August 07, 2009

ಚಂಪಕಾವತಿ ಎಕ್ಸ್‌ಕ್ಲೂಸಿವ್ !

ನೇಹಿಗರೆ,
೨೦೦೯ರ ಆಗಸ್ಟ್ ೮ಕ್ಕೆ 'ಚಂಪಕಾವತಿ’ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಮೊದಲ ವರ್ಷದ ಹುಮ್ಮಸ್ಸು ಎರಡನೇ ವರ್ಷದಲ್ಲಿ ಕುಂದಿದ್ದು ಹೌದು. ಆದರೆ ಪೂರ್ತಿ ಉಡುಗದ ಉತ್ಸಾಹ ಈ ತಾಣವನ್ನು ಜೀವಂತವಾಗಿರಿಸಿದೆ. 'ಎಂಥ ದಿನಗಳು ಕಳೆದವೋ, ಇನ್ನಂಥ ದಿನಗಳು ಬಾರವೋ’ ಎಂಬ ಕವಿ ಸುಬ್ರಾಯ ಚೊಕ್ಕಾಡಿಯವರ ಹಾಡನ್ನು ಬದುಕಿನ ಕೊನೆಯವರೆಗೂ ನಾವು ಹಾಡಿಕೊಳ್ಳೋಣ ! ಹೀಗೆ ಸುಮ್ಮನೆ ನನ್ನದೇ ಬ್ಲಾಗ್ ಮಂಡಲದ ತಲೆ ಸವರುತ್ತಾ ಕುಳಿತಿದ್ದೆ . ಆಗ 'ಚಂಪಕಾವತಿ'ಯಲ್ಲಿ ಸಿಕ್ಕ ಟಾಪ್ 'ಹತ್ತು ಮತ್ತು ಒಂದು' - ಹನ್ನೊಂದು ಇಷ್ಟದ ಪೋಸ್ಟ್‌ಗಳನ್ನು ಇಲ್ಲಿ ನೀಡುತ್ತಿದ್ದೇನೆ. ಈ ಪಟ್ಟಿ ಮಾಡುವಾಗ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಇವು ಚಂಪಕಾವತಿಯ ಎಕ್ಸ್‌ಕ್ಲೂಸಿವ್ ಪೋಸ್ಟ್‌ಗಳು ! ಪ್ರಕಟಿಸಿದ ದಿನಾಂಕಕ್ಕೆ ಅನುಗುಣವಾಗಿ ಜೋಡಿಸಿದ್ದೇನೆ. ಸಂಗ್ರಹಿತ ಬರೆಹಗಳೂ ಇದರಲ್ಲಿ ಸ್ಥಾನ ಪಡೆದಿವೆ. ಈ ಮರುಶೋಧದಲ್ಲಿ ಹಳೆಯ ರುಚಿ-ಪರಿಮಳ ನಿಮ್ಮನ್ನು ತಾಕಲಿ. ಮೂರನೇ ವರ್ಷದ ಸಂಭ್ರಮಕ್ಕೆ, ಮೂರನೇ ಸ್ಥಾನ ಪಡೆದವರನ್ನೇ ವಿನ್ನರ್‍ಸ್ ಪೋಡಿಯಂನಲ್ಲಿ ಮೇಲೆ ಕೂರಿಸಿದ್ದೇನೆ ! ನಮಗೆ ಒಳ್ಳೆಯದಾಗಲಿ, ನಮ್ಮಿಂದ ಒಳ್ಳೆಯದಾಗಲಿ. - ಚಂ

1.ರಾಮನೇ ತುಂಡರಿಸಿದ ಸೇತು ನಮಗೆ ಬೇಕೆ ?
ಧನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ. ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ. ಬಡ ಜುಣುಗಿನಂತಿದ್ದ ಆ ಮಂಗ, ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ, ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ, ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ. ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ...

2.'ಅದಾಗಿ’ ನೀವು ಕ್ಷೇಮವೇ?
ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ 'ಕಾಂಗರೋದ್ಧಾರಿ’ ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು. ಅಣ್ಣ ಬಲರಾಮನಂತಿರುವ 'ಬೆಣ್ಣೆಮುದ್ದೆ’ ಬನ್ಸನನಿಗೆ ವಂದನೆಗಳು. ಹುಬ್ಬಳ್ಳಿಯವರ ಬಾಯಲ್ಲಿ 'ಪಾಂಟಿಂಗ’ , ದ.ಕ.ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು.ಅದಾಗಿ ನಾವು ಕ್ಷೇಮ. 'ಅದಾಗಿ’ ನೀವು ಕ್ಷೇಮವೇ?!....

3.ಪೇಟೆಯ ಪಾಡ್ದನ
ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು....

4.ಬೆಳ್ಳೇಕೆರೆಯ ಹಳ್ಳಿ ಥೇಟರ್
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ. ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ-ಹೋಟೆಲ್‌ಗಳಿವೆ. ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ. ಅಲ್ಲಿ ಎರಡು ಅಂಗಡಿ, ಸಣ್ಣದೊಂದು ಹೋಟೆಲು, ಪ್ರೈಮರಿ ಸ್ಕೂಲು...

5.ಗೋ.....ವಾ!
ಅಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ....

6.ನೇರಳೆ ನಾಲಗೆಯ ರುಚಿ
ಆ ಬೈಗುಳ ಬರುವವರೆಗೆ ಅವರಿಬ್ಬರ ಜಗಳ ಬಹಳ ಜೋರಾಗೇನೂ ಇರಲಿಲ್ಲ. ಆಗ ಬಂತು ಆ ಮಾತು- `ನಿನ್ನ ಅಪ್ಪ ಮೂರ್ತಿ, ಕಲ್ಲಿನ ಮೂರ್ತಿ. ಜೀವ ಇಲ್ಲದವ '. ಆ ಕ್ಷಣ ನರನರಗಳೆಲ್ಲ ಸೆಟೆಸೆಟೆದು, ಕಣ್ಣುಗಳು ಅಷ್ಟಗಲ ತೆರೆಯಲ್ಪಟ್ಟು, ಮುಖ ಕೆಂಪಾಗಿ, ಕೈಗಳು ಬಿಗಿದು, ರೋಷಾವೇಶ ಮೇರೆ ಮೀರಿ, ಮಾರಾಮಾರಿ...

7.ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ
ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ! ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು....

8.ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !
ಯಾವುದು ಪಟಾಕಿ ಸದ್ದು, ಯಾವುದು ಬಾಂಬಿನ ಸದ್ದು ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ?! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ. ನಮಗೆ ಗೊತ್ತಿರುವುದು, ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ. ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು. ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ- ಕೆದರಿದ ಕೂದಲು- ಅಂದಗೆಟ್ಟ ಮುಖಗಳ ದೃಶ್ಯ...ಇಷ್ಟೇ....

9.ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?
ಪ್ರೀತಿಯ ಪ್ರೇಮ,
ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ, ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು....

10.ಹೆಂಗಿದ್ದ ಹೆಂಗಾದ ಗೊತ್ತಾ....?
ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ, ನೀಲಿಮಳೆಯಲ್ಲೂ ನೆನೆಯಬಲ್ಲ. ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ......

11.ಕತ್ತಲಲ್ಲಿ ಸಿಕ್ಕಿದಂತೆ
ಮೊನ್ನೆಮೊನ್ನೆ ಒಂದು ರಾತ್ರಿ. ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು. ಆಗ ಸಿಕ್ಕವು ಇಲ್ಲಿವೆ. ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ, ಹೋಗಿಬಿಡಿ !

10 comments:

Sushrutha Dodderi August 7, 2009 at 9:08 PM  

ಶುಭಾಶಯಾ ಡಿಯರ್ರೂ..... :-)

Anonymous,  August 8, 2009 at 9:41 AM  

occassionally i visit ur blog through apara's and have read a few of your posts.
Today the new look to ur blog prompted me to comment.
Really looks good
all the best
:-)
malathi S

Anonymous,  August 9, 2009 at 2:22 AM  

new look is nice. congrats and keep it up..
-alemari

ಹರೀಶ್ ಕೇರ August 9, 2009 at 7:35 AM  

ನಿನ್ನ ಹನ್ನೊಂದೂ ಬರಹಗಳನ್ನು ನಾವೆಲ್ಲ ಮತ್ತೆ ಕುಳಿತುಕೊಂಡು ಓದಬೇಕಾ ? ನಮ್ಮ ಮೇಲೆ ಸ್ವಲ್ಪ ಕರುಣೆ ತೋರಿಸು.
- ಹರೀಶ್ ಕೇರ

Ittigecement August 9, 2009 at 7:28 PM  

ಅಭಿನಂದನೆಗಳು....

ಹೊಸ ರೂಪ..
ಚೆನ್ನಾಗಿದೆ....

Anonymous,  August 9, 2009 at 8:45 PM  

ಅಭಿನಂದನೆಗಳು....

shivu.k August 9, 2009 at 9:38 PM  

ಮೂರನೆ ವರ್ಷಕ್ಕೆ ಕಾಲಿಟ್ಟಿದ್ದೀರಿ...ಅಭಿನಂದನೆಗಳು.

Anonymous,  August 9, 2009 at 10:39 PM  

ಅಯ್ಯಾ ಚಂಪಕಾವತಿಯ ದೊರೆಯೆ, ಹೀಗೆಯೇ ನಿನ್ನ ಬರಹಗಳು ಮುಂದುವರೆಯಲಿ. ಅಭಿನಂದನೆ.
-ಸುಘೋಷ್ ಎಸ್. ನಿಗಳೆ.

Anonymous,  August 10, 2009 at 10:33 PM  

ಚಂಪಕಾವತಿಗೆ ಭೇಟಿ ನೀಡಿದ, ಶುಭ ಹಾರೈಸಿದ ಎಲ್ಲರಿಗೂ ಥ್ಯಾಂಕ್ಸ್. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ. -ಚಂ

Anonymous,  August 17, 2009 at 11:09 PM  

" ಮೃಗಾಲಯದಲ್ಲಿ ಆಗಷ್ಟೇ ಹುಟ್ಟಿದ ಜಿಂಕೆಮರಿಗೆ ಹುಲಿಯೆಂದರೆ ಪ್ರಾಣ" ಅಂತ ಬರೆದಿದ್ದ ಸುಧನ್ವಾ ನೀವೇನಾ?

ಹೌದಾದರೆ ನಿಮ್ಮನ್ನಿಲ್ಲಿ ನೋಡಿ ಬಹಳ ಖುಷಿಯಾಗ್ತಿದೆ. ಅಲ್ಲವಾದರೂ ಮೂರು ವರ್ಷ ಮುಗಿಸಿದ, ಬ್ಲಾಗಿನಲಿ ಹಿರಿಯ ತಲೆ ಎಂಬುದಕ್ಕೂ ನನ್ನಭಿನಂದನೆ ಸ್ವೀಕರಿಸಿ..:)

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP