February 21, 2008

ದಿವಾಕರರ ಕೆನ್ನೆಯೂ ಕೆಂಪಾಗಲಿ !

ವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಸಂಪಾದಕತ್ವದಲ್ಲಿ 'ಸಾಹಿತ್ಯ ಸಂಸ್ಕೃತಿಗೆ ಮೀಸಲಾದ ವಿಚಾರವೇದಿಕೆ’ ಎಂಬ ಅಡಿಶೀರ್ಷಿಕೆಯೊಂದಿಗೆ ಪ್ರಕಟವಾಗುತ್ತಿದ್ದ ಸಾಹಿತ್ಯ ಪತ್ರಿಕೆ 'ಸಮೀಕ್ಷಕ. ೧೯೬೬ರ ಫೆಬ್ರವರಿ ಸಂಚಿಕೆಯ ಮುಖಪುಟ ಮೊದಲನೆಯದು, ಹಿಂಬದಿಯ ಪುಟ ಎರಡನೆಯ ಚಿತ್ರ. ಅದರಲ್ಲಿ ಈ ಸಂಚಿಕೆಗೆ ಬರೆದಿರುವ ಲೇಖಕರ ಹೆಸರುಗಳಿವೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಇದರ ಮುಖ್ಯೋದ್ದೇಶ ಸಂಪಾದಕರು ಹೇಳಿಕೊಂಡಂತೆ ಹೀಗಿದೆ- 'ವಿಚಾರವಂತ ಲೇಖಕರಿಂದ ಉತ್ತಮ ಲೇಖನಗಳನ್ನು ಬರೆಸಿ ಪ್ರಕಟಿಸುವುದು; ಆ ಮೂಲಕ ಕನ್ನಡದಲ್ಲಿ ವಿಮರ್ಶಾ ಪ್ರಜ್ಞೆ ಬೆಳೆಯಲು ಕೈಲಾದ ಪ್ರಯತ್ನ ಮಾಡುವುದು. ಪತ್ರಿಕೆಯ ಸಲಹಾಗಾರರಾಗಿ -ಜಿ.ಎಚ್. ನಾಯಕ್ ಮತ್ತು ಎಚ್.ಎಂ.ಚನ್ನಯ್ಯರ ಹೆಸರಿವೆ. ಆದರೆ ಈ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.


ಮದರಾಸಿನ ವಿಜಯ ರಾಘವಾಚಾರಿ ರಸ್ತೆಯಿಂದ ಈಗಷ್ಟೆ ಎದ್ದು ಬಂದಂತಿರುವ ಎಸ್.ದಿವಾಕರ್ ಛೋಟಾ ಕತೆಗಳ ಉದ್ದನೆ ಮನುಷ್ಯ. ತುಟಿಗಳೆಡೆ ಸಿಗರೇಟು ಸಿಕ್ಕಿಸಿಕೊಂಡು 'ಏನು ಮತ್ತೆ ಸಮಾಚಾರ?’ ಅನ್ನುತ್ತಲೇ ಫಕ್ಕನೆ ಅಡಿಗರದೋ ಬೇಂದ್ರೆಯದೋ ನಾಲ್ಕು ಸಾಲು ಹೇಳಿ ನಮ್ಮನ್ನು ಗಲಿಬಿಲಿ ಮಾಡುವ, ನೂರೆಂಟು ಪದ್ಯಗಳನ್ನು ಹೃದಯ ಪಾಠ ಮಾಡಿಕೊಂಡಿರುವ ಈ ತೆಳ್ಳಗಿನ ದೇಹಿ, ಏನೆಲ್ಲ ಬಲ್ಲರು ಎಂಬುದನ್ನು ಎಲ್ಲ ಬಲ್ಲವರಿಲ್ಲ ! ಈ ಅಪ್ಪಟ ಕರಿಯ ಹೇಳುವುದನ್ನು ಕೇಳಿದಾಗೆಲ್ಲ ನಾವು ಹೇಳುತ್ತೇವೆ ಯೆಸ್ ದಿವಾಕರ್ ಸಾರ್. ಈಗ ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನಲ್ಲಿ ಉದ್ಯೋಗಿಯಾಗಿರುವ ಈ ಅಕ್ಷರ ಜೀವಿ, ೬೦ರ ದಶಕದ 'ಸಮೀಕ್ಷಕ’ದಲ್ಲಿ ಪ್ರಕಟಿಸಿರುವ 'ಪ್ರಾಯ’ ಎಂಬ ಅಮೋಘ ಪದ್ಯವನ್ನು ಅವರ ಕ್ಷಮೆ ಕೋರಿ ಇಲ್ಲಿ ಕೊಡಲಾಗಿದೆ !
ಪ್ರಾಯ
ಬುಳಬುಳನೆ ಸುಳಿವಂಥ ಸವಿನೋವಿನವತಾರ
ನರಗಳಲಿ ಜುಮ್ಮೆನುವ ನೀರವ ರವ ;
ಅಡಿಯಿಂದ ಮುಡಿವರೆಗೆ ಯಾರೊ ಕಾಣದೆ ಬಂದು
ಕಚಕುಳಿಯನಿಟ್ಟಂಥ ಹೊಸ ಅನುಭವ !

ಕಣ್ಣೆದುರು ಯಾವುದೋ ಹೊಸ ಲೋಕ. ಕೆನ್ನೆಯಲಿ
ಕೆಂಪು ತೆರೆ ಮೇಲೆದ್ದು ಇಳಿಯುತಿರಲು;
ಸೆರಗ ಸುತ್ತಿತ್ತು ಬೆರಳು, ವೀಣೆಯಾಯಿತು ಕೊರಳು
ಅರಿವಿಲ್ಲದೆಯೆ ಬೆಳೆದು ಬಂತು ನೆರಳು-
ಚಿಟ್ಟೆಯಾಯಿತು ಹಾರಿ ಕಂಬಳಿಹುಳು!

ಬೆಳೆಸಿದೊಲುಮೆಯ ಫಲಕೆ ಚಿಕ್ಕದಾಯಿತು ರವಿಕೆ
ಅಣೆಕಟ್ಟಿನೊಳನೀರ ನುಗ್ಗು ನೂಕು
ಇರುವೆ ಕಚ್ಚಿದ ತೊಡೆಯ ತುರಿಸಿಕೊಳ್ಳುವ ಬಯಕೆ
ರಾತ್ರಿಯಾಗುವವರೆಗೆ ಕಾಯಬೇಕು !

ಗಾಳಿ ಮೈದಡವಿದರೆ, ಬೆವೆತ ಮೈ ಬೆದರಿದರೆ
ಬಂಡೆ ಬಿರುಕಿನ ಕಪ್ಪೆ ನೆಗೆದ ಸದ್ದು-
ಬರುವ ಚಳಿಗಾಲದಲಿ ಬೆಚ್ಚಗಿರುವುದು ಹೇಗೆ?
ಕಿಟಕಿಯಾಚೆಗೆ ನೋಟ ಕದ್ದು ಕದ್ದು;
ಹೊರಳಾಟ ಹಾಸಿಗೆಯ ಮೇಲೆ ಬಿದ್ದು !
-ಎಸ್.ದಿವಾಕರ್

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP