೀನು ಎಂಜಾಯ್ ಮಾಡುವುದಿಲ್ಲ ಅಂತಾದರೆ ಅಷ್ಟೊಂದು ಹಣ ಮಾಡಿ ಏನು ಪ್ರಯೋಜನ?' ನಿಜ ಸಂಗತಿಯೆಂದರೆ, ಆಭರಣ-ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳೋದರಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವುದರಲ್ಲಿ ನನಗೆ ಸಂತೋಷ ಸಿಗುವುದಿಲ್ಲ. ಏನನ್ನಾದರೂ ಖರೀದಿಸಿದರೆ ಆ ಸಂತೋಷ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಮರುಕ್ಷಣ ಬೇಜಾರಾಗುತ್ತದೆ ಮತ್ತು ಸಂತೋಷಗೊಳಿಸುವ ಇನ್ನೊಂದನ್ನು ಖರೀದಿಸೋಣ ಅನ್ನಿಸುತ್ತದೆ !

ಇದರ ಹೊರತಾಗಿ, ನನ್ನನ್ನು ನಿಜವಾಗಿ ಸಂತೋಷಗೊಳಿಸುವುದೆಂದರೆ, ಮಕ್ಕಳು ನಗುವುದು ಮತ್ತು ಬೇಗನೆ ಕಲಿಯುವುದು ; ನನ್ನ ತರಬೇತಿದಾರರು ಪ್ರತಿವರ್ಷ ಹೆಚ್ಚೆಚ್ಚು ದೇಶಗಳಲ್ಲಿ ಹೆಚ್ಚೆಚ್ಚು ಜನರನ್ನು ತಲುಪುವುದು ; ನನ್ನ ಪುಸ್ತಕಗಳು ಹೇಗಿವೆ, ನನ್ನ ಸೆಮಿನಾರ್‌ಗಳು ಹೇಗೆ ಪರಿಣಾಮಕಾರಿಯಾಗಿ ಜನರ ಬದುಕಿಗೆ ಹೇಗೆ ಸ್ಫೂರ್ತಿ ಕೊಟ್ಟಿವೆ ಎಂದು ಬರುವ ಎಲ್ಲ ಇ-ಮೇಲ್‌ಗಳನ್ನು ಓದುವುದು -ನನಗೆ ಪರಮಾನಂದ. ಇಂಥಹವು, ಯಾವುದೋ ರೋಲೆಕ್ಸ್ ವಾಚ್ ನೀಡುವ ಸಂತೋಷಕ್ಕಿಂತ ಎಷ್ಟೋ ಹೆಚ್ಚು ಸಮಯ ಇವು ನನ್ನನ್ನು ಸಂತೋಷವಾಗಿಡುತ್ತವೆ . ಒಟ್ಟಾರೆ ನಾನು ಹೇಳುವುದು, ನಮಗೆ ಸಂತೋಷವಾಗಬೇಕಾದ್ದು ನಮ್ಮ ಬದುಕಿನ ಕೆಲಸಗಳನ್ನೇ ಮಾಡುವುದರಿಂದ. (ಪಾಠ ಮಾಡುವುದು, ಮನೆ ಕಟ್ಟುವುದು, ವ್ಯಾಪಾರ, ವಿನ್ಯಾಸ, ಸ್ಪರ್ಧೆಗಳಲ್ಲಿ ಗೆಲ್ಲುವುದು...) ಹಣ ಕೇವಲ ಉಪ ಉತ್ಪನ್ನ ಅಷ್ಟೆ. ನೀವು ಮಾಡುತ್ತಿರುವ ಕೆಲಸವನ್ನೇ ಇಷ್ಟಪಡದೆ, ಅದರಿಂದ ಬರುವ ಹಣದಿಂದ ಕೊಳ್ಳುವ ವಸ್ತುಗಳು ನೀಡುವ ಸಂತೋಷಕ್ಕೆ ಆಸೆಪಟ್ಟಿದ್ದರೆ .... ನೀವು ಅರ್ಥವಿಲ್ಲದ ಜೀವನ ಸಾಗಿಸುತ್ತಿದ್ದೀರೆಂದೇ ನಾನು ಭಾವಿಸುತ್ತೇನೆ.'

Read more...

December 07, 2008

ಬಟವಾಡೆಯಾಗದ ಪದ್ಯಗಳು

ಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ, ತಿಪ್ಪೇರುದ್ರಸ್ವಾಮಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿರುವ ಲಕ್ಕೂರು ಆನಂದರ ಮೂರನೇ ಕವನ ಸಂಕಲನ 'ಬಟವಾಡೆಯಾಗದ ರಸೀತಿ' ಮೊನ್ನೆ ಮೊನ್ನೆ ಬಿಡುಗಡೆಯಾಯಿತು. ಓದಬೇಕೆಂದು ಕೈಗೆತ್ತಿಕೊಂಡರೆ ಗಂಟಿಕ್ಕಿಕೊಂಡಿದೆ. ಒಂದೊಂದೆ ಎಳೆ ಹಿಡಿದು ಎಳೆಯುತ್ತಿದ್ದೇನೆ. ನಿಮಗೂ ಬೇಜಾರಾದರೆ ಕ್ಷಮೆಯಿರಲಿ.


'ದಲಿತ-ಬಂಡಾಯ ಕಾವ್ಯ ಮಾರ್ಗದ ಮೂರನೆಯ ತಲೆಮಾರಿಗೆ ಲಕ್ಕೂರು ಆನಂದ ಸೇರಿದವರು. ತಾಂತ್ರಿಕವಾಗಿ ಇವತ್ತಿನ ಕಾವ್ಯ ಮಾರ್ಗವನ್ನು ದಲಿತ-ಬಂಡಾಯವೆಂದು ಕರೆಯುತ್ತಿದ್ದಾರಾದರೂ ಸೂಕ್ಷ್ಮವಾಗಿ ಗಮನಿಸಿದರೆ ಮೂರೂ ತಲೆಮಾರುಗಳು ಬೇರೆ ಬೇರೆಯಾದ ಸ್ತರದಲ್ಲಿ ಅಭಿವ್ಯಕ್ತಿಯನ್ನು ರೂಪಿಸಿಕೊಂಡಿವೆ. ಮೊದಲನೆಯದಾಗಿ `ಶೂದ್ರ' ಎನ್ನಿಸಿಕೊಳ್ಳುವ ಸಕಲೆಂಟು ಜಾತಿಗಳ ಅನುಭವ, ಆಡುಮಾತು ಕಾವ್ಯದಲ್ಲಿ ಬಳಕೆಯಾಗಿರುವುದು ಮಾರ್ಗದ ಹೆಗ್ಗಳಿಕೆ. ಎರಡನೆಯದು ಬರುಬರುತ್ತಾ ಕೆಳವರ್ಗದ ಜಾತಿಭಾಷೆಗಳಿಗೆ ಸಾಣೆ ಹಿಡಿದು ಅಭಿವ್ಯಕ್ತಿ ಯೋಗ್ಯವಾಗಿ ಮಾಡಿದ ಅಗ್ಗಳಿಕೆ. `ಸತ್ಯ ಮತ್ತು ಸಂತೋಷಗಳ ಸಂಯೋಗವನ್ನುಂಟುಮಾಡುವ ಕಲೆಯೆ ಕಾವ್ಯ' ಎಂದು ಸ್ಯಾಮುಯಲ್ ಜಾನ್ಸನ್ ಹೇಳುತ್ತಾನೆ. ಭಾರತದ ಕಾವ್ಯ ಸಂದರ್ಭಕ್ಕೆ ಹೋಲಿಸಿಕೊಂಡರೆ ಅನತಿ ದೂರದಲ್ಲಿ ಅಭಯಾಂಗನೆಯಾಗಿ ಗೋಚರಿಸುತ್ತಿದ್ದ ಸತ್ಯ ಈಗ ಸನಿಹವೇ ಮೋಹಿನಿಯಾಗಿ ನರ್ತಿಸುತ್ತಿದ್ದಾಳೆ. ಕೆಲವರಿಗಷ್ಟೇ ದೊರಕುತ್ತಿದ್ದ ಸಂತೋಷ ಈಗ ಎಲ್ಲರ ಪಾಲಾಗಿದೆ.' ಮೂಡ್ನಾಕೂಡು ಚಿನ್ನಸ್ವಾಮಿಯವರ ಮುನ್ನುಡಿಯಲ್ಲಿರುವ ಇಂತಹ ಮಾತುಗಳನ್ನು ಓದಿಕೊಂಡು ಪದ್ಯಗಳ ಕಡೆ ಹೋದರೆ, ಓದುಗನಿಗೆ ಉಸಿರಾಡುವುದಕ್ಕೂ ಅವಕಾಶ ಕೊಡದಂತೆ ಶಬ್ದಾಡಂಬರದಲ್ಲಿ ಪದ್ಯಗಳು ಮೈಮರೆತಿರುವ ಪರಿ ನೋಡಿದರೆ ದಿಗಿಲಾಗುತ್ತದೆ.

ಉದಾಹರಣೆಗೆ 'ಉರಿವ ಸೆಳಕಿನ ದೀಪದುರಿತದ ಬೆಳಕ ಕಾವೆ 'ಎಂಬ ಸಾಲನ್ನು ಎತ್ತಿಕೊಂಡು ನೋಡಿ. ಉರಿ, ಸೆಳಕು, ದೀಪದ ಉರಿ, ಬೆಳಕು ಇಷ್ಟೂ ಒಟ್ಟಾಗಿ ಏನನ್ನು ಹೇಳುತ್ತಿವೆ? ದುರಿತ ಅನ್ನುವುದಕ್ಕೆ ಕಷ್ಟಕೋಟಲೆ ಅನ್ನುವ ಅರ್ಥ ಮಾಡಿಕೊಂಡರೂ, ಊಹೂಂ. ಇನ್ನು -ಮೌನ, ಏಕಾಂತ, ಬಯಲು, ಜೀವ, ಬೆರಗು, ಉಸಿರು- ಈ ಪದಗಳನ್ನು ಯಾವ ಪರಿ ಬಳಸಲಾಗಿದೆ ಅನ್ನುವುದಕ್ಕೆ 'ಏಕಾಂತ-ಮೌನ'ಗಳ ಹಲವು ಸಾಲುಗಳನ್ನು ಕತ್ತರಿಸಿ ಕೊಡುತ್ತಿದ್ದೇನೆ. ಇನ್ನೂ ಕೆಲವು ಉಳಿದುಕೊಂಡಿವೆ, ಪತ್ತೆಮಾಡಿ !

ಏಕಾಂತ - ತಾವ ತಡಿಕೆಯ ಏಕಾಂತದ ದಾರಿ ಕೊನೆಯಲ್ಲೊಂದಷ್ಟು / ತೆವಳಲೆತ್ನಿಸಿ ಉರುಳಿದ ಏಕಾಂತ ಶಬ್ದವೆ / ಏಕಾಂತ ಲೋಕಾಂತದ ಬಂಡೆ ಸಿಡಿದಂತೆ / ಕ್ಷಣಿಕವೆಂದರಿತರು ಏಕಾಂತದ ಸೆಳೆಮಿಂಚು / ನನ್ನ ನಿನ್ನ ನಡುವಿನ ಏಕಾಂತದ ಒಳಗುರಿಯುವ ದೀಪದ / ತಾವ ತಡಿಕೆಯ ಏಕಾಂತದ ಉಸಿರೆ /ಏಕಾಂತದ ಮೊಲೆ ಕೊನೆಯ ಹಸಿ ಹಾಲ ಕುಡಿದು /ದೀಪ ಸಾಲಿನ ನಡುವೆ ಏಕಾಂತ ಮರೆತವನು/ ಏಕಾಂಗಿತನ ಬೋರಲಾಗಿ ಬಿದ್ದಿದ್ದರೆ.

ಮೌನ - ಉರುಳಿದ ಏಕಾಂತ ಶಬ್ದಗಳಡಿಯಲ್ಲಿ ತೆವಳುವ ಮೌನವೆ / ಅವಳ ತಣ್ಣನೆಯ ಕೋರಿಕೆಯ ಮೌನ ಹಲುಬುತ್ತದೆ / ಕೊಲ್ಲುವ ಮೌನಗಳ ಹಿಂದೆ ಕಾಡುವ ಶಬ್ದಗಳು / ಕಿಡಕಿಯಂಚಲ್ಲಿ ಕಾದು ಕುಳಿತ ಮೌನ / ಮೌನ ಕುಟೀರದಲ್ಲಿ / ಇರುಳಾದಂತೆ ಮೌನಗಳದೆ ತೆವಲು / ಸದ್ದು -ಸದ್ದಿನ ಆಚೆ ಬರೀ ಮೌನ ಸಾಲು / ನೀರವತೆ ಮೌನದ ಕಣ್ಣುಗಳಿಂದ ಹುಡುಗಿಯೊಬ್ಬಳು / ಬಿಚ್ಚಿದ ಮಾತಿಗೆ ಬಚ್ಚಿಟ್ಟುಕೊಂಡಿವೆ ಮೌನಗಳು / ಸುಡುವ ಮೌನದ ಸದ್ದು ಎದೆಯ ಒಳಗೆ / ಕೊಲ್ಲುವ ಮೌನಗಳ ಹಿಂದೆ ಕಾಡುವ ಕ್ಷಣಗಳು / ನಮ್ಮಿಬ್ಬರ ನಡುವೆ ಮೌನದ ಬೀಜವನ್ನಿಟ್ಟು / ಜೀವಗರುವಿನ ಹಾಡು ಮೌನಗಂಧಿಯ ಹೊತ್ತಲ್ಲಿ / ನೋಡುತ್ತೇನೆ ನಿನ್ನೆಲ್ಲ ಮೌನವನ್ನು ಮೆತ್ತಿಕೊಂಡು / ಸೋತ ಮಾತಿನಡಿಯ ಮೌನದಂತೆ / ದಿನದ ಚಣಗಳಿಗೆಲ್ಲ ಏಕಾಂತದ ಮೌನ ಸುತ್ತು / ಮೌನ ಬಟ್ಟಲಿನ ಎದೆಯಲ್ಲಿ ಹಾಗೆ ಉಳಿದುಹೋಗಿದೆ / ಮೌನಗಳ ಜಾಗರಣೆ / ಗಾಢ ಮೌನವೊಂದು ಸುಮ್ಮನೆ ನರಳುತ್ತಿದೆ . ಇನ್ನೂ ಕೆಲವು ಉಸಿರಿನ ಸ್ಯಾಂಪಲ್ಗಳು!- ಉಸಿರು ಕುಡಿಯೊಡೆದಿಲ್ಲ /ಭವದುಸಿರು ಅರಳಿದಂತೆ/ಉಸಿರ ಹೊಕ್ಕುಳ ನಾಳದಲಿ/ಏಕಾಂತದ ಉಸಿರೆ.

ಇಲ್ಲಿರುವ ೩೯ ಕವನಗಳಲ್ಲಿ ಮೌನ-ಏಕಾಂತಗಳು ಇಷ್ಟು ಬಾರಿ ಕಾಡುತ್ತವೆಂದರೆ ಇದು 'ಚಿಂತಿಸಬೇಕಾದ ವಿಷಯ'. ಆದರೆ ಮುನ್ನುಡಿಕಾರರು ನಂತರ ಸ್ವಲ್ಪ ಎಚ್ಚರಗೊಂಡಿದ್ದನ್ನೂ ಹೇಳಬೇಕು- 'ಕಾವ್ಯದ ಭಾಷೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ರೂಪಕಗಳ ನಿರ್ಮಾಣದಲ್ಲಿ ಅವು ಸಂಕೀರ್ಣಗೊಳ್ಳುತ್ತ ಹೋಗುತ್ತವೆ. ಆದರೆ ಅವುಗಳು ಸ್ಪಷ್ಟತೆಯನ್ನು ಪಡೆದುಕೊಳ್ಳದಿದ್ದರೆ ಭಾಷೆಯೂ ಸೋಲುತ್ತದೆ, ಕವಿಯೂ ಸೋಲುತ್ತಾನೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕವಿ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ' ಎನ್ನುತ್ತಾರೆ. ಕವಿ ಗೆದ್ದು ಓದುಗ ಸೋಲುವುದು ಅಂದರೆ ಹೀಗೆಯೇ ಇರಬಹುದೆ?! ಅವರು ಮುಂದುವರಿಸಿ- 'ಭಾವಗಂಧದ ತೇರ ಮುಡಿಗೆ ಭಗದ ಸಾಲಿನ ಬೆರಗು/ಹೊಳೆಸಾಲ ಮೇಲಿನ ಚಿತ್ತಾರ ಸಾಲಿನ ನೆರಳಿನೆದೆ ಬಗೆದು/ಉಸಿರ ಮಾಲೆಯ ಬಿಗಿದು ಕಟ್ಟುತ್ತ ' ಎಂಬಂಥ ಸಾಲುಗಳು ಇನ್ನಷ್ಟು ಸ್ಪಷ್ಟತೆ ಬಯಸುತ್ತವೆ ' ಅಂದಿದ್ದಾರೆ. ಥ್ಯಾಂಕ್ಯು . ಹಾಗಂತ ಎಲ್ಲಾ ಪದ್ಯಗಳೂ ಕೆಟ್ಟು ಹೋಗಿವೆ ಅಂತಲ್ಲ. ಆದರೆ ಇರುವ ಕೆಲವು ಒಳ್ಳೆಯ ಪದ್ಯಗಳ ಪ್ರವೇಶಕ್ಕೂ ಅವಕಾಶವೇ ಆಗದಂತೆ ಪದಪುಂಜಗಳು ಕೋಟೆ ಕಟ್ಟಿ ಕುಳಿತಿವೆ. ತಿರುತಿರುಗಿಸಿದರೂ ತೆಗೆಯಲಾಗದ ತುಕ್ಕು ಹಿಡಿದ ಬೀಗದಂತೆ, ಕಗ್ಗಂಟಾಗಿರುವ ನೂಲಿನಂತಿರುವ ಕವಿತೆಗಳಿವು. ಓದುಗರಿಗೆ ಅರ್ಥವಾಗುವಂತೆಯೋ, ಅರ್ಥವಾಗದಿದ್ದರೂ ಅನುಭವಿಸಿ ಸುಖಿಸುವಂತೆಯೋ ಪದ್ಯಗಳಿದ್ದರೆ, ನನ್ನಂಥವರಿಗೆ ತುಂಬ ಉಪಕಾರವಾಗುತ್ತದೆ.

ಬೆನ್ನುಡಿಯಲ್ಲಿ ಜೋಗಿಯವರು ಛಲೋ ಬರೆದಿದ್ದನ್ನೂ ನೀವು ಪೂರ್ತಿಯಾಗಿ ಓದಬೇಕು -'ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು' ಎಂದು ನಂಬಿರುವ ಲಕ್ಕೂರು ಆನಂದ ಬಯಲ ಕವಿ. ತನ್ನಿರವಿನ ಕಟ್ಟೆಚ್ಚರ ಮತ್ತು ಭವಿಷ್ಯದ ಕುರಿತು ತುಂಬು ಭರವಸೆ ಇಟ್ಟುಕೊಂಡು ಕಾವ್ಯ ಕಟ್ಟುವ ಆನಂದ ನಿರಾಶಾವಾದಿಯಲ್ಲ. ಪ್ರತಿ ಕವಿತೆಯನ್ನು ಅದೇ ಮೊದಲ ಕವಿತೆ ಎಂಬ ಹುರುಪು ಹಾಗೂ ಅದೇ ಕೊನೆಯ ಕವಿತೆ ಎಂಬ ಶ್ರದ್ಧೆಯಿಂದ ನೇಯಬಲ್ಲವರು. ಎಲ್ಲೂ ವಾಚ್ಯಕ್ಕೆ ಜಾರಿಕೊಳ್ಳದೇ ನಿಬಿಡ ಅನುಭವಗಳನ್ನು ಸರಾಗವಾಗಿ ರೂಪಕವಾಗಿಸುವ ಕಾವ್ಯ ಮನೋಧರ್ಮ ಅವರಿಗೆ ದಕ್ಕಿದೆ. ನಿಗೂಢವನ್ನು ಬಗೆಯುವ, ಬೆರಗನ್ನು ಉಳಿಸಿಕೊಂಡೇ ವಾಸ್ತವಕ್ಕೆ ಎದುರಾಗುವ, ಕಂಡ ಕನಸಿಗೆಲ್ಲ ಬಣ್ಣ ಇರುವುದಿಲ್ಲ ಎನ್ನುವ ಪ್ರಜ್ಞಾಪೂರ್ವಕ ನಿಲುವಿನಿಂದ ಹುಟ್ಟಿದ ಲಕ್ಕೂರು ಆನಂದರ ಕವಿತೆಗಳಿಗೆ ತೋರುಗಾಣಿಕೆಯಿಲ್ಲ. ಅವು ಆಗಷ್ಟೇ ಅರಳಿದ ಕಣಗಿಲೆ ಹೂವಿನ ಹಾಗೆ ನಳನಳಿಸುತ್ತಾ, ಬದುಕಿನ ನಿರರ್ಥಕತೆಯನ್ನೂ ಒಂದೇ ಏಟಿಗೆ ಕಟ್ಟಿಕೊಡುತ್ತವೆ. 'ಕಣ್ಣ ಹರಿಸಿದಂತೆಲ್ಲ ಬೆರಗ ಬಯಲು, ಮೇಲೆ ನಭದಲ್ಲಿ ನಗುವ ನವಿಲು' ಎಂಬ ಅವರದೇ ಸಾಲು ಅವರ ಕಾವ್ಯದ ಸ್ವರೂಪಕ್ಕೆ ಹಿಡಿದ ಹೊಳೆಯುವ ಶ್ರೀಶೂಲವೂ ಹೌದು. -ಜೋಗಿ

ಇದು ಅಸಾಮಾನ್ಯ ಸಂಕಲನ ಅನ್ನುವುದರಲ್ಲಿ ಸಂದೇಹವೇನೂ ಇಲ್ಲ. ಯಾಕೆಂದರೆ ಇಲ್ಲಿ ಸಾಮಾನ್ಯವಾದದ್ದು ಯಾವುದೂ ಇಲ್ಲ. 'ಸಾವ ಹೇರುವ ದಿವ್ಯಮಾನವ ಬ್ರಹ್ಮಕಮಲಗಳು', 'ಯಾನ ಮರೆತು ನೊಗವರಿದ ಬಂಡಿಯ ಚಕ್ರಪಾಡು', ಋಣದ ಪಲ್ಲಂಗ, ಕುಂಡಲಿಯ ಕೊನರು, ನೆಲದ ಬಯಲು, ಮುಖದ ಮೈಮೇಲೆ ಕುಣಿಯುತ್ತಿರುವ ಕಡು ಕತ್ತಲು, ಜೀವಗರುವಿನ ಹಾಡು, ಕಳವಳದ ಬೊಗಸೆ, ಕಾಲದೊಗಲಿನ ತುಂಬ ಬರೀ ಬಿಕ್ಕಳಿಕೆಗಳ ಗುರುತು, ತುಂಬಿದಲೆಗಳು, ಉಸಿರ ಕಣ್ಣು, ಕಾವಿನ ಸೆಳಕು, ಮುಳ್ಳಿನುಂಗುರದ ಕಣ್ಣು, ...ಹೀಗೆ ಅರ್ಥವಿಲ್ಲದ ವಿಚಿತ್ರಪದ ಜೋಡಣೆಯೇ ಕವಿತೆಯೆ? ಇಂತಹ ಪದಪುಂಜಗಳ ಸಾಲುಗಳೇ ಅರ್ಥವಾಗದೆ, ಮನಸ್ಸು ಮುಟ್ಟದೆ ಪದ್ಯ ಏನು ಮಾಡೀತು? ಸಾಕು, ನಮಸ್ಕಾರ .

Read more...

December 03, 2008

ಕೃಷ್ಣನ ಸೈಕಲ್ ಸವಾರಿ

'ಬೆಳ್ಳೇಕೆರೆಯ ಹಳ್ಳಿ ಥೇಟರ್' ಅಂಕ ೮ - ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ

ದೇ ಸಮಯದಲ್ಲಿ ಹಾರ್ಲೆ ಗುಂಪಿನ ಇನ್ನೊಂದು ತೋಟಕ್ಕೆ ಕೇರಳದಿಂದ ಬಂದ ಹುಡುಗರ ಗುಂಪೊಂದು ಕೆಲಸಕ್ಕೆ ಬಂತು. ಅವರಲ್ಲಿ ಕೆಲವರು ವಿದ್ಯಾವಂತರೂ ಇದ್ದರು. ನಾವು ನಾಟಕಗಳನ್ನು ಮಾಡುವುದನ್ನು ನೋಡಿ, 'ನಾವೂ ನಮ್ಮ ಊರಿನಲ್ಲಿ ನಾಟಕ ಆಡುತ್ತಿದ್ದೆವು. ಈಗ ನಿಮ್ಮ ಜೊತೆಯಲ್ಲಿ ನಾವೂ ಆಡುತ್ತೇವೆ." ಎಂದು ನಮ್ಮೊಂದಿಗೆ ಬಂದರು. ಅವರು ಇಲ್ಲಿ ಒಂದೆರಡು ಮಲೆಯಾಳಿ ನಾಟಕಗಳನ್ನು ಆಡಿದರು. ನಾವು ಒಂದೆರಡು ಕಡೆ ಜೊತೆಯಾಗಿ ಎರಡೂ ತಂಡಗಳ ನಾಟಕಗಳನ್ನು ಮಾಡಿದೆವು. ಅವರಲ್ಲಿ ಕೆಲವರು ಒಳ್ಳೆಯ ನಟರಿದ್ದರಲ್ಲದೆ ಪರಿಕರ- ರಂಗಸಜ್ಜಿಕೆ, ವೇಷಭೂಷಣಗಳನ್ನು ಅವರೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಿದ್ದರು. ಅರಶಿನ, ಕುಂಕುಮ, ಸುಣ್ಣ, ಬ್ಯಾಗಡೆ, ಮೈದಾಹಿಟ್ಟು, ಹಳೆಯ ತಗಡಿನ ಚೂರುಗಳು, ಹಳೆಯ ಬಟ್ಟೆ, ಸೀರೆಗಳು, ಬಾಳೆಪಟ್ಟೆ, ಅಡಿಕೆ ಹಾಳೆ, ಬಿದಿರು, ವಾಟೆ, ಹಳೆಟೈರು, ಟ್ಯೂಬು, ಕೊನೆಗೆ ಏನು ಸಿಕ್ಕಿತೋ ಅದು. ಹೀಗೆ ಎಲ್ಲವನ್ನೂ ಉಪಯೋಗಿಸಿ ಅದರಲ್ಲೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದ್ದರು. ಅವರಿಂದ ನಾವು ಅನೇಕ ವಿಷಯಗಳನ್ನು ಕಲಿತೆವು. ಅವರು ನಮ್ಮಿಂದ ಲೈಟಿಂಗ್-ಉಪ್ಪುನೀರಿನ ಡಿಮ್ಮರ್‌ಗಳು, ಪರದೆಗಳ ಉಪಯೋಗ ಇತ್ಯಾದಿಗಳನ್ನು ಕಲಿತುಕೊಂಡರು. ನಾವೆರಡೂ ತಂಡಗಳು ಸೇರಿ ಸಕಲೇಶಪುರದ ಟೌನ್ ಹಾಲ್‌ನಲ್ಲಿ ನಾಟಕ ಮಾಡಿದೆವು. ನಾವು ಆಡಿದ " ನಮ್ಮ ಎಲುಬುಗಳ ಮೇಲೆ' ನಾಟಕ, - ತೋಟ ಕಾರ್ಮಿಕರ ತಂಡವೊಂದು ತಾಲ್ಲೂಕು ಮಟ್ಟದಲ್ಲಿ ಮಾಡಿದ ಪ್ರಥಮ ಪ್ರಯೋಗವಾಗಿತ್ತು.

ನಾವು ಆಡುತ್ತಿದ್ದ 'ನಮ್ಮ ಎಲುಬುಗಳ ಮೇಲೆ ' ನಾಟಕಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ಸಿಕ್ಕಿತು. ಜೊತೆಯಲ್ಲಿ ರೈತ ಚಳುವಳಿಯೂ ಹಳ್ಳಿಹಳ್ಳಿಗಳಿಗೆ ಹಬ್ಬುತ್ತಿದ್ದ ಸಮಯ. ಹಾಗಾಗಿ ಚಳುವಳಿಗೆ ಪೂರಕವಾಗಿ ಅಲ್ಲಲ್ಲಿ ಕೆಲವು ಕಡೆ ಈ ನಾಟಕವನ್ನು ಆಡುತ್ತಿದ್ದೆವು. ಗಾಣದ ಹೊಳೆ, ಹಾನುಬಾಳು- ಹೀಗೇ ಕೆಲವು ಕಡೆ ಇದರ ಪ್ರದರ್ಶನವಾಯಿತು. ಇದರಿಂದ ಅನಿವಾರ್ಯವಾಗಿ ಆಗಾಗ ಪಾತ್ರಧಾರಿಗಳು ಬದಲಾಗುತ್ತಿದ್ದರು.ಒಮ್ಮೆ ನಾಟಕದ ರಿಹರ್ಸಲ್ ನಡೆಯುತ್ತಿದ್ದಾಗ ನನ್ನ ಹತ್ತಿರದ ಸಂಬಂಧಿ ಹುಡುಗನೊಬ್ಬ ರಜೆಯಲ್ಲಿ ನಮ್ಮಲ್ಲಿಗೆ ಬಂದಿದ್ದ. ಅವನಾಗ ೬-೭ನೇ ಕ್ಲಾಸಿನಲ್ಲಿ ಓದುತ್ತಿದ್ದಿರಬೇಕು. ಬೇಗ ನಮ್ಮ ಹುಡುಗರ ಜೊತೆ ಬೆರೆತು ಬಿಟ್ಟ. ಅವನು ಓದುತ್ತಿದ್ದುದು ಸುಳ್ಯ ತಾಲ್ಲೂಕಿನ ಹಳ್ಳಿ ಶಾಲೆಯೊಂದರಲ್ಲಿ. ನಮ್ಮ ಡೈರಿ ಫಾರಂನಲ್ಲಿದ್ದ ಸೈಕಲ್ ನೋಡಿ ಅವನಿಗೆ ಕಲಿಯುವ ಆಸೆಯಾಯ್ತು. ಆದರೆ ನಾವು ಫಾರಂನ ಸೈಕಲ್ಲನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಸಕಲೇಶಪುರಕ್ಕೆ ಹಾಲು ಸಾಗಿಸಲು ನಮಗಿದ್ದಂತಹ ಏಕೈಕ ವಾಹನ ಅದು. ಅದೇನಾದರೂ ಕೆಟ್ಟು ಹೋದರೆ ಆ ಹೊತ್ತಿನ ೪೦-೫೦ ಲೀಟರ್ ಹಾಲು ಸಾಗಿಸಲಾಗದೆ ತೊಂದರೆಯಾಗುತ್ತಿತ್ತು. ಆದ್ದರಿಂದ ಆ ವಿಚಾರದಲ್ಲಿ ನಾನು ಕಟ್ಟುನಿಟ್ಟಾಗಿದ್ದೆ. ಡೈರಿ ಕೆಲಸಗಾರರಲ್ಲದೆ ಬೇರೆ ಯಾರಿಗೂ ಸೈಕಲ್ ಮುಟ್ಟಲು ಬಿಡುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾವೆಲ್ಲ ಮನೆಯಲ್ಲಿ ಊಟಕ್ಕೆ ತಯಾರಾಗುತ್ತಿದ್ದೆವು. ಊಟದ ಸಮಯದಲ್ಲಿ ಈ ಹುಡುಗನ ಪತ್ತೆಯೇ ಇಲ್ಲ. ಸುತ್ತೆಲ್ಲ ವಿಚಾರಿಸಿದೆ. ಕೊನೆಗೆ ತೋಟದ ಕೆಲಸಗಾರನೊಬ್ಬ ಹೇಳಿದ " ನಿಮ್ಮ ನೆಂಟರ ಹುಡುಗ ಸೈಕಲ್ ತೆಗೆದುಕೊಂಡು ಡೈರಿ ಫಾರಂ ಅಂಗಳದಲ್ಲಿ ಸುತ್ತುತ್ತಿದ್ದ." ನನಗೆ ಅಸಾಧ್ಯ ಸಿಟ್ಟು ಬಂತು. ನಾನು ಅವನಿಗೆ " ಸೈಕಲ್ ಹತ್ತುವ ಪ್ರಯತ್ನ ಮಾಡಬೇಡ " ಎಂದು ಎರಡೆರಡು ಸಾರಿ ಹೇಳಿದ್ದೆ. ಆದ್ದರಿಂದ 'ಬರಲಿ ಇವನು ಮನೆಗೆ 'ಎಂದು ಕಾದು ಕುಳಿತೆ. ಒಂದು ಗಂಟೆ ಸಮಯ ಕಳೆದಿರಬಹುದು - ಹುಡುಗ ಮೆಲ್ಲನೆ ಮನೆಗೆ ಬಂದ"ಸೈಕಲ್ ಮುಟ್ಟಿದ್ದೀಯ?' ಜೋರಾಗಿ ಕೇಳಿದೆ. 'ಅದು ....ಅದು' ಎಂದ ಚೆನ್ನಾಗಿ ಬೈದುಬಿಟ್ಟೆ. ಅಮ್ಮ, 'ಹೋಗಲಿ ಬಿಡು- ಏನೋ ಅವನಿಗೆ ಗೊತ್ತಾಗಲಿಲ್ಲ.' ಎಂದಳು. 'ಹೌದು, ಸೈಕಲ್ ಹಾಳಾದರೆ ಇವತ್ತಿನ ಹಾಲಿನ ಗತಿಯೇನು?" ಅಂದೆ. ಹುಡುಗ ಪೆಚ್ಚು ಮೋರೆ ಹಾಕಿಕೊಂಡಿದ್ದ.ಈ ಹುಡುಗ ಪ್ರತಿ ದಿನ ನಮ್ಮ ರಿಹರ್ಸಲ್ ಸಮಯದಲ್ಲಿ ಅಲ್ಲೇ ಬಂದಿರುತ್ತಿದ್ದ. ನಾಟಕ ಪ್ರದರ್ಶನಕ್ಕೆ ಎರಡು ದಿನ ಇರುವಾಗ- ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಒಬ್ಬ ಹುಡುಗಿಗೆ ಆರೋಗ್ಯ ಕೆಟ್ಟಿತು. ಅವಳು ಪಾತ್ರ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಪ್ರತಿ ದಿನ ರಿಹರ್ಸಲ್ ನೋಡುತ್ತಿದ್ದ ಈ ಹುಡುಗನ ಮೇಲೆ ಉಗ್ಗಪ್ಪನ ದೃಷ್ಠಿ ಬಿತ್ತು. ' ಇವನಿಗೆ ಹೇಗೂ ಆ ಪಾತ್ರದ ಮಾತುಗಳು ಬರ್‍ತವೆ. ಆ ಪಾತ್ರ ಇವನೇ ಮಾಡಿದ್ರೇನು" ಎಂದ.ಹುಡುಗ ನಾಟಕದಲ್ಲಿ 'ಹುಡುಗಿ' ಪಾತ್ರ ಮಾಡುವುದೆಂದಾಯಿತು. ಇವನಿಗೆ ಮೂರೋ ನಾಲ್ಕೋ ಡೈಲಾಗುಗಳಿದ್ದವು. ನಂತರ ಚೂರಿಯಿಂದ ತನ್ನನ್ನೇ ಇರಿದುಕೊಂಡು ಸಾಯುವುದು. ಇಷ್ಟೇ. ಇವನು ರಿಹರ್ಸಲ್‌ನಲ್ಲಿ ಆ ಹುಡುಗಿಗಿಂತಲೂ ಚೆನ್ನಾಗಿ ಮಾಡಿದ. ಪ್ರದರ್ಶನದ ದಿನ ಮೇಕಪ್ ಮಾಡುವಾಗ ನಮ್ಮಲ್ಲಿ ಟೋಫನ್ ಇಲ್ಲವೆಂದು ನನ್ನ ತಲೆಗೆ ಹೊಳೆಯಿತು. ಇವನು ತಲೆ ಕೂದಲನ್ನು ನುಣ್ಣಗೆ ಅರ್ಧ ಇಂಚು ಬಿಟ್ಟು ಕತ್ತರಿಸಿಕೊಂಡಿದ್ದ!.ಇವನಿಗೆ ತಲೆಗೆ ಎರಡೆರಡು ಚೌರಿಯನ್ನಿಟ್ಟು ಟೇಪ್ ಅಂಟಿಸಿದೆವು. ಅದು ಜಾರದಂತೆ ಮೇಲೊಂದು ಸ್ಕಾರ್ಪನ್ನು ಸುತ್ತಿದೆವು. ಹಾಗೂ ಹೀಗೂ ಸ್ತ್ರಿವೇಷ ಸಿದ್ಧವಾಯ್ತು. ಅವನ ಪಾತ್ರ ಬಂದಾಗ ಉತ್ಸಾಹದಿಂದಲೇ ಸ್ಟೇಜಿಗೆ ಬಂದ. ಮೊದಲನೇ ಡೈಲಾಗೇ ಒಂದು ಸಿಟ್ಟಿನ ಉದ್ರೇಕಕಾರಿ ವಾಕ್ಯ-ಅದನ್ನು ರಭಸದಿಂದ ಹೇಳಿ ಜೋರಾಗಿ ಕೈಗಳನ್ನು ಬೀಸಿ ತಲೆಯನ್ನು ತಿರುಗಿಸಿದ. ತಲೆಗೆ ಸಿಕ್ಕಿಸಿದ ಚೌರಿ ಟೋಫನ್ ಸರ್ಪಾಸ್ತ್ರದಂತೆ ಸ್ಟೇಜಿನಿಂದ ಹಾರಿ ಹೋಯಿತು. ನಮ್ಮ ದಿಢೀರ್ ನಟ ಬೋಳು ತಲೆಯಲ್ಲಿ ನಿಂತಿದ್ದ! ಜನರೆಲ್ಲ " ಹೋ " ಎಂದು ಕೂಗಿದರು. ಅದೇನು ಹೊಳೆಯಿತೋ ಕೊನೆಯ ಡೈಲಾಗ್ ಹೇಳಿ ಚೂರಿಯಿಂದ ತಿವಿದುಕೊಂಡು ಕೆಳಗೆ ಬಿದ್ದು ತನ್ನ ಪಾತ್ರವನ್ನು ಪರಿಸಮಾಪ್ತಿಗೊಳಿಸಿದ. ಜನ ತುಂಬ ಹೊತ್ತಿನವರೆಗೆ ನಗುತ್ತಲೇ ಇದ್ದರು. ಹೀಗೆ ನಮ್ಮಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಹುಡುಗ ಕೃಷ್ಣಕುಮಾರ್ ನಾರ್ಣಕಜೆ, ಈಗ ರಂಗಾಯಣದಲ್ಲಿ ನಟರಾಗಿದ್ದಾರೆ!.

ರಂಗಾಯಣ ಪ್ರಾರಂಭವಾದ ಶುರುವಿನಲ್ಲಿ ಬಿ.ವಿ. ಕಾರಂತರು ರಂಗಾಯಣದ ನಟರಿಗೆಲ್ಲ ಒಂದೊಂದು ಸೈಕಲ್ ಹೊಂದುವುದನ್ನು ಕಡ್ಡಾಯ ಮಾಡಿದ್ದರು. ನಾನು ಒಮ್ಮೆ ರಂಗಾಯಣಕ್ಕೆ ಹೋದಾಗ ಸೈಕಲ್ ಹಿಡಿದು ಹೊರಟ ಕೃಷ್ಣಕುಮಾರ್‌ನನ್ನು ನೋಡಿ ಇವನು ಹಿಂದೆ ನಮ್ಮ ಡೈರಿಫಾರಂನಲ್ಲಿ ಸೈಕಲ್ ಸವಾರಿಗೆ ಹೊರಟದ್ದು ನೆನಪಾಯಿತು."ಸೈಕಲ್ ಸವಾರಿ ಮಾಡಲು ಹೊರಟು ನೀನು ನನ್ನಿಂದ ಬೈಸಿಕೊಂಡಿದ್ದೆ ಅಲ್ಲವೇ?" ಎಂದು ಕೇಳಿದೆ."ನಾನು ಸೈಕಲ್ ಸವಾರಿ ಮಾಡದೆ ಬೈಸಿಕೊಂಡದ್ದು. ನಾನು ಆವಾಗ ಸೈಕಲ್ ಹತ್ತಲೇ ಇಲ್ಲ. ಆಸೆ ತಡೆಯದ್ರಿಂದ ಸೈಕಲ್ಲನ್ನು ಹಾಗೇ ಅಂಗಳದಲ್ಲಿ ನೂಕಿಕೊಂಡು ಸುತ್ತು ಬರುತ್ತಿದ್ದೆ. ಕೆಳಗೆ ಬಿದ್ದು ಹಾಳಾದೀತೆಂದು ಸೈಕಲ್ ಹತ್ತಲೇ ಇಲ್ಲ." ಬಂತು ವಿವರಣೆ!ಒಂದು ಕ್ಷಣ ಮಾತಿಲ್ಲದವನಾದೆ.ಕೃಷ್ಣ ನಮ್ಮಲ್ಲಿ ಆಟವಾಡುತ್ತಾ, ಬೈಸಿಕೊಳ್ಳುತ್ತಾ ರಂಗಕ್ಕೆ ಬಂದದ್ದು. ಮುಂದೆ ತನ್ನ ಶಾಲೆಯಲ್ಲೂ ತಾನೇ ನಾಟಕ ಬರೆದು ಆಡಿದ್ದು. ಸುಳ್ಯದ ನಾರ್ಣಕಜೆಯಲ್ಲಿ ರಂಗಶಿಬಿರದಲ್ಲಿ ಭಾಗವಹಿಸಿದ್ದು, ನಾಟಕ ಮಾಡಿದ್ದು. ಅದೇ ಶಾಲೆಯಲ್ಲಿ ಉಪಾಧ್ಯಾಯನಾಗಿ ಕೆಲಸಮಾಡಿದ್ದು. ನಂತರ ನೀನಾಸಂನಲ್ಲಿ ಕಲಿತು ನಟ ತಂತ್ರಜ್ಞನಾದದ್ದು, ತಿರುಗಾಟ ಮಾಡಿದ್ದು. ಹೀಗೇ ರಂಗಾಯಣ ತಲುಪಿದ್ದು, ಎಲ್ಲ ಕಣ್ಣ ಮುಂದೆ ಹಾದು ಹೋದವು.

ನಮ್ಮ ನಾಟಕದ ರಿಹರ್ಸಲ್ ಪ್ರಾರಂಭವಾಗುವಾಗ ಸಾಮಾನ್ಯವಾಗಿ ಸಂಜೆ ಏಳು ಗಂಟೆಯಾಗುತ್ತಿತ್ತು. ಆ ಕಾಲದಲ್ಲಿ ಕೆಲಸಗಾರರು ಬೆಳಗ್ಗೆ ಊಟಮಾಡಿ ಕೆಲಸಕ್ಕೆ ಹೋದರೆ ಮಧ್ಯಾಹ್ನ ಊಟ ಮಾಡುತ್ತಿದ್ದುದೇ ಕಡಿಮೆ. ಹಲಸಿನಕಾಯಿ ಬಿಡುವ ಸಮಯವಾದರೆ ತೋಟದಲ್ಲೇ ಹಲಸಿನಕಾಯಿ ತಿಂದಿರುತ್ತಿದ್ದರು. ವರ್ಷದ ಉಳಿದ ಕಾಲವೆಲ್ಲ ಮಧ್ಯಾಹ್ನದ ಊಟ ಇದ್ದರೆ ಇತ್ತು- ಇಲ್ಲದಿದ್ದರೆ ಇಲ್ಲ. ಸಂಜೆ ಕೆಲಸ ಮುಗಿಸಿ ಬಂದು ಬೇಗ ಊಟ ಮಾಡುತ್ತಿದ್ದರು. ರಾತ್ರಿ ಬೇಗ ಮಲಗುತ್ತಿದ್ದರು. ಕೆಲಸಗಾರರ ಮನೆಗಳಲ್ಲಿ ರಾತ್ರಿ ಹತ್ತು ಗಂಟೆಯೆಂದರೆ ನಡುರಾತ್ರಿ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ.ಹಾಗಾಗಿ ನಮ್ಮ ಹುಡುಗರೆಲ್ಲ ಸಂಜೆ ಆರೂವರೆಗೆಲ್ಲ ಊಟ ಮಾಡಿ ಏಳುಗಂಟೆಗೇ ಶಾಲೆಯಲ್ಲಿ ಸೇರುತ್ತಿದ್ದರು. ನಾನು ಡೈರಿ ಫಾರಂ ಉಸ್ತುವಾರಿ ಮಾಡುತ್ತಿದ್ದುರಿಂದ ಮತ್ತು ಅಲ್ಲಿನ ಕೆಲಸಗಾರರಲ್ಲಿ ಹೆಚ್ಚಿನವರು ನಮ್ಮ ತಂಡದಲ್ಲಿದ್ದುದರಿಂದ ಡೈರಿಯಲ್ಲಿ ಹಸುಗಳಿಗೇನಾದರೂ ತೊಂದರೆಯಾದರೆ ನಾವು ಅಲ್ಲಿಗೆ ಹೋಗುತ್ತಿದ್ದೆವು. ನಮ್ಮ ಶಾಲೆಯಿಂದ ಡೈರಿ ಫಾರಂಗೆ ಎರಡು ಫರ್ಲಾಂಗ್ ದೂರವಿತ್ತು. ಅಲ್ಲಿಗೆ ಹೋಗಬೇಕಾದಾಗ ಅಥವಾ ಇನ್ನಾವುದೇ ಅನಿವಾರ್ಯ ಕೆಲಸಗಳಿದ್ದಾಗಲೆಲ್ಲ ನಮ್ಮ ರಿಹರ್ಸಲ್ ರದ್ದಾಗುತ್ತಿತ್ತು. ಅದಲ್ಲದೆ ಸಕಲೇಶಪುರಕ್ಕೆ ಹತ್ತು ಕಿಲೊಮೀಟರ್ ದೂರ ಸೈಕಲ್‌ನಲ್ಲಿ ಹಾಲು ಸಾಗಿಸುತ್ತಿದ್ದ ಚೆನ್ನವೀರ, ಸುಂದರ ಇವರುಗಳು ಕೆಲವು ಬಾರಿ ಹೋಗಿಬರಲು ಮಲೆನಾಡಿನ ಕಡಿದಾದ ಏರುತಗ್ಗಿನ ದಾರಿಯಲ್ಲಿ ಇಪ್ಪತ್ತು ಕಿ.ಮೀ.ಸೈಕಲ್ ತುಳಿದು ಹಾಲು ಕೊಟ್ಟು ಬಂದು ನಾಟಕದಲ್ಲಿ ಪಾತ್ರ ಮಾಡಿದ್ದೂ ಇತ್ತು!ಇವೆಲ್ಲ ಕಾರಣಗಳಿಂದ ನಮ್ಮ ನಾಟಕ ಸಿದ್ಧಗೊಳ್ಳಲು ಕೆಲವೊಮ್ಮೆ ಎರಡು ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಬೇಕಾಗುತ್ತಿತ್ತು. ಆದ್ದರಿಂದ ನಾವು ಮಳೆಗಾಲ ಮುಗಿಯುತ್ತಾ ಬಂದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಕದ ಸಿದ್ಧತೆಯಲ್ಲಿ ತೊಡಗಿದರೆ ಡಿಸೆಂಬರ್- ಜನವರಿಯಲ್ಲಿ ಪ್ರದರ್ಶನ ಸಾಧ್ಯವಾಗುತ್ತಿತ್ತು. ನಂತರ ಎಪ್ರಿಲ್ ವರೆಗೆ ಅಲ್ಲಿ ಇಲ್ಲಿ ಸಾಧ್ಯವಾದಷ್ಟು ಪ್ರದರ್ಶನಗಳನ್ನು ಮಾಡಿಕೊಳ್ಳಬೇಕು. ಮತ್ತೆ ಅಡ್ಡ ಮಳೆಗಳು ಪ್ರಾರಂಭವಾಗುವುದರಿಂದ ಬಯಲಿನಲ್ಲಿ ನಾಟಕ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದು ಕಷ್ಟ. ಇವೆಲ್ಲದರಿಂದ ಆ ವರ್ಷದ ಮಟ್ಟಿಗೆ ಬೇರೆ ನಾಟಕವನ್ನು ತೆಗೆದುಕೊಳ್ಳುವುದಂತೂ ಅಸಾಧ್ಯದ ಮಾತು. ವರ್ಷದಲ್ಲಿ ಆರೇಳು ತಿಂಗಳುಗಳ ಕಾಲ ಮಳೆ ದಿನಗಳಿರುವ ವರ್ಷಕ್ಕೆ ನೂರಿಪ್ಪತ್ತು ಇಂಚುಗಳಷ್ಟು ಮಳೆ ಬೀಳುವ, ಮಲೆನಾಡಿನ ಯಾವುದೇ ಊರಿನಲ್ಲಿ ಕೃಷಿಕೂಲಿಗಾರರನ್ನು, ರೈತರನ್ನು ಕಟ್ಟಿಕೊಂಡು ನಾಟಕ ಮಾಡಬೇಕಾದರೆ ವರ್ಷವಿಡೀ ನಿರಂತರ ರಂಗಚಟುವಟಿಕೆ ಬೇಕು.

ಒಮ್ಮೆ ಹಾನುಬಾಳಿನಲ್ಲಿ ನಾಟಕ ಪ್ರದರ್ಶನ ಇತ್ತು. ರಾತ್ರಿ ಎಂಟು ಗಂಟೆಗೆ ನಾಟಕ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಾಟಕ ಪ್ರಾರಂಭಕ್ಕೆ ರಾತ್ರಿ ಎಂಟು ಗಂಟೆಯ ನಂತರವೇ ಸರಿಯಾದ ಸಮಯ. ಕೆಲಸಕ್ಕೆ ಹೋದವರು ಮನೆಗೆ ಬಂದು ಅಡಿಗೆ ಮಾಡಿ ಊಟ ತೀರಿಸಿ ಕಾರ್ಯಕ್ರಮಗಳಿಗೆ ಬರಬೇಕಾಗಿರುವುದರಿಂದ ನಗರಗಳಲ್ಲಿ ಮಾಡಿದಂತೆ ಸಂಜೆ ಆರೂವರೆ ಅಥವಾ ಏಳು ಗಂಟೆಗೆ ನಾಟಕ ಪ್ರಾರಂಭಿಸುವುದು ಅನುಕೂಲಕರವಲ್ಲ. ಅಂದು ನಮ್ಮ ಡೈರಿ ಸುಂದರನೂ ಪಾತ್ರಧಾರಿ. ಅವನು ಸಂಜೆ ಸೈಕಲ್ಲಿನಲ್ಲಿ ಸಕಲೇಶಪುರಕ್ಕೆ ಹಾಲು ಸಾಗಿಸಿ ನಂತರ ಅಲ್ಲಿಂದ ಹದಿನೇಳು ಕಿ.ಮೀ. ದೂರದ ಹಾನುಬಾಳಿಗೆ ಬಸ್ಸಿನಲ್ಲಿ ಬರಬೇಕಿತ್ತು. ನಾಟಕದ ಹೊತ್ತಿಗೆ ನಾವೆಲ್ಲ ಗಡಿಬಿಡಿಯಲ್ಲಿ ಸುಂದರನನ್ನು ಮರೆತೇಬಿಟ್ಟಿದ್ದೆವು. ನಾಟಕ ಪ್ರಾರಂಭವಾಯಿತು. ನಾನೂ ಪಾತ್ರಧಾರಿಯಾಗಿ ಸ್ಟೇಜಿನಲ್ಲಿದ್ದೆ. ಸುಂದರನ ಪಾತ್ರ ರಂಗಕ್ಕೆ ಬರಲು ಇನ್ನೊಂದೈದು ನಿಮಿಷ ಇದ್ದಿರಬಹುದು. ಅಷ್ಟರಲ್ಲಿ ನಾಟಕ ನೋಡುತ್ತಾ ಕುಳಿತ ಜನಗಳ ಮಧ್ಯದಲ್ಲಿ ದಾರಿಮಾಡಿಕೊಂಡು ಅವಸರದಲ್ಲಿ ಸುಂದರ ಬರುವುದು ಕಾಣಿಸಿತು. ನನಗೆ ಗಾಬರಿಯಾಯಿತು. ಅವನದ್ದು ಮಂತ್ರಿಯ ಪಿ.ಎ.ಒಬ್ಬನ ಪಾತ್ರ. ಈಗ ಮೇಕಪ್ ಇತ್ಯಾದಿಗಳಿಗೆ ಸಮಯವೇ ಇಲ್ಲ. ನೋಡಿದರೆ ಇವನು ಚಡ್ಡಿ ಶರ್ಟ್‌ನಲ್ಲಿದ್ದ. ಗ್ರೀನ್ ರೂಂನಲ್ಲಿದ್ದವರು ಇವನನ್ನು ಹಾಗೆಯೇ ಸ್ಟೇಜಿಗೆ ತಳ್ಳಿದ್ದರು. ಅದೇ ವೇಶದಲ್ಲಿ ಸುಂದರ ಸ್ಟೇಜಿಗೆ ಬಂದು ಪಾತ್ರ ಮಾಡಿದ! ಜನ ಇವನ ವಿಚಿತ್ರ ವೇಷ ನೋಡಿ ಸ್ವಲ್ಪ ಕೂಗಾಡಿದರು. ನಾಟಕ ಮುಗಿದ ಮೇಲೆ ಜನರಿಗೆ ಪ್ರಸಂಗ ವಿವರಿಸಿದೆ. ಎಷ್ಟೇ ಕಷ್ಟವಾದರೂ ಸರಿ ತನ್ನ ಪಾತ್ರ ನಿರ್ವಹಣೆಯ ಬಗ್ಗೆ ಇರುವ ಇಂತಹ ರಂಗನಿಷ್ಠೆಯಿಂದಾಗಿ ಮಾತ್ರ ರಂಗ ತಂಡಗಳು ಮತ್ತು ರಂಗ ಚಟುವಟಿಕೆಗಳು ಉಳಿದುಕೊಳ್ಳುತ್ತವೆ ಎಂದೆನಿಸುತ್ತದೆ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP