October 11, 2008

ಮಾತಿನರಮನೆಯಲ್ಲಿ ಏಳು ದಿನಗಳು


ಲ್ಲರನ್ನೂ ಸಶರೀರಿಗಳಾಗಿಯೇ ಹದಿನಾಲ್ಕು ಲೋಕ ಸುತ್ತಿಸುವ ಸಾಮರ್ಥ್ಯವುಳ್ಳ ಯಕ್ಷಗಾನದ ಒಂದು ಪ್ರಮುಖ ಅಂಗ 'ಯಕ್ಷಗಾನ ತಾಳಮದ್ದಳೆ '. ಕರಾವಳಿ ಕರ್ನಾಟಕದುದ್ದಗಲಕ್ಕೂ ಮಳೆಗಾಲದಲ್ಲಿ ನೂರಾರು ತಾಳಮದ್ದಳೆ ಕೂಟಗಳು ನಡೆಯುತ್ತವೆ. ಯಾವುದೇ ವೇಷಭೂಷಣ, ವಿಶೇಷ ರಂಗಸಜ್ಜಿಕೆಯಿಲ್ಲದೆ, ಆಶು ಮಾತುಗಾರಿಕೆಯನ್ನೇ ಮಾಧ್ಯಮವಾಗಿಟ್ಟುಕೊಂಡಿರುವ ಪ್ರಕಾರ ಇದು. ಕೋಪ , ಹಾಸ್ಯ, ದುಃಖ ಎಲ್ಲವೂ ಇಲ್ಲಿ ಮಾತಿನಲ್ಲೇ ವ್ಯಕ್ತವಾಗಬೇಕು !

ಉತ್ತರ ಕನ್ನಡ ಭಾಗದಲ್ಲಿ ಪ್ರಸಂಗ ಅಥವಾ ಬೈಠಕ್ ಎಂದು, ಶಿವಮೊಗ್ಗ ಭಾಗದಲ್ಲಿ ಜಾಗರ ಎಂದು, ದಕ್ಷಿಣಕನ್ನಡ ಭಾಗದಲ್ಲಿ ಕೂಟ ಎಂದೂ ಕರೆಯಲ್ಪಡುವ `ಯಕ್ಷಗಾನ ತಾಳಮದ್ದಳೆ ' ಯಕ್ಷಲೋಕದ ಅವಿಭಾಜ್ಯ ಅಂಗ. ಪುರಾಣಗಳ ಒಂದು ಚಿಕ್ಕ ಪ್ರಸಂಗ ಆಯ್ದುಕೊಂಡು, ಅರ್ಥಧಾರಿಗಳು ಒಂದೊಂದು ಪಾತ್ರ ವಹಿಸಿಕೊಂಡು ಮಾತಿನಲ್ಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅದೂ ಕಂಠಪಾಠವಲ್ಲದ ಆಶುಶೈಲಿ. ಇದಿರು ಅರ್ಥಧಾರಿಯ ಮನೋಧರ್ಮ, ಆಯಾ ಸಂದರ್ಭಗಳಿಗೆ ಅನುಗುಣವಾಗಿ, ಇಂದು ಕರ್ಣನ ಪಾತ್ರ ವಹಿಸಿದವನು ನಾಳೆ ಅದೇ ಪಾತ್ರವನ್ನು ಸಂಪೂರ್ಣ ಬೇರೆ ಥರ ನಿರ್ವಹಿಸಬಹುದು. ಕೌರವನೊಡನೆ ವಾದದಲ್ಲಿ ಕೃಷ್ಣ ಸೋಲಬಹುದು ! ಹೀಗೆ ಇದು ಅನಿರೀಕ್ಷಿತಗಳ ಸಂಗಮ. ವಿದ್ವತ್ತು, ಮಾತಿನ ಜಾಣ್ಮೆ, ತರ್ಕ, ಉದಾಹರಿಸುವ ಕೌಶಲ, ಹಾಸ್ಯ ಪ್ರಜ್ಞೆ, ಲೌಕಿಕ-ಸಮಕಾಲೀನ ವಿಷಯಗಳನ್ನು ಪ್ರಸಂಗಕ್ಕೆ ಹೊಂದಿಸುವ ಶಕ್ತಿ ಎಲ್ಲವೂ ಇಲ್ಲಿರಬೇಕು.

'ತಾಳಮದ್ದಳೆ ಪ್ರಸಂಗ ' ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಹೀಗೆ ಹೇಳಿದ್ದಾರೆ : 'ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲ ಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಕೇಳಿದರೆ, ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ ...ಮಹಾಭಾರತ ಕತೆಯಲ್ಲಿ ವಾದಗ್ರಸ್ತ ಅಂಶಗಳು ಎಷ್ಟಿವೆಯೆಂದರೆ, ನಮ್ಮ ಮನಸ್ಸು ಇವುಗಳ ಬಗ್ಗೆ ಎಷ್ಟು ಗೊಂದಲಕ್ಕೀಡಾಗಿದೆಯೆಂದರೆ, ಪಾಂಡವರೇ ಕೆಟ್ಟವರು, ಕೌರವರು ಒಳ್ಳೆಯವರು ಎಂಬ ನಿರ್ಣಯಕ್ಕೆ ಕೆಲವರಾದರೂ ಬಂದರೆ ಆಶ್ಚರ್ಯವೇನಿಲ್ಲ. ಒಳಿತು ಮತ್ತು ಕೆಡುಕುಗಳನ್ನು ಗುರುತಿಸಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುವುದನ್ನು ಬಿಟ್ಟರೆ ಬೇರೇನೂ ಮಾಡುವಂತಿಲ್ಲ.

ತಾಳಮದ್ದಳೆಯಲ್ಲಿ ಇಂಥ ಚರ್ಚೆಗೆ ಅವಕಾಶವಿದೆ. ಕೌರವನ ಪಾತ್ರಧಾರಿ ಮಾತಾಡುತ್ತ ಚರ್ಚೆಯಲ್ಲಿ ಕೃಷ್ಣನನ್ನು ಸೋಲಿಸಿಬಿಡಬಹುದು. ಅಂತಹ ಒಂದು ಪ್ರಸಂಗವನ್ನೇ ನಾನು ತಾಳಗುಪ್ಪೆಯಲ್ಲಿ ಕಂಡದ್ದು. ಅರ್ಥಧಾರಿ ಗೆದ್ದು ಪಾತ್ರ ಸೋಲುವಂತಾಯಿತು ! ಆದರೆ ಕೌರವನ ಅರ್ಥಧಾರಿ, ಅಂದು ಕತೆಯಲ್ಲಿ ಹುಟ್ಟಿಕೊಂಡ ಬಿಕ್ಕಟ್ಟನ್ನು ತಿಳಿದುಕೊಂಡು `ಕೃಷ್ಣಾ, ನನ್ನ ಅಹಂಕಾರದ ತೃಪ್ತಿಗಾಗಿ ನನ್ನನ್ನು ಗೆಲ್ಲಿಸಿದವನೂ ನೀನೇ, ಕೊನೆಗೆ ಸೋಲಿಸುವವನೂ ನೀನೇ. ನೀನು ಕರುಣಾಶಾಲಿಯಾಗಿದ್ದರೆ ನನ್ನನ್ನು ಸೋಲಿಸಿ ಕಾಯಬೇಕು, ಪಾಂಡವರನ್ನು ನೀನು ಕಾಯುವಂತೆ '. ಪ್ರತಿಭಾಶಾಲಿಯಾದ ಅರ್ಥಧಾರಿ ಮಹಾಭಾರತಕ್ಕೆ ತನ್ನೆರಡು ಮಾತುಗಳನ್ನು ಸೇರಿಸಿ ಅದನ್ನು ಅರ್ಥಪೂರ್ಣವನ್ನಾಗಿ ಹೇಗೆ ಮಾಡಬಹುದೆಂಬುದನ್ನು ಅಂದು ತೋರಿಸಿದರು .'

ಬೆಂಗಳೂರಿನಲ್ಲೀಗ ಯಕ್ಷಗಾನ ಬಯಲಾಟಗಳಿಗೆ ಕೊರತೆಯಿಲ್ಲ. ಮಾತಿನ ರುಚಿ ತೋರಬಲ್ಲ ತಾಳಮದ್ದಳೆಗಳು ಮಾತ್ರ ತೀರಾ ಕಡಿಮೆ. ಕಳೆದೊಂದು ವರ್ಷದಿಂದ ಸದಭಿರುಚಿಯ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ `ಶ್ರೀ ದುರ್ಗಾಂಬಾ ಕಲಾ ಸಂಗಮ' ಎಂಬ ಗಿರಿನಗರದ ಸಂಸ್ಥೆ ಏಳು ದಿನಗಳ ತಾಳಮದ್ದಳೆ ಹಮ್ಮಿಕೊಂಡಿದೆ. ಕರ್ನಾಟಕ-ಕೇರಳ ರಾಜ್ಯಗಳ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್, ಪಡೆದ ಮಾತಿನ ಮಹಾಕವಿ ಡಾ.ಶೇಣಿ ಗೋಪಾಲಕೃಷ್ಣ ಭಟ್ (೧೯೧೮-೨೦೦೬), ತಾಳಮದ್ದಳೆಯಲ್ಲಂತೂ ಉತ್ತುಂಗ ಶಿಖರ.ಹೀಗಾಗಿ ಡಾ. ಶೇಣಿ ಸಂಸ್ಮರಣೆ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಅಭಿನಂದನೆಯೊಂದಿಗೆ ಏಳು ದಿನಗಳ ತೆಂಕು-ಬಡಗು ತಿಟ್ಟುಗಳ ಸಮ್ಮಿಲನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಅ.೧೩ರಿಂದ ೧೯ರವರೆಗೆ ನಡೆಯಲಿದೆ.

ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳಾಗಿರುವ ಡಾ.ಎಂ. ಪ್ರಭಾಕರ ಜೋಶಿ, ಶಂಭು ಶರ್ಮ ವಿಟ್ಲ, ಉಮಾಕಾಂತ ಭಟ್ ಮೇಲುಕೋಟೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಬ್ಬಾರ್ ಸಮೊ ಸಂಪಾಜೆ ಮೊದಲಾದವರು ಆಗಮಿಸುತ್ತಾರೆ. ೧೩ರಂದು ಕರ್ಣಪರ್ವ ೧೪-ವಾಲಿ ಮೋಕ್ಷ, ೧೫-ಭೀಷ್ಮ ವಿಜಯ, ೧೬-ಶೂರ್ಪನಖಾ ಮಾನಭಂಗ,೧೭-ರಾವಣ ವಧೆ, ೧೮-ಶ್ರೀಕೃಷ್ಣ ಸಂಧಾನ, ೧೯-ಸುದರ್ಶನ ಗ್ರಹಣ- ಪ್ರಸಂಗಗಳು 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಯ ಸಹಯೋಗದಲ್ಲಿ ನಡೆಯಲಿವೆ.

೧೩ರಂದು ಸಂಜೆ ೪.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು , ಯಕ್ಷಗಾನ ಯೋಗಕ್ಷೇಮ ಅಭಿಯಾನದ ವಿ.ಆರ್.ಹೆಗಡೆ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಸಮಾಜಸೇವಕ ಬಿ.ಕೃಷ್ಣ ಭಟ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಆನಂದರಾಮ ಉಪಾಧ್ಯಾಯ, ಸಂಗೀತ ನಿರ್ದೇಶಕ ವಿ.ಮನೋಹರ್, ಎ.ಶಿವರಾವ್ ಅತಿಥಿಗಳಾಗಿ ಭಾಗವಹಿಸುತ್ತಾರೆ. ೧೯ರಂದು ಸಂಜೆ ೪ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಕೆ.ಐ.ಎ.ಡಿ.ಬಿ. ಆಯುಕ್ತ ಟಿ.ಶ್ಯಾಮ ಭಟ್, ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಗಾಯಕ ವಿದ್ಯಾಭೂಷಣ, ಕೆ.ಇ.ರಾಧಾಕೃಷ್ಣ ಮೊದಲಾದವರು ಭಾಗವಹಿಸುತ್ತಾರೆ. ಪ್ರತಿದಿನ ಸಂಜೆ ೫.30 ರಿಂದ ೯ರವರೆಗೆ ತಾಳಮದ್ದಳೆ.

ಸ್ಥಳ : ಶ್ರೀ ಪುತ್ತಿಗೆ ಮಠದ ಸಭಾಂಗಣ, ಬಸವನಗುಡಿ. ( ಬ್ಯೂಗಲ್ ರಾಕ್ ಬಳಿ) ಪ್ರವೇಶ ಉಚಿತ.

2 comments:

shivu.k October 12, 2008 at 6:21 AM  

ನಿಮ್ಮ ಊರಿನ ಕಡೆಯ ಯಕ್ಷಗಾನವನ್ನು ನಾನು ನೋಡಬೇಕೆನ್ನುವುವ ಬಯಕೆ ನಿಮ್ಮ ಲೇಖನ ಓದಿದ ಮೇಲೆ ಆಯ್ತು. ನನ್ನ ಇತರ ಗೆಳೆಯರು ಈ ಆಟವನ್ನು ಹೀಗೆ ವರ್ಣಿಸುತ್ತಾರೆ. ಹಾಗೆ ಇಲ್ಲಿ "ಫೋಟೊ: ಶಿವು.ಕೆ" ಅಂತ ನಿಮ್ಮ ಈ ಲೇಖನದ ಫೋಟೊ ಕೆಳಗಡೆ ಹಾಕಿದ್ದೀರಿ. ಆ ಫೋಟೊ ನಾನು ತೆಗೆದಿದ್ದಲ್ಲವಲ್ಲ!

ಮತ್ತೊಂದು ವಿಚಾರ ನೀವು ನನ್ನ ಬ್ಲಾಗಿಗೆ ಬರುವುದಿಲ್ಲ. ನನಗೆ ನಿಮ್ಮಷ್ಟು ಚೆಂದಾಗೆ ಬರೆಯಲು ಬರುವುದಿಲ್ಲವಾದರೂ ಒಂದಷ್ಟು ತೆಗೆದ ಫೋಟೋಗಳ ಬಗ್ಗೆ ಅದರ ಅನುಭವದ ಬಗ್ಗೆ ಬರೆಯುತ್ತಿರುತ್ತೇನೆ. ದಯವಿಟ್ಟು ಬನ್ನಿ. ನಮ್ಮಂಥ ಹೊಸ ಬ್ಲಾಗಿಗರನ್ನು ಪ್ರೋತ್ಸಾಹಿಸಿ.

Anonymous,  October 13, 2008 at 1:45 AM  

ha ha, sorry shivu. that photo was taken by shiva kumar. i yet to find out his correct name.
welcome to the program.
-champakavathi

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP