February 13, 2009

ಮನೆ ಬದಲಾಗಿದೆ ಮನಸ್ಸಲ್ಲ !


ಚಂಪಕಾವತಿಗೆ ಭೇಟಿ ಕೊಡುವವರೇ, ಪ್ರತಿಕ್ರಿಯಿಸುವವರೇ ಮತ್ತು ಓದುಗರೇ !
ನಿಮ್ಮ ಕಣ್ಣಿಗೆ, ಮನಸ್ಸಿಗೆ ಮತ್ತಷ್ಟು ಹಿತವಾಗಿ, ಏಕತಾನತೆ ಮುರಿಯಲೋಸುಗ ಈ ಬ್ಲಾಗ್ ಮನೆಯ ವಿನ್ಯಾಸ ಬದಲಿಸಲಾಗಿದೆ. ಎಂದಿನಂತೆ ಬನ್ನಿ, ಸುತ್ತಾಡಿ. ಹ್ಯಾಪಿ ವ್ಯಾಲಂಟೈನ್ಸ್ ಡೇ.

Read more...

February 03, 2009

ಗುಣಯುತನಿಗೆ ಮಂಗಲ ಪದ್ಯ

ಯಾವುದೇ ಕ್ಷೇತ್ರವನ್ನು ಜೀವನ್ಮರಣದ ಪ್ರಶ್ನೆಯಾಗಿ ಆರಿಸಿಕೊಂಡಿರುವವರಿಗೆ ಇದೊಂದು ತರಹದ ಇಚ್ಛಾಮರಣ. ಆದರೆ ಇಷ್ಟದೇವತೆಗಳು ಹೀಗೆ ಅಚಾನಕ್ಕಾಗಿ ಎದ್ದು ನಡೆದರೆ ಅದನ್ನು ಸಹಿಸಿಕೊಳ್ಳುವುದು ಪ್ರಿಯರಾದವರಿಗೆ ತೀರ ಕಷ್ಟ. ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೊನ್ನೆಮೊನ್ನೆ ಹೇಳಿದ್ದರು- 'ಹಾಡು ಹಾಡುತ್ತಲೇ ಜೀವ ತೊರೆಯುವುದು ನನ್ನ ಆಸೆ'. ಫೆ.೩ರ ಮುಂಜಾನೆ ಹೀಗೆ ರಂಗದಿಂದಲೇ ನಿರ್ಗಮಿಸಿರುವ ಶಂಭು ಹೆಗಡೆ, ಯಕ್ಷಗಾನದ ದಿಗ್ದರ್ಶಕರಲ್ಲಿ ಒಬ್ಬರು. ಯಕ್ಷಗಾನ ತಾಳಮದ್ದಲೆಗೆ ಎಲ್ಲೆಡೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟವರು ಶೇಣಿ ಗೋಪಾಲಕೃಷ್ಣ ಭಟ್ಟರಾದರೆ, ಯಕ್ಷಗಾನ ಬಯಲಾಟಗಳಿಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟವರು ಶಂಭು ಹೆಗಡೆ.
(೧೯೭೦ರ ದಶಕದಲ್ಲಿ ಬಭ್ರುವಾಹನನಾಗಿ ಶಂಭು ಹೆಗಡೆ )
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ, ಯಕ್ಷಗಾನದ ಒಂದು 'ಘರಾನಾ'. ತಂದೆ ಶಿವರಾಮ ಹೆಗಡೆ, ಅಣ್ಣ ಮಹಾಬಲ ಹೆಗಡೆ ಶ್ರೇಷ್ಠ ಕಲಾವಿದರಾಗಿದ್ದರೂ, ಶಂಭು ಹೆಗಡೆಯವರೂ ಸೇರಿದಂತೆ ಮೂವರೂ ತಮ್ಮ ತಮ್ಮ ಅನನ್ಯತೆಯನ್ನು ಸಾಧಿಸಿಕೊಂಡವರೇ. ಹಿರಿಯ ನೃತ್ಯ ಕಲಾವಿದೆ ಮಾಯಾ ರಾವ್ ಶಿಷ್ಯರಾಗಿ, ಭರತನಾಟ್ಯ-ಕಥಕ್ ನೃತ್ಯ ಶೈಲಿಗಳನ್ನೂ ಅರಿತುಕೊಂಡು, ಯಕ್ಷಗಾನದ ರುಚಿ ಕೆಡದಂತೆ ಅದನ್ನು ಬಳಸಿಕೊಂಡವರು. ತಮ್ಮ ಮೇಳವನ್ನು ಅಮೆರಿಕ, ಸಿಂಗಾಪುರ, ಮಲೇಷಿಯಾ, ಮಯನ್ಮಾರ್, ಪಿಲಿಪೈನ್ಸ್ ಇತ್ಯಾದಿ ದೇಶಗಳಿಗೆ ಒಯ್ದವರು. 'ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದವರು. ೧೯೮೬ರಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನೂ ಆರಂಭಿಸಿದರು. ಶಿವರಾಮ ಹೆಗಡೆ-ಶಂಭು ಹೆಗಡೆ, ಈಗ ಮಗ ಶಿವಾನಂದ ಹೆಗಡೆ ಹೀಗೆ ಮೂರು ತಲೆಮಾರುಗಳನ್ನು ದಾಟಿ ಹರಿಯುತ್ತಿರುವ ಕಲಾ ಪ್ರವಾಹ ಇದು.

ಅಣ್ಣ ಮಹಾಬಲ ಹೆಗಡೆಯವರ ಮೂಲಕ ರಂಗಕ್ಕೆ ಬಂದವರು ಶಂಭು ಹೆಗಡೆ. ೧೯೩೪ರಲ್ಲಿ ತಂದೆ ಶಿವರಾಮ ಹೆಗಡೆಯವರು ಆರಂಭಿಸಿದ 'ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ೧೯೭೩ರಲ್ಲಿ ಶಂಭು ಹೆಗಡೆ ಪುನರ್ ರಚಿಸಿದರು. ಸುಮಾರು ೧೯೮೫ರಿಂದ ಸೀಮಿತ ಕಾಲಾವಧಿಯ (ಮೂರ್‍ನಾಲ್ಕು ಗಂಟೆ) ಯಕ್ಷಗಾನ ಪ್ರದರ್ಶನಗಳನ್ನು ಮೊತ್ತಮೊದಲು ಪ್ರಯೋಗ ಮಾಡಿದವರೂ ಇವರೇ. ಯಕ್ಷಗಾನಕ್ಕೆ ಅರ್ಧ ಚಂದ್ರಾಕೃತಿಯ ವೇದಿಕೆಯೂ ಇವರ ಕೊಡುಗೆಯೇ. ದಕ್ಷಿಣಕನ್ನಡಕ್ಕೂ ಬಡಗುತಿಟ್ಟಿನ ಆಟದ ಹುಚ್ಚು ಹಿಡಿದದ್ದು ಇವರ ಕಾಲದಲ್ಲೇ. ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡದ ಯಾವುದೇ ಸ್ಥಳಕ್ಕೆ ಇಡಗುಂಜಿ ಮೇಳ ಬರಲಿ, ಜನ ಹುಚ್ಚುಗಟ್ಟಿ ಹೋಗುತ್ತಿದ್ದರು. ಶಂಭು ಹೆಗಡೆಯವರು ಮೊದಲು ಬಣ್ಣ ಹಚ್ಚಿದ್ದು ಶಾಲೆಯ ವಾರ್ಷಿಕೋತ್ಸವದಲ್ಲಿ 'ಸ್ಮಶಾನ ಕುರುಕ್ಷೇತ್ರ'ವೆಂಬ ನಾಟಕದಲ್ಲಂತೆ. ಗುರುಗಳಾದ ಕರ್ಕಿ ವರದ ಹಾಸ್ಯಗಾರರು ಅದನ್ನು ನಿರ್ದೇಶಿಸಿದ್ದರು. ಅದರಲ್ಲಿ ಅವರ ದುರ್ಯೋಧನನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತಂತೆ. ಆದರೆ ನಾಯಕ-ಖಳನಾಯಕ ಎರಡು ಪಾತ್ರಗಳಲ್ಲೂ ಅವರು ಜನಾನುರಾಗಿಯಾದರು.

'ಶಂಭು ಹೆಗಡೆ ಪ್ರತ್ಯೇಕ ಪ್ರಭೆ ಇರುವ ವ್ಯಕ್ತಿ. ಅವರು ಬೇರೆ ಯಾರಂತೆಯೂ ಅಲ್ಲ. ಯೋಗ-ಯೋಗ್ಯತೆ ಎರಡೂ ಇತ್ತು. ಪರಂಪರೆಯನ್ನು ಮೈಗೂಡಿಸಿಕೊಂಡು, ಈ ಕಾಲವನ್ನು ಅರ್ಥವಿಸಿಕೊಂಡು ಮಾದರಿಯಾಗಬಲ್ಲ ಸಾಮರ್ಥ್ಯವಿತ್ತು. ಸಂಘಟಕ-ಚಿಂತಕ-ಕೊರಿಯೋಗ್ರಾಫರ್-ವೇಷಧಾರಿ ಹೀಗೆ ಎಲ್ಲವೂ ಆಗಿದ್ದುದರಿಂದ ಅವರು ಕೇವಲ ಯಕ್ಷಗಾನ ಕಲಾವಿದರಲ್ಲ. ಭಾರತದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ರಂಗಭೂಮಿಯ ನಾನಾ ನರ್ತನ ಪ್ರಕಾರಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಂಡು, ಭಾರತದ ರಂಗಭೂಮಿಯ ಮೂಲಕ ಯಕ್ಷಗಾನವನ್ನು ನೋಡಬಲ್ಲವರಾಗಿದ್ದರು. ಚಿಂತನೆ ಮತ್ತು ರಂಗಸಾಧನೆ ಎರಡಲ್ಲೂ ಎತ್ತರಕ್ಕೆ ಏರಿದವರು. ಅವರು ಯಕ್ಷಗಾನದ ಎಚ್ಚರ ಮತ್ತು ಸೃಜನಶೀಲತೆಯ ಸಂಕೇತ. ಊರಿನ ಪಂಚಾತಿಕೆದಾರನಾಗಿ, ಮೇಷ್ಟ್ರಾಗಿ, ಸಾಮಾನ್ಯರ ಜತೆ ಬೆರೆಯಬಲ್ಲವರಾಗಿದ್ದರು. ಬಹಳ ಚೆನ್ನಾಗಿ ಡ್ರಾಯಿಂಗ್ ಮಾಡುತ್ತಿದ್ದರು. ಯಕ್ಷಗಾನ ಡೋಲಾಯಮಾನ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಸಾಧನೆಯ ಉತ್ತುಂಗಕ್ಕೇರಿ ಗೈಡೆನ್ಸ್ ಕೊಡುವ ಸ್ಥಾನದಲ್ಲಿದ್ದ ಅವರನ್ನು ಕಳೆದುಕೊಂಡದ್ದು ಬಹಳ ಬೇಸರದ ಸಂಗತಿ.' ಎನ್ನುತ್ತಾರೆ ಮೂವತ್ತು ವರ್ಷಗಳ ಒಡನಾಟವಿರುವ ಹಿರಿಯ ಅರ್ಥಧಾರಿ- ಲೇಖಕ ಡಾ.ಎಂ. ಪ್ರಭಾಕರ ಜೋಶಿ.
***
ಎಳವೆಯಲ್ಲೇ ತೀರಿಹೋದ ಇನ್ನೊಬ್ಬ ಸಹೋದರ ಗಜಾನನ ಹೆಗಡೆಯವರ ಸೈರಂಧ್ರಿ, ಶಂಭು ಹೆಗಡೆಯವರ ಕೀಚಕ - ಎಷ್ಟೇ ವರ್ಷಗಳುರುಳಿದರೂ ಮರೆತುಹೋಗದ್ದು. ಬಲರಾಮ, ಜರಾಸಂಧ, ದುರ್ಯೋಧನ, ಕೃಷ್ಣ , ಹರಿಶ್ಚಂದ್ರ, ಚಂದ್ರಹಾಸ, ಕಾರ್ತವೀರ್ಯ ಹೀಗೆ ಬಹಳಷ್ಟು ಪಾತ್ರಗಳಲ್ಲಿ ಶಂಭು ಹೆಗಡೆ ಇತಿಹಾಸ ನಿರ್ಮಿಸಿದವರು. ೭೦-೭೫ರ ವಯಸ್ಸೆಂದು ಅಭಿನಂದನ ಲೇಖನಗಳು ಬರಬೇಕಾದ ಸಮಯದಲ್ಲಿ ಸಂಸ್ಮರಣ ಲೇಖನಗಳನ್ನು ಬರೆಯಬೇಕಾದ ಪಾಡು ಈಗ ಪ್ರಿಯರದ್ದು. 'ಶೋಕರಸ'ವನ್ನೂ ನೃತ್ಯದ ಮೂಲಕ ಅಭಿವ್ಯಕ್ತಿಸಲು ಸಾಧ್ಯವೆಂದು ತೋರಿಸಿಕೊಟ್ಟವರು ಶಂಭು ಹೆಗಡೆ. ಆ ಶೋಕವೀಗ ಈ ಅಕ್ಷರಗಳಲ್ಲಿ ಮಡುಗಟ್ಟಿದೆ.
***
(ಕಳೆದ ಡಿಸೆಂಬರ್ ೨೬ರ ಸಂಜೆ. ಬೆಂಗಳೂರಿನ 'ಸುಮುಖ ಪ್ರಕಾಶನ'ದ ಪುಟ್ಟ ಗೂಡಿನಲ್ಲಿ `ಶ್ರೀರಾಮ ನಿರ್ಯಾಣ' ತಾಳಮದ್ದಳೆ. ಹಿರಿಯರಾದ ನೆಬ್ಬೂರು ನಾರಾಯಣರ ಭಾಗವತಿಕೆ. ಶಂಭು ಹೆಗಡೆಯವರ ಶ್ರೀರಾಮ. `ನಿನ್ನ ಅವತಾರದ ಕಾಲ ಮುಗಿಯಿತು, ಮತ್ತೆ ವೈಕುಂಠ ಸೇರಿಕೊ' ಅಂತ ರಾಮನನ್ನು ಎಚ್ಚರಿಸುವ `ಕಾಲಪುರುಷ'ನ ಪಾತ್ರ ಸಿಕ್ಕಿದ್ದು ನನಗೆ. ಆ ಬಗ್ಗೆ ಇನ್ನೊಮ್ಮೆ ಬರೆಯುವೆ.)

Read more...

January 30, 2009

‘ಕರ್ಣ’ ಕಠೋರ

ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರಬಂದಿದ್ದಾನೆ ಕೃಷ್ಣ . ಆಗ ಕರ್ಣನನ್ನು ಕರೆದು ರಥದಲ್ಲಿ ಕೂರಿಸಿಕೊಂಡು ಆತನ ಜನ್ಮ ರಹಸ್ಯವನ್ನು ಬಿಚ್ಚಿಡುತ್ತಾನೆ. ಮಹಾಭಾರತದಲ್ಲಿ ಅದೊಂದು ವಿಶೇಷ ಸಂದರ್ಭ; ಕರ್ಣ ಭೇದನ. ನೀನು ಸೂತ ಪುತ್ರನಲ್ಲ ಕುಂತಿಯ ಮಗ. ಇದನ್ನು ಈಗ ಲೋಕಕ್ಕೆ ಪ್ರಕಟಿಸಿದರೆ, ಪಾಂಡವರು-ಕೌರವರು ಒಂದಾಗಿ ನೀನು ಹಸ್ತಿನಾವತಿಯ ಮಹಾರಾಜನಾಗಬಹುದು, ಮುಂದೆ ನಡೆಯಲಿರುವ ಮಹಾಯುದ್ಧ ತಪ್ಪಿಸಬಹುದು ಎನ್ನುತ್ತಾನೆ ಕೃಷ್ಣ. ಆಗ ಕರ್ಣ ಮನಸ್ಸಿಗೆ ಬಂದದ್ದನ್ನು ಹೀಗೆ ಹೇಳಿರಬಹುದೆ?!-

‘ಕೃಷ್ಣಾ , ಸಾಕು ಸಾಕು. ನಿನ್ನ ಮಾತು ‘ಕರ್ಣ’ ಕಠೋರ. ಅಪ್ಪ ಅದಿರಥ, ಮಿತ್ರ ಕೌರವ ; ನನಗೆ ಸಾಕಿದವರು ಬೇಕು. ಸಾಗಹಾಕುವವರಲ್ಲ. ನೀನು ಸುಳ್ಳಾಡುವವನಲ್ಲವೆಂದು ಗೊತ್ತು. ವೈರಿ ಕಂಸನನ್ನೇ ಅಶರೀರವಾಣಿಯ ಮೂಲಕ ಎಚ್ಚರಿಸಿ ನಂತರ ಹುಟ್ಟಿದ ನೀನು ದೇವರೆಂದು ಬಲ್ಲೆ. ಆದರೆ ಹತಭಾಗ್ಯನಾದ ನನ್ನನ್ನು ಈಗ ದೇವರಾಗಿಸುವ ಪ್ರಯತ್ನಕ್ಕೆ ಕೈಹಾಕಬೇಡ !
ಶಾಪ ಕೊಡುವುದರಲ್ಲಿ ಸಿದ್ಧಹಸ್ತರಾದ ದೂರ್ವಾಸರು ಕೌಮಾರ್ಯದಲ್ಲಿದ್ದ ಕುಂತಿಯ ಸೇವೆಯನ್ನು ಮೆಚ್ಚಿ , ಮಕ್ಕಳನ್ನು ನೀಡಬಲ್ಲ ಮಂತ್ರಗಳನ್ನು ಬೋಧಿಸಿದರೇ? ಅದೂ ಒಂದಲ್ಲ ಐದು. ಆ ಮಂತ್ರಗಳಿಂದ ಹುಟ್ಟಿದ ಪಾಂಡವರು ಒಳ್ಳೆಯವರು ಅನ್ನಿಸಿಕೊಂಡರೆ, ಅದೇ ಮಂತ್ರದಿಂದ ಹುಟ್ಟಿದ ನಾನು ಕೆಟ್ಟವನಾದೇನೇ? ಇಲ್ಲ. ಆದರೆ ನನ್ನನ್ನು ಕೆಟ್ಟವನನ್ನಾಗಿಸಲು ಈಗ ನೀನು ಯತ್ನಿಸುತ್ತಿದ್ದೀಯ. ಕುಂತಿಯು ಸೂರ್ಯನ ಮೂಲಕ ನನ್ನನ್ನು ಪಡೆದಳಾದರೂ ನನಗೆ ಸಿಕ್ಕಿದ್ದು ಕತ್ತಲೆಯ ಬದುಕು. ಕುಮಾರಿಯಾಗಿದ್ದ ಆಕೆ ಅಂದು ಬರಬಹುದಾಗಿದ್ದ ಅಪವಾದಕ್ಕೆ ಹೆದರಿದ್ದಳು. ಈಗ ನನಗೆ ಅಪವಾದವನ್ನು ಕಟ್ಟುವ ಯತ್ನ ಮಾಡುತ್ತಿದ್ದೀಯಾ. ಶಂತನುವಿನ ಪತ್ನಿಯಾಗಿದ್ದ ಗಂಗೆ ತನ್ನ ಏಳೂ ಮಕ್ಕಳನ್ನು ನದಿಗೆಸೆದು ಮೋಕ್ಷ ಕರುಣಿಸಿದಳಂತೆ. ಆದರೆ ಕುಂತಿ ಅದೇ ಗಂಗೆಯಲ್ಲಿ ನನ್ನನ್ನು ತೇಲಿ ಬಿಟ್ಟಳು. ಗಂಗೆಯೂ ನನ್ನನ್ನು ಮುಳುಗಿಸಲಿಲ್ಲ. ಹಸ್ತಿನಾವತಿಯ ಕುಡಿಯೊಂದು ಉಳಿಯಲೆಂದು ಆಕೆಗೂ ಅನ್ನಿಸಿರಬೇಕು !

ನನ್ನ -ಪಾಂಡವರ ವೈರದ ಮಧ್ಯೆಯೂ ಎಲ್ಲವನ್ನೂ ಸಹಿಸಿ, ಹೆಣ್ಣೊಬ್ಬಳು ಈ ಜನ್ಮ ವೃತ್ತಾಂತ ಬಚ್ಚಿಟ್ಟಿದ್ದಾಳೆಂದರೆ, ಆಕೆ ನಿಜವಾಗಿ ಸಹನಾಮೂರ್ತಿ ಧರ್ಮರಾಯನ ತಾಯಿಯೇ ! ನೀನು ದೇವರಾಗಿ ಮಾತಾಡು, ರಾಜಕೀಯ ನಿಷ್ಣಾತನಂತೆ ಆಡಬೇಡ. ಈ ಸತ್ಯವನ್ನು ಒಪ್ಪಿದರೂ ನಾನು ಕೌರವನ ಪಕ್ಷ ಬಿಡಲಾರೆನೆಂದು ನಿನಗೆ ಗೊತ್ತು. ಹಾಗಾಗಿ ಈ ಹಿಂದೆಂದೂ ಹೇಳದೆ ಈಗ ಹೇಳುತ್ತಿದ್ದೀಯೆ. ಕೌರವನ ಸಾಮ್ರಾಜ್ಯ ಪತನಕ್ಕೆ ನೀನು ಮೊದಲ ಹೆಜ್ಜೆಯಿಟ್ಟಿರುವುದು ಈ ಕರ್ಣನ ಎದೆಯ ಮೇಲೆ. ‘ಪಾಂಡವರನ್ನು ನನ್ನ ಪ್ರಾಣಗಳಂತೆ ರಕ್ಷಿಸುತ್ತೇನೆ ’ಎಂದು ಕುಂತಿಗೆ ಮಾತು ಕೊಟ್ಟವನಂತೆ ನೀನು. ಆ ಪಾಂಡವರಲ್ಲಿ ನಾನೂ ಇದ್ದೇನೆಯೆ?!

Read more...

January 23, 2009

ಎಲ್ಲ ಉತ್ತರಗಳನ್ನು ಬಲ್ಲವರಿಗೆ

'ಸ್ಲಂ ಡಾಗ್ ಮಿಲಿಯನೇರ್’ನ ಹೆಚ್ಚುಗಾರಿಕೆಯಿರುವುದು, ಅದು ವಾಸ್ತವವನ್ನು ತೋರಿಸಿದೆ ಅಂತ ಮಾತ್ರ ಅಲ್ಲ. ವಾಸ್ತವವನ್ನು ತೋರಿಸಿದ್ದರೂ ಡಾಕ್ಯುಮೆಂಟರಿಯಾಗದೇ ಉಳಿದಿದೆ ಮತ್ತು ಭಾರತದ ನಾನಾ ಸಂಗತಿಗಳಿಗೆ ಮುಖಾಮುಖಿಯಾಗಿದೆ ಎಂಬುದರಿಂದ. ವಾಸ್ತವವನ್ನು ಬೇರೆ ರೀತಿಯೂ ತೋರಿಸಬಹುದಿತ್ತಾದರೂ, ಈಗ ಇರುವುದೂ ಬಹಳ ಕಲಾತ್ಮಕವಾಗಿ, ಆನಂದದಾಯಕವಾಗಿಯೇ ಇದೆ. ಇಲ್ಲಿ ಹಿಂಸೆ-ಕ್ರೌರ್ಯ, ಗಲೀಜು ವಿಜೃಂಭಿಸಿದೆ ಅನ್ನುವುದು, ಕೈ ಮಣ್ಣಾಗದವರ ಅನಿಸಿಕೆಯಷ್ಟೇ. ಆ ಸಿನಿಮಾಗಿಂತ ಹೆಚ್ಚಿನ ಹಿಂಸೆ-ಕ್ರೌರ್ಯ ನಮ್ಮ ಕನ್ನಡ ಸಿನಿಮಾಗಳಲ್ಲೇ ಇದೆ. ಆ ಸಿನಿಮಾಗಿಂತ ಹೆಚ್ಚಿನ ಗಲೀಜು ಈ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಧಾರಾಳವಾಗಿ ಕಣ್ಣೆದುರಿಗಿದೆ.

‘ಇಂಡಿಯಾ ಅಂದರೆ ಇಷ್ಟು ಮಾತ್ರ’ಅಂತ ಸಿನಿಮಾದಲ್ಲೆಲ್ಲೂ ಹೇಳಿಲ್ಲ. ಅಷ್ಟಕ್ಕೂ ಕರಣ್ ಜೋಹರ್ ತೋರಿಸುವ ಮೋಜುಮಸ್ತಿ-ಹೈಫೈ ಇಂಡಿಯಾವೇ ರಿಯಲ್ ಇಂಡಿಯಾ ಅಂತ ನೀವು ಒಪ್ಪುತ್ತೀರಾ? ಆಗ ಯಾಕೆ ಯಾರೂ ಮಾತಾಡುವುದಿಲ್ಲ? ಹೇಲಿನಿಂದ ಎದ್ದು ಬರುವ ಹುಡುಗನ ದೃಶ್ಯ ನೋಡಿ ನಾನು ಹಾಗೂ ಸ್ನೇಹಿತರಂತೂ ನಗೆಯಾಡಿ ಸಂತೋಷಪಟ್ಟೆವು. ಅಮಿತಾಬ್ ಕೂಡಾ ಅಸಹ್ಯಪಡದೆ ಆಟೊಗ್ರಾಫ್ ಕೊಟ್ಟಿರುವಾಗ, ನಮಗೆ ಅಸಹ್ಯವಾಗುವುದು ಏನಿದೆ?! ಆ ದೃಶ್ಯ ಅಮಿತಾಬ್ ಅಥವಾ ಸಿನಿಮಾಗಳು ಭಾರತದಲ್ಲಿ ಹೊಂದಿರುವ ಪ್ರಭಾವ ಶಕ್ತಿಯನ್ನೂ ತೋರಿಸುತ್ತದೆ. ಅಷ್ಟಕ್ಕೂ ಬಚ್ಚನ್ ಸಿನಿಮಾದ ಬಗ್ಗೆ ಕಿಡಿ ಕಾರಿದ್ದಾರೆಂದು ತಪ್ಪು ವರದಿಗಳು ಪ್ರಕಟವಾಗಿವೆ. ಅದಕ್ಕೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಮತ್ತೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಜಮಾಲ್‌ನನ್ನು ಚಾಯ್‌ವಾಲಾ ಎನ್ನುತ್ತಾ ಅನಿಲ್‌ಕಪೂರ್ ಅಣಕಿಸುವುದು, ಪೊಲೀಸರು ಯಾವ್ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ವಿಚಾರಣೆಗೆ ಒಯ್ಯುವುದು ಇವೆಲ್ಲಾ ಭಾರತದಲ್ಲಿ ಪ್ರತಿದಿನ ನಡೆಯುವಂಥದ್ದೇ. ಅದು ವಿಚಿತ್ರ ಕಾನ್ಸೆಪ್ಟ್ ಏನೂ ಅಲ್ಲ. ಇನ್ನು ಆ ಸಿನಿಮಾ ಆಸ್ಕರ್‌ಗೆ ಅರ್ಹವೋ ಅಲ್ಲವೋ ಅನ್ನುವುದು ಬೇರೆಯೇ ಚರ್ಚೆ. ಅದಕ್ಕೆ ಬೇರೆಯೇ ಸಿದ್ಧತೆ ಬೇಕು. ಬಹಳ ಬೇಸರದ ಸಂಗತಿಯೆಂದರೆ, ಇದರಲ್ಲಿ ರಾಮನನ್ನು ಅಪಮಾನಿಸಲಾಗಿದೆ, ಇದರಿಂದಾಗಿ ಭಾರತದ ಮರ್ಯಾದೆ ಹೋಯಿತು ಅಂತೆಲ್ಲ ಕೆಲವರು ಹುಯಿಲೆಬ್ಬಿಸಿರುವುದು. ಇದರಲ್ಲಿ ಕ್ಯಾಮೆರಾ ಹಿಡಿದ ರೀತಿ ‘ಸಿಟಿ ಆಫ್ ಗಾಡ್’ನಂತೆಯೇ ಇದೆ ಇತ್ಯಾದಿ ಕಮೆಂಟ್‌ಗಳ ನಡುವೆಯೂ, ಅತ್ಯುತ್ತಮ ಸಿನಿಮಾಗಳಲ್ಲಿ ಸ್ಲಂ ಡಾಗ್ ಮಿಲಿಯನೇರ್ ಒಂದು ಅನ್ನುವುದನ್ನು ನಾವೆಲ್ಲಾ ಯಾವ ಅನುಮಾನವಿಲ್ಲದೆ ಒಪ್ಪಿಕೊಳ್ಳಬಹುದು. ಕೆಲ ದಿನಗಳ ಹಿಂದೆ ಸಾಂಗತ್ಯ ಬ್ಲಾಗ್‌ಗಾಗಿ ಒಂದಷ್ಟು ಬರೆದಿದ್ದೇನೆ. ಪುರುಸೊತ್ತಿದ್ದರೆ ಓದಿರೆಂದು ಬಿನ್ನಹ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP