November 15, 2009

ರಂಗಭೂಮಿಯ ತರುಣ ಮನಸು


ಕಾಲೇಜು ರಂಗಭೂಮಿ ಕೆಟ್ಟಿದೆ !
ಹತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಮೀಯುತ್ತಿದ್ದಾರೆ ನಟ-ನಿರ್ದೇಶಕ ಮಂಜುನಾಥ್ ಬಡಿಗೇರ್. ಸದ್ಯ ಬೆಂಗಳೂರು ಕಾರ್ಯಕ್ಷೇತ್ರ. 'ಯುವ ರಂಗಕರ್ಮಿಯಾಗಿ, ಸರಕಾರದಿಂದ - ಜನರಿಂದ ನೀವೇನು ನಿರೀಕ್ಷಿಸುತ್ತೀರಿ?' ಅಂತ ಪ್ರಶ್ನಿಸಿದರೆ, 'ಏನನ್ನೂ ನಿರೀಕ್ಷಿಸುವುದಿಲ್ಲ. ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಸಿಗಬೇಕಾದ್ದು ಸಿಗುತ್ತೆ' ಅನ್ನುವಷ್ಟು 'ನೇರ-ದಿಟ್ಟ-ನಿರಂತರ' ! 'ನಮಗೆ ತುಂಬಾ ಇಷ್ಟವಾದ್ದು, ತುಂಬಾ ಕಷ್ಟವಾದ್ದು ಅಂತ ಯಾವುದು ಇರೋಲ್ಲ. ಎಲ್ಲವನ್ನೂ ಇಷ್ಟ ಪಟ್ಟೇ ಕೇಳ್ತೇವೆ, ಮಾಡ್ತೇವೆ, ಆಸ್ವಾದಿಸ್ತೇವೆ' ಎನ್ನುವ ಮಂಜುನಾಥ್ ಮಾತುಗಳಿಗೆ, ಅವರ ಕೆಲಸಗಳೇ ಸಾಕ್ಷಿ. ನೀನಾಸಂ ಪದವೀಧರರಾಗಿ ಒಂದು ವರ್ಷ ತಿರುಗಾಟದಲ್ಲಿ ಭಾಗವಹಿಸಿದ್ದಾರೆ. 'ಜಾನಪದ ಲೋಕ'ದ ಜಾನಪದ ಡಿಪ್ಲೊಮಾ ಪಡೆದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ, ಗುರು ಸಂಜೀವ ಸುವರ್ಣರಿಂದ ಯಕ್ಷಗಾನವನ್ನು ಒಂದು ವರ್ಷ ಶಾಸ್ತ್ರೀಯವಾಗಿ ಅಭ್ಯಸಿಸಿದ್ದಾರೆ. ಪ್ರಕಾಶ್ ಚಕ್ರವರ್ತಿ ಂಬವರಲ್ಲಿ ಹಿಂದುಸ್ತಾನಿ ಕೊಳಲು ವಾದನವನ್ನು ಎರಡು ವರ್ಷಗಳ ಕಾಲ ಕಲಿತಿದ್ದಾರೆ !
ಹಳೆಯ ವೃತ್ತಿ ರಂಗಭೂಮಿ ಹೋಗಿ, ಈಗ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಹಭಾಗಿತ್ವ ಪಡೆಯುವವರೆಗೆ ಹೋಗಿದೆ. ನಾಟಕ ಕಮರ್ಷಿಯಲ್ ಮತ್ತು ಪ್ರೊಫೆಷನಲ್ ಆಗೋದರ ಬಗ್ಗೆ ಏನನ್ಸತ್ತೆ ಅಂತ ಕೇಳಿದರೆ- 'ನಾಟಕ ಕೇವಲ ಮನರಂಜನಾ ಮಾಧ್ಯಮ ಅಲ್ಲ. ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ರಸಾನುಭವವನ್ನು ಕೊಡುವಂಥದ್ದಾಗಿರಬೇಕು. ಹಾಗಾಗಬೇಕಾದರೆ ಅದರಲ್ಲಿ ವೃತ್ತಿಪರತೆ ಖಂಡಿತ ಇರಲೇಬೇಕು. ನಾಟಕ ಕಮರ್ಷಿಯಲ್ ಆಗಲಿ ಬೇಸರವಿಲ್ಲ. ಆದರೆ ಅದರಲ್ಲಿ ವೃತ್ತಿಪರತೆ ಇರಬೇಕು !'ಎನ್ನುತ್ತಾರೆ ಮಂಜುನಾಥ್. ನೀನಾಸಮ್ ಹಾಗೂ ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಗೆ ರಂಗಶಿಬಿರಗಳನ್ನು ನಡೆಸಿರುವುದರ ಜತೆಗೆ ಅಭಿನಯ ತರಬೇತುದಾರನಾಗಿ ಅವರು ಕೆಲಸ ಮಾಡಿದ್ದಾರೆ. ಹಂಸಲೇಖರವರ ದೇಸಿ ವಿದ್ಯಾಸಂಸ್ಥೆಯಲ್ಲಿ ನಾಟಕದ ಶಿಕ್ಷಕನಾಗಿ, 'ಆಶ್ರಯ' ಎಂಬ ಸ್ವಯಂಸೇವಾ ಸಂಸ್ಥೆಯಿಂದ ಸರಕಾರಿ ಬಾಲಕರ ಪರಿವೀಕ್ಷಣಾ ಮಂದಿರದಲ್ಲಿ ಬಾಲಾಪರಾಧಿಗಳ ಮನೋವಿಕಾಸಕ್ಕಾಗಿ ಎರಡು ವರ್ಷಗಳ ಕಾಲ ಸಂಪನ್ಮೂಲವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ಈ ಯುವ ಪ್ರತಿಭೆಗೂ ಕಾಲೇಜು ರಂಗಭೂಮಿಗೂ ಹತ್ತಿರದ ನಂಟಿದೆ. ಆದರೆ ಅಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಕೇಳಿದರೆ - 'ರಂಗಭೂಮಿ ವಲಯದಲ್ಲಿ ಕಾಲೇಜು ರಂಗಭೂಮಿಗೆ ವಿಶಿಷ್ಟ ಸ್ಥಾನವಿದೆ. ಇದರಿಂದ ಕಾಲೇಜಿಗೂ ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕವಾಗಿಯಲ್ಲದೆ ಅನೇಕ ರೀತಿಯಲ್ಲಿ ಉಪಯೋಗವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳಿಗೆ ನಾಟಕ ಮಾಡಿಸುವುದು ಮತ್ತು ಮಾಡುವುದು ಪ್ರತಿಷ್ಠೆಯ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಸಾಧನವಾಗದೆ ತಮ್ಮ ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳುವ ಒಂದು ವೇದಿಕೆಯಾಗಿದೆ. ಈವತ್ತಿನ ಕಾಲೇಜು ನಾಟಕಗಳು ಸ್ಪರ್ಧಾ ಕೇಂದ್ರಿತವಾಗಿರುತ್ತವೆ ಹಾಗೂ ಹೊರಗಿನ ಆಡಂಬರಗಳಿಂದ ವೈಭವೀಕರಿಸಲ್ಪಟ್ಟಿರುತ್ತವೆ. ಇದು ಮೊದಲು ಬದಲಾಗಬೇಕಿದೆ. 'ನಾಟಕ ಚಳವಳಿಯಲ್ಲ, ಅದೊಂದು ಸಡಗರ' ಎಂದಿದ್ದ ಬಿ.ವಿ.ಕಾರಂತರ ಮಾತು ನೆನಪಿಸುತ್ತ. 'ಬೀದಿ ನಾಟಕಗಳಲ್ಲೂ ಪಾಲ್ಗೊಂಡ ನಿಮ್ಮ ಅಭಿಪ್ರಾಯ ಏನು' ಅಂದರೆ- 'ಹೌದು, ಅದೊಂದು ಆಚರಣೆ. ಬೀದಿ ನಾಟಕ ಆರಂಭದ ಕಾಲದಲ್ಲಿ ಚಳವಳಿಯ ಉದ್ದೇಶದದಿಂದಲೇ ರೂಪ ತಳೆಯಿತು. ಈಗ ಅದು ಕೇವಲ ಮಾಹಿತಿ ತಲುಪಿಸುವ, ರಾಜಕೀಯ ಪಕ್ಷಗಳ, ಬಹುರಾಷ್ಟ್ರೀಯ ಕಂಪನಿಯ ಸರಕುಗಳ ಪ್ರಚಾರಕ್ಕಾಗಿ ಬಳಕೆಯಾಗುತ್ತಿದೆ' ಎಂಬ ಬೇಸರ ಅವರದ್ದು. 'ಮಾಧ್ಯಮ್' ಸ್ವಯಂ ಸೇವಾ ಸಂಸ್ಥೆಯಲ್ಲಿ ಬೀದಿ ನಾಟಕ ತಂಡದೊಂದಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು (ಏಡ್ಸ್, ಮಕ್ಕಳ ಹಕ್ಕುಗಳು, ಮಹಿಳಾ ಸಬಲೀಕರಣ, ಕೋಮು ಸೌಹಾರ್ದ...)ನಾಟಕಗಳಲ್ಲಿ ಭಾಗವಹಿಸಿದ ಅನುಭವ ಮಂಜುನಾಥ್ ಬೆನ್ನಿಗಿದೆ. ಚಿದಂಬರ ರಾವ್ ಜಂಬೆ, ವೆಂಕಟರಮಣ ಐತಾಳ, ರಘುನಂದನ, ಪ್ರಕಾಶ್ ಬೆಳವಾಡಿ, ಸುರೇಶ್ ಆನಗಳ್ಳಿ,ಕೆ ವಿ ಅಕ್ಷರ, ಅಭಿಲಾಶ್ ಪಿಳ್ಳೈ, ರಮೇಶ್ ವರ್ಮ(ಕೇರಳ), ಭರತ್ ಶರ್ಮಾ, ವಿಶ್ವಜಿತ್ (ಪಶ್ಚಿಮ ಬಂಗಾಳ), ಬಹ್‌ರುಲ್ ಇಸ್ಲಾಂ(ಅಸ್ಸಾಂ) ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಕರ್ನಾಟಕದ ಹಲವಾರು ತಂಡಗಳಿಗೆ, ಶಾಲಾಮಕ್ಕಳಿಗೆ, ಕಾಲೇಜುಗಳಿಗೆ, ಮತ್ತು ಸರಕಾರೇತರ ಸಂಸ್ಥೆಗಳಿಗೆ ರಂಗಭೂಮಿ ಕಾರ್‍ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. 'ಸಮಷಿ'ಯ ಭಾನುವಾರದ ರಂಗಶಾಲೆಯಲ್ಲಿ ಅಭಿನಯ ಶಿಕ್ಷಕನಾಗಿ, ಸಮಷ್ಟಿ ಮತ್ತು ಆದ್ಯಂತ ಎಂಬ ತಮ್ಮ ಹೆಚ್ಚಿನ ಪಾಲುಗಾರಿಕೆಯ ರಂಗತಂಡಗಳಲ್ಲಿ, ನಟ-ನಿರ್ದೇಶಕನಾಗಿದ್ದಾರೆ. 'ಬದುಕು ಅನ್ನೊ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ. ಟಿವಿ ಸಿನಿಮಾ ಕಡೆ ಗಮನವಂತೂಇದೆ. ಕಿರುಚಿತ್ರಗಳನ್ನು ನಿರ್ದೇಶಿಸುವ ಆಸೆಯಿದೆ' ಎನ್ನುವುದು ಈ ಕೆಚ್ಚೆದೆಯ ರಂಗಕರ್ಮಿಯ ಬಿಚ್ಚು ನುಡಿ.


ರಂಗಕರ್ಮಿ ಬೇರೆ ಮಾಧ್ಯಮದ ಮೂಲಕ ಗುರುತಿಸಿಕೊಳ್ಳೋದು ಅನಿವಾರ್ಯ!
ಇಪ್ಪತ್ತಾರರ ಹರೆಯದ ಮೌನೇಶ್ ಬಡಿಗೇರ್ ಕೂಡಾ ನೀನಾಸಂನಲ್ಲಿ ಕಡೆಯಲ್ಪಟ್ಟ ಪ್ರತಿಭೆ. ಕಳೆದ ಆರು ವರ್ಷಗಳಿಂದ ರಂಗಭೂಮಿಯನ್ನೆ ಕಣ್ರೆಪ್ಪೆಗಳಲ್ಲಿ ಕಾಪಾಡಿಕೊಂಡಿರುವ ಮೌನೇಶ್‌ರದ್ದು, ನೊಡಲು ಮುನಿ ವೇಶ ! ಉದ್ದ ಕೂದಲು-ಚೂಪು ಮೀಸೆ-ತೀಡಿದ ಗಡ್ಡ. ಹಂಸಲೇಖ ಅವರ 'ದೇಸಿ' ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ನಾಟಕ ಮಾಡಿಸಿದ್ದು, 'ಮಧ್ಯಮ್' ಎಂಬ ಎನ್‌ಜಿಒನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ-ಬೀದಿ ನಾಟಕದ ನಟನಾಗಿ ಕೆಲಸ ಮಾಡಿದ್ದು, 'ಸಮಷ್ಟಿ' ತಂಡದ ಭಾನುವಾರದ ನಾಟಕ ಶಾಲೆಯಲ್ಲಿ ಬೋಧನೆ, ಅಭಿಲಾಶ್ ಪಿಳ್ಳೈ -ಕೆ.ವಿ.ಅಕ್ಷರ-ರಘುನಂದನ-ವೆಂಕಟರಮಣ ಐತಾಳ್-ಇಕ್ಬಾಲ್ ಅಹಮದ್‌ರಂತಹ ಹಿರಿಯ ನಿರ್ದೇಶಕರ ಜತೆ ಕೆಲಸ ಮಾಡಿದ್ದು, ಇವೆಲ್ಲ ಅಣ್ಣ ಮಂಜುನಾಥ ಬಡಿಗೇರರ ದಿನಚರಿಯಂತೆಯೇ. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜು-ಕ್ರೈಸ್ಟ್ ಕಾಲೇಜು, ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜು...ಹೀಗೆ ಕಾಲೇಜು ರಂಗಭೂಮಿಯೊಂದಿಗೆ ಬೆರೆತ ಮೌನೇಶ್ ಆ ಬಗ್ಗೆ ಹೀಗೆ ಹೇಳುತ್ತಾರೆ- 'ಕಾಲೇಜು ರಂಗಭೂಮಿಯ ಬಗೆಗಿನ ಇತ್ತೀಚಿನ ಬೆಳವಣಿಗೆಗಳು ಆಶಾದಾಯಕವಾಗಿವೆ. ಎಲ್ಲ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಲ್ಲೂ ನಾಟಕದ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಕೆಲವೊಂದು ಕಾಲೇಜುಗಳಲ್ಲಿ 'ಥಿಯೇಟರ್ ಇನ್ ಎಜುಕೇಶನ್' ಅನ್ನು ಅಳವಡಿಸಿಕೊಂಡಿರುವುದು ರಂಗಭೂಮಿಯ ಮಹತ್ವವನ್ನು ಸೂಚಿಸುತ್ತದೆ. ಇದನ್ನ ಮನಗಂಡ ಕಾಲೇಜುಗಳು ಸಾಕಷ್ಟು ಬಜೆಟ್‌ಅನ್ನು ಮೀಸಲಿಡುತ್ತಿವೆ. ಇನ್ನು ಕೆಲವು ಕಾಲೇಜುಗಳು ರಂಗನಿರ್ದೇಶಕರ ಜತೆ ಚೌಕಾಸಿಗೆ ನಿಂತುಬಿಡುತ್ತವೆ ! ಸ್ಪರ್ಧೆ ಎಂಬ ಆಲೋಚನೆಯೇ ತುಂಬಾ ಕೆಡುಕನ್ನು ಒಳಗೊಂಡದ್ದಾಗಿದ್ದರೂ, ಕಾಲೇಜು ರಂಗದ ಮಟ್ಟಿಗೆ ಇದು ಫಲಪ್ರದವಾಗಿ ಕೆಲಸಮಾಡುತ್ತಿದೆ.
ಇಂತಹ ಯುವ ರಂಗಕರ್ಮಿ,'ರಂಗಭೂಮಿಯಲ್ಲೇ ಬದುಕು ಕಟ್ತೀವಿ ಅನ್ನೋ ಛಲ ಇದೆಯಾ? ಟಿವಿ-ಸಿನಿಮಾ ಕಡೆ ಗಮನ ಇದೆಯಾ?' ಎಂಬ ಪ್ರಶ್ನೆಗೂ ಅಣ್ಣನಿಗಿಂತ ಬೇರೆ ತರಹ ಉತ್ತರಿಸಿದರು. 'ಬದುಕು ಕಟ್ಟೋದು ಅಂದ್ರೆ ಯಾವ ಪರಿಭಾಷೆಯಲ್ಲಿ ಎಂದು ನನಗೆ ತಿಳೀತಿಲ್ಲ. ಭಾವನಾತ್ಮಕ ಬದುಕೆಂಬುದು ಈಗಾಗಲೇ ರಂಗಭೂಮಿಯಿಂದಲೇ ಕಟ್ಟಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಇನ್ನು ಪ್ರಾಪಂಚಿಕ ಬದುಕಿನ ಬಗ್ಗೆ ಯಥಾವತ್ತಾಗಿ ನಿರ್ಧರಿಸಿಲ್ಲ. ನಮ್ಮಂಥ ಕಸುಬುದಾರರ ಸಮಸ್ಯೆಯೆಂದರೆ, ಒಬ್ಬ ಸಿನಿಮಾ ನಟ ಅಥವಾ ಟಿವಿ ನಟನನ್ನು ಗುರುತಿಸಲು ಆ ಕ್ಷೇತ್ರದವರಿದ್ದಾರೆ. ಒಬ್ಬ ಯಶಸ್ವಿ ಐಟಿ ಉದ್ದಿಮೆದಾರನನ್ನು ಗುರುತಿಸಲು ಆ ಕ್ಷೇತವ್ರೂ ಸೇರಿದಂತೆ ಹಲವಾರು ದಾರಿಗಳಿವೆ. ಒಬ್ಬ ಸಾಹಿತಿ ತನ್ನ ಸಾಹಿತ್ಯದೊಂದಿಗೇ ನೇರವಾಗಿ ತಲುಪಬಲ್ಲ. ಆದರೆ ರಂಗಭೂಮಿಯ ಒಬ್ಬ ಕಲಾವಿದ, ಟಿವಿ ಅಥವಾ ಸಿನಿಮಾ ಮಾಧ್ಯಮದ ಮೂಲಕವೇ ಗುರುತಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಆದ್ದರಿಂದ ಇವತ್ತು ರಂಗಭೂಮಿಯ ಎಲ್ಲ ಪ್ರತಿಭಾವಂತರಿಗೂ ಅಭದ್ರತೆಯ ಸನ್ನಿವೇಶ ಎದುರಾಗಿದೆ. ಹಿಂದೆಲ್ಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರೂ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಕಿರು-ಹಿರಿತೆರೆ ಪ್ರವೇಶಿಸಿದವರೇ ಆಗಿದ್ದಾರೆ. ಆದ್ದರಿಂದ ರಂಗಭೂಮಿಯಲ್ಲೇ ಸ್ಥಿರವಾಗಿ ನಿಂತು ಸಾಧಿಸಿದವರು ಕಡಿಮೆಯೇ ಎನ್ನಬಹುದು. ಹಾಗಾಗಿ ನಮ್ಮಂಥ ಕಿರಿಯರಿಗೆ ಒಬ್ಬ ಆದರ್ಶವ್ಯಕ್ತಿತ್ವ ಎಂಬುದೊಂದು ಇಲ್ಲವಾಗಿದೆ. ಹಾಗೆ ಸ್ಥಿರವಾಗಿ ಉಳಿದ ಕೆಲವೇ ಕೆಲವು ಹಿರಿಯ ರಂಗ ಚೈತನ್ಯಗಳನ್ನು ನಾವು ಗಂಭೀರವಾಗಿ ಪರಿಗಣಿಸದೇ ಇರುವುದು ನಮ್ಮ ವ್ಯವಸ್ಥೆಯ ದುರಂತವೇ ಸರಿ.'
'ನಾಟಕ ಪ್ರೊಫೆಷನಲ್ ಆದಷ್ಟೂ ಅದು ಸಂತೋಷದ ವಿಷಯವೇ. ಪ್ರೊಫೆಷನಲ್ ಗುಣ ಕಡಿಮೆಯಾಗಿ ಬರೀ ಕಮರ್ಷಿಯಲ್ ಆದಷ್ಟೂ ಅದು ಅನಿವಾರ್ಯವಾಗಿ ಅತಿರಂಜನೆಯ ಗುಣಗಳನ್ನು ಅಳವಡಿಸಿಕೊಳ್ಳಲು ಹೊರಟುಬಿಡುತ್ತದೆ. ಅದು ಸ್ವಲ್ಪಅಪಾಯಕಾರಿಯೆನಿಸುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ಆಮಿಷಗಳು, ತಾಯಿಯ ಹೊಟ್ಟೆಯಲ್ಲಿನ ಭ್ರೂಣಕ್ಕೂ ನಿರಾಯಾಸವಾಗಿ ತಲುಪುತ್ತಿರುವ ಈ ಸಂದರ್ಭದಲ್ಲಿ , ಅದು ರಂಗಭೂಮಿಗೂ ಆವರಿಸಿರುವುದು ಆಶ್ಚರ್ಯವೇನೂ ಅಲ್ಲ. ಆದರೆ ಅದನ್ನು ಹೇಗೆ ಎಷ್ಟು ಮತ್ತು ಸಕಾರಣವಾಗಿ ಬಳಸುವುದು ಮುಖ್ಯ. ನಾಟಕ ಸಡಗರವೂ ಹೌದು, ಚಳವಳಿಯೂ ಹೌದು. ಸಮಾಜದ ಸೂಕ್ಷ್ಮವಾದ ಸಂಬಂಧ ಸಮಸ್ಯೆಗಳನ್ನು ಚಿತ್ರಿಸುವುದರ ಮೂಲಕ ಚಿಕಿತ್ಸಾತ್ಮಕವಾಗಿ ಕೆಲಸ ಮಾಡಬಲ್ಲದು. ವ್ಯವಸ್ಥೆಯ ಡಂಬಾಚಾರ ಪ್ರಶ್ನಿಸಬಲ್ಲದು.'
'ಆದ್ಯಂತ' ಎಂಬ ರಂಗತಂಡ ಕಟ್ಟಿಕೊಂಡಿರುವ ಮೌನೇಶ್, ಈಗ 'ಸಮಷ್ಟಿ' ತಂಡಕ್ಕಾಗಿ 'ಶಾಂಡಿಲ್ಯ ಪ್ರಹಸನ' ನಾಟಕ ನಿರ್ದೇಶಿಸುವುದರಲ್ಲಿ ಬ್ಯುಸಿ.ಸರಕಾರ ಮತ್ತು ಜನರಿಂದ ತಾನು ಬಯಸುವುದು 'ಆರ್ಥಿಕ ಸ್ಥಿರತೆ ಹಾಗೂ ಉತ್ತೇಜನವನ್ನು' ಎನ್ನುವುದು ಈ ಬೆವರ ಹುಡುಗನ ಮಾತು. 'ಪರಿತ್ಯಕ್ತ' ನಾಟಕದ, ಅಂಬಾತನಯ ಮುದ್ರಾಡಿ ರಚನೆಯ ಈ ಹಾಡು, ಮೌನೇಶ್‌ಗೆ ಬಹಳ ಪ್ರಿಯವಂತೆ, ನೀವೂ ಓದಿಕೊಳ್ಳಿ.
'ಇದಕಿಹುದು ಆದಿ ಇದಕಿಹುದು ಅಂತ್ಯ ತನ್ಮಧ್ಯೆ ಏಳು ಬೀಳು
ಭುವಿನಾಟ್ಯರಂಗ ಲೀಲಾತರಂಗ ನಟ ಬಾಧ್ಯನೇನು ಹೇಳು
ಕಣ್‌ದೂರಮಾಗೆ ಕೈಮಾಳ್ಕೆಯಲ್ಲಿ ಈ ಪಾತ್ರಧಾರಿ ಬಾಳು
ಅಭಿವ್ಯಕ್ತನಾರು ಪರಿತ್ಯಕ್ತನಾರು ಯಾರಿಲ್ಲಿ ಮೇಲು ಕೀಳು?'
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ )

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP