November 14, 2010

ಸೂರಿಯ ಪಂಚರಂಗಿ ! ಒಂದು ಟಿಪ್ಪಣಿ



ಇದು ಬಣ್ಣಗಳಲ್ಲಿ ಅದ್ದಿ ತೆಗೆದ ಸಿನಿಮಾ. ಪ್ರತಿ ಫ್ರೇಮಿಗೂ ಬಣ್ಣ, ನಾಯಕನ ಮನಸ್ಸಿಗೆ ಹಲವು ಬಣ್ಣ, ಕತೆಗೆ ಬಣ್ಣ, ಡಯಲಾಗುಗಳಿಗೆ ಬಣ್ಣ. ಹಾಗಂತ ಇದು ಕರಣ್ ಜೋಹರ್‌ನ ಬಿಳಿ-ಗುಲಾಬಿ ಬಣ್ಣಗಳೂ ಅಲ್ಲ. ಒಳ್ಳೆಯವನಿಗೆ ಒಳ್ಳೆಯದಾಗುತ್ತದೆ, ಕೆಟ್ಟವನಿಗೆ ಕೆಟ್ಟದಾಗುತ್ತದೆ ಎಂಬ ಬ್ಲ್ಯಾಕ್ ಅಂಡ್ ವೈಟ್‌ಗಂತೂ ಇಲ್ಲಿ ಜಾಗವಿಲ್ಲ. ಯಾಕೆಂದರೆ ಇದು ಸೂರಿ ದುನಿಯಾ.

ಇಲ್ಲಿ ಮಾತಿದೆ, ಹೊಡೆದಾಟ ಇದೆ, ಹಾಡಿದೆ, ಡ್ಯಾನ್ಸ್ ಇದೆ, ಕಣ್ತುಂಬುವ ದೃಶ್ಯಗಳಿವೆ. ಇವೆಲ್ಲ ಸೇರಿ ಕ್ಷಣಕಾಲ ನಮ್ಮನ್ನು ಅವಾಕ್ಕಾಗಿಸಿ ಮೌನಕ್ಕೆ ತಳ್ಳುವ ಶಕ್ತಿ ಇದೆ. ಸಿನಿಮಾದಲ್ಲಿ ಕತೆ ಇದೆಯಾ ಅಂತ ಹುಡುಕುವವರ ಮುಸುಡಿನ ಎದುರು ಹತ್ತು ಕತೆ ಬಿಚ್ಚಿಕೊಳ್ಳುತ್ತವೆ. ಪ್ರತಿಯೊಂದು ಫ್ರೇಮನ್ನೂ ಸೂರಿ ಸಮೃದ್ಧವಾಗಿಸೋದನ್ನು ನೋಡುವುದೇ ಚೆಂದ. ಎಲ್ಲವೂ ಕಣ್ತುಂಬಿಕೊಳ್ಳುತ್ತಾ, ನಮ್ಮ ಕಣ್ಣುಗಳಿಗೆ ಬಿಡುವೇ ಇಲ್ಲ.
ಸೂರಿ ಸಿನಿಮಾಗಳ ಹೀರೋಗಳೆಲ್ಲ ಹವಾಯಿ ಚಪ್ಪಲಿಯ ವೀರರೇ. ಒಣರೊಟ್ಟಿ ತಿಂದು ಗಟ್ಟಿಯಾದವರೇ. ಕೆಲಸ ಇಲ್ಲ, ಗೋತ್ರ ಇಲ್ಲ, ಮನೆ ಇಲ್ಲ, ಸಂಬಂಧಿಗಳು ಯಾರು ಗೊತ್ತಿಲ್ಲ, ಕೈಯಲ್ಲಿ ಕಾಸಿಲ್ಲ. ಆದರೂ ಇವೆಲ್ಲ ಇದ್ದವರನ್ನು ಅಲುಗಾಡಿಸಬಲ್ಲವರು.
ಇವರು ತಮ್ಮಲ್ಲಿ ಇದ್ದದ್ದನ್ನು ಇಲ್ಲದವರಿಗೆ ಕೊಡುತ್ತಾರೆ. ತಮ್ಮಲ್ಲಿ ಇಲ್ಲದ್ದನ್ನೂ ಇಲ್ಲದವರಿಗೆ ಕೊಡಿಸುತ್ತಾರೆ ! ಇಂಥವರು ಹೀರೋ ಅಲ್ಲದೆ ಮತ್ತಿನ್ನೇನು?!

ಚಿನ್ನದ ಬಣ್ಣಕ್ಕೂ ಮಣ್ಣಿನ ಬಣ್ಣಕ್ಕೂ ಅಂಥಾ ವ್ಯತ್ಯಾಸ ಇದೆಯಾ? ಹೊಳೆದರೆ ಚಿನ್ನ, ಹೊಳೆಯದಿದ್ದರೆ ಮಣ್ಣು. ಹಾಗಾಗಿಯೇ ಏನೋ, ಸೂರಿಗದು ಒಲವಿನ ಬಣ್ಣ. ಕೊಂಚ ಹಳದಿ, ಕೊಂಚ ಕಂದು. ಆ ಗೋಧಿ ಬಣ್ಣ ಮನುಷ್ಯನ ಮೈಬಣ್ಣವೂ ಹೌದಲ್ಲ.
ತುಂಬಿ ಬಂದ ಮನಸ್ಸನ್ನು ಅಕ್ಷರಗಳಲ್ಲಿ ತುಂಬಿ ಕಳಿಸುವುದಷ್ಟೇ ಈ ಟಿಪ್ಪಣಿಯ ಉದ್ದೇಶ. ಬಗೆದು ನೋಡಿದರೆ ಈ ಸಿನಿಮಾದಲ್ಲೂ ಸಾಕಷ್ಟು ಅರೆಕೊರೆಗಳು ಕಂಡಾವು. 'ದುನಿಯಾ’ವನ್ನು ಮೀರಿಸುವ ಸಿನಿಮಾ ಇದು ಅನ್ನುವಂತೆಯೂ ಇಲ್ಲ. ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂದು ಅರಿತಿರುವವರು, ಕನ್ನಡ ಸಿನಿಮಾದ ಗುಣಮಟ್ಟವನ್ನು ಗ್ರ್ರಹಿಸಿರುವವರು ’ಜಾಕಿ’ಯನ್ನು ಮನದುಂಬಿ ಅಭಿನಂದಿಸಬೇಕು.

Read more...

October 16, 2010

ಮದುವೆ ಮಾಡಿ ನೋಡು !



'ಜೀ ಕನ್ನಡ' ವಾಹಿನಿಯ ಯಶಸ್ವಿ ಧಾರಾವಾಹಿ ಚಿ|ಸೌ| ಸಾವಿತ್ರಿ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದಿದೆ. ಇದುವರೆಗೂ ದೊಡ್ಡ ಬಜೆಟ್‌ನ ಸಿನಿಮಾಗಳ ಚಿತ್ರೀಕರಣ ಮಾತ್ರ ನಡೆಯುತ್ತಿದ್ದ ಮೈಸೂರಿನ ಲಲಿತ ಮಹಲ್ ಅರಮನೆಯಲ್ಲಿ, ಚಿ|ಸೌ|ಸಾವಿತ್ರಿ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದೆ.
ಅದು ಸಾವಿತ್ರಿಯ ಮದುವೆ ಮಹೋತ್ಸವದ ಚಿತ್ರೀಕರಣ. ಚಿತ್ರೀಕರಣದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. 'ದಿಗ್ಗಜರು' 'ಪಾಂಡವರು' ಸೇರಿದಂತೆ ಅನೇಕ ಕನ್ನಡ, ತಮಿಳು ಚಿತ್ರಗಳ ಚಿತ್ರೀಕರಣ ನಡೆದಿರುವ ಐತಿಹಾಸಿಕ ಲಲಿತಮಹಲ್, ಬ್ರಿಟಿಷ್ ವೈಸರಾಯ್‌ಗಳು ಹಾಗೂ ವಿಶೇಷ ಅತಿಥಿಗಳಿಗಾಗಿ ಮೈಸೂರು ಮಹಾರಾಜರಿಂದ ೧೯೩೧ರಲ್ಲಿ ಕಟ್ಟಲ್ಪಟ್ಟಿದ್ದು. ಈಗ ಸರಕಾರಿ ತಾರಾ ಹೋಟೇಲ್ ಆಗಿ ಪರಿವರ್ತನೆಯಾಗಿದೆ. ಕಳೆದ ೨೫ ವರ್ಷಗಳಿಂದ ಚಿತ್ರೀಕರಣಕ್ಕೆ ನೀಡಲಾಗುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕರ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.
ಈ ಮದುವೆ ಯಾಕೆ ಮಹತ್ವದ್ದು?
'ಮನೆ ಕೆಲಸದ ಹುಡುಗಿ ಸಾವಿತ್ರಿ, ಮನೆಯೊಡತಿಯೇ ಆಗ್ತಾಳಾ?' ಎಂಬ ಪ್ರಶ್ನೆಗೆ ಉತ್ತರ ಈ ಮದುವೆಯಲ್ಲಿ ದೊರೆಯಲಿದೆ. ಸಾಧನೆ, ಸಂಸ್ಕಾರದಿಂದ ಸಾಮಾನ್ಯರೂ ಬಹಳ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಸಾವಿತ್ರಿ ದಿಕ್ಸೂಚಿಯಾಗುತ್ತಿದ್ದಾಳೆ. ಇಲ್ಲಿ ಇಬ್ಬರು ವರ, ಒಬ್ಬಳೇ ವಧು ! ಮೊದಲನೇ ವರ ಸಾವಿತ್ರಿಯ ಬಾಲ್ಯದ ಗೆಳೆಯ ವಿಶ್ವ. ಇನ್ನೊಬ್ಬ ವರ ರಾಜ್ಯದ ಮುಂದಿನ ಮುಖ್ಯಮಂತ್ರಿ ನರಸಿಂಹರಾವ್! ಅವರು ಸಾವಿತ್ರಿಗಿಂತ ೩೦ ವರ್ಷ ದೊಡ್ಡವರು. ಸಾವಿತ್ರಿಯ ವರ ಎಂಎಲ್‌ಎ ನರಸಿಂಹರಾವ್ ಆಗ್ತಾರಾ, ಗೆಳೆಯ ವಿಶ್ವನೇ ಆಗ್ತಾನಾ ಅಥವಾ ಇನ್ನೇನೋ ಬೇರೆಯದೇ ನಡೆಯುತ್ತಾ ಎನ್ನುವುದು ಸದ್ಯದ ಕುತೂಹಲ. ಅದೇನೇ ಇದ್ದರೂ ಈ ಮದುವೆಯಲ್ಲಿ ಸತ್ಯ ಅನಾವರಣಗೊಳ್ಳಲಿದೆ!
ಶ್ರುತಿನಾಯ್ಡು ನಿರ್ದೇಶನದಲ್ಲಿ ಜೈಜಗದೀಶ್, ಗೌತಮಿ, ಬಿ.ವಿ. ರಾಧಾ, ಮಂಡ್ಯ ರಮೇಶ್, ಸುಂದರ್, ನಂದಿನಿ ಪಟವರ್ಧನ್, ಶಿವಾಜಿರಾವ್ ಜಾಧವ್, ವೀಣಾ ರಾವ್, ಕಾವ್ಯ ಕಣ್ಣನ್ ಮೊದಲಾದ ಕಲಾವಿದರು ನಟಿಸುತ್ತಿದ್ದಾರೆ. ಈ ಯುಗದ ಹೊಸ ಸಾವಿತ್ರಿಯ ಕುಂಕುಮ ಸೌಭಾಗ್ಯದ ಕತೆ ಚಿ|ಸೌ|ಸಾವಿತ್ರಿ ಕಳೆದ ಜುಲೈ ೨೬ರಿಂದ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೭ ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈಗಾಗಲೇ ಯಶಸ್ವಿ ೧೦೦ ಸಂಚಿಕೆಯ ಸನಿಹದಲ್ಲಿದೆ.

'ಜೀ ಕನ್ನಡ'ದಲ್ಲಿ ಅಕ್ಟೋಬರ್ ೨೦ ರಿಂದ ಸಂಜೆ ೭ ಗಂಟೆಗೆ 'ಸಾವಿತ್ರಿ ಮಹಾ ಮದುವೆ'ಯ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ.










(ಫೋಟೋಗಳು: ಚಂಪಕಾವತಿ)

Read more...

September 07, 2010

ಕಣ್ಣ ಕಾಣಿಕೆ














Read more...

September 01, 2010

ಒಂದು ಆಮಂತ್ರಣ

Read more...

August 13, 2010

ಒಳ್ಳೆಯವರಿಗಷ್ಟೇ ಎಲ್ಲವೂ ಚೆನ್ನಾಗಿ ಕಾಣುತ್ತವೆ !






Read more...

August 11, 2010

ಚೆನ್ನಾಗಿವೆ !





Read more...

August 01, 2010

ಕ್ಲಿಕ್ ಕ್ಲಿಕ್ ಕ್ಲೋಸ್ಅಪ್






Read more...

June 09, 2010

ವಾಗ್ವಿಲಾಸ-ಮೂರು ತಾಳಮದ್ದಳೆಗಳು



ವೀಕೆಂಡ್ ತಾಳಮದ್ದಳೆ ! ಈ ವಾರದ ಕೊನೆಗೆ ಬೆಂಗಳೂರಿನಲ್ಲಿ ಯಕ್ಷಗಾನ ತಾಳಮದ್ದಳೆಗೆ ಪರ್ವ ಕಾಲ. ಕರಾವಳಿಯ ಪ್ರಸಿದ್ಧ ಕಲಾವಿದರ ತಂಡವೊಂದು ಬೆಂಗಳೂರಿನಲ್ಲಿ ಮೂರು ತಾಳಮದ್ದಳೆ ಕಾರ್ಯಕ್ರಮಗಳನ್ನು ನೀಡುತ್ತಿದೆ.
ರಾಜಧಾನಿಯಲ್ಲಿ ಯಕ್ಷಗಾನ ಪ್ರದರ್ಶನಗಳು ಬಹಳಷ್ಟು ನಡೆದರೂ, ತಾಳಮದ್ದಳೆಗಳು ತೀರ ಕಡಿಮೆ. ವೇಷಭೂಷಣ, ನಾಟ್ಯವಿಲ್ಲದೆ, ಬರಿಯ ಹಾಡು-ಮಾತಿನ ಮೂಲಕವೇ ಕೇಳುಗರನ್ನು ಲೋಕ ಸಂಚಾರಕ್ಕೆ ಕರೆದೊಯ್ಯುವಂಥದ್ದು ತಾಳಮದ್ದಳೆ. ಪುರಾಣದ ಯಾವುದಾದರೂ ಒಂದು ಭಾಗವನ್ನು, ಅಲ್ಲಿರುವ ಪಾತ್ರಗಳ ಮೂಲಕ ಮಾತಿನಲ್ಲೇ ಮರು ಸೃಜಿಸಲಾಗುತ್ತದೆ. ಕಂಠಪಾಠವಲ್ಲದ ಆಶು ಶೈಲಿ ಇದರ ವಿಶೇಷ ಆಕರ್ಷಣೆ. ಕರಾವಳಿ ಭಾಗದಲ್ಲಿ ಇದು ಮಳೆಗಾಲದ ಮುಖ್ಯ ಮನರಂಜನೆ. ಅದೀಗ "ಮಳೆಗಾಲದಲ್ಲಿ ಬೆಚ್ಚಗೆ ತಾಳಮದ್ದಳೆ ಕೇಳಿ ಹೆಚ್ಚಿಗೆ !’ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿಗೂ ಬಂದಿದೆ. ಇತ್ತೀಚೆಗೆ ತೀರಿಹೋದ ಹಿರಿಯ ಅರ್ಥಧಾರಿ-ವೇಷಧಾರಿ ಮಲ್ಪೆ ರಾಮದಾಸ ಸಾಮಗರ ನೆನಪಿಗೆಂದು ಈ ಕೂಟಗಳನ್ನು ಅರ್ಪಿಸಲಾಗಿದೆ.

ನಾನಾ ಯಕ್ಷಗಾನ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ, ಸುಮಾರು ಮೂವತ್ತು ವರ್ಷಗಳ ಅನುಭವಿ ಪದ್ಯಾಣ ಗಣಪತಿ ಭಟ್ ತಂಡವನ್ನು ಮುನ್ನಡೆಸುತ್ತಾರೆ. ಚೆಂಡೆ- ಮದ್ದಳೆ ವಾದಕರಾಗಿ ಪದ್ಮನಾಭ ಉಪಾಧ್ಯಾಯ, ವೇಣುಗೋಪಾಲ ಮಾಂಬಾಡಿ ಭಾಗವಹಿಸುತ್ತಾರೆ. ವೇಷಧಾರಿಗಳಾಗಿಯೂ ಸುಮಾರು ಎರಡು ದಶಕಗಳ ಅನುಭವ ಇರುವ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್ ಜನಪ್ರಿಯ ಅರ್ಥಧಾರಿಗಳು ಕೂಡ. ಅವರು ಮುಖ್ಯ ಭೂಮಿಕೆಯಲ್ಲಿ ಮಾತಿನ ಮಂಟಪ ಕಟ್ಟುತ್ತಾರೆ. ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ವಾಸುದೇವರಂಗ ಭಟ್, ಹೊಸ ತಲೆಮಾರಿನ ಪ್ರತಿನಿಧಿಯಾಗಿಯೂ ಮಾತಿನ ಮಾಂತ್ರಿಕತೆ ತೋರುತ್ತಾರೆ. ತಾಳಮದ್ದಳೆಯಲ್ಲಿ ಹಾಸ್ಯಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿರುವ ಮತ್ತು ಪೋಷಕ ಪಾತ್ರಗಳಲ್ಲಿ ಮನ ಸೆಳೆದಿರುವ ರಾಮಾ ಜೋಯಿಸ ಬೆಳ್ಳಾರೆ, ಕೂಟದ ರುಚಿ ಹೆಚ್ಚಿಸುತ್ತಾರೆ.
ಜೂನ್ ೧೨ ಶನಿವಾರ ಸಂಜೆ ೪ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಖ್ಯಾತ ಸಾಹಿತಿ-ಪತ್ರಕರ್ತ ಜೋಗಿ, ಈ ತಾಳಮದ್ದಳೆ ಸರಣಿ ಉದ್ಘಾಟಿಸುತ್ತಾರೆ. ಲೇಖಕ ನಾರಾಯಣ ಎ. ಮುಖ್ಯ ಅತಿಥಿ. ಬಳಿಕ ತಾಳಮದ್ದಳೆ "ತ್ರಿಶಂಕು ಸ್ವರ್ಗಾರೋಹಣ’. ಜೂನ್ ೧೩ ಬೆಳಗ್ಗೆ ೧೦ಕ್ಕೆ ಕುಂದಲಹಳ್ಳಿ ಗೇಟ್ ಲಕ್ಷ್ಮೀನಾರಾಯಣಪುರದ ಗೀತಾಂಜಲಿ ಮನೆಯಲ್ಲಿ "ಕೃಷ್ಣಾರ್ಜುನ’. ಸಂಜೆ ೫ಕ್ಕೆ ಹಾವನೂರು ಬಡಾವಣೆ ಟಿ.ದಾಸರಹಳ್ಳಿಯ ಶ್ರೀ ಗಣೇಶ ದೇವಸ್ಥಾನದ ಆವರಣದಲ್ಲಿ 'ಭೀಷ್ಮ ವಿಜಯ’.
'ಶ್ರೀ ದುರ್ಗಾಂಬಾ ಕಲಾ ಸಂಗಮ, ಗಿರಿನಗರ’, 'ಭಾರ್ಗವ ಮೈಂಡ್, ಲಕ್ಷ್ಮೀನಾರಾಯಣಪುರ’ ಹಾಗೂ "ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಟಿ.ದಾಸರಹಳ್ಳಿ’ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಸಂಘಟಿಸಿವೆ.

ನಾನೇರುವೆತ್ತರಕೆ ನೀನೇರಬಲ್ಲೆಯಾ?
'ತ್ರಿಶಂಕು ಸ್ವರ್ಗಾರೋಹಣ’ ಪುರಾಣದ ಒಂದು ವಿಶೇಷ ಸನ್ನಿವೇಶ. ಅದು ಕ್ಷಾತ್ರ ತೇಜಸ್ಸು- ಬ್ರಾಹ್ಮಣ ಓಜಸ್ಸಿನ ತಿಕ್ಕಾಟದ ಕತೆ. ಚಾಂಡಾಲನಾದವನ ದೊಡ್ಡ ಕನಸಿನ ಕತೆ. ಕೌಶಿಕ ಎಂಬ ಹೆಸರಿನ ಕ್ಷತ್ರಿಯ ರಾಜ, ಬ್ರಹ್ಮರ್ಷಿ ವಿಶ್ವಾಮಿತ್ರನಾಗಿದ್ದಾನೆ. ಸತ್ಯವ್ರತ ಎಂಬ ಹೆಸರಿನ ರಾಜ ಮೂರು ಮಹಾಪಾಪಗಳಿಂದ ತ್ರಿಶಂಕು ಅನಿಸಿಕೊಳ್ಳುತ್ತಾನೆ, ಕೊನೆಗೆ ವಸಿಷ್ಠರ ಶಾಪದಿಂದ ಚಾಂಡಾಲನಾಗುತ್ತಾನೆ.
ತಾನು ಕೌಶಿಕ ರಾಜನಾಗಿದ್ದಾಗ ಬ್ರಹ್ಮರ್ಷಿ ವಸಿಷ್ಠರೊಂದಿಗೆ ದ್ವೇಷ ಕಟ್ಟಿಕೊಂಡಿದ್ದಾನೆ ವಿಶ್ವಾಮಿತ್ರ. ಈಗ ತ್ರಿಶಂಕುವನ್ನು ಸಶರೀರಿಯಾಗಿ ಸ್ವರ್ಗಕ್ಕೆ ಏರಿಸುವ ಮೂಲಕ ತಾನೇನು ಅಂತ ತೋರಿಸಲು ಹೊರಟಿದ್ದಾನೆ. ಅತೀವ ಮಹತ್ವಾಕಾಂಕ್ಷೆಯ ಕೌಶಿಕ-ತ್ರಿಶಂಕು ಎಂಬ ಇಬ್ಬರೂ ದುರಂತ ನಾಯಕರಂತೆ ಕಾಣುವ ವಿಚಿತ್ರ ಸಂದರ್ಭ ಅದು! ಅದನ್ನು ಮಾತುಕತೆಯಲ್ಲೇ ಮಥಿಸುವ ಶೋಧಿಸುವ ಅಪರೂಪದ ತಾಳಮದ್ದಳೆ ಪ್ರಸಂಗ "ತ್ರಿಶಂಕು ಸ್ವರ್ಗಾರೋಹಣ’.

Read more...

April 28, 2010

ಪೇಟೆ ಪಾಡ್ದನ

'ದೇಶಕಾಲ' ವಿಶೇಷ ಸಂಚಿಕೆಯು ಮುಗಿಲು ಮುಟ್ಟುವ ಉತ್ಸಾಹ ಸಂಭ್ರಮದೊಂದಿಗೆ ಬಿಡುಗಡೆಯಾಗಿದೆ. 'ಛೆ, ಬೆಂಗಳೂರಿನಲ್ಲಿ ಎಷ್ಟೆಲ್ಲಾ ಒಳ್ಳೆ ಕಾರ್ಯಕ್ರಮಗಳು ನಡೆಯುತ್ತವಲ್ಲಾ' ಅಂತ ಪರ ಊರಿನವರು ಮತ್ತಷ್ಟು ಕರುಬುವಂತಾಗಿದೆ ! ವರ್ಷದ ಹಿಂದೆ ಈ 'ಚಂಪಕಾವತಿ'ಯಲ್ಲಿ ಸರಣಿಯಾಗಿ ಪ್ರಕಟವಾದ 'ಪೇಟೆ ಪಾಡ್ದನ'ದ ಆಯ್ದ ಪದ್ಯಗಳು, ದೇಶಕಾಲದ ವಿಶೇಷ ಸಂಚಿಕೆಯಲ್ಲಿ ಜಾಗ ಪಡೆದುಕೊಂಡಿವೆ. ಜತೆಗೆ ಎರಡು ಹೊಸ ಪದ್ಯಗಳು. ಆ ಎರಡು ಹೊಸ ಪದ್ಯಗಳು, ಈಗ ಇಲ್ಲೂ ಇವೆ. ಓದಿಕೊಳ್ಳಿ.


ಎಡ ತೋರು ಹೆಬ್ಬೆರಳುಗಳಲಿ
ಕಂಟ್ರೋಲು ಆಲ್ಟು, ಬಲ ತೋರು ಬೆರಳಲಿ
ಮತ್ತೆ ಮತ್ತೆ ತಬಲಾದಂತೆ ಬಾರಿಸು
ಟಕಟಕ ಟಂಟಂ- ಡಿಲೀಟು
ಹ್ಯಾಂಗಾಗಿದೆ ಕಂಪ್ಯೂಟರು?

ಅಬ್ಬಾ ಇಳಿಯಿತು ಪರದೆ ಈಗ
ಬಾಯಲಿಟ್ಟು ನೋಡಿಕೊ ಜ್ವರದ ಕಡ್ಡಿ
ರಟ್ಟೆಗೆ ಪಟ್ಟಿ ಕಟ್ಟಿ ನೋಡು ಒತ್ತಡ
ತುದಿ ಬೆರಳಿಗೆ ಚುಚ್ಚಿ ಪರೀಕ್ಷಿಸು
ನಿನ್ನ ಸಕ್ಕರೆಯ ಕಹಿ ಪ್ರಮಾಣ !

ಚುಚ್ಚಿಸಿಕೋ ನವ ದ್ವಾರಗಳಿಗೆ ಪ್ಲಗ್ಗು
ಕಂಪ್ಯೂ ಪರದೆಗಳಲಿ ನಿನ್ನ ಏರಿಳಿತ
ಶಟ್‌ಡೌನೂ ಆಗದೆ ಶಿಟ್‌ಡೌನೂ ಆಗದೆ
ಅಯ್ಯೋ ಫಜೀತಿ ತಿನ್ನು ತಿರುಪತಿ ಪ್ರಸಾದ !

ಅಪ್ಪ ಹೇಗಿದ್ದಾರಮ್ಮಾ ಅಂದರೆ
ಮೈಲ್ ಚೆಕ್ ಮಾಡಿ ಹೇಳುವಳಂತೆ ಮಗಳು
ಕಂಪ್ಯೂಟರಿಂದ ಈಚೆ ಬಂದು ಹೇಳು
ಸೊನ್ನೆ-ಒಂದರ ಅರ್ಥ ಒಂದೆ ಏನು?


ಮೆಕ್‌ಡೊನಾಲ್ಡ್, ಅಂಕಿತ ಪುಸ್ತಕ
ಸಾಯಿ ಗೋಲ್ಡ್ ಪ್ಯಾಲೇಸು, ರೋಟಿ ಘರ್
ಪೀಟರ್ ಇಂಗ್ಲೆಂಡು, ಗಾಂಧಿ ಬಜಾರು ಮಾಸಿಕ
ಎಚ್‌ಡಿಎಫ್‌ಸಿ ಐಎನ್‌ಜಿ ಸ್ಟೇಟ್‌ಬ್ಯಾಂಕು
ಎಟಿಎಮ್ಮುಗಳ ನಡುವೆ ಅಕೋ ನೋಡಿ
ಅಂಟು ತಿಂಡಿಯ ಕೊಕ್ಕಿಗಂಟಿಸಿಕೊಂಡು
ಒದ್ದಾಡುತ್ತಿದೆ ಗರಿ ಮುರಿದ ಗುಬ್ಬಿ ಹಕ್ಕಿ
ಕ್ಲಿಕ್ಕಿಸಿ ಫೋಟೊ ಮೊಬೈಲ್‌ನಲ್ಲಾದರೂ !

ಹಾಂ, ಇವತ್ತು ರಾತ್ರಿ ಊಟಕ್ಕೆ ಬರಲ್ಲ
ಹೆಂಡತಿ ಕಳಿಸಿದ್ದಾಳೆ ಎಸ್ಸೆಮ್ಮೆಸ್ಸು !
ಟು ವೀಲರ್‌ನ್ನು ಅನಾಮತ್ತೆತ್ತಿದೆ ಟೈಗರ್
ಕತ್ತಿನ ಒಂದೆಳೆ ಸರ ಎಳೆದ ಅನಾಮಿಕ ಕಿಲ್ಲರ್
ಒಂದೇ ಒಂದು ಪದ ನಿಮ್ಮಿಂದ ಹೆಚ್ಚಾಗಿ
ಹೊಡೆಯ ಬಂದಿದ್ದಾನೆ ಫುಟ್‌ಪಾತ್ ಸೆಲ್ಲರ್

ಅಂತೂ ಒಳ್ಳೆಯ ಫೋಟೊ ಸಿಕ್ಕಿತಾ?
ನಿಮ್ಮ ತಾತನ ಫೋಟೊದ ಹಿಂದೆ
ಗೂಡು ಕಟ್ಟಿದ್ದ ಗುಬ್ಬಿಯ
ನಾಲ್ಕನೇ ಸಂತಾನದ ಫೋಟೊ-
ನಿಮ್ಮ ಖುಶಿಗೆ ಕಾರಣವೇನು?

Read more...

April 20, 2010

ಆ ಸುಧನ್ವನ ಪ್ರಭಾವತಿ !


ಪಾಂಡವ-ಕೌರವರ ಮಹಾಯುದ್ಧ ಮುಗಿದಿದೆ. ಬಂಧು ಹತ್ಯಾ ದೋಷದ ಪರಿಹಾರಕ್ಕಾಗಿ ಧರ್ಮರಾಯ ಅಶ್ವಮೇಧ ಯಾಗವನ್ನು ಕೈಗೊಂಡಿದ್ದಾನೆ. ಅರ್ಜುನ ಬೆಂಗಾವಲಿಗಿರುವ ಅಶ್ವಮೇಧದ ಕುದುರೆಯು ಚಂಪಕಾವತಿಯನ್ನು ಪ್ರವೇಶಿಸಿದೆ. ಚಂಪಕಾವತಿಯ ದೊರೆ ಹಂಸಧ್ವಜ, ಕುದುರೆಯನ್ನು ಕಟ್ಟಿ ಹಾಕಿದ್ದಾನೆ. ಅರ್ಜುನನೊಡನೆ ಹೋರಾಡಿ ಸೋಲಿಸಿ, ತಮ್ಮ ಆರಾಧ್ಯ ದೇವ ಕೃಷ್ಣ ಬರುವಂತೆ ಮಾಡಬೇಕೆಂಬುದು ಅವನ ಕನಸು. ಹಾಗಾಗಿ ಯುದ್ಧಕ್ಕೆ ಹೊರಡಲು ತಡ ಮಾಡುವ ಯಾರನ್ನೇ ಆದರೂ ಎಣ್ಣೆ ಕುದಿಯುತ್ತಿರುವ ಕೊಪ್ಪರಿಗೆಗೆ ಹಾಕಲಾಗುವುದು ಎಂದು ಡಂಗುರ ಸಾರಿದ್ದಾನೆ. ಯುದ್ಧಕ್ಕೆ ಹೊರಟಿರುವ ಮಗ ಸುಧನ್ವ, ಪತ್ನಿ ಪ್ರಭಾವತಿಗೆ ಹೇಳಿಹೋಗಲು ಬರುತ್ತಿದ್ದಾನೆ. ಆ ಸತಿಗೆ ಅಂದೇ ಷೋಡಶದ ಋತು ಸಮಯ. ಪತಿ ಯುದ್ಧಕ್ಕೆ ಹೋದರೆ ಮತ್ತೆ ಬರುವುದು ಖಚಿತವಿಲ್ಲ. ಹಾಗಾಗಿ ಈ ರಾತ್ರಿ ನನ್ನೊಂದಿಗೆ ಕಳೆದು, ಸಂತಾನ ಭಾಗ್ಯವನ್ನು ಕರುಣಿಸಿ ಹೋಗಿ ಅಂತ ಕೇಳಿಕೊಳ್ಳುತ್ತಾಳೆ. ಪತಿ ಸುಧನ್ವ ಮೊದಲು ನಿರಾಕರಿಸಿದರೂ ನಂತರ ಅವಳನ್ನು ಕೂಡುತ್ತಾನೆ. 'ಸುಧನ್ವ ಮೋಕ್ಷ' ಎನ್ನುವ ಈ ಪ್ರಸಂಗದಲ್ಲಿ ಬರುವ ಸುಧನ್ವ-ಪ್ರಭಾವತಿಯರ ಸಂಭಾಷಣೆ 'ಯಕ್ಷಗಾನ ತಾಳಮದ್ದಳೆ'ಯಲ್ಲಿ ಒಂದು ಮುಖ್ಯವಾದ ಸನ್ನಿವೇಶ. ಮಾತಿನಲ್ಲೇ ಎಲ್ಲವನ್ನೂ ಅಭಿವ್ಯಕ್ತಿಸಬೇಕಾದ್ದರಿಂದ ಕ್ಲಿಷ್ಟವಾದದ್ದು ಕೂಡಾ. ಮೊನ್ನೆಮೊನ್ನೆ ಅಪರೂಪಕ್ಕೆ ಪ್ರಭಾವತಿ ಪಾತ್ರವನ್ನು ನಿರ್ವಹಿಸಿದಾಗ ಆಡಿದ ಮಾತುಗಳಲ್ಲಿ ಒಂದಷ್ಟನ್ನು, ಮಾತಿನ ಶೈಲಿಯಲ್ಲೇ, ಇಲ್ಲಿ ಸ್ವಗತದ ರೂಪದಲ್ಲಿ ಒಟ್ಟಾಗಿ ದಾಖಲಿಸಿದ್ದೇನೆ. ಹೇಗಿದ್ದಾಳೆ ಈ ಸುಧನ್ವನಿಗೆ ಕಂಡ ಆ ಸುಧನ್ವನ ಪ್ರಭಾವತಿ?! ಓದಿ ಹೇಳಿ.

ಕಾಯುವುದು ಯಾವತ್ತೂ ಕಷ್ಟ. ದೇವರಿಗೆ ಭಕ್ತರನ್ನು 'ಕಾಯುವುದು' ಕಷ್ಟ. ದೊಡ್ಡವರಿಗೆ ಚಿಕ್ಕವರನ್ನು ಕಾಯುವುದು ಕಷ್ಟ. ಇನ್ನೊಬ್ಬರಿಗಾಗಿ ಕಾಯುವುದಂತೂ ಕಡು ಕಷ್ಟ ! ಆದರೆ ಗಂಡನಿಗಾಗಿ ಹೆಂಡತಿ ಕಾಯುವುದರಲ್ಲಿ ಒಂದು ಬಗೆಯ ಸುಖವಿಲ್ಲವಾ? ಹಾಗಂತ ಕಾಂತನಿಲ್ಲದ ಏಕಾಂತಕ್ಕೆ ಅರ್ಥ ಇದೆಯಾ? ಅವರು ದಿನ ಲೆಕ್ಕ ಹಾಕುತ್ತಿದ್ದಾರಾ ಇಲ್ಲವಾ ಗೊತ್ತಿಲ್ಲ. ಆದರೆ ನಾನಂತೂ ಸರಿಯಾಗಿ ದಿನ ಲೆಕ್ಕ ಇಟ್ಟಿದ್ದೇನೆ. ಹಾಗಾಗಿಯೇ ನನಗಿಂದು ವಿಶೇಷವಾದ ದಿನ, ಸುದಿನ. ಚಂಪಕಾವತಿಯ ಜನ ನನ್ನನ್ನು 'ಸತಿ ಶಿರೋಮಣಿ ಪ್ರಭಾವತಿ' ಅಂತ ಬಣ್ಣಿಸುತ್ತಾರೆ. ಪತ್ನಿಯಾದ ಲಕ್ಷ್ಮಿಯನ್ನು ಎದೆಯಲ್ಲಿಟ್ಟುಕೊಂಡವನು ವಿಷ್ಣು. ಬ್ರಹ್ಮನಂತೂ ಪತ್ನಿ ಶಾರದೆಯನ್ನು ನಾಲಗೆಯಲ್ಲೇ ಇಟ್ಟುಕೊಂಡವನಂತೆ. ನನ್ನನ್ನು ಸತಿ ಶಿರೋಮಣಿ ಅನ್ನುವುದಕ್ಕೆ- ನಮ್ಮವರೇನು ನನ್ನನ್ನು ತಲೆ ಮೇಲಿಟ್ಟುಕೊಂಡಿದ್ದಾರಾ?! ಏನೂ ಇಲ್ಲ. ಅವರ ತಲೆ ಮೇಲೆ ಕುಳಿತುಕೊಳ್ಳುವವಳೂ ಈ ಪ್ರಭಾವತಿಯಲ್ಲ. ಅವರ ಮೇಲೆ ನನ್ನ 'ಪ್ರಭಾವ ಅತಿ'ಯಾದದ್ದೂ ಇಲ್ಲ ! ಪತಿಯ ಭುಜದ ಹಿಂದೆ ನಾನಿದ್ದಾಗ, ಅವರ ಮುಖದ ಪ್ರಭೆ ಹೆಚ್ಚುತ್ತದೆ ಅಷ್ಟೆ ! ಅವರು ಕಾಂತ ಹೌದು; ಹಾಗಂತ ನಾನೇನು ಕಬ್ಬಿಣವಾ?! ಹ್ಮ್...ಅಬ್ಬಾ ಈ ಗಂಡಂದಿರ ಸೊಕ್ಕೇ...ನನಗೊಂದು ಮಾತೂ ಹೇಳದೆ ಯುದ್ಧಕ್ಕೆ ಹೊರಟುಹೋದರೆ? ಅದೂ 'ಮೂರು ಲೋಕದ ಗಂಡ' ಅಂತ ಹೆಸರಾದ ಪಾರ್ಥನೊಡನೆ ಹೋರಾಡಲು?

ಅಯ್ಯೋ, ಸೂರ್ಯ ಮುಳುಗಿಯೂ ಆಯಿತು. ಇನ್ನು ಚಂದ್ರ ವಂಶದವರ ಪರಾಕ್ರಮವೆ. ನನ್ನವರು ಯಾಕಿನ್ನೂ ಬಂದಿಲ್ಲ? ಅಥವಾ ನಾನು ಸೀರೆ ತೊಡುವಾಗಲೇ ತಡವಾಗಿಯಿತೋ ! ನಮ್ಮ ಮಾವ ಹಂಸಧ್ವಜ ಮಹಾರಾಜರು, ನಮ್ಮ ವಿವಾಹ ಮಹೋತ್ಸವದ ಕಾಲದಲ್ಲಿ ಕೊಟ್ಟ ಸೀರೆ ಇದು. ಸೆರಗಿನಲ್ಲಿ ಸಾವಿರ ಕಣ್ಣಿನ ನವಿಲಿನ ಚಿತ್ತಾರವಿರುವ ಸೀರೆ. ಅದಕ್ಕೆ ಅಂಟಿಸಿದ ಪುಟ್ಟ ಪುಟ್ಟ ಕನ್ನಡಿಗಳಲ್ಲಿ ನನ್ನವರ ನೂರಾರು ಮುಖ ಕಾಣಬೇಕು. ಅಬ್ಬಾ ಕುಪ್ಪಸ ತೊಡುವಾಗ ಮಾತ್ರ ಕೊಂಚ ಬಿಗಿಯಾದದ್ದು ಹೌದು ! ಆವತ್ತಿನ ಕುಪ್ಪಸ ಅಲ್ವೆ? ಹಾಗಂತ ನಾನು ಅಷ್ಟೇನೂ ದಪ್ಪ ಆಗಿಲ್ಲ. ಹಾಗೆಲ್ಲ ದಪ್ಪ ಆಗುವುದಕ್ಕೆ ನಾನೇನು ಹೆತ್ತಿದ್ದೇನಾ?! ಅರ್ಧ ಚಂದ್ರಾಕೃತಿಯ ತಿಲಕ ಇಟ್ಟುಕೊಂಡೆ. ಏನು? ಅವರಿಗೆ ಅರ್ಧಚಂದ್ರ ಪ್ರಯೋಗ ಅಂತಲಾ?! ಛೆ ಛೆ ಹಾಗಲ್ಲಪ್ಪ...ಇವತ್ತು ರಾತ್ರಿಯಾದರೂ, ಉಳಿದದ್ದು ನನ್ನವರಿಂದ ಪೂರ್ತಿಯಾಗಲಿ ಅಂತ. ಕೃಷ್ಣನನ್ನು ನೋಡುವ, ಚಂಪಕಾವತಿಯ ಜನರಿಗೆಲ್ಲ ಆ ದೇವನನ್ನು ತೋರಿಸುವ ಆಸೆಯಂತೆ ಅವರದ್ದು. ನನಗೆ ಆ ಕೃಷ್ಣನ ಮಗನನ್ನು, ಆ ಮಹಾವಿಷ್ಣುವಿನ ಮಗನನ್ನು, ಆ ಮನುಮಥನನ್ನು ಸುಧನ್ವನಾಗಿ ನೋಡುವ ಆಸೆ ! ಹಾಗಾಗಿಯೇ ಇಷ್ಟು ಅಲಂಕಾರ. ಹೊನ್ನ ಹರಿವಾಣದಲ್ಲಿ ಕರ್ಪೂರ ವೀಳ್ಯವನ್ನಿಟ್ಟು, ಸಂಪಿಗೆಯ ಹೂವುಗಳನ್ನಿಟ್ಟು ಅವರನ್ನು ಎದುರುಗೊಳ್ಳುವುದಕ್ಕೆ ಸಿದ್ಧಳಾದದ್ದು. ಕೆಂಡಸಂಪಿಗೆಯೂ ಇದೆ, ಮೊಟ್ಟೆ ಸಂಪಿಗೆಯೂ ಇದೆ !

ಸತಿಯನ್ನು ಕೂಡಿದರೆ ಸಾವು ನಿಶ್ಚಿತ ಎಂದು ತಿಳಿದಿದ್ದ ಪಾಂಡು ಮಹಾರಾಜರೂ ಪತ್ನಿ ಮಾದ್ರಿಯನ್ನು ಕೂಡಿ ಪ್ರಾಣ ಕಳೆದುಕೊಂಡರಂತೆ. ಅವರ ಪ್ರಾಣವನ್ನು ಸೆಳೆದೊಯ್ದ ಆ ಯಮನಾದರೂ ಯಾರು? ಅವರಿಗೆ ಮೊದಲನೆಯ ಮಗ ಧರ್ಮರಾಯನನ್ನು ಕರುಣಿಸಿದವನು ! ಗಾಂಧಾರಿಗೆ ನೂರೊಂದು ಜನ ಮಕ್ಕಳಂತೆ. ಆದರು ಉಳಿದವಳು ಒಬ್ಬಳೇ ಅಲ್ಲವೇ ದುಶ್ಯಲೆ. ಅಶ್ವತ್ಥಾಮಾಚಾರ್ಯರು ದರ್ಭೆಯನ್ನೇ ಬ್ರಹ್ಮಾಸ್ತ್ರವಾಗಿಸಿ ಉತ್ತರೆಯ ಗರ್ಭಕ್ಕೆ ಪ್ರಯೋಗಿಸಿದಾಗ, ಅದನ್ನು ತಡೆದವನು ಕೃಷ್ಣನೇ ಅಂತೆ. ಕಾಮ ಎಷ್ಟೊಂದು ಪ್ರಚೋದಕ, ಸಂತಾನ ಎಷ್ಟೊಂದು ಆವಶ್ಯಕ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನಗಳು ಬೇಕೆ? ಹದಿನಾರು ಸಾವಿರದೆಂಟು ಪತ್ನಿಯರಿಗೆ ಬೇಕಾದ್ದನ್ನೆಲ್ಲಾ ಕೊಟ್ಟ ಕೃಷ್ಣನನ್ನು ಮೆಚ್ಚಿಸಲು ಹೊರಟ ಇವರು, ಇರುವ ಒಬ್ಬಳೇ ಪತ್ನಿಯನ್ನು ಮೆಚ್ಚಿಸದೆ ಹೋಗುವುದುಂಟೆ ?! ಸೀಸದ ಕವಚ ಕಟ್ಟಿಕೊಂಡು ಹೋಗಿ ಅರ್ಜುನನ್ನು ಸೋಲಿಸುತ್ತೇನೆ ಅನ್ನುವ ಇವರು, ಆ ಅರ್ಜುನನಿಗೆ ಹರಿಯ ಕರುಣದ ಕವಚವಿದೆ ಅಂತ ಯಾಕೆ ಯೋಚಿಸುವುದಿಲ್ಲ? ಕೃಷ್ಣಾರ್ಜುನರೊಡನೆ ಹೋರಾಡಿ ಗೆಲ್ಲುತ್ತೇನೆ ಅನ್ನುವುದು, ಬಾಯಾರಿಕೆಯಾದವನು ಉಪ್ಪು ನೀರು ಕುಡಿದ ಹಾಗಾಗುವುದಿಲ್ಲವೆ? ಅರ್ಜುನನ್ನು ಯುದ್ಧದಲ್ಲಿ ಸೋಲಿಸಿ, ಕೃಷ್ಣ ಬರುವಂತೆ ಮಾಡಿ, ಆ ಮೇಲೆ ಮುಕ್ತಿಯನ್ನಾದರೂ ಪಡೆಯುತ್ತೇನೆ ಅನ್ನುವವರು, ನನ್ನ ಬಗ್ಗೆ ಯಾಕೆ ಯೋಚಿಸುವುದಿಲ್ಲ? ಪಿತೃಋಣದಿಂದ ಮುಕ್ತನಾಗುವುದು ಬೇಡವಾ? ಅಂತಃಪುರಕ್ಕೆ ಬರಲಿ, ನನ್ನ ಪ್ರಾಣಕಾಂತನೆಂಬ ಕೃಷ್ಣನಿಗೆ ನಾನೇ ಕೊಳಲಾಗಬೇಕು. ಅವರ ಧನುಸ್ಸಿಗೆ ನಾನೇ ಹೆದೆಯೇರಿಸಬೇಕು. ಅವರ ಬತ್ತಳಿಕೆಯಲ್ಲಿರುವ ಬಾಣಗಳಿಗೆ ನನ್ನ ತುರುಬಿನಲ್ಲಿರುವ ಹೂಮಾಲೆಯನ್ನೇ ಸುತ್ತಿ, ಅವುಗಳನ್ನು ಮನ್ಮಥನ ಪುಷ್ಪಶರಗಳನ್ನಾಗಿ ಮಾಡುತ್ತೇನೆ. ಹಣೆಗೊಂದು ಹೂ ಮುತ್ತನ್ನಿಟ್ಟು ಪರವಶಗೊಳಿಸುತ್ತೇನೆ. ಅವರ ಕೈಗಳನ್ನು ನನ್ನ ಸೀರೆಯ ಸೆರಗಿನಲ್ಲೇ ಕಟ್ಟುತ್ತೇನೆ ! ಆಮೇಲೆ ಏನು ಬೇಕೋ ಮಾಡಲಿ !

Read more...

April 11, 2010

ಅವಳ ಸ್ವ-ಗತ


ಒಂದಿಡೀ ದಿನ ನೆನಪಿಗೇ ಮೀಸಲಿಟ್ಟೆ
ಸುರಿದೆ ಪೋಣಿಸಿದೆ ನೂಲಿಲ್ಲದೆ !
ಒಂದೆಸಳ ತುದಿಯೂ ಕಪ್ಪಾಗಿಲ್ಲ
ಸೂಜಿ ಕತ್ತರಿ ತೋರಿಸಿಯೇ ಇಲ್ಲ
ಆದರೂ ಸಂಜೆ ನೀರಲ್ಲಿಡುವ ಮೊದಲು
ತೊಟ್ಟು ನೋಡಿಕೊಂಡೆ !

ಇರುಳ ಮಧ್ಯೆ ಆಗಾಗ ಬಂದ
ನನ್ನ ಅಕ್ಷಿಪಟಲದೆದುರು ನಿಂದ
ಕರುಳ ಬಳ್ಳಿಯ ಹಿಡಿದು ಮಿಡಿದ
ಅಕ್ಷತೆ ವೃಷ್ಠಿಗೆ ರೋಮಾಂಚಿತನಾಗಿ
ಬಿಗಿದ ಕೊರಳ ಬಳಸಿ
ಪುಷ್ಪಮಾಲೆಯೆ ಸುತ್ತಿದ

ಕೈ ಸೆಳೆದು ಹೊಟ್ಟೆಗೆ ಅಂಟಿಸಿಕೊಂಡ
ಹಾವಿನಂತೆ ನಾನು ಸುತ್ತಿದೆ
ಗಲ್ಲ ಹೆಗಲ ಮೇಲಿಟ್ಟು ಮುಖ ಅರಳಿಸಿ
ಚುಚ್ಚಿದೆ ತುಟಿ ಚೂಪು ಮಾಡಿ
ಎಕ್ಸಿಲೇಟರು ತಿರುಗಿಸಿ ಬೈಕು ಗಾಳಿಗೊಡ್ಡಿದ.

ವಲಸೆ ಹಕ್ಕಿಗೆ ಹತ್ತೇ ದಿನ
ತೊಂಬತ್ತೆಂಟು ಪಾಯಿಂಟ್
ತೊಂಬತ್ತೊಂಬತ್ತರಲ್ಲಿ ಮಾತಾಡಿದ
ಸರ್ಕಲಲಿ ಸಿಕ್ಕು ತಪ್ಪಿಸಲು ಹೆಣಗಿದ
ಹೊಸ ನಂಬರಿನ ಮೊಬೈಲ್ ಕೈಯಲ್ಲಿ
ಫಳಫಳ ಉಂಗುರ; ಕ್ಷಣ ಭಂಗುರ.
ವಾಹನಗಳ ಮಧ್ಯೆಯೇ ಅವಸರಿಸಿ ನಿಲ್ಲಿಸಿ
ಹೂ ಮಾಲೆ ನಾಲ್ಕು ಮೊಳ ಕೊಂಡುಕೊಂಡ
ಎಲ್ಲಿಗೆಂದು ಕೇಳುವುದು ಇನ್ನು ಸರಿಯಾ?

Read more...

April 07, 2010

ಹೊಸ ಪರಿಮಳದ ಜಾಡು ಹಿಡಿದು

ಪ್ರಿಯ ಓದುಗರೇ, ಬೆಂಗಳೂರಿನಲ್ಲಿ ನಾನು ಮಾಡಿಕೊಂಡ ಏಕೈಕ ಸೈಟು ಇದು ! ಚಂಪಕಾವತಿ. ಬದುಕಿನ ಹೊಸ ಕಕ್ಷೆಯಲ್ಲಿ ಸುತ್ತುತ್ತಿದ್ದುದರಿಂದ ಇಲ್ಲೂ ಕೊಂಚ ಮಂಕು ಬಡಿದಿತ್ತು. ಐಪಿಎಲ್ ಮ್ಯಾಚುಗಳು, ಕಂಪ್ಯೂಟರ್ ಎದುರು ಕುಳಿತರೆ ಕೈ ಕೊಡುವ ಕರೆಂಟು, ಬದಲಾದ ದೈನಿಕದ ಸಮಯ...ಇವೂ ಸೇರಿಕೊಂಡು ಕೈಗೆ ಅಂಟಿಕೊಂಡಿದ್ದ ಅಕ್ಷರಗಳು ಹಾಗೆಯೇ ಉಳಿದಿದ್ದವು. ಸುದ್ದಿ ಮಾಧ್ಯಮಗಳು ಮನರಂಜನೆ ಕೊಡಲು, ಮನರಂಜನೆಯ ಮಾಧ್ಯಮಗಳು ಸುದ್ದಿಯಾಗಲೂ ಹಪಹಪಿಸುವ ದಿನಗಳಿವು ! ಅಂತಹ ಮಾಧ್ಯಮ ಲೋಕದಲ್ಲಿ ಜೀಕುತ್ತಿರುವಾಗ ಹೊಸ ರುಚಿ-ಪರಿಮಳ ನಾಲಗೆಗೆ ದಕ್ಕಿದೆ. ಇನ್ನು ಚಂಪಕಾವತಿ ಅಪ್‌ಡೇಟ್ ಆಗುತ್ತದೆ.
ಅಂದಹಾಗೆ, ಮುಂದಿನ ಶನಿವಾರ (ಏಪ್ರಿಲ್೧೦) ಸಂಜೆ.೫.೩೦ಕ್ಕೆ "ಅನನ್ಯ'ದಲ್ಲಿ (೧೯/೨, ೪ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು) ಒಂದು ಯಕ್ಷಗಾನ ತಾಳಮದ್ದಳೆ ಇದೆ. ಭಾಗವತರಾಗಿ ನೆಬ್ಬೂರು, ಗಣಪತಿ ಭಟ್- ಅರ್ಥಧಾರಿಗಳಾಗಿ-ಸರ್ಪಂಗಳ ಈಶ್ವರ ಭಟ್, ಮೋಹನ ಹೆಗಡೆ, ಮೊದಲಾದವರಿರುತ್ತಾರೆ. ಪ್ರಸಂಗ 'ಸುಧನ್ವಾರ್ಜುನ'.'ಹಂಸಧ್ವಜ'ನ ಪುಟ್ಟ ಪಾತ್ರದಲ್ಲಿ ನಾನೂ ಇರುತ್ತೇನೆ. ಸ್ತ್ರೀ ವೇಷಧಾರಿ ಶ್ರೀಧರ ಷಡಕ್ಷರಿಯವರ ಸಹಾಯಾರ್ಥ ನಡೆಯುವ ಆ ತಾಳಮದ್ದಳೆಗೆ ಬಿಡುವಿದ್ದರೆ ಬನ್ನಿ. ಈ ಕೆಳಗಿರುವ ದೃಶ್ಯವೊಂದನ್ನು ತಮಾಷೆಗೆ ಓದಿಕೊಳ್ಳಿ !

ರಾತ್ರಿ ಒಂಭತ್ತು ಗಂಟೆ
(ಸುಮಾರು ಅರುವತ್ತು ವರ್ಷಗಳಷ್ಟು ಹಳೆಯ ಮನೆ. ಎದುರಿರುವ ಉದ್ದನೆಯ ಜಗಲಿಯಲ್ಲಿ ಸುಮಾರು ಎಂಬತ್ತರ ವಯಸ್ಸಿನ ಮುದುಕಿ ಅತ್ತೆ. ಮುಖ್ಯ ಬಾಗಿಲ ಬಳಿ ನೆಲದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದಾಳೆ. ಅವಳಿಗೆ ಕಾಣುತ್ತಿರುವ ಅಕ್ಷರಗಳು ಮಸುಕಾಗುತ್ತಿವೆ)
ಅತ್ತೆ : ಕರ್ಮ, ಈಗ ಅವ್ನು ಏನಾದ್ರೂ ಬರದ್ರೂ ಓದ್ಲಿಕ್ಕಾಗುದಿಲ್ಲ.
(ತಾನು ಕಸೂತಿ ಮಾಡಿ ಟಿವಿಗೆ ಹೊದಿಸಿದ್ದ ಬಟ್ಟೆಯನ್ನು ನಿಧಾನವಾಗಿ ಎತ್ತಿ ಮಡಚಿದ್ದಾಳೆ ಸೊಸೆ. ಕೊಂಚ ದೂಳು ಕುಳಿತಿರುವುದನ್ನು ನೋಡಿ ಫಕ್ಕನೆ ಬಾಯಲ್ಲಿ ಫೂಫೂ ಊದಿದ್ದಾಳೆ.)
ಅತ್ತೆ : ಎಂತ? ಅಂವ ಈಗ ಟೀವೀಲಿ ಬರ್‍ತಾನಾ?
ಸೊಸೆ: ಟೀವೀಲಿ ಬರೂದಿಲ್ಲ.
ಅತ್ತೆ: ಅಷ್ಟೆಯಾ...(ನಿರಾಶೆಯಿಂದ)
ಸೊಸೆ : (ಸಣ್ಣ ಸಿಟ್ಟಿನಲ್ಲಿ) ಮತ್ತೆಂತ ಪೇಪರಿಲಿ ಅಂವ ಬರ್‍ತಿದ್ನಾ?
ಅತ್ತೆ: ಅಲ್ಲ ಮಾರಾಯ್ತಿ, ಹೆಸರಾದ್ರೂ ಬರ್‍ತಿತ್ತಲ್ಲ.
ಸೊಸೆ: (ಗಂಡನ ಫೋಟೊ ನೋಡಿ) ಇವ್ರಿಗೆಲ್ಲಾ ಹೆಸ್ರು ಬಂದು ಎಂಥ ಉಪಕಾರ ಆಗ್ಯದೆ?
ಅತ್ತೆ : (ಪೆಚ್ಚು ನಗೆ ನಕ್ಕು ಕಣ್ಣು ತೇವ ಮಾಡಿಕೊಂಡು)ಆಯ್ತು ಮಾರಾಯ್ತಿ. ನಾನು ತಮಾಷೆ ಮಾಡಿದ್ದಷ್ಟೆ.
ಸೊಸೆ : (ಟಿವಿ ತೋರಿಸಿ) ನೋಡು, ಅದರ ಹೆಸರು ಹಳೇಬೀಡು ಸೀತಮ್ಮ. ಎಷ್ಟು ಒಳ್ಳೆ ಅತ್ತೆ ನೋಡು. ಹ್ಹಿಹ್ಹಿ
ಅತ್ತೆ: ಹೋ ಅಕೋ, ಆ ಹೆಂಗ್ಸು ನಿನ್ನ ಹಾಗೆ ಕಾಣ್ತೆ. ನಿನಿಗೆ ಆ ನೀಲಿ ಸೀರೆ ಪ್ರೀತಿ ಅಲ್ವಾ?
(ಬಾಗಿಲ ಬಳಿಯಿದ್ದ ಪತ್ರಿಕೆಯ ಪುಟಗಳೆಲ್ಲ ಗಾಳಿಗೆ ಚೆಲ್ಲಾಪಿಲ್ಲಿಯಾಗುತ್ತಿವೆ. ಅದರೆಡೆಗೆ ಗಮನವಿಲ್ಲದೆ ಇಬ್ಬರೂ ಟಿವಿ ಮುಂದೆ ಕುಳಿತಿದ್ದಾರೆ. ಫೋನ್ ರಿಂಗಾಗುತ್ತದೆ)
ಸೊಸೆ: (ಟಿವಿಯಿಂದ ಕಣ್ಣು ಕದಲಿಸದೆ)ಅತ್ತೆಮ್ಮ, ಒಂದ್ಸಲ ಫೋನ್ ತೆಗೀತೀಯಾ?
ಅತ್ತೆ : ನನಗೆ ಮಾತಾಡುದು ಕೇಳೂದೇ ಇಲ್ಲ, ನೀನೇ ತೆಗಿ.
(ಸೊಸೆ ಫೋನ್‌ನಲ್ಲಿ ಉದ್ವೇಗದಿಂದ ಎಲ್ಲಿ ಏನು ಯಾರು ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತ ಮಾತಾಡುತ್ತಿದ್ದಾಳೆ. ಫಕ್ಕನೆ ಕರೆಂಟು ಹೋಗಿದೆ.)
ಅತ್ತೆ: ಅಕಾ, ಕರೆಂಟು ಹೋದ್ರೂ ಟಿವೀಲಿ ಮಾತಾಡುದು ಕೇಳ್ತೆ !
ಸೊಸೆ: ಥೋ, ನಾನಲ್ವಾ ಇಲ್ಲಿ ಫೋನಿಲಿ ಮಾತಾಡ್ತಿರೋದು ! ಹರಟೆ ಮಾಡಬೇಡ ನೀನು.
(ಮತ್ತೆ ಸೊಸೆ ಉದ್ವೇಗದಿಂದ ಕೇಳಿಸಿಕೊಳ್ಳುತ್ತಿದ್ದಾಳೆ. ಕರೆಂಟು ಛಕ್ಕನೆ ಬಂದು ಹೋದಾಗ- ಟಿವಿಯಲ್ಲಿ ಮುದುಕಿಯೊಬ್ಬಳು ಅಳುವ ಸದ್ದಷ್ಟೇ ಕೇಳಿ ಮೌನವಾಗಿದೆ)
ಸೊಸೆ : ಎಂತಾಯ್ತು ನಿನಿಗೆ?!
ಅತ್ತೆ: ನನಿಗೆ ಎಂತಾಗಿದೆ? (ಮುಸುಮುಸಿ ನಗುತ್ತಾ) ಅದು ಟೀವೀಲಿ ಅಲ್ವಾ?! ಅಂವ ಎಂತ ಹೇಳಿದ?
(ಈಗ ಸೊಸೆಯ ಮಾತಿನಲ್ಲಿ ಸಂತೋಷ ತುಂಬಿದೆ. ಸೀಮೆಎಣ್ಣೆ ದೀಪ ಹೊತ್ತಿಸಿದ ಅತ್ತೆ, ದೀಪವನ್ನು ಸೊಸೆಯ ಮುಖದ ಬಳಿ ಹಿಡಿದಿದ್ದಾಳೆ.)
ಅತ್ತೆ: ಎಂತ ಯಡಿಯೂರಪ್ಪನತ್ರ ಮಾತಾಡ್ತಿದ್ಯಾ?!
ಸೊಸೆ : (ಆನಂದಾಶ್ರು ಸುರಿಸುತ್ತಾ) ಇರು, ಅಂವನಿಗೆ ನಿನ್ನ ಹತ್ರವೂ ಮಾತಾಡ್ಬೇಕಂತೆ- ಅಂತ ಅತ್ತೆಯ ಕಿವಿಗೆ ರಿಸೀವರನ್ನು ಒತ್ತಿ ಹಿಡಿದಿದ್ದಾಳೆ. ದೀಪದ ಬೆಳಕಿನಲ್ಲಿ ಇಬ್ಬರ ಕಣ್ಣುಗಳೂ ಅರಳಿ, ಕಣ್ಣ ಹನಿಗಳು ಬೆಳಕಿಗೆ ಪ್ರತಿಫಲಿಸಿದಂತಿವೆ. ಮುಖ ಸಂತೋಷದಿಂದ ಬೀಗುತ್ತಿದೆ. ದೂರದಿಂದ ಬೆಳಕು ಕಂಡು, ಜೀಪೊಂದು ಮನೆಯಂಗಳಕ್ಕೆ ಇಳಿಯುತ್ತಿದೆ. ಯಾರೋ ಅಪರಿಚಿತ ಇಬ್ಬರು ಎದುರಿನ ಸೀಟಿನಲ್ಲಿದ್ದಾರೆ. ಜೀಪಿನ ಹೆಡ್‌ಲೈಟ್ ಬೆಳಕು ಮನೆಯನ್ನು ಕುಕ್ಕುತ್ತಿದೆ. ಅತ್ತೆ-ಸೊಸೆ ಇಬ್ಬರೂ ರಿಸೀವರ್ ಹಿಡಿದುಕೊಂಡು ಮಾತಿನಲ್ಲಿ ಮೈಮರೆತಿದ್ದಾರೆ.)
(ಮುಂದುವರಿಯುವುದು!!)

Read more...

February 28, 2010

ಆಡಿದಂತೆ ನಡೆಸುವವನು ಯಾರು?!


ಚಿತ್ತ ಚಂಚಲ. ಮೊನ್ನೆಯಿಂದ ಅವನ ಮನಸು ಗರಾಜು ಆಗಿಬಿಟ್ಟಿದೆ. ತುಟಿಯ ಬದಿಗೆ ಗ್ರೀಸು ಮೆತ್ತಿಕೊಂಡು ಒಂದೊಂದೇ ಸ್ಪ್ಯಾನರ್ ಹಿಡಿದು ತಿರುಗಿಸುವವನಂತೆ, ಎಕ್ಸ್‌ಲೇಟರ್ ವಯರ್ ಕೊಂಚ ಬಿಗಿ-ಸಡಿಲ ಮಾಡಿ ಪರೀಕ್ಷಿಸುವವನಂತೆ, ಯಾವುದೋ ವೆಹಿಕಲ್‌ನ್ನು ಸಮಸ್ಥಿತಿಗೆ ತರಲು ಹೊರಟ ಹುಡುಗನಂತೆ. ಊಹೂಂ...ಎಷ್ಟೆಂದರೂ ಮನಸ್ಸು ಕೇಳುತ್ತಿಲ್ಲ. ಉಗುರಿನಿಂದ ಮೀಟಿದ ತಂತಿ ನಡುಗುವಂತೆ ಮನಸ್ಸು ಕಂಪಿಸುತ್ತಿದೆ. ಕಂಪಿಸಿ ಕಂಪಿಸಿ ದಿನದಿನಕ್ಕೆ ಹರಿತಗೊಳ್ಳುತ್ತಿದೆ ! ಮತ್ತೊಂದನ್ನು ಕತ್ತರಿಸೀತೋ, ತನ್ನತಾನೇ ಗಾಯಗೊಳಿಸಿಕೊಂಡೀತೋ? ಆ ಅಲಗು ಅಲುಗುತ್ತಾ ನಲುಗುತ್ತಿರುವಾಗ ಹೊರಡುವ ತರಂಗಗಳು, ಇನ್ಯಾರದ್ದೋ ಸ್ವರಗಳನ್ನೂ ಸೇರಿಸಿಕೊಂಡು ಬಂದು ಪ್ರತಿಧ್ವನಿಗೊಳ್ಳುತ್ತವೆ ! ಸಣ್ಣ ಊರಿನ ಕನ್ನಡ ಶಾಲೆ ಬಿಟ್ಟು, ದೂರದ ದೊಡ್ಡ ಊರಿನ ದೊಡ್ಡ ಕಾಲೇಜಿನ ಇಂಗ್ಲಿಷ್ ಪಾಠ ಕೇಳಿಸಿಕೊಳ್ಳುತ್ತಾ ಹಾಸ್ಟೆಲ್‌ಗೆ ಬಿದ್ದವರು ತಡಬಡಾಯಿಸುತ್ತಾರಲ್ಲ, ಹಾಗೆ ಬೆಂಗಳೂರಿಗೆ ಮೊದಲು ಬಂದವರೂ ತಬ್ಬಿಬ್ಬಾಗುತ್ತಾರೆ. ಬೆಂಗಳೂರಿಗೆ ಬಂದು ವರ್ಷವಾದರೂ ಕೆಲಸ ಸಿಗದೆ ವಾಪಸ್ ಹೋದವನು, ಸಣ್ಣದೊಂದು ಕೆಲಸ ಮಾಡುತ್ತಾ ಆಸೆಗಳಿಗೆ ಬಿದ್ದು ಮೈತುಂಬ ಸಾಲ ಮಾಡಿಕೊಂಡವನು, ಮೊನ್ನೆಮೊನ್ನೆ ಬಂದು ಈಗ ಕಾರಿನಲ್ಲಿ ಓಡಾಡುತ್ತಿರುವವನು...ಹೀಗೆಲ್ಲ ಯೋಚಿಸಿಕೊಂಡು ಅವನು ಟಿ.ವಿ ಎದುರು ಕುಳಿತಿದ್ದಾನೆ. ಇನ್ನು ಏನಾದರೊಂದು ನಿರ್ಧಾರ ಮಾಡಲೇಬೇಕು. ಆದರೆ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದೂ ಸೋಲುವುದಿಲ್ವಾ?!

ಅದು ಸೋಮಾರಿಗಳ ಆಟ ಅಂತಾರೆ. ತಮ್ಮ ತಂಡದ ಇಬ್ಬರು ಆಡುತ್ತಿರುವಾಗ ಉಳಿದ ಒಂಬತ್ತೂ ಜನ ಫ್ಯಾನ್ ಕೆಳಗೆ ಪೆಪ್ಸಿ ಹೀರುತ್ತ ಇನ್ಯಾವ ಆಟದಲ್ಲಾದರೂ ಕುಳಿತಿರುತ್ತಾರಾ ಅಂತ ಕೇಳುತ್ತಾರೆ. ಕ್ರಿಕೆಟ್‌ನಿಂದ ಸಮಯ ವ್ಯರ್ಥ, ಅಹರ್ನಿಶಿ ಪಂದ್ಯದಿಂದ ವಿದ್ಯುತ್ ವ್ಯರ್ಥ, ಆಡೋದು ಬೆರಳೆಣಿಕೆಯ ದೇಶಗಳು ...ಇತ್ಯಾದಿ ಆರೋಪಗಳಿದ್ದರೂ, ಬ್ರಿಟಿಷರು ಕಲಿಸಿದ ಆಟ ನಮಗೆ ಅಷ್ಟೊಂದು ಪ್ರಿಯವಾದದ್ದು ಹೇಗೆ? ಅದರಲ್ಲಿ ಮುಟ್ಟಿಕೊಳ್ಳುವ ಅಗತ್ಯ ಇಲ್ಲದ್ದರಿಂದ ಮೈಲಿಗೆಯ ಸಮಸ್ಯೆ ಇರಲಿಲ್ಲ. ಎಲ್ಲರೂ ಒಂದೇ ಬಾಲ್‌ಗೆ ಎಂಜಲು ಉದ್ದುವುದು ಬೇರೆ ಮಾತು !ಭಾರತೀಯರಿಗೆ ಇಷ್ಟವಾದ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಅವಕಾಶ. ನಮ್ಮಲ್ಲಿನ ಸವಲತ್ತುಗಳಿಗೆ ಅನುಗುಣವಾಗಿ ಬೇಕೆಂದ ಹಾಗೆ ನಿಯಮ ಬದಲಾಯಿಸಿಕೊಂಡು ಆಡಬಹುದು...ಹೀಗೆ ನಾನಾ ಕಾರಣಗಳು. ಅಂತೂ ಸಮಾಜದ ಮೇಲ್ವರ್ಗದ ಧನಿಕರಿಂದ ಆರಂಭವಾಗಿ ಕೆಳಸ್ತರದ ನಿರಕ್ಷರಿಯವರೆಗೆ ಅದು ಭಾರತೀಯರ ಇಷ್ಟದ ಆಟ. ಅದರಲ್ಲೂ ಮತ್ತೆ ಮತ್ತೆ ಎರಡೂ ಕಾಲುಗಳನ್ನು ಕುಂಟಾಗಿಸಿ ಅಗಲಿಸಿ ಸಚಿನ್ ತೆಂಡೂಲ್ಕರ್ ಕ್ರೀಡಾಂಗಣಕ್ಕೆ ಇಳಿದು ಬರುತ್ತಿದ್ದಾನೆ ಅಂದರೆ ಸಾವಿರಸಾವಿರ ಸಂಖ್ಯೆಯ ಜನರಿಂದ ಜಯಘೋಷ ; ಜಯ್ ಹೋ, ಹೋ ಹೋ.

ಹಳ್ಳಿ ತೊರೆದು ಪಟ್ಟಣಕ್ಕೆ ಬಂದ ಪೋರರಿಗೆ ಇಲ್ಲಿ ಆಯ್ಕೆ ಎಂಬುದೇ ಇದ್ದಂತಿಲ್ಲ. ಇಲ್ಲಿರುವ ಯಾವುವೂ ಅವರದಲ್ಲ. ಸ್ವಂತ ಭೂಮಿ, ಮನೆ, ತಾವು ಓದಿದ ಶಾಲೆ, ತಮ್ಮ ಗ್ರಾಮದ ದೇವಸ್ಥಾನ, ತಾವು ಕಟ್ಟಿದ ಸಂಘ, ಯಾವುವೂ ಪೇಟೆಯಲ್ಲಿಲ್ಲ. ಬಂದ ಬಳಿಕ ಏನೇನೋ ಮಾಡಿಕೊಂಡಿದ್ದರೂ, ಆರಿಸಿಕೊಂಡಿದ್ದರೂ ಅವೆಲ್ಲ ಹಕ್ಕಿನಿಂದ ಬಂದವಲ್ಲ. ಅನ್ಯ ಕಾರಣಗಳಿಗಾಗಿ ಕಟ್ಟಿಕೊಂಡವು. ಹಾಗಾಗಿ ಎಲ್ಲ ಆಯ್ಕೆಗಳೂ ಒತ್ತಡದ-ಅನಿವಾರ್ಯದ ಆಯ್ಕೆಗಳು. ಒಂದು ಕೊಂಡರೆ ಎರಡು ಫ್ರೀ ಸಿಗುತ್ತಲ್ಲಾ ಅಂತ ಕೊಂಡುಕೊಂಡ ಹಾಗೆ ! ಟಿ.ವಿ ಎದುರು ಕುಳಿತಿರುವ ಅವನ ಹೆಸರು ರಮೇಶ. ಅವನಿಗೆ ನಿಜವಾಗಿ ಏನು ಬೇಕು ಅಂತ, ಹೇಳದೆ ತಿಳಿದುಕೊಳ್ಳಬಲ್ಲವನು ಒಬ್ಬನೇ. ಅವನ ಹಾಗೂ ಅವನಂಥವರ 'ದುಃಖ ಪರಿಹಾರಕ-ಕ್ಷೇಮ ಪರಿಪಾಲಕ'ಅವನೊಬ್ಬನೇ. ಯಾರವನು?

ತುಂಬಾ ಬೇಜಾರಾದಾಗ, ಒಬ್ಬೊಬ್ಬರು ಒಂದೊಂದು ಮಾತು ಆಡುತ್ತಿರುವಾಗ, ಯಾರ ಮಾತಿನಂತೆ, ಯಾವ ರೀತಿಯಂತೆ ನಡೆಯಬೇಕು ಅನ್ನುವುದೇ ರಮೇಶನಿಗೆ ಸಮಸ್ಯೆ. ಮಾತನ್ನು ನಂಬುವ ಮೊದಲು, ಅದನ್ನು ಆಡುತ್ತಿರುವನನ್ನು ನಂಬಬೇಕಲ್ಲ. ಆಡುವವರಲ್ಲಿ ಆತ ನಂಬುವುದು ಒಬ್ಬನನ್ನೇ ...ಹಾ ಹಾ ತೆಂಡೂಲ್ಕರ್ ! ರಮೇಶನಿಗೆ ಅವನ ಕಂಡರೆ ಅತಿ ಇಷ್ಟ. ತನಗೆ ಡಬಲ್ ಸೆಂಚುರಿ ಹೊಡೆಯುವ ಆಸೆ ಇದೆ ಎಂದವನು ‘ಅಭಿನವ ತೆಂಡೂಲ್ಕರ್’ ಅನ್ನಿಸಿಕೊಳ್ಳತೊಡಗಿದ, ಮೋಸ್ಟ್ ಡಿಸ್ಟ್ರಕ್ಟಿವ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್. ಆಡದೆ ಮಾಡಿ ತೋರಿಸಿದವನು ಮತ್ತು ಇನ್ನು ಹೇಳುವುದಕ್ಕೇ ಏನೂ ಉಳಿದಿಲ್ಲವೆಂಬಷ್ಟು ಮಾಡಿದವನು ಸಚಿನ್ ತೆಂಡೂಲ್ಕರ್. ‘ಸ್ಥಿತೋಸ್ಮಿ ಗತ ಸಂದೇಹಃ ಕರಿಷ್ಯೇ ವಚನಂ ತವ’. ‘ಸಂದೇಹವೆಲ್ಲ ನಿವಾರಣೆಯಾಗಿ ಸ್ಥಿತಪ್ರಜ್ಞನಾಗಿದ್ದೇನೆ. ನೀನು ಹೇಳಿದಂತೆ ಮಾಡುತ್ತೇನೆ’. ಗೀತೋಪದೇಶದ ಕೊನೆಗೆ ಅರ್ಜುನನಿಗೆ ಕೃಷ್ಣನ ಬಗ್ಗೆ ಅದೆಂಥ ನಂಬಿಕೆ ಬಂದುಬಿಟ್ಟಿದೆ !

'ನಿನ್ನ ಮಾತಿನಂತೆ ನಡೆಯುತ್ತೇನೆ' ಎನ್ನುವುದಕ್ಕೂ ಎಂಥ ಚಿತ್ತ ದೃಢತೆ ಬೇಕು. ಸಚಿನ್ ಬಳಿ ಅಂತಹ ನಂಬಿಕೆ ಇದೆ, ನೀನು ಹಾಕುವ ಚೆಂಡಿನಂತೆ ಆಡುತ್ತೇನೆ ಅಂತ ! ಸ್ಕ್ವೇರ್‌ಕಟ್ ಮಾಡಲಿ, ಹುಕ್ ತಟ್ಟಲಿ, ಕವರ್ ಡ್ರೈವ್ ಬಾರಿಸಲಿ, ಸ್ಟ್ರೈಟ್ ಬ್ಯಾಟ್ ಆಡಲಿ ಚೆಂದವೊ ಚೆಂದ. ಯಾವ ಚೆಂಡಿಗೆ ಯಾವ ರೀತಿ ಆಡಬೇಕು ಅನ್ನುವುದರಲ್ಲಿ ಕ್ಷಣದ ಗೊಂದಲವೂ ಆತನ ಆಟದಲ್ಲಿಲ್ಲ. ಕಳೆದ ೧೦ ತಿಂಗಳುಗಳಲ್ಲಿ ೧೨ ಶತಕಗಳು ! ೨೯೬೨ನೇ ‘ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯ’ದಲ್ಲಿ ದ್ವಿಶತಕ ಹೊಡೆದು ಮೊದಲಿಗ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಮೊತ್ತ ನೋಡಿ- ೧೦೫(ಅಜೇಯ), ೧೬, ೧೪೩, ೭, ೧೦೦, ೧೦೬, ೪, ೨೦೦ ! ಕೊಂಚ ಕಚ್ಚಿಕೊಂಡನೋ ಆತನನ್ನಲ್ಲದೆ ಮತ್ತೊಬ್ಬನ ನೆಚ್ಚಿಕೊಳ್ಳಬೇಕಿಲ್ಲ . ೩೭ರಲ್ಲಿರುವ ಸಚಿನ್ ಮತ್ತೆ ಜ್ವಲಿಸುತ್ತಿರುವ ಉಜ್ವಲ ಪ್ರತಿಭೆ . ಒಂದಾನೊಂದು ಕಾಲದಲ್ಲಿ ಅಂದರೆ, ಹದಿನೈದು ನವಂಬರ್ ೧೯೮೯ರಂದು ಅಂಗಳಕ್ಕೆ ಕಾಲಿಟ್ಟ ಈ ಭಾರತರತ್ನ, ಈಗಲೂ ಅಂದಿನ ಹಾಗೇ ಬೆವರುತ್ತಿದ್ದಾನೆ ! ಇನ್ನು ಹನ್ನೆರಡು ತಿಂಗಳಲ್ಲಿ ತನ್ನ ಆರನೇ ವಿಶ್ವಕಪ್ ಕ್ರಿಕೆಟ್ ಆಡುತ್ತಾನೆ ಅಂತ ರಮೇಶ ಬಲವಾಗಿ ನಂಬಿದ್ದಾನೆ.

'ಶತಕ ದಾಟಿದ ಕೂಡಲೇ ರಿಸ್ಕ್ ತೆಗೆದುಕೊಳ್ಳದಿರಲು ನನಗೆ ಸಾಧ್ಯವೇ ಆಗುವುದಿಲ್ಲ. ಆದರೆ ಸಚಿನ್ ಹಾಗಲ್ಲ' ಅಂದಿದ್ದಾನೆ ಸೆಹ್ವಾಗ್. ಸಚಿನ್‌ನ ನಿರ್ಧಾರದಲ್ಲಿ ಅಂತಹ ದೃಢತೆ-ಖಚಿತತೆ ಇದೆ. ರಮೇಶ ಆಗಾಗ ಗುನುಗುತ್ತಾನೆ - ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವನೆಂದೂ...ಬಳಿಕೊಮ್ಮೆ ‘ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೇ...’ಅಂತಲೂ . ಆದರೆ ಆಡುತ್ತ ಆಡುತ್ತ ಸಚಿನ್, ಅವನ ಆಟ ನೋಡುತ್ತ ನೋಡುತ್ತ ಎಲ್ಲರ ಸಂಭ್ರಮ ಸಂತೋಷ ಚಿರಸ್ಥಾಯಿ. ಹಾಗಾಗಿಯೇ ಸಣ್ಣವನಿದ್ದಾಗ, ಗೆಳೆಯರ ಜತೆ ಸೇರಿ ಕ್ರಿಕೆಟ್ ಆಡುತ್ತ ಬ್ಯಾಟು ಹಿಡಿದ ಕೂಡಲೇ, ಬಾಯಲ್ಲಿ ನಗು ತುಳುಕಿಸುತ್ತಾ ರಮೇಶ ಹೇಳುತ್ತಿದ್ದ 'ನಾನು ಸಚಿನ್ ರಮೇಶ್ ತೆಂಡೂಲ್ಕರ್!'

Read more...

January 22, 2010

ಕ್ಲಿಕ್... ಕ್ಲಿಕ್... ಕ್ಲಿಕ್...2

ಸೂರ್ಯನರಮನೆ

ಕೆಲಸವಿಲ್ಲದ ದಿನ ಆಹ್ ಎಂಥಾ ನಗು

ಅಡಿಕೆ ಮರ ಆಕಾಶಕ್ಕೆ ಬೆಲೆ ಪಾತಾಳಕ್ಕೆ

ಎಲ್ಲಿ ಹೋಯಿತೋ ಈ ಬಾಜಾರ ಕಂಬ

ಅಂಗಳದಲ್ಲೇ ಇರೋಣ !

Read more...

January 18, 2010

ಕ್ಲಿಕ್... ಕ್ಲಿಕ್... ಕ್ಲಿಕ್...


ನೀರ್ ಹಾಕ್ಕೊಳ್ಳಿ ಕಾಲ್ ತೊಳ್ಕೊಳ್ಳಿ

ಅಂಗಳದಲ್ಲಿ ಸಂಜೆ ಕ್ರಿಕೆಟ್‌ನ ಪರಮಾನಂದ

ಭಟ್ರು ಏನ್ ಹೇಳ್ತಾರೆ ಕೇಳ್ಕೊಳ್ಳಿ

ಕೆಂಪು ದೀಪ

ಕಾರಸ್ಥಾನ !

ಉಜಿರೆಯ ತುಳುಗ್ರಾಮದಲ್ಲಿ ರಿಯಾಲಿಟಿ ಶೋ !

(ಮೊಬೈಲ್ ಕ್ಯಾಮರಾದಲ್ಲಿ ಕಂಡಷ್ಟು ಸಿಕ್ಕಷ್ಟು )

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP