April 04, 2012

ಸೀತೆ ಕಂಡ ರಾಮನವನಮಿ !


ಜಿಂಕೆಗೆ ಆಸೆಪಟ್ಟು ಮೋಸಹೋದ ಸೀತೆ, ರಾಮನ ನಿಜಭಕ್ತ ಹನುಮಂತನೇ ಕಣ್ಣೆದುರು ಬಂದರೂ ನಂಬುವುದು ಹೇಗೆ? ಮಾಯಾಜಿಂಕೆಯನ್ನು ಬಯಸಿದ ಸೀತೆಯನ್ನು ಅಗ್ನಿಪರೀಕ್ಷೆಗೊಡ್ಡದೆ ರಾಮನಾದರೂ ಸ್ವೀಕರಿಸುವುದು ಹೇಗೆ? ಚಿನ್ನವಾದರೂ ಪುಟಕ್ಕಿಡಬೇಕು ಅಂತ ರಾಮನಿಗೆ ಅನ್ನಿಸಿತಾ? ಸೀತೆಯ ಬದುಕಿನಲ್ಲಿ ಮೂರು ಮಹತ್ವದ ಘಟ್ಟಗಳು- ಮಾಯಾಜಿಂಕೆಯನ್ನು ಬಯಸಿದ್ದು, ಹನುಮಂತನಿಂದ ರಾಮನ ಉಂಗುರ ಸ್ವೀಕರಿಸಿ ತನ್ನ ಚೂಡಾಮಣಿಯನ್ನು ಕೊಟ್ಟದ್ದು ಮತ್ತು ಅಯೋಧ್ಯೆಯಲ್ಲಿ ಅಗ್ನಿಪರೀಕ್ಷೆಗೆ ಒಳಗಾದದ್ದು.
ಇವುಗಳಲ್ಲಿ ಈ ಉಂಗುರ ಪ್ರಕರಣ, ಯಕ್ಷಗಾನ ತಾಳಮದ್ದಳೆಯಲ್ಲಿ ’ಚೂಡಾಮಣಿ’ ಪ್ರಸಂಗವೆಂದೇ ಪ್ರಸಿದ್ಧ. ನಾಲ್ಕು ಜನ ಚಕ್ಕಮಕ್ಕಳ ಹಾಕಿ ಕುಳಿತರೆ, ಭಾಗವತರು- ಚೆಂಡೆ, ಮದ್ದಳೆ ವಾದಕರು ಇದ್ದರೆ ಸಾಕು, ತಾಳಮದ್ದಳೆ ಶುರು. ಈ ರಾಮನವಮಿಗೆ ಅಂತಹುದೊಂದು ತಾಳಮದ್ದಳೆ. ರಾತ್ರಿಯ ಕಾಲ. ಸೀತೆ ಅಶೋಕವನದಲ್ಲಿ ಕಣ್ಣೀರುಗರೆಯುತ್ತಾ ಕುಳಿತಿದ್ದಾಳೆ. ಸುತ್ತ ರಾಕ್ಷಸ ಸ್ತ್ರೀಯರಿದ್ದಾರೆ. ರಾವಣ ತನ್ನ ಸಕಲ ಸಂಪತ್ತನ್ನೂ ಮೆರೆಸುತ್ತಾ, ಅಲ್ಲಿಗೆ ಪರಿವಾರ ಸಹಿತ ಬಂದಿದ್ದಾನೆ. ಶೃಂಗಾರ ರಾವಣನಾಗಿದ್ದಾನೆ. ತನ್ನ ಮದುವೆಯಾಗೆಂದು ಪರಿಪರಿಯಾಗಿ ಸೀತೆಯನ್ನು ಬೇಡಿಕೊಂಡಿದ್ದಾನೆ. ಆದರೆ ಅವಳು ಹುಲ್ಲುಕಡ್ಡಿಯೊಂದನ್ನು ಎದುರಿಗಿಟ್ಟು ಅದನ್ನೇ ದಿಟ್ಟಿಸಿ ಮಾತನಾಡುತ್ತಾ ರಾವಣನನ್ನು ಜರಿದಿದ್ದಾಳೆ. ಕೋಪಗೊಂಡ ರಾವಣ ಚಂದ್ರಹಾಸ ಖಡ್ಗವನ್ನೆತ್ತಿ ಕಡಿಯಲು ಮುಂದಾದರೆ, ಪಟ್ಟದರಸಿ ಮಂಡೋದರಿ ತಡೆದಿದ್ದಾಳೆ. ಸೀತೆಗೆ ಯೋಚಿಸಲು ಎರಡು ತಿಂಗಳ ಗಡುವು ನೀಡಿ ಹೋಗಿದ್ದಾನೆ ದಶಕಂಠ. ಮರದ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಹನುಮಂತ, ರಾಮಕತೆಯನ್ನು ಹೇಳುತ್ತ ಸೀತೆಯ ಎದುರು ಬರುತ್ತಾನೆ. ’ಹಾ ಸೀತಾ ಹಾ ಲಕ್ಷ್ಮಣಾ’ ಅಂತ ಕೇಳಿದ ಬಳಿಕ, ಸೀತೆ ರಾಮನ ದನಿಯನ್ನೇ ಕೇಳಿಲ್ಲ! ಅವನ ಯಾವ ವಾರ್ತೆಯೂ ಅವಳಿಗೆ ತಲುಪಿಲ್ಲ. ಪಾಯಸದಿಂದ ಜನಿಸಿದ ರಾಮನ ನಾಮವೇ ಈಗ ಸೀತೆಗೆ ಪಾಯಸ- ರಾಮ ನಾಮ ಪಾಯಸ. ಅಂತಹ ಸೀತೆಯ ಕಣ್ಣೆದುರು ಬಂದ ಹನುಮಂತ, ರಾಮ ನೀಡಿದ ಉಂಗುರವನ್ನು ಅವಳಿಗೆ ನೀಡುತ್ತಾನೆ. ಆ ನೆನಪಿನುಂಗುರ ಸೀತೆಯಲ್ಲಿ ಲಹರಿ ಎಬ್ಬಿಸಿದೆ.

’ನನ್ನ ಕೂಗು ಯೋಜನ ಯೋಜನ ದಾಟಿ ಕೊನೆಗೂ ನಿನಗೆ ಕೇಳಿಸಿತಾ? ಇದು ನನ್ನದೇ ದನಿ ಅಂತ ನಿನಗೆ ಅನಿಸಿತಾ?! ನನ್ನ ಬೊಗಸೆಯಲ್ಲೇ ಮೂಡಿ ಬಂದೆಯಾ ಪ್ರಭು ರಾಮಾ.. ನಿನ್ನನ್ನು ನನ್ನ ಕಣ್ಣುಗಳಿಗೆ ಒತ್ತಿಕೊಂಡಿದ್ದೇನೆ. ನನ್ನ ದೇವರು ಅಂದುಕೊಂಡಿರುವ ಈ ಉಂಗುರಕ್ಕೆ ನನ್ನ ಕಣ್ಣೀರಿನಿಂದಲೇ ಅಭಿಷೇಕ ಮಾಡುತ್ತೇನೆ. ಆ ದುಷ್ಟ ಹಿಡಿದೆಳೆದ ಈ ಕೈಗಳಿಂದ ಏನನ್ನಾದರೂ ತಿನ್ನಲು, ನನ್ನ ಮುಖವನ್ನೇ ಮುಟ್ಟಿಕೊಳ್ಳಲೂ ನಾನು ಹೇಸುತ್ತಿದ್ದಾಗ, ನೀನೇ ಬಂದು ನನ್ನ ಕೈಯೊಳಗೆ ಕುಳಿತೆಯಲ್ಲ! ಈ ಸುವರ್ಣ ಲಂಕೆ ನಿನ್ನೊಂದು ಚಿನ್ನದ ಉಂಗುರಕ್ಕೂ ಸಮವಲ್ಲ ರಾಮಾ.

ಮಿಥಿಲೆಯಲ್ಲಿ ನಡೆದ ಸ್ವಯಂಯವರದಲ್ಲಿ ಸೇರಿದ ರಾಜಮಹಾರಾಜರ ನಡುವೆ, ಶ್ರೀರಾಮಚಂದ್ರ ಶಿವಧನುಸ್ಸನ್ನು ಬಲಗೈಯಲ್ಲಿ ಎತ್ತಿ ಹಿಡಿದು ಎಡಗೈಯಲ್ಲಿ ಹೆದೆಯೇರಿಸುವಾಗ ನನಗೆ ಕಂಡ ಉಂಗುರ ಇದು. ಪಂಚವಟಿಯಲ್ಲಿ ರಕ್ಕಸರ ಅಟ್ಟಹಾಸಕ್ಕೆ ಬೆದರಿದ ನಾನು, ಇವರ ಕೈಯನ್ನು ಹಿಡಿದುಕೊಳ್ಳುತ್ತಿದ್ದಾಗ ಸಿಗುತ್ತಿದ್ದ ಉಂಗುರ ಇದು. ಆ ಶ್ರೀಕರದ ಉಂಗುರ. ನನ್ನ ಪ್ರಿಯಕರನ ಕರದ ಉಂಗುರ. ನೀನು ನಿಜವಾದ ಕರಸೇವಕ ಹನುಮಾ.


ತಾಯಿಗೆ ಮಗುವಿನ ಕೂಗು ಕರ್ಕಶ ಅಲ್ಲ, ಸಿಂಹದ ಮರಿಗೆ ಅಮ್ಮನ ಘರ್ಜನೆಯೂ ಕರ್ಕಶ ಅಲ್ಲ. ಆದರೆ ಸಂಬಂಧಗಳು ಹಳಸಿಹೋದಾಗ ಉಪದೇಶವೂ ಕರ್ಕಶವಾಗಿ ಕೇಳುತ್ತದೆ. ರಾಮನ ಮಂಜುಳ ಮಾತುಗಳನ್ನೇ ಕೇಳಿದ ನಾನು, ಹತ್ತು ಬಾಯಿಗಳಲ್ಲೂ ಹೊಲಸು ಮಾತಾಡುವ ಈ ಧೂರ್ತನ ಕರ್ಣ ಕರ್ಕಶ ಮಾತುಗಳನ್ನು ಹೇಗೆ ಸಹಿಸಿಕೊಳ್ಳಲಿ? ಸಾಮವೇದವನ್ನೇ ಹಾಡಿ ಶಿವನನ್ನು ಮೆಚ್ಚಿಸಿದವನು ಆ ರಾಕ್ಷಸ ಅಂತ ಹೇಗೆ ನಂಬಲಿ? ಆದರೆ ಆವತ್ತು ನಾನಾಡಿದ ಮಾತುಗಳು, ಆ ಲಕ್ಷ್ಮಣನಿಗೆ ಹೇಗೆ ಕರ್ಕಶವಾಗಿ ಕೇಳಿರಬಹುದು ಅಂತ ಈಗ ನನಗೆ ಅರ್ಥವಾಯಿತು. ಪ್ರಿಯ ಮೈದುನ ಲಕ್ಷ್ಮಣ ಎಳೆದ ರೇಖೆಗಳನ್ನೇ ದಾಟಿದ ನಾನು, ಇಂದು ಈ ಧೂರ್ತ ಎಲ್ಲಿ ಗೆರೆ ದಾಟಿ ಬಿಡುತ್ತಾನೋ ಅನ್ನುವ ಭಯದಲ್ಲೇ ಇಬ್ಬರ ಮಧ್ಯೆ ಹುಲ್ಲುಕಡ್ಡಿ ಇಟ್ಟದ್ದು. ಆಗ ನಾನು ಲಕ್ಷ್ಮಣನನ್ನು ನೆನಪಿಸಿಕೊಂಡಿದ್ದೆ ಹನುಮಾ. ರಾಕ್ಷಸನಾದ ರಾವಣ ನನಗೆ ತೃಣಸಮಾನ ಅಂದುಕೊಂಡೆ. ಜತೆಗೆ ಈ ಲಂಕೆಯಲ್ಲಿ ಒಂದು ಹುಲ್ಲುಕಡ್ಡಿಯಾದರೂ ನನಗೆ ಆಸರೆಯಾಗಬಾರದೇ ಅಂದುಕೊಂಡೆ. ಆ ರಕ್ಕಸನಿಗೂ ನಾನು ತೃಣಸಮಾನಳೇ. ಆದರೆ ಮನಸ್ಸಿನಲ್ಲೇ ವೃಣವಾಗಿರುವಾಗ, ತೃಣವಾದರೂ ಬೇಕು ಅನಿಸಿದರೆ ಬೇಕು. ಕೊಂದೇಬಿಡುತ್ತೇನೆಂದು ಖಡ್ಗವೆತ್ತಿದ. ಆಗ ಅವನನ್ನು ತಡೆದದ್ದು ಪಟ್ಟದ ರಾಣಿ ಮಂಡೋದರಿ. ನಾನೇನೂ ಭಯಪಟ್ಟಿರಲಿಲ್ಲ. ನಾನು ಮಂಡೋದರಿಯ ಹೊಟ್ಟೆಯನ್ನು ನೋಡುತ್ತಿದ್ದೆ. ಹೆತ್ತ ಕರುಳಲ್ಲವೆ ಅವಳದ್ದು? ಅವನು ಲಂಕಾರಾಜ್ಯದ ಅಧಿಪತಿಯಾದರೂ ತಿರುಕನಂತೆ ಬಂದ. ಹೆಂಡತಿ ಜತೆಗೇ ಇದ್ದರೂ ಪರನಾರಿಯ ಮೇಲೆ ಆಸೆಪಟ್ಟ. ಆವತ್ತು ನನ್ನಲ್ಲಿ ಬೇಡುವುದಕ್ಕೆ ಬಂದ, ಇವತ್ತು ಕಾಡುವುದಕ್ಕೆ ಬಂದ. ಆ ಪರಮ ಧೂರ್ತ ಮೂರು ಜನ್ಮ ಅಲ್ಲ, ಏಳು ಜನ್ಮವೆತ್ತಿ ಬಂದರೂ ನರಕವನ್ನೇ ಸೇರುವನಲ್ಲದೆ ವೈಕುಂಠವನ್ನಲ್ಲ!

ತನ್ನ ಗಂಡನ ಕ್ಷೇಮಸಮಾಚಾರವನ್ನೇ ಮತ್ತೊಬ್ಬರ ಬಳಿ ಕೇಳಿ ತಿಳಿಯಬೇಕಾದ ಪರಿಸ್ಥಿತಿ ಯಾವ ಹೆಣ್ಣಿಗೂ ಬರಬಾರದು ಹನುಮಾ. ನಾನು ಜತೆಗಿಲ್ಲದ ನನ್ನವರು ಹೇಗಿದ್ದಾರೆ? ಅವರು ಅಯೋಧ್ಯೆಯಿಂದ ಹೊರಟಾಗ, ಕಾನನವನ್ನು ಹೊಕ್ಕ ಸೂರ್ಯನ ಹಾಗಿದ್ದರು. ನನ್ನೊಂದಿಗೆ ಹುಣ್ಣಿಮೆಯ ಚಂದ್ರನಂತೆ ಶಾಂತವಾಗಿದ್ದರು. ಈಗ ಸೊರಗಿದ್ದಾರಾ? ಕೊರಗುತ್ತಾರಾ? ಒಬ್ಬರೇ ಇದ್ದಾಗ ಏನು ಮಾಡುತ್ತಾರೆ? ಅಯೋಧ್ಯೆಯನ್ನು ತೊರೆದದ್ದಕ್ಕೆ ಅವರಿಗೆ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅಪ್ಪ ದಶರಥ ಮಹಾರಾಜರ ಮರಣ ವಾರ್ತೆ ಕೇಳಿದಾಗ ಮಾತ್ರ ಅವರ ಮುಖ ನೋಡುವ ಹಾಗಿರಲಿಲ್ಲ. ಅವರಿಂದ ನಾನೂ ದೂರವಾದ ಬಳಿಕ ಹೇಗಿದ್ದರು? ಛೆ ನಿನಗೇನು ಗೊತ್ತು? ಆ ಲಕ್ಷ್ಮಣನಲ್ಲಿ ಕೇಳಬೇಕಿತ್ತು. ಹೇಗಿದ್ದಾನೆ ಅವನು? ತನ್ನ ಲಕ್ಷ್ಯವನ್ನೆಲ್ಲ ಅಣ್ಣನಲ್ಲೇ ಇಟ್ಟ ಲಕ್ಷ್ಮಣ, ನನ್ನ ಬಗ್ಗೆ ಏನಾದರೂ ಹೇಳಿದನಾ? ನನ್ನ ಬಗ್ಗೆ ನನ್ನವರು ಆಡಿದ ಮಾತುಗಳನ್ನು ಹೇಳಿದೆ, ಅವರ ಉಂಗುರವನ್ನು ಕೊಟ್ಟೆ, ಲಕ್ಷ್ಮಣ ಏನೂ ಹೇಳಲೇ ಇಲ್ವಾ? ಅಯೋಧ್ಯೆಯ ವಾರ್ತೆ ಏನಾದರೂ ಇದೆಯಾ? ಊರ್ಮಿಳೆ ಹೇಗಿದ್ದಾಳಂತೆ? ಲಕ್ಷ್ಮಣ ಹೇಗಿದ್ದಾನೆ ಹೇಳು. ಹನುಮಾ, ಲಕ್ಷ್ಮಣ ಹೇಗಿದ್ದಾನೆ ಹೇಳು.
ರಾಮ ಸೀತೆಯರ ಕತೆಯನ್ನು ನೀನು ಎಷ್ಟೊಂದು ಚೆಂದದಿಂದ, ಆನಂದದಿಂದ ಹೇಳಿದೆ. ರಾಮಕಥಾ ಶ್ರವಣದ ಪುಣ್ಯವನ್ನೂ ನನಗೆ ಕೊಟ್ಟೆ. ಋಷಿಮುನಿಗಳು ಅವರ ಬಗ್ಗೆ ಹೇಳಿದ್ದರು. ಶಬರಿ ಕೊಂಡಾಡಿದ್ದಳು. ಆದರೆ ರಾಮ-ಸೀತೆಯರ ಏಕಾಂತದ ಕ್ಷಣಗಳ ವಿವರವನ್ನೂ ರಾಮನ ಬಾಯಿಯಿಂದ ಆಲಿಸಿ, ಅದನ್ನು ನನಗೆ ಹೇಳಿದ್ದು ನೀನೊಬ್ಬನೇ. ಬಾಯಿ ಮುಚ್ಚು. ನಿನ್ನನ್ನು ರಾಮನೇ ಕಳುಹಿಸಿದ್ದೆಂದು ನನಗೆ ದೃಢವಾಯಿತು. ನಮ್ಮಿಬ್ಬರ ಏಕಾಂತದ ಕತೆಯನ್ನೇ ಇನ್ನೂ ಹೇಳಬೇಡವೋ!


ಆ ರಾಮನಿಗಾಗಿ ಎಷ್ಟೋ ಸಮಯದಿಂದ ಗುಹ ಕಾದಿದ್ದ, ಪ್ರತಿದಿನ ಹಣ್ಣುಗಳನ್ನು ಕೊಯ್ದಿಟ್ಟು ಮುದುಕಿ ಶಬರಿ ಕಾದಿದ್ದಳು, ನಾನು ಕಾಯುವುದರಲ್ಲಿ ಹೆಚ್ಚೇನು? ಎಲ್ಲೋ ಮಣ್ಣಿನಲ್ಲಿ ನನ್ನಪ್ಪನಿಗೆ ಸಿಕ್ಕಿದ ನಾನು ರಾಮನಿಗೆ ಸಿಕ್ಕೆ. ಆದರೆ ಅಯೋಧ್ಯೆಯ ಮಣ್ಣು ಅವರಿಗೆ ತಪ್ಪಿಹೋಯಿತು! ಈಗ ಅಯೋಧ್ಯೆಯೂ ಇಲ್ಲ, ನಾನೂ ಇಲ್ಲ. ಪುತ್ರಕಾಮೇಷ್ಠಿಯ ಮೂಲಕ ಅಯೋಧ್ಯೆ ಅವರನ್ನ ಪಡೆದುಕೊಂಡಿತು. ಸ್ವಯಂವರದ ಮೂಲಕ ಅವರು ನನ್ನನ್ನ ಪಡೆದುಕೊಂಡರು. ಆದರೀಗ ಅವರು ಅಯೋಧ್ಯೆಯಲ್ಲೂ ಇಲ್ಲ, ಅವರ ಜತೆಗೆ ನಾನೂ ಇಲ್ಲ! ಒಂದು ಮಳೆಗಾಲವೇ ಕಳೆಯಿತು. ಆ ಸಮುದ್ರಕ್ಕಿಂತ ಹೆಚ್ಚು ನನ್ನ ಮನಸ್ಸು ಉಕ್ಕೇರಿ ಇಳಿದದ್ದಾಯ್ತು. ಅವರಿಲ್ಲಿಗೆ ಬರುವುದಕ್ಕೆ ಇನ್ನೆಷ್ಟು ದಿನ ಬೇಕಾದೀತು? ತನ್ನ ಬಾಣದಿಂದ ಅವರು ಸಮುದ್ರವನ್ನು ಬತ್ತಿಸಿಯಾರು, ಗೊತ್ತು. ಆದರೆ ನನ್ನ ಕಣ್ಣೀರು?

’ಅಯ್ಯೋ ಶಿವನೇ..’ ಅಂತ ತಲೆ ಮುಟ್ಟಿಕೊಂಡರೆ ನನ್ನ ಕೈಗೆ ಸಿಗುವುದು ಈ ಚೂಡಾಮಣಿ. ತಗೋ ಈ ಚೂಡಾಮಣಿಯನ್ನು, ಆ ದುಷ್ಟನ ಕೈಗೆ ನನ್ನ ಕೇಶರಾಶಿ ಸಿಕ್ಕಾಗಲೂ ಉಳಿದುಕೊಂಡ ಈ ಮಣಿಯನ್ನು, ನನ್ನ ಕಣ್ಣೀರಿನಲ್ಲಿ ತೊಳೆದ ಚೂಡಾಮಣಿಯನ್ನು. ಅವರ ಪಾದಕ್ಕೆ ನನ್ನ ತಲೆಯನ್ನು ಚಾಚಿದ್ದೇನೆಂದು ತಿಳಿಯಲಿ. ಚೂಡಾಮಣಿಯೂ ಇಲ್ಲದ ನನ್ನ ಕೇಶರಾಶಿಯನ್ನು ಅವರು ಬಂದಾಗಲೇ ಮತ್ತೆ ಕಟ್ಟುತ್ತೇನೆ. ಇದನ್ನು ಅವರ ಪದತಲದಲ್ಲಿಡು. ಆಗ ಅವರ ಮಾತು-ಮುಖ ಹೇಗಿದ್ದೀತು?! ಮತ್ತೆ ಸಿಕ್ಕಾಗ ಹೇಳಬೇಕು ನೀನು’ -ಸೀತೆ ಕತ್ತಲಲ್ಲಿ ಕಣ್ಣು ನೆಟ್ಟಳು. ಆ ಕತ್ತಲಿನಲ್ಲೂ ಶ್ಯಾಮವರ್ಣದ ರಾಮ ಆಕೆಗೆ ಕಾಣುತ್ತಿದ್ದ.
kendasampige.com

Read more...

February 24, 2012

ನಮ್ಮ ಪರ್ಮನೆಂಟ್ ಅಡ್ರೆಸ್ !



Read more...

October 14, 2011

ತಾಳಮದ್ದಳೆ ಆಮಂತ್ರಣ






Read more...

August 22, 2011

ಮಾತಿನ ಮಲ್ಲರ ಜತೆ ಒಂದು ಕಲಾರಾತ್ರಿ

ಕಳೆದ ಶನಿವಾರದ ರಾತ್ರಿ. ಸುಳ್ಯ ತಾಲೂಕಿನ ಚೊಕ್ಕಾಡಿಯ ‘ದೇಸೀ ಭವನ’ದ ಹೊರಗೆ ಆಕಾಶ ತುಂಬಿ ಮಳೆಯಾಗುತ್ತಿದ್ದರೆ, ಒಳಗೆ ಮನಸ್ಸು ತುಂಬಿ ಮಾತಿನ ಮಳೆಯಾಗುತ್ತಿತ್ತು. ಅದು ಯಕ್ಷಗಾನದಲ್ಲಿ ’ಕೊಡಕ್ಕಲ್ಲು ಹಾಸ್ಯಗಾರರು’ ಅಂತಲೇ ಪ್ರಸಿದ್ಧರಾದ ಕೆ.ಗೋಪಾಲಕೃಷ್ಣ ಭಟ್ಟರಿಗೆ ಅಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನ. ಆ ಸಂಭ್ರಮಕ್ಕೆ ಸೂರಿಕುಮೇರಿ, ಜಗದಾಭಿ, ಶೆಟ್ಟಿಗಾರ್, ದೀಪಕ್ ಮೊದಲಾದ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ. ಆ ಬಳಿಕ ರಾತ್ರಿಯಿಂದ ಬೆಳಗಿನವರೆಗೆ ತಾಳಮದ್ದಳೆ ! ಭಾಗವತರಾಗಿ ಬಲಿಪ, ಪದ್ಯಾಣ, ಪುತ್ತಿಗೆ. ಅರ್ಥಧಾರಿಗಳಾಗಿ ಕುಂಬ್ಳೆ, ಮೂಡಂಬೈಲು, ಮೇಲುಕೋಟೆ, ಸುಣ್ಣಂಬಳ, ಬರೆ, ಸೂರಿಕುಮೇರಿ, ಹಿರಣ್ಯ, ಶಂಭು, ಉಜಿರೆ..ಹೀಗೆ ಮಾತಿನ ಮಲ್ಲರು ಅಲ್ಲಿ ಸೇರಿದ್ದರು. ಪಾತ್ರಗಳ ಬೆಳಕಿನಲ್ಲೇ ಆ ಕಲಾರಾತ್ರಿಯಲ್ಲಿ ಬೆಳಗಾಯಿತು. ತಾಳಮದ್ದಳೆ ಮುಗಿದಾಗ ಬೆಳಗ್ಗೆ ಏಳೂವರೆ. ತಾಳಮದ್ದಳೆಯಲ್ಲಿ ಮಾತೇ ಸರ್ವಸ್ವ. ಹಾಗಾಗಿ ಇದಕ್ಕಿಂತ ಹೆಚ್ಚು 'ಬರಹದಲ್ಲಿ ಹೇಳಲಾರೆನೂ..'! ಇಂತಹ ಕಾರ್ಯಕ್ರಮಕ್ಕೆ ಸಾದಂರ್ಭಿಕವಾಗಿ ಉದಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನವೊಂದು ಇಲ್ಲಿದೆ. ಆ ಕಾರ್ಯಕ್ರಮವನ್ನು ಕಲ್ಪಿಸಿಕೊಂಡು ಆನಂದಿಸಿ !

ಹಾಸ್ಯ ಶ್ರೇಣಿಗೆ ಶೇಣಿ ಪ್ರಶಸ್ತಿ

ಮರಣವನ್ನೇ ತನ್ನಿಚ್ಚೆಗೆ ಒಳಪಡಿಸಿಕೊಂಡ ಭೀಷ್ಮನ ಹಾಗೆ, ಪುರಾಣ ಪಾತ್ರಗಳನ್ನು ತನ್ನಿಚ್ಚೆಗೆ ಒಳಪಡಿಸಿಕೊಂಡವರು ಶೇಣಿ ಗೋಪಾಲಕೃಷ್ಣ ಭಟ್. ವೇದಿಕೆಗೆ ಬಂದರೆಂದರೆ ಅವರದೇ ಆದ ರೀತಿ ನೀತಿ. ಆದರೆ ಶೇಣಿಯವರಿಗೆ ತೀರಾ ವ್ಯತಿರಿಕ್ತವಾಗಿ, ಇನ್ನೊಬ್ಬರ ಇಚ್ಚೆಗಳಿಗೆಲ್ಲ ತನ್ನನ್ನು ಒಪ್ಪಿಸಿಕೊಂಡ ಭಾರತದ ಭೀಷ್ಮನ ಹಾಗೆ ವೇದಿಕೆಯಲ್ಲಿ ಕಾಣುತ್ತಿದ್ದವರು ದೇರಾಜೆ ಸೀತಾರಾಮಯ್ಯ ! ದೇರಾಜೆ ರಸವಾದರೆ, ಶೇಣಿ ತಿರುಳು. ದೇರಾಜೆ ಭಾವವಾದರೆ, ಶೇಣಿ ಬುದ್ಧಿ. ಇಬ್ಬರೂ ಸೇರಿದರೆ ಪಾತ್ರಗಳ ಅಂತರಂಗ ಶುದ್ಧಿ. ಸೀತಾರಾಮಯ್ಯ ಕಡಿಮೆ ಮಾತಾಡಿದರು, ಹೆಚ್ಚು ಬರೆದರು. ಶೇಣಿ ಹೆಚ್ಚೆಚ್ಚು ಮಾತನಾಡಿದರು. ಬಹುಶಃ ಇವರಿಬ್ಬರನ್ನು ಒಂದುಗೂಡಿಸಿದ್ದು ಸೀತಾರಾಮಯ್ಯರ ಹಾಸ್ಯಪ್ರವೃತ್ತಿಯೇ. ಶೇಣಿಯವರ ಘನಗಾಂಭೀರ್ಯವನ್ನು ಸೂಜಿಮೊನೆಯಲ್ಲಿ ಮುರಿಯಬಲ್ಲ ಸಾಮರ್ಥ್ಯ ಇದ್ದದ್ದು ಸೀತಾರಾಮಯ್ಯರಿಗೆ. ಶೇಣಿಯವರು ಕೌರವನಾಗಿ, ಶಲ್ಯಭೂಪತಿ ದೇರಾಜೆಯವರ ಬಳಿ ಹೋದಾಗ ನಡೆಯುವ ಮಾತುಕತೆಯಲ್ಲಿ ಈ ವಿರುದ್ಧ ಆಕರ್ಷಣೆಯನ್ನು ಪ್ರೇಕ್ಷಕರು ಆನಂದಿಸುತ್ತಿದ್ದರು.

ದೇರಾಜೆ ಸೀತಾರಾಮಯ್ಯರ ಕರ್ಮಭೂಮಿ ಸುಳ್ಯ ತಾಲೂಕಿನ ಚೊಕ್ಕಾಡಿ. ಅವರ ಮುಂದಾಳತ್ವದಲ್ಲಿ ಅಲ್ಲಿ ನಿರ್ಮಾಣವಾದದ್ದು ಶ್ರೀರಾಮ ದೇವಾಲಯ. ಅವರ ಯಕ್ಷಗಾನ, ನಾಟಕದ ಹುಚ್ಚಿಗೆ ಆ ಪರಿಸರ ಸಾಕ್ಷಿಯಾಗಿತ್ತು. ಈಗ ಶೇಣಿ ಅಜ್ಜನೂ ಅಲ್ಲಿಗೆ ಮತ್ತೆ ಬರುತ್ತಿದ್ದಾರೆ. ’ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ’ ಯ ನೇತೃತ್ವದಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನವೆಂಬ ಅದ್ದೂರಿ ಕಾರ್ಯಕ್ರಮ ಚೊಕ್ಕಾಡಿಯಲ್ಲಿ ನಡೆಯುತ್ತಿದೆ. ಅಲ್ಲಿ ’ಶೇಣಿ ಪ್ರಶಸ್ತಿ’ಗೆ ಭಾಜನರಾಗುತ್ತಿರುವುದು ಒಬ್ಬರು ಹಾಸ್ಯಗಾರರು ಅನ್ನುವುದು ಶೇಣಿ-ದೇರಾಜೆ ಇಬ್ಬರಿಗೂ ಅದೆಷ್ಟು ಖುಶಿ ತರುತ್ತದೋ !

ಅವರಿಗೀಗ ವಯಸ್ಸು ೮೩. ಶೇಣಿ, ದೇರಾಜೆ, ಪೊಳಲಿ ಶಾಸ್ತ್ರಿಗಳು ಅವರ ನೆಚ್ಚಿನ ಅರ್ಥಧಾರಿಗಳಂತೆ. ಕುರಿಯ ವಿಠಲ ಶಾಸ್ತ್ರಿ, ನಾರಾಯಣ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್ ಮೆಚ್ಚಿನ ವೇಷಧಾರಿಗಳಂತೆ. ಆದರೆ ಇವರು ಬೆಳೆದದ್ದು ಮಾತ್ರ ಯಕ್ಷಗಾನದ ಪಾರಂಪರಿಕ ಹಾಸ್ಯದ ವಾರಸುದಾರರಾಗಿ. ಇವರು ಬಂಟ್ವಾಳ ತಾಲೂಕು ಕೊಡಕ್ಕಲ್ಲಿನ ಕೆ. ಗೋಪಾಲಕೃಷ್ಣ ಭಟ್. ೧೬ನೇ ವಯಸ್ಸಿನಲ್ಲಿ ಮೃದಂಗ ಅಭ್ಯಾಸದ ಮೂಲಕ ಕಲಾ ಜೀವನಕ್ಕೆ ಪದಾರ್ಪಣೆ. ತಂದೆ ಶಾಂಭಟ್ಟರು ಹಾಗೂ ಮಾವ ನೆಡ್ಲೆ ನರಸಿಂಹ ಭಟ್ಟರೇ ಮೊದಲ ಗುರುಗಳು. ಕೂಡ್ಲು ಮೇಳ ಸೇರಿದ್ದು ಭಾಗವತನಾಗಿ ! ಆದರೆ ೨೪ರ ವಯಸ್ಸಿನ ಹೊತ್ತಿಗೆ, ಕಟೀಲು ಮೇಳದಲ್ಲಿ ಹೊಗಳಿಕೆ ಹಾಸ್ಯಗಾರನಾಗಿ ಭಾಗವಹಿಸಿದ ಬಳಿಕ ನಗಿಸುವುದೇ ಅವರ ಪರಮಧರ್ಮ. ಧರ್ಮಸ್ಥಳ, ಕಟೀಲು, ಕುಂಡಾವು, ಕರ್ನಾಟಕ, ಪೊಳಲಿ, ಸುಂಕದಕಟ್ಟೆ ಮೇಳಗಳಲ್ಲಿ ಹಾಗೂ ಹವ್ಯಾಸಿ ತಂಡಗಳಲ್ಲೂ ಹಾಸ್ಯಗಾರನಾಗಿದ್ದ ಅವರಿಗೆ ನಕ್ಕರದೇ ಸ್ವರ್ಗ. ಕೃಷ್ಣನ ಜತೆಗಾರರಾಗಿರುವ ವಿಜಯ ಹಾಗೂ ದಾರುಕ - ಈ ಎರಡೂ ಪಾತ್ರಗಳಲ್ಲಿ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ ಪ್ರದರ್ಶನ ಲೀಲಾಜಾಲ. ಯಕ್ಷಗಾನದ ಹಾಸ್ಯಕ್ಕೆ ಒಂದು ಶಿಷ್ಟ ಸ್ವರೂಪ ಕೊಟ್ಟ ವಿಟ್ಲ ಜೋಶಿಯವರು ಮತ್ತು ಕೊಡಕ್ಕಲ್ಲು, ಧರ್ಮಸ್ಥಳ ಮೇಳದಲ್ಲಿ ಶಂಖ ಲಿಖಿತರಾಗಿ ಬಂದರೆ ಪ್ರೇಕ್ಷಕರಿಗೆ ನಗೆಗಡಲು. ವಿರಾಟ ನಗರಕ್ಕೆ ಪಾಂಡವರು ಹೊರಟಾಗ ತಾನೂ ಬರುತ್ತೇನೆನ್ನುವ ಪಾತ್ರದಲ್ಲೂ ಕೊಡಕ್ಕಲ್ಲು ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲಿ, ತಾನು ಹೇಗೆ ವಿರಾಟ ನಗರಿಯಲ್ಲಿ ಗುರುತು ಮರೆಸಿ ಇರಬಲ್ಲೆ ಅನ್ನುವುದಕ್ಕೆ ವೇದಿಕೆ ಮಧ್ಯದಲ್ಲೇ ಮೂರ‍್ನಾಲ್ಕು ವೇಷಗಳನ್ನು ಕ್ಷಣಮಾತ್ರದಲ್ಲೇ ಮಾಡಿ ತೋರಿಸುತ್ತಿದ್ದರಂತೆ ! ಸಿದ್ಧ ಹಾಸ್ಯಕ್ಕಿಂತ ಹೆಚ್ಚಾಗಿ ಇದಿರು ಅರ್ಥಧಾರಿಯ ಮಾತುಗಳನ್ನೇ ಹೆಕ್ಕಿಕೊಂಡು ವಿನೋದ ಸೃಷ್ಟಿಸುವುದು ಇವರ ಹೆಚ್ಚುಗಾರಿಕೆ.

ಕೊಡಕ್ಕಲ್ಲು ಭಟ್ಟರದ್ದು ’ಯಕ್ಷಗಾನದ ಹಾಸ್ಯ’. ಸುಮಾರು ೫೦ ವರ್ಷಗಳ ಕಾಲ ಇವರ ವಿನೋದಾವಳಿ ! ನೆನಪಿಸಿಕೊಂಡರೆ, ಇವರು ಮೊದಲು ಸನ್ಮಾನಕ್ಕೆ ಪಾತ್ರರಾಗಿದ್ದು ೧೯೯೧ರಲ್ಲಂತೆ, ಅಂದರೆ ೬೩ನೇ ವಯಸ್ಸಿನಲ್ಲಿ ! ಆ ಬಳಿಕ ಬಹಳಷ್ಟು ಸಂಘಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಕಳೆದ ಫೆಬ್ರವರಿಯಲ್ಲಿ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ. ಇವರು ಓದಿದ್ದು ೩ನೇ ತರಗತಿ. ಏಳು ಜನ ಮಕ್ಕಳ ತಂದೆ. ಈಗ ಅವರ ಮಗಳು ಕೆ.ಟಿ. ಶೈಲಜಾ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದು ಬದುಕಿನ ತಿರುವು ಜೀವಂತಿಕೆಗೊಂದು ಸಾಕ್ಷಿಯಾಗಿದೆ. ಅವರ ಇನ್ನೊಬ್ಬರು ಮಗಳು ಸುಕನ್ಯಾ ಅವರ ಮನೆಯೂ ಚೊಕ್ಕಾಡಿಗೆ ಕೂಗಳತೆ ದೂರದ ನೇಣಾರಿನಲ್ಲಿದೆ. ಹೀಗೆ ’ಶೇಣಿ ಪ್ರಶಸ್ತಿ’ಯನ್ನು ಚೊಕ್ಕಾಡಿಯಲ್ಲಿ ಪಡೆಯುವಲ್ಲಿ ಅವರ ನಗುವಿಗೆ ಕಾರಣ ಹೆಚ್ಚಾಗಿದೆ !

ಎಂಟು ವರ್ಷಗಳ ಹಿಂದೆ. ಯಕ್ಷಗಾನದ ಮಹಾಪುರುಷ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ’ಸಹಸ್ರಚಂದ್ರ ದರ್ಶನ’ದ ಸಂಭ್ರಮ. ಆ ಶುಭಾವಸರದಲ್ಲಿ ಅಭಿಮಾನಿಗಳು ಅವರಿಗೆ ನೀಡಿದ ನಿಧಿಯನ್ನು ಒಂದು ದತ್ತಿನಿಧಿ ಸ್ಥಾಪಿಸಲೆಂದು ನೀಡಿದ್ದರು ಶೇಣಿ ಅಜ್ಜ. ಅವರ ಸಂಕಲ್ಪದ ಈಡೇರಿಕೆಗಾಗಿ ಜನ್ಮ ತಳೆದದ್ದು ’ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ’. ತಡಂಬೈಲು ರಮಾನಾಥ ರಾವ್ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಆ ಸಂಸ್ಥೆ, ಅವರ ನಿಧನಾನಂತರವೂ ಕ್ರಿಯಾಶೀಲವಾಗಿದೆ. ಯಕ್ಷರಂಗಕ್ಕಾಗಿ ಸೇವೆ ಸಲ್ಲಿಸಿ ಬಾಳ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ’ಶೇಣಿ ಪ್ರಶಸ್ತಿ’ಯನ್ನು ಗೌರವದ ಸಂಮಾನ-ನಿಧಿಯೊಂದಿಗೆ ನೀಡುವ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಜತೆಗೆ ಶೇಣಿಯವರ ಸುವರ್ಣಯುಗದ ಧ್ವನಿಸುರುಳಿಗಳನ್ನು ಅವರ ಅಭಿಮಾನಿಗಳಿಂದ ಅರಸಿ ಸಂಗ್ರಹಿಸಿ ಸಂಸ್ಕರಿಸಿ ಶೇಖರಿಸುವ ಕೆಲಸವನ್ನೂ ಮಾಡುತ್ತಿದೆ. ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಗೌರವಾಧ್ಯಕ್ಷರಾಗಿರುವ, ಹರಿಕೃಷ್ಣ ಪುನರೂರು ಅಧ್ಯಕ್ಷತೆಯ ವಿಶ್ವಸ್ತ ಮಂಡಳಿಯು, ಈ ಬಾರಿ ಚೊಕ್ಕಾಡಿಯ ಶ್ರೀರಾಮ ಸೇವಾ ಸಮಿತಿ ಸಹಯೋಗದಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಶೇಣಿ ’ಗೋಪಾಲಕೃಷ್ಣ ಭಟ್’ ಹೆಸರಿನ ಪ್ರಶಸ್ತಿಯು ಹಾಸ್ಯಗಾರ ಕೊಡಕ್ಕಲ್ಲು ’ಗೋಪಾಲಕೃಷ್ಣ ಭಟ್ಟ’ರಿಗೆ ಸಲ್ಲುತ್ತಿದೆ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP