February 13, 2008

ಅಂತಃ'ಪುರ’ ಗೀತೆ

5
ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೋಡಯ್ಯನಿನ್ ಮಗಳ ಮುಖದಂದ.
ಅಲ್ಲಿ ದುಡಿದದ್ದೆಲ್ಲ ಬಾಡಿಗೆ ಬದುಕಿಗೆ ದಂಡ
ಈ ತೋಟ, ತಿಥಿ ಊಟ, ಬಿಡೋದೇನೋ ಭಂಡ?
ಇಲ್ಲಿದ್ರೂ ಕುಡೀತೀಯ ಶನಿವಾರ ಹೆಂಡ !

ಗಂಗೆಯಾ ನೊರೆ ಹಾಲು, ಒಂದೆಲಗ ಸಿಹಿ ತಂಬ್ಳಿ
ಮೂಲೆ ತೋಟದ ಮಾವಿನ ಮಿಡಿ
ನೀ ನೆಟ್ಟಿರೋ ಇನ್ನೊಂದು ಕುಡಿ?!
ಮರೆವೆಯಾ ಹೃದಯದ ದೇವಾನಂದ.

ಈ ಸಾಲ ಸಾಲದೂಂತ
ಆ ನಕ್ಷತ್ರಿಕನಲ್ಲಿ ಕೇಳಬೇಡ,
ದುಡಿದರೆ ಅಲ್ಲಿ ಊಟ ಸಿಗತ್ತೆ ಹಸಿವಿರಲ್ಲ,
ಬಸ್ಸು ನೂರಿದ್ದರೂ ಸೀಟು ಸಿಗಲ್ಲ,
ಏದುಸಿರು ನಿಟ್ಟುಸಿರೂ ಸಹಜವಲ್ಲ
ಗುರುತು ನೆನಪು ಉಳಿಯದಲ್ಲಿ ಬದುಕಬೇಡ.
***
ಹೋಗೋದಿದ್ರೆ ಹೋಗು
ಹಚ್ಕೊಂಡು ಸಿಗರೇಟು
ಕೊಟ್ಟೋಗು ಪಾಪುಗೂ ಒಂದೇಟು
ಅದಾದ್ರೂ ಕೈಗೂಸು ಅಳತಿರ್ಲಿ ಅಳುವಷ್ಟು
ಕರು ಬಿಟ್ಕೊಂಡು ಬರ್‍ತೀನಿ ನಿಲ್ಲೊಂದು ತಾಸು.

ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೀ ಹೋಗ್ತೀನಿ ಅಂದ್ರ...
ನನ್ ಎದೆ ಕೆಂಡ.
--------------------------
(ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕಾಡೊಳಗಿನ ಊರೊಂದರಲ್ಲಿ ಅಡಿಕೆ ಕೃಷಿಯಲ್ಲಿ ಬದುಕುತ್ತಿದ್ದ ನಾಲ್ವರ ಮಧ್ಯಮ ವರ್ಗದ ಕುಟುಂಬ. ಮಗಳು ದೂರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹೈಸ್ಕೂಲು ಓದುತ್ತಿದ್ದಳು. ಮಗನಿಗೆ ಐದಾರು ವರ್ಷ. ನಲವತ್ತರ ವಯಸ್ಸಿನ ಆ ಮನೆಯ ಯಜಮಾನ ಆರೇಳು ಕೋಣೆಗಳ ಹೊಸ ತಾರಸಿ ಮನೆ ಕಟ್ಟಿಸಿದರು. ಗೃಹಪ್ರವೇಶವಾದ ತಿಂಗಳಲ್ಲೇ ಬೆಂಗಳೂರಿಗೆ ಬಂದು ಸಣ್ಣ ಕೋಣೆ ಹಿಡಿದರು. ಯಾಕೆ ಅಂತೀರಾ? ಬೆಂಗಳೂರಲ್ಲಿ ದುಡಿದು ಸಂಪಾದಿಸಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲು !
ಹಳ್ಳಿಗಳಲ್ಲಿರುವ 'ಸ್ಥಿತಿವಂತ-ಗುಣವಂತ’ ಹುಡುಗರನ್ನೂ ಧಿಕ್ಕರಿಸಿ ನಗರದಲ್ಲಿರುವ ಹುಡುಗನೇ ಆಗಬೇಕೆಂದು ಬಹುತೇಕ ಯುವತಿಯರು ಪಟ್ಟು ಹಿಡಿಯುತ್ತಿರುವ ಕಾಲದಲ್ಲಿ, ಈ ಮನೆಯ ಸ್ಥಿತಿ ಕೊಂಚ ವ್ಯತ್ಯಸ್ಥವಾಗಿದೆ ಅವರ ಪತ್ನಿ ಏನಂದರೋ ಗೊತ್ತಿಲ್ಲ. ಅಂತೂ ಈ ಪದ್ಯ ಅರ್ಧ ಹೊಸೆದಿರುವಾಗ, ಆ ಘಟನೆ ನೆನಪಾಗಿ ಬರೆದುಕೊಂಡಿದ್ದೇನೆ.)

Read more...

February 09, 2008

ಸಿಟಿ ಗೀತ

3

ಗಲಗಲ ಅಲುಗುತ್ತಿದೆ ಈ ನಗರ
ಬೆಳೆದು ಅಗಲಗಲ ಜಗದಗಲ.
ಇವತ್ತು ಬರ್ಲಾ, ನಾಳೆ ಆಗಲ್ಲ
ಪೈನ್‌ಕಿಲ್ಲರ್ ಮಾತ್ರೆ ತರ್ಲಾ, ಸಂಬಳ ಸಾಕಾಗಲ್ಲ
ಆ ಓನರ್ ಸರಿಯಿಲ್ಲ, ನೆಟ್ ಕನೆಕ್ಟ್ ಆ..ಗ್ತಿ..ಲ್ಲಾ..

ಅಮ್ಮ ಫೋನ್ ಮಾಡಿ ಅಂದಳು,
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?

4
ಮೊನ್ನೆ ಬಂದವಳು ಅಂದಳು-
ಹೌದು, ಗದಗುಡುತ್ತಿದೆ ಶಹರ
ನಗ ತುಂಬಿದ ನಗರ
ತುಯ್ಯುತಿರುವ ಸಾಗರ.

ಈ ನಗರಿಗೆ ಹತ್ತಾರು ಕಂಪನಾಂಕ
ಅಂಕ, ಬಿಂಕ, ಎಲ್ಲದಕ್ಕೂ ಸುಂಕ
ಇಲ್ಯಾಕೆ ಊದ್ತೀಯೋ ಶಂಖ?

ನಾನಂದೆ-
ಇದೋ ಮೂಗು ಹಿಡಿದೆ ಅಮ್ಮಾ, ಕಣ್ಮುಚ್ಚು
ಈ ನಗರವ ಕೊಂಚ ಕಲಕಿಸಿದೆ
ಕುಡಿದುಬಿಡು.
----------------------
('ಪೇಟೆಯ ಪಾಡ್ದನ’ವನ್ನು ಪ್ರಕಟಿಸಿದ ಅವಧಿ ಮತ್ತು ದಟ್ಸ್‌ಕನ್ನಡ ಜಾಲತಾಣಗಳಿಗೆ ಕೃತಜ್ಞತೆಗಳು. ಲೋಗೊ ಕೃಪೆ-ಅಪಾರ)

Read more...

February 06, 2008

ಪೇಟೆಯ ಪಾಡ್ದನ

1
ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು .

ಕಣ್ಣುಜ್ಜಿ ನೋಡಿಕೊಳ್ಳಿ ,ಅಗೋ ...
ಆ ಗೊಂಬೆಯೂ ಮಾರಾಟವಾಯಿತು !

2
ಇದು ಉದ್ಯೋಗ ಪರ್ವದ ಭಾಗ .
ದ್ಯೂತ ಪ್ರಸಂಗ .
ತನ್ನನ್ನೇ ಒತ್ತೆಯಿಟ್ಟು ಸೋತ ರಾಯನಿಗೆ
ಇನ್ನೊಬ್ಬಳ ಒತ್ತೆಯಿಡಲು ಅಧಿಕಾರವಿದೆಯೆ?
ಓಲೇಲಯ್ಯಾ ಐಸಾ, ಎಳೀರಿ ಸೀರೆ, ಎಸೆಯಿರಿ ಪೈಸಾ
'ಗಿನ್ನಿಸ್ ದಾಖಲೆಗೆ ಇನ್ನೊಂಚೂರು' ಅಂದ
ಕೃಷ್ಣಾ ಮಾಲ್ ಸೀರೆ ಸೆರಗು ಎಷ್ಟು ಚೆಂದ !

ಹೋ ಅದೋ ಮತ್ತೆ ದಾಳ, ಗಾಳ, ಗೆದ್ದೆವು , ಮನೆಹಾಳ.
ಸೋತವರಿಗೆ ಹನ್ನೆರಡು ವರ್ಷ ಹಳ್ಳಿವಾಸ
ಗೆದ್ದವರಿಗೊಂದು ವರ್ಷ ನಗರದಜ್ಞಾತವಾಸ !

Read more...

February 01, 2008

ನಡೆದು ನಡೆದು ಬರ್ರಿ...ಪುರಾಣದ ಕಾಲುಭಾಗ

ತಲೆ ಇದ್ದರೂ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ ?

ಕಲ ಪ್ರಾಣಿಗಳಲ್ಲಿ ಮನುಷ್ಯರ ಹೆಚ್ಚುಗಾರಿಕೆ ಕಂಡುಬಂದದ್ದು ಮಾತಾಡುವುದರಿಂದ ಹಾಗೂ ಎರಡೇ ಕಾಲುಗಳಲ್ಲಿ ನಡೆಯುವುದರಿಂದ. (ಬುದ್ಧಿಶಕ್ತಿಯಿಂದ ಅಂತಲೂ ಹೇಳಿಯಾರು, ನಿಮಗೆಂದಾದರೂ ಹಾಗೆ ಸತ್ಯವಾಗಿ ಅನ್ನಿಸಿದೆಯೆ?!) ಆದರೆ ಇವೆಲ್ಲಕ್ಕಿಂತಲೂ ವಿಶೇಷ ಅನಿಸಿದ್ದು ...ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ತಾಕತ್ತು ಇರುವುದರಿಂದ ! ಯಾವುದಕ್ಕುಂಟು ಈ ಭಾಗ್ಯ? ಈ ಭಂಗಿಗಿರುವ ಘನತೆ-ಗತ್ತು , ಯೋಗಾಸನದವರು ತಲೆ ಮೇಲೆ ಕಾಲು ಹಾಕಿದರೂ ಉಂಟೆ? ಹಾಗಾಗಿ ನಾವೆಲ್ಲ ಹೇಳಬೇಕು 'ಕಾಲಾಯ’ ತಸ್ಮೈ ನಮಃ

ಕಾಲುಭಾಗ, ಕಾಲುದಾರಿ, ಕಾಲುಂಗುರ (ಕಾಲ್ಬೆರಳುಂಗುರ ಅಲ್ಲ !) ಪದಗಳಲ್ಲದೆ ಕಾಲುವೆ, ಕಾಲಂ ಪದಗಳೂ ಕಾಲಿನಿಂದಲೇ ಬಂದದ್ದು ಅಂತ ಸಾಧಿಸಿದರೆ ತೋರಿಸಬಹುದು. ಯಾಕೆಂದರೆ ಹುಡುಕುತ್ತಿದ್ದ ಬಳ್ಳಿಯಾದರೂ ತೊಡರುವುದು ಕಾಲಿಗೆ ತಾನೆ ! ಬಲಗಾಲಿಟ್ಟು ಒಳಗೆ ಬಂದರೆ ಎಲ್ಲವೂ ಶುಭಪ್ರದ. ಕಾಲಿನಲ್ಲೇ ಇರುವ ಪಾದಕ್ಕಿಂತ ಪವಿತ್ರವಾದದ್ದು ನಮ್ಮಲ್ಲಿ ಬೇರ್‍ಯಾವುದೂ ಇಲ್ಲ. ಪಾಂಡವರು ರಾಜಸೂಯ ಯಾಗ ಮಾಡುವಾಗ, ಅತಿಥಿಗಳ ಪಾದ ತೊಳೆಯುವ ಪುಣ್ಯದ ಕೆಲಸ ನನಗಿರಲಿ ಅಂದನಂತೆ ದೇವ ಶ್ರೀಕೃಷ್ಣ . ಯಾರಾದರೂ ಹೊಸ ರಂಗಕ್ಕೆ ಪ್ರವೇಶಿಸಿದಾಗ ಪದಾರ್ಪಣೆ ಅನ್ನದೆ ಶಿರಾರ್ಪಣೆ ಅಂತೆಲ್ಲ ಅನ್ನುವುದುಂಟೆ? ಕಾಲಿಗೆ ಬಿದ್ದರೆ ಆತ ಪೂರ್ತಿ ಶರಣಾಗತ ಎಂಬುದರಲ್ಲೆ ಸುಳ್ಳುಂಟೆ? ಯಾವ ನೃತ್ಯವಾದರೂ ಪ್ರಧಾನವಾದ ಗೆಜ್ಜೆಯನ್ನು ಕಾಲಿಗಲ್ಲದೆ ಕುತ್ತಿಗೆಗೆ ಕಟ್ಟುತ್ತಾರೆಯೆ? ತಲೆ ಇದ್ದರೂ ನಾವು ಕೆಲವು ಸಲ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ? ಹೀಗೆ ಮಹಿಮಾನ್ವಿತವಾದ ಕಾಲುಳ್ಳ ಕಾಲಾಳುಗಳಾದ ನಮಗೆ ಯಾವ ವಿಷಯವೂ ಕಾಲಕಸಕ್ಕೆ ಸಮ ಎನಿಸದಿರಲಿ.

ಈಗ ಕಾಲ್ಬುಡಕ್ಕೆ ಬರೋಣ. ಅಂದರೆ ಕಾಲಿನ ಮುಖ್ಯ ಕಾರ್‍ಯವಾದ ನಡಿಗೆಯ ಬಗ್ಗೆ ಗಮನಿಸೋಣ. ಈ ನಡಿಗೆಗೂ ನಡತೆಗೂ ಹತ್ತಿರದ ಸಂಬಂಧ ಇರುವುದು ತಮಗೆ ಗೊತ್ತಿದೆ. ದೇವರ ಗರ್ಭಗುಡಿಯ ಮುಂದಿನ ದಾರಿಗೆ 'ನಡೆ’ ಅನ್ನುತ್ತಾರೆ. ಸಭೆಯ ನಡಾವಳಿಯಂತೆ ದೈವದ ನಡಾವಳಿ ಅಂತ ದಕ್ಷಿಣಕನ್ನಡದ ಭೂತಕೋಲ ನಡೆಸುವುದಕ್ಕೆ ಹೇಳುತ್ತಾರೆ ! ನಮ್ಮ ಕೆಲವು ರಾಜಕೀಯ ಪುಢಾರಿಗಳು ಹೀಗೆ ಹಾಡುವುದೂ ಉಂಟು-'ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ಮುಂದೆ, ನನ್ನ ಹಿಂದೆಯೆ ನೀನು ನುಗ್ಗಿ ನಡೆ ಮುಂದೆ !’ ಆದರೆ ನಡಿಗೆಯಿಂದಲೇ ಮನುಷ್ಯನೊಬ್ಬನ ಗುಣ ಸ್ವಭಾವವೂ ಕೊಂಚಮಟ್ಟಿಗೆ ಅರಿವಾದೀತು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ನಡೆವವರದ್ದು ನಿಧಾನ ಪ್ರವೃತ್ತಿಯೆಂದೂ, ದಾಪುಗಾಲು ಹಾಕುತ್ತ ಹೋಗುವವರು ಗಡಿಬಿಡಿ ಸುಬ್ರಾಯರೆಂದೂ ಕೆಲವರು ವಿಶ್ಲೇಷಿಸಬಹುದು. ಅಂತೂ ಕಾಲ್ನ-ಡಿಗೆ ಎಲ್ಲರೂ ಬರಲೇಬೇಕು ಬಿಡಿ.

ಕೊಂಚ ಹಿಂದಕ್ಕೆ ಕಾಲಿಟ್ಟರೆ...ನಮ್ಮ ಕವಿಗಳ ಗಮನವೆಲ್ಲ ಹಂಸಗಮನೆ, ಮದಗಜಗಮನೆಯರ ಮೇಲೆಯೇ. ನೀ ನಡೆವ ದಾರಿಯಲಿ ಅದೂ ಇದೂ ಹಾಸಿರಲಿ ಅಂತ ಹಾಡಿದ ಜನರೆಷ್ಟಿಲ್ಲ? ಇತ್ತೀಚೆಗೆ ಕ್ಯಾಟ್‌ವಾಕ್, ಡಾಗ್‌ವಾಕ್‌ಗಳೆಲ್ಲ ಹೆಚ್ಚಾದ ನಂತರವಷ್ಟೇ, ನಡಿಗೆಯಲ್ಲಿ ಮುಖ್ಯವಾದ ಕಾಲುಗಳಿಗೂ ಮುಖಸೌಂದರ್‍ಯದಷ್ಟೇ ಪ್ರಾಮುಖ್ಯ ಸಿಕ್ಕಿದ್ದು. 'ಕಾಲುಗಳ ಕಾಳಜಿ’ ಈಗ ಸೌಂದರ್‍ಯಶಾಸ್ತ್ರದ ಮುಖ್ಯಪಾಠಗಳಲ್ಲೊಂದು. 'ನುಡಿದರೆ ಮುತ್ತಿನ ಹಾರದಂತಿರಬೇಕು’...ನಡೆದರೆ ಏನು ಅಂತ ನೀವಿನ್ನು ಸೇರಿಸಬೇಕು ! ಕಣ್ಣಿನ ಬಗೆಗಷ್ಟೇ ಹೊಗಳುತ್ತಿದ್ದವರೀಗ 'ನೀಳ ಕಾಲುಗಳ ಸುಂದರಿ’ ಅಂತ ವರ್ಣಿಸತೊಡಗಿರುವುದು ಕಾಲುಪ್ರಿಯರಿಗೆ ಸಂತಸದ ಸುದ್ದಿಯೇ. (ಇನ್ನು , ಕಚ್ಚಿ ಎಳೆಯೋ ಕಾಲಿನ ಬಗ್ಗೆ ಯೋಚಿಸಬೇಡಿ ಮಾರಾಯ್ರೆ) ಫ್ಯಾಷನ್ ಷೋ ಎಂಬ ಶೋಕಿ ಶುರುವಾದ ಮೇಲಂತೂ ಚೆಂದದ ಕಾಲುಗಳ ಒಂದೊಂದು ಹೆಜ್ಜೆಗೂ ಲಕ್ಷ ರೂಪಾಯಿ. 'ಮೆಲ್ಲಮೆಲ್ಲನೇ ಬಂದಳೇ/ ಬಂದನೇ’ ಎರಡಕ್ಕೂ ಡಿಮ್ಯಾಂಡ್. 'ನಡೆದರೆ ನಡು ಬಗ್ಗದಂತಿರಬೇಕು’ ಅನ್ನುತ್ತಾ ರ್‍ಯಾಂಪ್ ಏರುವ ಪ್ರದರ್ಶನ ಗೊಂಬೆಗಳ ಕೈಹಿಡಿಯುವುದೇ ಕಾಲಲ್ಲವೇ? ಆಹಾ 'ಕಾಲೇಷು’ ರಮ್ಯಂ !

ದಕ್ಷಿಣಕನ್ನಡ-ಉಡುಪಿಯ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ , ದೇವರ ಮೂರ್ತಿಯನ್ನು ಸುಮಾರು ೧೫ ಕೆಜಿ ತೂಕದ ಅರ್ಧಚಂದ್ರಾಕೃತಿಯ ಬೆಳ್ಳಿಯ ಪ್ರಬಾಳೆಯಲ್ಲಿಟ್ಟು ಒಬ್ಬನೇ ಹೊತ್ತುಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಆತನ ಜತೆಗೆ ವಾದ್ಯ-ಚೆಂಡೆಯವರೂ ಇರುತ್ತಾರೆ. ಹದಿನೈದಿಪ್ಪತ್ತು ಕೆಜಿ ಭಾರ ಹೊತ್ತ ಆ ವ್ಯಕ್ತಿ ಎರಡೂ ಕೈಗಳನ್ನು ಬೀಸುತ್ತಾ ತಲೆಯ ಮೇಲೆ ನಿಂತಿರುವ ದೇವರೆಡೆಗೆ ಸಂಪೂರ್ಣ ಧ್ಯಾನವಿಟ್ಟು ಹೆಜ್ಜೆ ಹಾಕುವ ನಡಿಗೆ ಬಹಳ ವಿಶಿಷ್ಟ. ಇನ್ನು ಮಲೆನಾಡಿನ ಹೊಲದ ಹಾದಿಗಳಲ್ಲಿ, ಅಡಿಕೆಮರ ಹಾಕಿದ ಸಂಕಗಳಲ್ಲಿ , ಸೊಂಟದಲ್ಲಿ ಕೊಡ ಇಟ್ಟುಕೊಂಡು ಬರುವಲ್ಲಿ ಜನರ ನಡಿಗೆಗಳನ್ನು ಗಮನಿಸಿದರೆ ಕಾಲ್ನಡಿಗೆಯ ಕಾಲಂಶ ಮಹಾತ್ಮೆಯಾದರೂ ಅರಿವಾದೀತು.

ನಿಂದು ಕಾಗೆಕಾಲು ಅಕ್ಷರ
ಪ್ರೈಮರಿಯಲ್ಲಿ ಸೊಟ್ಟಮೊಟ್ಟ ಅಕ್ಷರ ಬರೆವವರಿಗೆ 'ನಿಂದು ಕಾಗೆಕಾಲು ಅಕ್ಷರ’ ಅಂತ ಮಾಷ್ಟ್ರು ಹೇಳುವುದುಂಟು. ಉದ್ದಕ್ಕಿದ್ದವರಿಗೆ ಕೊಕ್ಕರೆಗಾಲು ಅಂತ ಸಹಪಾಠಿಗಳು ಹೀಯಾಳಿಸುವುದುಂಟು. ಕಾಲು ಕೆರೆದು ಜಗಳಕ್ಕೆ ಬರುವ ಅವರ ಮುಕ್ಕಾಲು ಬುದ್ಧಿಗೂ ಉತ್ತರಿಸದೆ ಬಿಡಬೇಡಿ. ಕಾಗೆ ಕಾಲು ತಲೆಗೆ ತಗುಲಿದರೆ ಆತನ ಅಂತ್ಯಕಾಲ ಸಮೀಪಿಸಿತೆಂದೇ ಅರ್ಥ, ಹುಷಾರ್. ಇನ್ನು ಕತ್ತೆ ಕಾಲಿನ ಒದೆಯ ಬಗ್ಗೆ ನಿಮಗೆ ಹೇಳಬೇಕಾದೀತೇ?! ಹಾಲು ಕರೆವಾಗ ಎಷ್ಟು ಜನರ ಕಾಲಿಗೆ ಎಷ್ಟೆಷ್ಟು ಸಲ ಹಸು ತುಳಿದಿದೆ ಅಂತ ಮನೆಯ (ಹಳೆ)ಹೆಂಗಸರನ್ನು ಕೇಳಿ. ಮನುಷ್ಯನಿಗೆ- ಓಡಾಡಲು, ವಾಹನ ಚಲಾಯಿಸಲು, ತುದಿಗಾಲಿನಲ್ಲಿ ನಿಂತು ಇಣುಕಲು (ಇದು ಮಾನವರ ವಿಶೇಷ ಸಾಮರ್ಥ್ಯ) ಕಾಲ್ಗಳೇ ಬೇಕಲ್ಲ. ಮಹಾಭಾರತ ನಡೆದದ್ದೇ ಕೌರವನ ತೊಡೆಯ ಮೇಲೆ, ತಿಳಕೊಳ್ಳಿ.....ಅಂತ ಸಮಾಧಾನವಾಗಿ ಹೇಳಿ !

ಆದರೂ ಸತ್ಯ ಹೇಳುತ್ತೇನೆ. ಕಾಲುಗಳಿಂದ ಇರುವ ಒಂದೇಒಂದು ತೊಂದರೆ ಎಂದರೆ ಒಡೆವ ಅಂಗಾಲು. ಅದೆಷ್ಟು ಮುಲಾಮು, ಆಯುರ್ವೇದ ಉಪಚಾರಗಳು ಬಂದರೂ ಒಡೆಯುವ ಕಾಲುಗಳು ಒಡೆಯುತ್ತಲೇ ಇವೆ. ಒಡೆದುಒಡೆದು ಚಂಬಲ್ ಕಣಿವೆಗಳಂತಾಗಿ, ಕಪ್ಪು ಮಣ್ಣು ತುಂಬಿಕೊಂಡು, ರಕ್ತ ಒಸರುತ್ತಾ , ಊರಲಾಗದಷ್ಟು ನೋಯುತ್ತಾ, ಕೊಂಚ ವಾಸನೆ ಹೊರಡಿಸುತ್ತಾ ಛೆ ಛೆ ಸಾಕಪ್ಪಾಸಾಕು. ಹಾಗಾಗಿಯೇ ನಮ್ಮ ಕೆಲವು 'ನಗರದೇವತೆ’ಗಳ ಪಾದಾಂಬುಜ ನೆಲವನ್ನೇ ಸ್ಪರ್ಶಿಸುವುದಿಲ್ಲ. ಅವುಗಳಿಗೆ ಯಾವತ್ತೂ ಮೆತ್ತನೆ ಚೀಲ. ಕೆಲವರ ಕೆನ್ನೆಗಿಂತ ಅವರ ಅಂಗಾಲು ನುಣು[. ಎಷ್ಟೆಂದರೆ ಅವರ ಕಾಲನ್ನೇ ನಮ್ಮ ಕೆನ್ನೆಗೆ ಒತ್ತಿಕೊಳ್ಳೋಣ ಅನಿಸುವಷ್ಟು !
ಕಾಲಿನ ಬಗ್ಗೆಯೇ ಆದರೂ ಕೈಯಲ್ಲೇ ಬರೆಯಬೇಕಾಗಿಬಂದ ಈ ಬರೆಹವನ್ನು ನಿಮ್ಮ ಕಾಲಿಗೆ ಹಾಕುತ್ತಿದ್ದೇನೆ. ಇದು ಪುರಾಣದ 'ಕಾಲು’ಭಾಗ ಅಷ್ಟೆ. ಕೈಹಿಡಿದು...ಅಲ್ಲಲ್ಲ...ಕಾಲು ಹಿಡಿದು ಒಪ್ಪಿಸಿಕೊಳ್ಳಿ !

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP