November 09, 2008

ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?

೨೧-೪-೧೯೮೩
ಪ್ರೀತಿಯ ಪ್ರೇಮ,
ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ,  ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು.

ರಾತ್ರಿ ಹತ್ತು ಗಂಟೆ ಕಳೆದಿರಬೇಕೀಗ. ನಿನ್ನೆ ನಾಲ್ಕು ಹನಿ ಮಳೆ (೮ ಸೆಂಟ್ಸ್ ನಮ್ಮ ಭಾಷೆಯಲ್ಲಿ ಹೇಳುವುದಾದರೆ) ಬಿತ್ತು. ನಾಳೆ ಹಲಸಿನ ಹಣ್ಣು ಪಾಯಸ ಮಾಡ್ತೇವೆ, ಬರ್‍ತೀರಾ? ನಮ್ಮಲ್ಲಿ ಮಳೆ ಬೀಳದೆ ತೋಟದಲ್ಲಿ ಕೆಲಸವಿಲ್ಲ. sprinkler ಹಾಕಿಸ್ತಾ ಇದ್ದಾರೆ. ನನಗೆ ಮನೆಯಲ್ಲೀಗ ನಿಮಿಷ ಪುರುಸೊತ್ತು ಇಲ್ಲ. ಉಮ ಇಲ್ಲದೇ ದಿನ ಆ ಗದ್ದೆ ಹತ್ತಿರ ಹೋಗಬೇಕಾಗುತ್ತದೆ. ನಿತ್ಯ ಬೆಳಗ್ಗೆ ಕಾಫಿ-ತಿಂಡಿ ಕಾರ್ಯಕ್ರಮ ಮುಗಿಸಿ, ಒಲೆಯಲ್ಲಿ ಏನಾದರೂ ಬೇಯುವುದಕ್ಕಿಟ್ಟು ಸರೀ ೮ ಗಂಟೆಗೆ ಹೊರಟೆನಾದರೆ, ಮನೆಗೆ ಬರುವಾಗ ೯ ಗಂಟೆ. ಬಟ್ಟೆ ಹೊಲಿಯುವುದೂ ತುಂಬ ಉಂಟು, ಮದುವೆ ಸೀಸನ್ ನೋಡು.

ನಿನಗೇನು, ದೊಡ್ಡ ಕುಂಬಳಕಾಯಿ ಸೋದರತ್ತೇಂತ ಬಡಾಯಿ ಕೊಚ್ಚು . ನಾನೂ ಸಾ ಅತ್ತೆ ಆಗ್ತೇನೆ ಒಂದಲ್ಲ ಒಂದು ದಿನ ನೋಡ್ತಾ ಇರು !ನೀನಲ್ಲೇ ಬಿದ್ದಿರು. ಇಲ್ಲಿಗೆ ಬರ್‍ಬೇಡ. ಇಲ್ಲಿ ರಾಶಿ ರಾಶಿ ಮಲ್ಲಿಗೆ ರಾಶಿ. ಅದರ ಜತೆಗೆ ರಂಜದ ಹೂವಿನ ಮಾಲೆಯೂ ಮುಡಿಪ್ಪೆತ್ತುವುದೀಗ. ಕೆಲಸದವರ ಮಕ್ಕಳು ನನ್ನ ಜತೆಗೆ ಗದ್ದೆಗೆ ಬರ್‍ತಾರೆ. ತೋಟದಲ್ಲಿ ಮರದ ಹತ್ತಿರ ಹೂವು ಹೆರ್‍ಕಲು ಅವರನ್ನು ಬಿಟ್ಟು ನಾನು ಓಟ. ಮನೆಗೆ ಹೂವು ತಂದರೆ ಅಮ್ಮ ಸುರಿದು ಕೊಡ್ತಾಳೆ. ನಿನ್ನ ಅತ್ತಿಗಮ್ಮ ನಿನಗೆ ಕೈಕೊಟ್ಟದ್ದಕ್ಕೆ-ನೀನೇ ಅವಳ ಅತ್ತಿಗಮ್ಮ ಆದರೆ ಆದೀತಂತೆ. ಟಾರ್ಚ್ ಇಲ್ಲದೇ ಹುಡುಕಿ ಹುಡುಕಿ ಅವಳಣ್ಣನಿಗೀಗ- ಈ ವರ್ಷ ಜೀವನ್ ಸಾಥೀ ಸಿಕ್ಕಲೇ ಇಲ್ಲ.

೧.೫.೮೩. ಪ್ರೇಮ, ತಿಂಗಳು ನಾಲ್ಕು ಕಳೆದು ಐದೂ ಆಯ್ತು, ನನಗಲ್ಲಿ ೮೩ನೇ ಇಸವಿಗೆ. ನಿನ್ನ ಅಕ್ಕ, ಭಾವ ನಿನ್ನೆ ಬಂದು ವಕ್ಕರಿಸಿದ್ದಾವೆ. ನಾನು ಮನೆ ಎಲ್ಲ ಚಂದ ಮಾಡಿ ನೀಟ್ ಆಗಿ ಇಟ್ಟುಕೊಂಡಿದ್ದೆ. ಈ ದಿನಗಳಲ್ಲಿ ಇವು ಬಂದು, ಆಟದವರ ಡೇರೆ ಮಾಡಿ ಹಾಕಿದ್ದಾವೆ. ಇಡೀ ಮನೆ ತಂತಿ-ಹಗ್ಗ. ಅಲ್ಲಿಇಲ್ಲಿ ಬಟ್ಟೆ ರಾಶಿ-ನೇತ್ಹಾಕಿದ್ದಾವೆ. ನೀನ್ಯಾಕೆ ಕತ್ತೆ ನನಿಗೆ ಬಯ್ತಾ ಕೂತದ್ದು? ಇಕೊ ಇನ್ನೂ ಇನ್ನೂ ಬಯ್ದರೆ, ನಿನಗೆ ಡಾರ್ಜಿಲಿಂಗ್ ಇರಲಿ, ಡೆಹ್ರಾಡೂನ್‌ಗೂ ಕೈಕೊಡ್ತೇನೆ. ನನ್ನ influence ನಿಂದ ಆಗುವಂತದ್ದು-ಬೇಕಿದ್ದರೆ ನನಗೆ ಸಲಾಂ ಹಾಕ್ತಾ ಇರು ! (ನಿನ್ನ ಪುಟ್ಟಕ್ಕನನ್ನು ವಿಚಾರಿಸಿಕೋ ಡೆಹ್ರಾಡಬ್ ಸೆಟ್ಟು ಯಾವುದೂಂತ. ಅದು ನೋಡಿ ಮಾತಾಡಿ ಬಂದದೆ.) ನಾನು ಅಲ್ಲಿಂದ ಬಂದ್ಮೇಲೆ ಬರ್‍ದ ಕಾಗದಕ್ಕೆ ನೀನೇ ಉತ್ತರ ಕೊಡ್ಲಿಲ್ವಾಂತ? ಅತ್ತೆಮ್ಮನಿಗೆ ೮೦ ಪೈಸೆ ಚಿಲ್ರೆ ಲೆಖ್ಖ ಕೊನೆಗೂ ಸಿಕ್ಕಿತಾ?

ನಮ್ಮ ಪೂ...ಪೂರ್ಣಿಮಾ ಎಂತ ಮಾಡ್ತೆ? ಅದರ ಅಮ್ಮನಿಗೆ ರವಿಕೆಗಳನ್ನು ಹೊಲಿದ ಬಗ್ಗೆ ಕೊಚ್ತಾ ಇತ್ತು ರಾಧೆ ಇಲ್ಲಿ. ನಿನ್ನಕ್ಕನೀಗೀಗ ಭಾರೀ ಬಡಾಯಿ. ಯಾಕೆಂದರೆ...ತಾನೊಂದು ದೊಡ್ಡ ಜನ...ಎಲ್ಲವೂ ತನ್ನತ್ರವೇ ವಿಷಯ ಕೇಳ್ತಾವೇಂತ. ಸರಸ್ವತಿ ಮನೆ ಬಿಸಿನೀರು ಕಡುಬು, ದೂರ್ ಸೆಂಟರ್ ಪಾಯಸ ಎಲ್ಲಾ ಸಿಕ್ಕೀತಾ ನನಗೆ ಮತ್ತೆ ಬಂದರೆ? ಏ ಪ್ರೇಮ, ನೀನು ಆವತ್ತು ಕಳಿಸಿದ್ದ ನೆಕ್ಕರೆ ಮಾವಿನಕಾಯಿ ನಿನ್ನ ಅತ್ತಿಗಮ್ಮನಿಗೂ ತಿನ್ನಲು ಕೊಟ್ಟಿದ್ದೇನೆ. ರಾಧೆ ಕಂತ್ರಿ ತರ್‍ಲೇ ಇಲ್ಲ. ಬಂದದ್ದು ನೋಡಿದ್ರೆ ಬೆಂಗ್ಳೂರಿಂದ. ತಂದದ್ದು ಬದ್ನೆಕಾಯಿ ಎಂತದ್ದೂ ಇಲ್ಲ. ಉಮ ೩ ಬುಕ್ಸ್ ತಂದಿದ್ದಾನೆ.  ತಾಯಿ, ಮೃತ್ಯುಂಜಯ, ಇನ್ನೊಂದು. ಹೆಸ್ರೂ ಮರ್‍ತೋಯ್ತ.

ದೇರಜ್ಜಮ್ಮ ಹೇಗುಂಟು? ಮರಿ ಮಗನನ್ನೂ ನೋಡಿ ಆಯ್ತಾ? ನನಗೀಗ ತುಂಬ ಹೊಟ್ಟೆಕಿಚ್ಚು ನಿಮ್ಮ ಮೂವರಲ್ಲಿ. ನೀವೆಲ್ಲ ಸೋದರತ್ತೆ ಆಗಿಬಿಟ್ಟಿರಿ. ನಾನು ಇನ್ನೂ ಆಗಲಿಲ್ಲ ಅಂತ. ಗಾಯತ್ರಿ ಅಕ್ಕನ ಮದುವೆಲಿ ಉಷಾ ಹೇಳಿದಳು, ಹೋದ ವರ್ಷ ಈ ತಿಂಗ್ಳಲ್ಲಿ ಗೌರಿಪೂಜೆ ಮಾಡ್ದವ್ರೆಲ್ಲ ಈ ವರ್ಷ ಗಣಪತಿ ಕೂರ್‍ಸಿದ್ದೇವೆ. ರಾಧ ಒಬ್ರೆ ಬಾಕಿ. ಗಾಣದಹಳ್ಳಿ ಪಟಾಲಾಂ ಬಂದಿತ್ತು ಮದುವೆಗೆ. ನಮ್ಮದೇ ಗಲಾಟೆ. ಇನ್ನೀಗ ೬ಕ್ಕೆ ಸುನಂದನ ಮದುವೆಯಲ್ಲಿ ಒಂದು ಸಂಭ್ರಮ. ಬರ್‍ತೀಯಾ ಅಕ್ಕನ ಜೊತೆ? ಪ್ರೇಮ, ನಾಳೆ ವಾಟೆಗಂಡಿಗೆ ( ಮಧ್ಯಾಹ್ನದ ಮನರಂಜನೆ ಮನೆ ಅಲ್ಲ) ಪೂಜೆಗೆ ಹೋಗ್ತಾರೆ ಉಮ, ರಾಧೆ. (ನಾನು ಚಕ್ಕರ್). ಗಂಟೆ ೧೦ ಕಳೆದಿದೆ. ಈ ರಾಧೆ ಇದ್ರೆ ನಮ್ಮ ಮನೆಗೆಲಸ ಮುಗಿಯುವುದೆಂದಿಲ್ಲ. ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ? ಹುಡುಗಿಯರನ್ನು ಕಂಡರೆ ಕರುಬುವವ? (ಅಲ್ಲ ಕರಗುವವ).
ಇಂತು ನಿನ್ನ
ಪ್ರಮೋದತ್ತಿಗೆ.
(ಜಯನಿಗೆ ತಿಳಿಸು. ಮೊನ್ನೆ ಅದರ ಹಾರ್ಲೆ ಗಣೇಶನಿಗೆ ಕಾರಾಟ ತೂರಾಟ ಸಖತ್!)

***
ನಮ್ಮೆಲ್ಲರ ಎದೆಯ ತಂಬೂರಿ ಶೃತಿಗೊಳಿಸುವ ಸಾಮರ್ಥ್ಯ ಈ ಪತ್ರಗಳಿಗಿದೆ. ಮದುವೆಯಾಗದ, ವಯಸ್ಸಿಗೆ ಬಂದ ಹೆಣ್ಣೊಬ್ಬಳು ತನ್ನ ಬಂಧು-ಸಮಾನಮನಸ್ಕೆಗೆ ಬರೆದ ಈ ಕಲರ್‌ಫುಲ್ ಪತ್ರ ನನಗಂತೂ ತುಂಬಾ ತುಂಬಾ ಖುಶಿ ಕೊಟ್ಟಿತು. ನಿಮಗೇನನಿಸಿತು? ಕಾಗ್ದ ಬರೀತೀರಾ?! (ಫೋಟೊ : ವಿನ್ಯಾಸ ಉಬರಡ್ಕ)  

1 comments:

Anonymous,  November 9, 2008 at 8:42 PM  

ಹಳೆಯ ಪತ್ರಗಳ ಸೊಗಸೇ ಸೊಗಸು.
ಹದಿನೈದು ವರ್ಷ ಹಿಂದೆ ಹೋಗಿ ಅತ್ತೆಯರ ಪತ್ರಗಳನ್ನ ಓದಿಕೊಂಡು ಬಂದೆ.
ಚೆನ್ನಾಗಿದೆ ಈ ಪತ್ರ/ ಬರಹ
- ಚೇತನಾ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP