May 30, 2009

ನಾಗೇಶ ಹೆಗಡೆಯವರ ಕಾಲುದಾರಿ

ನಮ್ಮ ಮನೆಗೆ ದಿನಪತ್ರಿಕೆ ಬರುತ್ತಿದ್ದುದು ರಾತ್ರಿ ೮ಕ್ಕೆ. ಮರುದಿನ ಸಂಜೆಯ ಮೊದಲು ಅಪ್ಪ ಕೇಳಿಯೇ ಕೇಳುತ್ತಿದ್ದ ಪ್ರಶ್ನೆ- 'ನಾಗೇಶ ಹೆಗಡೆಯವರ ಕಾಲಂ ಓದಿದ್ಯಾ?' ಇಂಟರ್‌ನೆಟ್ ಗೊತ್ತಿಲ್ಲದ, ಟಿವಿ ಇಲ್ಲದ ನಮ್ಮಲ್ಲಿಗೆ ಹೆಗಡೆಯವರ ಅಂಕಣ, ವಿಜ್ಞಾನದ ಒಂದು ಪ್ರವಾಹವನ್ನೇ ಹರಿಸುತ್ತಿತ್ತು. (ಇಂಟರ್‌ನೆಟ್-ಟಿವಿ ಇಟ್ಟುಕೊಂಡವರಿಗೂ ಹೆಗಡೆಯವರು ಹೇಳುವುದು ಹೊಸ ವಿಷಯವೇ ಆಗಿರುತ್ತದೆಂಬುದು ನಂತರ ತಿಳಿಯಿತು!) ಅಂಕಣದಲ್ಲಿ ಅವರು ಹೊಸ ವಿಜ್ಞಾನ ವಿಷಯದ ಬಗೆಗಷ್ಟೇ ಹೇಳುತ್ತಿರಲಿಲ್ಲ, ಅದರ ಜತೆಗೆ ಒಂದು ವಿಚಾರ ಸರಣಿ ಹೊಸೆದುಕೊಂಡಿರುತ್ತಿತ್ತು. ಅತಿ ಗಂಭೀರವಾಗಿರದೆ ಕೊಂಚ ತಮಾಷೆಯೂ ಆಗುತ್ತಿತ್ತು. ಸ್ಪಷ್ಟವಾಗಿ ಸರಳವಾಗಿ ಇರುತ್ತಿತ್ತು. ಹೀಗಾಗಿ, ಏನನ್ನೂ ಓದದ ನನ್ನ ತಮ್ಮನೂ, ಸುಧಾ ವಾರಪತ್ರಿಕೆಯ ಕೊನೆಯ ಪುಟದ 'ಸುದ್ದಿಸ್ವಾರಸ್ಯ'ವನ್ನು ಓದಿದಷ್ಟೇ ಆಸಕ್ತಿಯಿಂದ ಹೆಗಡೆಯವರ ಕಾಲಂನ್ನೂ ಓದತೊಡಗಿದ.

ಇತ್ತೀಚೆಗೆ ಬಂದ ಒಂದು ಎಸ್ಸೆಮ್ಮೆಸ್ಸು ಇದು- 'ನೀನೀಗ ಬೈಕು ಕೊಳ್ಳಬೇಡ. ೨೦೨೫ರಲ್ಲಿ ನೀನು ೫ ಲೀಟರ್ ಪೆಟ್ರೋಲ್ ಕೊಂಡರೆ ಪಲ್ಸರ್ ಬೈಕ್ ಫ್ರೀಯಾಗಿ ಸಿಗತ್ತೆ !' ಶನಿವಾರ ಸಂಜೆ ಮೇ ಫ್ಲವರ್ ಮೀಡಿಯಾ ಹೌಸ್‌ನ 'ಫಿಶ್ ಮಾರ್ಕೆಟ್'ನಲ್ಲಿ ಕಾಣಿಸಿಕೊಂಡ ವಾಮನ ಮೂರ್ತಿ ನಾಗೇಶ ಹೆಗಡೆಯವರ ಮಾತಲ್ಲೂ ಅದೇ 'ಮೆಸೇಜು' ಬಂತು. ತುಟಿ ಕೆಂಪು ಮಾಡಿಕೊಂಡಿರುವ ಕುಳ್ಳಗಿನ ಬಡಕಲು ದೇಹ. ಫಕ್ಕನೆ ಹೆಗ್ಗೋಡು ಸುಬ್ಬಣ್ಣರ ನೆನಪು ತರುವಂಥ ಮುಖ. ವಿಜ್ಞಾನ ತಂತ್ರಜ್ಞಾನವು ಸಬಲರಿಂದ ಸಬಲರಿಗಾಗಿಯೇ ಬಳಕೆಯಾಗುತಿದೆ ಎಂಬುದು ಅವರ ಮಾತಿನ ಒಟ್ಟು ಆರೋಪ. ಸರಿಯಾಗಿ ಉರಿಯುವ ಒಲೆ ಕಂಡುಹಿಡಿಯದೆ ಚಂದ್ರಲೋಕಕ್ಕೆ ಹೊರಟಿದ್ದಾರೆ. ಮರ ಕತ್ತರಿಸುವ ಆಧುನಿಕ ಗರಗಸಗಳು ತಯಾರಾದಾಗ ಕಾಡುಗಳೇ ಇಲ್ಲವಾಗಿವೆ. ಕಡಿಮೆ ಬೆಲೆಯ-ವಾಯು ಮಾಲಿನ್ಯ ಇಲ್ಲದ ನ್ಯಾನೊದಂಥ ಕಾರಿನ ಬದಲು ಬಸ್ಸು ತಯಾರಿಸಿದ್ದರೆ ಅದು ಶ್ಲಾಘಿಸುವ ವಿಷಯ. ಇಂದು ಎಲ್ಲವೂ ಖಾಸಗೀಕರಣಕ್ಕೆ ಒಳಗಾಗಿ ಪ್ರಜಾಪ್ರಭುತ್ವ ನಲುಗಿದೆ. ಅಮೆರಿಕದಂಥ ಒಂದು ದೇಶ ತನ್ನ ಕಂಪನಿಗಳ ಮೂಲಕ ಇನ್ನೊಂದು ದೇಶದಲ್ಲಿ ಭಾರೀ ಪ್ರಮಾಣದ ಭೂಮಿಯನ್ನು ಕೊಂಡುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಅನನ್ಯತೆ-ಸ್ವಾವಲಂಬನೆಗಳ ನಾಶ ಆಗುತ್ತಿದೆ ಎಂಬುದು ಅವರ ನೋವು. ಬೆಂಗಳೂರಿನ ಸುತ್ತಲಿನ ಹಳ್ಳಿಗಳ ಸಂಪನ್ಮೂಲಗಳು ಮಹಾನಗರಕ್ಕೆ ಬರುತ್ತಿವೆ. ಬೆಂಗಳೂರಿನ ತ್ಯಾಜ್ಯಗಳು ಆ ಹಳ್ಳಿಗಳಿಗೆ ಹೋಗ್ತಿವೆ. ಬೆಂಗಳೂರಿನಿಂದ ಮೈಸೂರಿಗೆ ಚತುಷ್ಪಥ ರಸ್ತೆಯಲ್ಲಿ ಹೋಗಲು ಈಗ ಅರ್ಧ ಗಂಟೆ ಕಡಿಮೆ ಸಾಕು. ಆದರೆ ಆ ದಾರಿಯಲ್ಲಿರುವ ರೈತ ತನ್ನ ಉಳಿದ ಜಮೀನಿಗೆ ಹೋಗಲು, ಚತುಷ್ಪಥ ದಾಟಲು ಅರ್ಧ ಗಂಟೆ ಕಾಯಬೇಕಾಗಿದೆ ಎಂಬ ವೈರುಧ್ಯದ ಬಗ್ಗೆ ಅವರಿಗೆ ದುಃಖ.

ನಮ್ಮ ವಿದ್ಯುತ್ತಿನ ಶೇ.೪೦ ಭಾಗ ರೈತರ ಪಂಪ್‌ಸೆಟ್‌ಗಳಿಗೆ ವ್ಯಯವಾಗುತ್ತಿದೆ. ಆದರೆ ಅವರಿಗೆ ಸೋಲಾರ್ ಶಕ್ತಿಯನ್ನೋ ಗಾಳಿಯಂತ್ರವನ್ನೋ ಕೊಡದ ಸರಕಾರ ಟ್ರ್ಯಾಕ್ಟರ್‌ನ್ನು-ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿದೆ. ಭಾರತದಲ್ಲಿ ದಿಢೀರನೆ ಬೆಳೆದ ತಂತ್ರಜ್ಞಾನ, ದುರ್ಬಳಕೆಯ ಎಲ್ಲ ಮಾರ್ಗಗಳಲ್ಲೂ ನಡೆದಿದೆ. ನಮಗೆ ಸರಿದಾರಿ ತೋರಬೇಕಾದ ಮಾಧ್ಯಮಗಳು ಹಾಗೂ ಸರಕಾರಗಳೇ ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿವೆ ಎಂಬ ಬೇಸರ. ಹೀಗೆಲ್ಲ ನಗುನಗುತ್ತಲೇ ಪನ್ ಮಾಡುತ್ತಲೇ ಮಾತಾಡಿದ ನಾಗೇಶ ಹೆಗಡೆ, ಎಲ್ಲರಿಂದ ಎತ್ತರದಲ್ಲಿ ನಿಂತು ಮುಂದಿನ ಪ್ರಪಾತವನ್ನು ವಿವರಿಸಿದವರಂತೆ ಕಂಡರು. ಪ್ರಪಾತದಲ್ಲಿ ನೇತಾಡುತ್ತಾ ಈ ಹಣ್ಣು ಅದೆಷ್ಟು ರುಚಿ ಎನ್ನುವ ಝೆನ್ ಒಡಪಿನ ಅರ್ಥವೂ ಅವರಿಗೆ ತಿಳಿದಂತಿತ್ತು. ಅಷ್ಟಕ್ಕೂ ಅವರು ತೀರ ಹೊಸದಾದ ಸಂಗತಿಯೇನೂ ಹೇಳಲಿಲ್ಲ. ಕ್ರಾಂತಿಗಿಂತ ಮುಖ್ಯವಾಗಿ ಸರ್ವಾಂಗೀಣ ಪ್ರಗತಿ ಆಗಬೇಕು ಎಂಬ ಹಲವರ ಆಸೆಯೇ ಅವರ ಆಸಕ್ತಿಯಾಗಿತ್ತು. ಬಹಳ ಕನ್ವಿನ್ಸಿಂಗ್ ಆಗಿ ಮಾತಾಡಲು ಅವರಿಗೆ ಸಾಧ್ಯವಾಗದಿದ್ದರೂ, ತನ್ನ ನಿಲುವಿನಲ್ಲಿ ಅವರಿಗಿರುವ ಬದ್ಧತೆ-ನಂಬಿಕೆ ಸ್ಪಷ್ಟವಾಗಿ ತಿಳಿಯುವಂತಿತ್ತು. ಬೆಂಗಳೂರಿನಿಂದ ೨೦ಕಿಮೀ ಆಚೆಗಿನ ಹಳ್ಳಿಯಲ್ಲಿ, ಫೋನು-ಕರೆಂಟು-ಟಿವಿ ಇತ್ಯಾದಿ ಸರಿಯಾದ ಸೌಲಭ್ಯಗಳಿಲ್ಲದಲ್ಲಿ ಅವರು ಬದುಕುತ್ತಿರುವುದು ಸಾಹಸದಂತೆ ಮಹಾ ಪಟ್ಟಣಿಗರಿಗೆ ಕಂಡರೆ, ಈ ಮಹಾನಗರಗಳಲ್ಲಿ ಬದುಕುವುದೇ ಸಾಹಸ ಅಂತ ಹೆಗಡೆ ಅಂದುಕೊಂಡಿದ್ದರು. ಯಾವುದು ಅತ್ಯಂತ ಸರಳವೋ ಅದನ್ನೇ ಭಾರೀ ಸಾಹಸವೆಂಬಂತೆ ಕಾಣಿಸಿರುವ ತಂತ್ರಜ್ಞಾನದ ಶಕ್ತಿಯ ಅನಾವರಣ ಅದರಿಂದಾಯಿತು.

ನಾಗೇಶ ಹೆಗಡೆಯವರು ಹೇಳಿದ ಥರಾ ಇನ್ನು ಐವತ್ತು ವರ್ಷಗಳಲ್ಲಿ ಏನೂ ಮುಳುಗಿ ಹೋಗೊಲ್ಲಾರೀ. ಒಂದು ಮೇರೆಮೀರಿದರೆ ಅದಕ್ಕೆ ಪ್ರತಿಯಾದ್ದನ್ನ ವಿಜ್ಞಾನ ಕಂಡುಹಿಡಿಯತ್ತೆ. ಪೆಟ್ರೋಲ್ ಮುಗಿದ್ರೆ, ನೀರಿನ ಕೊರತೆಯಾದ್ರೆ ಮತ್ತೊಂದು ದಾರಿ ತೆರೆದುಕೊಂಡಿರತ್ತೆ. ಈಗ ಹಳ್ಳಿಯೋರೆಲ್ಲ ಪೇಟೆಗೆ ಬಂದಿದ್ದಾರೆ. ಇಲ್ಲಿ ಅವಕಾಶಗಳೆಲ್ಲ ಕಡಿಮೆಯಾದಾಗ ಮತ್ತೆ ಜನ ಹಳ್ಳಿಗೆ ಹೋಗ್ತಾರೆ. ಪರಿಸರ ಮಾಲಿನ್ಯ ಸ್ವಲ್ಪ ಹೆಚ್ಚಾಗಿದೆ ಹೌದು. ಅದಕ್ಕೆಲ್ಲ ತಲೆ ಕೆಡಿಸ್ಕೋಬಾರ್ದು, ಎಡ್ಜೆಸ್ಟ್ ಮಾಡ್ಕೊಂಡು ಹೋಗ್‌ಬೇಕ್ರೀ. ಸ್ವಲ್ಪ ಕಡಿಮೆ ದಿನ ಬದುಕಿದ್ರೂ ಪರವಾಗಿಲ್ಲ, ಇಷ್ಟೆಲ್ಲಾ ಇರೋವಾಗ ಎಂಜಾಯ್ ಮಾಡಿ ಸಾಯ್ಬೇಕು !-ಎಂಬ ಮಾತುಗಳೂ ಹಲವರ ನಾಲಗೆಯ ಕೆಳಗೆ ಸುಳಿಯುತ್ತಿದ್ದವೇನೋ. ನಾಗೇಶ ಹೆಗಡೆ ಮಾತ್ರ ನಗುನಗುತ್ತಲೇ ಇದ್ದರು.

ನಾವು ಆನಂದವಾಗಿ ಬದುಕುವುದು ಎಂದರೆ ನಮ್ಮ ಸುತ್ತಲಿನ ಚೇತನ-ಅಚೇತನ ಪರಿಸರವನ್ನು ಆನಂದವಾಗಿ, ಸೌಖ್ಯವಾಗಿ ಇಡುವುದು ಎಂಬ ಸರಳ ಸತ್ಯವನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು.

Read more...

May 06, 2009

ಒಂದು ಲೀವ್ ನೋಟ್

ಪ್ರಿಲ್ ೧೦ರಂದು ಶಾಲೆಯ ನೋಟಿಸ್ ಬೋರ್ಡಿನಲ್ಲಿ ‘ಪಾಸಾ ಫೇಲಾ’ ನೋಡಿದರೆ ಮುಗಿಯಿತು. ಮಾರ್ಕುಗಳನ್ನೂ ಹೇಳುವ ಕ್ರಮ ಇಲ್ಲ ! ಫೇಲಾಗುವ ಭಯ ಇರುವವರ್‍ಯಾರೂ ಬೆಳಗ್ಗೆ ಬರುತ್ತಿರಲಿಲ್ಲ. ಅವರು ಮಧ್ಯಾಹ್ನ ನಂತರ ಬಂದು ಇಣುಕಿ ನೋಡಿಕೊಂಡು ಹೋಗುವುದು. ಅಮ್ಮ ಇವತ್ತು ಮಾತ್ರ, ಮಗನ ಒತ್ತಾಯದಂತೆ ತಣ್ಣೀರಿನಲ್ಲೇ ಮಾವಿನ ಹಣ್ಣಿನ ಜ್ಯೂಸ್ ಮಾಡಿಟ್ಟು ಕಾಯುತ್ತಿದ್ದಾಳೆ ! ಮಗ ಎಲ್ಲೇ ಹೋದರೂ, ಏನೇ ಮಾಡಿದರೂ ಕಣ್ಣಿಟ್ಟಿರುತ್ತಿದ್ದ ಅಪ್ಪನಿಗೆ ಇವತ್ತು ಕ್ಯಾರೇ ಇಲ್ಲ ! ಆ ಬಿಸಿಲೇರಿರುವ ಮಧ್ಯಾಹ್ನ, ಮಕ್ಕಳು ಶಾಲೆಯಿಂದ ಹೊರಟರೆ ಲಂಗುಲಗಾಮೇ ಇಲ್ಲ. ಅವರು ಹೋದದ್ದೇ ದಾರಿ. ಒಂದುವಾರ ಬಿಟ್ಟು ಅಜ್ಜನಮನೆಗೆ ಹೋಗುವುದಿದೆ. ಮೈಸೂರಿನಲ್ಲಿರುವ ದೊಡ್ಡಮ್ಮನ ಮನೆಗೆ ಈ ಸಲ ಹೋಗುವುದೇ ಅಂತ ಅಮ್ಮ ಹೇಳಿದ್ದಾಳೆ. ಮಗಳಿಗೆ ಚೆಸ್ ಕಲಿಸಿಕೊಡುತ್ತೇನೆಂದು ಅಪ್ಪನೂ, ಈಜು ಕಲಿಸುತ್ತೇನೆಂದು ಮೇಲಿನ ಮನೆಯ ಚಿಕ್ಕಪ್ಪನೂ, ಸೈಕಲ್ ಕಲಿಸುತ್ತೇನೆಂದು ಕ್ಲಾಸ್‌ಮೇಟ್ ಹನೀಫನೂ ಮಾತುಕೊಟ್ಟಿದ್ದಾರೆ. ಬಿರು ಬೇಸಿಗೆಯ ಈ ರಜೆಯಲ್ಲಿ ಮಕ್ಕಳೂ ಹಣ್ಣಾಗುತ್ತಾರೆ .

ಆದರೀಗ ಬಿಸಿಲುಮಳೆಚಳಿಗಳೊಂದಿಗೆ ಕಾಲವೂ ಬದಲಾಗಿದೆ. ಬೇಸಿಗೆ ರಜೆ ಅಂದರೆ ಸಮ್ಮರ್ ಹಾಲಿಡೇಸ್. ಕಂಪ್ಯೂಟರ್ ಕ್ಲಾಸು, ಡ್ಯಾನ್ಸ್ ಕ್ಲಾಸು, ಎಕ್ಸ್‌ಪರ್ಟ್ ಕೋಚಿಂಗು ಕಡ್ಡಾಯ. ರಜೆಯನ್ನು ಮಕ್ಕಳು ಸದುಪಯೋಗಪಡಿಸುವುದು ಹೇಗೆ ಎಂಬ ಬಗ್ಗೆ ಹಲವು ಅಪ್ಪಅಮ್ಮಂದಿರ ಮಧ್ಯೆ ಗಂಭೀರ ಚರ್ಚೆಗಳು ನಡೆಯುತ್ತವೆ. ಶಾಲೆಯ ದಿನಗಳಲ್ಲಿ ಖರ್ಚಾದಷ್ಟೇ ದುಡ್ಡು ರಜೆಯಲ್ಲೂ ಖರ್ಚಾಗುತ್ತದೆ. ಅಪ್ಪ-ಅಮ್ಮ ಇಬ್ಬರೂ ದುಡಿಯಲು ಹೊರಟಿರುವಾಗ ಮಕ್ಕಳನ್ನು ಏನು ಮಾಡುವುದು, ತಮಗೊಂದು ತುಂಡು ಭೂಮಿಯೂ ಇಲ್ಲದಿರುವಾಗ ಮಗ ಚೆನ್ನಾಗಿ ಕಲಿತು ಸಂಪಾದಿಸಿ ಒಂದೆರಡು ಸೈಟು ಮಾಡುವಂತಾಗಲಿ, ರಜೆ ಅಂತ ಬೇಕಾಬಿಟ್ಟಿ ಉಂಡಾಡಿ ವ್ಯರ್ಥ ಮಾಡುವುದರಲ್ಲಿ ಏನರ್ಥ?...ಹೀಗೆ ನಾನಾ ಯೋಚನೆಗಳು. ಜತೆಗೆ ಹೈಸ್ಕೂಲಿಗೆಲ್ಲಿಗೆ ಕಳುಹಿಸುವುದು, ಯಾವ ಕಾಲೇಜಿಗೆ ಸೇರಿಸುವುದೆಂಬುದಂತೂ ದೊಡ್ಡ ಕಗ್ಗಂಟು. ಆಟದ ಸಮಯ ಈಗಲೂ ಇದೆಯಾದರೂ ಅಜ್ಜನಮನೆಯ ಕಲಿಕೆಯಲ್ಲಿರುವಷ್ಟು ವಿರಾಮ ಇಲ್ಲ. ದುಡ್ಡು ಕೊಟ್ಟ ಮೇಲೆ ಕಲಿಯದೆಯೂ ಇರುವಂತಿಲ್ಲ! ಹೊತ್ತುಹೊತ್ತಿಗೆ ಮಜ್ಜಿಗೆ- ಶರಬತ್ತು ಕುಡಿಯುವ, ಮಾವಿನಕಾಯಿಗೆ ಕಲ್ಲು ಬೀಸುವ, ಅಜ್ಜಿ ಕತೆ ಕೇಳುವ, ತೋಟದಲ್ಲಿ ಓಡಾಡುವ ಗಮ್ಮತ್ತು ಇಲ್ಲ.

ಛೆ ಅಷ್ಟರಲ್ಲಿ ರಜವೇ ಮುಗೀತಲ್ಲ ! ಈ ಮಕ್ಕಳು ಬೆಳಿಯೋದೂ ರಜೆ ಮುಗಿಯೋದೂ ಗೊತ್ತೇ ಆಗಲ್ಲ . ನಮ್ಮ ಆಫೀಸಲ್ಲಂತೂ ಈಗ ಒಂದು ರಜೆ ಹಾಕೋದೂ ಭಾರೀ ಕಷ್ಟ . ಹತ್ತು ದಿನ ರಜಾ ಹಾಕಿ ಉತ್ತರ ಭಾರತ ಪುಣ್ಯ ಕ್ಷೇತ್ರ ದರ್ಶನ ಮಾಡಬೇಕೂಂತ ವರ್ಷಗಳಿಂದ ಆಸೆ. ಈ ಜನ್ಮದಲ್ಲಿ ಆಗಲ್ವೇನೋ. ಇ ಮೇಲ್ ಮಾಡಿ, ನೋಡೋಣ ಅಂತಾರೆ. ಏನ್ ನೋಡೋದು, ನನ್ ಸೆಕ್ಷನ್ ದೀಪಾಗೆ ಕೇಳಿದಾಗೆಲ್ಲ ರಜಾ ಸಿಗತ್ತೆ. ನನಗೆ ಒಂದು ದಿನ ರಜಾ ಸಿಕ್ಕಿದ್ರೆ ಹೆಂಡ್ತಿ ಜತೆ ಸಿಟ್ಟು ಮಾಡ್ಕೊಂಡು ಕೂತಿರ್‍ತೀನಿ !...ಹೂಂ.

Read more...

April 03, 2009

ಕಲಾಕ್ಷೇತ್ರದಲ್ಲಿ ಪುಕ್ಕಟೆ ಹಿಂಸೆ

ಡಾಕ್ಟರೇಟ್‌ಗಳು-ಪ್ರಶಸ್ತಿಗಳು ನಾಚಿಕೆಗೇಡಿನ ವಸ್ತುಗಳಾಗಿರುವುದು ಈಗ ಮಾಮೂಲಿ ಸಂಗತಿ. ಅವುಗಳ ಜತೆಗೆ ಸಭಾ ಕಾರ್ಯಕ್ರಮಗಳೂ ಸೇರಿಕೊಳ್ಳುತ್ತಿರುವುದು ಮತ್ತೊಂದು ಬೇಸರದ ವಿಷಯ. ಕೇವಲ ಕಾಟಾಚಾರಕ್ಕಾಗಿ (ಕ್ಲೀಷೆಯಾದರೂ ಎಷ್ಟೊಳ್ಳೆಯ ಪದ-ಆಚಾರದ ಕಾಟ !) ನಡೆಯುವ ಈ ಸಭಾ ಕಾರ್ಯಕ್ರಮಗಳು ಪ್ರಚಾರದ ಮಾಧ್ಯಮ ವರದಿಗಾಗಿ, ಪ್ರಾಯೋಜಕರ ಸಂತೃಪ್ತಿಗಾಗಿ, ಅತಿಥಿಗಳ ಸಂತೋಷಕ್ಕಾಗಿ ಅತ್ಯಗತ್ಯ ಎನಿಸಿವೆ. ಆದರೆ ಅಂತಹ ಕಾರ್ಯದಲ್ಲೂ ಕನಿಷ್ಠ ಪ್ರಾಮಾಣಿಕತೆ ಕಾಣಿಸಬೇಕಲ್ಲ.

ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆಯ ಅಧ್ಯಕ್ಷರು, ವೇದಿಕೆಯಲ್ಲಿರುವ ಗಣ್ಯರ ಜತೆ ಕೊನೆಯ ಕುರ್ಚಿಯಲ್ಲಿ ಕೂರುವುದನ್ನಷ್ಟೇ ನಮ್ಮೂರಿನಲ್ಲಿ ನೋಡಿದ್ದವನು ನಾನು. ಕಳೆದ ಶುಕ್ರವಾರ (ಏ.೩) ಕಲಾಕ್ಷೇತ್ರದಲ್ಲಿ, ಸಂಸ್ಥೆಯ ಅಧ್ಯಕ್ಷರು ಅತಿಥಿಗಳ ಮಧ್ಯೆ ಕುಳಿತಿದ್ದರು. ಕಾರಣ ಇಷ್ಟೆ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ಎದುರಿರುವ ನೂರಾರು ಜನರ ಕಣ್ಣು ತಪ್ಪಿಸಿದವರಂತೆ ಕಾರ್ಯದರ್ಶಿಗಳೂ, ಮತ್ತೊಬ್ಬ ಪದಾಧಿಕಾರಿಯೂ ಬಂದು ಕೊನೆಯ ಆಸನಗಳಲ್ಲಿ ವಿರಾಜಮಾನರಾದರು ! ಪ್ರಾಸ್ತಾವಿಕ ಭಾಷಣ ಆರಂಭ. ಅದ್ಭುತ, ಮಹತ್ವದ, ಅತ್ಯುತ್ತಮ, ಅಪ್ರತಿಮ ಎಂಬ ಪದಗಳೆಲ್ಲ ಟೊಳ್ಳು ಎನ್ನುವುದನ್ನು ಸಾಬೀತುಪಡಿಸುವಂತೆ, ಅವನ್ನೆಲ್ಲ ಲೀಲಾಜಾಲವಾಗಿ ಎತ್ತಿ ಒಗೆಯುತ್ತಿದ್ದ ಪರಿ ನೋಡಿದರೆ ಕನ್ನಡಿಗರು ದಂಗಾಗಬೇಕು. ಆಗ ರಂಗಭೂಮಿಯ ಹಿರಿಯ ಕಲಾವಿದೆ ಪ್ರಮೀಳಾ ಗುಡೂರರಿಗೆ ಸನ್ಮಾನ. (ಅವರೀಗ 'ಮುತ್ತಿನ ತೋರಣ’ ಟಿವಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ) 'ಈ ಅಪ್ರತಿಮ ಕಲಾವಿದೆಗೆ ನಾವು ಕೇವಲ ಬೊಕ್ಕೆ , ಹಣ್ಣು ಕೊಟ್ಟು ಕಳುಹಿಸುತ್ತಿಲ್ಲ. ನಮ್ಮ ಉದ್ಯಮಿಗಳೂ ಸಮಾಜಸೇವಕರೂ ಆದ ರೆಡ್ಡಿಯವರು ಹತ್ತು ಸಹಸ್ರ (ಸಹಸ್ರ- ಸಾವಿರಗಳ ಮಧ್ಯೆ ಕನ್‌ಫ್ಯೂಸಾಗಿ, ತಡವರಿಸಿ!), ಹತ್ತು ಸಾವಿರ ರೂ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ’ ಅಂತ ಘೋಷಣೆಯಾಯಿತು. ಆ ಕಲಾವಿದೆಯ ಮೊಮ್ಮಗನಂತಿರುವ ಸಮಾಜಸೇವಕರೂ ವೇದಿಕೆಯಲ್ಲೇ ಕುಳಿತಿದ್ದರಲ್ಲ, ಅವರೆದ್ದು ಬಂದು ಆಕೆಯನ್ನು ಸನ್ಮಾನಿಸಿದ್ದೂ ಆಯಿತು.

ನಂತರ ಭಾಷಣಗಳು ಶುರುವಾದವು. ಮಧ್ಯೆ ಕುಳಿತ ಕರಿಬಸವಯ್ಯನವರಂತೂ ತೆರೆಯ ಹಿಂದಿದ್ದವರಿಗೆ-ದೂರದಲ್ಲಿ ಲೈಟಿಂಗ್ ಮಾಡುತ್ತಿದ್ದವರಿಗೆ-ಸಭೆಯ ಮಧ್ಯದಲ್ಲಿದ್ದ ಯಾರೋ ಪರಿಚಿತರಿಗೆ-ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದವರಿಗೆ, ಹೀಗೆ ಎಲ್ಲೆಂದರಲ್ಲಿ ಕೈಸನ್ನೆ ಮಾಡುವುದೂ, ಪಿಸುಗುಟ್ಟುವುದೂ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಜತೆಗೆ ಭಾಷಣ ಮಾಡುತ್ತಿರುವವರ ಕಡೆ ನೋಡಿ ಸಮಯಪ್ರಜ್ಞೆಯಿಂದ ಅಹುದಹುದೆಂದು ತಲೆಯಾಡಿಸುತ್ತಲೂ ಇದ್ದರು! ಇನ್ನು, ಭಾಷಣಕಾರರ ಒಂದು ವಾಕ್ಯ ಬಿಟ್ಟು ಇನ್ನೊಂದು ವಾಕ್ಯಕ್ಕೆ ಎಲ್ಲಿ, ಹೇಗೆ ಸಭಿಕರು ಚಪ್ಪಾಳೆ ಹೊಡೆಯಬೇಕೆಂದು, ತಾವೇ ಮುಂದಾಗಿ ಹೊಡೆದು ತೋರಿಸುತ್ತಿದ್ದವರು ಕರಿಬಸವಯ್ಯ ಮತ್ತು ಅತಿಥಿಯಾಗಿದ್ದ ನಟ ನಾಗರಾಜಮೂರ್ತಿಗಳು. (ಅಶ್ವತ್ಥರ ಗಾಯನ ಕಾರ್ಯಕ್ರಮದಲ್ಲಿ ತಾಳ ಹೊಂದಿಸಲು ಇಬ್ಬರು ಸಭಿಕರಿಗೆ ಬೆನ್ನು ಹಾಕಿ ಕೈಯಾಡಿಸುತ್ತಾ ನಿಂತಿರುವುದನ್ನು ನೋಡಿರುತ್ತೀರಲ್ಲ ಹಾಗೆ !) ತಾನು ಬೆಂಗಳೂರನ್ನು ಮೊದಲು ನೋಡಿದ್ದೇ ಬಹಳ ಇತ್ತೀಚೆಗೆ ಎಂಬ ಗುಡೂರರ ಮುಗ್ಧ ಮಾತಿಗೂ ಇವರು ಮೊದಲಾಗಿ ಕೈ ತಟ್ಟಿ, ಎಲ್ಲರೂ ಚಪ್ಪಾಳೆ ಹೊಡೆಯಲು ಸೂಚಿಸಿದರು! ಇನ್ನು ಅತಿಥಿಗಳಿಗೆ ಹಾರ ಹಾಕಿ ಸ್ಮರಣಿಕೆ ಕೊಟ್ಟಾಗಲಂತೂ ಕರಿಬಸವಯ್ಯರು ಕಣ್ಣಗಲಿಸಿಕೊಂಡು ಫೋಸು ನೀಡುತ್ತಿದ್ದರಾದರೂ, ಅಲ್ಲಿ ಯಾವ ಫೋಟೊಗ್ರಾಫರೂ ಇಲ್ಲದ್ದು ಒಂದೆರಡು ಕ್ಷಣಗಳಲ್ಲಿ ಅರಿವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರು ! ಸಭಾ ಕಾರ್ಯಕ್ರಮದ ಕೊನೆಗೆ, ಹೆಸರು ಘೋಷಿಸಲು ಇಚ್ಛಿಸದ ವ್ಯಕ್ತಿಯೊಬ್ಬರು, ಕಲಾವಿದೆ ಗುಡೂರರಿಗೆ ಹತ್ತು ಸಾವಿರ ರೂ. ಕೊಡಲಿದ್ದಾರೆಂದು ಪ್ರಕಟಿಸಲಾಯಿತು. ವೇದಿಕೆಯಲ್ಲಿದ್ದ ಸಮಾಜಸೇವಕರಿಗೆ ಇದಕ್ಕಿಂತ ದೊಡ್ಡ ಮಂಗಳಾರತಿ ಬೇರೆ ಬೇಕಾ?!

ಅಂತೂ ಏಳೂ ಮುಕ್ಕಾಲರ ಹೊತ್ತಿಗೆ, ಶಿವರಾಮ ಕಾರಂತರ 'ಮೈಮನಗಳ ಸುಳಿಯಲ್ಲಿ’ ಕಾದಂಬರಿ ನಾಟಕವಾಗಿ ರಂಗಕ್ಕೆ ಬಂತು. ೨೦ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯ ನಾಟಕಕ್ಕೆ, ನಿರ್ದೇಶಕರಾದ ಕೆ.ಎಸ್.ಡಿ.ಎಲ್.ಚಂದ್ರುರವರು ರೆಕಾರ್ಡೆಡ್ ಸಂಗೀತ ಬಳಸಿದ್ದರು ಅಂದರೆ ನೀವು ನಂಬಬೇಕು. ಅದೂ ದೃಶ್ಯದ ಕೊನೆಗೆ ಒಂಚೂರು. ಎರಡು ಪಾತ್ರಗಳ ಸಂಭಾಷಣೆ. ಅದು ನಿಂತಾಗಲಂತೂ ಅಸಹನೀಯ ಮೌನ. ನಾನಂತೂ ಆ ಕಾದಂಬರಿ ಓದದವನು. ಅದನ್ನು ಓದಿ ನಾಟಕ ನೋಡಹೋದವರನ್ನಂತೂ ಆ ಕಾರಂತರೇ ಕಾಪಾಡಬೇಕು. ಮಧ್ಯೆ ಎಲ್ಲೋ ಕ್ಯಾಸೆಟ್ ಜಂಗ್‌ಜಂಗ್ ಎಂದು ಸದ್ದು ಮಾಡಿ ನಿಲ್ಲುವುದು, ಕತ್ತಲಾಗಿ ಬೆಳಕು ಚೆಲ್ಲಿದ ಮೇಲೂ ನಟರಿಗೆ ಗ್ರೀನ್‌ರೂಂ ದಾರಿ ತಿಳಿಯದಿರುವುದು, ದಡಬಡ ಸದ್ದಾಗುವುದು...ಹೀಗೆ ನಿರಂತರ ಆಭಾಸ. ಈ ಎಲ್ಲದರ ಮಧ್ಯೆ ಕಲಾಕ್ಷೇತ್ರದಲ್ಲಿ ತುಂಬಿದ್ದ ಜನರನ್ನು ಕೊಂಚವಾದರೂ ಮುದಗೊಳಿಸಿದ್ದು, ಕಾರಂತರ ಕಾದಂಬರಿಯ ಸಾಲುಗಳು ಮಾತ್ರ.

ಪುಕ್ಕಟೆ ನಾಟಕಕ್ಕೆ ಹೋಗಿ, ಈ ಪರಿ ರೂಪಾಂತರದ ಅವಾಂತರಗಳನ್ನು ನೋಡಿದ್ದು ಇದೇ ಮೊದಲು. ಹಿಂದಿನ ದಿನ ನಡೆದ 'ಬಡೇಸಾಬು ಪುರಾಣ’ ನಾಟಕ ಪರವಾಗಿಲ್ಲ, ಚೆನ್ನಾಗಿತ್ತು- ಎಂಬ ಸ್ನೇಹಿತರ ಮಾತು ಕೇಳಿ ನನ್ನಂಥವರು ಹೋದರೆ ಹೀಗೂ ಆಗೋದಾ? ಅಂತೂ ಸಭಾ ಕಾರ್ಯಕ್ರಮ-ನಾಟಕದ ಎಲ್ಲ ಅಪಸವ್ಯಗಳ ನಡುವೆ, ಕರಿಬಸವಯ್ಯರ ಹೃದಯದಿಂದ ಬಂದ ಒಂದೇಒಂದು ಸತ್ಯವಾದ ಮಾತು- 'ನೀವು ಬೇಗ ಬೇಗ ಚಪ್ಪಾಳೆ ತಟ್ಟಿದ್ರೆ ಸಭಾ ಕಾರ್ಯಕ್ರಮ ಬೇಗ ಮುಗೀತದೆ!’

Read more...

March 27, 2009

ರಾಕ್ಷಸ ಟ್ರಕ್ ಹಸಿದಿದೆ

ದ್ದುದ್ದ ಚಾಚಿಕೊಂಡಿರುವ ನುಣ್ಣನೆ ರಸ್ತೆ. ಮನುಷ್ಯರ ವಸತಿ-ವಾಹನಗಳ ಸುಳಿವೇ ಅಪರೂಪ. ಫಿಯೆಟ್‌ನಂತಿರುವ ಕೆಂಪು ಕಾರಿನಲ್ಲಿ, ವ್ಯಾಪಾರದ ಕೆಲಸ ನಿಮಿತ್ತ ಹೊರಟಿದ್ದಾನೆ ಡೇವಿಡ್ ಮೇನ್. ರೇಡಿಯೊದಲ್ಲಿ ಯಾರದ್ದೋ ಸಂಭಾಷಣೆಗೆ ನಗುತ್ತಾ ಅವನದ್ದು ನಿರಾಯಾಸ ಚಾಲನೆ. ಅದ್ಯಾವುದೋ ಒಂದು ಲಡಕಾಸು ಲಾರಿ, ೪೦ ಟನ್ ಭಾರದ್ದು, ೧೮ ಚಕ್ರಗಳದ್ದು ! ಮಾರ್ಗ ಮಧ್ಯೆ ಸಿಕ್ಕಿದೆ. ತುಕ್ಕು ಹಿಡಿದ ದೊಡ್ಡ ಟ್ಯಾಂಕರ್ ಹೊಂದಿರುವ ಅದರಲ್ಲಿ Highly Inflammable ಎಂಬ ಬರೆಹವೂ, ಮೂರು ನಂಬರ್ ಪ್ಲೇಟ್‌ಗಳೂ ! ಫ್ರಂಟ್ ಎಂಜಿನ್ ಹೊಂದಿರುವ ಅದು, ಎದುರಿರುವ ಕೊಳವೆಯಲ್ಲಿ ರೈಲಿನಂತೆ ಬುಸುಬುಸು ಹೊಗೆ ಬಿಡುತ್ತಿದೆ. ಕಾರಿಗೆ ಸರಿಯಾಗಿ ದಾರಿಯೂ ಬಿಡಲೊಲ್ಲದು. ‘ಥೂ, ಇವನಿಗೆ ಗಾಡಿ ಓಡಿಸಲೂ ಬರುವುದಿಲ್ಲ’ ಎಂಬ ಗೊಣಗಾಟದಿಂದ ಆರಂಭವಾದ ಡೇವಿಡ್‌ನ ಅಸಹನೆ, ನಿಧಾನ ಸ್ಪರ್ಧೆಯಾಗಿ ಮಾರ್ಪಡುತ್ತಿದೆ. ಈತ ಕಾರು ನಿಲ್ಲಿಸಿದರೆ ನಿಲ್ಲುವ, ಹೊರಟರೆ ದಾರಿಗಡ್ಡ ಬರುವ ಲಾರಿ ಅದು. ಏನೋ ಆ ಡ್ರೈವರು ಆಟ ಆಡುತ್ತಿದ್ದಾನೆಂದು ತಿಳಿದು ಥ್ರಿಲ್ಲಾಗುತ್ತಿದ್ದರೆ ನಿಧಾನವಾಗಿ ಅದು ಆತಂಕಕ್ಕೆಡೆ ಮಾಡಿದೆ. ಸಮತಟ್ಟು ರಸ್ತೆಯಲ್ಲಂತೂ ಕಾರು ೮೦ಕಿಮೀ ವೇಗದಲ್ಲಿ ಸಾಗಿದರೂ, ಘ್ರಾ.....ಅನ್ನುತ್ತಾ ಬಿಡದೆ ಬೆಂಬತ್ತುತ್ತಿದೆ ಆ ದೈತ್ಯ ಟ್ರಕ್. ಪೊಲೀಸರಿಗೆ ಕರೆ ಮಾಡಲು, ರಸ್ತೆ ಪಕ್ಕದ ಟೆಲಿಫೋನ್ ಬೂತ್ ಹೊಕ್ಕರೆ, ಅದನ್ನೇ ಧ್ವಂಸ ಮಾಡುತ್ತಿದೆ. ಮುಂದೆ ಹೋಗೆಂದು ಆಗೀಗ ಲಾರಿ ಡ್ರೈವರ್ ಕೈ ಬೀಸುತ್ತಾನೆ. ಓವರ್‌ಟೇಕ್ ಮಾಡಹೊರಟರೆ...ಅಬ್ಬಾ ಜುಂಮ್....! ಆ ಟ್ರಕ್ ಚಾಲಕ, ಡೇವಿಡ್‌ನನ್ನು ಕೊಲ್ಲಲೆಂದೇ ಹುಟ್ಟಿದವನಂತಿದ್ದಾನೆ. ಈ ಪಯಣ ಎಲ್ಲಿವರೆಗೆ? ಸ್ಟೀವನ್ ಸ್ಪಿಲ್‌ಬರ್ಗ್ ಎಂದರೆ ಎಲ್ಲರಿಗೂ ನೆನಪಾಗದಿರಬಹುದು, ಆದರೆ ಆತನ ನಿರ್ದೇಶನದಲ್ಲಿ ೧೯೯೩ರಲ್ಲಿ ಬಿಡುಗಡೆಯಾದ ‘ಜುರಾಸಿಕ್ ಪಾರ್ಕ್’ ಗೊತ್ತಿರಲೇಬೇಕು. ಅಂತಹ ನಿರ್ದೇಶಕ ಸ್ಪಿಲ್‌ಬರ್ಗ್ ತನ್ನ ೨೪ನೇ ವಯಸ್ಸಿನಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ‘ಡ್ಯುಯಲ್’(DUEL). ೧೯೭೧ರಲ್ಲಿ ಬಿಡುಗಡೆಯಾದ ಇದೊಂದು ಕಾರು-ಲಾರಿಯ ದ್ವಂದ್ವಯುದ್ಧ. ಆಗಲೇ ಕಿರು ಚಿತ್ರಗಳಿಗೆ ನಿರ್ದೇಶನ-ಸಹ ನಿರ್ದೇಶನ ಮಾಡಿದ್ದ. ಟಿವಿ ಸೀರಿಯಲ್‌ಗಳಿಗೆ ಕೆಲಸ ಮಾಡಿದ್ದ ಸ್ಪಿಲ್‌ಬರ್ಗ್, ಡ್ಯುಯೆಲ್ ಚಿತ್ರದ ಬಳಿಕ, ಹಾಲಿವುಡ್‌ನ ಮಹೋನ್ನತ ನಿರ್ದೇಶಕ-ನಿರ್ಮಾಪಕನಾಗಿ ರೂಪುಗೊಳ್ಳುತ್ತ ಹೋದ. ರಾಶಿ ಸಂಪತ್ತಿನ ಒಡೆಯನಾಗಿ ಮೆರೆಯತೊಡಗಿದ. ಮೂರು ಆಸ್ಕರ್ ಪ್ರಶಸ್ತಿಗಳನ್ನೂ ಗೆದ್ದುಕೊಂಡ. ಡ್ಯುಯೆಲ್ ಅನ್ನು ಟಿವಿಗಾಗಿ ನಿರ್ಮಿಸಿದ್ದರೂ ಅದು ಕೆಲವೆಡೆ ಥಿಯೇಟರ್‌ಗಳಲ್ಲೂ ಬಿಡುಗಡೆಯಾಗಿ ಸಿನಿಮಾಸಕ್ತರ ಗಮನ ಸೆಳೆಯಿತು.

Fear is the driving force ಎನ್ನುವ ಅಡಿ ಶೀರ್ಷಿಕೆಯ, ಈ ಸಿನಿಮಾ ರಿಚರ್ಡ್ ಮ್ಯಾತ್‌ಸನ್‌ನ ಸಣ್ಣ ಕತೆ ಆಧರಿಸಿದ್ದು. ಚಿತ್ರಕತೆಯನ್ನು ಬರೆದವನೂ ಅವನೇ. ಅಷ್ಟಕ್ಕೂ ಇದರಲ್ಲಿ ಅಂಥಾ ಕತೆಯೇನೂ ಇಲ್ಲ. ಮಾತೂ ತೀರ ಕಡಿಮೆ. ಅಷ್ಟಲ್ಲದೆ ಹಾಡು, ಹೀರೋಯಿನ್ ಇಲ್ಲದೆಯೂ ಒಂದೂವರೆ ಗಂಟೆ ಕಾಲ, ನೋಡುಗ ಅತ್ತಿತ್ತ ಮಿಸುಕದಂತೆ ಮಾಡಬಲ್ಲ ಶಕ್ತಿ ಈ ಸಿನಿಮಾಕ್ಕಿದೆ. ಇದರಲ್ಲಿ ಕಾರಿನ ಡ್ರೈವರ್‌ಗೆ ಪ್ರತಿ ಪಾತ್ರವಾಗಿ ಕಾಣಿಸಿಕೊಳ್ಳುವ ಟ್ರಕ್‌ನ್ನು ಈಗಲೂ ಸುರಕ್ಷಿತವಾಗಿ ಕಾಪಿಡಲಾಗಿದೆ. ಆ ಬಗ್ಗೆ ವಿವರ ತಿಳಿಯಬೇಕಾದರೆ, ಫೋಟೊ ನೋಡಬೇಕಾದರೆ www.stlouisdumptrucks.com/Duel/index.html ಇಲ್ಲಿಗೆ ಹೋಗಬಹುದು.

ಕಾರು-ಟ್ರಕ್‌ಗಳ ರೇಸ್‌ನ ಈ ಸಿನಿಮಾಕ್ಕೆ ಅತ್ಯಂತ ನಿಖರವಾಗಿ ಕ್ಯಾಮೆರಾ ಹಿಡಿದವನು ಜ್ಯಾಕ್ ಎ. ಮಾರ್ತಾ . ೨೪ ವರ್ಷದ ನಿರ್ದೇಶಕನಿಗೆ ೬೭ ವರ್ಷದ ಕ್ಯಾಮೆರಾಮ್ಯಾನ್. ಒಂದೇಒಂದು ಶಾಟ್ ಕೂಡಾ ವ್ಯರ್ಥ ಅನ್ನಿಸದಂತೆ, ಸಿನಿಮಾದ ಬಿಗಿಯನ್ನು ಕಾಪಾಡಿಕೊಂಡದ್ದರಲ್ಲಿ ಜ್ಯಾಕ್ ಪಾಲು ದೊಡ್ಡದಿರಬಹುದು. ತೆರೆಯಲ್ಲಿ ಕಾರಿನ ಓಟ ನೋಡುತ್ತಾ ಕೊಂಚ ತಲೆತಿರುಗಿದಂತಾದರೆ ಈತನನ್ನು ನೆನೆಯಬೇಕು ! ಚಿತ್ರದ ಬಹುಭಾಗ ವೇಗದ ಚಲನೆಯೇ ಇರುವುದರಿಂದ, ಚಲಿಸುವ ಬಿಂಬಗಳನ್ನು ನಿಖರವಾಗಿ ಹಿಡಿಯುವುದು ಸುಲಭವೇನಲ್ಲ. ದಾರಿ ಮಧ್ಯೆಯ ಹೋಟೆಲ್‌ನಲ್ಲಿ ಡೇವಿಡ್ ಕುಳಿತು, ಟ್ರಕ್ ಚಾಲಕನನ್ನು ಹುಡುಕುವ ದೃಶ್ಯಗಳಲ್ಲಿ, ಮಾರ್ತಾ ಕ್ಯಾಮೆರಾ ನಮ್ಮ ಎದೆ ಬಡಿತವನ್ನು ಹಿಡಿಯುತ್ತದೆ. ಎಷ್ಟು ಬೇಕೋ ಅಷ್ಟೇ, ಎಲ್ಲಿ ಬೇಕೋ ಅಲ್ಲೇ, ಕ್ಯಾಮೆರಾ ಒಡ್ಡಿದ್ದಾನೆ ಆತ. ಕೊನೆಯ ದೃಶ್ಯವನ್ನಂತೂ ಟೈಟಾನಿಕ್ ತೋರಿಸಿದ ಹಾಗೆ, ಒಂದು ದೈತ್ಯಾಕಾರವನ್ನು ಚಿತ್ರಿಸಿರುವ ರೀತಿ ಆತನ ಸಾಮರ್ಥ್ಯದ ಸಿದ್ಧಿಯಂತಿದೆ.

ಡೇವಿಡ್ ಪ್ರಯಾಣ ಹೊರಟಿರುವ ಕಾರಿನ ರೇಡಿಯೊದಲ್ಲಿ ಯಾವುದೋ ಕುಟುಂಬದ ಸಮಸ್ಯೆಯ ಬಗ್ಗೆ ಪ್ರಶ್ನೋತ್ತರ ನಡೆಯುತ್ತಿದೆ. ಗಂಡಸೊಬ್ಬ ಫೋನ್ ಮಾಡಿ, ತಾನು ಹೊರಗಿನ ಕೆಲಸವನ್ನೆಲ್ಲ ಹೆಂಡತಿಗೆ ಬಿಟ್ಟು ಮನೆವಾರ್ತೆಯನ್ನಷ್ಟೇ ನೋಡಿಕೊಳ್ಳುತ್ತಿದ್ದೇನೆ. ಈಗ ನೆರೆಹೊರೆಯವರೆಲ್ಲ ಆಡಿಕೊಳ್ಳುತ್ತಿದ್ದಾರೆ ಏನು ಮಾಡಲಿ ಅನ್ನುತ್ತಿದ್ದಾನೆ. ಆದರೆ ಡೇವಿಡ್ ದಾರಿ ಮಧ್ಯೆ ಪೆಟ್ರೋಲ್ ಬಂಕ್ ಬೂತ್‌ನಿಂದ ಮನೆಗೆ ಫೋನ್ ಮಾಡಿದರೆ, ಹೆಂಡತಿಗೆ ಈತನ ಮೇಲೆ ಸಿಟ್ಟು. ನೀನು ಪಾರ್ಟಿಯೊಂದರಲ್ಲಿ ಅವಮಾನವಾದಾಗ ಗಂಡುಗಲಿಯಾಗಿ ನಡೆದುಕೊಳ್ಳಲಿಲ್ಲ, ರೇಪ್ ಮಾಡೋದಕ್ಕೆ ಮಾತ್ರ ಮನೆಗೆ ಬರ್‍ತೀಯ- ಅಂತ ಸಿಡಿಮಿಡಿಗೊಳ್ಳುತ್ತಾಳೆ. ಇಲ್ಲ ಸಮಯಕ್ಕೆ ಸರಿಯಾಗಿ ಖಂಡಿತಾ ಬರ್‍ತೀನಿ ಅಂತ ಆಶ್ವಾಸನೆ ಕೊಟ್ಟು ಮತ್ತೆ ಡ್ರೈವಿಂಗ್ ಶುರು ಮಾಡಿದ್ದಾನೆ. ರಾಕ್ಷಸ ಟ್ರಕ್ ಹಸಿದಿದೆ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP