August 01, 2009

ಈ ಸರ್ತಿ ಕಡಲ್ ಮುರ್‌ಕುಂಡು

ಮಳೆಯ ರಾಗ ಇನ್ನೂ ಕಿವಿ ತಮಟೆಯಿಂದ ದೂರವಾಗಿಲ್ಲ. ‘ಈ ಸರ್ತಿ ಕಡಲ್ ಮುರ್‍ಕುಂಡು ತೋಜುಂಡು’ ( ಈ ಸಲ ಕಡಲು ಮುಳುಗುತ್ತದೆ ಅಂತ ಕಾಣ್ಸತ್ತೆ) ಅಂತ ಕೆಲಸದ ಮಲ್ಲ ಪ್ರತೀ ದಿನ ಹೇಳುತ್ತಿದ್ದಾನೆ. ಅಡಿಗರು ಅಂದಂತೆ -ಕಡಲ ಪಡಖಾನೆಯಲ್ಲಂತೂ ನೊರೆಗರೆವ ವಿಸ್ಕಿ ಸೋಡಾ ಕುಡಿದ ಗಾಳಿ ಮತ್ತಿನಲ್ಲಿ ಗಮ್ಮತ್ತಿನಲಿ ತೂರಾಡುತ್ತಿದೆ. ಪಂಜೆಯವರ ತೆಂಕಣ ಗಾಳಿಯಾಟ ಹೆಗಲ ಮೇಲಿನ ಶಾಲನ್ನು ರುಂಮ್ಮನೆ ಎತ್ತಿ ಹಾರಿಸುತ್ತಿದೆ. ಶವರ್ ಬಾತ್‌ನಲ್ಲಿ ಒಮ್ಮೆಗೆ ಪೂರ್ತಿ ನೀರು ಬಿಟ್ಟರೆ ಬರುತ್ತದಲ್ಲ, ಹಾಗೆ ಪಕ್ಕನೆ ದಿರಿದಿರಿ ಸುರಿವ ಮಳೆಗೆ ಪೂರ್ತಿ ರಭಸ. ಮಣ್ಣೆಲ್ಲ ತಚಪಚ ಹಾರಿ ನೀರು ಮಂದವಾಗಬೇಕು, ಹಾಗೆ. ಸಾಯಂಕಾಲವಂತೂ, ಕತ್ತಲನ್ನೂ ಮಳೆಯನ್ನೂ ದೂರದಿಂದ ಸೆಳೆದು ತರುವ ಗಾಳಿಯ ಸದ್ದನ್ನು ಆಲಿಸುವುದೇ ಒಂದು ದಿವ್ಯ ಅನುಭವ. ಗ್ರಾ.....ಎಂಬ ಸದ್ದು ಕೆಲವೊಮ್ಮೆ ಐದು ನಿಮಿಷಗಳವರೆಗೂ ಕೇಳಿ, ಬಳಿಕವಷ್ಟೇ ಮಳೆಯು ಮನೆ ಅಂಗಳ ತಲುಪುವುದುಂಟು. ಒಮ್ಮೆ ಬೆಂಗಳೂರಿನಿಂದ ಬಂದಿದ್ದ ದೊಡ್ಡಪ್ಪ, ತಮ್ಮ ಪುಟ್ಟದಾದ, ಆದರೆ ಬಹಳ ಬೆಲೆ ಬಾಳುವ ಪ್ಯಾನಸೊನಿಕ್ ರೆಕಾರ್ಡರ್‌ನಲ್ಲಿ ಆ ಧ್ವನಿಯನ್ನು ಹಿಡಿದಿಟ್ಟುಕೊಂಡಿದ್ದರು. ಮಳೆ ನಿಂತ ಮೇಲೆ ಅದನ್ನು ಕೇಳಿದಾಗ ಮಾತ್ರ, ಸರಿಯಾಗಿ ಸಿಗ್ನಲ್ ಸಿಗದ ಹಳೆ ರೇಡಿಯೊದ ಸದ್ದಿನಂತೆ, ಕರ್ಕಶವಾಗಿ ಕೇಳುತ್ತಿತ್ತು ! ಕರಾವಳಿಯ ಈ ಮಳೆಯ ಸದ್ದು, ರುಚಿ, ಪರಿಮಳಗಳನ್ನೆಲ್ಲ ಹಿಡಿದಿಡುವುದು ಸಾಧ್ಯವೆ ?

ಬಹಳ ಆಶ್ಚರ್ಯದ ಸಂಗತಿಯೆಂದರೆ, ಅಡಿಕೆಗೆ ಕೊಳೆ ರೋಗ ಬಾರದ ಹಾಗೆ ಔಷಧ ಸಿಂಪಡಿಸಿ ಆಯ್ತಾ, ಸೌದೆ ಬೇಕಾದಷ್ಟು ಕೊಟ್ಟಿಗೆಗೆ ಬಂತಾ, ಮರದಿಂದ ತೆಂಗಿನಕಾಯಿ ತೆಗೆದಾಯ್ತಾ, ಇತ್ಯಾದಿ ಪ್ರಶ್ನೆಗಳನ್ನು ಕೇಳುವವರೇ ಬಹಳ ಕಡಿಮೆ. ತುಂಬ ಜನ ಜಾಗ ಮಾರಿ ಪೇಟೆಗೆ ಹೊರಟಿರೋದ್ರಿಂದ, ಮಕ್ಕಳೆಲ್ಲ ಸಿಟಿ ಸೇರಿದ್ದರಿಂದ, ತೋಟದ ಬಗ್ಗೆ ಹೆಚ್ಚಿನ ನಿಗಾ ಇಲ್ಲವೇನೋ. ಸಾಮೂಹಿಕ ಪೂಜೆ-ಆಚರಣೆಗಳಂತೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ, ಹೊಸ ರೂಪಗಳಲ್ಲಿ ಬರುತ್ತಿವೆ. ಆದರೆ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ವಿಚಾರಗಳಲ್ಲೆಲ್ಲ ಹಿಂದಿದ್ದ ಘನತೆ ಮಾಯವಾಗುತ್ತಿದೆಯಾ? ಪಡಪೋಸಿಗಳೆಲ್ಲ ಹೀರೊಗಳಂತೆ ಬಿಂಬಿಸಲ್ಪಡುತ್ತಿದ್ದಾರಾ? ಇದು ಸಂಪರ್ಕ ಕ್ರಾಂತಿಯ ಫಲಶ್ರುತಿಯಾ? ಅಂತೆಲ್ಲ ಪ್ರಶ್ನೆಗಳು. ಉತ್ತರವೇನೇ ಇರಲಿ, ಊರಿನ ಪ್ರಜ್ಞೆಯ ಮಟ್ಟ ಮಾತ್ರ ದಿನೇದಿನೆ ಕೆಳಗಿಳಿಯುತ್ತಿರುವಂತೆ ಭಾಸವಾಗುತ್ತಿದೆ.

ಟೆಲಿಫೋನ್, ಮೊಬೈಲು, ಇಂಟರ್‌ನೆಟ್, ಟಿವಿ, ಪತ್ರಿಕೆಗಳು ಮನೆಮನೆಗಳಿಗೆ ಹೊಕ್ಕಿರುವುದರಿಂದ ಪ್ರಚಾರವೀಗ ಸುಲಭದ ಬಾಬತ್ತು. ಮುನ್ನುಗ್ಗಿದವನಿಗೆ ಮಣೆ. ಅವನಿಗಿಲ್ಲ ಎಣೆ. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿಬೇಕಾದರೆ, ‘ ಏನು ಮಾಡಬಹುದು ಅಂತ ಓ ಅವರಲ್ಲಿ ಕೇಳೋಣ. ಅವರಿಗೆ ನೋಡಿ- ಕೇಳಿ ಅನುಭವವಿದೆ.’ ಅಂತೇನೂ ಈಗ ಇಲ್ಲ. ಎಲ್ಲವೂ ಒಬ್ಬರಿಗೇ ಗೊತ್ತಿದೆ ! ಸಭಾ ಕಾರ್ಯಕ್ರಮಗಳಿಗೆ ಚೆನ್ನಾಗಿ ಮಾತನಾಡುವವರು ಬೇಕಾಗಿಲ್ಲ. ಅವರಿಂದ ತಮ್ಮ ಸಂಸ್ಥೆಗೆ ಏನು ಲಾಭವಾದೀತು ಅನ್ನೋದಷ್ಟೇ ಲೆಕ್ಕಾಚಾರ. ಮಂಗಳೂರು ಆಕಾಶವಾಣಿಯಲ್ಲಿ ಬುಧವಾರ ರಾತ್ರಿ ಒಂಬತ್ತೂವರೆಗೆ ಬರುವ ಯಕ್ಷಗಾನ ತಾಳಮದ್ದಳೆಯನ್ನು ಈಗಲೂ ಕೇಳುವನು ಕ್ಷೌರಿಕ ದಾಮೋದರ ಒಬ್ಬನೇ ಇರಬೇಕು. ಅದರ ಬಗ್ಗೆ ಮಾತಾಡುವುದಕ್ಕಂತೂ ಅವನಿಗೆ ಜನವೇ ಇಲ್ಲ. ಸಾಹಿತ್ಯ ಸಮ್ಮೇಳನ ನಡೆಯುತ್ತಲೇ ಇದೆಯಾದರೂ, ಒಂದು ಒಳ್ಳೆಯ ಹೊಸ ಪುಸ್ತಕ ಬಂದ ಉದಾಹರಣೆ ಇಲ್ಲ. ಧಾರ್ಮಿಕತೆ ಅನ್ನುವುದಂತೂ ಜನರ ರೊಚ್ಚಿಗೆಬ್ಬಿಸುವುದಕ್ಕಷ್ಟೇ ಸೀಮಿತ. ಸರಕಾರಿ ಶಾಲೆಗಳೆಲ್ಲ ಜೀವ ಕಳಕೊಂಡಿರುವುದರಿಂದ ಅಲ್ಲೂ ಊರಿನ ಜನ ಒಟ್ಟಾಗುವ ಪರಿಪಾಠವಿಲ್ಲ. ಊರಿನ ಮುಖ್ಯ ಆಚರಣೆಯಾಗಿದ್ದ , ‘ಶ್ರಮದಾನ’ವೆಂಬ ಪರಿಕಲ್ಪನೆ ಗೊತ್ತೇ ಇಲ್ಲವೇನೋ ಅನ್ನುವಷ್ಟು ಕಡಿಮೆ. ಎಲ್ಲೆಡೆ ರಾಜಕೀಯ-ದುಡ್ಡು ವಿಷ ಬಳ್ಳಿಯಾಗಿ ಹಬ್ಬಿಕೊಳ್ಳುತ್ತಿದೆ. ಊರಿಗೆ ಯಾವ ಶಾಪ ತಟ್ಟಿದೆ? ಬೆಳ್ಳಂಬೆಳಗ್ಗೆ ‘ಜಾಲಹಳ್ಳಿ ಜಾಲಹಳ್ಳಿ ಕ್ರಾಸ್’ ಅಂತ ಕಂಡಕ್ಟರ್ ಕೂಗಿದಾಗ ಅರೆ ಎಚ್ಚರವಾಗಿ, ನರಕದ ಬಾಗಿಲಲ್ಲಿ ಯಮದೂತ ಕೂಗಿದ ಹಾಗಾಗುತ್ತದೆ !’ ಅಂದಿದ್ದರು ಜಯಂತ ಕಾಯ್ಕಿಣಿ. ಆದರೆ ಊರಿನ ಮುಖ್ಯ ಭಾವವಾದ ಆಪ್ತತೆಯೇ ಅಲ್ಲಿ ಕಳೆದುಹೋಗುತ್ತಿದೆಯಾ? ಕೂಡಿ ಬಾಳುವ ಸುಖ ಮುಖ್ಯವಲ್ಲ ಅನ್ನಿಸಿದೆಯಾ? ಮೊನ್ನೆ ಮೊನ್ನೆ ಊರಿಗೆ ಹೋಗಿ ಬಂದ ಮೇಲೆ ಹೀಗೆಲ್ಲ ಅನ್ನಿಸತೊಡಗಿದೆ. ನಿಮಗೆ?

ಜಿರೀ......ಅಂತ ಮಳೆ ಒಂದೇ ಸಮನೆ ಸುರಿಯುತ್ತಿದೆ. ಹೊಸ ಕಾಲದ ಬದುಕಿಗೆ ಕಡಲನ್ನೇ ಮುಳುಗಿಸುವ ಸಾಮರ್ಥ್ಯವಿದೆ. ಹೌದು, ಇನ್ನೇನು ಕಡಲು ಮುಳುಗಿದರೂ ಮುಳುಗೀತು. ನಿಮ್ಮ ನಿಮ್ಮ ನೌಕೆ ಏರಿ ಭದ್ರಪಡಿಸಿಕೊಳ್ಳಿ ಆಯಿತಾ?!

Read more...

July 24, 2009

ಮಾತು ಮಾತು ಮಥಿಸಿ...

ಆಮಂತ್ರಣ ಪತ್ರಿಕೆ ವಿನ್ಯಾಸ : ಚಂಪಕಾವತಿ

Read more...

July 19, 2009

ಶ್ರೀ ಮತ್ತು ಸಾಮಾನ್ಯ ! - 'ದೇಶಕಾಲ'ದ ಪರೀಕ್ಷೆ

'ಈ ಹತ್ತಿಪ್ಪತ್ತು ವರ್ಷಗಳಿಂದ ದೊಡ್ಡ ಬದಲಾವಣೆಯ ಗಾಳಿಗೆ ತೆರೆದುಕೊಂಡಿರುವ ನಮ್ಮ ಬದುಕು, ಕಳೆದ ಒಂದೆರಡು ವರ್ಷಗಳೀಚೆಗಂತೂ ಬಿರುಗಾಳಿಯ ಅಲ್ಲೋಲಕಲ್ಲೋಲವನ್ನೇ ಕಾಣತೊಡಗಿದೆ. ಬೆಲೆಗಳು, ರಾಜಕೀಯ ವಿದ್ಯಮಾನಗಳು, ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳೆಲ್ಲ ಕೂಡಿರುವ ಈ ವಿದ್ಯಮಾನಗಳು ಸಾಮಾನ್ಯರಲ್ಲಿ ಸಾಮಾನ್ಯರನ್ನೂ ತಾಗದೆ ಬಿಟ್ಟಿಲ್ಲ. ಹಾಗಿದ್ದರೂ, ನಿಜವಾಗಿ ಈ ಅಲ್ಲೋಲಕಲ್ಲೋಲವು ತಥಾಕಥಿತ ‘ಸಾಮಾನ್ಯ’ರನ್ನು ಹೇಗೆ ತಾಗಿದೆ, ಅವರು ಅದಕ್ಕೆ ಯಾವೆಲ್ಲ ಬಗೆಗಳಿಂದ ಪ್ರತಿಸ್ಪಂದಿಸುತ್ತಿದ್ದಾರೆ, ಕಡೆಗೂ ಇವೆಲ್ಲದರೊಡನೆ ಹೇಗೆ ಹೊಂದಿ ಬದುಕುತ್ತಿದ್ದಾರೆ - ಇತ್ಯಾದಿ ವಿಚಾರಗಳು ಕನ್ನಡ ನಾಡಿನ ‘ಬುದ್ಧಿವಂತ’ ವರ್ಗಕ್ಕೆ ಇನ್ನೂ ಅರ್ಥವಾಗದೇ ಉಳಿದಿರುವ ವಿಚಾರ. ಆದ್ದರಿಂದ ಇಂಥ ‘ಸಾಮಾನ್ಯರ ಅಸಾಮಾನ್ಯತೆ’ಯನ್ನು ಕಂಡುಕೊಳ್ಳುವ ದಿಶೆಯಲ್ಲಿ ಈ ಬಾರಿಯ ‘ಸಮಯ ಪರೀಕ್ಷೆ’ಯು ಪ್ರಸ್ತುತ ಪ್ರಯತ್ನಕ್ಕೆ ಕೈಹಚ್ಚಿದೆ.’ ಎನ್ನುತ್ತಾರೆ ಅನುಭವಿ ರಂಗಕರ್ಮಿ-ಬರಹಗಾರ ಕೆ.ವಿ. ಅಕ್ಷರ. ಹೀಗೆ ಈ ಬಾರಿಯ ‘ದೇಶಕಾಲ’ (ಜುಲೈ-ಸೆಪ್ಟೆಂಬರ್) ಸಂಚಿಕೆಯ ‘ಸಮಯ ಪರೀಕ್ಷೆ’ ಅಂಕಣ, ತೀರ ಹೊಸದಾಗಿ ವರ್ತಮಾನದೊಂದಿಗೆ ಮುಖಾಮುಖಿಯಾಗಿದೆ. ಅಲ್ಲಿರುವ ಐದು ಸಂದರ್ಶನಗಳಲ್ಲಿ, ಕರಾವಳಿಯ ದೇವಾಲಯವೊಂದರ ಅರ್ಚಕ ದಂಪತಿಯನ್ನು ಹಿರಿಯ ಲೇಖಕಿ ವೈದೇಹಿ ಮಾತಾಡಿಸಿರುವುದು ಎಲ್ಲವುಗಳಲ್ಲಿ ಅತ್ಯುತ್ತಮ. ವಿಷಯ ಮತ್ತು ನಿರೂಪಣೆಯಲ್ಲಿ, ಆಯೋಜಕ ಕೆ.ವಿ. ಅಕ್ಷರ ಅವರ ಆಶಯವನ್ನು ಪೂರೈಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಲ್ಲಿ ಭಟ್ಟರು ಆಡುವ ಕೆಲವು ಮಾತುಗಳಂತೂ, ಬಹಳ ವಿಶೇಷವಾಗಿವೆ. ಪ್ಲೀಸ್ ಓದಿ.

ಭಟ್ಟರು : ‘ಮುಂಚೇ...ಶಾಲೆ ಕಾಲೇಜು ವಿದ್ಯೆ ಏನು ಇಲ್ಲದಿದ್ದಾಗ ಇಷ್ಟೆಲ್ಲ ಪೇಟೆ ಇತ್ತ? ಮನೆಗಳಿತ್ತ? ಈ ತೋಟ ಗೀಟ ಗದ್ದೆ ಮಾಯವಾಗುವುದಕ್ಕೆ ಮೂಲದಲ್ಲಿರುವುದು ನಮ್ಮ ಶಾಲೆ ಕಾಲೇಜುಗಳೇ. ಯಾರಿಗೂ ಬೇಡ ಅವೀಗ. ಅದು ಮಾತ್ರ ಅಲ್ಲ, ದೇವರು ಬೇಡ, ಧರ್ಮ ಬೇಡ. ಅಮ್ಮ ಬೇಡ, ಅಪ್ಪ ಬೇಡ. ಅಂತೆಲ್ಲ ಬರುವುದು, ತೋಟ ಗದ್ದೆ ಮರ ಗಿಡ ಬೇಡ ಅಂತಾದಾಗಲೇ. ಬೇಕಾದರೆ ದೃಷ್ಟಾಂತ ನೋಡಿ. ಇದು, ಒಂದು. ಆಯಿತ? ಇನ್ನು ಎರಡು- ನಿಮಗೆ ಧರ್ಮ ನಿಜವಾಗಿ ಬೇಕಿದ್ದರೆ ನೀವು ಯಾವ ಧರ್ಮವನ್ನೂ ಮುಟ್ಟುವ ಅಧಿಕಕ್ಕೆ ಹೋಗುವುದಿಲ್ಲ. ನನ್ನ ಕೇಳಿದರೆ, ಬೇರೆಯವರ ಪೂಜಾ ಸ್ಥಳ ಒಡೆಯುವುದು ಬೇರೆಯಲ್ಲ, ತಮ್ಮ ತಮ್ಮ ಪೂಜಾಸ್ಥಳ ಒಡೆಯುವುದು ಬೇರೆ ಅಲ್ಲ- ಇದು ಧರ್ಮ ಪ್ರಕಾರದ ಮಾತು. ಪರಧರ್ಮ ಸಹಿಷ್ಣುತೆ ಅಂತಾರಲ್ಲ, ಅದರಿಂದ ಈ ಮಾತು ಹೇಳುತ್ತಿಲ್ಲ. ನಮ್ಮ ಧರ್ಮದ ಮೇಲಿನ ಪ್ರೀತಿಯಿಂದಲೇ ಹೇಳುವುದು. ಅವರವರ ಧರ್ಮ ಅವರವರದಪ್ಪ. ಅದರಲ್ಲಿ ಸಹಿಸುವ ದೊಡ್ಡಸ್ತಿಕೆಯ ಮಾತು ಎಲ್ಲಿಂದ ಬಂತು? ಹಾಗಾದರೆ ನೀವು ಇದು ಬಿಟ್ಟು ಇನ್ನೊಂದು ಧರ್ಮಕ್ಕೆ ಹೋಗಿ ಅಂತ ನೀವು ಹೇಳೀರಿ. ಅದು ನನ್ನಿಂದ ಸಾಧ್ಯ ಇಲ್ಲ. ಎಂದರೆ - ನನ್ನ ಮನೆ ಬಿಟ್ಟು ನಾನು ಬೇರೆಯವರ ಮನೆಗೆ ಹೋಗುವವನಲ್ಲ - ಅಂತ ಒಂದು ಸರಳ ವ್ಯಾಖ್ಯಾನ.’

ಇಪ್ಪತ್ತು ವರುಷಗಳಿಂದ ಬೆಂಗಳೂರಿನಲ್ಲಿ ಬಿ.ಪಿ.ಒ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸುಮಂತ ಅವರನ್ನು ಮಾತಾಡಿಸಿದ್ದಾರೆ ಕತೆಗಾರ-ಕಾದಂಬರಿಕಾರ ಅಶೋಕ ಹೆಗಡೆ. ಸುಮಂತರ ಮಾತಿನ ಭಾಗವೊಂದು ಇಲ್ಲಿದೆ - ‘ಇನ್ನು ಈವತ್ತಿನ ಯುವಜನರ ಬಗೆಗೂ ನಾನು ಕೆಲವು ಮಾತುಗಳನ್ನು ಹೇಳಬೇಕು...ಈ ಜನಾಂಗಕ್ಕೆ ತನಗೆ ಏನು ಬೇಕು ಅನ್ನುವುದು ಸ್ಪಷ್ಟವಾಗಿ ಅರಿವಿದೆ. ತಾವು ಸಲ್ಲಿಸುವ ಸೇವೆಗೆ ತಕ್ಕ ಹಣದ ಪ್ರತಿಫಲವನ್ನು ಅವರು ಅಪೇಕ್ಷಿಸುತ್ತಾರೆ. ಒಂದು ಉದಾಹರಣೆ ತೆಗೆದುಕೊಳ್ಳಿ. ನಾವು ನಮ್ಮ ತಂಡದ ಹುಡುಗರನ್ನ ಸ್ವಲ್ಪ ಖುಶಿಯಾಗಿಡಲು ಒಂದು ಪ್ರವಾಸ ಆಯೋಜಿಸಿದ್ದೆವು. ಅದಕ್ಕೆ ಸಿಂಗಾಪುರವನ್ನು ಆಯ್ಕೆ ಮಾಡಿಕೊಂಡಿದ್ದೆವು. ತಲೆಗೆ ಸರಿಸುಮಾರು ನಲವತ್ತೈದು ಸಾವಿರ ರೂಪಾಯಿ ವೆಚ್ಚದ ಯೋಜನೆಯದು. ಆದರೆ ನಾವು ಅಂತಹ ಪ್ರಸ್ತಾಪವನ್ನು ಮುಂದಿಟ್ಟಾಗ, ಅವರೇನೂ ಅಷ್ಟು ಖುಶಿಯಾದ ಹಾಗೆ ಕಾಣಲಿಲ್ಲ. ಕೊನೆಗೆ ಒಂದಿಬ್ಬರನ್ನು ಕರೆಸಿ ಕೇಳಿದಾಗ, ಈ ಪ್ರವಾಸದ ಬದಲಾಗಿ ಅದಕ್ಕೆ ವೆಚ್ಚ ಮಾಡುತ್ತಿರುವ ಹಣವನ್ನು ಸಂಬಳದ ಜತೆ ಸೇರಿಸಿಕೊಡಲು ಕೇಳಿಕೊಂಡರು. ನಾವು ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ. ತೀರಾ ವ್ಯಾವಹಾರಿಕವಾಗಿ ದುಡಿಯುವ ಕಂಪನಿಯ ಜತೆ ಸಂಬಂಧ ಇಟ್ಟುಕೊಳ್ಳುವ ನಮ್ಮ ಹುಡುಗರು, ಇತರ ಸಂಬಂಧಗಳನ್ನು ಅದೇ ದೃಷ್ಟಿಕೋನದಿಂದ ನೋಡುತ್ತಿರಬಹುದು ಎನ್ನುವ ಸಂಶಯ ನನಗಿದೆ.'

ಕರಾವಳಿಯ ಕಿರಿ ಮಂಜೇಶ್ವರದಿಂದ ಬಂದು ಬೆಂಗಳೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ಆನಂದನನ್ನು ಜಯಂತ ಕಾಯ್ಕಿಣಿ ಮಾತಾಡಿಸಿದ್ದಾರೆ. ಮೂಲತಃ ತಮಿಳುನಾಡಿನವರಾದ, ಬಹಳ ವರ್ಷಗಳಿಂದ ಹೊಸಪೇಟೆಯಲ್ಲಿರುವ ಅರ್ಮುಗಂ ಅವರನ್ನು ಪರಶುರಾಮ ಕಲಾಲ್ ಮಾತಿಗೆಳೆದಿದ್ದಾರೆ. ಎರಡು ಓದಬೇಕಾದಂಥವು. ಸಂದರ್ಶನದ ಇರಾದೆಗೆ ಸೂಚಕವಾಗಿ, ನಾವು ಕೆಳಕಂಡ ಸೂಚಕಗಳನ್ನು ರೂಪಿಸಿದ್ದೇವೆ ಅಂತ ಆರಂಭದಲ್ಲೇ ಅಕ್ಷರ ಅವರು ಹೇಳಿರುವ ಸೂಚಕಗಳು ಹೀಗಿವೆ.
*ಕಳೆದ ಒಂದೆರಡು ವರ್ಷಗಳಲ್ಲಿ ಎದುರಿಸಿದ ಬಹುದೊಡ್ಡ ಸಮಸ್ಯೆ ಸವಾಲು *ಅದನ್ನು ನಿಭಾಯಿಸಿದ ಬಗೆ; ಕಲಿತ ಪಾಠಗಳು *ಈಚೆಗೆ ನಮ್ಮ ಸುತ್ತಮುತ್ತಲಿನ ಬದುಕಿನಲ್ಲಾಗುತ್ತಿರುವ ಮುಖ್ಯವಾದ ಮಾರ್ಪಾಟು *ಮುಂದೆ ಬರಲಿರುವ ಕಾಲದ ಬಗ್ಗೆ ಇರುವ ನಿರೀಕ್ಷೆಗಳು.

ಆದರೆ ಜಿ.ರಾಜಶೇಖರ ಮತ್ತು ಕೆ. ಫಣಿರಾಜ್ ಮಾಡಿರುವ ಸಂದರ್ಶನದಲ್ಲಿ ಮಾತ್ರ, ಸಂದರ್ಶಕರ ಅಭಿಪ್ರಾಯವೇ ಮೇರೆಮೀರಿದಂತಿದೆ. ಸುರತ್ಕಲ್‌ನಲ್ಲಿ ವಾಸವಾಗಿದ್ದು ಜಾನುವಾರು ಮಾರಾಟದ ವ್ಯವಹಾರ ನಡೆಸುವ, ಈಗ ಗೋಸಂರಕ್ಷಕರಿಂದ ಹಲ್ಲೆಗೊಳಗಾಗಿ ಹಾಸಿಗೆಯಲ್ಲಿರುವ ಸುಮಾರು ಮೂವತ್ತರ ವಯಸ್ಸಿನ ನಜೀರ್ ಅವರನ್ನು ಇವರಿಬ್ಬರು ಮಾತಾಡಿಸಿದ್ದಾರೆ. ಅವರು ಬರೆದಿರುವ ಕೆಲವು ಸಾಲುಗಳನ್ನು ಓದಿ-
* ಅವರ ‘ನಜೀರ್’ ಎಂಬ ಹೆಸರು ಬೇರೆ ಏನೂ ಅಲ್ಲದಿದ್ದರೂ ಅವರು ಮುಸ್ಲಿಮ ಎಂಬುದನ್ನು ಜಗತ್ತಿಗೇ ಸಾರಿ ಹೇಳುತ್ತದೆ.
* ಅವರ ಒಬ್ಬ ತಮ್ಮ ಈ ವರ್ಷ ಪಿಯುಸಿ ಮುಗಿಸಿದ್ದಾನೆ. ಮುಂದೆ ಅವನನ್ನು ‘ಯಾವ ಲೈನಿಗೆ’ ಹಾಕಿದರೆ ಒಳ್ಳೆಯದು ಎಂದು ಹಲೀಮಾ ನಮ್ಮ ಬಳಿ ವಿಚಾರಿಸಿದರು. ನಾವು ಕಂಪ್ಯೂಟರ್ ಕೋರ್ಸ್, ಬಿಸಿನೆಸ್ ಮ್ಯಾನೇಜ್‌ಮೆಂಟ್ ಇತ್ಯಾದಿಯಾಗಿ ನಮಗೆ ಆ ಕ್ಷಣ ತೋಚಿದ್ದನ್ನು ಹೇಳಿ, ಕೊನೆಗೆ ‘ವಕೀಲ ವೃತ್ತಿಯ ಕೋರ್ಸ್ ಕೂಡ ಒಳ್ಳೆಯದೆ; ನಿಮ್ಮವರಿಗೆ ಈಗ ಒಳ್ಳೆಯ ವಕೀಲರ ಅಗತ್ಯ ತುಂಬ ಇದೆ ’ಎಂದು ಹೇಳಿದೆವು.
* ನಜೀರ್ ಮತ್ತು ಅವರ ಸಹೋದ್ಯೋಗಿಗಳು ಕ್ರಯ ಕೊಟ್ಟು ಸಾಗಿಸುವ ಜಾನುವಾರು, ಮಾರಾಟವಾಗದೆ ಅವುಗಳ ಒಡೆಯರ ಹಟ್ಟಿ ಕೊಟ್ಟಿಗೆಗಳಲ್ಲೇ ಕೊನೆಯವರೆಗೂ ಉಳಿದೇ ಬಿಡುವ ಸನ್ನಿವೇಶವನ್ನು ಊಹಿಸಿಕೊಳ್ಳಿ....ರೋಗ ಬಾಧೆಗಳಾಗಿ ಹುಲ್ಲು ನೀರು ಮುಟ್ಟದ ಅಥವಾ ಹಾಲು ಇಳಿಸಲು ಒಲ್ಲದ ಜಾನುವಾರು ಕೊಟ್ಟಿಗೆಯಲ್ಲಿ ಇರುವುದು ಎಂದರೆ ಮನೆಯ ಒಳಗೆ ಹಾಸಿಗೆ ಹಿಡಿದ ಸಣ್ಣ ಮಕ್ಕಳು ಅಥವಾ ವೃದ್ಧರಿದ್ದ ಹಾಗೆ.

ಹೀಗೆ ಈ ಸಂದರ್ಶನ ಪೂರ್ತಿ ಅನಗತ್ಯ ರಂಪ ಇದೆ. ಅವರ ಅಭಿಪ್ರಾಯಗಳು ಸರಿಯೊ ತಪ್ಪೊ ಬೇರೆ ವಿಚಾರ. ಆದರೆ ಈ ಸಂಕಿರಣದ ಚೌಕಟ್ಟನ್ನು ಅದು ಮೀರಿಹೋಗಿದೆ. ನಜೀರ್‌ಗಿಂತ ಹೆಚ್ಚಾಗಿ ಸಂದರ್ಶಕರೇ ಮಾತಾಡುತ್ತಾರೆ. ಚೆನ್ನಾಗಿ ಹದವಾಗಿ ಬರೆಯಬಲ್ಲ ಜಿ. ರಾಜಶೇಖರ ಕೂಡಾ, ಹೀಗೆ ಹಾದಿ ತಪ್ಪಿದ್ದು ಆಶ್ಚರ್ಯ. ಧರ್ಮ ಸಮನ್ವಯಿಗಳ ಬಗ್ಗೆಯೇ ಕನಿಕರ ಬರುವಂತಾಗುವುದು ಈ ಸಂದರ್ಶನದ ವಿಶೇಷ. ಓದುವ ಕುತೂಹಲ ಹುಟ್ಟಲು ಇಷ್ಟು ಸಾಕು! ಗಾಂಧಿ ಬಜಾರ್‌ನ ‘ಅಂಕಿತ’ದಲ್ಲಿ ದೇಶಕಾಲದ ಬಿಡಿ ಪ್ರತಿ ಲಭ್ಯ. ನಾಲ್ಕು ಸಂಚಿಕೆಗಳಿಗೆ ವಾರ್ಷಿಕ ಚಂದಾ ೩೦೦ ರುಪಾಯಿಗಳು. ಸಂಪರ್ಕಕ್ಕೆ deshakaala@gmail.com.

ಸಂದರ್ಶಿಸಲ್ಪಟ್ಟ ಎಲ್ಲ ವ್ಯಕ್ತಿಗಳಲ್ಲಿ ಮೂಲವಸ್ತುವಾಗಿ ಶ್ರೀ ಎಂಬ ಸಿರಿ ಎಂಬ ದುಡ್ಡೇ ಕಾಣುತ್ತಿದೆಯೆ? 'ನೋಡಿ...ಮೊದಲು ಈ ಶಾಲೆ ಕಾಲೇಜುಗಳನ್ನು ಒಡೀಬೇಕು’ ಎನ್ನುವ ಭಟ್ಟರ ಮಾತಂತೂ ದೊಡ್ಡದೊಂದು ವಾಗ್ವಾದಕ್ಕೆ ನಮ್ಮನ್ನು ಎಳೆಯುವಂತಿದೆ. ಶ್ರೀಸಾಮಾನ್ಯನಲ್ಲದೆ ಸಾಮಾನ್ಯಶ್ರೀಗಳೂ ಇದ್ದಾರೆಯೆ?! ಓದುವ ಮನಸ್ಸು ಮಾಡಿ.

(ಫೋಟೊ: ಕೆ.ಭಾಗ್ಯಪ್ರಕಾಶ್, ಕೃಪೆ: business line)

Read more...

July 01, 2009

'ಕೇವಲ' ಪೋಟೊಗಳು !

ಬಸ್ಸಿನೊಳಗಿಂದ ಕಂಡ ಮಳೆ
ನೀನು ಮತ್ತು ನಾನು
ನಿಲ್ಲು ನಿಲ್ಲೆಲೆ ಒಮ್ಮೆ, ಕ್ಲಿಕ್ಕಿಸುವೆ ನಿನನೊಮ್ಮೆ !

ಗೋಕರ್ಣ ಬೀಚ್‌ನಲ್ಲಿ ಸಿಕ್ಕ ಇರ್ಫಾನ್ ಪಠಾಣ್ !
ಎಂಥಾ ಮರಳಯ್ಯ ಇದು ಎಂಥಾ ಮರುಳು - ಓಂ ಬೀಚ್‌ನಲ್ಲಿ

ಆನುದಾದಾರ ತಾಯಿ, ಗೌರೀಶರ ಮಡದಿ- ಶಾಂತಾ ಕಾಯ್ಕಿಣಿ

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP